‘ಹೈವೇ ಬದಿ ದೋಸೆವ್ಯಾಪಾರ ಮತ್ತು ರಿಸೆಶನ್ ಗರ !!’
-ಜಯದೇವ ಪ್ರಸಾದ ಮೊಳೆಯಾರ
‘ಒಂದು ಕತೆ ಅಂದ್ರೆ, ಮೇಲ್ನೋಟಕ್ಕೆ ಕಂಡಷ್ಟೇ ಅಲ್ಲ; ಅದರಲ್ಲಿ ಸೂಚ್ಯವಾಗಿ ಹೇಳಲು ಯತ್ನಿಸುವ ಒಂದು ಥೀಮ್ ಅಥವಾ ‘ಒಳದನಿ’ಯೂ ಇರಬೇಕಾಗುತ್ತೆ. ಅಂತಹ ಒಳದನಿಯನ್ನು ನೇರವಾಗಿ ಒಂದು ವರದಿಯಂತೆ ಹೇಳದೆ ಪರೋಕ್ಷವಾಗಿ ಒಂದು ಸನ್ನಿವೇಶದ ಚಿತ್ರಣದ ಮೂಲಕ ಓದುಗರಿಗೆ ಮುಟ್ಟಿಸುವುದೇ ಸಣ್ಣಕತೆ ಪ್ರಕಾರದ ಮೂಲ ಸೂತ್ರ’ ಅಂತೆಲ್ಲಾ ವಿಮರ್ಶಕರು ಹೇಳ್ತಾರೆ.
ಈಗ ಈ ಕತೆ ಓದಿ:
ಒಬ್ಬ ಅನಕ್ಷರಸ್ಥ, ಬಡವ. ಹೊಟ್ಟೆಪಾಡಿಗಾಗಿ ಹೈವೇ ಬದಿಯಲ್ಲಿ ಒಂದು ತಳ್ಳುಗಾಡಿ ಹಿಡಿದುಕೊಂಡು ಯಾತ್ರಿಕರಿಗಾಗಿ ಬಿಸಿ ಬಿಸಿ ದೋಸೆ ಮಾಡಿ ಮಾರಾಟ ಆರಂಭಿಸುತ್ತಾನೆ. ಅವನಿಗೆ ವಾರ್ತಾಪತ್ರಿಕೆ ಓದಲು ಬರುವುದಿಲ್ಲ, ಟಿವಿ ನ್ಯೂಸ್ ಓದಿ ಅರ್ಥೈಸುವ ವ್ಯವಧಾನವಿಲ್ಲ. ದೇಶದ ಆಗು-ಹೋಗುಗಳ ಬಗ್ಗೆ ಯಾವುದೇ ಅರಿವಿಲ್ಲ. ಆದರೆ, ದೊಸೆ ಮಾತ್ರ ರುಚಿಕಟ್ಟಾಗಿ ಮಾಡಬಲ್ಲ. ಆ ಹೈವೇನಲ್ಲಿ ಹೋಗುವವರಿಗೆಲ್ಲಾ ಆತನ ದೊಸೆಯ ರುಚಿ ಹತ್ತಿ ವಾಹನ ನಿಲ್ಲಿಸಿ ದೋಸೆ ಮೆಲ್ಲತೊಡಗಿದರು. ದಿನೇ ದಿನೇ ಆತನ ವ್ಯಾಪಾರ ಹಿಗ್ಗಿ, ಜಾಸ್ತಿ ಬಂಡವಾಳ ಹೂಡಿ, ಒಂದು ರೆಸ್ಟಾರಂಟ್ ಹಾಕಿ, ಕೆಲಸಕ್ಕೆ ಜನ ಇಟ್ಟು, ದೊಡ್ಡ ಉದ್ಯಮವನ್ನೇ ಆರಂಭಿಸಿದ. ಕೆಲವು ವರುಷಗಳೇ ಸಂದವು. ಎಲ್ಲಾ ರೀತಿಯ ಆರ್ಥಿಕ ಏಳು ಬೀಳುಗಳನ್ನು ಎದುರಿಸಿಯೂ ಅಭಿವೃದ್ಧಿ ಹೊಂದಿದ. ಭಾರೀ ಧನ ಸಂಪಾದಿಸಿ ಮಗನನ್ನು ಕಾಲೇಜಿಗೆ ಕಳಿಸಿ ವಿದ್ಯಾವಂತನಾಗಿಸಿದ.
ಒಂದು ದಿನ ವಿದ್ಯಾವಂತ ಮಗ ಬಂದು ಹೇಳಿದ, ‘ಅಪ್ಪಾ, ನಿಂಗೆ ಗೊತ್ತಿಲ್ವಾ? ಇಡೀ ವಿಶ್ವಕ್ಕೆ ರಿಸೆಶನ್ ಗರ ಬರಲಿದೆ. ನಾವು ದೊಡ್ಡ ಆಪತ್ತಿನಲ್ಲಿ ಸಿಲುಕುತ್ತಿದ್ದೇವೆ. ನಾವೀಗ ಅತ್ಯಂತ ಮುಂಜಾಗರೂಕರಾಗಿರಬೇಕು.’ ಅನಕ್ಷರಸ್ಥ ಅಪ್ಪ ‘ಹ್ಹೂ’ಗುಟ್ಟುತ್ತಾನೆ. ಕಲಿತ ಮಗ ಹೇಳುತ್ತಿದ್ದಾನಲ್ಲವೇ? ಜಾಣ ಮಗನ ಸಲಹೆಯ ಮೇರೆಗೆ ಸಾಮಾನುಗಳ ದಾಸ್ತಾನು ಕಡಿಮೆ ಮಾಡುತ್ತಾನೆ. ಬಿಸಿನೆಸ್ನಲ್ಲಿ ಹೂಡಿದ ಬಂಡವಾಳ ಕಟ್ ಮಾಡುತ್ತಾನೆ. ಕೆಲಸದವರನ್ನು ನಮ್ಮ ಐಟಿ-ಬಿಟಿಯವರ ತರ ಲೇ-ಆಫ್ ಮಾಡುತ್ತಾನೆ. ಅಂಜಿ ಅಂಜಿ ಅರೆ ಮನಸ್ಸಿನಿಂದ ಹೋಟೆಲ್ ನಡೆಸುತ್ತಾನೆ.
ರೆಸ್ಟಾರಂಟ್ ಸ್ಥಿತಿ ಬದಲಾಯಿತು. ಯಾತ್ರಿಗಳಿಗೆ ಕೊಡಲು ದೋಸೆಯಿರುತ್ತಿರಲಿಲ್ಲ. ದೋಸೆಯಿದ್ದರೆ ಚಟ್ನಿಯಿರುತ್ತಿರಲಿಲ್ಲ. ಎರಡೂ ಇದ್ದರೆ ಸಪ್ಲೈಗೆ ಆಳಿರುತ್ತಿರಲಿಲ್ಲ. ಹೀಗೆಲ್ಲಾ ಆಗಿ, ಕಳಪೆ ಗುಣಮಟ್ಟದಿಂದ ರೋಸಿ ಹೋಗಿ ಗಿರಾಕಿಗಳು ಅವನನ್ನು ಬಿಟ್ಟು ಬೇರೆ ಕಡೆ ಹೋಗಲು ಶುರು ಮಾಡಿದರು. ಆತನ ದಂಧೆ ದಿನೇ ದಿನೇ ಕ್ಷೀಣಿಸತೊಡಗಿ ಕೊನೆಗೊಂದು ದಿನ ಗೂಡು ಹಾಕುವ ಹಂತಕ್ಕೆ ತಲುಪಿತು.
ಆಗ ಅವನು ಮಗನ ಮುಂದಾಲೋಚನೆಯನ್ನು ಮೆಚ್ಚಿ ಹೇಳುತ್ತಾನೆ ‘ಮಗಾ, ನೀನು ರಿಸೆಶನ್ ಬಗ್ಗೆ ಹೇಳಿದ್ದು ಸರಿ. ರಿಸೆಶನ್ ಗರ ಈಗ ಬಡಿದಿದೆ !!’
ಇತ್ತೀಚಿನ ಟಿಪ್ಪಣಿಗಳು