ಇದನ್ನು ಹವ್ಯಾಸಿಗಳು ಓದಿ ಕೃದ್ಧರಾಗಬಹುದು

ಇದು ಎಪ್ಪತ್ತರ ದಶಕವಲ್ಲ

-ನಟರಾಜಹೊನ್ನವಳ್ಳಿ

ಹೆಗ್ಗೋಡಿನ ನೀನಾಸಮ್ ಹಾಗೂ ಮೈಸೂರಿನ ರಂಗಾಯಣ, ನಮ್ಮ ಕಾಲದಲ್ಲೇ ಹುಟ್ಟಿ ಬೆಳೆದ ಸಾಂಸ್ಕೃತಿಕ ಅಚ್ಚರಿಗಳು. ಅವು ಹೊಸ ರಂಗವ್ಯಾಕರಣವನ್ನು ತನ್ನೊಳಗೆ ಸೃಷ್ಠಿಸಿಕೊಂಡಿರುವುದಷ್ಟೇ ಅಲ್ಲ, ರಂಗಭೂಮಿಯ ಹೊಸಹೊಸ ವೇಷಗಳಿಗೆ, ಪುಟ್ಟಪುಟ್ಟ ರೆಪರ್ಟರಿಗಳ ಹುಟ್ಟಿಗೆ ಕಾರಣವಾಗಿದೆ. ಸಾಹಿತ್ಯದ ಮೂಲಕ ನೋಡುತ್ತಿದ್ದ ಕ್ರಮಗಳ ಜೊತೆಗೇ ರಂಗಭೂಮಿಯ ಮೂಲಕ- ಅದರಲ್ಲೂ ನಟರ ಮೂಲಕ- ನೋಡುವ ಕ್ರಮವನ್ನು ಉದ್ಘಾಟಿಸಿ ಕೊಟ್ಟಿರುವುದೂ ಕೂಡ ನಮ್ಮ ಕಾಲದಲ್ಲೇ. ಇದು ನಮ್ಮ ಕಾಲದ ಸಂಕ್ಷಿಪ್ತ ರಂಗ ಇತಿಹಾಸ. ಆದರೆ ಇಂತಹ ಇತಿಹಾಸವಿರುವ ರಂಗಾಯಣಮಾತ್ರ ಹಲವಾರು ಬಾರಿ ಮಹಾಸಂಕಟಗಳಿಗೆ ಸಿಕ್ಕಿ, ಹಲವಾರು ಬಾಯಿಗಳಿಂದ ಅಗಿಸಿಕೊಂಡು ನರಳುತ್ತಲೇ ಇರುತ್ತದೆ. ಅಗಿಯುವ ಬಾಯಿಗಳಿಗೆ ಎಲ್ಲವನ್ನೂ ಅಗಿಯುವ ಚಟ. ಅದೊಂದು ರೋಗ. ಆ ಬಾಯಿಗಳಿಗೆ ವಿಘ್ನಸಂತೋಷದ ಮೋಜು, ಏನನ್ನೂ ಅಗಿದುಬಿಡಬಲ್ಲೆವು ಅನ್ನುವ ಹವ್ಯಾಸಿ ಧಿಮಾಕು.

banner

ಎಪ್ಪತ್ತರ ದಶಕದ ಹವ್ಯಾಸಿರಂಗಭೂಮಿ ತನ್ನ ಉತ್ತಮಾಂಶಗಳನ್ನೆಲ್ಲಾ ತೋರಿಸಿಕೊಟ್ಟಿದೆ. ಸಮುದಾಯದಂಥ ರಂಗಚಳುವಳಿ, ಬಿ. ವಿ. ಕಾರಂತರು, ಪ್ರಸನ್ನ, ಸೀಜೀಕೆಯಂಥ ನಿರ್ದೇಶಕರು, ಸಿ. ಆರ್. ಸಿಂಹ, ಲೋಕನಾಥ್ ಥರದ ಹಲವಾರು ಅತ್ಯುತ್ತಮ ನಟರು, ಹೀಗೆ ಅದರ ಫಲಗಳನ್ನೆಲ್ಲಾ ಪಟ್ಟಿ ಮಾಡುತ್ತಾಹೋಗಬಹುದು. ಜೊತೆಗೆ ಕೆ. ವಿ ಸುಬ್ಬಣ್ಣನವರು ಹೆಗ್ಗೋಡಿನಂಥ ಹಳ್ಳಿಯಲ್ಲಿದ್ದುಕೊಂಡು ಕಟ್ಟಿದ ರಂಗಸಂಸ್ಕೃತಿ ಇವೆಲ್ಲವೂ ಹೊಸ ಆಲೋಚನೆಗಳತ್ತ ಹೆಜ್ಜೆಹಾಕಲು ಧೈರ್ಯಬಂದಿದೆ. ಪ್ರಸ್ತುತ ಈ ಲೇಖನ ಎಪ್ಪತ್ತರದಶಕದ ಶಕ್ತಿಯನ್ನು ಧಾರಣೆಮಾಡಿಕೊಂಡೇ ವರ್ತಮಾನದ ರಂಗಭೂಮಿ ಕುರಿತು ಬರೆಯುವ ಧೈರ್ಯಮಾಡಿದ್ದೇನೆ.

ರಂಗಾಯಣದ ಪರಿಸ್ಥಿತಿ ಪದೇಪದೇ ಮುಂಚೂಣಿಗೆ ಬಂದು ರಂಗಭೂಮಿಯಲ್ಲಿ ಉಂಟಾಗುವ ಕಸಿವಿಸಿಯನ್ನು ಪದೇಪದೇ ಕೇಳಿ, ಅದನ್ನು ಹಿನ್ನಲೆಯಾಗಿಟ್ಟುಕೊಂಡು ಬರೆಯಲಾಗಿದೆ. ಇಲ್ಲಿ ರಂಗಾಯಣ ನೆಪ ಅಷ್ಟೆ.

ನಟರ ಕಥನ:

CartoonLargeಪ್ರಸ್ತುತ ವಿಷಯಕ್ಕೆ ಪ್ರವೇಶಿಸುವುದಾದರೆ, ಮತ್ತೊಮ್ಮೆ ಹೊಸ ನಿರ್ದೇಶಕರ ಆಗಮನದೊಂದಿಗೇ ಮತ್ತೆ ಅಗಿಯುವ ಬಾಯಿಗಳಿಗೆ ಆಹಾರವಾಗಿದೆ ಈ ರಂಗಾಯಣ. ಕಾರಂತರ ಕನಸಿನ ರಂಗಾಯಣ ಎಂದು ಡಂಗೂರ ಹೊಡೆಯುವ ಎಲ್ಲರೂ, ಕಾರಂತರ ಜೊತೆಯೇ ‘ಆಸೆಗಳ ವಯಸ್ಸಿನ’, ‘ಇಡೀ ಜಗತ್ತನ್ನೇ ಮುಷ್ಠಿಯಲ್ಲಿಟ್ಟು ಗೆಲ್ಲಬಲ್ಲೆನೆಂಬ ಹಿಗ್ಗುವ ವಯಸ್ಸಿನ’ ನಟ-ನಟಿಯರ ಗುಂಪೇ ಆ ಮಹಾ ಕಾರಂತ ಕನಸಿನ ಮುಂದೆ ನಿಂತು ಮೈಮಣಿಸಿ, ಕಣ್ಕುಣಿಸಿ, ಎದೆಯ ಕನಸ ಮೈಗೆಬರಿಸಿ ಟೊಂಕಕಟ್ಟಿ ನಿಂತದ್ದು, ಕನಸಿಗೆ ಆಕಾರ ಬರೆದದ್ದು ಕಮ್ಮಿ ಕೆಲಸವೇ? ಸಾರ್ವಜನಿಕ ಪ್ರದರ್ಶನ ಕೊಡುವುದಕ್ಕೆ ಮುಂಚೆ, ಒಂಭತ್ತು ವರ್ಷಗಳಷ್ಟು ದೀರ್ಘಕಾಲ ಅಭ್ಯಾಸ ಮಾಡಿರುವ ಪರಂಪರೆ ಇರುವ ಇವರನ್ನ, ಅವರು ಪಡಕೊಂಡಿರುವ ಜ್ಞಾನವನ್ನ, ನಟರಾಗಿ, ವಿನ್ಯಾಸಕಾರರಾಗಿ, ತಂತಜ್ಞರಾಗಿ ಮತ್ತು ನಾಟಕಕಾರರಾಗಿ ರೂಪುಗೊಂಡ ಪರಿಯನ್ನು ಚಿಲ್ಲರೆಯನ್ನಾಗಿಸುವುದು ಯಾವ ಮಹಾ ಘನಂದಾರಿ ಕೆಲಸಕ್ಕೆ ಎಂದು ಕೇಳುವ ಕಾಲ ನಮ್ಮ ಸಮಸ್ತ ನಟ-ನಟಿಯರ ಮುಂದಿದೆ. ರಂಗಾಯಣದಲ್ಲಿರುವ ಪ್ರತಿಯೊಬ್ಬರಿಗೂ ಕನಸಿದೆ ಎಂಬುದನ್ನ ವ್ಯವಧಾನದಿಂದ ಅರಿಯುವುದನ್ನೇ ಮರೆತಂತಿದೆ. ಅಲ್ಲಿರುವ ಒಬ್ಬಬ್ಬರೂ ಒಂದೊಂದು ವಿಷಯದಲ್ಲಿ ಪರಿಣತರು ಎಂಬುದನ್ನು ತಿಳಿಯಲಾರದ ಮನಸ್ಸುಗಳು ಖಳರ ವೇಷತೊಟ್ಟು ಕಾಡಲಾರಂಭಿಸಿದ್ದಾವೆ. ಅವರು ಎಷ್ಟು ಪರಿಣತರು ಎಂಬುದನ್ನ ರಂಗದಮೇಲೆ ಹಾಡಿಹೊಗಳಿದ ಬಾಯಿಗಳು ಅವರನ್ನು ಎಚ್ಚರದಲ್ಲಿರಿಸುವುದನ್ನು ಬಿಟ್ಟು ಅಪಶೃತಿಯಲ್ಲಿ ಹಾಡತೊಡಗುತ್ತವೆ. ಅವರು ಮಾಡುವ ಪಾತ್ರಗಳ ಮೂಲಕ ಇಡೀ ಮೈಸೂರಿನ ಸಾಮಾಜಿಕರಿಗೆ – ಅಷ್ಟೇ ಏಕೆ ಕರ್ನಾಟಕದ ಸಮಸ್ತ ಸಾಮಾಜಿಕರನ್ನು ನಗಿಸಿದ್ದಾರೆ, ಅಳಿಸಿದ್ದಾರೆ, ಧಿಗ್ಭ್ರಮೆಯಲ್ಲಿ ಪೂರ್ವಗ್ರಹಗಳನ್ನೊಡೆದಿದ್ದಾರೆ, ಟೆಂಪೆಸ್ಟ್ ನಾಟಕದ ‘ಮಿರಾಂಡ’ಳಂತೆ ಮುಗ್ಧ ಪ್ರಪಂಚಕ್ಕೆ ಒಯ್ದಿದ್ದಾರೆ. ಅವರು ಅಭಿನಯಿಸುವ ಪರಿ, ಪಾತ್ರವನ್ನು ಪ್ರವೇಶಮಾಡುವ ರೀತಿ, ರಂಗದಮೇಲೆ ನಿರ್ವಹಿಸುವ ಕ್ರಮ ಎಲ್ಲವೂ ಎಳೆಯ ನಟರಿಗೆ ಪಾಠವಾಗಿದೆ. ಕೆಲವು ನಟರು ಇವರನ್ನು ನೋಡಿ ಬೆಳೆದಿದ್ದಾರೆ, ತನ್ನೊಳಗಿರುವ ‘ನಟ’ನನ್ನು ಸಾಕಿಕೊಂಡಿದ್ದಾರೆ. ಪಶ್ಚಿಮದಲ್ಲಿ ಇಷ್ಟಾಗಿದ್ದರೆ ನಟರ ಕಥನ ದ ಪಠ್ಯವಾಗಿ ರೂಪುಗೊಳ್ಳುತಿತ್ತು, ನಟನೆಯ ಅಭಾಸಕ್ಕೆ ಮಾದರಿಯಾಗುತ್ತಿತ್ತು.

ಈ ನಟರ ಗೋಳೇನು ಕಮ್ಮಿಯಿಲ್ಲ. ಕಾಲಕಾಲಕ್ಕೆ ತಮ್ಮನ್ನು ನಿರ್ವಚಿಸಿಕೊಳ್ಳಲಾರರು, ತಮ್ಮಲ್ಲಿರುವ ನಟನೆಯ ಹಳೆಯ ಸ್ಟಾಕ್ನ್ನು ತೆಗೆದಹಾಕಿ ಹೊಸದಾಗಿ ನವೀಕರಿಸಿಕೊಳ್ಳಲಾಗದ ಸೋಮಾರಿತನ ಹಾಗು ಹೊಸಹೊಸ ಓದಿಗೆ ತೆರೆದುಕೊಳ್ಳಲಾಗದ ಜಡತೆ ಇವರನ್ನು ಆವರಿಸಿ ಬಿಟ್ಟಿದೆ. ದೈನಂದಿನ ಜೀವನದಲ್ಲಿ ಮುಳುಗಿ ಕಳೆದುಹೋಗಿದ್ದಾರೆ. ದೈನಂದಿನ ಜೀವನದಲ್ಲಿದ್ದೂ ಕಾಪಿಟ್ಟುಕೊಳ್ಳಬಹುದಾದ ‘ನಟನ ಧ್ಯಾನ’ ದಿವ್ಯ ಮರೆವಿಗೆ ಸರಿದು ಬಿಟ್ಟಿದೆ. ಕಲಾವಿದನಿಗೆ ಇರಲೇಬೇಕಾದ ಸೈಲೆನ್ಸ, ಎಕ್ಸೈಲ್ ಮತ್ತು ಕನ್ನಿಂಗ್ ನ ದಿವ್ಯಮಂತ್ರ ( ಜೇಮ್ಸ ಜಾಯ್ಸ ನ ಪ್ರಕಾರ) ಕೈಕೊಟ್ಟುಬಿಟ್ಟಿದೆ. ‘ದೇವರು ಪ್ರತ್ಯಕ್ಷನಾದಾಗ ವರ ಕೇಳಬೇಕು ಆದರೆ ಬೆನ್ನು ತುರಿಸುತ್ತಿರುತ್ತದೆ. ಇಂಥ ಅನಿವಾರ್ಯತೆಯಲ್ಲಿ ನಟನಿರುತ್ತಾನೆ. ಆಗ ತುರಿಸಿಕೊಳ್ಳಲೂಬೇಕು, ವರ ಕೇಳುವುದನ್ನು ಬಿಡಬಾರದು’. ಈ ಇಬ್ಬಗೆಯ ಕಠಿಣ ಹಾದಿಯನ್ನು ಅವರು ದಾಟಲೇ ಬೇಕು. ಅದು ಅನಿವಾರ್ಯ ಸಂಕಟ ಮತ್ತು ವಿಧಿ.

ನಿರ್ದೇಶಕರ ಕಥನ:

ರಂಗಾಯಣಕ್ಕೆ ಇದುವರೆವಿಗೂ ನಿರ್ದೇಶಕರಾಗಿ ಬಂದಂಥ ನಿರ್ದೇಶಕರೆಲ್ಲರೂ ರಂಗಭೂಮಿಯಲ್ಲಿ ಅಪಾರ ಅನುಭವ ಉಳ್ಳವರು ಎನ್ನುವುದರಲ್ಲಿ ದುಸರಾ ಮಾತಿಲ್ಲ. ಅವರೆಲ್ಲರೂ ರಂಗಭೂಮಿಯ ಗಡಿಗೆರೆಗಳನ್ನು ವಿಸ್ತರಿಸಿದವರೇ ಎಂದು ನಮ್ರವಾಗಿ ನೆನೆಯುತ್ತಾ, ಅನಿವಾರ್ಯವಾಗಿ ಹೇಳಲೇಬೇಕಾದನ್ನು ಸಂಕಟದಿಂದಲೇ ಹೇಳುತ್ತಿದ್ದೇನೆ. ಸರ್ಕಾರ ಇವರನ್ನು ನೇಮಿಸಿದ ಕೂಡಲೇ ‘ಇದು ನನ್ನ ಕನಸು’ ಎಂದು ಬೊಗಳೆ ಬಿಡಲಾರಂಭಿಸುತ್ತಾರೆ. ಕನಸುಗಳಿಗೆ ಕೈಕಾಲು ಮೂಡಿ ಬಡಬಡಿಸತೊಡಗುತ್ತಾರೆ. ಇವರ ಕನಸು ಆಗಷ್ಟೇ ಹುಟ್ಟಿರುತ್ತದೆ ಅದೂ ಸರ್ಕಾರಿ ಗೂಟದ ಕಾರಿನ ಜೊತೆಗೇ. ಇವರೇನು ಚಿತ್ರಕಾರರೇ, ಶಿಲ್ಪಿಗಳೇ, ಕವಿಗಳೇ – ಒಬ್ಬರೇ ಕನಸಿಗೆ ರೆಕ್ಕೆ ಬರಿಸಿಕೊಳ್ಳಲಿಕ್ಕೆ. ರಂಗಭೂಮಿಯಲ್ಲಿ ಕನಸು ಎಂದರೆ ಅದು ನಟರ, ತಂತ್ರಜ್ಞರ, ವಿನ್ಯಾಸಕಾರರ- ಒಟ್ಟೂ ಆ ಸಮುದಾಯ ಸೃಷ್ಠಿಸಿಕೊಳ್ಳುವ ಮಹಾ ಕನಸು ಎಂದು ವ್ಯವಧಾನದಿಂದ ತಿಳಿಯುವ ವಿವೇಕ ಕಾಣೆಯಾಗಿದೆ., ನಟರನ್ನ- ರಂಗಭೂಮಿಯನ್ನ ಜತನದಿಂದ ಕ್ಲೀಷೆಗಳಿಂದ ಪಾರುಮಾಡುವ ಒಂದು ನಿರ್ಧಿಷ್ಠ ಹೊಳಹುಗಳಿರುವುದೇ ಇಲ್ಲ. ನಟರಿಗೇ ಬೇಕಾದ ಲೈಬ್ರರಿ, ಅವರು ಕೆಲಸ ಮಾಡಲು ಅಗತ್ಯವಾದ ಒಳ್ಳೆಯ ಪ್ಲೋರ್ ಗಳು, ಬರಹಗಾರರು ಹಾಗೂ ಅನ್ಯಕಲೆಯ ಜೊತೆಗಿನ ಅವರ ಅನುಸಂಧಾನ, ಪ್ರಪಂಚದಲ್ಲಿ ರಂಗಭೂಮಿ ವಿವಿಧ ಕೆಲಸಗಳನ್ನು ಕುರಿತ ಮಾಹಿತಿಗಳು, ಆ ನಟ-ನಟಿಯರು ಮಾಡಿಕೊಳ್ಳುವ ಸಿಧ್ದತೆಗಳು, ಎಲ್ಲವನ್ನು ಈ ನಿರ್ದೇಶಕನೆಂಬ ‘ಮ್ಯಾಗ್ನಿಫೈಯರ್’ ಮಾಡಬೇಕಾಗುತ್ತದೆ. ಯಾವ ಸಿಧ್ಧತೆಯೂ ಇಲ್ಲದೆ ಕನಸ ನೆನಸು ಮಾಡಲು ಸಾಧ್ಯವೆ. ನೋಡಿ, ನಾವೊಂದು ತುಂಡು ಜಮೀನಿನಲ್ಲಿ ನಮಗೆ ಬೇಕಾದ ಬೆಳೆಯನ್ನು ತೆಗೆಯಲಾಗುವುದಿಲ್ಲ. ಅಲ್ಲಿನ ಹವಾಮಾನ, ಮಣ್ಣಿನ ಗುಣ, ಅಲ್ಲಿನ ಹಕ್ಕಿಪಕ್ಷಿ ಪ್ರಾಣಿ ಕ್ರಿಮಿಕೀಟಗಳು, ನೀರಿನ ಒರತೆ ಎಲ್ಲದರ ಜೊತೆ ಇದ್ದೂ, ಗಮನಿಸಿ ಬೆಳೆಯಬೇಕೇ ಹೊರತು ನಮ್ಮ ತಲೆಯಲ್ಲಿರುವ ಒಣ ಠೇಂಕಾರದ ಬೆಳೆಯನ್ನಲ್ಲ.

ಇನ್ನು ರಂಗಸಮಾಜ ಎನ್ನುವ ಗವರ್ನಿಂಗ್ ಬಾಡಿಯ ಕಥೆ :

ಇದೊಂದು ಸರ್ಕಾರಿ ಕೃಪಾಪೋಷಿತ ಗುಂಪು, ಡೋಂಗಿ ಪಡೆ. ಇದರಲ್ಲಿ ಅರೆಬೆಂದ ನಾಟಕಕಾರರು, ನಟರು, ಬುದ್ಧಿಜೀವಿಗಳು, ಇವರೇ ತುಂಬಿರುವ ಪಿಂಜರಾಪೋಲುಗಳ ಕೂಟ- ಇದರಲ್ಲಿ ಒಬ್ಬಿಬ್ಬರು ಸಜ್ಜನರು ಇರತ್ತಾರೆನ್ನಿ. ಇವರೆಲ್ಲ ರಂಗಭೂಮಿಯನ್ನು ಅಲ್ಲಲ್ಲಿ ನೆಕ್ಕಿ, ಸಿಕ್ಕಿದ ಕಡೆ ಕೈಯಾಡಿಸಿ ಮುಂದಿನ ನಿರ್ದೇಶಕರ ಪಟ್ಟಿಗೆ ಜಿಗಿಯಲು ಸಿಧ್ಧರಾಗಿರುವ ರಂಗಪುಡಾರಿಗಳು. ಅವರವರ ವೃತ್ತಿಗಳಲ್ಲಿ ಅವರೇನೂ ಅತ್ಯುತ್ತಮ ಕೆಲಸಗಳನ್ನು ಮಾಡಿದವರೇನೂ ಅಲ್ಲ. ವಶೀಲಿ ಹಚ್ಚಿ, ದೇಶಾವರಿ ನಕ್ಕು, ಥರಾವರಿ ಮಿಂಚುವ ಬಟ್ಟೆಗಳ ರಂಗಭೂಮಿ ಪ್ಯಾರಾಸೈಟ್ ಗಳು. ಕೆಲವು ದಿವಸ ರಂಗಭೂಮಿ. ಇನ್ನು ಕೆಲವು ದಿವಸ ಸರ್ಕಾರಿ ಉತ್ಸವಗಳು, ಅಕಾಡೆಮಿಯ ಹುದ್ದೆಗಳು, ಧಾರಾವಾಹಿ, ಸಿನೇಮಾ ಹೀಗೆ ಹಲವುಹತ್ತು ಜಾಗಗಳಲ್ಲಿ ಹಣಕಿ ಹಾಕುವ ಬಹು ವೇಷಧಾರಿ ಜೀವಿಗಳು. ಇವರಿಂದ ಯಾವ ಕಲಾಪ್ರಕಾರಗಳೂ ಜೀವಂತಿಕೆ ಪಡಕೊಳ್ಳಲಿಲ್ಲ. ಇವರನ್ನ ಒಂಚೂರು ಕೇಳಿ ನೋಡಿ ಎಪ್ಪತ್ತರ ದಶಕದ ಹಳವಂಡಗಳನ್ನು ಪುಂಖಾನುಪುಂಖವಾಗಿ ತಮಟೆ ಹೊಡೆಯ ತೊಡಗುತ್ತಾರೆ.

ಇನ್ನಷ್ಟು

ಹತ್ತು ಹತ್ತು ಇಪ್ಪತ್ತು

hattu hattu ippattu invitation

ಭಾಷೆಯ ಸುತ್ತ ಮುತ್ತ..

-ವೈದೇಹಿ

Kannadalyrics.com

ಭಾಷೆ ತೊಡಕು

ಅಕ್ಕನಿಗೆ ಭಾಷೆ ಇದೆ

ಮಲ್ಲಿಕಾರ್ಜುನನಿಗಿಲ್ಲ

ಮೀರಾ ಭಜನೆ ಇದ್ದರು

ಗಿರಿಧರ ಮೂಕ

ಭಾಷೆ ಮೂಲಕವೇ ಆತ್ಮ ಮಿಲನಕೆ ಹೊರಟ

ಇಂತ ಧೀಮಂತೆಯರ ಅಂತಿಮ

ನೆಲೆಯ ಸುಖ ಸಖರಿಗಿರುವುದಿಲ್ಲಾ

ಭಾಷೆಲಿ ಸಿಲುಕದೆ ಜಾರಿಕೊಳ್ಳುವರು ಅವರು

ಜಾರರೆನ್ನಲು ಭಾಷೆ ತಡೆಯುತಿದೆ

ಆಕೆ ಆತ ಭಾಷೆ

ಅವಳೆಂದದ್ದು ಹಸಿವೆ ಮತ್ತು ಬಾಯಾರಿಕೆ

ಆತನೆಂದ ಚೆನ್ನಾಗಿ ಉಣ್ಣು ಕುಡಿ

ಆಕೆ ಅತ್ತಳು ಆಗ ಆತ ನಕ್ಕ

ಮೊನ್ನೆ ಅವನೆಂದದ್ದು ಕಿಟಕಿ ಎಂದು

ಅವಳು ತಿಳಕೊಂಡಂತೆ ಬಾಗಿಲು ಅಲ್ಲಾ

ಗೋಡೆ ಎಂದರೆ ಆತ ಬಯಲೆಂದುಕೊಂಡಳು

ಗೋಡೆ ಒಡೆದರೆ ಎಲ್ಲಾ ಬಯಲು ಎಂದೆ

ಆಕೆ ಮಾಡಿದ್ದು ಅವನಿಗಿಷ್ಟವಾದ ಕಾಯಿ ರಸ

ಅವನು ಉಂಡದ್ದು ಮಜ್ಜಿಗೆ ಹುಳಿ ಎಂತ

ಯಾಕಾಗಿ ಹೀಗೆಲ್ಲ ಉಪರಾಟೆ ಪದಾರ್ಥ

ಗಾಳಿ ಇರಲಿಲ್ಲವೆ ಅವರ ನಡುವೆ ಹಾಗಾಗಿ ಅಲೆಗಳು

ಶಬ್ದಕಲೆಯಡಿಯಾಗಿ ಏಕಾಂಗಿ ಕೂಗುತಿದೆ ನಡು ನೀರಿನಲ್ಲಿ

ಅಲ್ಲೆ ಎದ್ದದ್ದು ಆತ್ಮಹತ್ಯೆಯ ಮಾತು

ಏನೆಂದ ಆತ ತಮಾಷೆ ಎಂದೆ

ಹೀಗೇಯೇ ನೋಡುವ ಒಮ್ಮೊಮ್ಮೆ ಏನೇನೊ ಆಗುವುದು

ಸಮುದ್ರವೆಂದರೆ ಸಮುದ್ರವಲ್ಲಾ

ದಡ ಎಂದುಕೊಂಡರೆ ನೀನು ಬೆನ್ನು

ಒಂದೆಂದರೆ ಇನ್ನೊಂದೇ ವಾರ್ಗರ್ಥ ಮೋಜು

ನಿನಗು ಗೊತ್ತೆ ಇರುವುದು

ಅವಳು ಕೇಳಿದಳು ಹೇಳು ಕೊನೆಗು ಸರಿಯಾಗಿ

ಹೆಚ್ಚು ಹುಚ್ಚರು ಯಾರು ನಮ್ಮಿಬರಲ್ಲಿ

ಆತ ಏನೆಂದೆ ಮೊದಲು ಸಾಯುವ ಆಸೆಯೇ ಹೇಳು಼

ಅವಳು ಸೆಕೆ ಕಿಟಕಿ ತೆರೆಯಲೆ ನಡುವೆ ಗಾಳಿಗೆ

ಆತ ಏನೆಂದೆ ಹಸಿವೆ ಮತ್ತು ಬಾಯಾರಿಕೆ

ವೈದೇಹಿ ಹೇಳುತ್ತಾರೆ: ನಮ್ಮೆಲ್ಲರಲ್ಲೂ ‘ಕಥೆ’ ಇದೆ

ಮೊನ್ನೆ ಮೊನ್ನೆ ತಾನೇ ವೈದೇಹಿ ತಮ್ಮ ಕಥೆಗಳ ಲೋಕದಲ್ಲಿ ಅಡ್ಡಾಡಿದ ಈ ಬರಹವನ್ನು ಪ್ರಕಟಿಸಿದ್ದೆವು. ಈಗ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇನ್ನೊಮ್ಮೆ ಓದಲು ನಿಮಗಾಗಿ ನೀಡುತ್ತಿದ್ದೇವೆ

ಕಥಾ ಸಮಯ – ವೈದೇಹಿ

ಬದುಕು ಒಂದೇ ಆದರೂ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆ ಭಿನ್ನತೆಯನ್ನು ಅದರ ನಡುವಿನ ಸಂಘರ್ಷವನ್ನು ಹೊರಪ್ರಪಂಚ, ಅದರೊಳಗಿನ ನಮ್ಮ ಪ್ರಪಂಚ, ಅದರ ಅನುರಾಗ, ಪ್ರೀತಿ-ಒಳ ಜಗಳವನ್ನು ಹೇಗೆ ಒರೆಗೆ ಹಚ್ಚಬೇಕು? ತಿಕ್ಕಿ, ನೋಡಿ, ಅದರ ಮಹತ್ವವನ್ನು ಸತ್ವವನ್ನು ಹೇಗೆ ಅರಿಯಬೇಕು? ಬಹುಶಃ ಕತೆ ಈ ಕಾರಣಕ್ಕೆ ಹುಟ್ಟಿಕೊಂಡಿರಬೇಕು. ನಮ್ಮ ಅನುಭವವನ್ನು ನಾವು ಒರೆಗೆ ಹಚ್ಚಲು ಪ್ರಯತ್ನಿಸಿದಾಗ ಕತೆ ಹುಟ್ಟಿಕೊಳ್ಳುತ್ತೆ. ಹಾಗೆ ನೋಡಿದರೆ ಕತೆ, ಕವಿತೆಗಳು ಎಲ್ಲೆಲ್ಲೂ ಚೆಲ್ಲಾಡಿವೆ. ಆಯ್ದುಕೊಳ್ಳುವ  ಮನಸ್ಸು ಇರಬೇಕು ಅಷ್ಟೇ ಮುತ್ತು, ರತ್ನ, ಕಲ್ಲು ಎಲ್ಲಾ ಬಿದ್ದಿವೆ, ನೀವು ಯಾವುದನ್ನು ಆಯ್ದುಕೊಳ್ತೀರಿ? ಕತೆಗಾರ, ಸಾಹಿತಿಯ ಮುಖ್ಯ ಕಾಳಜಿಯೆಂದರೆ ಇವುಗಳನ್ನು ಹೆಕ್ಕಿಕೊಳ್ಳುವುದು ಹೇಗೆ ಎಂಬುದೇ ಆಗಿದೆ. ಕತೆಯನ್ನು ಕಥಾ ತಂತಿಯನ್ನು ಮಿಡಿದಾಗ ಮಾತ್ರ ಕತೆ ಹುಟ್ಟಿಕೊಳ್ಳುತ್ತೇ ವಿನಃ ಬರಿಯ ಕತೆ ಅಲ್ಲ.

ನಮ್ಮೆಲ್ಲರಲ್ಲೂ ‘ಕಥೆ’ ಇದೆ. ಇಲ್ಲಿರುವ ಎಲ್ಲರನ್ನು ಅಲ್ಲಾಡಿಸಿದರೂ ರಾಶಿ ರಾಶಿ ಕಥೆ ಬೀಳುತ್ತೆ. ನಮ್ಮಜ್ಜನ ಕಾಲದಿಂದಲೂ ‘ಕಥೆ’ ಪ್ರಾಮುಖ್ಯ ಪಡೆದಿದೆ. ಉದಾಹರಣೆಗೆ ನೋಡಿ “ಅವನ ಕತೆ ಮುಗಿಯಿತು”. “ಅವಳ ಕಥೆ ಹಾಗೆ” “ನಿನ್ನ ಕಥೆ ಎಂಥ ಮಾರಾಯ” ನಾವು ಕತೆ ಅಂತಾನೆ ಅಂತೇವೆ.  story ಎನ್ನುವುದಿಲ್ಲ.

ಸ್ಥಿತಿ ಸನ್ನಿವೇಶದ ಬಗ್ಗೆ ನಾವು ವರ್ಣಿಸಲು ಆರಂಭಿಸುವುದೇ ‘ಕಥೆ’ ಎಂಬ ಮೂಲಕವೇ. ಈ ಮೂಲಕವೇ ಕಥೆಯೊಳಗಿನ ‘ಕಥೆ’ಯನ್ನು ಹಿಡಿದ ಸವಾಲು ಕಥಾಗಾರನದ್ದು. ಈಗ ನಮ್ಮ ದೇಶದ ಕಥೆ ನೋಡಿ. ಇದು ಹೇಳಿ, ವರ್ಣಿಸಿ ಮುಗಿವ ಕತೆಯಾ? ನಮ್ಮ ದೇಶದ ಕತೆಯನ್ನು ನಾವು ಮರುಕಟ್ಟಬೇಕಾಗಿದೆ. ಆದರೆ ಹೇಗೆ ಅನ್ನುವುದೇ ಸವಾಲು.

ಇನ್ನಷ್ಟು

ಜೋಗಿ ಬರೆದಿದ್ದಾರೆ: ಹಾಗಂತ ನಾವೆಲ್ಲ ದೂರ ಇಟ್ಟವರು ವೈದೇಹಿ

ಮುಳ್ಳು ಬೆರಳಲಿ ಮಲ್ಲಿಗೆಯ ಮಾಲೆ

ಏನಿದು ಇಷ್ಟೊಂದು ಸರಳವಾಗಿ ಬರೀತಾರಲ್ಲ? ಏನಿದೆ ಇದರಲ್ಲಿ? ಬರೀ ಬೋರು? ನಾವೆಲ್ಲ ಕಂಡಿದ್ದನ್ನೇ ಹೇಳ್ತಿದ್ದಾರಪ್ಪ…

ಹಾಗಂತ ನಾವೆಲ್ಲ ಆರಂಭದಲ್ಲಿ ದೂರ ಇಟ್ಟವರು ವೈದೇಹಿ.  ಅದಕ್ಕೆ ಕಾರಣ ನವ್ಯದ ಹುರುಪು. ಕತೆಗೊಂದು ತಂತ್ರಗಾರಿಕೆ ಬೇಕು, ವಿಶಿಷ್ಟ ಭಾಷಾ ಶೈಲಿ ಬೇಕು. ಏನನ್ನು ಹೇಳಿದರೂ ಅದರಲ್ಲಿ ವೈಚಾರಿಕತೆ ಇರಬೇಕು. ಬದುಕಿನ ಮತ್ತೊಂದು ಮಗ್ಗುಲನ್ನು ಕಡ್ಡಾಯವಾಗಿ ಸ್ಪರ್ಶಿಸಲೇ ಬೇಕು. ಸಂಬಂಧಗಳ ನಡುವೆ ಚಿತ್ರವಿಚಿತ್ರ ಸಂಬಂಧ ಇರಬೇಕು ಎಂದು ನಿರೀಕ್ಷಿಸುತ್ತಿದ್ದ ಕಾಲ. ಆಗ ಎಲ್ಲವನ್ನೂ ಅಗೌರವದಿಂದ ನೋಡುವುದು ಫ್ಯಾಷನ್. ಎಲ್ಲವನ್ನೂ ನಿರಾಕರಿಸುವುದು ಶ್ರೇಷ್ಠತೆ ಎಂದು ನಮ್ಮ ನವ್ಯ ಗುರುಗಳೆಲ್ಲ ಹೇಳುತ್ತಿದ್ದ ಕಾಲ.

ಆರ್ ಕೆ ನಾರಾಯಣ್, ವೈದೇಹಿ, ಮಿತ್ರಾ ವೆಂಕಟ್ರಾಜ್ ಮುಂತಾದ ಕತೆಗಾರರೆಲ್ಲ ಅದೇ ಕಾರಣಕ್ಕೆ ನಮ್ಮನ್ನು ಅಷ್ಟಾಗಿ ಆಕರ್ಷಿಸಲೇ ಇಲ್ಲ. ಆಗೇನಿದ್ದರೂ ಗತಿಸ್ಥಿತಿಯ ಗಿರಿ, ಅನ್ಯ ಅನುವಾದಿಸಿದ ಡಿಎ ಶಂಕರ, ನಮಗೆ  ಒಂದೇಟಿಗೆ ಅರ್ಥವಾಗದಂತೆ ಬರೆಯುತ್ತಿದ್ದ ರಾಮಚಂದ್ರಶರ್ಮ ಮೊದಲಾದವರೆಲ್ಲ ಇಷ್ಟವಾಗಿದ್ದರು. ಅನಂತಮೂರ್ತಿಯವರ ಕ್ಲಿಪ್ ಜಾಯಿಂಟ್’ ಕತೆ ಫೇವರಿಟ್. ಆಕಾಶ ಮತ್ತು ಬೆಕ್ಕು ಅಪೂರ್ವ ರೂಪಕ. ಪ್ರಜ್ಞಾ ಪ್ರವಾಹ ತಂತ್ರವೆಂದರೆ ಪಂಚಪ್ರಾಣ.

ಅಂಥ ಕಾಲಕ್ಕೆ ನಾವೆಲ್ಲ ಬೆಚ್ಚಿಬೀಳುವಂತೆ ಲಂಕೇಶ್ ಪತ್ರಿಕೆಯಲ್ಲಿ ವೈದೇಹಿ ಕಾಣಿಸಿಕೊಂಡರು. ಲಂಕೇಶರು ಮೆಚ್ಚಿಕೊಂಡಿದ್ದಾರೆ ಅಂದ ಮೇಲೆ ಮೆಚ್ಚಲೇಬೇಕು ಎಂದು ತೀರ್ಮಾನಿಸಿದವರಂತೆ ನಾವೊಂದಷ್ಟು ಮಂದಿ ಅವರನ್ನು ಗಂಭೀರವಾಗಿ ಓದಲು ಆರಂಭಿಸಿದೆವು. ಅದೇ ಹೊತ್ತಿಗೆ ಮತ್ತೊಂದಷ್ಟು ಲೇಖಕ-ಲೇಖಕಿಯರೂ ಲಂಕೇಶ್ ಪತ್ರಿಕೆಗೆ ಬರೆಯಲು ಆರಂಭಿಸಿ ಲಂಕೇಶರ ಆಯ್ಕೆಯ ಬಗ್ಗೆಯೇ ಅನುಮಾನಗಳು ಶುರುವಾದವು.

ಅದಾಗಿ ಎಷ್ಟೋ ವರ್ಷಗಳ ನಂತರ ಹೆಗ್ಗೋಡಿನಲ್ಲಿ ವೈದೇಹಿ ಸಿಕ್ಕರು. ಸ್ವಂತ ಅಕ್ಕನ ಹಾಗೆ ಮಾತಾಡಿದರು. ಮಾತಿನಲ್ಲಿ ಯಾವುದೇ ತೋರಿಕೆಯಾಗಲೀ,ನಮಗೆ ಅರ್ಥವಾಗದ ಪರಿಭಾಷೆಯಾಗಲೀ ಇರಲಿಲ್ಲ. ಆರ್ದ್ರತೆ ಇತ್ತು. ಹೇಳುವುದನ್ನು ತುಂಬ ಸ್ಪಷ್ಟವಾಗಿ ಹೇಳುತ್ತಿದ್ದರು. ಅಷ್ಟು ಹೊತ್ತಿಗಾಗಲೇ ನವ್ಯಯುಗ ಅಂತ್ಯವಾಗುತ್ತಾ ಬಂದಿತ್ತು. ಅತ್ಯುತ್ಕೃಷ್ಟ ಎಂದು ಅವರೇ ಕರೆದುಕೊಳ್ಳುವ ಶೈಲಿಯ ಹುಸಿತನಗಳು ಅರ್ಥವಾಗಲು ಆರಂಭಿಸಿದ್ದವು. ತುಂಬಾ ಆಕರ್ಷಕವಾದ ಭಾಷೆ, ಏನನ್ನೂ ನಮ್ಮತ್ತ ದಾಟಿಸುವುದಿಲ್ಲ ಎಂದು ಗೊತ್ತಾಗತೊಡಗಿತ್ತು.

ಇನ್ನಷ್ಟು

ನ್ಯೂಸಿಯಂ and ಸೆಕ್ಸ್ ಮ್ಯೂಸಿಯಂ!

ravih1-11-ರವಿ ಹೆಗಡೆ

ರವಿ ಹೆಗಡೆ ಸುವರ್ಣ ನ್ಯೂಸ್ ಚಾನಲ್ ನ ಮುಖ್ಯಸ್ಥರಲ್ಲೊಬ್ಬರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ
ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಹಡಗಿನ ಈ ‘ವರ್ಣ ಚಿತ್ರ’ ಆ ಪತ್ರಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ಆ ಪತ್ರಿಕೆ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?
ಈ ಹಳೇ ಸುದ್ದಿ ಕೇಳಿ ನನ್ನಂತೆ ನಿಮಗೂ ಅಚ್ಚರಿ ಆಗಬಹುದು!

