-ಸುಘೋಷ್ ಎಸ್. ನಿಗಳೆ
ನುಣ್ಣನೆಯ ಬೋಳು ತಲೆಯ ಮೇಲೆ ಸೂರ್ಯನ ಪ್ರತಿಬಿಂಬ ತುಸು ಸ್ಪಷ್ಟವಾಗಿಯೇ ಕಾಣುತಿತ್ತು. ಎಡಗೈಯಿಂದ ತಲೆಯನ್ನೂ, ಬಲಗೈಯಿಂದ ಪಿರ್ರೆಯನ್ನೂ ತುರಿಸುತ್ತ ಮಟಮಟ ಮಧ್ಯಾಹ್ನದಲ್ಲಿ ಸೋಮಶೇಖರ್ ಅಲಿಯಾಸ್ ಚೋಮ ಅಲಿಯಾಸ್ ಜೂನಿಯರ್ ಗಾಂಧಿ ಆಕಾಶ ನೋಡುತ್ತಿದ್ದ. ಮಳೆಯಾವಾಗ ಬರುತ್ತದೆ ಎಂಬುದು ಆತನ ಚಿಂತೆಗೆ ಕಾರಣವಾಗಿರಲಿಲ್ಲ. ಆದರೆ, ತನ್ನನ್ನು ಕರೆಯುವವರೇ ಇಲ್ಲವಲ್ಲ ಎಂಬುದು ಕಾಂಡಕೊರಕ ಹುಳುವಿನಂತೆ ಮನಸ್ಸನ್ನು ಕೊರೆಯುತ್ತಿತ್ತು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿ, ಜೀವತೆತ್ತ ತಾತನ ಕುರಿತ ಗೌರವ ಜನರಲ್ಲಿ ಕಡಿಮೆಯಾಗುತ್ತಿದೆ ಎಂಬದು ಗಮನಕ್ಕೆ ಬಂದಿತ್ತಾದರೂ ಇಷ್ಟು ಬೇಗ, ಇಂಡಿಯಾ ದೇಶದ ಜನ ಮಹಾತ್ಮನನ್ನು ಮರೆಯಬಹುದು ಎಂದುಕೊಂಡಿರಲಿಲ್ಲ. ಮೊದಲೆಲ್ಲ ತುಂಬಾ ಬಿಝಿಯಾಗಿರುತ್ತಿದ್ದ ಚೋಮ, ಈಗ ಅಗಸ್ಟ್-15, ಜನವರಿ-26, ಅಕ್ಟೋಬರ್-2 ಬಂದರೂ ತೂಕಡಿಸುತ್ತ ಮನೆಯಲ್ಲಿ ತತ್ತಿಯಿಡುತ್ತಿದ್ದ. ಗಾಂಧಿ ಜಯಂತಿ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ದಿನದಂದೂ ಸಂಘ-ಸಂಸ್ಥೆಗಳಾಗಲಿ, ಜನರಾಗಲಿ ಆತನ ಡೇಟ್ ಕೇಳುವುದನ್ನು ಬಿಟ್ಟುಬಿಟ್ಟಿದ್ದರು. ಗಾಂಧಿ ಕುರಿತು ಗಂಭೀರ ಅಭ್ಯಾಸದಲ್ಲಿ ನಿರತವಾಗಿದ್ದ ಗಾಂಧಿ ಸ್ಮಾರಕ ಭವನಗಳಿಗೆ ಅವನು ಎಂದಿಗೂ ಬೇಕಾಗಿರಲಿಲ್ಲ.
62 ರ ಚೋಮನಿಗೆ ಈ ಹವ್ಯಾಸ ಹತ್ತಿದ್ದು 40 ದಾಟಿದ ಮೇಲೆ. ಆಕಸ್ಮಿಕವಾಗಿ. ಸ್ಕೂಟರ್ ನಲ್ಲಿ ಹೋಗುತ್ತಿರಬೇಕಾದರೆ, ರೋಡ್ ರೇಜ್ ವೊಂದನ್ನು ನೋಡಿದ. ಜಗಳ ಬಿಡಿಸಲು ಬುದ್ಧಿವಾದ ಹೇಳತೊಡಗಿದಾಗ ಅಪಘಾತ ಮಾಡಿದ್ದ ಕಾಲೇಜು ಕುವರ, “ನೀವು ಸುಮ್ಮನಿರ್ರೀ” ಎಂದು ದಬಾಯಿಸಿದ್ದರೂ ಚೋಮ ಮಧ್ಯಪ್ರವೇಶಿಸುತ್ತಲೇ ಇದ್ದ. ಕಾಲೇಜು ಕುವರನ ಸಿಟ್ಟು ನೆತ್ತಿಗೇರಿ ಚೋಮನ ಕಪಾಳಕ್ಕೆ ಬಿಗಿದೇ ಬಿಟ್ಟ. ಸರ್ರಂತ ಚೋಮನ ಸಮಾಜ ಸೇವೆ ನಿಂತುಬಿಟ್ಟಿತು. ಆದರೂ ಕುವರನನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು ಎಂಬುದನ್ನು ನೆನೆಸಿಕೊಂಡು ಮತ್ತೊಂದು ಕೆನ್ನೆ ತೋರಿಸಿದ. ಕುವರನಿಗೆ ಇದು ತಮಾಷೆಯಾಗಿತ್ತು. ಮತ್ತೊಂದು ಕೆನ್ನೆಗೂ ಜೋರಾಗಿ ಬಿಗಿದ. ಚೋಮ ಸುಸ್ತಾಗಿ ಜಾಗ ಖಾಲಿ ಮಾಡಿದ. ಕೆಲ ದಿನಗಳ ನಂತರ ಆ ಘಟನೆಯನ್ನೇ ಮರೆತುಬಿಟ್ಟ. ಆದರೆ ಹೊಡೆಸಿಕೊಂಡ ಕೆನ್ನೆ ತನ್ನ ಕೋಪವನ್ನು ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಹಲ್ಲುಗಳ ಮೇಲೆ ತೋರಿಸಿತು. ಚೋಮ ತನ್ನ ಅಳಿದುಳಿದ ಹಲ್ಲುಗಳನ್ನು ತೆಗೆಸಿಕೊಂಡು ಡೆಂಚರ್ ಹಾಕಿಸಿಕೊಳ್ಳಬೇಕಾಯಿತು. ಇಂತಿಪ್ಪ ಸನ್ನಿವೇಶದಲ್ಲಿ ಆಫೀಸಿನಲ್ಲಿ ಯಾವುದೋ ಕಾರಣಕ್ಕೆ ಡೆಂಚರ್ ತೆಗೆದಿದ್ದಾಗ, ಪಕ್ಕದ ಟೇಬಲ್ಲಿನ ನಟಭಯಂಕರ, ನಟಸಾಮ್ರಾಟ, ನಟಚಕ್ರವರ್ತಿ ನಟೇಶ್ ಕುಮಾರ್, “ಮಿ. ಚೋಮ, ಹಿಂಗ್ ಹೇಳ್ತೆನಪಾ ಅಂತ ತ್ಯಪ್ ತಿಳ್ಕೋಬ್ಯಾಡ್ರೀ, ಖರೆ ನೀವ್ ನಿಮ್ಮ ಹಲ್ ಸೆಟ್ ತಗದಾಗ, ಅಗದೀ ಥೇಟ್ ಬರೋಬರ್ ಗಾಂಧಿ ಮುತ್ಯಾನಂಗ ಕಾಣ್ತೇರ್ ನೋಡ್ರಪಾ. ಅಂದ್ಹಂಗ, ನಾವ್ ಬರೋ ಅಕ್ಟೋಬರ್ ಯಾಡಕ್ಕ ಒಂದ್ ಹೊಸ ನಾಟ್ಕ ಆಡಾಕಹತ್ತೇವಿ. ‘ಹೇ ರಾಮ್ – ಹೇ ಅಲ್ಲಾ’ ಅಂತ. ನೀವ್ ಯಾಕ ನಮ್ಮ್ ನಾಟಕದಾಗ ಪಾಲ್ಟ್ ಮಾಡ್ಬಾರ್ದೂ…..”ಅಂತ ಅರ್ಜಿ ಗುಜರಾಯಿಸಿದ.
ಆಗಲೇ ಆತನ ಬದುಕು ಬದಲಾಗಿದ್ದು. ನಾಟಕದಲ್ಲಿ ಸುಡುಗಾಡು ಒಂದು ಡೈಲಾಗೂ ಇರಲಿಲ್ಲ. ಚೌಕದ ಬಳಿ ಗಾಂಧಿ ಪ್ರತಿಮೆಯೊಂದನ್ನು ನಿಲ್ಲಿಸಿರುತ್ತಾರೆ. ಆ ಪ್ರತಿಮೆಯ ಸುತ್ತಲೂ ಮದ್ಯಸೇವನೆ, ವೇಶ್ಯಾವಾಟಿಕೆ ಎಲ್ಲ ನಡೆಯುತ್ತಿರುತ್ತದೆ. ಪ್ರತಿಮೆ ನಿಲ್ಲಿಸುವ ಬದಲು ನಟೇಶ್ ಕುಮಾರ್, ಚೋಮನಿಗೆ ಗಾಂಧಿ ವೇಷ ಹಾಕಿ ಬರೋಬರಿ ಒಂದೂವರೆ ಗಂಟೆ ನಿಲ್ಲಿಸಿಬಿಟ್ಟಿದ್ದ. ವಾರಾಂತ್ಯದ ಪುರವಣಿಗಳ ನಾಟಕದ ವಿಮರ್ಶೆಗಳಲ್ಲಿ ‘ಇಡೀ ನಾಟಕದಲ್ಲಿ ಚೋಮನನ್ನು ಹೊರತು ಪಡಿಸಿ ಮತ್ತೆಲ್ಲ ಕೆಟ್ಟದಾಗಿತ್ತು’ ಎಂದು ಷರಾ ಬರೆಯಲಾಗಿತ್ತು. ಚೋಮನ ಡಬಲ್ ಕಾಲಂ ಫೋಟೋ ಹಾಕಲಾಗಿತ್ತು. ಇದಾದ ಮೇಲೆಯೇ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು,
ಇನ್ನಷ್ಟು
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು