ಮತ್ತೆ ನೆನಪಾದರು ಮಹಮ್ಮದ್ ರಫಿ..

ನಾಳೆ ಜುಲೈ 31 ಕ್ಕೆ ಮೊಹಮ್ಮದ್ ರಫಿ ಕಳೆದುಹೋಗಿ ಮೂವತ್ತು ವರ್ಷವಾಯಿತು ಆತನ ಎದೆಯಾಳದ ಹಾಡೊಂದು ಕೇಳಿ ರಫಿಯನ್ನು ನೆನಪಿಸಿಕೊಳ್ಳಿ.

ಯಾರಯ್ಯಾ ಇಲ್ಲಿ ನಿನ್ನ ಸುಖ ದುಃಖದ ಲೆಕ್ಕವಿಟ್ಟವರು?

ಚರಿತಾ

ನನ್ನ ಪಾಡಿಗೆ ನಾನು

ಬಹುಷಃ ನಾನು ನಾನಾಗಿಯೇ ಇರುವಂತೆ ನನ್ನನಿರಿಸುವ ಕೆಲವೇ ಹತ್ತಿರದ ಜೀವಗಳಲ್ಲಿ ಇವರೂ ಒಬ್ಬರು. ಮನಸು ದಿಕ್ಕಾಪಾಲು ಓಲಾಡುವಾಗೆಲ್ಲ ಮತ್ತೆ ಬದುಕಿನ ಸಡಗರ ಮತ್ತು ಮಿತಿಗಳನ್ನು ಕವಿತೆಯೆಂಬ ಸಂಭ್ರಮದಲ್ಲಿ ಸುತ್ತಿ ಕೈಗಿಡುತ್ತ ಕಲ್ಲುಸಕ್ಕರೆಯ ನಗೆ ನಕ್ಕವರು. ನನ್ನನ್ನು ಬಹಳ ಚಿಕ್ಕವಳಿದ್ದಾಗಿಂದ ಕಂಡವರು.

ಅವರೊಂದಿಗಿನ ಹರಟೆಯಲ್ಲದ ಹರಟೆ ಯಾವತ್ತೂ ನನ್ನ ಬೆರಗನ್ನು ಹೆಚ್ಚುಗೊಳಿಸುವುದೇ ಅಗಿತ್ತು…ಚಿತ್ರದ ಕ್ಯಾನ್ವಾಸನ್ನು ಎಳೆ ಎಳೆಯಾಗಿ ಬಿಡಿಸುತ್ತ… ಆ ಬಿಡಿಸುವ ನಿಧಾನದಲ್ಲಿ ಒಂದಿಷ್ಟೂ ಬೇಸರಿಸದೆ ಮತ್ತೆ ಅದನ್ನು ಜೋಡಿಸುತ್ತ…

“ಬಹುಷಃ ನಮ್ಮಿಬ್ಬರ ಚರ್ಚೆ ವಿಪರೀತ ಗಹನವಾದ್ದು ಮತ್ತು ಮುಖ್ಯವಾದ್ದು” ಎಂಬುದನ್ನು ಅವರು ನೆನಪಿಸುತ್ತಿದ್ದ ಬಗೆಗೆ ತಲೆದೂಗಿ ಮತ್ತಷ್ಟು ಬೆರಗು ತುಂಬಿಕೊಳ್ಳುತ್ತ ನಾನು ನಾನಾಗಿಬಿಡುತ್ತಿದ್ದುದು ಮತ್ತೆ ನೆನಪಾಯ್ತು.

ಮಂಜುನಾಥ್ ಮಾಮ – ನನ್ನ ಕೆಲವೇ ’ಮಾಮ’ಂದಿರಲ್ಲಿ ಒಬ್ಬರು ! ” ಅಪ್ಪ ನಿಮ್ಮೊಂದಿಗೆ ಇರುವಷ್ಟು ಸಲುಗೆಯಿಂದ ನನ್ನೊಂದಿಗೆ ಇರೋದಿಲ್ಲ” – ಎಂಬ ನನ್ನ ಸೀರಿಯಸ್ ಕಂಪ್ಲೇಂಟ್ ಬಗ್ಗೆ ಹೀಗೆ ತಿಳಿಯ ಹೇಳಿದ್ದರು : ” ನಿನ್ನೊಂದಿಗೆ ಗೆಳೆತನದ ಸಲುಗೆ ನಿನ್ನ ಗೆಳೆಯನಿಗೆ ಮಾತ್ರ ಸಾಧ್ಯ ಆಗಬಹುದು, ಅಪ್ಪನಿಗೆ ನಿನ್ನ ಅಪ್ಪನಾಗಿ ಅವರದೇ ಆದ ಮಿತಿಗಳಿವೆ.” ಈಗಲೂ ನನ್ನ ಗೆಳೆಯನಲ್ಲಿ ನಾನು ಹುಡುಕುತ್ತಿರುವುದು ಬಹುಷಃ ಈ ಅಪ್ಪ ಮತ್ತು ಮಾಮನನ್ನೇ ಇರಬಹುದು !

“ಹಾಡಿದ್ದಷ್ಟೇ ಸಂಗೀತವಲ್ಲ,..ಬರೆದದ್ದಷ್ಟೇ ಕವನ ಅಲ್ಲ; ಹಾಡಿದ್ದರಿಂದ ಸಂಗೀತದ ಇರವು ತಿಳಿವುದು, ಅಗಾಧವಾಗಿ ಇರುವ ಕಾವ್ಯವನ್ನು ತೋರುವುದಕ್ಕಷ್ಟೆ ಕವನ ಬರೆವುದು… ಎನ್ನುವ ಇವರೊಂದಿಗಿನ ನಂಟೆಂದರೆ ನನ್ನ ನಾನಿರುವಂತೆ ತಿಳಿದು ನಾನಾಗುವುದು !

ನೆನ್ನೆ ಇಲ್ಲಿನ ಪುಸ್ತಕ ಪ್ರಾಧಿಕಾರದ ಮಳಿಗೆಯಲ್ಲಿ ಇವರ ಕವನ ವಾಚನವಿದ್ದದ್ದರಿಂದ ಮೊದಲಬಾರಿಗೆ ಮಳಿಗೆಯ ’ತಿಂಗಳ ಕಾರ್ಯಕ್ರಮ’ಕ್ಕೆ ಹೋಗಿದ್ದೆ. ಜೀವನಾನುಭವ ಇವರಲ್ಲಿ ಕವಿತೆಯಾಗುವ ಪರಿ ನಿಜಕ್ಕೂ ಸಂಭ್ರಮದ ಆಚರಣೆಯಂತೆ ಕಾಣುತ್ತದೆ. ಬಹುಷಃ ನೋವನ್ನೂ ಸಂಭ್ರಮಿಸಿಕೊಳ್ಳುವ ತೀವ್ರ ಪ್ರೀತಿಯಿಂದ ಮಾತ್ರ ಇದು ಸಾಧ್ಯ.

ಅನುಭವದ ವಿವರಗಳು ತಮ್ಮ ಕವನಕ್ಕಾಗಿಯೇ ಹುಟ್ಟಿವೆಯೇನೋ ಎಂಬಂತೆ ಪದಗಳನ್ನು ಮುದ್ದಿಸುತ್ತ ತಮ್ಮ ಜೀವನದ ಪುಟಗಳನ್ನು ಮುತ್ತಿಟ್ಟು, ಅಮ್ಮನಂತೆ ಅವುಗಳನ್ನೆಲ್ಲ ಕಾಪಿಡುತ್ತ… ತನ್ನ ರಸಪಾಕದ ರುಚಿಗೆ ತಾನೇ ಹಿಗ್ಗುತ್ತ, ಕಟ್ಟಿಟ್ಟ ಬುತ್ತಿಯನ್ನು ನಮ್ಮೆಲ್ಲರಿಗು ಇಷ್ಟಿಷ್ಟೆ ಹಂಚಿ,.. ನಮ್ಮ ಸಂತೃಪ್ತಿಯ ಚಹರೆಯನ್ನು ಕಾಣಲು ಹಾತೊರೆಯುವ ಮಹಾತಾಯಿಯಂತೆಯೇ ಕಂಡರು ಇವರು..ಬಡಿಸಿದ ಇಷ್ಟೇ ಪಾಕದ ರುಚಿಯಲ್ಲಿ ಎಷ್ಟೆಲ್ಲ ಅಡಗಿದೆ ಕಂಡೆಯಾ ಕಂದಾ ಅನ್ನೋಹಾಗೆ !

ಅಗಾಧ ಪ್ರೀತಿ ಮತ್ತು ಬದುಕಿನ ತೀವ್ರತೆ, ಜೊತೆಗೆ ಆತ್ಮಪ್ರತ್ಯಯ – ಈ ಎಲ್ಲದರ ಸಾರಸಂಭ್ರಮ ಈ ಕವಿ. ’ಕವಿ’ ಎಂಬ ವಿಶೇಷಣವನ್ನು ಯಾವುದೇ ಕ್ಲೀಷೆ, ಕೃತಕತೆ ಮತ್ತು ಮಿತಿಗೆ ಒಳಪಡಿಸದೆ ಬಳಸುವುದಾದರೆ, ಅದು ಕವಿ ಎಸ್. ಮಂಜುನಾಥರಿಗೇ ಸಲ್ಲತಕ್ಕದ್ದು !

More

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

-ದಿನಕರ ದೇಸಾಯಿ

200px-DinakaraDesai

ದಿನಕರನ ಚುಟುಕ

ಇಂದ್ರ ದೇವನ ಮೊನ್ನೆ ಮಾಡಿ ಟೆಲಿಫೋನು

ಕೇಳಿದನು:ದೇಸಾಯಿ, ಹೇಗಿದ್ದಿ ನೀನು?

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚು

ಅಂಕೋಲೆ ಹುಡುಗಿ

ಗೋಕರ್ಣದಿಂದ ಉತ್ತರಕ್ಕೆ ಅಂಕೋಲೆ

ಇಲ್ಲುಂಟು ದೇಸಾಯಿ ದಿನಕರನ ಬಾಲೆ

ಎಲ್ಲರನ್ನೂ ಕೆಣಕುವಳು ಈ ತುಂಟ ಹುಡಗಿ

ಹಿಡಿಯ ಹೋದರೆ ಕುಳಿತುಕೊಳ್ಳುವಳು ಅಡಗಿ

ಅಂಕೋಲೆ ಉಪ್ಪು

ಗೃಹಮಂತ್ರಿ ಹೇಳಿದರು: ಎಲೆ ಚುಟುಕ ಜೋಕೆ

ಅತ್ಯಂತ ಉಗ್ರವಾಗಿದೆ ನಿನ್ನ ಟೀಕೆ.

ಚುಟುಕವೆಂದಿತು: ನನಗೆ ಹಾಕುವೆನೆ ಸೊಪ್ಪು

ನಾನು ಅಂಕೋಲೆ ಸತ್ಯಾಗ್ರಹದ ಉಪ್ಪು.

ಅಹಿಂಸಾಮಯ ಯುದ್ಧ

ಲೇಖನಿಯ ಹಿಡಿದು ಸರಕಾರದ ವಿರುದ್ಧ

ಪ್ರತಿ ದಿವಸವೂ ನಾನು ಹೂಡಿದೆನು ಯುದ್ಧ.

ಬಂದೂಕುಗಳ ಬದಲು ಚುಟುಕಗಳ ಬಾಣ.

ಎಷ್ಟು ಚುಚ್ಚಿದರೇನು ? ಬಿಡಲಿಲ್ಲ ಪ್ರಾಣ!

ಅಂಬಿಕಾತನಯದತ್ತರ ಕೃತಿ

ಅಂಬಿಕಾತನಯದತ್ತರ ಕೃತಿಯನೋದು

ಭಾವನಾಲೋಕದಲಿ ಅದು ಒಂದು ಜಾದು.

ಅರಗಳಿಗೆಯಲಿ ನೀನು ಮಂಗಳಕ್ಕೆ ಹಾರಿ.

ಕುಳಿತುಕೊಳಬಹುದು ಬ್ರಹ್ಮಾಂಡಗಳನೇರಿ.

ಮಣಿಕಾಂತ್ ಬರೆಯುತ್ತಾರೆ: …..ಡಿಮ್ಯಾಂಡಪ್ಪೊ ಡಿಮ್ಯಾಂಡು

ಮೀಸೆ ಹೊತ್ತ ಗಂಡಸಿಗೆ…

ಚಿತ್ರ: ಅವಳೇ ನನ್ನ ಹೆಂಡ್ತಿ. ಸಾಹಿತ್ಯ-ಸಂಗೀತ: ಹಂಸಲೇಖ.

ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೊ ರಿಮ್ಯಾಂಡು

ಎಷ್ಟು ಕೊಟ್ರು ಸಾಲಲ್ಲ ಬೀಗತನ ಮುಗಿಯಲ್ಲ

ತಾಳಿಯಿನ್ನು ಕಟ್ಟಿಲ್ಲ ಮಾತುಕತೆ ಮುಗಿದಿಲ್ಲ

ಹೆಣ್ಣಿಗೊಂದು ತಾಳಿಕಟ್ಟೊ ಗಳಿಗೆಯಿನ್ನು ಕೂಡಿಬಂದಿಲ್ಲಾ ||ಪ||

ಹೆಣ್ಣು ಕೊಟ್ಟ ಮಾವನು ಕಣ್ಣುಕೊಟ್ಟ ದೇವನು

ಹೆಣ್ಣು ಹೆತ್ತ ತಪ್ಪಿಗೆ ಕಾಲಿಗೇ ಬಿದ್ದರೋ…

ಸಾಲ ಸೋಲ ಮಾಡಿಯೋ ಚಕ್ರಬಡ್ಡಿ ನೀಡಿಯೋ

ದುಡ್ಡು ತಂದು ಒಟ್ಟಿಗೇ ಗಂಡಿಗೇ…. ಕೊಟ್ಟರೋ…

ಸೂಟು ಬೂಟು ಬೇಕಂತಾನೆ, ವಾಚು ಉಂಗ್ರ ಎಲ್ಲಂತಾನೆ

ಸ್ಕೂಟ್ರು ತಂದು ನಿಲ್ಸಂತಾನೆ, ಮದುವೆ ಆಮೇಲಂತಾನೆ

ಮಾತು ಕತೆ ಇನ್ನೂ ಮುಗ್ದಿಲ್ಲಾ….ಓ….

ಹೆಣ್ಣಿಗೊಂದು ತಾಳಿಕಟ್ಟೋ ಪುಣ್ಯವಂತು

ಇನ್ನೂ ಕೂಡಿ ಬಂದಿಲ್ಲಾ || ಮೀಸೆ ಹೊತ್ತ||

ನಿಂತು ಹೋದ ಮದುವೆಗೆ, ಬಂದು ಸೇರಿದವರಿಗೆ

ಮದುವೆ ಊಟದಡಿಗೆ ಸಂಡಿಗೆ ಚಿಂತೆಯೋ

ದೇಶದಲ್ಲಿ ತಿನ್ನಲು ಅನ್ನವಿಲ್ಲದಿರಲು

ದಂಡಪಿಂಡಗಳಿಗೆ ಅನ್ನದಾ ಸಂತೆಯೋ ಓ…

ಬಾಳೆದಿಂಡು ಬಾಡೇಹೋಯ್ತು ತೋರಣವು ಒಣಗೇ ಹೋಯ್ತು

ತೆಂಗಿನ್‌ಕಾಯ್ ನಿದ್ದೆ ಮಾಡ್ತು, ತಾಳಿಯಂತು ಯೋಚ್ನೇಗ್ ಬಿತ್ತು

ಅಕ್ಷತೆಗೆ ಕಾಲ ಬಂದಿಲ್ಲಾ… ಓ….

ಹೆಣ್ಣಿಗೊಂದು ತಾಳಿ ಕಟ್ಟೊ ಯೋಗವಂತೂ ಇಲ್ವೇ ಇಲ್ಲ ||೨||

ವರದಕ್ಷಿಣೆಯಾಗಿ ಉಂಗುರ ಕೊಡಲಿಲ್ಲ ಎಂಬ ಕಾರಣಕ್ಕೆ, ಮಾಡಿಸಿದ್ದ ಜೈನು ಚನ್ನಾಗಿಲ್ಲ ಎಂಬ ಕಾರಣಕ್ಕೆ, ಹೆಣ್ಣಿಗೆ ಜಾಸ್ತಿ ಒಡವೆ ಹಾಕಿಲ್ಲ ಎಂಬ ಕಾರಣಕ್ಕೆ ತಾಳಿ ಕಟ್ಟಲು ನಿರಾಕರಿಸಿದ ಭೂಪತಿಗಳಿದ್ದಾರೆ. ಅಷ್ಟೇ ಅಲ್ಲ, ಕೇಳಿದಷ್ಟು ವರದಕ್ಷಿಣೆಯಲ್ಲಿ ಕೆಲವೇ ಸಾವಿರ ರೂಪಾಯಿ ಕಡಿಮೆ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಹುಡುಗಿಯ ತಂದೆಯನ್ನು ಎಡಗಾಲಲ್ಲಿ ಒದ್ದು ಹೋದವರಿದ್ದಾರೆ.

More

ಕಣ್ಣು ಕಾಣುವ ಹಾಗೇ…

ಕೃಪೆ :ಕುಂಟಿನಿ


ಕಣ್ಣುಗಳೇ ನಿಮಗೆ ವಂದನೆ..
ಹುಟ್ಟಿದೊಡನೆ ಮುಚ್ಚಿಕೊಂಡು
ಅರೆ ಕಾಲ ಈ ಲೋಕದ ಸಸ್ಪೆನ್ಸ್ ಉಳಿಸಿಕೊಟ್ಟದ್ದಕ್ಕೆ.
ಹಾಗೆ ನೀವು ತೆರೆಯದೇ ಇದ್ದ ಕಾರಣಕ್ಕೆ ನನಗೆ ಮೊದಲು ಕಂಡದ್ದು ನನ್ನ ಅಮ್ಮ.
ಇಲ್ಲವಾದರೆ ನಾನು ಕಾಣಬೇಕಿತ್ತು ಆ ದಾದಿಯ ಮೊಮ್ಮ
ಅಥವಾ ಆ ಡಾಕ್ಟರನ ಕರ್ಮ.
ಕಣ್ಣುಗಳೇ ನನಗೆ ಅಕ್ಷರವ ಕಾಣಿಸಿದ್ದು ನೀವು.
ನೀವು ಅವುಗಳನ್ನು ಕಾಣಿಸಿದ್ದಕ್ಕೆ ತಾನೇ ನಾನು ಇಂದು ಕವಿಯಾಗಿರುವುದು
ಪಂಡಿತನಾಗಿರುವುದು
ಪಾರಂಗತನಾಗಿರುವುದು
ಇಷ್ಟೆಲ್ಲಾ ಜ್ಞಾನ ಎಂಬ ಲೊಳಲೊಟ್ಟೆಯನ್ನು ಕಟ್ಟಿಕೊಂಡಿರುವುದು
ಕಾಯಿಲೆಗಳಿಗೆ ಹೆದರುವುದು
ಅಮ್ಮನ್ನು ಗದರುವುದು
ಅಪ್ಪನಿಗೆ ಏನೇನೂ ನಾಲೇಜು ಇಲ್ಲ ಎಂದು ಬೈಯುವುದು
ಅಮೇರಿಕಾವೇ ಸ್ವರ್ಗ ಎಂದು ನಂಬಿರುವುದು.
ಕಣ್ಣುಗಳೇ ನೀವು ನನಗೆ ಕಾಡನ್ನು ತೋರಿಸಿದಿರಿ.
ಹಾಗಾಗಿ ನನಗೆ ಬೆಂಗಾಡು ಸುಡುಸುಡು ಎನಿಸುವುದು
ಹಕ್ಕಿಗಳ ಪುಕ್ಕದಲ್ಲಿ ಕೆತ್ತಿದ ಶಿಲ್ಪ ಕಾಣುವುದು
ಕಣ್ಣುಗಳೇ ನನಗೆ ಬಾನನ್ನು ಕಾಣಿಸಿದಿರಿ
ನಕ್ಷತ್ರಗಳನ್ನು ಹೆಕ್ಕಿ ತಾ ಎಂದು ದೃಷ್ಟಿಯ ಜೊತೆ ಸವಾಲನ್ನು ಹುಟ್ಟಿಸಿದಿರಿ
ಅದಕ್ಕೇ ತಾನೇ ನಾನು ಈಗಲೂ ರಾತ್ರಿ ಕತ್ತಲಿನ ಜೊತೆ ಪಲ್ಲಂಗ ಏರುವುದು
ಹಗಲಿನ ಸೂರ್ಯನ್ನು ಸಮುದ್ರಕ್ಕೆ ದೂಡುವುದು
ಕಣ್ಣುಗಳೇ ನನಗೆ ಹುಡುಗಿಯರ ಚೆಲುವನ್ನು ಕಲಿಸಿದಿರಿ
ಅದಕ್ಕಾಗಿಯೇ ನಾನು ಪ್ರೀತಿಯನ್ನು ಶೂನ್ಯದಿಂದ ಕದ್ದೆ
ಎದೆಯೊಳಗೆ ಗುಡಾರವನ್ನು ಇಟ್ಟೆ
ಚಪ್ಪರದ ಮಲ್ಲಿಗೆಯಲ್ಲಿ ಪರಿಮಳವನ್ನು ಮೆದ್ದೆ.
ಕಣ್ಣುಗಳೇ ದೇವರನ್ನು ನೀವು ಕಾಣಿಸುವಿರಾ?
ಮುಚ್ಚಿ ಕೂರುವೆನು ಅವನನ್ನು ಕರೆದು ತರುವಿರಾ?
ಕಣ್ಣುಗಳೇ ನೀವು ಇರದೇ ಹೋಗಿದ್ದರೆ
ನಾನು
ಕತ್ತಲಲ್ಲಿ ಸಿಗುವುದನ್ನು ಪಡೆಯಬಹುದಿತ್ತು.
ಬೆಳಕಿನ ಸುಳ್ಳನ್ನು ಕಳೆದುಕೊಳ್ಳಬಹುದಿತ್ತು.

ಜಿ ವಿ ಜಯಶ್ರೀ ಕಾಲಂ: ವಾಸ್ತವತೆಯತ್ತ ಗಮನ ಕೊಡಿ ಮಾರಾಯ್ರೆ…

ಕೆಲವು ಸಂಗತಿಯನ್ನು  ಸ್ವಲ್ಪ  ಗ್ಯಾಪ್  ಬಿಟ್ಟು  ವೀಕ್ಷಕರಿಗೆ  ತಿಳಿಸಬೇಕಾದ ಹೊಣೆ ವಾಹಿನಿಗಳಿಗೆ  ಇದ್ದೆ ಇರುತ್ತದೆ. ಉದಾ:- ಪ್ರವಾಹದಿಂದ ಬದುಕು ಬೀದಿಗೆ ಬಿದ್ದವರ ಕಥೆ.ಅವರಿಗೆ ನೆಮ್ಮದಿಯಾಗಿ ಉಳಿಯಲು ಈಗ ಸಣ್ಣ ಸೂರಾದರೂ ಸಿಕ್ಕಿದೆಯ. ಉಸಿರಾಡಲು ಒಪ್ಪೊತ್ತಿನ  ಕೂಳು ಇದೆಯಾ.ನಿಜವಾಗಿ ಅವರು ಈಗ ಹೇಗಿದ್ದಾರೆ? ಇಂತಹ ಪ್ರಶ್ನೆಗಳು ಅನೇಕಾನೇಕ.ಅದ್ಯಾವುದು ಗೊತ್ತೇ ಆಗೋಲ್ಲ,ಆದ್ರೆ ಮೆಗಾ ಸಿಯಲ್ಲಿ ಆದರೆನಿರ್ದೇಶಕರು, ರೈಟರ್ ಆ ಕೆಲಸ ಮಾಡಿರ್ತಾರೆ :-) ಆದರೆ ಇಲ್ಲಿ ಉಹುಂ! ಇದು ವಾಸ್ತವ ಕಥೆ ಇದರ ಬಗ್ಗೆ ವಾರ್ತಾವಾಹಿನಿಯ ಮುಖ್ಯಸ್ಥರು ಹೆಚ್ಚು ಗಮನ ಕೊಡಲ್ಲ ಅನ್ನುವುದೇ ನನ್ನ ವಯುಕ್ತಿಕ ನಿಲುವು. ಕೇವಲ ನಾನು ಮಾತ್ರವಲ್ಲ ನನ್ನಂತ ಅನೇಕ ವೀಕ್ಷಕರ ಬಳಗ ಇದೆ, ಅದೂ ಟೀವಿಯವರಿಗೂ ಗೊತ್ತು. ದಯಮಾಡಿ ಇಂತಹ ವಿಷಯಗಳ  ಬಗ್ಗೆ ಆಗಾಗ ವೀಕ್ಷಕರಿಗೆ ಸಣ್ಣ ಮಾಹಿತಿ ತಿಳಿಸಿ. ಮುಂದೆ ಭೂಮಿ ಏನಾಗಬಹುದು ಅನ್ನುವ ಐಟಂಗಿಂತ ಇಂದಿನ ಬದುಕು ಹೇಗಿದೆ ಅನ್ನುವುದು ತುಂಬಾ ಪ್ರಾ ಮುಖ್ಯತೆ ಪಡೆದುಕೊಳ್ಳು ತ್ತದೆ .

ಹೆಚ್ಹಿನ  ಓದಿಗಾಗಿ ಮೀಡಿಯಾ ಮೈಂಡ್

ಅಂಕಿತ: ಪುಸ್ತಕಗಳ ಅನಾವರಣ…

ಯಾವಾಗ,ಏನು ಎಲ್ಲಿ : ಓದು ಬಜಾರಿನಲ್ಲಿ

ಜಿ ವಿ ಜಯಶ್ರೀ ಕಾಲಂ:ಆಗುತ್ತೆ ಹೀಗೆಲ್ಲ ಆಗುತ್ತೆ ಏನೂ ಮಾಡೋಕೆ ಆಗಲ್ಲ..

ತಮ್ಮನ್ನು ಈಗಾಗಲೇ ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡ ನಿರೂಪಕರನ್ನು ಗಮಸಿದ್ದೇನೆ. ಅದರಲ್ಲಿ ಕೆಲವರು ಬುದ್ಧಿವಂತರು.ಸಮಯ ಸ್ಪೂರ್ತಿಯಿಂದಲೂ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುತ್ತಾರೆ.ಅದೆ ರೀತಿ ಕೆಲವರು ಯಪ್ಪಾ ಬ್ಯಾಡ ಸಿವ್ನೆ :-) ತಪ್ಪೋ ನೆಪ್ಪೋ ಅಂತೂ ಕಾರ್ಯಕ್ರಮ ನಡೆಸಿ ಬಿಡ್ತಾರೆ. ಅನು ಪ್ರಭಾಕರ್ ನನಗೆ ಹೆಚ್ಚು ಜ್ಞಾಪಕಕ್ಕೆ ಬರುವ ನಿರೂಪಕಿ. ಆಕೆ ಜೀ ಟೀವಿ ಯಲ್ಲಿ ಬಾಳು ಬಂಗಾರ ಕಾರ್ಯಕ್ರಮ ನಡೆಸಿ ಕೊಡುವಾಗ ಸಿಕ್ಕಾಪಟ್ಟೆ ನಗು ಬರ್ತಾ ಇತ್ತು .ಆಕೆಗೆ ಎಲ್ಲವೂ ವಿಸ್ಮಯ .

ಒಬ್ಬ ಕಲಾವಿದೆ ಇಷ್ಟೆಲ್ಲಾ ..ಬಿಡಿ ಆಕೆಯ ಅಭಿಮಾನಿಗಳು ಹೆಚ್ಚಾಗಿದ್ದಾರೆ :-) . ಆದರೂ ಆಕೆಯ ವಿಸ್ಮಯದ ಬಗ್ಗೆ ಒಂದು ಉದಾಹರಣೆ… ಸಾಮಾನ್ಯವಾಗಿ ಕೆಲವು ರಿಯಾಲಿಟಿ ಷೋ ಗಳಲ್ಲಿ ಪ್ರಶ್ನೆಗಳು ಇದ್ದೆ ಇರುತ್ತದೆ .ಅದೇ ರೀತಿ ಅನು ಶೋನಲ್ಲೂ ಇದ್ದೆ ಇತ್ತು .ಉದಾಹರಣೆಗೆ ಆಕೆ ಸ್ಪರ್ಧಿಯ ಬಳಿ ನಮ್ಮ ದೇಶದ ರಾಜಧಾನಿ ಯಾವುದು ? ಅಂತ ಕೇಳ್ತಾ ಇದ್ರು .. ಉತ್ರ ಸಿಕ್ರೆ ತಕ್ಷಣ ಆಶ್ಚರ್ಯದ ಮುಖ ಮಾಡಿ ನಿಮಗೆ ಮೊದಲೇ ಗೊತ್ತಿತ್ತ ಎಂದು ಕೇಳ್ತಾ ಇದ್ರು ಮರೆಯದೆ:-) ಕೊನೆಗೆ ಇಸ್ ಡಿ ರೈಟ್ ಆನ್ಸರ್ :-) ಎಂದು ಸೊಳ್ಳೆ ಓಡಿಸುವ ಹಾಗೆ ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತ ಪಡಿಸ್ತಾ ಇದ್ರು :-) .

ಹೆಚ್ಹಿನ ಓದಿಗೆ ಮೀಡಿಯಾ ಮೈಂಡ್

ಛಂದದ ಹೊಸ ಮೂರು…

ಛಂದ ಪುಸ್ತಕದಿಂದ ಗುಣ, ಕಟ್ಟುಕಥೆಗಳು ಹಾಗು ಹರಿಚಿತ್ತ ಸತ್ಯ ಎಂಬ ಮೂರು ಹೊಸ ಪುಸ್ತಕಗಳು ಪ್ರಕಟಗೊಂಡಿವೆ.   ಗುಣ ಹಾಗು ಹರಿಚಿತ್ತ ಸತ್ಯ ಪುಸ್ತಕಗಳು ಅಪಾರ ಅವರ ಮುಖಪುಟ  ವಿನ್ಯಾಸದೊಂದಿಗೆ ಮೂಡಿ ಬಂದಿವೆ.

ಕಟ್ಟು ಕಥೆಗಳು ಪುಸ್ತಕ ವಿನಯ ಕುಮಾರ ಸಾಯ ಅವರ  ಮುಖಪುಟ ವಿನ್ಯಾಸದೊಂದಿಗೆ ಪ್ರಕಟಗೊಂಡಿದೆ.  ಗುಣ ಮುಖಪುಟದ ಚಿತ್ರವನ್ನು  ಜೆನ್ನಿ ಸಾಲಿಸ್‌ ಅವರು ಕ್ಲಿಕ್ಕಿಸಿದ್ದಾರೆ.

ಈ ಮೂರೂ ಪುಸ್ತಕಗಳು ಸೋಮವಾರದಿಂದ ಅಂಗಡಿಗಳಲ್ಲಿ ಸಿಗುತ್ತವೆ.

ಅಭಿಮನ್ಯು ಮತ್ತೆ ಹತನಾದ..

unique supri

ಒಂಟಿ ಹಕ್ಕಿ ಹಾಡು

ಚಿತ್ರ : ತಮಲ್

ಈತ ಅಭಿಮನ್ಯು
ಹೊರಬರುವ ದಾರಿ
ತಿಳಿಯದಿದ್ದರೂ
ವ್ಯೂಹದೊಳಗೆ
ನಿತ್ಯ ನಿತ್ಯವೂ
ನುಗ್ಗುವ

ವ್ಯೂಹವೂ ತರಹೇವಾರು
ಪಾದಯಾತ್ರೆಯಲಿ
ಶುರುವಾಗಿ
ಜೇಮ್ಸ್ ಕೆಮರಾನ್
ಭಾಷಣದವರೆಗೆ
ಕ್ಯಾನ್ಸರ್ ಉಂಟು ಮಾಡಿ
ನಿವಾರಿಸುವ ಶುಂಠಿ
ಕಡಲ್ಗಾಲುವೆಯ ಈಜಿ
ದಡಸೇರುವ ಕುಂಟಿ

ಶತ್ರುಗಳು ಒಬ್ಬಿಬ್ಬರಲ್ಲ
ಐನು ಟೈಮಿಗೆ
ಕೈಕೊಡುವ ಉಪ್ಪಿಟ್ಟು
ಇಸ್ತ್ರಿಗೆ ಲೋಹ
ಕಾಯುವಾಗ
ಕತ್ತರಿಸಿ ಬೀಳುವ ಕರೆಂಟು
ತುರ್ತು ಕರೆ ಬಂದಾಗಲೇ
ಮಾಯವಾಗುವ ಒಂಟಿ ಸಾಕ್ಸು

ಗೇಟಿನೆದುರು ಡಬಲ್
ಪಾರ್ಕಿಂಗು
ತಂಪು ಬಸ್ಸಲ್ಲಿ ಬಿಸಿಯೇರಿಸುವ
ಮಾನಿನಿಯರು
ಜಗವನ್ನೇ ಗೆಲ್ಲ ಹೊರಡುವ
ವೀರನಿಗೆ
ಕಾಲವೇ ದೊಡ್ಡ ಶತ್ರು

ಇಷ್ಟಕ್ಕೆಲ್ಲ ದಣಿಯುವವನಲ್ಲ
ನಮ್ಮ ಅಭಿಮನ್ಯು
ಸಂಜೆ ಎಂಟಾದರೂ
ಡಿಯೋಡರೆಂಟಿಗೆ ಕೆಲಸವಿಲ್ಲ
ಟಾಯ್ಲೆಟಿಗೆ ನಾಲ್ಕಾರು
ಸಲ ಕಾಲಿಟ್ಟರೂ
ಉತ್ಸಾಹಕ್ಕೆ ಕೊರತೆಯಿಲ್ಲ

ಕರ್ಣ, ದುಶ್ಯಾಸನಾದಿಗಳು
ನೂರು ದಿಕ್ಕಿನಿಂದ
ನುಗ್ಗಿದರೂ ನಿಗ್ರಹಿಸಬಲ್ಲ
ಧೀರ
ಹೋರಾಟದಿ ದೂರ
ಹೋದ ತಂದೆಯ
ನೆನಪಲ್ಲಿ ಎದೆಯು
ಭಾರ

ಕಡೆಗೂ ಹತನಾಗುವನು
ಅಭಿಮನ್ಯು
ಕಂಡ ಕಂಡಲ್ಲಿ ವ್ಯೂಹವ ಭೇದಿಸಿ
ಮರುದಿನದ
ಮರುಜನ್ಮಕೆ ಅಣಿಯಾಗಿ
ದಿನದ ಶವವನ್ನು
ಹಾಸಿಗೆಯಲಿ ಹೂಳುತ್ತ…


Previous Older Entries