ಪೂರ್ಣ ಓದಿಗೆ: ಮೀಡಿಯಾ ಮೈಂಡ್

newspaperboat

ಅಂದಿಗೂ ಇಂದಿಗೂ ಬಹುಶಃ ಎಂದಿಗೂ, ಕನ್ನಡ ಚಾನೆಲ್ ಗಳಲ್ಲಿ ನುಗ್ಗಲು ‘ಈ ಟಿವಿ’ ಲಾಂಚ್ ಪ್ಯಾಡ್ ಆಗಿರುವಂತೆ ಪ್ರಿಂಟ್ ಮೀಡಿಯಾದಲ್ಲಿ ನುಗ್ಗಲು ವಿಜಯ ಟೈಮ್ಸ್ ಅದ್ಭುತ ವೇದಿಕೆ ಒದಗಿಸಿಕೊಡುತ್ತಿದ್ದ ಸಂದರ್ಭ. ವಿಜಯ ಟೈಮ್ಸ್ ನಲ್ಲಿ ಪ್ರಕಟಿತ ಪ್ರತಿ ಪದಕ್ಕೆ ಎಂಟಾಣೆ ಲೆಕ್ಕದಲ್ಲಿ ಸ್ಟ್ರಿಂಗರ್ ಆಗಿ ಸೇರಿದ್ದೆ. (ಪ್ರತಿ ಪದಕ್ಕೆ ಎಂಟು ಆಣೆ ಹಾಗೂ ಫೋಟೋ ಗೆ ಇದಕ್ಕಿಂತ ಜಾಸ್ತಿ. ಎಷ್ಟು ಎಂದು ಸರಿಯಾಗಿ ನೆನಪಿಲ್ಲ. ಆಶ್ಚರ್ಯವಾಯಿತೆ?) ನನ್ನ ಗೆಳೆಯರೆಲ್ಲ ನಾನು ಬಂದ ಕೂಡಲೇ ‘ಎಂಟಾಣೆಗೊಂದ್ ಎಂಟಾಣೆಗೊಂದ್’ ಎಂದು ಕಾಲೆಳೆಯುತ್ತಿದ್ದರು.

ಆದರೆ ಅದಾಗಿ ಮೂರೇ ದಿನಕ್ಕೆ ಅದೇ ವಿಜಯ ಟೈಮ್ಸ್ ನಲ್ಲಿ ಟ್ರೇನಿ ಜರ್ನಲಿಸ್ಟ್ ಆಗಿ ಸೇರಿದ್ದೆ. ವಾರ ಕಳೆಯುತ್ತಿದ್ದಂತೆ ಯುದ್ಧಭೂಮಿಗೆ ಕಳಿಸಲಾರಂಭಿಸಿದರು. ಭಾರೀ ಸಿದ್ಧತೆಯೊಂದಿಗೆ, ಶ್ರದ್ಧೆಯೊಂದಿಗೆ, ಭಯ-ಭಕ್ತಿಯೊಂದಿಗೆ ಪ್ರತಿನಿತ್ಯವೂ ಬೆಳಗಾ ಬೆಳಗಾ ಪ್ರೆಸ್ ಕ್ಲಬ್ಬಿಗೆ ಹೋಗಿ ಮಧ್ಯಾಹ್ನದವರೆಗೂ ಅಲ್ಲಿದ್ದು, ಬೇಕಾಗಿದ್ದ ಬೇಡವಾಗಿದ್ದ ಕನಿಷ್ಠ ಎಂಟು ಹತ್ತು ಪ್ರೆಸ್ ಕಾನ್ಫರೆನ್ಸ್ ಗಳನ್ನು ಕವರ್ ಮಾಡಿಕೊಂಡು ಆಫೀಸಿಗೆ ಮರಳಿ ಎಲ್ಲವನ್ನೂ ಶ್ರದ್ಧೆಯಿಂದ ಫೈಲ್ ಮಾಡುತ್ತಿದ್ದೆ. ಮಾರನೆ ದಿನ ಪೇಪರ್ ನಲ್ಲಿ ಒಂದೋ ಎರಡೋ ವರದಿಗಳು ಪ್ರಕಟವಾಗಿರುತ್ತಿದ್ದವು. ಇಂತಿಪ್ಪ ಸನ್ನಿವೇಶದಲ್ಲಿ ಪ್ರೇಸ್ ಕ್ಲಬ್ ಅಲ್ಲದೆ ಇತರ ಕಾರ್ಯಕ್ರಮಗಳಿಗೂ ನನ್ನನ್ನು ಕಳಿಸಿಕೊಡಲು ಆರಂಭಿಸಿದರು.

ಪೂರ್ಣ ಓದಿಗೆ: ಮೀಡಿಯಾ ಮೈಂಡ್

ಮಣಿಕಾಂತ್ ಬರೆದಿದ್ದಾರೆ: ನೀನಾ ಭಗವಂತಾ..

6213_1079515355773_1462958320_30205965_5660699_n1ಚಿತ್ರ: ಎ ಆರ್ ಮಣಿಕಾಂತ್

ತ್ರಿವೇಣಿ. ಗೀತೆರಚನೆ: ಹಂಸಲೇಖ

ಸಂಗೀತ: ಉಪೇಂದ್ರಕುಮಾರ್. ಗಾಯನ: ಜಿ. ಬಾಲಕೃಷ್ಣ.

ಸಿರಿನಂದನಾ, ಏನ ಕೇಳಲಿ ನಾ

ಓ ದಯಾಳು, ಬರಿದು ಬಾಳು

ಕರುಣಿಸೋ ನಗುಜೀವನಾ, ಸಿರಿನಂದನಾ

ಜನನ ಮರಣಾ ಬಾಳಪಥದಿ ಹರಿಸಿ ಸಾಗುವೆ ವಿನಾ

ನೀನಾ ಭಗವಂತಾ

ಜಗಕುಪಕರಿಸಿ ನನಗಪಕರಿಸೋ

ಜಗದೋದ್ಧಾರಕ ನೀನೇನಾ, ನೀನೇನಾ ||ನೀನಾ||

ಗೋರ್ಕಲ್ಲಿಗೆ ಗುಡಿ ಮಂದಿರ ನೂರು

ಮಾಡಿದ ನರನಿಗೆ ನೆಲೆಯಿಲ್ಲ

ಹೂ ಸೌಗಂಧವ ಲೇಪಿಸಿ ಹಾಡಿ

ಕರೆದರು ಕರುಣಿಸೆ ಕೃಪೆಯಿಲ್ಲ ||ನೀನಾ||

ನಶ್ವರ ಭೋಗದ ಆಸೆ ಕಡಲಲಿ

ತೇಲಿಸಿ ಮುಳುಗಿಸಲೇಕಯ್ಯ

ಅಂತರ ತಿಳಿಯದೆ ಪಾಲಿಸುವವಗೆ

ದೈವೋತ್ತಮ ಬಿರುದೇಕಯ್ಯ ||ನೀನಾ||

ಕರುಣೆ ಮಮತೆ ತೋರಿ ನಿಜದಿ

ಕಲಕಿ ಕದಡುವೆ ಮನ

ಇರುವೆ ಎಲ್ಲಿ ಶೂನ್ಯ ಜಗದಿ

ಪ್ರಸರಿಸೋ ಶಾಂತಿ ತಾ… ಸಿರಿನಂದನಾ… ||ನೀನಾ||

2007072750820101

ಚಿತ್ರಸಾಹಿತಿಯಾಗುವ ಕನಸು ಕಂಡ ವ್ಯಕ್ತಿಗೆ, ಅದೇ ಮೊದಲಿಗೆ ಹಾಡು ಬರೆಯುವ ಅವಕಾಶ ಸಿಕ್ಕರೆ ಆತ ಏನು ಮಾಡ್ತಾನೆ ಹೇಳಿ? ಮೊದಲಿಗೆ, ಮನೆ ದೇವರಿಗೆ ನಮಿಸುತ್ತಾನೆ. `ದೇವ್ರೇ, ಒಳ್ಳೆಯದು ಮಾಡಪ್ಪಾ’ ಎಂದು ಪ್ರಾಥರ್ಿಸುತ್ತಾನೆ. ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸುತ್ತಾನೆ. ಕಾಣಿಕೆ ಹಾಕುತ್ತಾನೆ. ಇಷ್ಟೆಲ್ಲ ಆದ ಮೇಲೆ ಶ್ರದ್ಧಾಭಕ್ತಿಯಿಂದ ಬರೆಯಲು ಕೂರುತ್ತಾನೆ. ಹಾಳೆಯ ಮೇಲೆ- ಶ್ರೀ/ಶ್ರೀಮಾತಾ ಎಂದೋ; ರಾಘವೇಂದ್ರಾಯ ನಮಃ/ಮಂಜುನಾಥಾಯ ನಮಃ/ಶ್ರೀ ವೆಂಕಟೇಶ್ವರ ಪ್ರಸನ್ನ ಎಂದೋ ಬರೆದು ನಂತರವೇ ಮುಂದುವರಿಯುತ್ತಾನೆ. ಆದರೆ, ಇವತ್ತು ಕನ್ನಡದ ನಂಬರ್ ಒನ್ ಗೀತರಚನೆಕಾರ ಎನಿಸಿಕೊಂಡಿರುವ ಹಂಸಲೇಖ ಅವರು, ದೇವರನ್ನು ಬಯ್ಯುವ ಹಾಡಿನಿಂದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಎಂದರೆ ನಂಬುತ್ತೀರಾ?

ನಂಬಲೇಬೇಕು. ಏಕೆಂದರೆ ಇದು ನಿಜ.

ಹಂಸಲೇಖ ಅವರ ಒರಿಜಿನಲ್ ಹೆಸರು ಜಿ. ಗಂಗರಾಜು. ಜಿ. ಫಾರ್ ಗೋವಿಂದರಾಜು. ಇದು ತಂದೆಯ ಹೆಸರು. ಗಂಗರಾಜು ಅವರಿಗೆ ಅವರ ಗುರುಗಳೊಬ್ಬರು ಹಂಸದಂಥ ವಿನ್ಯಾಸ ಹೊಂದಿದ್ದ ಪೆನ್ ಒಂದನ್ನು ಉಡುಗೊರೆಯಾಗಿ ನೀಡಿದರಂತೆ. ಅದನ್ನು ಅಮೂಲ್ಯ ವಸ್ತು ಎಂಬಂತೆ ಇಟ್ಟುಕೊಂಡಿದ್ದ ಗಂಗರಾಜು, ತುಂಬ ಮಹತ್ವದ್ದನ್ನು ಬರೆಯಬೇಕು ಅನ್ನಿಸಿದಾಗ ಅದೇ ಪೆನ್ ಬಳಸುತ್ತಿದ್ದರು. ಮುಂದೆ, ಚಿತ್ರಸಾಹಿತಿ ಆಗಬೇಕು ಅಂದುಕೊಂಡಾಗ, ಒರಿಜಿನಲ್ ಹೆಸರಿನ ಬದಲು ಒಂದು ಕಾವ್ಯನಾಮ ಇದ್ದರೆ ಚೆಂದ ಅಂದುಕೊಂಡರು ಗಂಗರಾಜು. ಆಗಲೇ, ಮೇಸ್ಟ್ರು ಉಡುಗೊರೆಯಾಗಿ ಕೊಟ್ಟಿದ್ದ ಪೆನ್ನು ಹಾಗೂ ಅದರಲ್ಲಿ ಬರೆಯುವಾಗ ಉಂಟಾಗುವ ಅವ್ಯಕ್ತ ಆನಂದ ನೆನಪಾಯಿತು. ತಕ್ಷಣವೇ `ಹಂಸಲೇಖ’ ಎಂಬುದನ್ನೇ ತಮ್ಮ ಕಾವ್ಯನಾಮ ಮಾಡಿಕೊಳ್ಳಲು ನಿರ್ಧರಿಸಿದರು ಗಂಗರಾಜು. ಮುಂದಿನದು ಇತಿಹಾಸ…

Hamsalekha_Photoಹಂಸಲೇಖ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ರವಿಚಂದ್ರನ್ ನಿದರ್ೇಶನದ `ಪ್ರೇಮಲೋಕ’ದ ಮೂಲಕ ಎಂದು ಈಗಲೂ ಹಲವರು ಭಾವಿಸಿದ್ದಾರೆ. ಆದರೆ ವಾಸ್ತವ ಏನೆಂದರೆ, ಹಂಸಲೇಖ ಚಿತ್ರರಂಗ ಪ್ರವೇಶಿಸಿದ್ದು ಎಪ್ಪತ್ತರ ದಶಕದಲ್ಲಿ ತೆರೆಕಂಡ `ತ್ರಿವೇಣಿ’ ಚಿತ್ರದ ಮೂಲಕ. ಇವತ್ತು ಈ ಅಂಕಣದಲ್ಲಿದೆಯಲ್ಲ? ಅದೇ ಹಂಸಲೇಖ ಬರೆದ ಮೊದಲ ಹಾಡು.

ಅದ್ಸರಿ, ಹಂಸಲೇಖ ಅವರಿಗೆ ದೇವರ ಮೇಲೆ ಯಾಕೆ ಸಿಟ್ಟು? `ನೀನಾ ಭಗವಂತಾ?’ ಎಂದು ಬರೆಯುವಾಗ ಅವರಿಗೆ ಹೆದರಿಕೆ ಆಗಲಿಲ್ವ? ಮೊದಲ ಸಿನಿಮಾದಲ್ಲೇ ಅವರು ದೇವರಿಗೇ ತಗುಲಿಕೊಂಡಿದ್ದಾದರೂ ಏಕೆ? ಈ ಹಾಡು ಬರೆದಾಗ ಹಂಸಲೇಖ ಅವರ ಪರಿಸ್ಥಿತಿ ಹೇಗಿತ್ತು? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಅದೊಮ್ಮೆ ಹಂಸಲೇಖ ಹೀಗೆ ಉತ್ತರಿಸಿದ್ದರು:

ಇವತ್ತು ಎಲ್ಲಿ ಹೋದರೂ ಕೂಡ ಜನ ನನ್ನನ್ನು ಗುರುತಿಸ್ತಾರೆ. ಪ್ರೀತಿಸ್ತಾರೆ. ಆರಾಸ್ತಾರೆ. ಗೌರವಿಸ್ತಾರೆ. ಬಿಡಪ್ಪಾ, ಈಗ ಹಂಸಲೇಖ ಸ್ಟಾರ್ ಆಗಿದಾರೆ ಅಂತಾರೆ. ಎಲ್ಲವೂ ನಿಜ. ಆದರೆ, ನಾನು ಈ ಸ್ಥಿತಿಗೆ ರಾತ್ರೋರಾತ್ರಿ ಬಂದವನಲ್ಲ. ವಿಪರೀತ ಕಷ್ಟಪಟ್ಟಿದೀನಿ. ನನ್ನ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲವಲ್ಲ ಅಂಥ ತುಂಬಾ ಕೊರಗಿದ್ದೀನಿ. ಯಾರಿಗೂ ಕಾಣದಂತೆ ಕಣ್ಣೀರು ಹಾಕಿದ್ದೀನಿ…

ಇನ್ನಷ್ಟು

ಬ್ಯಾಚುಲರ್ ಕಿಚನ್ ನಲ್ಲಿ “ಬೆಳ್ಳುಳ್ಳಿ ಅನ್ನ”

-ಅರವಿಂದ ನಾವಡ

ಪಾಕಚಂದ್ರಿಕೆ

ಬೆಳ್ಳುಳ್ಳಿ ಎಂದ ಕೂಡಲೇ ಮೂಗು ಮುರಿಯಬೇಡಿ. ಅದರ ವಾಸನೆ ಅಥವಾ ಪರಿಮಳ ಸ್ವಲ್ಪ ಘಾಟಿರಬಹುದು. ಆದರೆ ಅದು ಬ್ರಹ್ಮಚಾರಿಗಳ ಗಡಿಬಿಡಿಗೆ ಅನುಕೂಲವಾದಷ್ಟು ಇನ್ಯಾವುದಕ್ಕೂ ಪ್ರಯೋಜನಕ್ಕೆ ಬಾರದು.
ಸಾಮಾನ್ಯವಾಗಿ, ಬ್ರಹ್ಮಚಾರಿಗಳ ರೂಮುಗಳಲ್ಲಿ ಏನೆಂದರೆ…ಅನ್ನ ಮಾಡೋದೇ ಹೆಚ್ಚು. ಇನ್ನು ಅದಕ್ಕೆ ಸಾರು, ಹುಳಿ, ಪಲ್ಯ ಅಂತ ಎಲ್ಲಿ ಮಾಡ್ತಾರೆ. ಹಾಗಂತ ದಿನವೂ ಚಿತ್ರಾನ್ನ ಮಾಡಿ ಮಾಡಿಯೂ ಬೇಜಾರು.
ಆಗ ಬೆಳ್ಳುಳ್ಳಿ ಅನ್ನ ಮಾಡಿ.
ಹತ್ತು ನಿಮಿಷದ ಕೆಲಸವಷ್ಟೇ. ಹಾಗೆ ಹೋಗಿ, ಹೀಗೆ ಬರೋದ್ರೊಳಗೆ ಮಾಡಿಬಿಡಬಹುದು. ಇದಕ್ಕೆ ಹೆಚ್ಚು ಸಾಮಾನುಗಳೂ ಬೇಕಿಲ್ಲ.

garlic_tight[1]

ಎರಡು ಗೆಡ್ಡೆ ಬೆಳ್ಳುಳ್ಳಿ
ಸ್ವಲ್ಪ ಕರಿಬೇವಿನ ಎಲೆ
ಸಾಸಿವೆ
ಉದ್ದಿನಬೇಳೆ
ಕಡ್ಲೆಬೇಳೆ
ಹಸಿಮೆಣಸು
ಒಣಮೆಣಸು
ಉಪ್ಪು

ಮೊದಲು ಮಾಡಿದ ಅನ್ನವನ್ನು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಿದ್ಧಪಡಿಸಿಟ್ಟುಕೊಳ್ಳಿ. ನಾಲ್ಕು ಹಸಿ ಮೆಣಸು ಸೀಳಿಕೊಳ್ಳಿ.

ಒಗ್ಗರಣೆಗೆ ಎರಡು ಒಣಮೆಣಸು ತುಂಡು ಮಾಡಿಕೊಂಡು, ಒಲೆ ಹಚ್ಚಿ ಬಾಣಲಿ ಇಡಿ (ಪಾತ್ರೆಯೂ ಆದೀತು). ಕಾವು ಸಣ್ಣಗಿರಲಿ. ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಅರ್ಧ ಟೀ ಸ್ಪೂನ್ ಸಾಸಿವೆ ಹಾಕಿ, ಪಟ್ ಪಟ್ ಎಂಬ ಸದ್ದು ಕೇಳುತ್ತಿದ್ದಂತೆ ಬೆಳ್ಳುಳ್ಳಿ ಹಾಕಿ. ಬಂಗಾರದ ಬಣ್ಣಕ್ಕೆ ಬರುತ್ತಿದ್ದಂತೆ ಸ್ವಲ್ಪ ಉದ್ದಿನಬೇಳೆ, ಕಡ್ಲೆಬೇಳೆ, ಒಣಮೆಣಸು ಹಾಕಿ. ಕೆಂಪಗಾಗುವಷ್ಟು ಹುರಿಯಿರಿ. ಕೆಂಪಗಾಗುತ್ತಿದ್ದಂತೆ ಹಸಿಮೆಣಸು, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಆಮೇಲೆ ಉಪ್ಪು ಹಾಕಿ ಅನ್ನವನ್ನು ಹಾಕಿ ಕಲಸಿ. ಅಲ್ಲಿಗೆ ಬೆಳ್ಳುಳ್ಳಿ ಅನ್ನ ಸಿದ್ಧ.

ಇದಕ್ಕೆ ಬೇಕಾದವರು ಲಿಂಬೆಹಣ್ಣಿನ ರಸ ಬೆರೆಸಬಹುದು, ತೆಂಗಿನಕಾಯಿಯ ತುರಿ ಹಾಕಬಹುದು. ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಬಹುದು.

ಮತ್ತೊಂದು ಪ್ರಮುಖ ಸಂಗತಿಯೆಂದರೆ, ಬ್ರಹ್ಮಚಾರಿಗಳ ಮನೆಯಲ್ಲಿ ಅನ್ನ ಉಳಿಯುವುದು ಹೆಚ್ಚು. ಇಂದಿನ ಅನ್ನ ನಾಳೆಗೆ ಉಳಿದಾಗ ತಂಗಳನ್ನ ತಿನ್ನಬೇಕು ಎಂದು ಬೇಸರವಿರುತ್ತದೆ. ಆ ದುಃಖವನ್ನು ಇದು ಹೋಗಲಾಡಿಸುತ್ತದೆ. ಅದಕ್ಕೆ ಅನ್ನ ಉಳಿದರೆ, ಅದಕ್ಕೆ ನೀರು ಹಾಕಿಡಿ. ಅದು ಕೆಟ್ಟು ಹೋಗುವುದಿಲ್ಲ. ಅದೇ ಅನ್ನವನ್ನು ಹಿಂಡಿ ಹಿಂಡಿ ನೀರಿನಾಂಶ ತೆಗೆದು ಬೆಳ್ಳುಳ್ಳಿ ಅನ್ನ ಮಾಡಬಹುದು. ಅದೇ ಹೆಚ್ಚು ರುಚಿ.

ಗಮನವಿಡಬೇಕಾದ ಅಂಶ
ಅನ್ನ ಬಟ್ಟಲಿಗೆ ಹಾಕಿ ತಣ್ಣಗೆ ಮಾಡಿದರೆ ಬೆಳ್ಳುಳ್ಳಿ ಅನ್ನ ಮುದ್ದೆಯಾಗುವುದಿಲ್ಲ.
ಇದಕ್ಕೆ ಶುಂಠಿ ಇತ್ಯಾದಿ ಹಾಕಬೇಡಿ. ಬೆಳ್ಳುಳ್ಳಿ ಮತ್ತು ಶುಂಠಿ ಎರಡರ ಘಾಟು ರುಚಿಯನ್ನೇ ಕೆಡಿಸುತ್ತದೆ.
ತಂಗಳನ್ನ ಎಂದು ಹೀಗಳೆಯಬೇಡಿ, ಬೆಳ್ಳುಳ್ಳಿ ಅನ್ನ ಮಾಡಿ.
ಬಹಳ ಸುಲಭ ಮತ್ತು ಕಡಿಮೆ ಸಮಯ ಹಿಡಿಯುವ ತಿಂಡಿ.

%d bloggers like this: