ಇಷ್ಟು ಹೆಸರಲ್ಲಿಯೇ ಒಂದು ಕರೆಕ್ಟ್ ಹೆಸರಿದೆ

Posted on November 26, 2009. Filed under: 1 |

ಇವರು ಯಾರು ಬಲ್ಲೆಯೇನು? ಅಂತ ಕೇಳಿದ್ದೆವು. ಅದಕ್ಕೆ ತೀರಾ ಭಿನ್ನವಾದ ಉತ್ತರಗಳು ಬಂದಿವೆ-

ಬಿ ಎಸ್ ಯಡಿಯೂರಪ್ಪ, ಮೈಸೂರು ಅನಂತಸ್ವಾಮಿ, ಜೆ ಎಚ್ ಪಟೇಲ್, ಶಾಂತವೇರಿ ಗೋಪಾಲ ಗೌಡ… ಹೀಗೆ.

ಇಷ್ಟು ಹೆಸರಲ್ಲಿಯೇ ಒಂದು ಕರೆಕ್ಟ್ ಹೆಸರಿದೆ. ಯಾವುದದು ಅಂತ ಹೇಳ್ತೀರಾ?


Read Full Post | Make a Comment ( 2 so far )

ಭೇಟಿ ಕೊಡಿ: ಮೀಡಿಯಾ ಮೈಂಡ್

Posted on November 26, 2009. Filed under: 1 |

ಪಾಪ,ಆ ವ್ಯಕ್ತಿ ಒಂದೆಡೆ ಪ್ರಾಣಭಯ,ಇನ್ನೊಂದೆಡೆ ಹಸಿವು,ಮತ್ತೊಂದೆಡೆ ತನ್ನವರ ಅಳಿವು ಉಳಿವಿನ ಬಗ್ಗೆ ತಳಮಳದಿಂದ ತತ್ತರಿಸುತ್ತಿದ್ದರೆ, ಟಿವಿ ವಾಹಿನಿಯ ವರದಿಗಾರ ಮಾತ್ರ “ಈಗ ಏನನ್ನಿಸುತ್ತಿದೆ ? ಹೇಗನಿಸುತ್ತಿದೆ?” ಅಂತ ಕ್ಯಾಮರಾದ ಮುಂದೆ ಮೈಕು ಹಿಡಿದು ಪ್ರಶ್ನೆ ಮೇಲೆ ಪ್ರಶ್ನೆಗಳ ಬಾಣಗಳನ್ನು ಎಸೆಯುತ್ತಿದ್ದ!

ಇದೆಂಥ ವರದಿಗಾರಿಕೆ?ಇದೆಂಥ ಜರ್ನಲಿಸಂ?

ಪೂರ್ಣ ಓದಿಗೆ: ಮೀಡಿಯಾ ಮೈಂಡ್


Read Full Post | Make a Comment ( None so far )

‘ಆ ದಶಕ’ವೇ ಹಾಗಿತ್ತು…

Posted on November 26, 2009. Filed under: 1 |

80 ರ ದಶಕವೇ ಹಾಗಿತ್ತು. ತಲ್ಲಣ, ಸ್ವಾಭಿಮಾನ, ಹೋರಾಟದ ಕಿಚ್ಚು ಎಲ್ಲವೂ ಮುಪ್ಪರಿಕೊಂಡ ಕಾಲ ಅದು. ಈ ಕಾಲವನ್ನು ಕಟ್ಟಿ ಹಾಕಿ ನಿಲ್ಲಿಸಿದವರು ಕೆ ಅಕ್ಷತಾ. ಕಡಿದಾಳು ಶಾಮಣ್ಣ ಅವರ ‘ಕಾಡ ತೊರೆಯ ಜಾಡು’ ಆತ್ಮ ಕಥಾನಕಕ್ಕೆ ಕೈ ಹಾಕಿದ ಅಕ್ಷತಾ ಅದಕ್ಕೂ ಮುನ್ನವೇ ಹೊಸ ಕೃತಿಯೊಂದಿಗೆ ನಮ್ಮೆದುರು ನಿಂತಿದ್ದಾರೆ.

ಕಡಿದಾಳು ಶಾಮಣ್ಣ ಬರೆದ ಲೇಖನಗಳು, ಪತ್ರಗಳು, ಅವರಿಗೆ ಸಿಕ್ಕ ಪ್ರತಿಕ್ರಿಯೆಗಳು ಎಲ್ಲವೂ ೮೦ ರ ದಶಕದ ಬೇಗುದಿಯನ್ನು ಬಣ್ಣಿಸುತ್ತವೆ. ಆ ದಶಕ ಗೊತ್ತಿಲ್ಲದ ತಲೆಮಾರಿಗೆ ಇದು ಅರಿವು, ಗೊತ್ತಿರುವವರಿಗೆ ನೆನಪ ದೋಣಿಯ ಪಯಣ ಎರಡನ್ನೂ ಈ ಪುಸ್ತಕ ಒದಗಿಸುತ್ತದೆ. ಎಂ ಎಸ್ ಆಶಾದೇವಿ, ಟಿ ಅವಿನಾಶ್,  ಕಿ ರಂ ಒತ್ತಾಸೆಯಲ್ಲಿ ಅಕ್ಷತಾ ಎಂಬ ಪ್ರಕಾಶಕಿ ಅರಳಿದ್ದಾಳೆ.

‘ಮತ್ತೆ ಮತ್ತೆ ಪಂಪ’, ‘ಮತ್ತೆ ಮತ್ತೆ ಬ್ರೆಕ್ಟ್’ ನಂತರ ಇದೀಗ ಅಕ್ಷತಾ ಆ ದಶಕವನ್ನು ನೀಡಿದ್ದಾರೆ. ಮುಂದಿನ ಕೃತಿ  ’ಮತ್ತೆ ಮತ್ತೆ ಅಲ್ಲಮ’.

ಆ ದಶಕಕ್ಕೆ ನಟರಾಜ್ ಹುಳಿಯಾರ್ ಬರೆದಿರುವ ಮಾತು ಇಲ್ಲಿವೆ…

 

-ನಟರಾಜ ಹುಳಿಯಾರ್

ಕರ್ನಾಟಕದ ದಿಕ್ಕನ್ನು ಬದಲಿಸಿದ ಇಪ್ಪತ್ತನೇ ಶತಮಾನದ ಎಂಬತ್ತರ ದಶಕವನ್ನು ಸಮಾಜವಾದಿ ಕಡಿದಾಳು ಶಾಮಣ್ಣನವರ ಪತ್ರ ವ್ಯವಹಾರ ಹಾಗೂ ಬರಹಗಳ ಮೂಲಕ ಅರಿಯುವ ಈ ಪುಸ್ತಕದ ಕ್ರಮ ಚಾರಿತ್ರಿಕವಾದುದು. ಈ ಪುಟಗಳಲ್ಲಿ ತೇಜಸ್ವಿ, ಲಂಕೇಶ್, ರಾಮದಾಸ್, ದೇವನೂರು ಮಹದೇವ್, ಎಂ.ಡಿ.ನಂಜುಂಡಸ್ವಾಮಿ, ಸುಂದರೇಶ್, ರುದ್ರಪ್ಪ ಮುಂತಾದ ಹೆಸರುಗಳು ಕಣ್ಣಿಗೆ ಬೀಳುತ್ತಿದ್ದಂತೆಯೇ ಎಂಬತ್ತರ ದಶಕದ ಕರ್ನಾಟಕವನ್ನು ಈ ಮಹಾನ್ ಚೇತನಗಳನ್ನು ಬಿಟ್ಟು ಗ್ರಹಿಸುವುದು ಯಾವ ಚರಿತ್ರಕಾರನಿಗೂ ಸಾಧ್ಯವಿಲ್ಲ ಎಂಬ ಸತ್ಯ ಹೊಳೆಯುತ್ತದೆ.

ರೈತಸಂಘ, ಕಾರ್ಯಕರ್ತರು, ಜೈಲು, ಕೋರ್ಟು, ವಿಚಾರಣೆ, ದಲಿತ ಸಂಘರ್ಷ ಸಮಿತಿ, ಲಂಕೇಶ್ ಪತ್ರಿಕೆ, ಪ್ರಾದೇಶಿಕ ಪಕ್ಷ- ಈ ಎಲ್ಲದರ ಬಗೆಗೂ ಇಲ್ಲಿ ಪ್ರಸ್ತಾಪವಿದೆ. ಆ ದಶಕದ ಕರ್ನಾಟಕವನ್ನು ರೂಪಿಸಿದ ಮುಖ್ಯ ಶಕ್ತಿಗಳಾದ ರೈತಸಂಘ ಮತ್ತು ಲಂಕೇಶ್ ಪತ್ರಿಕೆಗಳೆರಡರ ನಡುವಣ ಕೊಂಡಿಯಂತೆ ಶಾಮಣ್ಣ ಕೆಲಸ ಮಾಡಿದ್ದು ಕೂಡ ಚಾರಿತ್ರಿಕ. ಹಾಗೆಯೇ ಚಳವಳಿಗಳು ರೂಪುಗೊಳ್ಳುವ, ಮುನ್ನುಗ್ಗುವ ಕಾಲದ ಹುಮ್ಮಸ್ಸು, ಅವು ಕುಸಿಯುವ ಕಾಲದ ಯಾತನೆ, ಒಂದು ಚಳವಳಿಯನ್ನು ಮುರಿಯುವ ನೀಚ ರಾಜಕಾರಣ ಹಾಗೂ ಸುಳ್ಳುಗಳು-ಇವೆಲ್ಲವನ್ನೂ ಶಾಮಣ್ಣನವರ ಮೂಲಕ ನೋಡಿದಾಗ ಅವೆಲ್ಲ ಅತ್ಯಂತ ಅಧಿಕೃತವಾಗಿ ಹಾಗೂ ಸತ್ಯಕ್ಕೆ ತೀರ ಹತ್ತಿರವಾಗಿ ಕಾಣತೊಡಗುತ್ತವೆ. ಇವೆಲ್ಲ ಚರಿತ್ರೆಯಲ್ಲಿ ದಾಖಲಾಗುವ ಅಂಶಗಳು ಎಂಬ ಬಗ್ಗೆ ಯೋಚಿಸಲು ಕೂಡ ಹೋಗದೇ, ಕಾಲ ಕಾಲಕ್ಕೆ ತಾವು ಕಂಡದ್ದನ್ನು ಹಾಗೂ ತಮಗೆ ಅನಿಸಿದ್ದನ್ನು ಶಾಮಣ್ಣ ಹೇಳಿರುವ ರೀತಿಯಿಂದಾಗಿ ಕೂಡ ಇವು ಅತ್ಯಂತ ಪ್ರಾಮಾಣಿಕವಾಗಿ ಕಾಣುತ್ತವೆ. ಆ ಸತ್ಯದ ಶಕ್ತಿಯಿಂದಾಗಿಯೇ ತೀವ್ರವಾದ ವಿಶ್ಲೇಷಣೆಗಳೂ ಆಗಿವೆ.

ಕೊನೆಯದಾಗಿ, ರೈತಸಂಘದಲ್ಲಿ ಆ ಕಾಲದ ಹಾಗೂ ವ್ಯಕ್ತಿಗತ ಒತ್ತಡಗಳಿಂದ ವಿಚಿತ್ರ ಬೆಳವಣಿಗೆಗಳು ನಡೆದು ಶಾಮಣ್ಣ ಸಂಘದಿಂದ ದೂರಾಗುವ ಕಾಲಕ್ಕೆ ತೇಜಸ್ವಿ ಬರೆದ ಒಂದು ಮಾತನ್ನು ಇಲ್ಲಿ ನೆನಪಿಸುತ್ತೇನೆ `ಇಷ್ಟಾದರೂ ನಾವ್ಯಾರೂ ರೈತಸಂಘಕ್ಕೆ ಕೇಡು ಬಗೆಯುವ ಅಗತ್ಯವಿಲ್ಲ. ಅವರಿಗೆ ತೊಂದರೆಯಾಗದಂತೆ ನಾವೇನು ಮಾಡಬಹುದೆಂದು ನಾವೆಲ್ಲಾ ಯೋಚಿಸುವ ಅಗತ್ಯವಿದೆ.. ಸುಮ್ಮನೆ ನಂಜುಂಡಸ್ವಾಮಿ ಜಪ ಮಾಡುತ್ತಾ ದೂಷಿಸಿ ಏನೇನೂ ಸುಖವಿಲ್ಲ.

`ಆ ದಶಕ’ ಎಂಬ ಈ ಪುಟ್ಟ ಚಾರಿತ್ರಿಕ ಪುಸ್ತಕದಲ್ಲಿ ಕರ್ನಾಟಕದ ಒಂದು ಕಾಲಘಟ್ಟದ ಬಗೆಬಗೆಯ ತಲ್ಲಣಗಳು, ವೈರುಧ್ಯಗಳು, ಕನಸುಗಳು ಕಟ್ಟುವ ಉತ್ಸಾಹ, ಕುಸಿದ ಕಾಲದ ವಿಷಾದ ಎಲ್ಲವನ್ನೂ ಸ್ವಲ್ಪ ಆ ಕಾಲದಿಂದ ದೂರ ನಿಂತು ಸಹನೆಯಿಂದ ಗ್ರಹಿಸುವ ನಿಟ್ಟಿನಲ್ಲಿ, ಮೇಲೆ ಹೇಳಿದ ತೇಜಸ್ವಿ ಅವರ ಮಾತು ತೋರು ದೀಪವಾಗಬೇಕಿದೆ. ಅಂದರೆ, ಈ ಪುಸ್ತಕದಲ್ಲಿ ದಾಖಲಾಗಿರುವ ವಿದ್ಯಮಾನಗಳು ಒಂದು ಕಾಲವನ್ನು ಮುಕ್ತವಾಗಿ ನೋಡಲು ಹಾಗೂ ನಮ್ಮನ್ನು, ನಾವು ನೋಡಿಕೊಳ್ಳಲು ನೆರವಾಗಬೇಕಾಗಿದೆಯೇ ಹೊರತು ಸಣ್ಣ ಪುಟ್ಟ ಧೂಳೆಬ್ಬಿಸಲು ಅಲ್ಲ ಎಂಬುದನ್ನು ತೇಜಸ್ವಿ ಅವರ ಮಾತಿನ ಬೆಳಕಿನಲ್ಲಿ ಈ ಪುಸ್ತಕದ ಓದುಗರು ಅರಿಯಬೇಕಾಗಿದೆ.

ಚಳವಳಿಯನ್ನು ಹಾಗೂ ಸಮಾಜದ ಕೆಲಸವನ್ನು ಸಹಜವಾದ ಮನೆಯ ಕೆಲಸವೆಂಬಂತೆ ತಿಳಿದು, ಸಾಧ್ಯವಾದಷ್ಟೂ ಹಿನ್ನಲೆಯಲ್ಲೇ ನಿಂತು ರೈತಸಂಘವನ್ನು ಕಟ್ಟಿದ ಶಾಮಣ್ಣನವರ ಪತ್ರಗಳು, ವರದಿಗಳು, ತೇಜಸ್ವಿ, ಲಂಕೇಶ್, ಬಸವರಾಜ ಕಟ್ಟಿಮನಿಯವರ ಪ್ರತಿಕ್ರಿಯೆಗಳು ಮುಂತಾದವುಗಳ ಮೂಲಕ ಒಂದು ದಶಕವನ್ನು ನೋಡಬಹುದೆಂಬ ಆಲೋಚನೆ ಈ ಪುಸ್ತಕವನ್ನು ರೂಪಿಸಿದ ಅಕ್ಷತಾಗೆ ಹೊಳೆದದ್ದು ಚಳುವಳಿಗಳಲ್ಲಿ ನಿಜವಾದ ಆಸಕ್ತಿ ಉಳ್ಳ ನಮ್ಮೆಲ್ಲರ ಭಾಗ್ಯ.


Read Full Post | Make a Comment ( 1 so far )

ಜೋಗಿ ಬರೆದ ಕಥೆ: ಕಿಟ್ಟಿ ಎಂಬ ಅಖಂಡ ಪ್ರೇಮಿ

Posted on November 26, 2009. Filed under: 1 |

ಕೃಷ್ಣಮೂರ್ತಿಯನ್ನು, ಎಲ್ಲಾ ಕಡೆ ಕರೆಯುವಂತೆ ನಮ್ಮೂರಿನಲ್ಲೂ ಕಿಟ್ಟಿ ಅಂತಲೇ ಕರೆಯುತ್ತಿದ್ದರು. ಅವನಿಗೂ ಬಾಲ್ಯದಲ್ಲಿ ಕಿಟ್ಟಿ ಎಂದು ಕರೆಸಿಕೊಳ್ಳುವುದಕ್ಕೆ ಇಷ್ಟವಾಗುತ್ತಿತ್ತು. ಆದರೆ ಬೆಳೆಯುತ್ತಾ ಬಂದ ಹಾಗೆ ಅವನಿಗೆ ತನ್ನನ್ನು ಕಿಟ್ಟಿ ಎಂದು ಕರೆದಾಗ ಕೊಂಚ ಮುಜುಗರ ಆಗುತ್ತಿತ್ತು.  ಕೃಷ್ಣಮೂರ್ತಿರಾವ್ ಎಂದು ಕರೆಸಿಕೊಳ್ಳುವುದಕ್ಕೆ ಅವನಿಗೆ ಇಷ್ಟ. ತನ್ನೆದುರೇ ತನಗಿಂತ ಕಡಿಮೆ ಸ್ಥಾನದಲ್ಲಿರುವ ಅನೇಕರು ಕೃಷ್ಣರಾವ್, ರಾಮರಾವ್, ಭೀಮರಾವ್, ಗೋವಿಂದರಾವ್ ಅಂತ ಕರೆಸಿಕೊಂಡು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡು ಓಡಾಡುವುದನ್ನು ಕಂಡಾಗ ಹೊಟ್ಟೆಯುರಿಯುತ್ತಿತ್ತು.

ಕಿಟ್ಟಿ ಮದುವೆ ಆಗಿರಲಿಲ್ಲ. ಅವನಿಗೆ ಮದುವೆ ಆಗಬೇಕು ಅಂತಲೂ ಅನ್ನಿಸಿರಲಿಲ್ಲ. ಅದರಿಂದ ಸಾಧಿಸುವುದಾಗಲೀ ಕಳೆದುಕೊಳ್ಳುವಂಥದ್ದಾಗಲೀ ಏನೂ ಇಲ್ಲ ಎಂಬುದು ತಾರುಣ್ಯದಲ್ಲಿದ್ದಾಗಲೇ ಅವನಿಗೆ ಅರ್ಥವಾಗಿತ್ತು. ಅವನ ಅಣ್ಣ ರಾಮಮೂರ್ತಿ, ವಾಸುದೇವ ಮೂರ್ತಿ ಇಬ್ಬರೂ ಮದುವೆ ಆಗಬೇಕಾದ ವಯಸ್ಸಿಗೆಲ್ಲಾ ಮದುವೆ ಮಾಡಿಕೊಂಡು ಆಮೇಲೆ ಕದ್ದು ಸಿಗರೇಟು ಸೇದುತ್ತಾ, ಮದುವೆ ಮನೆಗಳಿಗೆ ಸ್ಲೀವ್‌ಲೆಸ್ ಹಾಕಿಕೊಂಡು ಬಂದ ಚೆಂದದ ಹುಡುಗಿಯರ ತೋಳನ್ನು ದಿಟ್ಟಿಸಿ ನೋಡುತ್ತಾ, ಅಕ್ಕರೆ ತೋರುವ ನೆಪದಲ್ಲಿ ತೋಳು ಸವರಿ ನಿಟ್ಟುಸಿರು ಬಿಡುವುದನ್ನು ಅವನು ನೋಡಿದ್ದ.

ತನಗೆ ಹೆಂಡತಿಯಿಲ್ಲ ಅನ್ನುವುದನ್ನು ಕಿಟ್ಟಿ ಗೇಲಿ ಮಾಡುತ್ತಾ, ಹೆಮ್ಮೆಯಿಂದಲೇ ಹೇಳಿಕೊಂಡು ಓಡಾಡುತ್ತಿದ್ದ. ಮೂವತ್ತೈದು ದಾಟುವ ತನಕವೂ ಅವನಿಗೆ ಹೆಂಡತಿ ಇಲ್ಲ ಅನ್ನುವ ವಿಚಾರ ಅಂಥ ಗಂಭೀರ ಸಂಗತಿ ಅನ್ನಿಸಿರಲೇ ಇಲ್ಲ. ಮದುವೆ ಆದವರು ಅವನಿಗೆ ಗೇಲಿ ಮಾಡಿಸಿಕೊಳ್ಳುತ್ತಾ, ಅವನು ಮಾಡುವ ಸಣ್ಣ ಪುಟ್ಟ ಟೀಕೆಗಳನ್ನು ಮನಸಾರೆ ಸ್ವೀಕರಿಸಿ ನಗುತ್ತಾ ಖುಷಿಪಡುತ್ತಿದ್ದರು. ಎಷ್ಟೋ ಗೆಳೆಯರು ಹೆಂಡತಿಯ ಜೊತೆ ಜಗಳ ಆಡಿದ ಮುಸ್ಸಂಜೆಗಳಲ್ಲಿ ಕಿಟ್ಟಿಯ ಜೊತೆ ಅದನ್ನು ಹಂಚಿಕೊಳ್ಳುತ್ತಿದ್ದರು. ಕೆಲವೊಂದು ದಿನ ಅವರೆಲ್ಲ ಜೀವನೋತ್ಸಾಹವನ್ನೇ ಕಳಕೊಂಡಂತೆ ವರ್ತಿಸುತ್ತಿದ್ದರು. ಹೀಗಾಗಿ ಮದುವೆ ಆಗದೇ ತಾನು ಒಳ್ಳೆಯ ಕೆಲಸ ಮಾಡಿದೆ ಎಂಬುದು ಕಿಟ್ಟಿಗೆ ಖಾತ್ರಿಯಾಗುತ್ತಾ ಹೋಯಿತು.

ಒಂದು ದಿನ ಕಿಟ್ಟಿ ಕಾವೇರಿ ಬಾರ್‌ನಲ್ಲಿ ರಘುನಂದನನ ಜೊತೆ ಮಾತಾಡುತ್ತಾ ಕೂತಿರಬೇಕಾದರೆ ಒಂದು ವಿಚಿತ್ರ ನಡೆಯಿತು. ರಘುನಂದನ ಎಂದಿನಂತೆ ತನ್ನ ಆಫೀಸು, ಮನೆ, ಮಕ್ಕಳು, ಚಿಕ್ಕಪ್ಪ, ಕ್ರಿಕೆಟ್ಟು, ರೇಸು, ಸಿಗರೇಟು, ಅಮಿತಾಭನ ವೈವಿಧ್ಯ ಎಲ್ಲದರ ಬಗ್ಗೆ ಮಾತಾಡುತ್ತಿದ್ದ. ಮಾತಿನ ಮಧ್ಯೆ ಯಾರದೋ ಫೋನ್ ಬಂತೆಂದು ಎದ್ದು ಹೋದ. ಸದಾ ಯಾರ ಫೋನು ಬಂದರೂ ಲೌಡ್‌ಸ್ವೀಕರಿಗೆ ಹಾಕಿ ಮಾತಾಡುತ್ತಿದ್ದ ರಘುನಂದನ, ಆವತ್ತು ಎದ್ದು ಹೋಗಿ ಇಪ್ಪತ್ತು ನಿಮಿಷ ಮಾತಾಡಿ ಬಂದದ್ದು ನೋಡಿದಾಗ ಕಿಟ್ಟಿಗೆ ಆಶ್ಚರ್ಯವಾಯಿತು.

ತಾನು ಯಾರ ಜೊತೆ ಮಾತಾಡಿದೆ ಎಂದು ಆವತ್ತು ರಘು ಹೇಳಲಿಲ್ಲ. ಕಿಟ್ಟಿ ತಾನಾಗಿಯೇ ಕೇಳುವುದು ಸರಿಯಲ್ಲ ಅಂದುಕೊಂಡು ಸುಮ್ಮನಿದ್ದ. ಆದರೆ ಪದೇ ಪದೇ ಇದು ಮರುಕಳಿಸುತ್ತಾ ಹೋದಾಗ ಕಿಟ್ಟಿಗೆ ಆಶ್ಚರ್ಯವೂ ಬೇಸರವೂ ಆಗುತ್ತಾ ಬಂತು. ಫೋನಲ್ಲಿ ಮಾತಾಡಿ ಮರಳುವ ಹೊತ್ತಿಗೆಲ್ಲ ಒಂದೋ ಅತೀವ ಸಂತೋಷದಲ್ಲಿ ಅಥವಾ ಅಗಾಧ ದುಃಖದಲ್ಲಿರುತ್ತಿದ್ದ ರಘು. ಅವನು ಯಾರ ಜೊತೆ ಮಾತಾಡುತ್ತಾನೆ, ಏನು ಮಾತಾಡುತ್ತಾನೆ. ಹಾಗೆ ಮಾತಾಡಿದ ನಂತರ ಯಾಕೆ ಅವನ ಭಾವನೆಗಳು ಬದಲಾಗುತ್ತವೆ. ರಘು ಯಾವುದಾದರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿರಬಹುದೇ ಎಂದೆಲ್ಲ ಯೋಚಿಸಿ, ಒಂದು ದಿನ ಕುತೂಹಲ ಮತ್ತು ಸಿಟ್ಟು ತಡೆಯಲಾರದೇ ಕಿಟ್ಟಿ ನೇರವಾಗಿ ರಘುವನ್ನು ಕೇಳಿಯೇ ಬಿಟ್ಟ.

ರಘು ಹೇಳಿದ್ದನ್ನು ಕೇಳಿ ಅವನಿಗೆ ಆಶ್ಚರ್ಯವಾಯಿತು. ರಘು ತನ್ನ ಫ್ಲಾಟಿನ ಪಕ್ಕದಲ್ಲಿದ್ದ ಅಲಕಾ ಎಂಬ ಹತ್ತೊಂಬತ್ತು ವರ್ಷದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಮೂವತ್ತೆಂಟರ ರಘು ತನ್ನ ಅರ್ಧ ವಯಸ್ಸಿನ ಅಲಕಾಳನ್ನು ಹೇಗೆ ಪ್ರೀತಿಸಲು ಸಾಧ್ಯ ಎಂಬುದು ಕಿಟ್ಟಿಗೆ ಅರ್ಥವೇ ಆಗಲಿಲ್ಲ.

ರಘು ತನ್ನ ಮನೋಲಹರಿಯನ್ನು ವಿವರಿಸುತ್ತಾ ಹೋದ. ಅವಳು ತನಗೆ ಕೊಡುತ್ತಿರುವ ಸಂತೋಷ, ತಾನು ಹೊಸ ಮನುಷ್ಯನಾಗಿರುವುದು, ಇದ್ದಕ್ಕಿದ್ದಂತೆ ತನ್ನನ್ನು ಹೊಸದೊಂದು ಉಲ್ಲಾಸ ಆವರಿಸಿಕೊಂಡಿರುವುದು, ಅವಳ ಜೊತೆ ಮಾತಾಡುತ್ತಿದ್ದರೆ ಜಗತ್ತೇ ಮರೆತುಹೋಗುವುದು- ಎಲ್ಲವನ್ನೂ ಹೇಳಿದ.

(more…)


Read Full Post | Make a Comment ( 1 so far )

ಅವಳೇ ಇವ್ಳು..ಕೋಕ್ಲಾ!

Posted on November 26, 2009. Filed under: 1 |

‘ಕೋಕಿಲಾ’ ಸಿನೆಮಾ ನೋಡಿದ್ದೀರಾ? ಕಥೆ ಹೇಳಲ್ಲ ಬಿಡಿ, ಆದ್ರೆ ಆ ಸಿನೆಮಾದ ಎಂಡಿಂಗ್ ಇದೆಯಲ್ಲ ಅದು ಕರುಳನ್ನ ಚುರ್ ಅನ್ನಿಸುತ್ತೆ. ಸಾಧ್ಯಾ ಆದ್ರೆ ಕಣ್ಣಂಚಲ್ಲಿ ನೀರೂ ತರಿಸುತ್ತೆ. ಕಮಲ ಹಾಸನ್ ತೋಳುಗಳಲ್ಲಿ ಕೂತು ನಿನ್ನ ಹೆಸರು ಏನು ಅಂದ ತಕ್ಷಣ ಮುದ್ದು ಮುದ್ದಾಗಿ ‘ಕೋಕ್ಲಾ,’ ಅನ್ನುವ ಪುಟಾಣಿಯೇ ಸುಷ್ಮಾ ವೀರ್.

ಎಸ್, ಆ ಪುಟಾಣಿ- ಈ ಹುಡುಗಿ ಇಲ್ಲೇ ಇದ್ದಾರೆ ನೋಡಿ. ಸುಷ್ಮಾ ಗುಬ್ಬಿ ವೀರಣ್ಣನವರ ಮರಿ ಮಗಳು.


Read Full Post | Make a Comment ( None so far )

‘ತಿಂಗಳು’ ಬಂದಿದೆ

Posted on November 25, 2009. Filed under: 1 |

ಒಂದು ತಿಂಗಳ ಅಂತರದ ನಂತರ ‘ತಿಂಗಳು’ ಮತ್ತೆ ಬಂದಿದೆ. ಮುದ್ದಾದ ಸಂಚಿಕೆ. ಪ್ರೊ ಸಿ ಎನ್  ರಾಮಚಂದ್ರನ್  ’ನನ್ನ ಮೊದಲ ಬರಹ’ ಅಂಕಣದಲ್ಲಿ ತಾವು ಕಥೆ ಬರೆದ ಸಂದರ್ಭ ಹಾಗೂ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇವರ ಮೊದಲ ಕಥೆ ‘ಹೆಗಲೇರಿದ ಮುದುಕ’ ಸಹಾ ಇಲ್ಲಿದೆ. ವಿಮರ್ಶಕರಾಗಿ ಮಾತ್ರ ಸಿ ಎನ್ ಆರ್ ಗೊತ್ತಿರುವವರಿಗೆ ಇದು ಒಳ್ಳೆಯ ಓದು. ಜಿ ಕೆ ರವೀಂದ್ರಕುಮಾರ್  ’ಹಾಗೇ ಸುಮ್ಮನೆ’ ಎಂಬ ಪ್ರಬಂಧ ಬರೆದಿದ್ದಾರೆ. ವಿ ಆರ್ ಕಾರ್ಪೆಂಟರ್ ತನ್ನದೇ ವಿಶೇಷ ಶೈಲಿಯಲ್ಲಿ ‘ಅಪ್ಪನ ಲೇಡೀಸ್ ಸೈಕಲ್’ ಮುಂದುವರೆಸಿದ್ದಾರೆ. ಸೃಜನ್ ದೇಸಿ ಸತ್ವದ ಮೋಹನ್ ಎಂಬ ಕಾರ್ಟೂನ್ ಕಿಂಗ್ ಬಗ್ಗೆ ಬರೆದಿದ್ದಾರೆ. ಜ ನಾ ತೇಜಶ್ರೀ, ಡಿ ಎಂ ರಾಮಾಂಜನೇಯ, ಸಂತೋಷ್ ಗುಡ್ಡಿಯಂಗಡಿ, ಬಸವರಾಜ ಹಳ್ಳಿ, ಹಿ ಶಿ ರಾಮಚಂದ್ರೇ ಗೌಡ, ಸುಮತಿ ಶೆಣೈ, ಗಂಗಪ್ಪ ತಳವಾರ ಅವರ ಕವಿತೆಗಳಿವೆ. ಓದಿ.


Read Full Post | Make a Comment ( 1 so far )

ನಾಟಕ ಮಾಡಿಸಿದ ವರ್ಷವೇ ಬಾಬರಿ ಮಸೀದಿಯನ್ನು ದ್ವಂಸಗೊಳಿಸಿದ್ದರು…

Posted on November 25, 2009. Filed under: 1 |

ಈ ದಿನ ಬಿಡುಗಡೆ ಸಂಜೆ ೬ ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ. ನಂತರ ಸಮಕಾಲೀನ ಸಂಗತಿಗಳ ಬಗ್ಗೆ ಪ್ರಸನ್ನ ಜೊತೆ ಸಂವಾದ, ಪ್ರಯೋಗ ರಂಗದಿಂದ ನಾಟಕ

- ಪ್ರಸನ್ನ

1992ರಷ್ಟು ಹಿಂದೆಯೇ, ದೆಹಲಿಯ ರಾಷ್ಟ್ರೀಯ ನಾಟಕಶಾಲೆಯ ವಿದ್ಯಾಥರ್ಿಗಳಿಗೆಂದು ಈ ನಾಟಕವನ್ನು ಬರೆದು, ರಂಗ ಪ್ರದರ್ಶನವನ್ನು ಸಿದ್ಧಪಡಿಸಿದ್ದೆ. ಈಗ, ಇಷ್ಟು ತಡವಾಗಿ, ಪರಿಷ್ಕರಿಸಿ ಪ್ರಕಟಿಸುತ್ತಿದ್ದೇನೆ. ಹದಿಹರೆಯದ ಮಕ್ಕಳಿಗಾಗಿ ಬರೆದದ್ದಾದರೂ, ದೊಡ್ಡವರು ಈ ನಾಟಕವನ್ನು ಮಾಡಬಾರದು ಅಥವಾ ನೋಡಬಾರದೆಂದೇನಿಲ್ಲ.

ನಾಟಕವು ತೀರ ಗಂಭೀರವಾಗಿಬಿಟ್ಟು ಜನರಿಂದ ದೂರ ಉಳಿದುಬಿಡಬಾರದೆಂಬ ಕಳಕಳಿಯಿಂದ, ಸಾಧ್ಯವಿದಷ್ಟು ಆಪ್ತವಾಗಿ ಹಾಗೂ ಮನೋರಂಜಕವಾಗಿ-ಇಂದಿನ ಯುವಕ ಯುವತಿಯರು ಗಾಂಧೀಜಿಯವರೊಂದಿಗೆ ನಗುನಗುತ್ತ ಹರಟುವುದು ಸಾಧ್ಯವಿದ್ದರೆ ಹೇಗಿರುತ್ತಿತ್ತೋ ಹಾಗೆಯೇ ನಾಟಕದ ಶೈಲಿ ಇರಬೇಕೆಂಬ ಪ್ರಯತ್ನವಿದೆ ಇಲ್ಲಿ.

ನಾಟಕದಲ್ಲಿರುವ ಏಕಮೇವ ಕಾಲ್ಪನಿಕ ಪಾತ್ರವೆಂದರೆ, ರಾಮಿ ಮೇಡಂ ಎನ್ನುವ, ಅವರ ನೆಚ್ಚಿನ ಅಧ್ಯಾಪಕಿ ಮಾತ್ರ. ಈಕೆ ನಾಟಕದುದ್ದಕ್ಕೂ ಮಕ್ಕಳ ಜೊತೆಗಿದ್ದು, ಅವರ ಆಸಕ್ತಿಗಳನ್ನು ಪ್ರೋತ್ಸಾಹಿಸುತ್ತಲೇ, ಅವರು ದಾರಿತಪ್ಪದಂತೆ ಕೈ ಹಿಡಿದುಕೊಂಡು, ಘನ ವಿಚಾರಗಳ ಗೋಂಡಾರಣ್ಯದಲ್ಲಿ ಅವರನ್ನು ನಡೆಸಿಕೊಂಡು ತಂದು ತುದಿಮುಟ್ಟಿಸುತ್ತಾರೆ. ಇತ್ತ ಮಕ್ಕಳೂ ಸಹಿತ, ಪೇಟೆಯ ಮಕ್ಕಳು ಹೇಗೆ ಅರಣ್ಯ ಸುತ್ತಿ ಸಂಭ್ರಮಪಡುತ್ತವೋ ಹಾಗೆಯೇ ಈ ಬೌದ್ಧಿಕ ಅರಣ್ಯವನ್ನು ಸುತ್ತಿ ಸಂಭ್ರಮಪಡುತ್ತವೆ.

1992ರಲ್ಲಿ ದೆಹಲಿಯಲ್ಲಿ ಈ ನಾಟಕದ ಪ್ರದರ್ಶನವು ಅಪಾರವಾದ ಯಶಸ್ಸನ್ನು ಕಂಡಿತ್ತು. ಆಗ ನಾಟಕದ ಹೆಸರು ಗಾಂಧಿ ಎಂತಲೇ ಇತ್ತು. ನಾಟಕದ ಚಚರ್ೆಯು ಪಾರ್ಲಿಮೆಂಟಿನವರೆಗೂ ತಲುಪಿತ್ತು. ದಿವಂಗತ ಮಧು ಲಿಮಯೆ, ದಿವಂಗತ ರಾಮಚಂದ್ರಗಾಂಧಿ, ಶ್ರೀ ಅಶೀಷ್ ನಂದಿ, ಶ್ರೀಮತಿ ಗೀತಾ ಕಪೂರ್, ಶ್ರೀ ಸುದೀರ್ ಚಂದ್ರ ಆದಿಯಾಗಿ ಹಲವು ಪ್ರತಿಷ್ಠಿತ ಗಾಂಧಿವಾದಿಗಳು, ಸಮಾಜವಾದಿಗಳು ಹಾಗೂ ಇತಿಹಾಸಕಾರರು ನಾಟಕವನ್ನು ನೋಡಿ ಮೆಚ್ಚಿದ್ದರು, ಮಾತ್ರವಲ್ಲದೆ ಮಾರ್ಗದರ್ಶನವನ್ನೂ ನೀಡಿದರು.

ಹಿಂಸೆಯು ಆಕರ್ಷಕವಾದದ್ದು ಎಂಬ ಆತಂಕವು ಮಧು ಲಿಮಯೆಯವರನ್ನು ಆಗ ಕಾಡಿತ್ತು. ನಿನ್ನ ನಾಟಕದಲ್ಲಿಯೂ ಸಹ, ನಿನ್ನೆಲ್ಲ ಪ್ರಯತ್ನದ ನಂತರವೂ, ಹಿಂಸೆ ಎಂಬುದು ಆಕರ್ಷಕವಾಗಿ ಚಿತ್ರಿತವಾದ ಬಿಡುವ ಸಾಧ್ಯತೆ ಇದೆ ಎಚ್ಚರ! ಎಂದು ಬುದ್ಧಿವಾದ ಹೇಳಿದರು ಅವರು. ನಾಟಕದ ಪರಿಷ್ಕರಣದ ಸಂದರ್ಭದಲ್ಲಿ ಆ ಹಿರಿಯರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡಿದ್ದೇನೆ.

ದೆಹಲಿಯಲ್ಲಿ ನಾಟಕ ಮಾಡಿಸಿದ ವರ್ಷವೇ ಅಯೋಧ್ಯೆಯಲ್ಲಿ ಹಿಂದೂ ಕರಸೇವಕರು ಬಾಬರಿ ಮಸೀದಿಯನ್ನು ದ್ವಂಸಗೊಳಿಸಿದ್ದರು. ಆ ಘಟನೆಯ ಆಘಾತವೇ ಕೊಂದವರಾರು ನಾಟಕವನ್ನು ರಚಿಸಲು ಪ್ರೇರಣೆ ನೀಡಿದ್ದು. ಈಗ, ಹದಿನೈದು ವರ್ಷಗಳ ನಂತರದಲ್ಲಿ ಬಾಬರಿ ಮಸೀದಿಯ ಘಟನೆಯು ನಮ್ಮಗಳ ಸ್ಮೃತಿಯಿಂದ ಹಿಂದೆ ಸರಿದಿದೆ. ಆದರೆ ಮತೀಯವಾದವು ಮಾತ್ರ ಮತ್ತಷ್ಟು ಪ್ರಬಲವಾಗಿ ಬೆಳೆದು, ತನ್ನ ವಿಶ್ವರೂಪ ದರುಶನವನ್ನು ಮಾಡಿಸುತ್ತಿದೆ. ಹಿಂದೂಗಳಷ್ಟೇ ಅಲ್ಲದೆ

ಮುಸಲ್ಮಾನರು ಯಹೂದ್ಯರು ಕ್ರೈಸ್ತರು ತಮಿಳರು, ಬೌದ್ಧರು….ಹೀಗೆ ಯಾವುದೇ ತಾರತಮ್ಯವೂ ಇಲ್ಲದೆ, ಜಗತ್ತಿನ ಎಲ್ಲ ಸಮುದಾಯಗಳೂ ಮತೀಯವಾದದ ಸಂಕುಚಿತ ಯೋಚನೆಗೆ ಬಲಿಯಾಗಿವೆ.

ಪ್ರೀತಿ ಹಾಗೂ ಸಹಿಷ್ಣುತೆಗೆ ಬದಲಾಗಿ, ಅನುಮಾನ ಅಸೂಯೆ ಹಾಗೂ ದ್ವೇಷದ ಭಾವನೆಗಳು ನಮ್ಮೆಲ್ಲರ ಹೃದಯಗಳಲ್ಲಿ ಇಂದು ಮನೆ ಮಾಡಿದೆ. ಇತ್ತಕಡೆ, ನಾವು ನಮ್ಮ ಅಲ್ಪಸಂಖ್ಯಾತ ಸಮುದಾಯಗಳನ್ನು ಅಸಹನೆಯಿಂದ ನಡೆಸಿಕೊಂಡರೆ, ಅತ್ತಕಡೆ ಕಾಶ್ಮೀರದಲ್ಲಿ, ಅಲ್ಲಿನ ಬಹುಸಂಖ್ಯಾತರು ಸೇರಿಗೆ ಸವ್ವಾಸೇರು ಎನ್ನುವಂತೆ, ಅಮರನಾಥ ಮಂದಿರಕ್ಕೆ ನೂರು ಎಕರೆ ಜಮೀನು ಮಂಜೂರು ಮಾಡಿದ್ದನ್ನು ನೆಪಮಾಡಿಕೊಂಡು ಹಿಂಸಾತ್ಮಕ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದಾರೆ. ಶ್ರೀಮಂತ ರಾಷ್ಟ್ರಗಳ ನಾಯಕರಿಗೆ, ವಿಶ್ವದ ಎಲ್ಲ ಬಡದೇಶಗಳೂ ಆತಂಕವಾದಿಗಳಂತೆ ಕಾಣತೊಡಗಿದ್ದಾರೆ! ಇದನ್ನೇ ನಾನು ಸೇರಿಗೆ ಸವ್ವಾ ಸೇರು ಎಂದದ್ದು!

ಗಾಂಧೀಜಿ ತಾನು ನಂಬಿದಂತೆ ಬದುಕಿ ಮರೆಯಾಗಿ ಹೋದರು. ಆದರೆ ಅವರ ವಿಚಾರಗಳು ಹಾಗೂ ಆತನ ಜೀವನಶೈಲಿಯು ನಮ್ಮನ್ನು ಗಾಢವಾಗಿ ಹಿಡಿದುಬಿಟ್ಟಿದೆ. ಆಧುನಿಕ ಮಾನವನಿಗೆ ಗಾಂಧೀಜಿಯವರನ್ನು ಮರೆಯುವುದು ಸಾಧ್ಯವಾಗಿಲ್ಲ. ದಿನ ಕಳೆದಂತೆ, ಭವಿಷ್ಯದ ಆತಂಕವು ನಮ್ಮನ್ನು ಹೆಚ್ಚು ಹೆಚ್ಚಾಗಿ ಕಾಡತೊಡಗಿದೆ. ನಮಗಿಷ್ಟವಿರದಿದ್ದರೂ, ಯಂತ್ರ ನಾಗರೀಕತೆಯ ಕೀಲುಗಳನ್ನು ಒಂದೊಂದಾಗಿ ಕಳಚುವುದು ಅನಿವಾರ್ಯವಾಗಬಹುದೇನೋ ಎಂಬ ಅರಿವು ಮಾನವ ಜಗತ್ತಿನಲ್ಲಿ ನಿಧಾನವಾಗಿ ಮೂಡುತ್ತಿದೆ. ಹಾಗಾಗಿಯೇ ಗಾಂಧೀಜಿ ದಿನ ಕಳೆದಂತೆ ಹೆಚ್ಚು ಹೆಚ್ಚು ಪ್ರಸ್ತುತರಾಗುತ್ತಿರುವುದು.

ಇತ್ತ, ಕನ್ನಡ ರಂಗಭೂಮಿಯು ಬಳಲುತ್ತಿದೆ. ಕಳೆದ ಶತಮಾನದ ಪೂವರ್ಾರ್ಧದವರೆಗೆ ಅದರ ಪ್ರಾಥಮಿಕ ಜವಾಬ್ದಾರಿಯು ಮನರಂಜನೆಯಾಗಿತ್ತು. ಮನರಂಜನೆ ಮಾಡುತ್ತಲೇ ಅದು, ಜನರ ಶೈಕ್ಷಣಿಕ ಜವಾಬ್ದಾರಿಯನ್ನೂ ಸಹ ನಿರ್ವಹಿಸುತ್ತಿತ್ತು. ಈಗ ಕಾಲ ಬದಲಾಗಿದೆ. ಮನರಂಜನೆಯ ಜವಾಬ್ದಾರಿಯು ರಂಗಭೂಮಿಯ ಕೈತಪ್ಪಿ ಟೆಲಿವಿಷನ್, ಸಿನಿಮಾ, ಇಂಟರ್ನೆಟ್ ಇತ್ಯಾದಿ ಇಲೆಕ್ಟ್ರಾನಿಕ್ ಮಾಧ್ಯಮಗಳ ಪಾಲಾಗಿದೆ. ಹಾಗಾಗಿ ಮನರಂಜನೆಗಾಗಿಯೇ ರಂಗಭೂಮಿಯತ್ತ ಬರುತ್ತಿದ್ದ ದೊಡ್ಡ ಪ್ರಮಾಣದ ಜನರು ರಂಗಭೂಮಿಯನ್ನು ತೊರೆದು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡ ರಂಗಭೂಮಿಯು ತನ್ನ ಶೈಕ್ಷಣಿಕ ಜವಾಬ್ದಾರಿಗೆ ಹೆಚ್ಚಿನ ಒತ್ತು ನೀಡಬೇಕು. ಆ ಮೂಲಕ ಕನ್ನಡ ಸಮಾಜಕ್ಕೆ ಮತ್ತೆ ತಾನು ಉಪಯುಕ್ತವಾಗಬೇಕು. ಬೇರೆ ದಾರಿಯಿಲ್ಲ. ಚರಿತ್ರೆಯೂ ಇದೇ ಮಾತನ್ನು ಪುಷ್ಟೀಕರಿಸುತ್ತದೆ.

(more…)


Read Full Post | Make a Comment ( None so far )

ಆ ನಟ ‘ಮೂರು ಮಂದಿ’ ಎಂದು ಉತ್ತರಿಸಿದರು

Posted on November 25, 2009. Filed under: 1 |

‘ನಾಯಕ ಭ್ರಮೆ’ಯ ನಟರು ಮತ್ತು ಪಾ

-ಅಕಾಲ

ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಸಿನಿಮಾ ಕುಸಿಯುತ್ತಿದ್ದರೆ ನಟರು ನಿರ್ದೇಶಕರತ್ತ ನಿರ್ದೇಶಕರು ನಿರ್ಮಾಪಕರತ್ತ, ನಿರ್ಮಾಪಕರು ಪ್ರೇಕ್ಷಕರತ್ತ ಬೊಟ್ಟು ಮಾಡಿ ಕೈ ತೊಳೆದುಕೊಳ್ಳುತ್ತ್ತಾರೆ. ಸಿನಿಮಾ ಎಂಬುದು ಒಂದು ತಪಸ್ಸಿನಂತಾಗದೆ ಕೈಗಾರಿಕೆಯಂತೆ ಯಾಂತ್ರಿಕವಾಗಿರುವುದು ಅದರ ಪ್ರಮುಖ ವೈಫಲ್ಯತೆ. ಈ ಕೈಗಾರಿಕೆಯ ಉತ್ಪನ್ನವೇ ಆಗಿರುವ ಬಹುತೇಕ ಹಿರಿಕಿರಿಯ ನಟರು ಕೂಡ ಯಾಂತ್ರಿಕವಾಗಿಯೇ ಯೋಚಿಸುತ್ತಾರೆ ಅನ್ನಿಸುತ್ತದೆ.

ಒಬ್ಬ ನಟ ನಾಯಕನ ಪಟ್ಟಕ್ಕೇರಿದ ಕೂಡಲೇ ಆತನೊಳಗೆ ಭ್ರಮೆಯೊಂದು ಬೇರೂರುತ್ತದೆ. ತಾನೊಬ್ಬ ನಾಯಕ ನಟ ಆ ಪಟ್ಟ ಎಂದೆಂದಿಗೂ ತ್ಯಜಿಸಬಾರದು ಎಂದು. ಹೀರೋ ಎಂಬ ಪದವನ್ನು ಚಿತ್ರರಂಗ ಅದು ಹೇಗೆ ಅರ್ಥ ಮಾಡಿಕೊಂಡಿದೆಯೋ ಗೊತ್ತಿಲ್ಲ. ಒಬ್ಬ ನಟ ಹೀರೋ ಆಗಿಬಿಟ್ಟನೆಂದರೆ ಆತ ಹಣ್ಣು ಹಣ್ಣು ಮುದುಕನಾದರೂ ಫೈಟ್ ಮಾಡುತ್ತಾ, ನಾಯಕಿಯರೊಂದಿಗೆ ಮರ ಸುತ್ತುತ್ತಲೇ ಇರಬೇಕೆಂಬ ರೂಢಿ ಚಿತ್ರೋದ್ಯಮದಕ್ಕೆ ಮೊದಲಿನಿಂದಲೂ ಅಂಟಿಕೊಂಡು ಬಂದಿರುವ ಶಾಪ. ನಾಯಕನಟರಿಗೂ ಅಷ್ಟೆ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ ಬಿಡುವ ಚಪಲ. ವಯಸ್ಸಾದ ಕಾರಣಕ್ಕೆ ಹಿರಿಯರೂ ಆಗಿ ಹೋಗಿರುವ ನಟರನ್ನು ಎದುರುಹಾಕಿಕೊಳ್ಳುವ ಗೋಜಿಗೂ ಹೊಸ ಪೀಳಿಗೆ ಹೋಗುವುದಿಲ್ಲ. ಚಿತ್ರರಂಗ ಏನಾದರೂ ಯಶಸ್ಸಿನ ಹಾದಿಯಲ್ಲಿ ತಪ್ಪು ಹೆಜ್ಜೆಗಳನ್ನಿಡುತ್ತಿದ್ದರೆ ಅದಕ್ಕೆ ಬಹು ಮುಖ್ಯ ಕಾರಣ ಈ ನಾಯಕ ಭ್ರಮೆಯ ನಟರು.

ಇಷ್ಟೆಲ್ಲ ಹೇಳಲು ಪ್ರೇರೇಪಿಸುವಂತೆ ಮಾಡಿರುವುದು ಬಿಡುಗಡೆಗೆ ಸಜ್ಜಾಗಿರುವ ಬಾಲಿವುಡ್ ಚಿತ್ರ ’ಪಾ’. ಚಿತ್ರದಲ್ಲಿ ಅಮಿತಾಭ್ ರೋಗಗ್ರಸ್ತ ಮಗುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೊಬ್ಬ ಭ್ರಮೆಗಳನ್ನು ಮರೆತಾಗ ಮಾತ್ರ ಇಂಥ ಮಹಾನ್ ಸಾಧನೆ ಸಾಧ್ಯ. ಅದನ್ನು ಮರೆತಿದ್ದಕ್ಕೇ ಚಾರ್ಲಿ ಚಾಪ್ಲಿನ್ ಜನರ ಮನಸ್ಸಿನಲ್ಲಿ ಅಚ್ಚ ಹಸುರಾಗಿ ಉಳಿದಿದ್ದು. ಒಂದು ಘಟ್ಟದವರೆಗೆ ಇಮೇಜ್ ಅನ್ನುವುದು ಮುಖ್ಯ. ಆಮೇಲೇನಿದ್ದರೂ ಇಮೇಜ್‌ಗಳನ್ನು ರೂಪಿಸಬೇಕು ಎಂಬುದು ನಾಯಕ ನಟರಿಗೆ ಅದೇಕೆ ಅರ್ಥವಾಗುವುದಿಲ್ಲ?
ಪ್ರಕಾಶ್ ರೈರಂಥ ಮಹಾನಟ ಇಮೇಜ್‌ಗೆ ಅಂಟಿ ಕುಳಿತಿದ್ದರೆ ಕಾಂಚಿವರಂನಂಥ ಶ್ರೇಷ್ಟ ಕಲಾಕೃತಿಯೊಂದು ಮೂಡಿ ಬರಲು ಸಾಧ್ಯವಿತ್ತೇ? ಹಾಗೆ ನೋಡಿದರೆ ಪ್ರಕಾಶ್ ರೈ ತಮ್ಮ ಪಾತ್ರಗಳ ಮೂಲಕ ಚಿತ್ರರಂಗದ ಗ್ರಾಮರ್‌ಗೆ ಪ್ರಶ್ನೆಗಳನ್ನು ಎಸೆಯುತ್ತಾರೆ. ಈ ಮೂಲಕ ಜನಮನದಲ್ಲಿ ಹಸಿರಾಗಿ ಉಳಿಯುತ್ತಾರೆ. ತೆಲುಗಿನಲ್ಲಿ ‘ಕೊತ್ತ ಬಂಗಾರು ಲೋಕಂ’ ಎಂಬ ಚಿತ್ರ ಬಿಡುಗಡೆಯಾಯಿತು. ನವಿರಾದ ಪ್ರೇಮದ ಸುತ್ತ ಚಿತ್ರ ಹೆಣೆದಿದ್ದರೂ ಥಿಯೇಟರ್‌ನಿಂದ ಹೊರಬಂದಾಗ ಮನಸ್ಸಿನಲ್ಲಿ ಅಚ್ಚೊತ್ತುವುದು ಪೋಷಕ ನಟನಾಗಿದ್ದ ಪ್ರಕಾಶ್ ರೈ ಪಾತ್ರ. ಅದು ನಟನೊಬ್ಬನ ನಿಜವಾದ ಯಶಸ್ಸು.
ಒಂದು ಹಂತಕ್ಕೆ ಬಂದಾಗ ನಾಯಕ ನಟರು ಕಲಿಕೆಯನ್ನು ಮರೆತು ಬಿಡುತ್ತಾರೆ ಅನ್ನಿಸುತ್ತದೆ. ಇಂದಿನ ಪ್ರೇಕ್ಷಕರು ಏನನ್ನು ಬಯಸುತ್ತಾರೆ ಎಂಬುದು ಅವರಿಗೆ ಅರ್ಥವೇ ಆಗುವುದಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ  ತನ್ನ ಸ್ವಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳುತ್ತಾನಲ್ಲಾ ಅಂಥ ಸ್ಥಿತಿ ಈ ವರ್ಗದ ನಟರದ್ದು.
ಉದಯೋನ್ಮುಖ ಪೋಷಕ ನಟರೊಬ್ಬರು ಚಿತ್ರವೊಂದರಲ್ಲಿ ನಟಿಸಿದ್ದರು. ಅವರನ್ನು ಭೇಟಿಯಾದ ಕಾಲೇಜು ಹುಡುಗನೊಬ್ಬ ನೀವು ನಟಿಸುತ್ತಿರುವ ಚಿತ್ರದಲ್ಲಿ ಹೀರೋ ಯಾರು ಎಂದು ಕೇಳಿದ.
ಆ ನಟ ‘ಮೂರು ಮಂದಿ’ ಎಂದು ಉತ್ತರಿಸಿದರು. ಹುಡುಗ ತಕ್ಷಣ ತನ್ನ ಮನಸ್ಸನಲ್ಲಿ ಮಾಹಾನುಭಾವ ನಟರನ್ನೆಲ್ಲ ಕಲ್ಪಿಸಿಕೊಂಡು ‘ಯಾರು ಯಾರು ಅವರು?’ ಎಂದ.
ಆ ಕಥೆಯಲ್ಲಿದ್ದ ಅಜ್ಜಿ ಮತ್ತು ಮುದುಕಿ ಹಾಗೂ ಅವರ ಮನೆಯ ಕೆಲಸಗಾರನ ಚಿತ್ರಣವನ್ನು ಕಣ್ಣ ಮುಂದೆ ತಂದರು. ಹೀರೋಯಿಸಂ ಬಗ್ಗೆ ಹುಡುಗನಲ್ಲಿದ್ದ ಕಲ್ಪನೆಗಳು ಬದಲಾದವು.
ಎಷ್ಟು ದಿನ ಒಬ್ಬನೇ ನಟನನ್ನು ನಾಯಕನನ್ನಾಗಿ ತೋರಿಸಲು ಸಾಧ್ಯ? ಆ ನಾಯಕ ನಟ ಎಷ್ಟು ದಿನ ತಾನೇ ಯುವಕನಾಗಿ ಉಳಿಯಲು ಸಾಧ್ಯ? ಇದರಿಂದ ಹಿರಿಯ ನಟರೆನಸಿಕೊಂಡವರು ಹೊಸಬರಿಗೆ ಬೋಧಿಸುವುದಾದರೂ ಏನನ್ನು?

ಭ್ರಮೆಗಳಲ್ಲಿ ಬದುಕುತ್ತಿರುವ ನಾಯಕ ನಟರೇ ಮೊದಲು ‘ಪಾ’ ಚಿತ್ರ ನೋಡಿ.


Read Full Post | Make a Comment ( None so far )

ಅಲ್ಲಾಡಿ ರುದ್ರಣ್ಣನವರ ಪತ್ರ

Posted on November 25, 2009. Filed under: 1 |

ವಿರಾಟಪರ್ವ…

-ಎಚ್  ಎಸ್ ವೆಂಕಟೇಶ ಮೂರ್ತಿ

ಅಲ್ಲಾಡಿ ರುದ್ರಣ್ಣನವರ ಪತ್ರ ನನ್ನನ್ನು ಆತಂಕಕ್ಕೆ ಈಡುಮಾಡಿತು. ಎರಡೇ ಸಾಲು. ಭದ್ರಕ್ಕ ನೆಲ ಹಿಡಿದಿದ್ದಾಳೆ. ಅವಳ ಕೊನೆಯ ಆಸೆಯಂತೆ ಗೊಂಬೆ ಮ್ಯಾಳ ಏರ್ಪಡಿಸಲಾಗಿದೆ. ತಕ್ಷಣ ಹೊರಟು ಬರತಕ್ಕದ್ದು.

ಭದ್ರಕ್ಕ ನೆಲ ಹಿಡಿದಿದ್ದಾಳೆ ಎನ್ನುವ ಮಾತು ನನ್ನ ಕರುಳನ್ನು ಕಿವುಚಿತು. ಬದ್ರಕ್ಕ ನಮ್ಮ ಮನೆತನಕ್ಕೆ ಮೊದಲಿಂದ ಹತ್ತಿರದವಳು. ಆಕೆಯೂ ನಮ್ಮ ಅಜ್ಜಿಯೂ ಆಪ್ತ ಗೆಳತಿಯರು. ನಮ್ಮ ಕೇರಿಯಲ್ಲೇ ಭದ್ರಕ್ಕನ ಮನೆಯೂ ಇತ್ತು. ಓಣಿಯಾಕಾರದ ದೊಡ್ಡ ಮನೆ. ಅದರಲ್ಲಿ, ಪಾಪ, ಒಬ್ಬಳೇ ಮುದುಕಿ ವಾಸವಾಗಿದ್ದಳು. ಕ್ಷಮಿಸಿ. ಒಬ್ಬಳೇ ಅನ್ನುವುದು ತಪ್ಪು. ಅವಳ ಜೊತೆಗೆ ಅವಳ ಹತ್ತು ರಾಸುಗಳೂ ಆ ಮನೆಯಲ್ಲಿ ಇದ್ದವು. ಒಂದೆರಡು ಒದ್ದುಕೊಂಡಿದ್ದರೂ ಏಳೆಂಟು ಎಮ್ಮೆಗಳಾದರೂ ಅವಳ ಮನೆಯಲ್ಲಿ ಹಾಲು ಕರೆಯುತ್ತಲೇ ಇದ್ದವು. ಜೊತೆಗೆ ಒಂದೆರಡು ಮಣಕ. ನಾಕಾರು ಸಣ್ಣ ಕರುಗಳು. ದೊಡ್ಡ ಸಂಸಾರ ಭದ್ರಕ್ಕನದು. ನಮ್ಮ ಊರಿನ ಹೆಚ್ಚಿನ ಮನೆಗಳಿಗೆ ಭದ್ರಕ್ಕನ ಮನೆಯಿಂದಲೇ ಹಾಲು ಸರಬರಾಜು ಆಗುತಿತ್ತು. ಮನೆಗಳು ಮಾತ್ರವಲ್ಲ ರುದ್ರಣ್ಣನ ಹೋಟೆಲ್ಲಿಗೂ ಭದ್ರಕ್ಕನೇ ಹಾಲು ಕಳಿಸುತ್ತಿದ್ದಳು. ರಾಸು ಸಾಕುವುದರಲ್ಲಾಗಲಿ, ಅವಕ್ಕೆ ಬ್ಯಾನೆ ಬೇಸರಿಕೆ ಆದಾಗ ಔಷಧೋಪಚಾರ ಮಾಡುವುದರಲ್ಲಾಗಲೀ, ಟೊಂಕದ ಮೇಲೆ ಬೆನ್ನನ್ನು ಒತ್ತಿ ಹಿಡಿದು ಅದು ಈದಮೇಲೆ ಎಷ್ಟು ಹಾಲು ಕೊಡಬಹುದು ಎಂಬುದನ್ನು ಕರಾರುವಾಕ್ಕಾಗಿ ಊಹಿಸುವುದರಲ್ಲಾಗಲೀ, ಹಲ್ಲುಬಿಡಿಸಿ ಅವುಗಳ ವಯಸ್ಸು ಹೇಳುವುದರಲ್ಲಾಗಲೀ, ಅವುಗಳ ಸುಳಿ ನೋಡಿ ಶುಭ ಅಶುಭ ಹೇಳುವುದರಲ್ಲಾಗಲೀ ಭದ್ರಕ್ಕನನ್ನು ಮೀರಿಸುವರೇ ಆಸುಪಾಸಲ್ಲಿ ಇರಲಿಲ್ಲ ಎಂದರೆ ನೀವು ನಂಬಬೇಕು. ತಾನಾಯಿತು ತನ್ನ ಎಮ್ಮೆಗಳಾಯಿತು, ಅವುಗಳ ಕರುಗಳಾಯಿತು…ಈ ಪ್ರಪಂಚದಲ್ಲಿ ಇಡೀ ದಿನ ಭದ್ರಕ್ಕನ ಸಮಯ ಕಳೆದು ಹೋಗುತ್ತಿತ್ತು. ಬೆಳಗಾದರೆ ಅವನ್ನು ಮನೆಯಿಂದ ಹಿತ್ತಲಿಗೆ ಒಯ್ದು ಅವುಗಳ ಮೈ ತೊಳೆಯುವುದು, ಆಮೇಲೆ ಕೊಟ್ಟಿಗೆ ಕ್ಲೀನು ಮಾಡಿ ಹೊಸ ಹುಲ್ಲು ಹಾಕಿ ದನಗಳನ್ನು ಒಳಗೆ ಕಟ್ಟುವುದು, ಬಳಿಕ ತಾನು ಮೈತೊಳಕೊಂಡು, ಶಿವಪೂಜೆ ಮುಗಿಸಿ, ಕರುಬಿಟ್ಟು, ಆಮೇಲೆ ಹಾಲು ಕರೆದು, ಮುಖದ ತುಂಬ ಬೆವರ ಹನಿ ಮುಡಕೊಂಡು ಹೊರಕ್ಕೆ ಬಂದು, ಗುಪ್ಪೆ ಮಂಚದ ಮೇಲೆ ಕಾಲು ಚಾಚಿ ಕೂತು ಶಿವನೇ ಎಂದು ಅವಳು ಉದ್ಗಾರ ತೆಗೆಯುವುದು. ಅಷ್ಟರಲ್ಲಿ ಹಾಲಿಗಾಗಿ ವರ್ತನೆಯ ಮನೆಯವರು ಬರಲು ಶುರುವಾಗುತ್ತಿತ್ತು. ಆ ವೇಳೆಗಾಗಲೇ ಭದ್ರಕ್ಕ ಧರ್ಮ ಕರ್ಮ ನೋಡಿ ಹಾಲಿಗೆ ಎಷ್ಟು ನೀರು ಬೆರೆಸಿದರೆ ಅನ್ಯಾಯವಾಗುವುದಿಲ್ಲವೋ ಅಷ್ಟು ಮಾತ್ರ ನೀರು ಬೆರೆಸಿ ವರ್ತನೆಯವರಿಗೆ ಹಾಲು ಅಳೆದು ಕೊಡುತ್ತಿದ್ದಳು. ಭದ್ರಕ್ಕನ ಮನೆಯಷ್ಟು ಗಟ್ಟಿ ಹಾಲು, ಹಾಲು ಹೈನಿಗೆ ಪ್ರಸಿದ್ಧವಾಗಿದ್ದ ಎರಗಟ್ಟೀಹಳ್ಳಿಯಲ್ಲೂ ಸಿಕ್ಕುವುದಿಲ್ಲ ಎಂದು ಆ ಕಾಲದಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು.

ಎಮ್ಮೆ ಸಾಕುವುದು, ಹಾಲು ಮಾರುವುದು ಅಷ್ಟೇ ಭದ್ರಕ್ಕನ ಜೀವನವಾಗಿದ್ದರೆ ಅವಳ ನೆನಪು ನನ್ನಲ್ಲಿ ಇಷ್ಟು ಗಾಢವಾಗಿ ಉಳಿಯುತ್ತಿರಲೇ ಇಲ್ಲ. ದನಗಳನ್ನು ಜಂಗ್ಲಿಗೆ ಹೊಡೆದ ಮೇಲೆ ಬೇಗ ಬೇಗ ನಾಷ್ಟ ಮುಗಿಸಿ ಭದ್ರಕ್ಕ ಒಂದು ಸಣ್ಣ ಸರ್ಕೀಟು ಹೊಡೆಯುತ್ತಿದ್ದಳು. ಭದ್ರಕ್ಕ ಆರಡಿಯ ಆಜಾನುಬಾಹು ಆಳು. ಸೀರೆ ಸ್ವಲ್ಪ ಮೇಲಕ್ಕೇ ಉಟ್ಟುಕೊಳ್ಳುತ್ತಿದ್ದಳು. ಅಥವಾ ಹೀಗೆ ಹೇಳೋಣ. ಎಂಥ ದೊಡ್ಡ ಪನ್ನದ ಸೀರೆ ತಂದರೂ ಅದು ಭದ್ರಕ್ಕನ ಎತ್ತರಕ್ಕೆ ಒಂದು ಗೇಣು ಕಮ್ಮಿಯೇ ಆಗುತ್ತಿತ್ತು. ಸರಿ. ಆ ಸೀರೆ ಸೆರಗನ್ನು ಭದ್ರಕ್ಕ ತಲೆ ಅರ್ಧ ಮುಚ್ಚುವಂತೆ ಹೊದ್ದು, ಸೆರಗಿನ ಚುಂಗನ್ನು ಹಲ್ಲಲ್ಲಿ ಕಚ್ಚಿಕೊಂಡು , ಎರಡೂ ಕೈ ರಮ ರಮ ಬೀಸಿಕೊಂಡು ಬೀದಿಯಲ್ಲಿ ಬರುತ್ತಿದ್ದರೆ ಅದೊಂದು ವೈಭವ . ಅವಳ ನಡಿಗೆಯಲ್ಲಿ ಹೆಣ್ತನದ ನಯನಾಜೂಕು ಇರುತ್ತಿದ್ದಿಲ್ಲ. ಜೀಕು ಮೆಟ್ಟು ಹಾಕಿಕೊಂಡು ಜೀಕು ಜೀಕು ಸದ್ದು ಮಾಡುತ್ತಾ ಅವಳು ಬರುತ್ತಾ , ಗಟ್ಟಿಯಾಗಿ ನಗುತ್ತಾ, ತನ್ನ ಗಂಡು ಧ್ವನಿಯಲ್ಲಿ “ಅಕ್ಕಾ…ಕಾಫೀ ಆತೇನೇ?” ಎಂದು ಗಟ್ಟಿಯಾಗಿ ಕೂಗುತಾ ಇದ್ದಳು. ನಮ್ಮಜ್ಜಿ ಬಾರೇ ಬಾರೇ ಭದ್ರಕ್ಕ ಎಂದು ಭದ್ರಕ್ಕನನ್ನು ಕರೆದು, ಅವಳಿಗೆ ಚಾಪೆ ಕೊಡವಿ ಹಾಸಿ-ನಿನ್ನ ಹಾಲಿನ ಉಸಾಬರಿ ಎಲ್ಲಾ ಮುಗೀತಾ ? ಎಂದು ಕೇಳುತ್ತಿದ್ದಳು. “ಹಾಲು ಕಳಿಸೇ ಮತ್ತೆ ನಿಮ್ಮ ಹಟ್ಟೀಗೆ ಕಾಫೀ ನೀರಿಗೆ ಬಂದದ್ದು..!” ಎಂದು ಭದ್ರಕ್ಕ ಗಟ್ಟಿಯಾಗಿ ನಗುತ್ತಾ ಇದ್ದಳು. ಆ ಧ್ವನಿ ಕೇಳಿ ಭದ್ರಕ್ಕ ಬಂದಳೂ ಅಂತ ಕಾಣತ್ತೆ ಎಂದು ಇನ್ನೂ ಹಾಸಗೆಯಲ್ಲಿ ಗುಬುರಿಕೊಂಡಿರುತ್ತಾ ಇದ್ದ ನಾನು ಹೊರಗೆ ಓಡಿ ಬರುತಾ ಇದ್ದೆ. ಭದ್ರಕ್ಕ ನನ್ನನ್ನು ನೋಡಿ-”ಯವ್ವ ನನ್ನ ಚಂದುಳ್ಳಿ ಚಲುವರಾಯ ಬಂತಲ್ಲಪ್ಪಾ… ಏ ನನ್ನ ಬಂಗಾರದ್ ಬುಗುಡಿ…ಯಾವತ್ತೋ ನನ್ನಾನಿನ್ನಾ ಮದವೀ ಮುಹೂರ್ತ?” ಎಂದು ನಗೆಸಾರ ಮಾಡುತ್ತಾ ಅಟ್ಟಿಸಿಕೊಂಡು ಬರುತ್ತಾ ಇದ್ದಳು. ಇಬ್ಬರ ನಡುವೆ ಒಂದು ಸಣ್ಣ ಸ್ಪರ್ಧೆ ನಡೆದು ಕೊನೆಗೆ ನಾನು ಭದ್ರಕ್ಕನ ಕೈವಶವಾಗದೆ ನಿರ್ವಾಹವಿರಲಿಲ್ಲ. ಭದ್ರಕ್ಕ ನನ್ನನ್ನು ಎತ್ತಿಕೊಂಡು ತನ್ನ ಎರಡು ದಿನದ ಗಡ್ಡದ ಮೊಳಕೆ ಕೆನ್ನೆಗೆ ಚುಚ್ಚುತ್ತಾ ಬುಳು ಬುಳು ಮಾಡುತಾ ಇದ್ದಳು.

ಹೀಗೆ ಹಾಸ್ಯ, ನಗೆಚಾಟಿಕೆ, ಜೀವನೋತ್ಸಾಹಗಳಿಂದ ನಮ್ಮ ಸಣ್ಣ ಹಳ್ಳಿಯಲ್ಲಿ ಭದ್ರಕ್ಕ ಎಲ್ಲರ ಮನೆಯ ಹೆಣ್ಣುಮಗಳಾಗಿದ್ದಳು. ಆಕೆಯನ್ನು ಕಂಡರೆ ಎಲ್ಲರಿಗೂ ಒಂದು ಬಗೆಯ ಮಮಕಾರ. ಊರೊಟ್ಟಿನ ಬಾಳಲ್ಲಿ ಭದ್ರಕ್ಕನಿಲ್ಲದೆ ಯಾವುದೂ ನಡೆಯುವಂತಿರಲಿಲ್ಲ. ಜಾತ್ರೆಯಾಗಲೀ, ತೆಪ್ಪವಾಗಲೀ, ಬಯಲುಬಸವನ ನೀರ್ಮಜ್ಜನವಾಗಲೀ ಭದ್ರಕ್ಕ ಗಟ್ಟಿ ದನಿಯಲ್ಲಿ ಕೂಗುತ್ತಾ ನಗುತ್ತಾ ಮುಂದೆ ಇರಲೇ ಬೇಕು. ಗೌಡರು, ಶಾನುಭೋಗರೂ ಎಲ್ಲರ ಜತೆಗೂ ಅವಳಿಗೆ ಬಹಳ ಸಲುಗೆ. ವಯೋವೃದ್ಢರಾದ ಪುರೋಹಿತರ ಕೈ ಹಿಡಿದು ಎಳೆದು ನಗೆಚಾಟಿಕೆ ಮಾಡುವ ಸಲುಗೆ ನಮ್ಮೂರಲ್ಲಿ ಭದ್ರಕ್ಕನಿಗಲ್ಲದೆ ಬೇರೆ ಯಾರಿಗೆ ಇತ್ತು?

(more…)


Read Full Post | Make a Comment ( None so far )

ಚೇತನಾ ಕವಿತೆ: ಜೋಗತಿ ಹಾಡು

Posted on November 24, 2009. Filed under: 1 |

-ಚೇತನಾ ತೀರ್ಥಹಳ್ಳಿ

ಜೋಗತಿ ಹಾಗೆ ಅಲೆಯುತ್ತೇನೆ.
ವಿಳಾಸ ಕೇಳುವಿರಾದರೆ,
ಮನೆಮನೆಯ ಹೆಣ್ಣುಗಳ ಕಣ್ಣಲ್ಲಿ ಹಣಕಿ.
ಅವರೆದೆಯ ಗುಟ್ಟು ನಾನಾಗಿದ್ದೇನೆ
ಬಯಕೆ ಕಟ್ಟಿಕೊಂಡ ಬಸವಿ-
ಬೀದಿಗಿಳಿದಿದೇನೆ
ರೆಕ್ಕೆ ತೊಟ್ಟಿದೇನೆ
ಹಾರುಹಾದಿಯಲ್ಲೆಲ್ಲೂ ಹೆಜ್ಜೆ ಮೂಡದಂತೆ
ಎಚ್ಚರವಿಟ್ಟಿದೇನೆ.

ಅವರೆಲ್ಲರ-
ಒಳಬೇನೆಯ ಗರತಿಯರೆಲ್ಲರ
ಬಯಕೆಯ ಬೀಜಗಳನ್ನ ಹೊತ್ತಿಕೊಂಡಿದೇನೆ
ಕಳ್ಳಕಾಡಿನಲ್ಲಿ ಉತ್ತು
ಸುಖದುಸಿರು ಬೆಳೆಯಬೇಕಿದೆ.

ಪೇಟೆಯಲ್ಲಿ ಗುಲ್ಲು!
ನನ್ನ ನಾಚಿಗೆಟ್ಟ ಅಪರಾಧಕ್ಕೆ
ಸಜೆ ಕೊಡುತ್ತಿದ್ದಾರೆ,
ಯಾವತ್ತೂ ಕನಸು ಕಾಣದಂತೆ
ಕಣ್ಣು ಕೀಳುವುದಾಗಿ ಹೇಳುತ್ತಿದ್ದಾರೆ!!

ಕಿತ್ತ ಕಣ್ಣುಗಳ ಕವಡೆಯಾಗಿಸಿ
ಕಣಿ ಹೇಳುತ್ತೇನೆ,
ಎದೆಯ ಕದವಿಕ್ಕಿ ಬಿಕ್ಕಿದ
ಹಾಡುಗಳಿಗೆ
ದನಿಯಾಗಿ ಸುರಿಯುತ್ತೇನೆ…


Read Full Post | Make a Comment ( 7 so far )

Recently on ಅವಧಿ...

ಆ ದಿನ…ಹೀಗೂ ಇತ್ತು

Posted on November 25, 2009. Filed under: 1 |

ಇವರು ಯಾರು ಬಲ್ಲೆಯೇನು?

Posted on November 24, 2009. Filed under: 1 |

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

Posted on November 24, 2009. Filed under: 1 |

ಮೈಸೂರಿನಲ್ಲಿ ಮಾಧ್ಯಮಗಳ ಬಗ್ಗೆ ಕಣ್ಣೋಟ

Posted on November 24, 2009. Filed under: 1 |

ಇಂದು ನೀವು ಮಿಸ್ ಮಾಡಬಾರದ ಒಂದು ನಾಟಕ

Posted on November 24, 2009. Filed under: 1 |

ಹೀರೆಕಾಯಿ ಸಿಪ್ಪೆ ಚಟ್ನಿ

Posted on November 23, 2009. Filed under: 1 |

ಅಶ್ವಥ್ ಹಾಡಲಿದ್ದಾರೆ

Posted on November 22, 2009. Filed under: 1 |

ವಿವೇಕ ರೈ ಕವಿತೆ

Posted on November 22, 2009. Filed under: 1 |

ನನಗೆ ಆಯ್ಕೆಇದ್ದಿದ್ರೆ ಕೃಷ್ಣ, ಶ್ರೀರಾಮ, ಬುದ್ಧ ಆಗಿ ಹುಟ್ಟಬಹುದಿತ್ತು…

Posted on November 21, 2009. Filed under: 1 |

‘ನ್ಯೂಸ್ ವೀಕ್’ ಸಂಪಾದಕರೊಂದಿಗೆ

Posted on November 21, 2009. Filed under: 1 |

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    November 2009
    M T W T F S S
    « Oct    
     1
    2345678
    9101112131415
    16171819202122
    23242526272829
    30  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...