ಕಾವ್ಯ, ಆಧ್ಯಾತ್ಮ ಮತ್ತು ಒಂಚೂರು ಕಾಮ!

ದಿನನಿತ್ಯದ ಜಂಜಾಟಗಳಿಂದ ಪಾರಾಗುವುದಕ್ಕೆ ಇರುವ ಮಾರ್ಗಗಳು ಮೂರು; ಲೋಲುಪತೆ, ಕಾವ್ಯ, ಆಧ್ಯಾತ್ಮ. ಲೋಲುಪತೆಗೂ ಕಾವ್ಯಕ್ಕೂ ಹತ್ತಿರದ ಸಂಬಂಧವುಂಟು. ಹಾಗೆ ನೋಡಿದರೆ ಕಾವ್ಯವನ್ನು ಕಲೆಗೂ ವಿಸ್ತರಿಸಬಹುದು. ಆಧ್ಯಾತ್ಮಕ್ಕೂ ಕಲೆಗೂ ಹತ್ತಿರದ ಸಂಬಂಧವಿದೆ. ಲೋಲುಪತೆಯ ತುತ್ತುತುದಿಯಲ್ಲೇ ಆಧ್ಯಾತ್ಮದ ಕಿರಣವೊಂದು ಕಂಡು ನಮ್ಮನ್ನು ಬೆಚ್ಚಿ ಬೀಳಿಸಬಹುದು. ಅಥವಾ ಈ ಮೂಳೆ ಮಾಂಸದ ದೇಹದ ನಶ್ವರತೆ ಅರಿತವನು, ಅದನ್ನು ಬೇಕಾಬಿಟ್ಟಿ ಬಳಸಿ ಎಸೆದು ಹೋಗಬಹುದು. ಈ ದೇಹ ಮುಖ್ಯವಲ್ಲ, ಆತ್ಮ ಮುಖ್ಯ ಎಂದು ವಾದಿಸುವವನಿಗೆ ದೇಹದ ಬಗ್ಗೆ ಗೌರವವಾಗಲೀ, ಪ್ರೀತಿಯಾಗಲಿ ಇರುವುದಕ್ಕೆ ಸಾಧ್ಯವಿಲ್ಲವಲ್ಲ. ಅದೊಂದು ಆಯುಧ ಮಾತ್ರ. ಅದನ್ನೂ ಹರಿತವಾಗಿ ಇಟ್ಟುಕೊಂಡರೆ ಸಾಕು.
ಅಷ್ಟಕ್ಕೂ ಕಲೆ ಮತ್ತು ಆಧ್ಯಾತ್ಮದ ದಾಹ ನಿಜಕ್ಕೂ ನಮ್ಮನ್ನು ಅಷ್ಟೊಂದು ತೀವ್ರವಾಗಿ ಕಾಡುತ್ತದಾ? ಅದೊಂದು ಭ್ರಮಾಲೋಕಕ್ಕೆ ಒಯ್ದು ನಮ್ಮನ್ನು ಪಲಾಯನವಾದಿಗಳನ್ನಾಗಿಸುವ ಹುನ್ನಾರವಾ? ನಂಬದಿರು ಈ ದೇಹ ನಿತ್ಯವಲ್ಲ ಎಂದು ಹಾಡಿಕೊಳ್ಳುವ ಆಧ್ಯಾತ್ಮಕ್ಕೂ, ನಮ್ಮನ್ನು ನಮ್ಮ ಜಂಜಾಟಗಳಿಂದ ಅರೆಕ್ಷಣವಾದರೂ ಬಿಡುಗಡೆ ಮಾಡಿಸುವ ಕಲೆಗೂ ಎಷ್ಟು ಹತ್ತಿರದ ಸಂಬಂಧವಿದೆ ನೋಡಿ. ಸುಮ್ಮನೆ ನೆನಪಿಸಿಕೊಂಡರೆ ಹಳೆಯದೊಂದು ಜನಪದ ಗೀತೆ ನೆನಪಾಗುತ್ತದೆ:
ಚಿತ್ರ: ಎಂ ಎಸ್ ಮೂರ್ತಿ
