ನೀನೇ ಬರೀ ನೀನೇ…

IMG_38861

ಗುಂಗು ಹಿಡಿಸುವ ಮಧುರಾನುಭವ

-ಸೂರ್ಯಕಿರಣ್ ಜೋಯಿಸ್

ಅಂತರಾಳದ ಮಾತು

ಇತ್ತೀಚೆಗೆ ಬಿಡುಗಡೆಯಾದ ಸೋನು ನಿಗಮ್ ಹಾಡಿರುವ ಕನ್ನಡದ ಪ್ರಪ್ರಥಮ ಗೀತಗುಚ್ಛ (Music album) “ನೀನೇ ಬರೀ ನೀನೇ” – ಇದರಲ್ಲಿನ ಎಲ್ಲ ಹಾಡುಗಳೂ ಜಯಂತ್ ಕಾಯ್ಕಿಣಿಯವರ ಕಾವ್ಯಕುಂಚದಲ್ಲಿ ಮೂಡಿಬಂದಿರುವ ವರ್ಣಚಿತ್ರಗಳಂತಿವೆ. ಈ ಹಾಡುಗಳ ಸಾಲುಗಳು ಹಿಡಿಸುವ ಗುಂಗು ಮಧುರಾನುಭವಕ್ಕೆ ತಿರುಗುವುದು ಮನೋಮೂರ್ತಿಯವರ ಸಂಗೀತದಿಂದ. ಮೇಲುನೋಟಕ್ಕೆ ಪ್ರೇಮಗೀತೆಗಳೆನಿಸುವ ಈ ಹಾಡುಗಳು, ಕೇಳುತ್ತಾಹೋದಂತೆ ಘಜ಼ಲ್ ಗಳಲ್ಲಿರುವ ಭಾವತೀವ್ರತೆ, ಸುಗಮ ಸಂಗೀತದಲ್ಲಿ ಸಿಗುವ ಸರಳತೆ, ಕವಿತೆಗಳಲ್ಲಿನ ಮುಗ್ಧತೆ ಈ ಎಲ್ಲವನ್ನು ಒಟ್ಟಿಗೇ ನೀಡುತ್ತವೆ. ಎಲ್ಲ ಹಾಡುಗಳಿಗೂ ಸೋನು ನಿಗಮ್ ಏಕಮೇವ ಗಾಯಕ.

Neene-Bari-Neene (1)ತನ್ನ ಪ್ರೇಯಸಿಯ ನೆನಪಿನಲ್ಲಿ ಹಾಡುವ, ಅಲೆದಾಡುವ ಯುವಕನೊಬ್ಬನ ಆರ್ತದನಿ ಈ ಗೀತೆಗಳಲ್ಲಿ ಕೇಳಿಬರುತ್ತದೆ. ಈ ಹಾಡುಗಳಿಗೆ ಯಾವುದೇ ನಾಯಕ ನಟ/ನಟಿಯ ಹಂಗಿಲ್ಲ, ಚಿತ್ರಕಥೆಯ ಕಟ್ಟುಪಾಡಿಲ್ಲ. ಹಾಡುಗಳಲ್ಲಿ ಬರುವ ಪ್ರೇಮಿಗಳು ಕಲ್ಪನೆಯಲ್ಲೆ ಕೇಳುಗರನ್ನು ಕಾಡುತ್ತಾರೆ. ಸರಳ ಸುಂದರ ಮನೋಲಹರಿಯೇ ಮಂಜುಳ ಗಾನವಾಗಿ ಹೊರಹೊಮ್ಮಿದಂತಿದೆ. ಕಾಯ್ಕಿಣಿಯವರ ಈ ಹಿಂದಿನ ಚಿತ್ರಗೀತೆಗಳಿಗೆ ಹೋಲಿಸಿದರೆ ಇವು ಸಿನೆಮಾ ಪರಿಭಾಷೆಯ ಚೌಕಟ್ಟಿನಿಂದ ಹೊರಸರಿದು ಕವಿತೆಗಳ ಛಾಯೆಯನ್ನು ಇನ್ನಷ್ಟು ಢಾಳಾಗಿ ಪಡೆದಿವೆಯೆನಿಸುತ್ತದೆ. ಪ್ರೀತಿ-ಪ್ರೇಮದ ವಿಷಯವಸ್ತುಗಳುಳ್ಳ ಕವಿತೆಗಳಲ್ಲಿ ಸಾಮನ್ಯವಾಗಿ ಕಾಣಸಿಗುವ ಸಿದ್ಧ ಪ್ರತಿಮೆಗಳನ್ನು ಮೀರಿ ಬಲು ವಿಭಿನ್ನವಾದ ಚಿತ್ರಣಗಳನ್ನು ತುಂಬಿಸಿ ಮನಮುಟ್ಟುವ ೯ ಗೀತೆಗಳನ್ನು ಕಾಯ್ಕಿಣಿಯವರು ರಚಿಸಿದ್ದಾರೆ. ಅದು ಅವರ ಎಂದಿನ ವೈಖರಿ.

“ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ” ಎನ್ನುವ ಗೀತೆಯಲ್ಲಿನ ಸಾಹಿತ್ಯ ಎಲ್ಲೋ ಇರುವ ತನ್ನ ನಲ್ಲೆಯನ್ನು ಹುಡುಕುತ್ತಿರುವ ಪ್ರೇಮಿಯ ಎದೆಯಾಳದ ಕರೆ. ಅವಳ ಜೊತೆಗಿನ ಒಡನಾಟದ ಹಸಿ ನೆನಪುಗಳು ಬಗೆ ಬಗೆ ರೂಪಗಳಲ್ಲಿ ಸುಳಿದಾಡುತ್ತವೆ. ಕದ್ದು ತಿಂದ ಬೋರೆಹಣ್ಣಿನ ಸವಿ, ಲಂಗದಲ್ಲಿ ಹೆಕ್ಕಿ ತಂದ ಪಾರಿಜಾತ, ಜೊತೆಯಲ್ಲಿ ಕಂಡ ತೇರು, ಜಾತ್ರೆ, ಅವಳಿಗಾಗಿ ತಂದು ಜೇಬಿನಲ್ಲೇ ಉಳಿದುಹೋದ ಹೂವು ಹೀಗೆ ಪ್ರತಿಯೊಂದು ಸಾಲಿನಲ್ಲು ನೆನಪಿನ ಚಿತ್ರವೊಂದು ಅನಾವರಣಗೊಳುತ್ತದೆ. “ನೀನೇ ಬರೀ ನೀನೇ ಈ ಹಾಡಲ್ಲಿ ಪದವೆಲ್ಲ ನೀನೇ” ಈ ಗೀತಗುಚ್ಛದ ಶೀರ್ಷಿಕೆ ಗೀತೆಯಲ್ಲಿ ತನ್ನ ಬದುಕಿನ ಸರ್ವಸ್ವವು ಅವಳೆ ಎಂದು ಬಿನ್ನಹಿಸಿಕೊಳ್ಳುವ ಪರಿ ಅತ್ಯಂತ ಆರ್ತವಾಗಿ ಮೂಡಿಬಂದಿದೆ. “ನಿನಗೆಂದೆ ಈ ಸಾಲು ಅಂಗಡಿಯಲಿ/ಉಡುಗೊರೆಯ ಏನಿಂದು ನಾ ಆಯಲಿ/ನಾ ಬಡವ ಈ ನನ್ನ ಮನಸಲ್ಲಿರು/ಸಡಗರದ ಸಿರಿ ಹೇಗೆ ನಾ ನೀಡಲಿ?” ಮನದಾಳದಲ್ಲಿ ಉಂಟಾಗುವ ಸಡಗರಕ್ಕಿಂತ ಮಿಗಿಲಾದ ಸಿರಿ ಇನ್ನೆಲ್ಲಿ ಸಿಗುವುದೆಂಬ ಪ್ರಶ್ನೆಯನ್ನು ಮೆಲ್ಲಗೆ ಎಬ್ಬಿಸುವ ಈ ಸಾಲು ಕಾಯ್ಕಿಣಿಯವರ ಕಾವ್ಯ ಕೌಶಲಕ್ಕೆ ಹಿಡಿದ ಕನ್ನಡಿ. “ನಿನ್ನ ಹಿಂದೆಯೆ ಹಿಂದೆಯೆ ಬರುವೆ ನಾನು” – ಈ ಹಾಡಿನಲ್ಲಿ ನಿಷ್ಕಾರಣ ಪ್ರೀತಿಯನ್ನರಸುತ್ತ ತನ್ನ ಪ್ರೇಯಸಿಯ ಹಿಂದೆ ಹಿಂದೆ ಸಾಗಬಯಸುವ ತರುಣ ಅವಳು ಬಾರದೆ ಇದ್ದುದರ ಬೇಸರಿಕೆಯಲ್ಲಿ ಚಂದ್ರನನ್ನೂ ಭಾಗಿಯಾಗಿಸುತ್ತಾನೆ. ಒಬ್ಬ ಪ್ರೇಮಿಗೆ ತನ್ನ ಮನದನ್ನೆ ತನಗೆ ಅಷ್ಟಾಗಿ ಏಕೆ ಬೇಕು ಎನಿಸುತ್ತಾಳೆ ಎನ್ನುವ ಪ್ರಶ್ನೆಗೆ ಅವನು ನೀಡುವ ಕಾರಣಗಳು ಅವನ ಮನದಾಳದ ಬಯಕೆಗಳೊಂದಿಗೆ ಬೆರೆತು ನಿಶ್ಕಲ್ಮಶ ಪ್ರೇಮವಾಗಿ “ಬೇಕೇ ಬೇಕು ನೀನೇ ಬೇಕು” ಎಂಬ ಹಾಡಿನಲ್ಲಿ ಅದ್ಭುತವಾಗಿ ವ್ಯಕ್ತವಾಗಿದೆ – ಚಂದ್ರನನ್ನು ಬಲೆಯಲ್ಲಿ ಹಿಡಿದು ಹಾಕಿಕೊಳ್ಳಲು, ಮಾಯದ ಗಾಯವ

ಮಾಯವಾಗಿಸಲು, ಹೃದಯದ ಕಡಲಲ್ಲಿ ಈಜಲು ಬರದೆ ಮುಳುಗಿರಲು ಜೀವವ ಉಳಿಸಲು ಬದುಕಿನ ಕನಸನ್ನು ಕಟ್ಟಲು ಅವಳೇ ಬೇಕು. ಪ್ರೇಮಿಗಳ ಭೇಟಿಯ ಕ್ಷಣಭಂಗುರವು “ಈಗ ಬಂದಿರುವೆ/ಆಗಲೇ ನೀ ಹೊಗಲೇಬೇಕೆ” ಎನ್ನುವ ಗೀತೆಯ ಕಾವ್ಯವಸ್ತು. ಈ ಗೀತೆ, ಪ್ರೇಮಿಗಳು ಕನಸಿನ ನೌಕೆಯಲ್ಲಿ ತೇಲುತ್ತಾ ಘಂಟೆಗಟ್ಟಲೆ ಮಾತುಗಳನ್ನಾಡಿದರೂ ಸಮಯ ಜಾರಿದ್ದೇ ತಿಳಿಯದೆ ಅಗಲುವ ಹೊತ್ತಿನ ಅವರ ಚಡಪಡಿಕೆಯನ್ನು ಬಿಂಬಿಸುತ್ತದೆ. “ಇದೆಯೆ ನಿನಗೆ ಸಮಯ” – ಜಗದ ನಂಟನ್ನೆಲ್ಲ ಮರೆತು ತನ್ನ ಜೊತೆ ತಿರುಗಾಡಲು, ಹಾಡಲು, ಬರೆದ ಓಲೆ ಓದಲು, ನೆನೆದಾಕ್ಷಣ ಕರೆ ಮಾಡಲು ಇದೆಯೆ ಸಮಯ? ಜಗಳವ ಆಡಲು, ರಾಜಿಯಾಗಲು ತನಗಾಗಿ ಒಂದಿಷ್ಟು ಹೊತ್ತು ಮೀಸಲಿಡಲು ಆಗುವುದೆ? ಎಂದು ಕೋರಿಕೊಳ್ಳುತ್ತ ಹಾಡುವ ಹಾಡಿದು. ಮಳೆಯಲ್ಲಿ ಜೊತೆಯಲ್ಲಿ ಕೈ ಹಿಡಿದು ನಡೆದ ಅನುಭೂತಿಯನ್ನು ಮೆಲುಕು ಹಾಕುವ “ಇನ್ನೂ ಅನಿಸುತಿದೆ” ಎನ್ನುವ ಗೀತೆಯ ಸಾಹಿತ್ಯ ಮತ್ತೊಂದು ಸುಂದರ ಕವಿತೆ.

2008061452080801ಸವಕಲಾಗಿದ್ದ ಕನ್ನಡ ಚಿತ್ರಗೀತೆಗಳ ಸಾಹಿತ್ಯಕ್ಕೆ ಹೊಳಪು ತಂದು ಹೊಸ ಮೌಲ್ಯ ನೀಡಿದ ಹೆಗ್ಗಳಿಕೆ ಜಯಂತ್ ಕಾಯ್ಕಿಣಿಯವರದು ಎಂದರೆ ಬಹುಶಃ ತಪ್ಪಾಗಲಾರದು. ಸರಿ ಸುಮಾರು ೪ ದಶಕಗಳಿಂದ ಕನ್ನಡ ಕವನ, ಕಥೆ, ಲಲಿತ ಪ್ರಬಂಧ, ನಾಟಕ ಹೀಗೆ ನಾನಾ ಪ್ರಕಾರಗಳಲ್ಲಿ ಸಾಹಿತ್ಯಕೃಷಿ ಮಾಡಿಕೊಂಡು ಬಂದಿರುವ ಇವರ ಜನಪ್ರಿಯತೆ ಚಿತ್ರಗೀತೆಗಳ ಮುಖೇನ ಕಳೆದ ೨-೩ ವರ್ಷಗಳಲ್ಲಿ ಅತ್ಯುನ್ನತಿಯನ್ನು ಪಡೆದಿದೆ. ಬದುಕಿನ ಸೂಕ್ಷ್ಮ ವಿವರಗಳನ್ನು, ಸಣ್ಣ ಸಣ್ಣ ಘಟನೆಗಳಲ್ಲಿನ ಮರ್ಮಗಳನ್ನು ತಮ್ಮ ಕಾವ್ಯಾತ್ಮಕ ಒಳನೋಟದಲ್ಲಿ ಗ್ರಹಿಸಿ ಚೆಂದದ ಪದಗಳಲ್ಲಿ ಹಿಡಿದಿಡುವ ಇವರ ಶೈಲಿ ಅತ್ಯಂತ ಸುಂದರ ಹಾಗೂ ಮನೋಹರ. ೧೯ನೇ ವಯಸ್ಸಿಗೇ ಚೊಚ್ಚಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿರುವ ಇವರು, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸೂಕ್ಷ್ಮ ಸಂವೇದನೆಯುಳ್ಳ ಚಿತ್ರಸಾಹಿತಿಗಳ ಕಾಲ ಆರ್. ಎನ್. ಜಯಗೋಪಾಲ್, ಚಿ. ಉದಯಶಂಕರ್, ಹಂಸಲೇಖ ನಂತರ ಮುಗಿದೇ ಹೋಯಿತು ಎಂಬ ಮಾತನ್ನು ಸುಳ್ಳಾಗಿಸಿದೆ. ಸರಳ ಪದಗಳನ್ನು ಪೋಣಿಸಿ, ಮಾಯೆಯ ಗಂಧವನ್ನು ಲೇಪಿಸಿ, ಕಾವ್ಯಮಾಲೆಯನ್ನು ಕಟ್ಟುವ ಕಲೆ ಕಾಯ್ಕಿಣಿಯವರಿಗೆ ಮೊದಲಿನಿಂದಲೂ ಒಲಿದುಬಂದಿದೆ. ಬದುಕಿನ ಅಸಂಗತಗಳನ್ನು ಇವರು ಅದ್ಭುತವಾಗಿ ಚಿತ್ರಿಸುವುದು ಇವರ ಕಥೆಗಳಲ್ಲಿ. ಕನ್ನಡ ಸಾಹಿತ್ಯಲೋಕದ ಇಂದಿನ ಅಗ್ರಗಣ್ಯ ಕಥೆಗಾರರಲ್ಲಿ ಇವರೂ ಒಬ್ಬರು ಎನ್ನುವ ವಿಷಯ ಸಾಕಷ್ಟು ಜನರಿಗೆ ಗೊತ್ತಿರಲಾರದು.

ಕಾಯ್ಕಿಣಿಯವರ ಪದಲಾಲಿತ್ಯ ಮತ್ತು ಭಾವಸೃಷ್ಟಿ, ಮನೋಮೂರ್ತಿಯವರ ರಾಗಸಂಯೋಜನೆ ಮತ್ತು ಸೋನು ನಿಗಮ್ ರ ಭಾವಪೂರ್ಣ ಸುಶ್ರಾವ್ಯ ಗಾಯನ ಈ ಗೀತಸಂಚಯದ ಮೌಲ್ಯವೇರಲು ಕಾರಣ. ಕನ್ನಡದ ಮಟ್ಟಿಗಂತೂ ಇದು ಹೊಸ ಪ್ರಯತ್ನ. ಈ ತ್ರಿಮೂರ್ತಿಗಳ ಸಮಾಗಮದಲ್ಲಿ ಇನ್ನಷ್ಟು ವೈವಿಧ್ಯದ ಸಾಹಿತ್ಯ-ಸಂಗೀತ ಕೂಡಿಬಂದು ಅಮೃತದ ಹೊಳೆಯು ಹರಿಯಲಿ.

ಆಲ್ಬಂ ನ ಎಲ್ಲಾ ಹಾಡು ಕೇಳಲು ಭೇಟಿ ಕೊಡಿ- ಕನ್ನಡ ಆಡಿಯೋ

‘ನಟನ’ ದಸರಾ ಸ್ಪೆಷಲ್

Dasara_ Maasa (1)

ಕ್ರಿಯಾ ಪ್ರಕಾಶನದ ಪುಸ್ತಕಗಳು

Book Release Invitation (1)

ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು…

HSV9ನಮ್ಮ ಪ್ರೀತಿಯ ಕವಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬ್ಲಾಗ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಸುಶ್ರುತ ದೊಡ್ಡೇರಿ ಹಾಗೂ ಶ್ರೀನಿಧಿ ಡಿ ಎಸ್ ಪ್ರಭಾವ ಇದು.

ಎಷ್ಟೋ ಬರಹಗಾರರು ಕಾಲದ ಮಹಿಮೆಗೆ ಹೆದರಿ ಅಥವಾ ಮಣಿಯದೆ ದೂರವೇ ನಿಂತಿರುವಾಗ ಎಚ್ ಎಸ್ ವಿ ಹುಡುಗರಂತೆ ಲಗುಬಗೆಯಿಂದ ಎಲ್ಲಾ ಹೊಸತಿಗೂ ಒಡ್ಡಿಕೊಳ್ಳುತ್ತಾರೆ. ಮನಸ್ಸನ್ನು ಸದಾ ಯಂಗ್ ಆಗಿ ಇಟ್ಟುಕೊಂಡಿರುವ ಎಚ್ ಎಸ್ ವಿ ಬ್ಲಾಗ್ ಲೋಕಕ್ಕೂ ನಡೆದು ಬಂದದ್ದು ಆಶ್ಚರ್ಯವೇನಲ್ಲ.

ಕಾಮರೂಪಿ ಅಂತಹ ಬರಹಗಾರರಿಂದ ಸಮೃದ್ಧವಾಗಿರುವ ಬ್ಲಾಗ್ ಲೋಕ ಎಚ್ ಎಸ್ ವಿ ಅವರಿಂದ ಇನ್ನಷ್ಟು ಉತ್ಸಾಹ ಪಡೆದಿದೆ. ‘ಪರಸ್ಪರ’ಕ್ಕೆ ಭೇಟಿ ಕೊಡಿ.


ಅಡಿಗರ ನೆನಪು..

-ಎಚ್ ಎಸ್ ವೆಂಕಟೇಶ ಮೂರ್ತಿ

ಅಡಿಗರು ಜಯನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ದರು. ನಾನು ಆಗಾಗ ಅವರನ್ನು ಕಾಣಲು ಆ ಮನೆಗೆ ಹೋಗುತ್ತಿದ್ದೆ. ಆಗ ಅವರ ಮನೆಯಲ್ಲಿ ತುಂಬ ಬೆಕ್ಕುಗಳು ಇದ್ದವು. ಅಡಿಗರು ಅವಕ್ಕೆಲ್ಲಾ ನಾಮಕರಣ ಮಾಡಿದ್ದರು. ನಾನು ಅವರೊಂದಿಗೆ ಮಾತಾಡಲು ಕುಳಿತಾಗ ಅವರಿಗೆ ಪ್ರಿಯವಾದ ಬೆಕ್ಕೊಂದು ಕೋಣೆಗೆ ನುಸುಳಿ, ಮಿಯಾವ್ ಮಿಯಾವ್ ಎಂದು ಸ್ವಲ್ಪ ಕಾಲ, ಕಾಲ ಬಳಿ ಸುತ್ತಾಡಿ ಆಮೇಲೆ ಚಂಗನೆ ಹಾರಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಅಡಿಗರು ಬೆಕ್ಕನ್ನು ಮುದ್ದು ಮಾಡುತ್ತ ಅದರ ಸಾಹಸಗಳನ್ನು ಜಾಣ್ಮೆಯನ್ನು ಎಷ್ಟೋ ಹೊತ್ತು ವಿವರಿಸುತ್ತಾ, ಆ ಮಾತಿನಲ್ಲೇ ತನ್ಮಯರಾಗುತ್ತಿದ್ದರು. ರಾತ್ರಿ ಒಂದು ಕಿಟಕಿಯ ಬಾಗಿಲು ಈ ಬೆಕ್ಕಿಗಾಗಿ ತೆರೆದಿಡುತ್ತೇವೆ. ಇವನು ರಾತ್ರಿ ಅಲೆದಾಡಿಕೊಂಡು ಯಾವ ಮಾಯದಲ್ಲೋ ಮತ್ತೆ ಮನೆಯೊಳಗೆ ಬಂದು ಮಲಗಿರುತ್ತಾನೆ. ಮನೆಯೊಳಗೆ ಕೊಳೆ ಮಾಡುವುದಿಲ್ಲ. ಬಹಳ ನೀಟಾದ ಶೋಕೀವಾಲ…ಇತ್ಯಾದಿ ಹೇಳುತ್ತಾ ಇದ್ದರು. ಅವರ ಮಾತಿನಲ್ಲಿ ಬೆಕ್ಕು ಬೆಕ್ಕಾಗಿರಲಿಲ್ಲ. ಮನೆಯ ಒಬ್ಬ ಸದಸ್ಯನಾಗಿತ್ತು. ಹಾಗೇ ಅಡಿಗರಿಗೆ ಅವರ ನಾಯಿಯ ಬಗ್ಗೆಯೂ ಅಪಾರ ಪ್ರೇಮ. ಪುಟ್ಟ ಎಂದು ಆ ನಾಯಿಯ ಹೆಸರು. ಅವನ ಚೇಷ್ಟೆಯನ್ನು ಖುಷಿಯಾಗಿ ವಿವರಿಸುತ್ತಿದ್ದರು. ಅವನಿಗೆ ಚಿಂದಿ ಉಟ್ಟ ಯಾರಾದರು ಕಂಡರೆ ಆಗುವುದಿಲ್ಲ. ಅವರು ರಸ್ತೆ ದಾಟುವವರೆಗೂ ಬಗುಳುತ್ತಾ ಇರುತ್ತಾನೆ. ನೀಟಾಗಿ ಉಡುಪು ಹಾಕಿಕೊಂಡವರು ಬಂದರೆ ಬಾಲ ಕುಣಿಸುತ್ತಾ ಹರ್ಷ ವ್ಯಕ್ತಪಡಿಸುತ್ತಾನೆ-ಹೀಗೆಲ್ಲಾ ತಮ್ಮ ಪ್ರೀತಿಯ ನಾಯಿಯ ಬಗ್ಗೆ ವಿವರ ಕೊಡುತ್ತಾ ಎಷ್ಟೋ ಹೊತ್ತು ಮಾತಾಡುತ್ತಿದ್ದರು.

******

Prathima loka

ಅಡಿಗರು ಜಯನಗರದ ಮನೆಯಿಂದ ಬನಶಂಕರಿಗೆ ತಮ್ಮ ಸ್ವಂತ ಮನೆಗೆ ಬಂದಮೇಲೆ ಒಮ್ಮೆ ಅವರ ಮನೆಗೆ ಹೋಗಿದ್ದಾಗ ಬಹಳ ಹೊತ್ತು ಅವರೊಂದಿಗೆ ಮಾತಾಡುತ್ತಾ ಕುಳಿತಿದ್ದರೂ ಅವರ ಪ್ರೀತಿಯ ಬೆಕ್ಕು ಕಾಣಿಸಲೇ ಇಲ್ಲ. ಸಾರ್…ನಿಮ್ಮ ಬೆಕ್ಕು ಕಾಣ್ತಾ ಇಲ್ಲವಲ್ಲಾ..? ಎಂದೆ. ಅಡಿಗರ ಮುಖ ಸ್ವಲ್ಪ ಸಪ್ಪಗಾಯಿತು. ಆ ಮನೆಯಿಂದ ಬರುವಾಗ ಅವನು ಎಲ್ಲೋ ಹೊರಗೆ ಹೋಗಿದ್ದ. ಎಷ್ಟು ಕಾದರೂ ಬರಲಿಲ್ಲ. ಇಲ್ಲಿಗೆ ಬಂದ ಮೇಲೆ ಅವನನ್ನು ಹುಡುಕಿಕೊಂಡು ಎಷ್ಟೋ ಬಾರಿ ಆ ಮನೆಯ ಹತ್ತಿರ ಹೋಗಿದ್ದೇವೆ. ಕೆಲವೊಮ್ಮೆ ಕಾಣುತ್ತಾನೆ. ಆದರೆ ಆ ಮನೆಯನ್ನು ಬಿಟ್ಟು ಬರಲು ಅವನಿಗೆ ಇಷ್ಟವಿಲ್ಲ. ಬೆಕ್ಕುಗಳಿಗೆ ಸಾಕಿದ ವ್ಯಕ್ತಿಗಳಿಗಿಂತ , ತಾನು ಬೆಳೆದ ಸ್ಥಳ ಮುಖ್ಯ ಎನ್ನುತ್ತಾರೆ. ನಮ್ಮನ್ನು ಬಿಟ್ಟಿರಲು ಅವನಿಗೂ ತುಂಬ ದುಃಖವಾಗಿರಬೇಕು. ಆದರೆ ಆ ಮನೆಯನ್ನು ಬಿಟ್ಟು ಬರುವುದು ಇನ್ನೂ ಹೆಚ್ಚುದುಃಖಕರ ಅನ್ನಿಸಿರಬೇಕು ಅವನಿಗೆ…!ಎಂದು ಸ್ವಲ್ಪ ಕಾಲ ಆ ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು.

*****

ಅಡಿಗರ ಪ್ರೀತಿಪಾತ್ರ ನಾಯಿಯೇನೋ ಅವರನ್ನು ಹೊಸಮನೆಗೆ ಹಿಂಬಾಲಿಸಿತ್ತು. ನಾನು ಯಾವಾಗ ಹೋದರೂ ಅದರ ಬಗುಳು, ಮತ್ತು ಸಂತೋಷಾಧಿಕ್ಯದಿಂದಲೋ, ಬೇಸರದಿಂದಲೋ ಗಿರಿಗಿಟ್ಟಲೆಸುತ್ತುವ ಸ್ವಾಗತ ನನಗೆ ದೊರಕುತ್ತಾ ಇತ್ತು. ಮನೆಯನ್ನು ಪ್ರವೇಶಿಸಿದ ಕೂಡಲೇ ಒಂದು ವರಾಂಡ. ಅದಕ್ಕೆ ಹೊಂದಿಕೊಂಡಂತೆ ಅಡಿಗರ ಬರೆಯುವ ಕೋಣೆ ಇತ್ತು. ಅವರ ಟೇಬಲ್ಲಿನ ಮೇಲೆ ಕಿಟ್ಟೆಲ್ಲಿಂದ ಹಿಡಿದು ಎಲ್ಲ ಡಿಕ್ಷ್ಣರಿಗಳೂ ಇರುತ್ತಿದ್ದವು. ಮಾತಾಡುವಾಗ ಯಾವುದೇ ಶಬ್ದದ ಬಗ್ಗೆ ಅನುಮಾನ ಉಂಟಾದರೂ ತಕ್ಷಣ ಡಿಕ್ಷ್ಣರಿ ತೆರೆದು ಆ ಪದವನ್ನು ಹುಡುಕಿ ಅನುಮಾನ ಬಗೆಹರಿಸಿಕೊಳ್ಳುವವರೆಗೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಆಗ ದೂರದರ್ಶನದಲ್ಲಿ ಇದೀಗ ದೆಹಲಿಗೆ ಎಂಬ ಪ್ರಕಟಣೆ ಪದೇ ಪದೇ ಬರುತ್ತಾ ಇತ್ತು. ಅಡಿಗರು ಆ ಪ್ರಕಟಣೆ ಬಂದಾಗ -ಇದೇನಯ್ಯಾ…? ಇದೀಗ ದೆಹಲಿಗೆ…! ಇದೀಗ ಎನ್ನುವುದು ತಪ್ಪು ಪ್ರಯೋಗ..ಈ ಬಗ್ಗೆ ದೂರದರ್ಶನದವರಿಗೆ ಬರೆದೆ ಕೂಡಾ. ಅವರೇನೂ ತಿದ್ದಿಕೊಳ್ಳಲಿಲ್ಲ…ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು