-ಜಯದೇವ ಪ್ರಸಾದ ಮೊಳೆಯಾರ
Remember, Stocks are bought on expectation, not on facts. . . Gerald Loeb
ನೆನಪಿಡಿ, ಶೇರುಗಳನ್ನು ನಿರೀಕ್ಷೆಯ ಮೇರೆಗೆ ಕೊಳ್ಳಲಾಗುತ್ತದೆ, ವಾಸ್ತವದ ಮೇರೆಗೆ ಅಲ್ಲ. . . . . . ಜೆರಾಲ್ಡ್ ಲೋಬ್
ಮೊನ್ನೆ ಸಂಜೆ ಕುಳಿತುಕೊಂಡು ನಮ್ಮ ಮೀನ್ಚಟ್ನಿ ಬಿಸಿನೆಸ್ಸಿನ ಲೆಕ್ಕಾಚಾರದಲ್ಲಿ ಮುಳುಗಿರಬೇಕಾದರೆ ಎಲ್ಲೋ ಯಾರದೋ ಮೊಬೈಲ್ ರಿಂಗ್ ಆಗುವ ಧ್ವನಿ ಕೇಳಿಸಿ ಕಿರಿಕಿರಿಯೆನಿಸಿತು. ಅರೇ ಯಾರದಪ್ಪಾ ಇದು? ಅಂತ ಸಿಂಡರೆಲ್ಲಾಳಂತೆ ಮುಖ ಸಿಂಡರಿಸ ಬೇಕಾದರೆ ಅರೆ, ನನ್ನದೇ ಫೋನ್ ಅಲ್ವಾ ಎಂಬ ಜ್ಞಾನೋದಯವೂ ಆಯಿತು.
ಪ್ರತೀ ಬಾರಿ ಹೊಸ ಮೊಬೈಲ್ ಕೊಂಡಾಗಲೂ ಹೀಗೇ ಆಗುತ್ತದೆ. ಹೊಸ ರಿಂಗ್ ಟೋನಿನ ಪರಿಚಯ ಆಗುವವರೆಗೂ ದೂರದಲ್ಲಿ ಯಾರದ್ದೋ ಫೋನ್ ಅರಚುತ್ತದೆ ಎಂಬ ಭಾವನೆಯೇ ಮೊತ್ತಮೊದಲು ಬರುತ್ತದೆ. ಆಮೇಲೆ ನಿದಾನವಾಗಿ ನಮ್ಮದೇ ಫೋನ್ ಇದು ಎಂಬ ಅರಿವು ಮೂಡುತ್ತದೆ.
ಕೋಣನಿಗೆ ಬಾರುಕೋಲಿನಿಂದ ಜೋರಾಗಿ ಹೊಡೆದರೂ ಅದಕ್ಕೂ ಹಾಗೆಯೇ ಆಗುತ್ತದಂತೆ. ದೂರದಲ್ಲಿ ಯಾರಿಗೋ ಹೊಡೆಯುತ್ತಾ ಇದ್ದಾರೆ ಅಂತ. ಇದೆಲ್ಲಾ ದಪ್ಪ ಚರ್ಮದ ಎಡ್ವಾಂಟೇಜಸ್, ಸಾರ್! ಅದೆಲ್ಲ ಹಾಗೇ ಇರಲಿ ಬಿಡಿ, ಮುಖ್ಯವಾಗಿ, ಈಗ ನಿಮಗೆ ಆ ಫೋನ್ ಕಾಲ್ ಮಾಡಿದ ಶ್ರೀನಿವಾಸ ದೇಶಪಾಂಡೆಯವರ ಪರಿಚಯ ಮಾಡಿಸಿಕೊಡುತ್ತೇನೆ.
ದೇಶಪಾಂಡೆಯವರು ಮಂಗಳೂರಿನ ಬಿಜೈ ನಿವಾಸಿ. ಪಂಪ್ವೆಲ್ ಬಳಿಯ ಕರ್ನಾಟಕ ಬ್ಯಾಂಕ್ ಹೆಡ್ ಆಫೀಸಿನಲ್ಲಿ ಸೀನಿಯರ್ ಮ್ಯಾನೇಜರ್ – ಇಂಜಿನಿಯರ್ ಹಾಗೂ ಬ್ಯಾಂಕಿನ ಇಂಟೀರಿಯರ್ ಡೆಕೋರೇಶನ್ ತಜ್ಞ. ಒಬ್ಬ ಸಹೃದಯಿ, ಸಾಹಿತ್ಯಾಸಕ್ತ ಮತ್ತು ಅ ನೈಸ್ ಜಂಟಲ್ಮನ್. ನನಗೂ ಅವರಿಗೂ ಪರಿಚಯವಾದದ್ದೇ ಈ ಕಾಸು-ಕುಡಿಕೆ ಕಾಲಂನ ಮೂಲಕ. ನಾವು ಪರಸ್ಪರ ಭೇಟಿಯಾಗಿರದಿದ್ದರೂ ಫೋನಿನಲ್ಲಿ ಬಹಳಷ್ಟು ಬಾರಿ ಕಾಸು-ಕುಡಿಕೆಯ ಬಗ್ಗೆ ವಿಮರ್ಶಾತ್ಮಕವಾಗಿ ಚರ್ಚಿಸಿದ್ದು ಇದೆ. ಕಳೆದ ವಾರದ ‘FII ಮಹಾತ್ಮೆ ಎಂಬ ಅಧಿಕ ಪ್ರಸಂಗವನ್ನು ಓದಿದ ದೇಶಪಾಂಡೆಯವರು ಫೋನಾಯಿಸಿದ್ದರು.
ಇತ್ತೀಚಿನ ಟಿಪ್ಪಣಿಗಳು