ಸುಖ ಎಲ್ಲರಿಗೆಲ್ಲೈತವ್ವ
ದುಃಖ ತುಂಬ್ಯಾವ ಮನಶ್ಯಾದ ಮ್ಯಾಲ
ಎಂದು ಶುರುವಾಗುವ ಈ ಹಾಡಿನಲ್ಲಿ ಧರ್ಮರಾಯ ಕಾಡಿಗೆ ಹೋದದ್ದು, ರಾಮ ವನವಾಸಕ್ಕೆ ಹೋದದ್ದೆಲ್ಲ ಪ್ರಸ್ತಾಪವಾಗುತ್ತದೆ. ಅವರ ಗತಿಯೇ ಹೀಗಾದ ಮೇಲೆ ನಮ್ಮದೇನು ಎಂಬ ಅರಿವಿನಲ್ಲಿ ನಾವು ಬದುಕನ್ನು ಒಪ್ಪಿಕೊಳ್ಳುತ್ತಾ, ಸಹಿಸಿಕೊಳ್ಳುತ್ತಾ ಹೋಗುತ್ತೇವಾ? ಅದು ಕೂಡ ಒಂದು ರೀತಿಯಲ್ಲಿ ನಮಗೆ ನಂಬಿಕೆಯನ್ನು ಕೊಡುವಂಥ ಶಕ್ತಿಯಾ? ಅದರಾಚೆಗೂ ನಮ್ಮನ್ನು ಸಂತೋಷಪಡಿಸುವಂಥದ್ದು ಮತ್ತೇನಾದ್ರೂ ಇದೆಯಾ?
ಸಾಹಿತ್ಯವನ್ನು ಪ್ರಜ್ಞಾಪೂರ್ವಕವಾಗಿ ಓದುವವರ ಮಾತು ಬಿಟ್ಟುಬಿಡೋಣ. ಅದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾ, ಅದನ್ನು ಅರಿವಿಲ್ಲದೆಯೇ ತಮ್ಮ ಹಾಡಾಗಿ ಮಾಡಿಕೊಂಡವರು ಎಲ್ಲೆಂದರಲ್ಲಿ ಎದುರಾಗುತ್ತಾರೆ. ಲಂಕೇಶರ ಕಾದಂಬರಿಯಲ್ಲಿ ಸಾವಂತ್ರಿಯ ಅವ್ವ ಪಾಂಡವರ ಥರ ಹಾಳಾಗಿ ಹೋಗ್ತೀರಿ’ ಅಂತ ಬೈಯುವ ಪ್ರಸಂಗ ಬರುತ್ತದೆ. ಅದು ಆಕೆ ಅರ್ಥ ಮಾಡಿಕೊಂಡ ಮಹಾಭಾರತ. ಹೀಗೆ ಏಕಕಾಲಕ್ಕೆ ಆಧ್ಯಾತ್ಮವನ್ನೂ ಕಾವ್ಯವನ್ನೂ ನೀಡುತ್ತಾ ಬಂದಿರುವ ಉದಾಹರಣೆ ನಮಗೆ ಸಿಗುವುದು ಬಹುಶಃ ಭಾರತೀಯ ಸಾಹಿತ್ಯದಲ್ಲಿ ಮಾತ್ರವೇ ಏನೋ? ಮಹಾಭಾರತ ಮತ್ತು ರಾಮಾಯಣದ ಪಾತ್ರಗಳಷ್ಟೇ ಅಲ್ಲ, ಉಪನಿಷತ್ತಿನ ಕತೆಗಳಲ್ಲಿ ಬರುವ ನಚಿಕೇತನಂಥವರೂ ನಮ್ಮೆಲ್ಲರಿಗೂ ಗೊತ್ತು. ಅದಕ್ಕೆ ಕಾರಣ ಕಲೆ, ನಾಟಕ, ಯಕ್ಷಗಾನ, ಗೀತೆ.
ದೇವರನ್ನು ಸ್ತುತಿಸುವ ಸ್ತೋತ್ರ ಮತ್ತು ಭಜನೆಗಳು ಕೂಡ ಕಾವ್ಯವಾಗಿಯೇ ನಮ್ಮನ್ನು ತಲುಪುತ್ತಾ ಹೋಯಿತು ಅನ್ನುವುದನ್ನೂ ನಾವು ಮರೆಯುವಂತಿಲ್ಲ. ಶೃಂಗಾರವಾಗಿಹುದು ಶ್ರೀಹರಿಯ ಮಂಚ ಎಂಬ ಪುರಂದರದಾಸರ ಭಜನಾಪದ ಯಾವ ಕವಿಗೂ ಕಡಿಮೆಯಿಲ್ಲದಂತೆ ರೂಪಕಗಳ ಮೂಲಕ ಹರಿಯ ಮಂಚವನ್ನು ವಿವರಿಸುತ್ತಾ ಹೋಗುತ್ತದೆ. ಏಕಕಾಲಕ್ಕೆ ಭಕ್ತಿ ಮತ್ತು ಕಾವ್ಯರಸ- ಎರಡರ ಅನುಭವವನ್ನೂ ಕೊಡುತ್ತವೆ.
ಇದು ಅಕ್ಷರ ಬಲ್ಲವರ ಮಾತಾಯಿತು. ಕಾವ್ಯಾಸ್ವಾದನೆಯಿಂದ ದೂರವೇ ಉಳಿದವರಿಗೆ ಇಂಥ ಪ್ರೇರಣೆ ಎಲ್ಲಿಂದ ಸಿಗುತ್ತದೆ. ಗುಡ್ಡಗಾಡುಗಳಲ್ಲಿ ಇದ್ದುಕೊಂಡು ಕವಿತೆ, ಹಾಡು, ಆಧ್ಯಾತ್ಮ ಮತ್ತು ಅಂಥ ಅನುಭವಗಳಿಂದ ದೂರ ಉಳಿದವರು ಹೇಗೆ ಅವನ್ನೆಲ್ಲ ತಮ್ಮದಾಗಿಸಿಕೊಳ್ಳುತ್ತಾರೆ. ತನಗೆ ಅನ್ನಿಸಿದ್ದನ್ನು ಹೇಳಿಕೊಳ್ಳಬೇಕು ಅನ್ನುವ ತುರ್ತು ಹುಟ್ಟುವುದು ಅಕ್ಷರಾಭ್ಯಾಸದ ಜೊತೆಗೇನಾ? ಹರಪ್ಪ ಮೊಹೆಂಜೋದಾರೋಗಳಲ್ಲಿ ಗೋಡೆಯ ಮೇಲೆ ಕೆತ್ತಿಟ್ಟ ಚಿತ್ರಗಳು ಹಾಗಿದ್ದರೆ ಏನು?
ಸುಮ್ಮನೆ ಯೋಚಿಸಿ ನೋಡಿ: ಏಕಾಂತದಲ್ಲಷ್ಟೇ ಸಾಧ್ಯವಾಗುವ ಕ್ರಿಯೆ ಬರಹ. ಒಂಟಿಯಾಗಿ ಕುಳಿತು ಬರೆದದ್ದನ್ನು ಮತ್ತೊಬ್ಬರು ಒಂಟಿಯಾಗಿದ್ದಾಗ ಓದಿಕೊಳ್ಳುತ್ತಾರೆ. ಹೀಗೆ ನಮ್ಮನ್ನು ಏಕಾಂಗಿಯಾಗಿ ಮಾಡಿಯೂ ಎಲ್ಲರ ಜೊತೆ ಬೆರೆಸುವ ಶಕ್ತಿ ಇರುವುದು ಬರಹಕ್ಕೆ ಮಾತ್ರ.
ಈ ಪವಾಡವನ್ನು ನೆನೆಯುತ್ತಾ ಕುಳಿತಾಗ ಹೊಳೆದದ್ದು ಈ ಪುಟ್ಟ ಪ್ರಸಂಗ:
ಇನ್ನಷ್ಟು
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು