ಈ ಬಾರಿಯ ಸಮ್ಮೇಳನ ನಮ್ಮ ಮನೆಯಂಗಳದಲ್ಲಿ ಅಂದರೆ ಬೆಂಗಳೂರಿನಲ್ಲಿ ನಡೆಯುತ್ತಿರುವಾಗ ಹೋಗದಿದ್ದರೆ ಹೇಗೆ? ಹಾಗೆಂದುಕೊಂಡು ಬಹಳ ಹಿಂದೆಯೇ ಹೋಗುವುದೆಂದು ತೀರ್ಮಾನಿಸಿಕೊಂಡಿದ್ದೆ. ಹಾಗೆ ತೀರ್ಮಾನಿಸಲು ಒಂದು ನೆಪವೂ ಇತ್ತು. ನಾನು ರಹಮತ್ ತರಿಕೆರೆಯವರ ’ಕರ್ನಾಟಕ ನಾಥ ಪಂಥ’ ಪುಸ್ತಕವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ಕೆಲ ಸಮಯದ ಹಿಂದೆ ಅಂಕಿತಾ, ಸ್ವಪ್ನ, ನವಕರ್ನಾಟಕ ಸೇರಿದಂತೆ ಕೆಲವು ಪುಸ್ತಕ ಮಳಿಗೆಗಳಲ್ಲಿ ಹುಡುಕಾಡಿದ್ದೆ. ಸಿಕ್ಕಿರಲಿಲ್ಲ. ನವೆಂಬರಿನಲ್ಲಿ ಪ್ರತಿ ಬಾರಿ ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳದಲ್ಲೂ ಸಿಕ್ಕಿರಲಿಲ್ಲ.
ಪ್ರಸ್ತುತ ವರ್ಷ ರಹಮತ್ ತರಿಕೆರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆಯಲ್ಲ ಹಾಗಾಗಿ ಅವರ ಕೃತಿಗಳೆಲ್ಲಾ ಸಮ್ಮೆಳನದಲ್ಲಿ ದೊರಕಬಹುದೆಂಬ ನಿರೀಕ್ಷೆಯಿತ್ತು.
ಆದರೆ ಶುಕ್ರವಾರ ಟೀವಿ ಮುಂದೆ ಕುಳಿತೆ ನೋಡಿ, ಸಮ್ಮೆಳನಕ್ಕೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ಕನ್ನಡದ ನ್ಯೂಸ್ ಚಾನಲ್ ಗಳು ಪೈಪೋಟಿಗೆ ಬಿದ್ದವರಂತೆ ಸಮ್ಮೇಳನದ ಲೈವ್ ಕವರೇಜ್ ಗಳನ್ನು ನೀಡತೊಡಗಿದವು. ಹಿಂದೆ ಒಂದೆರಡು ಸಮ್ಮೇಳನದಲ್ಲಿ ಭಾಗವಹಿಸಿದ್ದ ನನಗೆ ಗೊತ್ತಿತ್ತು. ಸಮ್ಮೇಳನದ ಎಲ್ಲಾ ಸೂಕ್ಷ ವಿವರಗಳನ್ನು ನಮಗೆ ಕಾಣಲು ಸಾಧ್ಯವಿಲ್ಲವೆಂದು. ಆದರೆ ಕ್ಯಾಮರ ಕಣ್ಣುಗಳ ವ್ಯಾಪ್ತಿ ದೊಡ್ಡದು. ಅವು ಯಾವುದೇ ವ್ಯಾಖ್ಯಾನವಿಲ್ಲದೆ ಸಮಸ್ತ ವಿವರಗಳನ್ನು ಬಹು ಸುಲಭವಾಗಿ ವಿಕ್ಷಕರಿದ್ದೆಡೆಗೇ ತಲುಪಿಸಬಲ್ಲವು.
ಇದಲ್ಲದೆ ಸಮ್ಮೇಳನದ ವರದಿಗೆಂದೇ ’ಅವಧಿ’ ಯ ಸಹಯೋಗದಲ್ಲಿ ’ನುಡಿಮನ’ ಎಂಬ ಬ್ಲಾಗ್ ಹುಟ್ಟಿಕೊಂಡಿತ್ತು. ಅದು ಸಚಿತ್ರ ವರದಿಯೊಂದಿಗೆ ಸದಾ ಅಪ್ಡೇಟ್ ಆಗುತ್ತಲಿತ್ತು. ಜನಜಂಗುಳಿಯಿಂದ ಸದಾ ದೂರವಿರಲು ಇಷ್ಟಪಡುವ ನನಗಿದು ಸಾಕಾಗಿತ್ತು.
ಇತ್ತೀಚಿನ ಟಿಪ್ಪಣಿಗಳು