ಈ ಸಲದ ಪ್ರಶಸ್ತಿ ಪ್ರದಾನ ಹೀಗಿತ್ತು …

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹೀಗಿದ್ದರು…

ಚಿತ್ರಗಳು : ಕೆ ಪಿ ಎನ್, ಚುರುಮುರಿ

ಜೋಗಿ ಬರೆಯುತ್ತಾರೆ: ಗಾಂಧಿಬಜಾರು…

-ಜೋಗಿ

ದಿವಾಕರ ಈಸ್ಟ್ ಆಂಜನೇಯ ಟೆಂಪಲ್ಲಿನ ತನ್ನ ಆಫೀಸಿನಿಂದ ಹೊರಗೆ ಬಂದು,ವಿದ್ಯಾರ್ಥಿ ಭವನದ ಹತ್ತಿರ ಬಲಕ್ಕೆ ತಿರುಗುವುದಕ್ಕೂ ಮಾಲತಿ ಅದೇ ರಸ್ತೆಯಲ್ಲಿ ಎದುರಾಗುವುದಕ್ಕೂ ಸರಿಹೋಯಿತು. ದೀಪಾವಳಿಯ ಮುಂಜಾನೆ. ಗಾಂಧೀಬಜಾರು ಗಿಜಿಗುಡುತ್ತಿರಲಿಲ್ಲ. ಹೂವು ಹಣ್ಣು ಮಾರುವವರಿನ್ನೂ ಅಂಗಡಿ ತೆರೆದಿರಲಿಲ್ಲ. ಹೀಗಾಗಿ ಮಾಲತಿಯ ಕಣ್ಣಿಗೆ ಬೀಳದೇ ದಿವಾಕರ ತಪ್ಪಿಸಿಕೊಳ್ಳುವುದು ಸಾಧ್ಯವೇ ಆಗಲಿಲ್ಲ.

ಹೂವಿನ ಪಕಳೆಗಳು ದಾರಿಯುದ್ದಕ್ಕೂ ಚೆಲ್ಲಾಡಿದ್ದವು. ರಸ್ತೆಯಲ್ಲೆಲ್ಲ ಪಟಾಕಿಯ ಅವಶೇಷಗಳು. ಹಣ್ಣು ಮಾರುವ ಅಂಗಡಿಗಳಿಗೆ ಹೊದಿಸಿದ್ದ ಕೆಂಪು, ನೀಲಿ, ಹಸಿರು ಪ್ಲಾಸ್ಟಿಕ್ ಕವರುಗಳು, ಹಳೇ ಬೋರ್ಡು ಹೊತ್ತು ನಿಂತ ಗ್ರಂಥಿಗೆ ಅಂಗಡಿ,ವಿದ್ಯಾರ್ಥಿ ಭವನದಲ್ಲಿ ತಿಂಡಿ ತಿಂದು ಎಡಗೈಯಿಂದ ತುಟಿಯೊರೆಸಿಕೊಂಡು ಹೊರಬರುತ್ತಿರುವ ಹಿರಿಯರು, ಇವೆಲ್ಲದರ ನಡುವೆ ನಿಂತಿರುವ ತಾನು.

ಮಾಲತಿ ಒಬ್ಬಳೇ ಆ ಪರಿಸರಕ್ಕೆ ಹೊಂದದ ಸಂಗತಿಯಾಗಿ ಕಂಡಳು. ಅವಳಾಗೇ ಗುರುತು ಹಿಡಿಯಲಿಕ್ಕಿಲ್ಲ. ಹತ್ತೋ ಹನ್ನೆರಡೋ ವರ್ಷ ಆಗಿರಬೇಕಲ್ಲ.  ನನ್ನನ್ನು ಮರೆತಿರಬಹುದು, ಅವಳ ಕಣ್ಣಿಗೆ ಪರೆ ಬಂದಿರಬಹುದು ಎಂದು ಕಾದದ್ದು ಯಾವ ಉಪಯೋಗಕ್ಕೂ ಬರಲಿಲ್ಲ.  ಅಮೂಲ್ಯ ನಿಧಿಯನ್ನು ಕಂಡಂತೆ ಮಾಲತಿ ಓಡೋಡಿ ಬಂದು ದಿವಾಕರನ ಕೈ ಹಿಡಕೊಂಡಳು.

ಏಳೋ ಎಂಟೋ ವರ್ಷಗಳಾಗಿರಬೇಕು ಅವಳನ್ನು ದಿವಾಕರ ನೋಡಿ. ಕೋಲಾರದ ಸೆಷನ್ ಕೋರ್ಟಿನ ಆವರಣದಲ್ಲಿ ಸ್ಟಾಂಪ್ ಪೇಪರ್ ಮಾರುತ್ತಿದ್ದ ಕಾಲದಲ್ಲಿ ಪರಿಚಯವಾದವಳು ಮಾಲತಿ. ಅವಳು ಅಪ್ಪನ ಜೊತೆ ಕೋರ್ಟಿಗೆ ಬರುತ್ತಿದ್ದಳು.

ಇನ್ನಷ್ಟು

FII ಮಹಾತ್ಮೆ ಎಂಬ ಅಧಿಕಪ್ರಸಂಗ!

-ಜಯದೇವ ಪ್ರಸಾದ ಮೊಳೆಯಾರ


ಕಾಸು ಕುಡಿಕೆ-30

Market correction- The day after you buy stocks!!- Anon

ಮಾರ್-ಕೆಟ್ಟು ಕರೆಕ್ಷನ್- ನೀವು ಶೇರು ಕೊಂಡ ಮರುದಿನ ನಡೆಯುವಂತದ್ದು!!- ಅನಾಮಿಕ.

ಬಲ್ಲಿರೇನಯ್ಯ?
ಹ್ಹೂಂ
ಈ ಭರತ ಖಂಡದಲ್ಲಿ. . .
ಹ್ಹೂಂ
. . .ಈ ಜಂಬೂ ದ್ವೀಪದಲ್ಲಿ. . .
ಹ್ಹೂಂ
. . . ಈ ಶೇರುಕಟ್ಟೆಯೆಂಬ ಮಾಯಾನಗರಿಗೆ. . .
ಹ್ಹೂಂ
. . .  ಒಡೆಯನು ಯಾರೆಂದು ಕೇಳಿ ಬಲ್ಲಿರಿ??
FII ಎಂಬುದಾಗಿ ಕೇಳಿ ಬಲ್ಲೆವು
ಓಹೋ, G.K ಯಲ್ಲಿ ನಿಮ್ಮ ಪರಿಣಿತಿಯನ್ನು ನೋಡಿ ನಮಗೆ ಬಹಳ ಸಂತೋಷವಾಗುತ್ತಿದೆ. ಸರಿಯಾದ ಉತ್ತರವನ್ನೇ ಕೊಟ್ಟಿದ್ದೀರಿ. ಭಲೇ, ಭೇಷ್, ಭೇಷ್!!
ಆಮೇಲೆ, ನಾವು ಈ ಮಾಯಾನಗರಿಗೆ ಬಂದದ್ದಾಯಿತು, ನಿಮ್ಮೊಡನೆ ಮಾತನಾಡಿದ್ದಾಯಿತು, ಮತ್ತೆ ಈಗ ಕಾರ್ಯಕ್ಕೆ ಬರೋಣ. ಈ FII ಯ ಮಹಾತ್ಮೆಯನ್ನು ನಾನೇನೆಂದು ಬಣ್ಣಿಸಲಿ? ಅದನ್ನು ಬಣ್ಣಿಸಲು ನೂರು ನಾಲಗೆ ಸಾಲದು,. ಆದರೂ ಹೇಳುವೆ, ಕೇಳುವಂತವರಾಗಿ. . . . .

************
೧೯೯೧ ರ ನರಸಿಂಹ ರಾವ್ ಕೃಪಾಪೋಷಿತ ಉದಾರೀಕರಣ ನೀತಿಯ ಪೂರ್ವದಲ್ಲಿ ಭಾರತೀಯ ಮಾರುಕಟ್ಟೆ ನಮ್ಮ ಜಂಬೂ ದ್ವೀಪದಂತೆ ಒಂದು ದ್ವೀಪವಾಗಿಯೇ ಅಸ್ತಿತ್ವದಲ್ಲಿತ್ತು. ವಿದೇಶದ ಯಾವುದೇ ದುಷ್ಟ-ಶಿಷ್ಟ ಶಕ್ತಿಗಳ ಕ್ಷುದ್ರ ನೋಟವೂ ನಮ್ಮ ಮಾರುಕಟ್ಟೆಯನ್ನು ತಟ್ಟಿದ್ದಿಲ್ಲ. ತಪ್ಪೋ ಸರಿಯೋ ನಮಗೆ ಗೊತ್ತಿದ್ದಂತೆಯೇ ಮಾರುಕಟ್ಟೆಯನ್ನು ನಾವು ಆಡುತ್ತಿದ್ದೆವು.

ಈಗ ವೈಜ್ಞಾನಿಕ, ಪ್ರೊಫೆಶನಲ್ ಎಂದೆಲ್ಲ ಕರೆಯಲ್ಪಡುವ ಯಾವುದೇ ವಾಲ್ಯುಯೇಶನ್ ತಕ್ನಿಕ್ಕುಗಳು ಆವಾಗ ಇರಲಿಲ್ಲ. ಶೇರು ಕುಂಡಲಿ ಬರೆದು ಅವುಗಳ ಗರ್ಭಕ್ಕೆ ದೃಷ್ಟಿ ಬೀರಿ ಶೇರುಗಳ ಗೋಚರ ಫಲ-ಗ್ರಹಚಾರ ಫಲ ನೀಡುವ ಪರಿಪಾಠ ಇದ್ದಿರಲೇ ಇಲ್ಲ. ಒಟ್ಟಿನಲ್ಲಿ, ಒಂದು ರೀತಿಯ ಫ್ರೀ ಫಾರ್ ಆಲ್ ರೀತಿಯ ಕುಸ್ತಿ ಪಂದ್ಯಾಟದಂತೆ ನಮ್ಮ ದಲಾಲ್ ಸ್ಟೀಟ್ ದೇಶದ ಜನತೆಗೆ ಮನೋರಂಜನೆ ನೀಡುತ್ತಿತ್ತು. ಜೊತೆಗೆ ಅಲ್ಪ ಸ್ವಲ್ಪ ಕಾಸು ಕೂಡಾ.
ಇನ್ನಷ್ಟು

ನಿಮ್ಮಿ ಮತ್ತು ರಟ್ಟಿನ ಬಾಕ್ಸ್ …

-ಉದಯ್ ಇಟಗಿ

ಬಿಸಿಲ ಹನಿ

ನಾನು ಲಂಕೇಶ್ ಪತ್ರಿಕೆಯನ್ನು ಓದಲು ಆರಂಭಿಸಿದ್ದೇ ತೊಂಬತ್ತರ ದಶಕದ ಮಧ್ಯಭಾಗದಿಂದ. ಅವು ನನ್ನ ಕಾಲೇಜು ದಿನಗಳು. ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಾ ಹದಿ ಹರೆಯದ ಹಳವಂಡಗಳಿಗೆ ಜೋತುಬಿದ್ದ ಕಾಲವದು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳಲ್ಲಿ ವಯೋಸಹಜನುಗುಣವಾಗಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು “ತುಂಟಾಟ”. ಜೊತೆಗೆ ನೀಲು ಪದ್ಯಗಳು ಮತ್ತು ನಿಮ್ಮಿ ಕಾಲಂ.

ಅಸ್ತಿತ್ವದಲ್ಲಿಯೇ ಇರದ ಗಂಜುಗಣ್ಣಿನ ಹುಡುಗಿಯ ಫೋಟೊವೊಂದನ್ನು ಹಾಕಿ ಅದಕ್ಕೆ ‘ನಿಮ್ಮಿ ಕಾಲಂ’ ಎಂದು ಹೆಸರಿಟ್ಟು ಲಂಕೇಶರೇ ಮೊದಲಿಗೆ ಅದನ್ನು ಪರಕಾಯ ಪ್ರವೇಶ ಮಾಡಿ ಬರೆದರು. ಆನಂತರ ಪ್ರತಿಭಾ ನಂದಕುಮಾರ್ ಒಂದಷ್ಟು ದಿವಸ ಬರೆದರು. ಮುಂದೆ ಅದನ್ನು ಅನಿತಾ ನಟರಾಜ್ ಹುಳಿಯಾರ್ ಮುಂದುವರೆಸಿಕೊಂಡು ಹೋದರು.

ನಿಮ್ಮಿ ಕಾಲಂ ಆ ಕಾಲದ ಹದಿ ಹರೆಯದವರ ಹೃದಯಕ್ಕೆ ಲಗ್ಗೆ ಹಾಕುವದರ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಏಕೆಂದರೆ ಅದು ನಿಮ್ಮಿ ಮತ್ತು ಅವಳ ಪ್ರಿಯಕರ ಅಮರನ ಪ್ರೀತಿ, ಪ್ರೇಮ, ಪ್ರಣಯದ ಜೊತೆಗೆ ಒಂದಿಷ್ಟು ಅವರ ಜಗಳ, ಮುನಿಸು ಮತ್ತು ಸಲ್ಲಾಪಗಳಿಂದ ರಾರಾಜಿಸುವದರ ಮೂಲಕ ನನ್ನಂತ ಹದಿ ಹರೆಯದವರನ್ನು ಹಿಡಿದಿಟ್ಟಿತ್ತು. ಹೆಚ್ಚು ಕಮ್ಮಿ ನಿಮ್ಮಿ ನನ್ನಂತ ಎಷ್ಟೊ ಹುಡುಗರಿಗೆ ಪ್ರೇಯಸಿಯಾಗಿ ಬಿಟ್ಟಿದ್ದಳು. ಅವಳ ಕಚುಗುಳಿಯಂತ ಬರಹ ನನ್ನನ್ನು ಬಹುವಾಗಿ ತಾಕಿತ್ತು.

ಇನ್ನಷ್ಟು

‘ಬಂದಿದೆ ಕನ್ನಡ ಪ್ರಭ ವಿಶೇಷಾಂಕ’ …

ಕನ್ನಡ ಪ್ರಭ ವಿಶೇಷಾಂಕ ಮಾರುಕಟ್ಟೆಗೆ ಬಂದಿದೆ. ಹಿರಿಯ ಹಾಗು ಕಿರಿಯ  ಸಾಹಿತಿಗಳ  ಬರಹಗಳು , ಕವಿತೆಗಳು, ಲೇಖನಗಳು , ಕತೆಗಳು , ವ್ಯಂಗ್ಯ ಚಿತ್ರ , ಹೀಗೆ ಹತ್ತು ಹಲವು ವಿಷಯಗಳನ್ನು  ಈ ವಿಶೇಷಾಂಕ ಒಳಗೊಂಡಿದೆ .  ಸಾಹಿತಿ ಕಿ.ರಂ. ನಾಗರಾಜ್  ಅವರ ಬಗೆಗಿನ ಲೇಖನ, ಖ್ಯಾತ ಕವಿಗಳಾದ ಎಚ್ಹೆಸ್ವಿ , ಬಿ ಆರ್ .ಲಕ್ಷ್ಮಣ ರಾವ್ ಅವರುಗಳ ಕವಿತೆಗಳು, ಕತೆಗಾರರಾದ ಕುಂ ವೀ , ಸುನಂದಾ ಪ್ರಕಾಶ ಕಡಮೆ ಇವರುಗಳು ಬರೆದ   ಕತೆಗಳು   ಈ ವಿಶೇಷಾಂಕದ ಮೌಲ್ಯವನ್ನು ಹೆಚ್ಹಿಸಿದೆ.

ಗಾಂಧಿನಗರದಲ್ಲಿ ಒಂದು ಸಂಜೆ …

ಬೆಂಗಳೂರಿನ  ಗಾಂಧಿನಗರದಲ್ಲಿ  ನಡೆದ ಸುಷ್ಮಾ ವೀರ್ ಅವರ ನೃತ್ಯ ಕಾರ್ಯಕ್ರಮದ ಒಂದು ಝಲಕ್ ಇಲ್ಲಿದೆ…

ಮತ್ತಷ್ಟು ಫೋಟೋಗಳು : ಸೈಡ್ ವಿಂಗ್

 

 

ಬೇಬೀಸ್ ಬಸ್ ಔಟ್…

-ತೇಜಸ್ ಜೈನ್

ಬಾಳ ದೋಣಿ

ಒಂದಿನಾನೂ ತಪ್ದೆ ಸರಿಯಾಗಿ ಬೆಳೆಗ್ಗೆ ೬.೩೦ಗೆ ಕೂಗಕ್ಕೆ ಶುರು ಮಾಡ್ಬಿಡತ್ತೆ ನನ್ ಮೊಬೈಲು. ನಾನ್ ದಿನಾ ನಾಲ್ಕ್‌ ಸರಿ ಅದನ್ನ ತೆಪ್ಪಗಾಗ್ಸಿ ಮುಕ್ಕಾಲ್ಗಂಟೆ ಆದ್ಮೇಲೇ ಎದ್ದೇಳದು ಅಂತ ಗೊತ್ತಿದ್ರೂ ಒಂದೈದ್ ನಿಮಿಷನೂ ಹಿಂದೆ-ಮುಂದೆ ಹೊಡ್ಕೊಂಡಿಲ್ಲ. ಅವತ್ತೂ ಹಾಗೇ ಆಯ್ತು. ಎಲ್ಲಾ ದಿನದ್ ತರ ಅವತ್ತೂ ಒಂದೈದ್ ಸರ್ತಿ ಸ್ನ್ನೂಜ್ ಮಾಡಿದ್ಮೇಲೇನೇ ಎದ್ದಿದ್ದು.

ದಡಬಡ ಅಂತ ತಯಾರಾಗಿ, ಅಜ್ಜಿಗೆ ಒಂದ್‌ಸರ್ತಿ ಮುಖ ತೋರ್ಸಿ ಬೈಕ್ ಹತ್ತಿ ಐ.ಟಿ.ಪಿ.ಬಿ ಬಾಗ್ಲಿಗೆ ಬಂದಾಗ್ಲೇ ನಾನ್ ನನ್ ಐಡಿ ಮರ್ತು ಬಂದಿರದು ಗೊತ್ತಾಗಿದ್ದು. ೮ ಗಂಟೆ ಒಳಗೆ ಲಾಗ್‌ಇನ್ ಆಗ್ತಿದೌನು ೯ ದಾಟಿದ್ಮೇಲೆ ಮನೆ ಬಿಡಕ್ಕೆ ಶುರುಮಾಡಿ ಬಾಳಾ ದಿನಾನೇ ಆಗಿತ್ತು. ಇವತ್ತು ಸಮಯ ಆಗ್ಲೇ ೯.೪೦ ದಾಟಿತ್ತು.

ಬಿಗ್‌ಬಜಾರ್, ಎಸ್.ಎ.ಪಿ ಹತ್ರ ಟ್ರಾಫಿಕ್ ನೆನೆಸ್ಕೊಂಡು ಮತ್ತೆ ಮನೆ ತಂಕಾ ಹೋಗ್ಬರಕ್ಕೆ ಬೇಜಾರಾಯ್ತು. ಐ.ಟಿ.ಪಿ.ಬಿ ಬಾಗ್ಲಲ್ಲಿ ಸಂದರ್ಶಕರ ಪಾಸ್ ತಗೋಳೋಕ್ನಿಂತಿರೋರ್ನ ನೋಡಿ ಆ ಅರ್ಧ ಮೈಲಿ ಸಾಲಲ್ಲಿ ನಿಂತು ಕಾಯೋಕಿಂತ ಮುಕ್ಕಾಲ್ಗಂಟೆ ಟ್ರಾಫಿಕ್‌ನಲ್ಲಿ ಮನೆಗೆ ಹೋಗಿಬರೋದೇ ವಾಸಿ ಅಂನ್ಕೊಂಡೆ.
ಅಂದ್ಕೋಂಡ ಹಾಗೇ ಟ್ರಾಫಿಕ್‌ ಜಾಸ್ತಿನೇ ಇತ್ತು. ಅಡ್ಡ ನುಗ್ಗೋರ್ನ ಬೈಕೊಂಡು, ಫುಟ್‌ಪಾತ್ ಮೇಲೆ ಬೈಕ್ ಹತ್ತಿಸಿ ಮನೆ ಸೇರೋದ್ರೊಳಗೆ ಸಮಯ ಆಗ್ಲೇ ೧೦.೩೦ ದಾಟಿತ್ತು. ಹ್ಮೂಂ, ಇವತ್ತು ರಜ ಹಾಕ್ಬಿಡಣ ಅಂತ ಯೋಚ್ನೆ ಬಂತು. ಏನಾದ್ರು ಆಗ್ಲಿ ಆಫಿಸ್‌ಗೆ ಬೇಗ ಹೋಗಿ ಮಾಡೋದೂ ಅಷ್ಟರಲ್ಲೇ ಇದೆ ಅಂದ್ಕೊಂಡು ಪುನಃ ಹೊರಟೆ. ಯಾವತ್ತೂ ಇಲ್ಲದ ಟ್ರಾಫಿಕ್ ಇವತ್ತು ಸಿ.ಎಮ್.ಆರ್ ಹತ್ರದಿಂದನೇ ಕಚ್ಕೋಂಡಿತ್ತು.

ಇನ್ನಷ್ಟು

Green Diwali…