ಮೊದಲೇ ನನ್ನ ಮಿತಿ ಹಾಗೂ ದೌರ್ಬಲ್ಯದ ಬಗ್ಗೆ ಹೇಳಿ ಬಿಡುತ್ತೇನೆ. ನಾನು ಸಾಮಾನ್ಯವಾಗಿ ಸಾಪ್ತಾಹಿಕ ಪುರವಣಿಗಳಲ್ಲಿ ಬರುವ ಲೇಖನಗಳನ್ನಾಗಲೀ, ವಿಮರ್ಶೆಯನ್ನಾಗಲೀ ಓದುವುದಿಲ್ಲ. ಇದು ಕೇವಲ ಆದ್ಯತೆಯ ವಿಷಯ ಮಾತ್ರ, ಬೇರೇನಿಲ್ಲ. (ಹೀಗಾಗಿ ಹಲವಾರು ಸಾಹಿತ್ಯಿಕ ವಾಗ್ವಾದಗಳ ಬಗ್ಗೆ ಸ್ನೇಹಿತರು ಮಾತಾಡುತ್ತಿರುವಾಗ ನಾನು ಅವರನ್ನೇ ಬೆಪ್ಪಾಗಿ ನೋಡುತ್ತಾ ಕುಳಿತಿರುತ್ತೇನೆ.) ಸಮಯವಿದ್ದರೆ ಆ ವಾರ ಪ್ರಕಟವಾಗಿರುವ ಕಥೆಯನ್ನ ಓದಲು ಯತ್ನಿಸುತ್ತೇನೆ. ಅಕಸ್ಮಾತ್ ಭಾನುವಾರ ರಾತ್ರಿಯೊಳಗೆ ಓದಲಾಗದಿದ್ದರೆ ಅದೂ miss ಆದಂತೆಯೇ. ಭಾನುವಾರದಂದು ಎಲ್ಲ ಕನ್ನಡ ದಿನಪತ್ರಿಕೆಗಳನ್ನು ತರಿಸಿದರೂ ಅಂದು ನನ್ನ ಕೆಲಸದ ದಿನವಾದ್ದರಿಂದ ಅವು ಹಾಗೇ ಅಟ್ಟ ಸೇರುವುದೇ ಹೆಚ್ಚು. ಕಳೆದ ಭಾನುವಾರ ಸಂಜೆ ನಾನು ಅತ್ಯಂತ ಗೌರವಿಸುವ, ತುಂಬಾ ಸಜ್ಜನರಾದ ಕನ್ನಡ ಲೇಖಕರೊಬ್ಬರು ಫೋನ್ ಮಾಡಿ, “ಈ ವಾರದ ಸಾಪ್ತಾಹಿಕ ಪುರವಣಿಯಲ್ಲಿ ಹರಕೆ ಹರಾಜು ಎಂಬ ಲೇಖನ ಬಂದಿದೆ ಅಕ್ಷರ ಬರೆದಿದ್ದಾರೆ ಓದಿದ್ರಾ” ಎಂದವರು ಮುಂದುವರಿದು “ನನಗ್ಗೊತ್ತು ಸಾಮಾನ್ಯವಾಗಿ ನೀವು non fiction ಓದಲ್ಲ. ಆದರೆ ದಯವಿಟ್ಟು ಆ ಲೇಖನ ಓದಿ, ಸಾಧ್ಯವಾದರೆ ನಾಲ್ಕನೆಯ ಪುಟದಲ್ಲಿ ಒಂದು ಚಿತ್ರ ವಿಮರ್ಶೆ ಇದೆ. ಅದನ್ನೂ ಓದಿ. ರಾತ್ರಿ ಫೋನ್ ಮಾಡ್ತೇನೆ…” ಎಂದು ನನ್ನ ಉತ್ತರಕ್ಕೂ ಕಾಯದೆ ಫೋನ್ ಇಟ್ಟರು.
ಅವರ ಧ್ವನಿಯಲ್ಲಿ ಒಂದು ಬಗೆಯ ಯಾತನೆ, anguish ಇತ್ತು. ಈ ಕಾರಣಕ್ಕೆ ಕೂಡಲೇ ಆ ದಿನಪತ್ರಿಕೆಯನ್ನು ಓದಲಾರಂಭಿಸಿದೆ. ಸಾಪ್ತಾಹಿಕ ಪುರವಣಿಯ ಮುಖಪುಟ ಲೇಖನ. ಹರಕೆ, ಹರಾಜು ಎಂಬುದು ಲೇಖನದ ಶೀರ್ಷಿಕೆ. ಅದಕ್ಕೆ ಯಾವುದು ಸಹಜ?ಅಯಾವುದು ಅವಮಾನ? ಎಂಬುದು ಉಪ ಶೀರ್ಷಿಕೆ. ಈಚಿನ ಸಿನೆಮಾಗಳ tag line ಥರ! ‘ಎಂಜಲೆಲೆ ಮೇಲೆ ಜನ ಉರುಳಿದ್ದನ್ನು ಮೂಢನಂಬಿಕೆ ಎನ್ನುವ ಜನ ಕ್ರಿಕೆಟಿಗರ ಹರಾಜನ್ನು ಅವಮಾನ ಸೃಷ್ಟಿಸುವ ಘಟನೆ ಎಂದು ಭಾವಿಸುವುದಿಲ್ಲ. ಈ ಹಿಂದಿನ ಮನಸ್ಥಿತಿಯ ಕುರಿತು ಒಂದು ಜಿeಸೆ’- ಎಂಬ intro ಬೇರೆ. ಅಲ್ಲಿಗೆ ಲೇಖನದಲ್ಲಿ ಏನಿದೆ ಎಂಬುದು ತಿಳಿದು ಹೋಯ್ತು. ‘ಹ’ ಎಂಬ ಅಕ್ಷರದಿಂದ ಆರಂಭವಾಗುವುದನ್ನ ಹೊರತುಪಡಿಸಿದರೆ ಹರಕೆ ಮತ್ತು ಹರಾಜು ನಡುವೆ ಯಾವ ಸಂಬಂಧವೂ ಇಲ್ಲ. ಇವೆರಡನ್ನೂ ಒಂದೆಡೆ ಎಳೆದು ತಂದು ತಾಳೆ ಹಾಕಲು ಯತ್ನಿಸಿರುವುದರಲ್ಲಿಯೇ ಲೇಖಕರ ಉದ್ದೇಶ ಸ್ಪಷ್ಟವಾಯ್ತು. ಆದರೂ ಆ ಹಿರಿಯರಿಗೆ ಹೇಳಿದ್ದರಿಂದ ಪೂರಾ ಲೇಖನವನ್ನು ಗಮನವಿಟ್ಟು ಓದಿದೆ.
ಹೆಗ್ಗೋಡಿನ ಕೆ.ವಿ ಅಕ್ಷರ ಅವರು ಈಚಿನ ಎರಡು ಪ್ರಸಂಗಗಳ ಬಗ್ಗೆ ಈ ಲೇಖನದಲ್ಲಿ ಬರೆದಿದ್ದಾರೆ. ಮೊದಲನೆಯದು: ಕಳೆದ ತಿಂಗಳು ಕುಕ್ಕೆ ಸುಬ್ರಮಣ್ಯದಲ್ಲಿ ನಡೆದ ಎಂಜಲೆಲೆಯ ಮೇಲಿನ ಉರುಳು ಸೇವೆ. ಬ್ರಾಹ್ಮಣರು ಪಂಕ್ತಿಯಲ್ಲಿ ಭೋಜನ ಮುಗಿಸಿದ ನಂತರ, ಅವರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಕೆಳ ಜಾತಿಗೆ ಸೇರಿದವರು ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಎರಡನೆಯದು, ಈ ತಿಂಗಳ ಆರಂಭದಲ್ಲಿ ನಡೆದ ಐ.ಪಿ.ಎಲ್ ಹರಾಜು. ಅಕ್ಷರ ಬರೆಯುತ್ತಾರೆ: “ಹರಾಜಿನ ಸುದ್ದಿಗೆ ಹೋಲಿಸಿದರೆ ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ. ಆ ಸುದ್ದಿಯ ಪ್ರಕಾರ ಯಾವುದೋ ಒಂದು ಪುಟ್ಟ ಊರಿನ ದೇವಾಲಯದಲ್ಲಿ, ಯಾರೋ ಒಂದಿಷ್ಟು ಜನ, ತಮ್ಮದೇ ಸ್ವಂತ ನಂಬಿಕೆಯಿಂದ ಪ್ರೇರಿತರಾಗಿ ನಮ್ಮಂಥ ಹಲವರಿಗೆ ಅಸಹ್ಯಕರವಾಗಿ ಕಾಣಬಹುದಾದ ಒಂದು ಕೆಲಸವನ್ನು ಮಾಡಿದರು. ನಮ್ಮ ಮಾಧ್ಯಮ ವರದಿಗಳು ಅಷ್ಟನ್ನು ಮಾತ್ರ ಹೇಳದೆ, ಇದು ಭಾರತದಲ್ಲಿ ಶತ ಶತಮಾನಗಳಿಂದ ಸತತವಾಗಿ ನಡೆದುಕೊಂಡು ಬಂದಿರುವ ಒಂದು ಮೂಢ ನಂಬಿಕೆಯೆಂಬ ಅರ್ಥದಲ್ಲಿ ಅದನ್ನು ಚಿತ್ರಿಸಿದವು. ಮಾತ್ರವಲ್ಲ ನಗಣ್ಯವೆನ್ನಬಹುದಾದ ಪುಟ್ಟ ಊರಿನ ಈ ಒಂದು ಘಟನೆಯು ಮುಖಪುಟಗಳಲ್ಲಿ ವರದಿಯಾದ ರೀತಿಯಿಂದಲೇ ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ-ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು.”
ಅಕ್ಷರ ಒಮ್ಮೆ ‘ಯಾವುದೋ ಒಂದು ಪುಟ್ಟ ಊರಿನ’ ಎಂದರೆ ಮತ್ತೊಮ್ಮೆ ‘ನಗಣ್ಯವೆನ್ನಬಹುದಾದ ಪುಟ್ಟ ಊರಿನ’ ಎನ್ನುತ್ತಾರೆ. ಆದರೆ ಇದು ನಗಣ್ಯವಾದ ಯಾವುದೋ ಪುಟ್ಟ ಊರಲ್ಲ. ಕರ್ನಾಟಕದ ಸುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ. ಈ ನಗಣ್ಯವಾದ ಊರಿಗೆ ‘ಸರ್ಪದೋಷ ಪರಿಹಾರ’ಕ್ಕಾಗಿ ಕ್ರಿಕೆಟ್ ಸಾಮ್ರಾಟ ಸಚಿನ್ ಮತ್ತು ಸಿನೆಮಾ ಸಾಮ್ರಾಟ್ ಅಮಿತಾಬ್ ಕುಟುಂಬ ಸಮೇತರಾಗಿ ಬಂದು ಗ್ಲಾಮರ್ನ ಸ್ಪರ್ಶ ಕೂಡ ನೀಡಿದ್ದಾರೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಎಂಜಲೆಲೆಯ ಮೇಲಿನ ಉರುಳು ಸೇವೆಯ ವರದಿ ಪ್ರಕಟವಾಗಲು ಈ ‘ಪ್ರಸಿದ್ಧಿ’ಯೂ ಕಾರಣವಾಗಿದ್ದರೆ ಆಶ್ಚರ್ಯವಿಲ್ಲ!
ಇತ್ತೀಚಿನ ಟಿಪ್ಪಣಿಗಳು