೧೮೪೦ರ ಜನವರಿ ತಿಂಗಳು. ಅಮೆರಿಕದ ಲೆಕ್ಸಿಂಗ್‌ಟನ್ ಎಂಬ ವಿಲಾಸೀ ಹಡಗಿನ ಗ್ರಹಚಾರ ಸರಿ ಇರಲಿಲ್ಲ. ನ್ಯೂಯಾರ್ಕ್ ಬಂದರಿನಿಂದ ಸುಮಾರು ೫೦ ಮೈಲು ದೂರದಲ್ಲಿ ಸಮುದ್ರದ ನಟ್ಟ ನಡುವೆ ಅದಕ್ಕೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ಗಂಟೆಗಳಲ್ಲಿ ಧಗಧಗನೆ ಉರಿದು, ಅದು ಸಮುದ್ರದಲ್ಲಿ ಮುಳುಗಿಹೋಯಿತು. ಇದ್ದ ೧೬೦ ಜನರಲ್ಲಿ ಕೇವಲ ನಾಲ್ವರು ಬದುಕುಳಿದರು. ವಿಷಯ ಅದಲ್ಲ. ಆ ಸುದ್ದಿಯನ್ನು ಪ್ರಕಟಿಸಿದ ‘ನ್ಯೂಯಾರ್ಕ್ ಸನ್’ ಪತ್ರಿಕೆಯ ಸಾಹಸವನ್ನು ಸ್ವಲ್ಪ ಕೇಳಿ.

ಈ ದುರಂತದ ವರದಿಗಾಗಿ ‘ನ್ಯೂಯಾರ್ಕ್ ಸನ್’ ಪತ್ರಿಕೆ ವಿಶೇಷ ‘ಎಕ್ಸ್‌ಟ್ರಾ’ ಆವೃತ್ತಿಯನ್ನು ಹೊರತಂದಿತ್ತು. ನೀಲ ಸಮುದ್ರದ ನಡುವೆ ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಲೆಕ್ಸಿಂಗ್‌ಟನ್ ಹಡಗಿನ ದೊಡ್ಡ ‘ವರ್ಣ ಚಿತ್ರ’ ಆ ಸಂಚಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ‘ನ್ಯೂಯಾರ್ಕ್ ಸನ್’ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?

ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಕಪ್ಪು ಬಿಳುಪು ಚಿತ್ರದ ಆ ಪತ್ರಿಕೆಯನ್ನು ಮೊದಲು ಲಿಥೋಗ್ರಾಫ್‌ನಲ್ಲಿ ಮುದ್ರಿಸಿ, ನಂತರ ಎಷ್ಟೋ ಪ್ರತಿಗಳಿಗೆ ಕಲಾವಿದರು ತಮ್ಮ ಕೈಯಾರೆ ಬಣ್ಣ ಹಚ್ಚಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು! ೧೬೮ ವರ್ಷದ ಹಿಂದಿನ ಈ ಅಪೂರ್ವ ಪತ್ರಿಕೆಯನ್ನು ನ್ಯೂಸಿಯಂನಲ್ಲಿ ಸಾಕ್ಷಾತ್ ಕಂಡಾಗ ಅಂದಿನ ಪತ್ರಿಕಾ ಸಾಹಸಕ್ಕೆ ಯಾರಾದರೂ ನಮೋ ನಮಃ ಎನ್ನಲೇಬೇಕು.

ಜಗತ್ತಿನಲ್ಲಿ ಪತ್ರಿಕೆಗಳು ಆರಂಭವಾದಾಗ ಅವು ಈಗಿನಂತೆ ಪತ್ರಿಕಾ ರೂಪದಲ್ಲಿ ಇರಲಿಲ್ಲ. ಪುಸ್ತಕ ರೂಪದಲ್ಲಿ ಇದ್ದವು. ಅವುಗಳನ್ನು ‘ಸುದ್ದಿ ಪುಸ್ತಕ’ ಎಂದು ಕರೆಯಲಾಗುತ್ತಿತ್ತು. ನಂತರ ಅವು ‘ವಾರ್ತಾ ಪತ್ರ’ಗಳ ರೂಪ ಪಡೆದವು. ಕ್ರಮೇಣ ಈಗಿನಂತೆ ಪತ್ರಿಕೆಯ ಗಾತ್ರ ಹಾಗೂ ಲಕ್ಷಣ ಪಡೆದವು ಎಂಬುದನ್ನು ಪತ್ರಿಕೋದ್ಯಮ ಇತಿಹಾಸದಲ್ಲಿ ಓದಿರಬಹುದು. ಆದರೆ, ಅವುಗಳನ್ನು ನ್ಯೂಸಿಯಂನಲ್ಲಿ ಕಣ್ಣಾರೆ ನೋಡಬಹುದು. ಓದಬಹುದು. ಇಲ್ಲಿ ಅಮೆರಿಕದ ಮೊದಲ ಪತ್ರಿಕೆಯಿಂದ ಹಿಡಿದು ೬೫ ದೇಶಗಳ ಆಯ್ದ ೬೮೮ ಪತ್ರಿಕೆಗಳ ಈ ಕ್ಷಣದ ಮುಖಪುಟವನ್ನು ಇಲ್ಲಿ ಕಾಣಬಹುದು. ೬೮೯ನೇ ಪತ್ರಿಕೆಯಾಗಿ ‘ಕನ್ನಡಪ್ರಭ’ದ ಮುಖಪುಟ ಇದೀಗ ಸೇರಿಕೊಂಡಿದ್ದು, ಇಂದಿನಿಂದ ನ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇಲ್ಲಿ ಕ್ಲಿಕ್ ಮಾಡಿ

೨ನೇ ಮಹಾಯುದ್ಧದ ೪-ಡಿ ಸಿನಿಮಾ

ಎಡ್ವರ್ಡ್ ಆರ್ ಮರ್ರೋ ಎಂಬ ಅಮೆರಿಕದ ಮಹಾನ್ ರೇಡಿಯೋ ವರದಿಗಾರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಲಂಡನ್‌ನ ಕಟ್ಟಡವೊಂದರ ತಾರಸಿಯ ಮೇಲೆ ನಿಂತುಕೊಂಡು, ಜರ್ಮನಿಯ ವಿಮಾನಗಳು ಬಾಂಬ್ ಹಾಕುತ್ತಿರುವ ಸುದ್ದಿಯನ್ನು ರೇಡಿಯೋದಲ್ಲಿ ನೇರ ವರದಿ ಮಾಡಿದ. ನೇರ ಪ್ರಸಾರ ವರದಿಗಾರಿಕೆಯ ಆರಂಭ ಎಂದು ಗುರುತಿಸಲ್ಪಡುವ ಈ ಘಟನೆ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ಆ ಸಂದರ್ಭವನ್ನು ನ್ಯೂಸಿಯಂನ ‘೪-ಡಿ’ ಟಾಕೀಸಲ್ಲಿ ಅನುಭವಿಸಬಹುದು.

ಈ ಟಾಕೀಸ್ ‘೩-ಡಿ’ಗಿಂತ ಅದ್ಭುತ ಅನುಭವ ನೀಡುತ್ತದೆ. ದೂರದಿಂದ ರೋಯ್ಯನೆ ಬರುವ ಬಾಂಬರ್ ವಿಮಾನ ನಮ್ಮ ತಲೆಯ ಮೇಲೇ ಬಂದಂತಾಗಿ ತಲೆಗೂದಲೆಲ್ಲಾ ಗಾಳಿಗೆ ಹಾರಾಡುತ್ತದೆ. ಗುಡುಗು ಸಿಡಿಲು ಆರ್ಭಟಿಸಿ ಮಳೆ ಸುರಿಯುವ ಲಕ್ಷಣ ಕಾಣಿಸಿದಾಗ ನಮ್ಮ ಮೇಲೂ ನಿಜವಾದ ಹನಿಗಳು ಬಿದ್ದು ವಾಸ್ತವ ಬಯಲಿನ ಅನುಭವ ಆಗುತ್ತದೆ. ಜೈಲಿನೊಳಗೆ ಇಲಿಗಳು ಕಿಚಿಕಿಚ ಎನ್ನುತ್ತ ಓಡಾಡುವಾಗ ಅವು ನಮ್ಮ ಕಾಲಮೇಲೇ ಓಡಾಡಿದಂತೆ ಸ್ಪರ್ಷಾನುಭವವಾಗುತ್ತದೆ. ಹಾವು ಭುಸ್ಸನೆ ವಿಷ ಉಗುಳಿದಾಗ ಅಕ್ಷರಶಃ ಮುಖದ ಮೇಲೆ ಸಿಂಚನವಾಗುತ್ತದೆ! ಇಂಥ ಟಾಕೀಸಿನಲ್ಲಿ, ಮೂರು ಬೇರೆ ಬೇರೆ ವರದಿಗಾರರ ಕಿರುಚಿತ್ರ ನೋಡುವಾಗ ನಾವು ನ್ಯೂಸಿಯಂ ನಲ್ಲಿದ್ದೇವೋ… ಅಥವಾ ಆ ವರದಿಗಾರರ ಜೊತೆ, ಅವರ ಕಾಲದಲ್ಲೇ ಇದ್ದೇವೋ ಎಂದು ಗೊತ್ತಾಗದಷ್ಟು ಗಾಢ ಅನುಭವವಾಗುತ್ತದೆ.ವಾಷಿಂಗ್‌ಟನ್‌ನ ಹೃದಯದಲ್ಲಿ

ಅಂದಹಾಗೆ, ನ್ಯೂಸಿಯಂ ಎಂದರೆ, ನ್ಯೂಸ್ ಮ್ಯೂಸಿಯಂ. ಸುದ್ದಿಯ ವಸ್ತು ಸಂಗ್ರಹಾಲಯ. ವಾಷಿಂಗ್‌ಟನ್ ಡಿ.ಸಿ.ಯ ಮುಖ್ಯ ಬೀದಿಯಲ್ಲಿ, ಯು.ಎಸ್. ಕ್ಯಾಪಿಟಾಲ್ ಹಾಗೂ ವೈಟ್‌ಹೌಸ್ ನಡುವೆ ಇದೆ. ೧೯೯೭ರಲ್ಲಿ ನ್ಯೂಸಿಯಂ ಆರಂಭಗೊಂಡಾಗ ಅಮೆರಿಕದ ಹೃದಯವೆಂದೇ ಬಣ್ಣಿಸಲಾಗುವ ಈ ಪ್ರದೇಶದಲ್ಲಿ ಇರಲಿಲ್ಲ. ರಾಜಧಾನಿಯಿಂದ ಹೊರಗೆ ಪೋಟೋಮ್ಯಾಕ್ ನದಿಯ ಇನ್ನೊಂದು ತಟದಲ್ಲಿ ಹಳೆಯ ಸಣ್ಣ ಕಟ್ಟಡದಲ್ಲಿತ್ತು. ಆದರೆ, ಜಗತ್ತಿನ ಗಮನ ಸೆಳೆಯಲೆಂದು ಇದು ಈಗಿನ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.
ವಿಶೇಷವೆಂದರೆ, ಯುಎಸ್ ಕ್ಯಾಪಿಟಾಲ್ ಬಳಿ ಖಾಲಿಯಿದ್ದ ಏಕೈಕ ಸೈಟು ಇದಾಗಿತ್ತು. ಈ ನಿವೇಶನದಲ್ಲಿ ೪೫೦ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಬದಲಾವಣೆಯ ಹಿನ್ನೆಲೆಯಲ್ಲಿ ೨೦೦೨ರಲ್ಲಿ ಬಾಗಿಲು ಮುಚ್ಚಿದ್ದ ಹಳೆಯ ನ್ಯೂಸಿಯಂ ಈ ವರ್ಷ ಏಪ್ರಿಲ್‌ನಿಂದ ಹೊಸ ರೂಪದಲ್ಲಿ ಪುನಾರಂಭಗೊಂಡಿದೆ.

ಇದು ಸರ್ಕಾರಿ ಮ್ಯೂಸಿಯಂ ಅಲ್ಲ. ಫ್ರೀಡಂ ಫೋರಂ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ ಖಾಸಗಿ ಮ್ಯೂಸಿಯಂ. ಈ ನ್ಯೂಸಿಯಂ ಎದುರಿನ ಪ್ರದೇಶವೇ ‘ನ್ಯಾಷನಲ್ ಮಾಲ್’. ಇಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಮೆರಿಕದ ಹತ್ತಾರು ಮ್ಯೂಸಿಯಂಗಳು, ಜಾರ್ಜ್ ವಾಷಿಂಗ್‌ಟನ್, ಕೆನಡಿ, ಜಾಫರ್‌ಸನ್, ಲಿಂಕನ್ ಮುಂತಾದ ಗಣ್ಯರ ಸ್ಮಾರಕಗಳೂ ಇವೆ. ವಾಷಿಂಗ್‌ಟನ್ ಡಿ.ಸಿ.ಗೆ ಬಂದ ಪ್ರವಾಸಿಗರ್ಯಾರೂ ಈ ಪ್ರದೇಶ ನೋಡದೇ ವಾಪಸಾಗುವುದೇ ಇಲ್ಲ. ಇಂಥ ಅಪರೂಪದ ಸ್ಥಳಕ್ಕೆ ಹೊಂದಿಕೊಂಡತೆಯೇ ಇರುವುದರಿಂದ ನ್ಯೂಸಿಯಂಗೆ ಇನ್ನಷ್ಟು ಕಳೆ ಹಾಗೂ ಮಹತ್ವ.
ಇನ್ನಷ್ಟು

ಪ್ರಶ್ನೆ ಕೇಳ್ತಿದ್ದಾರೆ ರೂಪಾ..

ಭೇಟಿ ಕೊಡಿ: ಮೀಡಿಯಾ ಮೈಂಡ್

370432462_5361a63e1f

ಪ ಸ ಕುಮಾರ್ ಎಂದರೆ ಕಲೆ, ಸಾಹಿತ್ಯ, ಸಂಗೀತ

ಪ ಸ ಕುಮಾರ್ ಎಂದರೆ ಕಲೆ, ಸಾಹಿತ್ಯ, ಸಂಗೀತ ಎಲ್ಲದರ ಸಂಗಮ. ಪ್ರಜಾಮತ ಮೂಲಕ ತಮ್ಮ ವೃತ್ತಿ ಆರಂಭಿಸಿ ಕನ್ನಡಪ್ರಭದ ಮುಖ್ಯ ಕಲಾವಿದ ಸ್ಥಾನದವರೆಗೆ ಏರಿದರು.

ಪ್ರಯೋಗ ಅವರ ಹೆಗ್ಗುರುತು. ವೈ ಎನ್ ಕೆ ಸಹವಾಸದಲ್ಲಿ ತಮ್ಮ ಕಲೆಯನ್ನು ಸಾಹಿತ್ಯದೊಂದಿಗೆ ಮರ್ಜ್ ಮಾಡಿದ ಪ ಸ, ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ತಾವು ನಡೆದು ಬಂದ ಹಾದಿಯ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕಿದರು.

ಅನನ್ಯ-ದೃಶ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರುಗಳ ದಂಡೇ ನೆರೆದಿತ್ತು. ಹಾಗೆಯೇ ಅವರ ಕಿರಿಯ ಬಳಗವೂ..ಇದು ಪ ಸ ಕುಮಾರ್ ಹರಡಿಹೋಗಿರುವ ರೀತಿಯನ್ನು ಸೂಚಿಸುತ್ತಿತ್ತು.

ಅದರ ಫೋಟೋ ನೋಟ ನಿಮಗಾಗಿ ಇಲ್ಲಿದೆ

IMG_5960

IMG_5883 IMG_5891

IMG_5908

IMG_5913 IMG_5926

IMG_5942 IMG_5951

IMG_5958 IMG_5956

IMG_5921

ಅಂದು ಶುಕ್ರವಾರ, ಯಾಕೋ ನನ್ನ ಮೂಡ್ ಕೆಟ್ಟಿತ್ತು

ಟ್ರಿಕ್ ಆರ್ ಟ್ರೀಟ್

-ಸುಪ್ತದೀಪ್ತಿ

ಹರಿವ ಲಹರಿ

n1494871526_8814ಪ್ರತೀ ವರ್ಷದ ಹಾಗೆ ಈ ವರ್ಷವೂ ಹ್ಯಾಲೋವೀನ್ ಬಂದಿದೆ. ಅದ್ರಲ್ಲೇನು ವಿಶೇಷ ಅಂದಿರಾ? ನಂಗೊತ್ತಿಲ್ಲಪ್ಪ. ಈ ವರ್ಷ ಯಾರ್ಯಾರು ಯಾವ್ಯಾವ ವೇಷ ಭೂಷಣ ತೊಟ್ಟು ಎಲ್ಲೆಲ್ಲಿ ಸುತ್ತಾಡಿ ಏನೇನು ಕ್ಯಾಂಡಿ ಒಟ್ಟುಮಾಡ್ತಾರೋ, ನನಗ್ಗೊತ್ತಿಲ್ಲ. ನಾನಂತೂ ಹೋಗಲ್ಲ, ಯಾವತ್ತೂ ಹೋಗಿಲ್ಲ. ಆದರೆ, ನನ್ನ ಮೊತ್ತ ಮೊದಲ ಹ್ಯಾಲೋವೀನ್ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬೇಕೂಂತಲೇ ಈ ಬರಹ….

ನಾನು ಅಮೆರಿಕಾ ಅನ್ನುವ ಈ ಆಧುನಿಕ ದೇಶಕ್ಕೆ ಕಾಲಿರಿಸಿದ್ದು ೧೯೯೨ ಸೆಪ್ಟೆಂಬರ್ ಉತ್ತರಾರ್ಧದಲ್ಲಿ. ಬೆಂಗಳೂರಲ್ಲಿದ್ದಾಗ ಏನೇನೋ ಓದು, ನೆಂಟರು, ಇನ್ನೂ ಎರಡು ವರ್ಷ ಆಗಿಲ್ಲದ ಮಗು, ಕೆಳಗೆ ಓನರ್ ಆಂಟಿ, ಅವರ ಮಕ್ಕಳು, ಪಕ್ಕದ ಮನೆಯ ಶ್ರೀದೇವಿಯಂಥಾ ರೂಪಿನ ಚಟಪಟ ಮಾತಿನ ಗೆಳತಿ- ಎಲ್ಲವನ್ನೂ ಬಿಟ್ಟು ನಡುರಾತ್ರೆಗೆ ಆಗಿನ ಮದ್ರಾಸಿನಿಂದ ಸಿಂಗಪೂರ್ ಮಾರ್ಗವಾಗಿ ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತ್ತಲಲ್ಲೇ ಇಳಿದ ನೆನಪು. ಸಾಂತಾಕ್ಲಾರಾದಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಹಿಡಿದಿದ್ದರು ಇಪ್ಪತ್ತು ದಿನ ಮೊದಲೇ ಬಂದಿದ್ದ ರಾಯರು.

ನಿಧಾನವಾಗಿ ಸುತ್ತಮುತ್ತಲ ಪರಿಚಯವಾಗುತ್ತಾ, ಇಲ್ಲಿನವರ ವೇಷಭೂಷಣ, ಭಾಷೆಭಾವಗಳ ಹದ ಅರಿಯುವ ಪ್ರಯತ್ನದಲ್ಲಿ ತಿಂಗಳೇ ಉರುಳಿತು. ಹ್ಯಾಲೋವೀನ್ ಹೆಸರು ಕೇಳಿಬಂದಿತು. ನಮ್ಮ ಅಪಾರ್ಟ್ಮೆಂಟಿನ ಮ್ಯಾನೇಜರ್ ಒಳ್ಳೆಯ ಮಹಿಳೆ, ಪ್ಯಾಟ್, ನನ್ನ ಪ್ರಶ್ನೆಗೆ ಅವಳದೇ ಶೈಲಿಯಲ್ಲಿ ಉತ್ತರಿಸಿದರೂ ನನರ್ಥವಾಗಿದ್ದು ಸ್ವಲ್ಪ. ‘ಮಗನಿಗೆ ಏನಾದರೂ ಕಾಸ್ಟ್ಯೂಮ್ ತಗೋ. ನಮ್ಮನೇಗೆ ಟ್ರಿಕ್ ಆರ್ ಟ್ರೀಟಿಗೆ ಕರ್ಕೊಂಡು ಬಾ, ಅವನಿಗೆ ಕ್ಯಾಂಡಿ ಕೊಡ್ತೇನೆ’ ಅಂದಳು ಅವನ ಕೆನ್ನೆ ಸವರುತ್ತಾ. ಅವನಿಗವಳು ಇಷ್ಟದ ‘ಪ್ಯಾಟ್ ಅಜ್ಜಿ’.

ಇವಳಲ್ಲದೆ ನಾವು ಅಲ್ಲಿ ಮಾತಾಡ್ತಿದ್ದದ್ದು ಅಥವಾ ನಮ್ಮನ್ನು ಮಾತಾಡಿಸ್ತಿದ್ದದ್ದು ಪಕ್ಕದ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿದ್ದ ಒಬ್ಬಳು ಎಂಭತ್ತು ವರ್ಷದ ಒಂಟಿ ಮಹಿಳೆ ಷೆರೀನ್ ಮತ್ತವಳ ಗಿಳಿ ಸ್ಯಾಮ್ (ಅವಳ ಪ್ಯಾಟಿಯೋ ಮತ್ತು ರೂಮಿನ ಕಿಟಕಿ ನಮ್ಮ ಅಡುಗೆ ಮನೆಯ ಕಿಟಕಿ ಮತ್ತು ರೂಮಿನ ಕಿಟಕಿಗೆ ಕಾಣಿಸುತ್ತಿತ್ತು, ಮಗ ಒಮ್ಮೊಮ್ಮೆ ಅವಳ ಜೊತೆ ಅಲ್ಲಿಂದಲೇ ‘ಕಿಚಪಿಚ’ ಹರಟುತ್ತಿದ್ದ), ಹಾಗೂ ಅಪಾರ್ಟ್ಮೆಂಟಿನ ಮೈನ್‌ಟೇನೆನ್ಸ್ ಮಾಡುತ್ತಿದ್ದ ಸ್ಕಾಟ್ ಮತ್ತವನ ಮಡದಿ ಡೆಬಿ. ಬೇರೆ ಯಾರ ಪರಿಚಯವೂ ಆಗಿದ್ದಿಲ್ಲ ನಮಗೆ. ಒಂದು ಕಟ್ಟಡದ ಮಹಡಿಯ ಒಂದು ಪಾರ್ಶ್ವದಲ್ಲಿ ಎದುರುಬದುರಾಗಿದ್ದ ನಾಲ್ಕು ಮನೆಗಳಲ್ಲಿ ನಮ್ಮದು ಒಳಬದಿಯ ಮನೆ (ಬೀದಿ ಬದಿಯದ್ದಲ್ಲ).
halloween
ಅಂದು ಶುಕ್ರವಾರ, ಅಕ್ಟೋಬರ್ ಮೂವತ್ತು. ಹ್ಯಾಲೋವೀನಿನ ಮುನ್ನಾದಿನ. ಯಾಕೋ ನನ್ನ ಮೂಡ್ ಕೆಟ್ಟಿತ್ತು (ಯಾಕೇಂತ ನೆನಪಿಲ್ಲ). ಚೆನ್ನಾಗಿ ಜಗಳವಾಡಿ ಕೋಪ ಮಾಡಿಕೊಂಡು ಹಾಲಿನಲ್ಲಿ ಸೋಫಾದಲ್ಲೇ ಕೂತಿದ್ದೆ. ಅಪ್ಪ-ಮಗ ಒಳಗೆ ಮಲಗಿದ್ದರು. ಗಂಟೆ ಇನ್ನೂ ಹತ್ತರ ಆಸುಪಾಸು. ನನ್ನೊಳಗೆ ದುಸುಮುಸು. ಸುಮ್ಮನೇ ಕೂತಿದ್ದೆ. ಮಂಪರು ಹತ್ತಿರಬೇಕು, ಗೊತ್ತಿಲ್ಲ.

ಬಾಗಿಲು ಟಕಟಕಿಸಿದ ಸದ್ದಾಯ್ತು. ಹೋಗಿ ಇಣುಕಿಂಡಿಯಲ್ಲಿ ನೋಡಿದೆ, ಯಾರೂ ಕಾಣಲಿಲ್ಲ. ಮತ್ತೆ ಸೋಫಾದ ಹತ್ರ ಬರುವುದರಲ್ಲಿ ಇನ್ನೊಮ್ಮೆ ಟಕಟಕ. ಮತ್ತೆ ಇಣುಕಿಂಡಿಯಲ್ಲಿ ಯಾರೂ ಕಾಣಲಿಲ್ಲ. ಬಾಗಿಲಿಗಿದ್ದ ಸುರಕ್ಷೆಯ ಸರಪಳಿ ಸಿಕ್ಕಿಸಿತ್ತು. ಹಾಗೆಯೇ ಎರಡಿಂಚು ತೆರೆದೆ. ನನ್ನ ಮುಂದೆ, ಹೊರಗಿನ ಪ್ಯಾಸೇಜಿನಲ್ಲಿ ಮೂರಡಿ ಎತ್ತರದ, ಬಿಳಿ ಬಟ್ಟೆ ಪೂರ್ತಿ ಮುಚ್ಚಿಕೊಂಡ, ಓಲಾಡುವ ಒಂದು ಆಕೃತಿ. ಮೇಲೆ-ಕೆಳಗೆ-ಎಡ-ಬಲಕ್ಕೆ ಅನಾಯಾಸವಾಗಿ ಓಲಾಡುತ್ತಿದ್ದ ಅದನ್ನು ಕಂಡದ್ದೇ ಬಾಗಿಲನ್ನು ಠಪ್ಪೆಂದು ರಾಚಿ, ಕಿಟಾರನೆ ಚೀರಿ ಅಲ್ಲೇ ಬಾಗಿಲ ಬುಡದಲ್ಲೇ ಬಿದ್ದದ್ದು ಮಾತ್ರ ಚೆನ್ನಾಗಿ ನೆನಪಿದೆ, ಇನ್ನೂ.

‘ಜ್ಯೋತಿ, ಏಳು, ಏನಾಯ್ತು? ಇಲ್ಯಾಕೆ ಮಲಗಿದ್ದೀ? ಕಿರುಚಿದ್ದು ಯಾಕೆ? ಕನಸು ಬಿತ್ತಾ?…? ಪ್ರಶ್ನೆಗಳ ಹಿಂದೆ ಕಂಡ ಇವರ ಮುಖ ಇನ್ನಿಲ್ಲದ ನೆಮ್ಮದಿ ಕೊಟ್ಟದ್ದೂ ಸುಳ್ಳಲ್ಲ. ಏನೊಂದು ಮಾತೂ ಬಾಯಿಗೆ ಬರುತ್ತಿರಲ್ಲಿಲ್ಲ. ಸ್ವರವೇ ಹೊರಡುತ್ತಿರಲ್ಲಿಲ್ಲ. ಎಬ್ಬಿಸಿ ಸೋಫಾಕ್ಕೆ ಕರ್ಕೊಂಡು ಹೋಗಿ ಕೂರಿಸಿದರು. ನೀರು ತಂದುಕೊಟ್ಟರು. ‘ಕನಸು ಬಿತ್ತಾ?’ ಪ್ರಶ್ನೆಗೆ ಇಲ್ಲವೆಂದೆ. ಕಂಡದ್ದನ್ನು ನಿಧಾನವಾಗಿ ಬಿಡಿಬಿಡಿಯಾಗಿ ವಿವರಿಸಿದೆ. ಹೊರಗೆ ಹೋಗಿ ನೋಡಿ ಬಂದರು. ಯಾರೂ ಇಲ್ಲವೆಂದರು. ‘ಅದು ಕನಸೇ ಆಗಿರಬೇಕು, ಇಲ್ಲೆಲ್ಲ ಹಾಗೆ ಸುಮ್ಮಸುಮ್ಮನೆ ಹೆದರಿಸುವವರು ಯಾರೂ ಇಲ್ಲ’ವೆಂದು ಇವರ ವಾದ. ನಾನು ಕಂಡದ್ದು ಕನಸಲ್ಲ, ಯಾರದೋ ಪ್ರ್ಯಾಂಕ್ ಅಂತಲೇ ನನ್ನ ನಂಬಿಕೆ. ಅಲ್ಲೆಲ್ಲ ಸುಮಾರು ಹದಿಹರೆಯದ ಮಕ್ಕಳು ಇದ್ದರು. ಎಲ್ಲರೂ ಕೆಲವೊಂದು ಸಂಜೆ ಹೊತ್ತು ಗದ್ದಲವೆಬ್ಬಿಸುತ್ತಿದ್ದದ್ದು ಸಾಮಾನ್ಯ. ಆದ್ದರಿಂದ, ಈ ಅಪಾರ್ಟ್ಮೆಂಟಿಗೆ ಹೊಸಬರಾದ ನಮ್ಮನ್ನು ಹೆದರಿಸಲು ಈ ಆಟ ಹೂಡಿರಬಹುದೆಂದು ನನ್ನೆಣಿಕೆ. ಮಕ್ಕಳಾಟಕ್ಕೆ ಗೊತ್ತುಗುರಿಯಿದೆಯೆ?

ಇದೆಲ್ಲ ನಡೆದು ಹದಿನೇಳು ವರ್ಷ ಸಂದಿದೆ. ಕಾಲ ಬೇರೆಬೇರೆ ಪರೀಕ್ಷೆಗಳನ್ನು ನೀಡಿದೆ. ಎಲ್ಲವನ್ನೂ ದಾಟಿ ಬಂದಿದ್ದೇವೆ. ಆದರೂ ಇದನ್ನು ಮರೆಯಲಾರೆ. ಅಂದು ನಿಜವಾಗಿಯೂ ಏನಾಯಿತು, ಯಾರು ಅಂಥ ಆಟವಾಡಿದ್ದು, ಯಾಕೆ ಎನ್ನುವುದಕ್ಕೆ ಮಾತ್ರ ನನ್ನ ಬಳಿ ಇನ್ನೂ ಉತ್ತರವೇ ಇಲ್ಲ

ಇನ್ನಷ್ಟು ಗುಜರಿ

ಹರಿದ ಚಪ್ಪಲಿ, ಮುರಿದ ಬಕೀಟುಗಳ ನಡುವೆ…

ಬಿ ಎಂ ಬಷೀರ್

gujari_head44

ನಾನು ಬರೆದ ಒಂದಿಷ್ಟು ಚಿಲ್ಲರೆ ಕತೆ, ಕವಿತೆಗಳನ್ನೆಲ್ಲ ಕಾಲ ತನ್ನ ತಕ್ಕಡಿಯಲ್ಲಿಟ್ಟು ತೂಗಿ ‘ತಕೋ…ಇದರ ಬೆಲೆ ಇಷ್ಟು’ ಎಂದು ಎತ್ತಿ ಮೂಲೆಗೆಸೆದಿವೆ. ಹರಿದ ಚಪ್ಪಲಿ, ಮುರಿದ ಬಕೀಟು, ನಜ್ಜುಗುಜ್ಜಾದ ಡಬ್ಬಗಳಿಂದಾವೃತವಾದ ಗುಜರಿ ಅಂಗಡಿಯ ರಾಶಿಗಳಲ್ಲಿ ಬೆಲೆಬಾಳುವಂತದ್ದೇನಾದರೂ ಇರಬಹುದೋ ಎಂದು ತಡಕಾಡುವ ಗುಜರಿ ಆಯುವ ಹುಡುಗನ ಆಸೆ ಮಾತ್ರ ಇನ್ನೂ ಹಾಗೇ ಇದೆ(ನಂಬಿಕೆ). ಗುಜರಿ ಅಂಗಡಿಯ ಮಧ್ಯದಲ್ಲಿ ರಾಜಮಾನವಾಗಿರುವ ತಕ್ಕಡಿಯ ಮುಳ್ಳುಗಳು ನನ್ನಾಳದಲ್ಲಿ ಎಲ್ಲೋ ಆಗಾಗ ಕದಲುತ್ತವೆ. ಏನೋ ಬರೆಯಬೇಕು ಅನ್ನಿಸುತ್ತದೆ. ಬರೆಯಬೇಕು ಬರೆಯಬೇಕು…ಹೀಗೆ ಭಾವಿಸುತ್ತಲೇ ಬದುಕುತ್ತಾ ಬಂದಿದ್ದೇನೆ…
ಶಬ್ದಗಳನ್ನು ರಕ್ತದಂತೆ ಕಕ್ಕಬೇಕು. ಎದೆಯ ಭಾರವನ್ನು ಹಗುರ ಮಾಡಬೇಕು. ಆದರೆ, ಪ್ರತಿ ಕವಿತೆಗಳನ್ನು ಬರೆದು ಮುಗಿಸಿದಾಗಲೂ, ನಾನು ಬರೆಯಲು ಹೊರಟದ್ದು ಇದಾಗಿರಲಿಲ್ಲ ಎಂಬ ಗಾಢ ನಿರಾಶೆ. ಗರ್ಭಪಾತವಾದ ಹೆಣ್ಣಿನ ಹತಾಶೆ…ಖಿನ್ನತೆ! ಬರಹ ಸುಖ ಕೊಡುತ್ತದೆ ಎಂದು ಹೇಳಿದ ಆ ಪುಣ್ಯಾತ್ಮ ಯಾರೋ!? ಎಲ್ಲವನ್ನೂ ಬಿಟ್ಟು ಹೀಗೇ…ಪತ್ರಿಕೆ, ರಾಜಕೀಯ ಸಮಾಜ, ದೇಶ ಎಂಬಿತ್ಯಾದಿ ಹೊರಗಿನ ಗದ್ದಲಗಳಲ್ಲಿ ಕಳೆದುಹೋಗುವುದೇ ಕೆಲವೊಮ್ಮೆ ಹೆಚ್ಚು ನೆಮ್ಮದಿ ಖುಷಿ ಕೊಡುತ್ತದೆ. ನನ್ನೊಳಗಿನ ಧ್ವನಿಯೇ ಕೇಳದಷ್ಟು ದೂರ ನಡೆದೇ ಬಿಡಬೇಕು ಎನ್ನುವ ಬಯಕೆ. ಆದರೂ ಎಲ್ಲೋ ಆಳದಲ್ಲಿ ಬಾಯಾರಿದ ಮಗುವೊಂದು ಅತ್ತೂ ಅತ್ತೂ ಸುಸ್ತಾಗಿ ಏದುಸಿರು ಬಿಡುತ್ತಿರುವಂತೆ ಅನ್ನಿಸುತ್ತದೆ…ಒಮ್ಮೊಮ್ಮೆ ತಟ್ಟನೆ ತಲ್ಲಣಿಸಿ ನಿಂತು ಬಿಡುತ್ತೇನೆ.

ಈ ಬ್ಲಾಗ್ ಎನ್ನುವುದು, ಶಬ್ದಗಳ ಸಂತೆಯಿಂದ ಒಂದಿಷ್ಟು ದೂರದಲ್ಲಿ ನಾನು ತೆರೆದ ಗುಜರಿ ಅಂಗಡಿ. ಸಂತೆಗಳೆಲ್ಲ ಮುಗಿದ ಬಳಿಕ ದೊಡ್ಡದೊಂದು ಗೋಣಿ ಚೀಲದೊಂದಿಗೆ ಸಂತೆಯ ಮೈದಾನದಲ್ಲಿ ಅಳಿದುಳಿದ ಏನೇನನ್ನೋ ಹುಡುಕುವ, ಆಯ್ದು ಚೀಲದೊಳಗೆ ತುಂಬಿಸುವ ಹುಡುಗನಂತೆ ನನ್ನ ಮಾತುಗಳನ್ನು ತುಂಬಿಸಿ ಈ ಗುಜರಿ ಅಂಗಡಿಯಲ್ಲಿ ವ್ಯಾಪಾರಕ್ಕಿಡಲು ಹೊರಟಿದ್ದೇನೆ. ನನ್ನ ಕತೆ, ಕವಿತೆ ಮತ್ತು ತೀರಾ ಒಳಗಿನ ಮಾತುಗಳನ್ನು ಈ ಬ್ಲಾಗ್ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ.

ಒಂದು ರೀತಿಯಲ್ಲಿ ಹೇಳದೆ ಕೇಳದೆ ಮನೆ ಬಿಟ್ಟು ಹೋದ ಬೇಜವಾಬ್ದಾರಿ ಮಗ ನಾನು. ಮತ್ತೆ ಕವಿತೆಯ ಬಾಗಿಲು ತಟ್ಟುತ್ತಿದ್ದೇನೆ.
ತುಂಬಾ ದಿನಗಳ ಹಿಂದೆ ನನ್ನ ಗೆಳೆಯನೊಬ್ಬ ಕೇಳಿದ್ದ “ನೀನು ಪಕ್ಕಾ ಬ್ಯಾರಿ ಅಂದರೆ ಬ್ಯಾರಿ ಮಾರಾಯ. ಒಂದೇ ಒಂದು ಬಾಳೇ ಗೊನೆಯನ್ನು ಹಿಡಿದುಕೊಂಡು ಅದೆಷ್ಟು ಸಂತೆಗಳಲ್ಲಿ ವ್ಯಾಪಾರ ಮಾಡಿದ್ದೀಯ?”

ಆ ಮಾತಿನಲ್ಲಿ ಸತ್ಯ ಇದೆ ಅನ್ನಿಸುತ್ತದೆ. ‘ಬಾಳೆ ಗಿಡ ಗೊನೆ ಹಾಕಿತು” ನನ್ನ ಒಂದೇ ಒಂದು ಕತಾ ಸಂಕಲನ.(ಲೋಹಿಯಾ ಪ್ರಕಾಶನ ಇದನ್ನು ಹೊರತಂದಿದೆ. ಮೈಸೂರಿನ ಚದುರಂಗ ಪ್ರತಿಷ್ಠಾನದವರು ಇದಕ್ಕೊಂದು ಪ್ರಶಸ್ತಿಯನ್ನು ನೀಡಿದ್ದಾರೆ. ಜೊತೆಗೆ ಹತ್ತು ಸಾವಿರ ರೂಪಾಯಿಯನ್ನೂ ಕೂಡ) ಆದರೂ ನನ್ನ ಕೆಲವು ಗೆಳೆಯರು ಆಗಾಗ ‘ಹೊಸ ತಲೆಮಾರಿನ ಕತೆಗಾರ’ ಎಂದೆಲ್ಲ ಕೊಂಡಾಟ ಮಾಡುವುದಿದೆ. ಬಹುಶಃ ಅದು ಈ ಗೆಳೆಯನ ಹೊಟ್ಟೆಕಿಚ್ಚಿಗೆ ಕಾರಣವಿರಬೇಕು. ನಾನು ಕೆಲ ಸಮಯ ಮುಂಬಯಿಯಲ್ಲಿದ್ದೆ. ಸುಮಾರು ಐದು ವರ್ಷ. ಮುಂಬೈಯ ಧಾರಾವಿಯಲ್ಲಿ. ಆಗ ಒಂದಿಪ್ಪತ್ತೈದು ಕವಿತೆಗಳನ್ನು ಒಟ್ಟು ಸೇರಿಸಿ ಪುಸ್ತಕ ಮಾಡಿದ್ದೆ. “ಪ್ರವಾದಿಯ ಕನಸು” ಎಂದು ಹೆಸರು ಕೊಟ್ಟಿದ್ದೆ. ಆಗ ಅದಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಸಿಕ್ಕಿದಾಗ ನನಗಾದ ಖುಷಿ, ಸಂಭ್ರಮಗಳ ಬಗ್ಗೆಯೇ ಯೋಚಿಸುತ್ತೇನೆ. ಈಗ ಯಾಕೆ ಅದೇ ತರಹ ಖುಷಿ ಸಂಭ್ರಮಗಳಿಲ್ಲ. ಒಂದು ಕವಿತೆ ಪತ್ರಿಕೆಯಲ್ಲಿ ಪ್ರಕಟವಾದರೆ ಆಗೆಲ್ಲ ಅದೆಷ್ಟು ರೋಮಾಂಚನ…ಸಡಗರ..ಈಗ ಮಾತ್ರ…ಊಹೂಂ…

ಇದೀಗ…ಕೈಯಲ್ಲಿ ಒಂದಿಷ್ಟು ಚಿಲ್ಲರೆ ಕತೆಗಳು, ಕವಿತೆಗಳನ್ನು ಇಟ್ಟುಕೊಂಡು ಗುಜರಿ ಅಂಗಡಿಯ ಮುಂದೆ ನಿಂತಿದ್ದೇನೆ. ತಕ್ಕಡಿಯೋ ಅದನ್ನು ನಿಕೃಷ್ಟ ಕಣ್ಣಲ್ಲಿ ನೋಡಿ ತಲೆಯಾಡಿಸುತ್ತಿದೆ….ನನ್ನ ಬ್ಲಾಗಿನ ಕುರಿತಂತೆ ಇಷ್ಟು ಸಾಕು ಅನ್ನಿಸುತ್ತದೆ.
ದಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕೆಯಲ್ಲಿ ಸಂಪಾದಕೀಯ, ಸಿನಿಮಾ, ವ್ಯಂಗ್ಯ, ಲೇಖನ, ವಿಮರ್ಶೆ, ವರದಿ, ಸುದ್ದಿ ಎಂದು ಪ್ರತಿ ವಾರ ಬರೆಯುತ್ತಲೇ ಇರುತ್ತೇನೆ. ಅದಾವುದರ ಭಾರವನ್ನೂ ಇಲ್ಲಿ ನಿಮ್ಮ ಬೆನ್ನ ಮೇಲೆ ಹೊರಿಸಲಾರೆ ಎಂಬ ಭರವಸೆಯನ್ನು ನೀಡುತ್ತೇನೆ

Previous Older Entries

%d bloggers like this: