ನಾವು ‘ಕಾಣದ’ ಜಗತ್ತಿಗೆ ಕನ್ನಡಿ…
ಇಸವಿ 2004. ‘ಉದಯವಾಣಿ’ ಸಾಪ್ತಾಹಿಕದಲ್ಲಿ ನನ್ನ ‘ಬದುಕು ಬದಲಿಸಬಹುದು’ ಅಂಕಣ ಬರುತ್ತಿದ್ದ ಸಮಯ. ಶಿಡ್ಲಘಟ್ಟದಿಂದ ಮಲ್ಲಿಕಾರ್ಜುನ ಅವರು ಒಂದು ಪತ್ರ ಬರೆದಿದ್ದರು. ‘ಪೇಪರ್ ಹಾಕುವ ಹುಡುಗನಿಂದ ನಮ್ಮ ಮನೆಯ ಹತ್ತಿರ ಯಾರು ಉದಯವಾಣಿ ತರಿಸುತ್ತಾರೆ ಎಂದು ವಿಚಾರಿಸಿ, ಅವರ ಮನೆಗೆ ಹೋಗಿ, ಅಟ್ಟ ಏರಿ ಭಾನುವಾರದ ಪ್ರತಿಗಳನ್ನು ಹುಡುಕಿ ತಂದೆ, ಈಗ ಪ್ರತಿ ಭಾನುವಾರ ಉದಯವಾಣಿ ತರಿಸುತ್ತಿರುವೆ…’ ಅವರ ಅಷ್ಟೆಲ್ಲ ಪರಿಶ್ರಮಕ್ಕೆ ನನ್ನ ಲೇಖನಗಳು ಖಂಡಿತಾ ಅರ್ಹವಲ್ಲ ಎಂಬ ಅರಿವಿದ್ದ ನನಗೆ ಅಳುಕಾಗಿತ್ತು, ಬರೆಯುವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಪತ್ರದೊಡನೆ ಅವರೊಂದು ‘ಸೀಡಿ’ ಕಳುಹಿಸಿದ್ದರು. ಅದರಲ್ಲಿ ಅವರು ತೆಗೆದ ಸುಂದರ ಛಾಯಾಚಿತ್ರಗಳಿದ್ದವು. ಅವರ ತೋಟದಲ್ಲೇ ತೆಗೆದ ಹೂಗಳು, ಹಕ್ಕಿಗಳು, ಚಿಟ್ಟೆಗಳು, ಕೀಟಗಳು! ನಮ್ಮ ಮನೆಯಂಗಳದ ಮನದಂಗಳದ ಅದ್ಭುತ ಲೋಕವನ್ನು ತೆರೆದಿಟ್ಟರು. ನನಗೆ ಮಲ್ಲಿಕಾರ್ಜುನ್ ಅವರ ಪರಿಚಯವಾದದ್ದು ಹೀಗೆ.
ಅದರಾಚೆ ನನಗೂ – ಅವರಿಗೂ ಕೊಂಡಿಯಾದವರು ಕಾಮತರ ಕುಟುಂಬ. ನನಗೆ ಪ್ರಿಯವಾದ ನನ್ನ ಫೋಟೋಗಳೆಂದರೆ, ಕೃಷ್ಣಾನಂದ ಕಾಮತರು ತೆಗೆದದ್ದು ಮತ್ತು ಮಲ್ಲಿಕಾರ್ಜುನ್ ಅವರು ತೆಗೆದಿರುವುದು. ಅವರು ಚಿತ್ರಗಳಿಗಷ್ಟೆ ಅಲ್ಲ, ಚಿತ್ರದಲ್ಲಿ ಸೆರೆಹಿಡಿದ ವ್ಯಕ್ತಿಗಳಿಗೂ ಜೀವ ಮತ್ತು ಬಣ್ಣ ತುಂಬುತ್ತಾರೆ. ಕಾಮತರ ಮನೆಗೆ ಹೋದಾಗೆಲ್ಲ ಅವರು ಹಿಡಿದ ನೂರಾರು ಚಿತ್ರಗಳನ್ನು ಬೆರಗಿನಿಂದ ನೋಡುತ್ತಿದ್ದೆ. ನಮಗೆ ಕಾಣದ ಜಗತ್ತು ಅವರಿಗೆ ಕಂಡ ರೀತಿಗೆ ಅಚ್ಚರಿ. ಮಲ್ಲಿಕಾರ್ಜುನ್ ಅವರ ಚಿತ್ರಗಳನ್ನು ನೋಡುವಾಗ ಅದೇ ಬೆರಗು, ವಿಸ್ಮಯ ಅನುಭವಕ್ಕೆ ಬರುತ್ತದೆ. ಕಾಮತರ ದಿಟವಾದ ಉತ್ತರಾಧಿಕಾರಿ ಮಲ್ಲಿಕಾರ್ಜುನ್ ಅವರು.
ಅಂದು ನನ್ನ ಕಾದಂಬರಿ ‘ಯಾದ್ ವಶೇಮ್’ನ ಬಿಡುಗಡೆಯ ಸಂದರ್ಭ. ಮಲ್ಲಿಕಾರ್ಜುನ್ ತಮ್ಮ ಪ್ರೀತಿಯ ಅಮ್ಮನನ್ನು ಕಳೆದುಕೊಂಡು ಹೆಚ್ಚು ಸಮಯವಾಗಿರಲಿಲ್ಲ. ಈ ಬಿಡುಗಡೆಯ ಸಮಯದಲ್ಲಿ ನಮ್ಮೊಡನಿದ್ದ ನನ್ನಮ್ಮನ ಅದೆಷ್ಟೋ ಚಿತ್ರಗಳನ್ನು ಸಹಜ ಸುಂದರವಾಗಿ ಮಲ್ಲಿಕಾರ್ಜುನ್ ಅವರು ಸೆರೆಹಿಡಿದು ನನಗೆ ಕಳುಹಿಸಿದ್ದರು. ಇಂದು ಅಮ್ಮ ಇಲ್ಲ, ಆದರೆ ಮೈಸೂರು ಮನೆಯಲ್ಲಿ ಗೋಡೆಯ ಮೇಲಿನ ಫೋಟೋ ಫ್ರೇಮ್ನಿಂದ ನಗುತ್ತಿರುವ ಮಲ್ಲಿಕಾರ್ಜುನ್ ‘ಸೆರೆಹಿಡಿದ’ ಅಮ್ಮನ ಸುಂದರ ಮುಖ ‘ನಾನೆಲ್ಲಿ ಹೋಗಿದ್ದೇನೆ, ಇಲ್ಲೇ ಇದ್ದೇನಲ್ಲ’ ಎನ್ನುತ್ತಿದೆ.
ಇನ್ನಷ್ಟು
12.971606
77.594376
ಇತ್ತೀಚಿನ ಟಿಪ್ಪಣಿಗಳು