ತೇಜಸ್ವಿ ‘ಪಂಚಿಂಗ್ ಲೈನ್’

pic15

T20=ತೇಜಸ್ವಿ ಟ್ವೆಂಟಿ : ಸಹಜಕೃಷಿ

ಡಾ.ಬಿ.ಆರ್.ಸತ್ಯನಾರಾಯಣ

ನಂದೊಂದ್ಮಾತು

ಶೀರ್ಷಿಕೆ ನೋಡಿ ‘ಇದೇನಪ್ಪ ತೇಜಸ್ವಿಗೂ 20:20 ಕ್ರಿಕೆಟ್ಟಿಗೂ ಏನು ಸಂಬಂಧ’ ಎಂದು ತಲೆಕೆರೆದುಕೊಳ್ಳಬೇಡಿ. ಇಂದು ನಮ್ಮ ತೇಜಸ್ವಿಯವರ 72ನೇ ಹುಟ್ಟಿದ ಹಬ್ಬ. ನನ್ನ ಬ್ಲಾಗಿನಲ್ಲಿ ಅವರ ಬಗ್ಗೆ ಏನಾದರೂ ಬರೆಯಬೇಕೆಂಬ ಆಸೆ ನನಗೆ. ಆದರೆ ಏನು ಬರೆಯುವುದು? ತೇಜಸ್ವಿ ಮತ್ತು ಅವರ ಸಾಹಿತ್ಯದ ನಿತ್ಯವಿದ್ಯಾರ್ಥಿಯಾದ ನನಗೆ ಅವರ ಬಗ್ಗೆ ಬರೆಯುವುದೆಂದರೆ ಭಾರೀ ಸಂಭ್ರಮ ಜೊತೆಗೇ ಭಯವೂ ಕೂಡಾ! ಬರೆಯುವುದಕ್ಕಿಂತ ಅವರ ಸಾಹಿತ್ಯವನ್ನು ಓದುತ್ತಾ ಮನಸ್ಸಿನಲ್ಲಿಯೇ ಅನುಸಂಧಾನ ಮಾಡಿ ಆನಂದಿಸುವುದೇ ನನಗೆ ಹೆಚ್ಚು ಇಷ್ಟ.

ಅವರ ಪುಸ್ತಕಗಳನ್ನು ಓದುವಾಗ ನನಗೆ ‘ಪಂಚಿಂಗ್ ಲೈನ್’ ಎಂದು ಕಂಡು ಬಂದ ವಾಕ್ಯಗಳನ್ನು ಅಡಿಗೆರೆ ಎಳೆಯುವುದು, ಬರೆದಿಟ್ಟುಕೊಳ್ಳುವುದು ಮಾಡಬೇಕೆಂದುಕೊಳ್ಳುತ್ತಿದ್ದೆ. ಆದರೆ ಓದುವಾಗ ಆ ವಿಷಯವೇ ಮರೆತು ಅವರ ಕೃತಿಗಳೊಳಗೆ ನಾನು ಇಳಿದುಬಿಡುತ್ತಿದ್ದೆ. ಇಲ್ಲ ಬಲವಂತವಾಗಿ ಅಡಿಗೆರೆ ಎಳೆಯಲು ಹೊರಟರೆ, ಓದುವುದೇ ನಿಂತುಹೋಗುತ್ತಿತ್ತು; ಜೊತೆಗೆ ಎಲ್ಲವೂ ಪಂಚಿಂಗ್ ಲೈನ್‌ಗಳಂತೆಯೇ ಕಾಣುತ್ತಿದ್ದವು! ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಮರುಓದಿಗೆ ಒಳಪಡಿಸುವಾಗ ಈ ರೀತಿಯ ಚಡಪಡಿಕೆ ಕಡಿಮೆಯಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದ್ದರಿಂದ ಇತ್ತೀಚಿಗೆ ನಾನು ಮತ್ತೆ ಓದಿದ ‘ಸಹಜಕೃಷಿ’ ಪುಸ್ತಕದಲ್ಲಿ ಈ ಅಡಿಗೆರೆ ಎಳೆಯುವ ಕಾರ್ಯದಲ್ಲಿ ಸ್ವಲ್ಪಮಟ್ಟಿನ ಯಶಸ್ಸು ನನ್ನದಾಗಿದೆ. ಹಾಗೆ ಅಡಿಗೆರೆ ಎಳೆದ ಸಾಲುಗಳಲ್ಲಿ ಇಪ್ಪತ್ತನ್ನು ಆಯ್ದು ಇಂದು ನಿಮ್ಮೆದುರಿಗೆ ಇಡುತ್ತಿದ್ದೇನೆ. ಅದಕ್ಕೇ ಈ T20=ತೇಜಸ್ವಿ ಟ್ವೆಂಟಿ!

tejasvi4ಚಿತ್ರ: ಡಿ ಜಿ ಮಲ್ಲಿಕಾರ್ಜುನ್

ಸಹಜಕೃಷಿಯನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ಸಹಜಕೃಷಿಯನ್ನು ಓದಿದವರೂ ಮತ್ತೊಮ್ಮೆ ಸಹಜಕೃಷಿಯನ್ನು ಓದುವಂತಾದರೆ ಡಬಲ್ ಖುಷಿ ನನ್ನದು.

ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.

ಭಾರತದ ಆಧುನೀಕರಣದ ಕತೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕತೆ.

ದಿನವೂ ನೂರಾರು ವಸ್ತುಗಳನ್ನು ಉತ್ಪಾದಿಸಿ ಜಾಹಿರಾತುಗಳ ಮುಖಾಂತರ ಪ್ರಚೋದಿಸುವ ಆಧುನಿಕ ಕೈಗಾರಿಕೆಗಳಿಗೆ ಸರಳ ಜೀವನ ಸೋಂಕು ರೋಗದಂತೆ ಭಯಾನಕವಾಗಿ ಕಾಣುತ್ತದೆ.

ಪೃಥ್ವಿಯ ಮೇಲೆ ಮಾನವ ಉದಿಸುವುದಕ್ಕೂ ಮೊದಲೇ ರೂಪುಗೊಂಡ ಈ ಗಿಡಮರಗಳಿಗೆ ಮಾನವನ ಕೃತಕ ಕೃಷಿಯ ಅಗತ್ಯವಿಲ್ಲ.

ಭೂಮಿ ಮಿಲಿಯಗಟ್ಟಲೆ ವರ್ಷಗಳಿಂದ ಜೀವಸೃಷ್ಟಿ ಮಾಡುತ್ತಾ ಬಂದ ಅದಮ್ಯ ಚೈತನ್ಯದ ಅಕ್ಷಯ ಪಾತ್ರೆ.

ಇನ್ನಷ್ಟು

ಕ್ರಿಕೆಟ್ ಬ್ಯಾಟಿನಲ್ಲಿ ಚಿಮ್ಮಿದ ಲತಾ ಮಂಗೇಶ್ಕರ್ ಹಾಡು

ನಮ್ಮೆಲ್ಲರ ಪ್ರೀತಿಯ ಜಿ ಆರ್ ವಿಶ್ವನಾಥ್ ಗೆ ೬೦ ವಸಂತಗಳು ತುಂಬಿತಲ್ಲಾ, ಆ ನೆನಪಿಗೆ ಈ ಹಿಂದೆ ‘ಅವಧಿ’ಯ ‘ಡೋರ್ ನಂ 142’ ಅಂಕಣದಲ್ಲಿ ಪ್ರಕಟವಾಗಿದ್ದ ಒಂದು ಲೇಖನ ಮತ್ತೆ ನಿಮ್ಮ ಮುಂದೆ – 

 

ಕಚ್ಚೆ ಪಂಚೆ, ಕರಿಕೋಟು, ತಲೆಗೆ ಟೊಪ್ಪಿಗೆ, ಕಿವಿಗೆ ಸದಾ ತಗುಲಿಕೊಂಡಿರುವ ಪಾಕೆಟ್ ಟ್ರಾನ್ಸಿಸ್ಟರ್.

ಬೆಂಗಳೂರು ಎಂಬ ಸಂತೆಯಲ್ಲಿ ಕಂಡ ಈ ಮುಖ ನನ್ನೊಳಗೆ ಸದಾ ಕುತೂಹಲ ಹುಟ್ಟುಹಾಕಿತ್ತು. ಟಿವಿ ಇಲ್ಲದ ಕಾಲದಲ್ಲಿ, ಕ್ರಿಕೆಟ್ ಎಂಬುದು ಸಾಂಕ್ರಾಮಿಕ ರೋಗವಾಗಿರದಿದ್ದ ಕಾಲದಲ್ಲಿ ಇಳಿವಯಸ್ಸಿನ ಮುದುಕರೊಬ್ಬರು ಕಿವಿಗೆ ಟ್ರಾನ್ಸಿಸ್ಟರ್ ಅಂಟಿಸಿಕೊಂಡೇ ಇರುತ್ತಾರೆ ಎಂದರೆ ಯಾಕೊ ಥಟ್ಟನೆ ಗಮನ ಸೆಳೆಯುತ್ತದೆ.ಅಮೆರಿಕಾದ ಮಾರುಕಟ್ಟೆಯಲ್ಲಿ ಕಂಡ ಹಚ್ಚ ಹಸುರಿನ ಕೊತ್ತಂಬರಿ ಸೊಪ್ಪಿನ ಹಾಗೆ, ತುಂಬು ದಂತಪಂಕ್ತಿಯಲ್ಲಿ ಉದುರಿದ ಒಂದೇ ಒಂದು ಹಲ್ಲಿನಂತೆ, ಖಾಲಿ ಸಭಾಂಗಣದಲ್ಲಿ ತುಂಬಿದ ಒಂದೇ ಒಂದು ಕುರ್ಚಿಯಂತೆ…

grv2

ನಿರ್ಲಿಪ್ತ ಮುಖಕ್ಕೆ ಆ ಟ್ರಾನ್ಸಿಸ್ಟರ್ ದಾಟಿಸುತ್ತಿದ್ದುದಾದರೂ ಏನು ಎಂಬುದೇ ಆ ಕುತೂಹಲ. ಆದರೆ ಇನ್ನೂ ಒಂದು ವಿಶೇಷವಿತ್ತು. ಆ ಹಿರಿಯರು ಕ್ರಿಕೆಟ್ ಸೀಸನ್ ಬಂದಾಗ ಮಾತ್ರ ಟ್ರಾನ್ಸಿಸ್ಟರ್ ಕಿವಿಗೆ ತಗುಲಿಸಿಕೊಳ್ಳುತ್ತಿದ್ದರು. ಕ್ರಿಕೆಟ್ ಎಂಬುದು ಆಗ ಇನ್ನೂ ದುಡ್ಡು ಕಂಡಿರಲಿಲ್ಲ. ಹೀಗಾಗಿ ದಿಢೀರ್ ದುಡ್ಡು ಮಾಡುವ “ಒನ್ ಡೇ”ಗಳೂ ಹುಟ್ಟಿರಲಿಲ್ಲ. ಹಾಗಾಗಿ ಐದು ದಿನಗಳ ಕಾಲದ ಟೆಸ್ಟ್ ಗಳು ಮಾತ್ರವೇ ಕ್ರಿಕೆಟ್ ಆಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚಿದ್ದರೆ ಐದು ದಿನಗಳ ಕಾಲ ಶಾಲೆ ಕಾಲೇಜಿಗೆ ರಜಾ. ಐದು ದಿನಗಳ ಕಾಲವೂ ಬೆಂಗಳೂರು ಬೀದಿಗಳಲ್ಲಿ ಕಿವಿಗೆ ಟ್ರಾನ್ಸಿಸ್ಟರ್ ತಗುಲಿಸಿಕೊಂಡ ಮಂದಿ.

ಪಡ್ಡೆ ಹುಡುಗರ ಮಧ್ಯೆ ಕರಿ ಟೊಪ್ಪಿಯ ಹಿರಿಯ. ಸದಾ ಬಸ್ ಸ್ಟಾಂಡಿನಲ್ಲಿ ಕಾಣುತ್ತಿದ್ದ ಈ ಹಿರಿಯರು ಒಂದು ದಿನ ಮನೆಯೊಂದರ ಕಾಂಪೌಂಡಿನಲ್ಲಿ ಕಂಡರು. ರಾಜಾಜಿನಗರದ ರಾಮಪ್ಪ ಶಾಪ್ ರಸ್ತೆಯಲ್ಲಿದ್ದ ಸಾಧಾರಣ ಮನೆ ಅದು. ಪಕ್ಕಾ ಮಿಡ್ಲ್ ಕ್ಲಾಸ್ ಮನೆ. ಮನೆಯೊಳಗೆ ಮನೆಯೊಡೆಯ ಇದ್ದಾನೊ ಇಲ್ಲವೊ ಎಂಬುದೂ ಗೊತ್ತಾಗದಂತೆ ತಣ್ಣಗಿರುತ್ತಿದ್ದ ಮನೆ.

grvಗಣೇಶನ ಹಬ್ಬ ಬಂತು. ಹುಡುಗರಿಗೆಲ್ಲಾ ಮನೆ ಮನೆಗೆ ಹೋಗಿ ನೂರೊಂದು ಗಣೇಶ ನೋಡುವ ಸಂಭ್ರಮ. ಬೀದಿ ಬೀದಿ ಸುತ್ತಬಹುದಲ್ಲ ಅನ್ನೋದು ಒಂದು ಅಟ್ರಾಕ್ಷನ್. ಅದಕ್ಕಿಂತ ಗಣೇಶ ಇಟ್ಟವರು ಕೊಡುವ ಪ್ರಸಾದ. ಗಣೇಶ ಬೇಕಿಲ್ಲದಿದ್ದರೂ ಪ್ರಸಾದ ಇರಲಿ ಅನ್ನೋ ಆಸೆ.

ಚಡ್ಡಿ ಏರಿಸಿ ಮನೆ ಮನೆ ತಿರುಗುತ್ತಾ ಬಂದಾಗ ಆ ಹಿರಿಯರ ಮನೇನೂ ಸಿಕ್ತು. ಯಥಾ ಪ್ರಕಾರ ಗಣೇಶ ಇಟ್ಟಿದೀರಾ ಕೋರಸ್ ಹೊರಡಿಸಿ ಉತ್ತರಕ್ಕೂ ಕಾಯದೆ ಒಳಗೆ ನುಗ್ಗೋದೇ ಕಸುಬು. ಆ ಮನೆಗೂ ಒಳಗಡೆ ನುಗ್ಗಿದಾಗ “ಷಾಕ್” ಕಾದಿತ್ತು. ಅದು ಮನೆ-ಅಲ್ಲ, ಮ್ಯೂಸಿಯಂ-ಅಲ್ಲ, ಕ್ರಿಕೆಟ್ ಸ್ಟೇಡಿಯಂ.

ಓಹ್! ಇದು ಜಿ ಆರ್ ವಿಶ್ವನಾಥ್ ಮನೆ.

ಗುಂಡಪ್ಪ ರಂಗಪ್ಪ ವಿಶ್ವನಾಥ್ ಮನೆ.

grv1ನಾನು ನೋಡುತ್ತಿದ್ದ ಆ ಹಿರಿಯ ವಿಶ್ವನಾಥ್ ಹೆಸರಲ್ಲಿರುವ “ಜಿ ಆರ್” ಎಂದು ಗೊತ್ತಾದದ್ದೇ ಆಗ.

ಅಡ್ಯನಡ್ಕ ಕೃಷ್ಣಭಟ್ಟರು ತಮ್ಮ ಮಗ ಮೊದಲ ಬಾರಿಗೆ ಸಮುದ್ರ ನೋಡಿದಾಗ ಅವನಿಗೆ ಉಂಟಾದ ಅಚ್ಚರಿಯನ್ನು ಬಣ್ಣಿಸಿದ್ದರು. ಅವನ ಬಾಯಲ್ಲಿ ಮಾತೇ ಹೊರಟಿರಲಿಲ್ಲ. ಕಣ್ಣುಗಳೇ ಎಲ್ಲವನ್ನೂ ಹೇಳಿ ಮುಗಿಸಿತ್ತು. ಆ ಕಣ್ಣುಗಳು ಹೇಳಿದ್ದಕ್ಕೆ ಎಷ್ಟು ಮಾತುಗಳ ಸಪೋರ್‍ಟ್ ಕೊಟ್ಟಿದ್ದರೂ ಆಗುತ್ತಿರಲಿಲ್ಲ.

ಈಗ ನಾನು ಅದೇ ಸ್ಥಿತಿಯಲ್ಲಿದ್ದೆ. ಸದಾ ನಾನು ಕೇಳುತ್ತಿದ್ದ, ಪತ್ರಿಕೆಗಳಲ್ಲಿ ನೋಡುತ್ತಿದ್ದ, ಜಗತ್ತಿನ ಉದ್ದಗಲಕ್ಕೆ ಬೆಳೆದು ನಿಂತಿದ್ದ ಆ ಜಿ ಆರ್ ವಿಶ್ವನಾಥ್ ಮನೆಯಲ್ಲೇ ನಾನು ನಿಂತಿದ್ದೆ.

grv3ಜಿ ಆರ್ ವಿಶ್ವನಾಥ್ ಏಕೋ ನಮಗೆ ಕ್ರಿಕೆಟ್ ಆಟಗಾರ ಮಾತ್ರವಾಗಿರಲಿಲ್ಲ. ಆತ ನೈತಿಕತೆಯ ಒಂದು ಪಾಠವಾಗಿದ್ದ.

ಜಿ ಆರ್ ವಿಶ್ವನಾಥ್ ಗೆ ತಾನು ಔಟಾಗಿದ್ದೇನ ಅನ್ನಿಸಿದ್ದರೆ ಅಂಪೈರ್ ಗೆ ಬೆರಳೆತ್ತುವ ಕೆಲಸವನ್ನೇ ಕೊಡುತ್ತಿರಲಿಲ್ಲ. ತಿರುಗಿ ನೋಡದೆ ಪೆವಿಲಿಯನ್ ಗೆ ಹಿಂದಿರುಗುತ್ತಿದ್ದರು. ಔಟ್ ಕೊಟ್ಟ ನಂತರವೂ ವಿಶ್ವನಾಥ್ ಕ್ರೀಸ್ ನಲ್ಲಿಯೇ ಉಳಿದರು ಎಂದರೆ ಕ್ರೀಡಾಂಗಣದಲ್ಲಿ ನೂರಾರು ಕುರ್ಚಿಯ ಕಥೆ ಮುಗಿಯಿತು ಅಂತಲೇ ಅರ್ಥ. ಔಟಾಗಿ ಪೆವಿಲಿಯನ್ನಿಗೆ ಮರಳುತ್ತಿದ್ದ ಬ್ಯಾಟ್ಸ್ ಮನ್ ನನ್ನು ಮತ್ತೆ ಕರೆದು ಆಡಿಸಿ ಮ್ಯಾಚನ್ನೇ ಕಳೆದುಕೊಂಡ ಕ್ಯಾಪ್ಟನ್ ಒಬ್ಬನಿದ್ದರೆ ಆತ ಜಿ ಆರ್ ವಿಶ್ವನಾಥ್ ಮಾತ್ರ.

ವಿಶ್ವಕಪ್ ನಲ್ಲಿ ಕೇವಲ “ಆಡಿ” ಕಾರಿನ ಮೇಲೆ ಕಣ್ಣಿಟ್ಟೇ ಆಡಿದವರ ಮಧ್ಯೆ ಕ್ಯಾಪ್ಟನ್ ಗಿರಿಯನ್ನೇ ಒತ್ತೆ ಇಟ್ಟು “ಆಡಿ”ಸಿದವರೂ ಇದ್ದರು.

ಜಿ ಆರ್ ವಿಶ್ವನಾಥ್ ಸುನಿಲ್ ಗವಾಸ್ಕರ್ ತಂಗಿಯನ್ನು ಮದುವೆಯಾದರಂತೆ ಅಂತಾ ಸುದ್ದಿ ಬಂದಾಗ ನಾವು ಮರುಗಿದ್ದೂ ಉಂಟು. ಗವಾಸ್ಕರ್ ಆಟದ ಬಗ್ಗೆ ನಮಗೇನೂ ತಕರಾರು ಇರಲಿಲ್ಲ. ಆದರೆ ಎಂತಾ ವಿಶ್ವನಾಥ್ ಅಂತಾ ಚಾಣಾಕ್ಷನ ಬಳಿಗೆ ಎಂದು ಯಾಕೋ ಅನಿಸಿಬಿಟ್ಟಿತ್ತು. ಕ್ರಿಕೆಟ್ ನಲ್ಲಿ ಮುಂಬೈ ದಾದಾಗಿರಿ ನಡೆಯಿತ್ತಿದ್ದ ದಿನಗಳು ಅವು.

ಜಿ ಆರ್ ವಿಶ್ವನಾಥ್ ಅಂದರೆ ಲತಾ ಮಂಗೇಶ್ಕರರ ಹಾಡಿನಂತೆ; ಹತ್ತು ಗವಾಸ್ಕರ್ ಗಳು ಬರಬಹುದು, ಆದರೆ ಇನ್ನೊಬ್ಬ ವಿಶ್ವನಾಥ್ ಬರಲಾರ -ಎಂಬಂತಹ ಸಾಲುಗಳು “ಸುಧಾ”ದಲ್ಲಿತ್ತು.

ಯಾಕೋ ಮನದಾಳದಲ್ಲಿ ಅದು ನಿಂತುಬಿಟ್ಟಿದೆ. ಜಿ ಆರ್ ವಿಶ್ವನಾಥ್ ನಮಗೆ ಜಿ ಆರ್ ವಿಶ್ವನಾಥ್ ಅಲ್ಲ. ನಮ್ಮದೇ ರೀತಿಯ ಮನೆ ಇರುವ ಗುಂಡಪ್ಪ ರಂಗಪ್ಪನವರ ಮಗ ವಿಶ್ವನಾಥ್. ನೂರಾರು ಲೋಗೋ ಬಣ್ಣದ ಟಿ ಶರ್ಟ್ ಇಲ್ಲದ, ಬಿಳಿ ಟೋಪಿ, ಬಿಳಿ ಡ್ರೆಸ್ ಧರಿಸಿದ, ನಗಲೂ ಗೊತ್ತಿಲ್ಲದ ವಿಶ್ವನಾಥ್.

grv4ಬೆಂದು ಆದವ ಬೇಂದ್ರೆ ಅಂತಾರಲ್ಲಾ, ಹಾಗೇ

ಬೆಂದು ಆದವ ವಿಶ್ವನಾಥ್ ಕೂಡಾ…

ಹೀಗೂ ಒಂದ್ಕತೆ

ಷ್ಟು ದೊಡ್ಡ ಮನೆ.

ಬೆಕ್ಕು ಮತ್ತು ನಾಯಿ ಕೈಯಲ್ಲಿ ಮನೆ ಕೊಟ್ಟು ಮನೆ ಮಂದಿಯೆಲ್ಲ ಸಂಬಂಧಿಕರ ಮದ್ವೆಗಂತಾ ಹೋಗಿದ್ರು.

ಬೆಕ್ಕು ಒಳಗಿತ್ತು. ನಾಯಿ ಹೊರಗೆ. ಮಧ್ಯಾಹ್ನ ಊಟಗೀಟ ಮುಗಿಸಿದ ಅವೆರಡೂ ಸ್ವಲ್ಪ ಹೊತ್ತು ಮಲ್ಕೊಳ್ಳುವಾ ಹೇಳಿ ಮಲಗಿಕೊಂಡವು. ಯಥಾಪ್ರಕಾರ ಬೆಕ್ಕು ಒಳಗೆ, ನಾಯಿ ಹೊರಗೆ.

ಇಬ್ಬರಿಗೂ ಜೋರು ನಿದ್ದೆ. ಅಂತಾ ನಿದ್ದೆಯಲ್ಲೇ ನಾಯಿ ಧಡಕ್ಕನೆ ಎದ್ದಿತು. “ಬೆಕ್ಕಣ್ಣಾ, ಬೆಕ್ಕಣ್ಣಾ ಒಳ್ಗೆ ಏನೋ ಬಿದ್ದಂಗಾಯ್ತಲ್ಲೋ, ಏನೂಂತಾ ನೋಡೂ” ಎಂದಿತು. ಬೆಕ್ಕು ಎದ್ದು ಒಂದು ರೌಂಡು ಮನೆಯೊಳಗೆ ಓಡಾಡಿ, “ಅದೇನಿಲ್ಲವೊ, ರಾಗಿಕಾಳು” ಎಂದಿತು.

ಒಂದು ಕ್ಷಣದ ಚಂಡಿ ಅವತಾರ

ಕೆಲ ದಿನಗಳ ಹಿಂದೆ ಚೀನಾದಿಂದ ವರದಿಯಾದ ಒಂದು ಘಟನೆ.

ಒಬ್ಬ ಟೀವಿಯಲ್ಲಿ ಸೌಂದರ್ಯ ಸ್ಪರ್ಧೆಯ ನೇರ ಪ್ರಸಾರವನ್ನು ನೋಡುತ್ತ ಕುಳಿತಿದ್ದನಂತೆ. ಆತನ ಹೆಂಡತಿ ಏನನ್ನೋ ಕೇಳಿದರೂ, ಅದರ ಬಗ್ಗೆ ಲಕ್ಷ್ಯವೇ ಇಲ್ಲದವನಂತೆ ಸುಂದರಿಯರತ್ತ ಅವನ ಕಣ್ಣು. ತನ್ನ ಮಾತನ್ನು ಕಿವಿಯ ಮೇಲೇ ಹಾಕಿಕೊಳ್ಳದ ಗಂಡನ ಈ ರೀತಿಯನ್ನು ಅದೆಷ್ಟೋ ಹೊತ್ತಿನಿಂದ ನೋಡಿ ರೋಸಿಹೋದ ಆಕೆ ಏನನ್ನೋ ಎತ್ತಿ ಟೀವಿಯತ್ತ ಎಸೆದೇ ಬಿಟ್ಟಳಂತೆ. ಟೀವಿ ಚೂರು ಚೂರು. ಆತ ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದನಲ್ಲ, ಆ ಅರೆನಗ್ನ ಸುಂದರಿಯರೂ ಒಂದು ಕ್ಷಣ ಚೆಲ್ಲಾಡಿ ಹೋಗಿ, ಆಮೇಲೆ ನೋಡುವುದಕ್ಕೇನಿತ್ತು?

ತನ್ನ ಹೆಂಡತಿಯನ್ನು ಅಷ್ಟು ಹೊತ್ತೂ ಮರೆತು ಕೂತಿದ್ದವ ಹೆಂಡತಿಯ ಈ ಚಂಡಿ ಅವತಾರಕ್ಕೆ ಕಂಗಾಲಾದನೇ ಎಂಬುದರ ಬಗ್ಗೆ ವರದಿ ಏನನ್ನೂ ಹೇಳಿರಲಿಲ್ಲ. ಇಂಥ ಘಟನೆಗಳನ್ನು ನಾವೂ ತಮಾಷೆಯದ್ದೆಂಬಂತೆ ಮಾತ್ರ ನೋಡುತ್ತೇವೆ. ಆದರೆ ಹೆಣ್ಣೊಬ್ಬಳ ಹೋರಾಟದ ಋಜುತ್ವ ಮತ್ತು ಸಹಜತೆಯಿರುವುದು ಅವಳ ಇಂಥ ಸಣ್ಣಪುಟ್ಟ ಪ್ರತಿರೋಧಗಳಲ್ಲೇ ಎಂಬುದನ್ನು ಗಮನಿಸದೇ ಹೋಗುತ್ತೇವೆ.

ಹೋಮಾಪಕ್ಷಿ

ಲ್ಲದಕ್ಕೂ ಬೇರೆಡೆಗೇ ನೋಡುವ, ನಮ್ಮ ಹಿತ್ತಿಲ ಹಿರಿಮೆಯ ಬಗ್ಗೆ ಅದೇಕೋ ಅಜ್ಞಾನಿಗಳಂತೆಯೇ ಉಳಿಯುವ ನಮ್ಮ ಮುಂದೆ “ಹೋಮಾಪಕ್ಷಿ” ಒಂದು ಪಾಠವಾಗಿ ನಿಲ್ಲುತ್ತದೆ.

ಹೋಮಾಪಕ್ಷಿಯ ಜೀವನ ರೀತಿಯೇ ಅಂಥದ್ದು. ಅದು ಆಕಾಶದಲ್ಲಿ ತತ್ತಿಯಿಡುತ್ತದೆ. ತತ್ತಿ ನೆಲದ ಕಡೆಗೆ ಬೀಳುತ್ತ, ಬೀಳುತ್ತ, ಹಾಗೆ ಬೀಳುತ್ತಿರುವಾಗಲೇ ಅದರಿಂದ ಮರಿ ಹೊರಬರುತ್ತದೆ. ಅದೂ ನೆಲದ ಕಡೆಗೆ ಬೀಳತೊಡಗುತ್ತದೆ. ಮತ್ತೆ, ಹಾಗೆ ಬೀಳುತ್ತಿರುವಾಗಲೇ ರೆಕ್ಕೆ ಬಲಿಯುತ್ತದೆ. ನಾನು ಬೀಳುತ್ತಿದ್ದೇನೆಂಬ ಅರಿವನ್ನು ಅದು ಪಡೆಯುತ್ತದೆ. ಗುರುತ್ವದ ಕಕ್ಷೆ ತಪ್ಪಿಸಿಕೊಂಡು ಆಕಾಶದ ಕಡೆಗೆ ಹಾರತೊಡಗುತ್ತದೆ. ಮತ್ತೆ ಅದು ಆಕಾಶದಲ್ಲಿ ತತ್ತಿಯಿಡುವುದು, ತತ್ತಿ ಕೆಳಕ್ಕೆ ಬೀಳತೊಡಗುವುದು, ಅದರಿಂದ ಹೊರಕ್ಕೆ ಬರುವ ಮರಿ ಆಕಾಶಕ್ಕೆ ಹಾರುವುದು – ಹೋಮಾಪಕ್ಷಿಯ ನಿರಂತರ ಜೀವನ ಯಾನ. ತನ್ನ ನೆಲೆಯನ್ನು, ತಾಯ್ತನದ ಪರಿಸರವನ್ನು ಕಳೆದುಕೊಳ್ಳದ ಒಂದು ಪರಂಪರೆಗೇ ರೂಪಕವಾಗಿ ಕಾಣಿಸುತ್ತದೆ ಹೋಮಾಪಕ್ಷಿ.

ಅಂದಹಾಗೆ, ಹೋಮಾಪಕ್ಷಿಯ ಪ್ರಸ್ತಾಪವಿರುವುದು ಋಗ್ವೇದದಲ್ಲಿ.

ದೇವರಿಗೆ ಆತ ಮತ್ತೆ ಬರೆದ!

srujan1.jpg

ಒಂದು ಸಲ ಒಬ್ಬ ಬಡವ ದೇವರಿಗೆ ಒಂದು ಕಾಗದ ಬರೆದನಂತೆ: “ದೇವರೇ, ನನಗೆ ನೂರು ರೂಪಾಯಿ ಬೇಕಾಗಿದೆ. ದಯವಿಟ್ಟು ಕಳಿಸು” ಅಂತ. ಕಾಗದದ ಮೇಲೆ, “ಸ್ವರ್ಗದಲ್ಲಿರುವ ದೇವರಿಗೆ” ಅಂತ ವಿಳಾಸ ಬರೆದು ಅಂಚೆಪೆಟ್ಟಿಗೆಯಲ್ಲಿ ಹಾಕಿದನಂತೆ.

ಪೋಸ್ಟಾಫೀಸಿನವರು ಆ ಕಾಗದವನ್ನು ನೋಡಿ ನಕ್ಕು “ನಮ್ಮ ರಾಜ್ಯದಲ್ಲಿ ಎಂಥೆಂಥವರಿದ್ದಾರೆ ಎಂಬುದನ್ನು ನಮ್ಮ ದೊರೆಗಳು ತಿಳಿಯಲಿ. ಅದೂ ಅಲ್ಲದೆ, ರಾಜಾ ಪ್ರತ್ಯಕ್ಷ ದೇವತಾ ಎಂದು ಹಿರಿಯರು ಹೇಳುತ್ತಾರಲ್ಲವೆ!” ಎಂದು ಅದನ್ನು ಆ ಊರಿನ ರಾಜನಿಗೆ ರವಾನಿಸಿದರು.

ರಾಜನೂ ಮಂತ್ರಿಯೂ ಪರಿವಾರದವರೂ ಆ ಬಡವನ ಕಾಗದವನ್ನು ಓದಿ ಓದಿ ನಕ್ಕು ನಕ್ಕು ಸುಸ್ತಾದರು. ಸುಧಾರಿಸಿಕೊಂಡ ಮೇಲೆ ದೊರೆ ಹೇಳಿದ: “ಮಂತ್ರಿ, ಆ ಬಡವನಿಗೆ ನೂರು ರೂಪಾಯಿ ಕಳಿಸಿಬಿಡು.”

ಮಂತ್ರಿ ಹೇಳಿದ: “ಪ್ರಭುವೇ, ಅವನೇ ನೂರು ಕೇಳಿರುವಾಗ ನಾವು ಪೂರ್ತಿ ನೂರನ್ನು ಕಳಿಸುವುದು ನೀತಿಯಲ್ಲ. ಹೀಗೆ ಕೇಳಿದವರಿಗೆಲ್ಲ ಅವರು ಕೇಳಿದಷ್ಟನ್ನು ಕಳಿಸಿದರೆ ಬೊಕ್ಕಸ ಬಹುಬೇಗ ಬರಿದಾಗುತ್ತದೆ. ಆದ್ದರಿಂದ ಅವನಿಗೆ ಐವತ್ತು ಕಳಿಸೋಣ, ಸಾಕು.”

“ಹಾಗೆಯೇ ಮಾಡು” ಎಂದ ರಾಜ. ಮಂತ್ರಿ ಆ ಬಡವನಿಗೆ ಅರಸನ ಹೆಸರಿನಲ್ಲಿ ಐವತ್ತು ರೂಪಾಯಿ ಕಳಿಸಿದ. ಬಡವ ಅದನ್ನು ಮಾತಿಲ್ಲದೆ ತೆಗೆದುಕೊಂಡ. ದೇವರಿಗೆ ಅದೇ ರಾತ್ರಿ ಮತ್ತೊಂದು ಕಾಗದ ಬರೆದ: “ದೇವರೇ, ನನ್ನ ಕಾಗದಕ್ಕೆ ನೀನು ಕೂಡಲೇ ಉತ್ತರ ಕೊಟ್ಟದ್ದು ತುಂಬ ಸಂತೋಷ. ಆದರೆ ದೇವರೇ, ಇನ್ನು ಮುಂದೆ ನೀನು ಹೀಗೆ ಏನಾದರೂ ಹಣ ಕಳಿಸುವುದಾದರೆ, ನೇರವಾಗಿ ನನಗೇ ಕಳಿಸು. ಈ ದೊರೆಯ ಮೂಲಕ ಕಳಿಸಬೇಡ. ಅವನು ನನಗೆ ಐವತ್ತು ಮಾತ್ರ ಕೊಟ್ಟಿದ್ದಾನೆ.”

ಚಿತ್ರ: ಸೃಜನ್

ಹೇನು

aaa.jpgಶಶಿ ಭಾಟಿಯ

ದೊಂದು ಅವಿಭಕ್ತ ಕುಟುಂಬ. ಊರು ತುಂಬ ತುಂಬಿದ ಸಾಗುವಳಿ ಕುಟುಂಬ. ಊರಿಗೇ ತುಂಬಿದ ಮನೆ. ಮನೆಯ ಮಕ್ಕಳ ಆಧುನಿಕ ರೀತಿ ಕಂಡು ತಾಯಿಯಾದವಳಿಗೆ ಬೊಡಿದು ಹೋಯಿತು. ಒಂದು ಮಾತಿಲ್ಲ, ನಗುವಿಲ್ಲ. ಮಕ್ಕಳಿಗೆ ಮದುವೆಯಾದ ಮೇಲೆ ಓಟ್ಟಿಗೆ ಊಟಕ್ಕೆ ಕೂರುವುದೂ ನಿಂತುಹೋಗಿದೆ. ಅವರವರಿಗೆ ಅವರವರ ಹೆಂಡಿರು, ಮಕ್ಕಳು. ಅಲ್ಲಿಗೆ ಮುಗಿಯಿತು. ಸೊಸೆಯಂದಿರೊ ಒಟ್ಟಿಗೆ ಕುಳಿತು ಅರೆದವರಲ್ಲ- ಗ್ರೈಂಡರ್ ಇದೆ. ಒಟ್ಟಿಗೆ ನಿಂತು ಒಗೆದವರಲ್ಲ- ಮೆಷಿನ್ ಇದೆ. ಬಾವಿಕಟ್ಟೆಯಲ್ಲಿ ಸೇರಿದವರಲ್ಲ- ಮೋಟರ್ ಇದೆ. ಗಂಡುಮಕ್ಕಳು ಅಲ್ಲಿರಲಿ, ಸೊಸೆಯಂದಿರ ಈ ರೀತಿ ಅತ್ತೆಗೆ ಸಹಿಸಲಾಗಲಿಲ್ಲ. ಮೊದಮೊದಲು ಟಿವಿ ನೋಡಲು ನಡುಕೋಣೆಗೆ ಬರುತ್ತಿದ್ದರು. ಈಗ ಪ್ರತಿ ಕೋಣೆಗೂ ಟಿವಿ ಬಂದಿದೆ.

ಆಕೆ ಒಂದು ಉಪಾಯ ಹುಡುಕಿದಳು.

ಒಂದು ದಿನ ಸೀದಾ ನಾಲ್ಕು ಮನೆಯಾಚೆಯ ದೇವಿ ಮನೆಗೆ ನಡೆದಳು. ಮಕ್ಕಳ ತಲೆಯಿಂದ ಹೇನು ಹೆಕ್ಕಿ ತೆಗೆದಳು. ರಾತ್ರಿ ಸೊಸೆಯಂದಿರ ತಲೆಗೆ ಹಂಚಿ ಹಾಕಿದಳು. ಮರುದಿನ ಬೆಳಗ್ಗೆ ವಾತಾವರಣವೇ ಬದಲಾಯಿತು. ಒಬ್ಬಳು ತಲೆ ತುರಿಸುತ್ತಾ ಆಚೆ ಓಡುತ್ತಿದ್ದರೆ, ಇನ್ನೊಬ್ಬಳು ಈಚೆಗೆ. ಒಬ್ಬಳು ಅಕ್ಕಾ ಹೇನು ಹೇನು ಅಂತಾ ಓಡುತ್ತಿದ್ದರೆ, ಇನ್ನೊಬ್ಬಳು ತಂಗೀ ಬಾಚಣಿಗೆ ಬಾಚಣಿಗೆ ಅಂತಾ ಓಡುತ್ತಿದ್ದಾಳೆ.

ಹಾಗೆ ಆ ಮನೆಗೆ ಸದ್ದು ಗದ್ದಲ ಬಂತು.

ಎಲ್ಲರಂಥವರಲ್ಲ ಈ ರಾಧೆಯರು!

ಶ್ರಾವಣಿ

ಸಲದ ಸುಗ್ಗಿಯೂ ಎದ್ದಾಯಿತು.

ಹಗ್ಣದ ಗಾಡಿಗಳು. ಉಂಗ್ಲ ಚಪ್ಪರ. ಹಣ್ಣಿನಂಗಡಿಗಳು. ಐಯ್ಸ್ ಕ್ರೀಮು ಡಬ್ಬಿಗಳು. ಮರಕಾಲು ಕೊಣ್ತಗಳು. ಕರಡಿ ಯಾಸಗಳು. ಕಾಗದದ ಹುಲಿಗಳು. ಬೇಲೆಗೆ ಬಂದು ಬಡಿಯುತ್ತಲೇ ಇರುವ ಕಡ್ಲ ತೆರೆಗಳಂತೆ ಅಲೆಯುತ್ತಿರುವ ಜನ. ಅವರ ನಡುವೆ ಜಾನಕಿ. ಅವಳೊಂದಿಗೆ ಅವಳ ನಿರೀಕ್ಷೆ, ಕಾತರ, ಬಯಕೆ, ಲಜ್ಜೆ. ಉಳಿದ ಹುಡುಗಿಯರೆಲ್ಲ ಈ ಸಲ ಅವಳು ತನ್ನ ಹುಡುಗನೊಂದಿಗೆ ಓಡಾಡಿಕೊಳ್ಳಲು ತೊಂದರೆಯಾಗಬಾರದು ಹೇಳಿ ಅವಳನ್ನು ಅವಳ ಪಾಡಿಗೆ ಬಿಟ್ಟು ತಮ್ಮ ದಾರಿ ನೋಡಿದ್ದರು.

ಜಾನಕಿ ಮೇಲಿಂದ ಕೆಳಗೆ, ಈ ದಿಕ್ಕಿನಿಂದ ಆ ದಿಕ್ಕಿಗೆ ಅಲೆದಳು. ಕಾಜೂಬಾಗದ ಹುಡುಗ ಕಾಣಲಿಲ್ಲ. ಮತ್ತೂ ಅಲೆದಳು. ಅರೆ, ಇಲ್ಲೇ ಇದ್ದಾನಲ್ಲ ಎಂದು ಕಣ್ಣುಗಳಲ್ಲಿ ಮಿಂಚೆದ್ದಿತು. ಇನ್ನೇನು ಅವನನ್ನು ಕೂಗಬೇಕು ಅನ್ನುವಾಗ ಅವನ ಜತೆ ಯಾವುದೋ ಹುಡುಗಿ – ತಾನು ಒತ್ತಿಕೊಂಡು ನಡೆಯುತ್ತಿದ್ದ ಹಾಗೇ – ಒತ್ತಿಕೊಂಡಿರುವುದನ್ನು ಕಂಡಳು. ಯಾವ ತಾಟಗಿತ್ತಿಯೋ ಅದು ಎಂದು ಒಳಗೇ ಬುಸುಗುಟ್ಟಿದಳು. ತಳಮಳವಾಯಿತು. ಕಾಲುಗಳು ಬತ್ತಿದಂತಾಯಿತು. ಬೆವರೊಡೆದು ಮೈತೋಯಿಸಿತು. ಹಾಗೇ ನಡೆದಳು. ನಡೆದಳು. ನಡೆದಳು. ಯಾವ ದಿಕ್ಕು ಎಂದು ಯೋಚಿಸಲಿಲ್ಲ. ಅದು ತೋಚಲೂ ಇಲ್ಲ. ಅಷ್ಟೊಂದು ಜನರನ್ನು ದಾಟಿ ಬಂದಿದ್ದೇನೆ ಎಂದು ಗೊತ್ತಾಗುವಂತೆ ಜನರ ಓಡಾಟ ತೆಳ್ಳಗೆ ಇದ್ದಲ್ಲಿಗೆ ಬಂದು ಮುಟ್ಟಿದಳು.

painting12.jpg

ಅಲ್ಲೊಂದು ಅರಳೀಕಟ್ಟೆ. ಸುಗ್ಗಿ ಹಬ್ಬಕ್ಕೆ ಬಂದ ಹೆಂಗಸರಲ್ಲಿ ಕೆಲವರು ತಮ್ಮ ಮಕ್ಕಳೊಂದಿಗೆ ಅಲ್ಲಿ ಕೂತು ಪುಗ್ಗಿಗೆ ಬಾಯಿ ಹಾಕಿ ಊದಿ ಮಕ್ಕಳಿಗೆ ಕೊಡುತ್ತ ಖುಷಿಪಡುತ್ತಿದ್ದರು.

ಅವರ ನಡುವೆಯೇ ಮುಖ ಸಪ್ಪಗೆ ಮಾಡಿಕೊಂಡು ಕೂತ ತನ್ನದೇ ಪ್ರಾಯದ ಹುಡುಗಿಯನ್ನು ನೋಡಿದ್ದೇ ಜಾನಕಿಗೆ ಅವಳೂ ತನ್ನಂತೇ ಕಾಣಿಸಿದಳು. ಅವಳ ಹತ್ತಿರ ಹೋದಳು. ಅವಳ ಕಣ್ಣಂಚಿನಲ್ಲಿ ನೀರು ಅಲೆದು ನಿಂತಿರುವುದನ್ನು ಕಂಡಳು. ಏನು ಎಲ್ಲಾಯ್ತು ಕೇಳಿದಳು. ಅಷ್ಟು ಕೇಳಿದ್ದೇ ಮುಖ ಮುಚ್ಚಿಕೊಂಡು ಧುಮಗುಟ್ಟಿ ಅಳತೊಡಗಿದಳು ಆಕೆ. ಅಳುತ್ತಳುತ್ತಲೇ ತಾನು ಅಗ್ರಗೋಣದ ಮೀನಾಕ್ಷಿ ಎಂಬುದನ್ನು ಹೇಳಿದಳು. ತನ್ನನ್ನು ಮದುವೆಯಾಗ್ತೆ ಹೇಳಿ ನಂಬಿಸಿದೋನು ಈಗ ಬ್ಯಾರೆ ಹುಡುಗಿ ಸಂಗ್ತಿಗೆ ಓಡಾಡ್ತಿವ ಹೇಳಿದಳು. ಮತ್ತೂ ಅತ್ತಳು. ಈಗಂತೂ ತನ್ನದೇ ಭಾಗವಾಗಿದ್ದಾಳೆ, ತನ್ನದೇ ಮತ್ತೊಂದು ರೂಪವಾಗಿದ್ದಾಳೆ ಈ ಅಗ್ರಗೋಣದ ಮೀನಾಕ್ಷಿ ಎನ್ನಿಸಿ ಅವಳನ್ನು ತಬ್ಬಿಕೊಂಡು ಬೆನ್ನು ನೇವರಿಸುತ್ತಾ ಸಂತೈಸತೊಡಗಿದಳು ಜಾನಕಿ. ಹಾಗೆ ಸಂತೈಸುತ್ತಲೇ ಹುಡುಗ ಎಲ್ಲಿಯವನೆ ಕೇಳಿದಳು. ಅವಳು ಉತ್ತರಿಸಿದಾಗ ಸಿಡಿಲೇ ಎರಗಿದಂತೆ ಬೆಚ್ಚಿದಳು. ಮರುಕ್ಷಣವೇ, ತಾನು ದಿಗಿಲಾದದ್ದು ಮೀನಾಕ್ಷಿಗೆ ತಿಳಿಯಬಾರದೆಂದು ಸಾವರಿಸಿಕೊಂಡಳು. ಅಗ್ರಗೋಣದ ಹುಡುಗಿಗೂ ಕಾಜೂಬಾಗದ ಹುಡುಗನಿಗೂ ಸುಗ್ಗಿ ಹಬ್ಬದ ದೋಸ್ತಿಯೇನೆ, ತುದಿ ಬುಡ ಒಂದೂ ಇಲ್ಲದ ಬಿಸಿ ಗಡಿಬಿಡೀಲಿ ಹುಟ್ಟೂ ದೋಸ್ತಿ ಖರೇ ಹೇಳೇ ತಿಳದ್ಯೇನೆ ಮಳ್ಳಿ ಎಂದು ಕೇಳುತ್ತ ಅವಳ ಕೆನ್ನೆ ಹಿಂಡಿದಳು.

ಮೀನಾಕ್ಷಿ ಈಗ ಕಣ್ಣೊರೆಸಿಕೊಳ್ಳುತ್ತ, ತಡೆಯಲಾರದ ಬಿಕ್ಕಳಿಕೆಗಳಲ್ಲಿ ತೋಯುತ್ತ ನಿಂತಿದ್ದಳು. ಅವಳಿಗೆ ಅರಳೀಕಟ್ಟೆಯ ಮೇಲೆ ಕೂತ ಹೆಂಗಸರು ಪುಗ್ಗಿಗೆ ಗಾಳಿ ತುಂಬುತ್ತಿರುವುದನ್ನು ಕಾಣಿಸಿದಳು. ಮೀನಾಕ್ಷಿಯ ಮುಖದಲ್ಲೀಗ ಸಾವಕಾಶವಾಗಿ ನಗೆಯ ರೇಖೆ ಅರಳತೊಡಗಿತ್ತು. ಅದನ್ನು ಕಂಡು ಖುಷಿಯಾದಳು. ಕಾಜೂಬಾಗದ ಹುಡುಗ ಮದುವೆಯಾಗುವ ಹುಡುಗಿ ತಾನೇ ಆಗಿ ಇಂದು ಅವನ ಜತೆ ತಾನೇ ಓಡಾಡಿಕೊಂಡಿದ್ದರೆ ಇಂತಾ ಮುದ್ದು ಹುಡುಗಿಯ ಕಣ್ಣೀರಿಗೆ ತಾನು ಕಾರಣಳಾಗುತ್ತಿದ್ದೆನಲ್ಲ ಎಂಬುದು ಮನಸ್ಸಲ್ಲಿ ಹಾದದ್ದೇ, ಆ ಪಟಿಂಗನ ಸಾವಾಸ ತಪ್ಪಿದ್ದೇ ಚಲೋದಾಯ್ತು ಎಂದುಕೊಂಡು ನಿರಾಳವಾದಳು. ಮಳ್ಳು ದೋಸ್ತೀಲಿ ಬಿದ್ದು ಖರೇ ಸುಗ್ಗಿ ಹಬ್ಬ ನೋಡೂದೇ ತಪ್ಪಿಸ್ಕಂಡೆ ನೀನು, ಈಗ ಬಾ ಸುಗ್ಗಿ ಹಬ್ಬ ಅಂದ್ರೆ ಎಂತಾ ಕುಶಾಲ ಹೇಳಿ ಕಾಣಿಸ್ತೆ ಎಂದವಳೇ ಅವಳ ಕೈಹಿಡಿದು ಎಳಕೊಂಡು ಓಡಿದಳು. ಪ್ರಾಯದ ಪೋರಿಯರಿಬ್ಬರು ಹಾಗೆ ಸಣ್ಣ ಮಕ್ಕಳಂಗೆ ಕೈ ಕೈ ಹಿಡಕೊಂಡು ಸುಗ್ಗಿ ತಾಡಿದ ಬಯಲಲ್ಲಿ ಓಡುವುದು ಕಂಡು ಕಟ್ಟೆ ಮೇಲಿನ ಹೆಂಗಸರೂ ಹುರುಪುಗೊಂಡರು.

ಮತ್ತೆ ಜನದ ಅಲೆಯಲ್ಲಿ ಅವರಿಬ್ಬರೂ ಸೇರಿಹೋದರು. ಇಬ್ಬರೂ ಜತೆಯಲ್ಲೇ ಬಳೆಯಂಗಡಿಗೆ ಹೋಗಿ ಕಾಜಿನ ಬಳೆ ಹಾಕಿಸಿಕೊಂಡರು. ಗೊಂಡೆ ಹೂ ಇರುವ ಒಂದೇ ಬಣ್ಣದ ಜಡೆಬಳ್ಳಿ ತಕ್ಕೊಂಡರು. ಉಂಗ್ಲಚಪ್ಪರ ಹತ್ತಿಬಂದರು. ಐಯ್ಸ್ ಕ್ರೀಮ್ ಅಂಗಡಿಯ ಹತ್ತಿರ ಬಂದಾಗ ಅಗ್ರಗೋಣದ ಮೀನಾಕ್ಷಿ ಇದ್ದಕ್ಕಿದ್ದಂತೆ ಸೆಟೆದು ನಿಂತಳು. ಏನಾಯಿತಿವಳಿಗೆ ಎಂದು ಜಾನಕಿಗೂ ಹೊಳೆಯಲಿಲ್ಲ. ಮೀನಾಕ್ಷಿ ದುರುಗುಟ್ಟಿಕೊಂಡು ನೋಡುತ್ತಿದ್ದ ಕಡೆಗೇ ನೋಡಿದರೆ, ಅಲ್ಲಿ ಕಾಜೂಬಾಗದ ಹುಡುಗ ಮತ್ತು ಆ ಹುಡುಗಿ ನಿಂತಿದ್ದರು. ಅವರ ನದರು ಎಲ್ಲೋ ಇದ್ದಂಗಿತ್ತು. ಜಾನಕಿ ಈಗ ಆ ಹುಡುಗಿಯನ್ನು ಸರಿಯಾಗಿ ನೋಡಿದಳು. ಹುಡುಗರಂತೆ ಪ್ಯಾಂಟು ಶರ್ಟು ತೊಟ್ಟಿದ್ದ ಅವಳ ಬಗ್ಗೆ ಮೂಗು ಮುರಿದಳು.

ಅವ್ಳಿಗೆ ಕಾಣಿಸ್ತೆ ನೋಡು ಈಗ ಎಂದು ಮೀನಾಕ್ಷಿ ಎಂಥದಕ್ಕೋ ತಯಾರಾದವಳಂತೆ ಕಂಡಾಗ ಜಾನಕಿ ಆತಂಕಗೊಂಡಳು. ದೊಡ್ಡದೊಂದು ಐಯ್ಸ್ ಕ್ರೀಮನ್ನು ಜಬರ್ದಸ್ತಿಯಿಂದ ಕೇಳಿದಳು. ಇವಳೇನು ಮಾಡುತ್ತಾಳೆ ಎಂಬುದು ಜಾನಕಿಯ ಊಹೆಗೆ ಸಿಕ್ಕುವ ಮೊದಲೇ ಮೀನಾಕ್ಷಿ ಅದನ್ನು ಆ ಹುಡುಗಿಗೇ ಗುರಿ ಮಾಡಿ ಬೀಸಿದ್ದಳು. ಅದು ಹೋಗಿ ಅವಳ ಮುಖಕ್ಕೆ ಪಚಕ್ಕನೆ ಬಡಿದಿತ್ತು. ಏನಾಯಿತೆಂದೇ ಗೊತ್ತಾಗದ ಆ ಹುಡುಗಿ ಬೆದರಿ ಬೊಬ್ಬೆ ಹುಯ್ದುಕೊಂಡಳು. ದಿಗಿಲಾದ ಕಾಜೂಬಾಗದ ಹುಡುಗ ಏನೆಂದು ದೃಷ್ಟಿ ಹಾಯಿಸಿದ. ಜಾನಕಿ ಮತ್ತು ಅಗ್ರಗೋಣದ ಮೀನಾಕ್ಷಿ ಕಣ್ಣಿಗೆ ಬಿದ್ದದ್ದೇ ಪ್ಯಾಂಟು ಶರ್ಟಿನ ಹೂಡುಗಿಯನ್ನು ಅದೇ ಸ್ಥಿತಿಯಲ್ಲಿ ಬಿಟ್ಟು, ಇದ್ದೆನೊ ಸತ್ತೆನೊ ಎಂಬ ತುರ್ತಿನಲ್ಲಿ ಬಿದ್ದವನಂತೆ ದಿಕ್ಕಾಪಾಲಾಗಿ ಓಡಿ ಜನರ ನಡುವೆ ಇಲ್ಲವಾದ. ಅವಳು ಮುಖಕ್ಕೆಲ್ಲ ಮೆತ್ತಿದ ಐಸ್ ಕ್ರೀಮಿನ ನಡುವೆಯೇ ತಬ್ಬಲಿಯಂತೆ ಅಳುತ್ತಲೇ ಇದ್ದಳು.

ಪ್ಯಾಂಟು ಶರ್ಟು ಹಾಕಿಕೊಂಡರೂ ಅಳುತ್ತಿರುವಾಗ ಅವಳು ತನ್ನ ಹಾಗೇ, ಅಗ್ರಗೋಣದ ಮೀನಾಕ್ಷಿಯ ಹಾಗೇ, ಸುಗ್ಗಿ ಹಬ್ಬಕ್ಕೆ ನೆರೆದ ಇಷ್ಟೆಲ್ಲಾ ಹೆಂಗಸರ ಹಾಗೇ ಕಂಡಾಗ ಜಾನಕಿ ಬೆರಗಾದಳು. ಆ ಪಾಪದ ಹುಡುಗಿಯ ಬಗ್ಗೆ ಇನ್ನಿಲ್ಲದ ಕಕ್ಕುಲಾತಿ ಮೂಡಿತು. ಈ ಬದಿಗೆ ನೋಡಿದರೆ ಅಗ್ರಗೋಣದ ಮೀನಾಕ್ಷಿಯೂ ತನ್ನಿಂದ ತಪ್ಪಾಗಿ ಹೋಯ್ತು ಎಂದುಕೊಂಡವಳಂತೆ ಕಣ್ಣಿಂದ ಬಳಬಳನೆ ನೀರಿಳಿಸುತ್ತಾ ನಿಂತುಬಿಟ್ಟಿದ್ದಾಳೆ. ಸಾವಕಾಶವಾಗಿ ಆ ಹುಡುಗಿಯ ಹತ್ತಿರ ನಡೆದ ಜಾನಕಿ, ಅವಳ ಮುಖದ ಮೇಲೆ ಚೆಲ್ಲಿದ್ದ ಐಸ್ ಕ್ರೀಮನ್ನು ತನ್ನ ಸೆರಗಿನಿಂದ ಮೆಲ್ಲಗೆ ಒರೆಸತೊಡಗಿದಳು.

ಹೆಸರೇ ಇಲ್ಲದ ಮನುಷ್ಯ ಮತ್ತು ಅಂತಃಪುರ

ವಿಜಿ

ಹೆಸರಿಗೊಂದು ಹೆಸರೂ ಇಲ್ಲದ ವಿಚಿತ್ರ ಮನುಷ್ಯನೊಬ್ಬನಿದ್ದ. ಜಾತಿ-ಗೀತಿಯೆಂಬ ನಾಗರಿಕ ದಾಖಲಾತಿಗಳಿಗೆ ಅತೀತನಾಗಿದ್ದಂತಹ ಅವನಿಗೆ ಕೆಲವರು ತಮ್ಮ ಜಾತಿಯವ, ಇಲ್ಲ ತಮ್ಮ ಜಾತಿಯವ ಎಂದು ಜಾತಿಯ ಕಾರ್ಡು ಕೊಡಲು ಪೈಪೋಟಿಗಿಳಿದದ್ದು ಮಾತ್ರ ವಿಚಿತ್ರವಾಗಿತ್ತು. ಅವನು ಊರಿನ ಮೊಟ್ಟ ಮೊದಲ ಡಾಕ್ಟರ್. ಯಾರಿಗೆ ಗೊತ್ತು, ಅವನೇ ಈ ದೇಶದ ಮೊಟ್ಟ ಮೊದಲ ಡಾಕ್ಟರೋ ಏನೋ.

ಸಂತನೊ ಬೈರಾಗಿಯೊ ತಲೆತಿರುಕನೊ ಅಥವಾ ಇದಾವುದೂ ಆಗಿರದೆ ನಿಜವಾಗಿಯೂ ಎಲ್ಲರಂತೇ ಇರುವ ಮನುಷ್ಯನೇ ಆಗಿರುವವನೊ ಎಂಬಂತಿದ್ದ ಅವನ ಜೀವನ ರಹಸ್ಯ ಯಾರಿಗೂ ಯಾವತ್ತಿಗೂ ಪೂರ್ತಿಯಾಗಿ ಗೊತ್ತಾಗಲೇ ಇಲ್ಲ.

ಇಂತಿದ್ದವ ಕೊಡುತ್ತಿದ್ದ ಮದ್ದು ಮಾತ್ರ ಕೆಲಸ ಮಾಡುತ್ತಿತ್ತು. ಜನಕ್ಕೂ ದನಕ್ಕೂ ಅವನು ಕೊಡುವ ಮದ್ದೇ ಆಗಿಬರಬೇಕಿತ್ತು. ಅಕಸ್ಮಾತ್ ಗುಣವಾಗಲಿಲ್ಲಾ, ಎರಡನೇ ಸರ್ತಿ ಕೊಡುವ. ಆಗಲೂ ಗುಣ ಕಾಣದೆ ಮೂರನೇ ಬಾರಿಗೆ ಹೋದರೆ ಎಂದಿನ ಮೌನದೊಂದಿಗೆ ಕಣ್ಣುಗಳಲ್ಲಿ ನಿರಾಶಾ ಭಾವ ವ್ಯಕ್ತಗೊಳಿಸಿ ಎರಡೂ ಕೈಗಳನ್ನು ನೆತ್ತಿಯ ಮೇಲಕ್ಕೆತ್ತಿ ನಮಸ್ಕರಿಸುವ ರೀತಿಯಲ್ಲಿ ಹಸ್ತಗಳನ್ನು ಸಶಬ್ದವಾಗಿ ಜೋಡಿಸಿ ಬೆನ್ನು ಹಾಕಿ ಗುಡಿಸಲೊಳಗೆ ಹೋಗಿ ಸೇರಿಕೊಂಡು ಬಿಡುವ. ಅಲ್ಲಿಗೆ, ಮತ್ತೆ ಅವನು ಹೇಳುವುದಾಗಲೀ ಕೊಡುವುದಾಗಲೀ ಏನೂ ಉಳಿದಿಲ್ಲವೆಂದೇ ಅರ್ಥವಾಗಿತ್ತು. ಹೋದವರು ಇನ್ನು ಪೇಟೆ ಡಾಕ್ಟರೇ ಗತಿಯೆಂದು ಗಾಡಿ ಹತ್ತಬೇಕು.

hennu.jpgಅವನು ಈ ಊರಿಗೆ ಎಲ್ಲಿಂದ ಬಂದ, ಯಾವಾಗ ಬಂದ ಎಂದು ತಲೆಕೆಡಿಸಿಕೊಳ್ಳುವ-ನಯಾಪೈಸೆ ಉಪಯೋಗವೂ ಇಲ್ಲದ ಕೆಲಸಕ್ಕೆ ಊರು ಕೈಹಾಕಲಿಲ್ಲ. ಅದಕ್ಕಿಂತ, ಈ ಊರವನೇ ಆಗಿಬಿಟ್ಟಿದ್ದ ಅವನ ವಿಷಯದಲ್ಲಿ ಇಂತಾ ಚೌಕಾಸಿಯ ತುರ್ತು ಎದ್ದಿರಲೂ ಇಲ್ಲವೆಂದರೆ ಹತ್ತು ಮಂದಿ ತಲೆದೂಗುವುದಕ್ಕೆ ಯೋಗ್ಯವಾದ ಮಾತು.

ಅವನಿಂದ ಮದ್ದು ತಕ್ಕೊಳ್ಳುತ್ತಿದ್ದವರು ಕೊಡುತ್ತಿದ್ದ ದವಸ ಧಾನ್ಯಗಳೇ ಅವನ ಜೀವನಕ್ಕಾಗುತ್ತಿತ್ತು. ತಾನಾಗಿ ಕೇಳದ, ಕೊಟ್ಟರೆ ಬೇಡವೆನ್ನದ ಅವನ ಜೀವನ ನಿರ್ವಹಣೆಯ ಹೊಣೆಗಾರಿಕೆಯನ್ನು ಯಾವುದೇ ಶಾಸನ ಪಾಸು ಮಾಡುವ ಗರಜು ಇಲ್ಲದೆ ಊರು ಒಪ್ಪಿಕೊಂಡಿತ್ತು. ಅವನು ಕೇಳದೆಯೂ ಊರವರೇ ಅವನ ಹಟ್ಟಿಗೆ ಹೊಸ ಹುಲ್ಲು ಹೊದೆಸುತ್ತಿದ್ದರು. ಮನೆಯ ನೆಲ, ಗೋಡೆಯನ್ನೆಲ್ಲ ಸಗಣಿಯಿಂದ ಸಾರಿಸಿ ಚೆಂದ ಮಾಡಿ ಕೊಡುತ್ತಿದ್ದರು. ಊರಿಗೇ ಗೊತ್ತಿರುವಂತೆ, ಸಂಬಂಧದೋರು ಮತ್ತೊಬ್ಬರು ಅಂತಾ ಯಾರೂ ಅವನಿಗಿರಲಿಲ್ಲ. ಅವನನ್ನು ಅವಲಂಬಿಸಿದ್ದ ಜೀವವೆಂದರೆ ಒಂದು ಹೆಣ್ಣು ನಾಯಿ. ಅದು ಈ ಊರಲ್ಲಿ ತನಗೆ ಸಿಕ್ಕ ತನ್ನ ಕೆಲವು ಬಾಯ್ ಫ್ರೆಂಡುಗಳಿಗೂ ಅವನದೇ ಆಶ್ರಯದ ವ್ಯವಸ್ಥೆ ಮಾಡಿಸಿತ್ತೆಂಬುದು ಬೇರೆ ಮಾತು. ಅವನೂ ಅವುಗಳ ವಿಷಯದಲ್ಲಿ ವಹಿಸುತ್ತಿದ್ದ ಮುತುವರ್ಜಿ ಅಪಾರವಾಗಿತ್ತು.

ಇಂತಾ ಮನುಷ್ಯನ ಹಟ್ಟಿಗೆ ಒಂದಿನ ಮಧ್ಯಾಹ್ನದ ಬಿಸಿಲಲ್ಲಿ ಒಬ್ಬ ಪ್ರಾಯದ ಹೆಣ್ಣು ಬಂದಳು. ಇನ್ನಷ್ಟು

ಜನಮನದ ಸೊಲ್ಲಿಗೆ ಸಾವಿಲ್ಲವೋ…

“ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎಂಬುದು ಕೂಡ ಒಂದು ಗಾದೆ. ಯಾವುದೂ ನಿಲ್ಲದಿದ್ದರೂ ಕಡೆಗೆ ಗಾದೆ ನಿಂತುಬಿಡುತ್ತದೆ. ಹಾಗೆ ಸ್ಥಾಪಿಸಿಕೊಳ್ಳಬಲ್ಲ ಸ್ವಯಂ ಶಕ್ತಿಯ ಕಾರಣದಿಂದಾಗಿಯೇ ಗೆಲ್ಲುತ್ತದೆ. ಗ್ರಾಮೀಣ ಬದುಕಿನಲ್ಲಿ, ಕೃಷಿಗೆ ಹತ್ತಿರಾದ ಬದುಕಿನಲ್ಲಿ ಗಾದೆಗೆ ಘನವಾದ ಸ್ಥಾನಮಾನ. ಅಂಥ ಕೆಲವು ಗಾದೆಗಳನ್ನು ಇಲ್ಲಿ ಕೊಡಲಾಗಿದೆ.

* * *

ನಾಚಿಕೆ ಇಲ್ಲದಳಿಯ ನಾಗರ ಹಬ್ಬಕ್ಕೆ ಬಂದ್ಯ ಅಂದ್ರೆ, ಇಲ್ಲ ಕಣತ್ತೆ ನೇಗಿಲ ಕೊರಡಿಗೆ ಬಂದೆ ಅಂದ
ಅಳಿಯನಾದವನು ಪದೇ ಪದೇ ಅತ್ತೆ ಮನೆಗೆ ಬಂದರೆ ಅಗ್ಗವೇ. ಅತ್ತೆಗೂ ಅಸಡ್ಡೆಯೇ. ನಾಗರ ಹಬ್ಬ ಹೆಣ್ಣುಮಕ್ಕಳ ಹಬ್ಬ. ಅಳಿಯನನ್ನು ಅತ್ತೆ ಸುಮ್ಮನೆ ಬಿಡುವುದಿಲ್ಲ. ನಾಗರ ಹಬ್ಬಕ್ಕೆ ಬಂದಿದ್ದೀಯಲ್ಲ, ನಾಚಿಕೆಯಾಗೋದಿಲ್ವೇ ಎಂದು ಮೂದಲಿಸುತ್ತಾಳೆ. ಅಳಿಯನ ಉತ್ತರವೇ ಬೇರೆ. ನೇಗಿಲ ತುಂಡಿಗಾಗಿ ಬಂದೆ ಅನ್ನುತ್ತಾನೆ. ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತಾರಲ್ಲ, ಹಾಗೆ ಅತ್ತೆ ಮೂದಲಿಸೋ ಹೊತ್ತಲ್ಲಿ ಬಚಾವಾಗೋಕೆ ಅಂತಾ ಮಹಾ ಜವಾಬ್ದಾರಿ ಇರೋ ಮನುಷ್ಯನ ಥರಾ ಪೊಸು ಕೊಡೋಕೆ ಟ್ರೈ ಮಾಡ್ತಾನೆ ಈ ಘನಂದಾರಿ ಅಳಿಯ.

*

kolalu.jpgಹೂವಿಗೆ ಹೋದ ಹೊನ್ನೇಗೌಡ, ಮದುವೆಯಾದ ಆರು ತಿಂಗಳಿಗೆ ಬಂದ
ಮದುವೆಯೆಂಬುದು ಯಾರದೇ ಜೀವನದಲ್ಲಿ ಮರೆಯಲಾರದ, ಮಧುರ ಕ್ಷಣಗಳಿಂದ ಕೂಡಿದ ಪವಿತ್ರ ಕಾರ್ಯ. ಅಂಥ ಕಾರ್ಯಕ್ಕೆ ಹೂವು ತರಲು ಹೋದ ಹೊನ್ನೇಗೌಡ, ಅದನ್ನು ಮರೆತು ಮತ್ತೆಲ್ಲೋ ಹೋಗಿ, ಮದುವೆಯೆಲ್ಲಾ ಮುಗಿದು ಬಹಳ ಸಮಯವಾದ ಮೇಲೆ ಹಿಂತಿರುಗಿ ಬಂದನಂತೆ. ಯಾರ್‍ಯಾರ ಮದುವೇಲಿ ಎಷ್ಟೆಲ್ಲ ಹೊನ್ನೇಗೌಡರು ಹೀಗೆ ಹೂ ತರ್ತೀವಿ ಹೇಳಿ, ಕಾಯ್ತಿದ್ದವರ ಕಿವಿಗೆ ಹೂ ಇಟ್ಟಿದ್ದಾರೊ. 

ಆಮೆ ಸಾವಿರ ಮೊಟ್ಟೆಯಿಟ್ಟರೂ ಯಾರಿಗೂ ತಿಳಿಯೋದಿಲ್ಲ, ಕೋಳಿ ಒಂದಿಟ್ಟರೂ ಊರಿಗೆಲ್ಲಾ ತಿಳಿಯುತ್ತೆ
ಏಕಕಾಲಕ್ಕೇ ಸಹಸ್ರಾರು ಮೊಟ್ಟೆಗಳನ್ನಿಡುತ್ತದೆ ಆಮೆ. ಅಷ್ಟಿದ್ದೂ ಮಹಾ ಮೌನಿ ಅದು. ಕೋಳಿ ಹಾಗಲ್ಲ. ಒಂದು ಸಲ ಒಂದೇ ಮೊಟ್ಟೆ ಇಡುತ್ತೆ. ಮೊಟ್ಟೆ ಇಟ್ಟ ತಕ್ಷಣ ತಾನು ಮಾಡಿದ ಘನ ಕಾರ್ಯ ಊರಿಗೆಲ್ಲಾ ತಿಳೀಲಿ ಅನ್ನೋ ಥರಾ ಒಂದೇ ಸವನೆ ಅರಚುತ್ತೆ. ಕೋಳಿ ಬುದ್ಧಿ ಅನ್ನೋದು ಸುಮ್ನೇನಾ?

*

ಕುಟ್ಟೋದು ಬೀಸೋದು ನಿನಗಿರಲಿ, ಕುಸೂಲಕ್ಕಿ ನನಗಿರಲಿ
ಮೈಮುರಿಯ ಕೆಲಸ ಇದ್ರೆ ಬೇರೆ ಯಾರಾದ್ರೂ ಮಾಡ್ಬೇಕು, ನೆರಳಲ್ಲಿ ಕೂತು ಉಣ್ಣೋದಿದ್ರೆ ಮಾತ್ರ ಬೇರೆಯವರಿಗೆ ಛಾನ್ಸೇ ಕೊಡಕೂಡದು ಅನ್ನೋ ಜಾಯಮಾನದವರಿಗೆ ಏನು ಕಮ್ಮಿ? ಪ್ರಕೃತಿಯಲ್ಲಾದರೆ ಇಂಥ ಇಂಬ್ಯಾಲನ್ಸ್ ಇರೋಲ್ಲ. ಮನುಷ್ಯರ ಲೋಕದಲ್ಲಿ ಮೈಗಳ್ಳರದೇ ಭಾರ.

*

ನರಿಗೆ ಯಜಮಾನಿಕೆ ಕೊಟ್ಟದ್ದಕ್ಕೆ ಊರಿಗೊಂದು ಕೋಳಿ ತಿಂತಂತೆ
ಠಕ್ಕತನಕ್ಕೆ ನರಿ ಫೇಮಸ್ಸು. ಊಟಕ್ಕೂ ಕಡಿಮೆಯಿಲ್ಲ. ಚಿಕನ್ನು ಅಂದ್ರೆ ಎಲ್ಲಾದ್ರೂ ಹೊಕ್ಕುತ್ತೆ. ಊರಿಗೇ ನುಗ್ಗಿ ಕೋಳೀನ ಎತ್ತಾಕ್ಕೊಂಡು ಹೋಗೋ ಪ್ರಾಣಿ ಅದು. ಅಂಥಾದ್ದಕ್ಕೆ ಊರ ಯಜಮಾನಿಕೆ ಕೊಟ್ರೆ ಹೆಂಗಿದ್ದೀತು? ಊರಲ್ಲಿರೋ ಕೋಳಿಗಳನ್ನೆಲ್ಲ ಗುಳುಂ ಮಾಡದೇ ಬಿಟ್ಟೀತೇ? ಇವತ್ತಿನ ರಾಜಕಾರಣ ನೋಡ್ತಿದ್ರೆ, ಕೋಳೀನೇ ವಸಿ ವಾಸಿ, ಮತದಾರ ಪ್ರಭುಗಿಂತ ಅಂತನ್ಸುತ್ತೆ.

Previous Older Entries

%d bloggers like this: