ಯಾವುದೀ ಪ್ರವಾಹವು…

ಡೋರ್ ನಂ 142

ಬಹುರೂಪಿ

 

ಮುಖ ಮುಖವೂ ಮುಖವಾಡವ
ತೊಟ್ಟು ನಿಂತ ಹಾಗಿದೆ
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ
ಯಾವುದೀ ಪ್ರವಾಹವು…
ರೇಡಿಯೋ ಕಿವಿ ಹಿಂಡಿದ ತಕ್ಷಣ ತೂರಿ ಬಂದ ಹಾಡು ಇದು. ಯಾಕೋ ಈ ಹಾಡು ನನ್ನನ್ನ ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಏನೋ ತಳಮಳ ಹುಟ್ಟು ಹಾಕುತ್ತದೆ. ಯಾಕೋ ಗೊತ್ತಿಲ್ಲ, ಈ ಹಾಡು ಕೇಳಿದ ದಿನವೆಲ್ಲಾ ನಾನು ಗೊತ್ತಿಲ್ಲದಂತೆ ಈ ಸಾಲುಗಳನ್ನೇ ಗುನುಗುನಿಸುತ್ತಾ ಇರುತ್ತೇನೆ.

ಎದೆ ಎದೆಗಳ ನಡುವೆ ಇರುವ
ಸೇತುವೆಗಳು ಕುಸಿದಿವೆ
ಭಯ ಕಂಪನ ತಲ್ಲಣಗಳ
ವಾದ್ಯವೃಂದ ಮೊಳಗಿದೆ
ಯಾವುದೀ ಪ್ರವಾಹವು…

ಅವತ್ತು ಡಿಸೆಂಬರ್ ಆರು. ನಾನು ದೂರದ ಊರಿಗೆ ಇನ್ನೇನು ಬಸ್ ಹತ್ತಬೇಕಿತ್ತು. ಮನೆಯೊಳಗೆ  ಮನೆಯೊಡತಿ ಇರಲಿಲ್ಲ. ಹೀಗಾಗಿ ಮನೆ ಬೀಗದ ಕೈ ಪಕ್ಕದ ಮನೆಯವರಿಗೆ ದಾಟಿಸಿಬಿಡೋಣ ಅಂತ ಹೋಗಿ ಅವರ ಮನೆಯ ಬಾಗಿಲು ಬಡಿದೆ. ಸದ್ದೇ ಇಲ್ಲ. ಇನ್ನಷ್ಟು ಹೊತ್ತು ಬಡಿದೆ. ಅವರ ಮನೆ ಯಾವಾಗಲೂ ಕಲಕಲ ಎನ್ನುತ್ತಿರುತ್ತದೆ. ಅಂತಹದ್ದರಲ್ಲಿ ಯಾರೂ ಇಲ್ಲ ಎಂಬುದನ್ನೇ ನನಗೆ ನಂಬಲಿಕ್ಕಾಗಲಿಲ್ಲ. ವಾಪಸ್ ಬಂದೆ. ಸುಮಾರು ಹೊತ್ತಾಯಿತು. ಆ ಮನೆಯ ಕಿಟಕಿ ತೆರೆದ ಸದ್ದು. ನಂತರ ಸ್ವಲ್ಪ ಸಮಯದ ಬಳಿಕ ಗುಸುಗುಸು. ಸ್ವಲ್ಪ ಸಮಯ ಕಳೆದು ಬಾಗಿಲು ತೆರೆದ ಸದ್ದು. ಮನೆಯೊಡೆಯ ಹೊರಗೆ ಬಂದ. ಅತ್ತಿತ್ತ ನೋಡಿದ. ಪ್ರಶ್ನೆಗಳ ಹುತ್ತವೇ ಇತ್ತು ಆತನ ಮುಖದಲ್ಲಿ. ನಂತರ ನನ್ನ ಮನೆಯ ಬಾಗಿಲು ಬಡಿದ. ನೀವು ಕಾಲಿಂಗ್ಬೆಲ್ ಮಾಡಿದ್ರಾ ಅಂದ. ಹೌದು ಎಂದೆ. ತಕ್ಷಣ ಅವನ ಒಂದು ನಿಡುಸುಯ್ಯುವಿಕೆ ಕೇಳಿಸಿತು. ಚಿಂತೆಯ ಗೆರೆಗಳಲ್ಲಿ ಒಂದಿಷ್ಟಾದರೂ ಕಡಿಮೆಯಾಯಿತು. ಏಕೆ ಅಂದೆ. ಸಾರ್, ಇವತ್ತು ಡಿಸೆಂಬರ್ 6 ಅಲ್ವಾ, ಭಯ ಆಗ್ತಿದೆ. ಎಲ್ಲೂ ಹೋಗಿಲ್ಲ ಅಂದ.

ನನಗೆ ಅದುವರೆಗೆ ಅದು ಆರೋ, ಏಳೋ ಒಂದೂ ಗೊತ್ತಿರಲಿಲ್ಲ. ನವೆಂಬರ್ಗೂ, ಡಿಸೆಂಬರ್ಗೂ ಅಂತಹ ವ್ಯತ್ಯಾಸವೇನಿರಲಿಲ್ಲ. ಆದರೆ ಕ್ಯಾಲೆಂಡರ್ ಪುಟಗಳು ಹಲವರಲ್ಲಿ ಎಂತಹ ನಿಟ್ಟುಸಿರುಗಳನ್ನ, ತಲ್ಲಣಗಳನ್ನ ಭಯ ಕಂಪನವನ್ನ ಹುಟ್ಟಿಸುತ್ತದೆ ಎಂದು ಗೊತ್ತಾಯಿತು.
ನೆನಪಾಯಿತು:ಸ್ಕೂಲ್ನಿಂದ `ಆಲಿಬಾಬಾ 40 ಮಂದಿ ಕಳ್ಳರು’ ನಾಟಕಕ್ಕೆ ಕರಕೊಂಡು ಹೋಗ್ತೀವಿ ಅಂತ ಹೇಳಿದ್ದರು. ಸಖತ್ ಖುಷಿ ಆಗಿತ್ತು. ರಾತ್ರಿಯಿಡೀ ಅಪ್ಪನ ಹಿಂದೆ ಮುಂದೆ ಬಿದ್ದು, ಕಾಲಿಗೆ ತೊಡರುವ ಹಾಗೆ ನಿಂತುಕೊಂಡು ನಾಟಕದ ಟಿಕೆಟ್ಗೆ ಬೇಕಾದ ಕಾಸು ಸಂಪಾದಿಸಿದ್ದೆ. ನಾಟಕ ಆರಂಭವಾಯಿತು. ಸಭಾಂಗಣದ ತುಂಬಾ ಇನ್ನೂ ಮೀಸೆ ಇಲ್ಲದ, ಕಲ್ಪನೆಗಳ ಲೋಕ ಕರಗದವರ ದಂಡು. ನಾಟಕದ ಶುರುವಿಗೇ ಹಾಡು.

ಅಲ್ಲಾ ಓ ಅಲ್ಲಾ, ನಿನ್ನಂತವ್ರಿನ್ನಿಲ್ಲ
ಅಲ್ಲಾ ಓ ಅಲ್ಲಾ ನಿನ್ನಂತವರು ಇನ್ನಿಲ್ಲ
ಅಲ್ಲಾನೂ ಒಂದೇ, ಬೆನಕಾನೂ ಒಂದೇ
ಅಲ್ಲಾ ಓ ಅಲ್ಲಾ ನಿನ್ನಂತವರಿನ್ನಿಲ್ಲ

ಅಂತಾ, ಅರೇ, ಗಣೇಶನ್ನ ಕೂಡಿಸ್ಕೊಂಡು ಎಷ್ಟು ಚೆನ್ನಾಗಿ ಅವನನ್ನೇ ಅಲ್ಲಾ ಮಾಡಿದ್ದಾರಲ್ಲಾ ಅನ್ನಿಸ್ತು. ಅಲ್ಲಾನೂ ಒಂದೇ, ಬೆನಕಾನೂ ಒಂದೇ ಆದಾಗ ಅಲ್ಲ, ಅಲ್ಲ ಅನ್ನೋಕೆ ಆಗ್ಲೇ ಇಲ್ಲ. ಹಾಗಿದ್ವಿ.
ಇನ್ನಷ್ಟು

ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ..

ಡೋರ್ ನಂ 142

ಬಹುರೂಪಿ

ಹೀಗೇ ಪೇಪರ್ ತಿರುವಿ ಹಾಕುತ್ತಾ ಕೂತಿದ್ದೆ. ಯಾವುದೋ ಜಾಹೀರಾತು ಕೊನೆಯಲ್ಲಿ ಒಕ್ಕಣೆ. ನಿಮ್ಮ ಅಜರ್ಿಗಳನ್ನು ‘ಸ್ನೇಲ್ ಮೇಲ್ನಲ್ಲಿ ಬೇಡ, ಈ ಮೇಲ್ನಲ್ಲಿ ಕಳಿಸಿ’. ಅರ್ಥ ಇಷ್ಟೆ, ಬಸವನಹುಳು ವೇಗದಲ್ಲಿ ಬರುವ ಪೋಸ್ಟ್ ಮೂಲಕ ಬೇಡ. ಮಿಂಚಿನಂತೆ ಬಳಿ ಬರುವ ಈ ಮೇಲ್ ಬಳಸಿ.
ಒಂದು ಕ್ಷಣ ಮಾತೇ ಹೊರಡಲಿಲ್ಲ. ಯಾಕಂದ್ರೆ ಪೋಸ್ಟ್ ಇಲ್ಲದ ಕಾಲವನ್ನು ಊಹಿಸಿಕೊಳ್ಳಲೂ ನನ್ನ ಮನಸ್ಸು ನಿರಾಕರಿಸುತ್ತಿತ್ತು. ನಾನೂ ಬದಲಾದ ಕಾಲದಲ್ಲಿ ಈ-ಮೇಲ್ ಬಳಸುತ್ತಿರುವವನೇ. ಲೆಕ್ಕ ಹಾಕಿದರೆ ಬೇರೆಯವರಿಗಿಂತ ಒಂದು ಕೈ ಜೋರಾಗಿಯೇ ಈ-ಮೇಲ್ಗೆ ಒಗ್ಗಿಹೋಗಿದ್ದೇನೆ. ಆದರೆ… ಆದರೆ.. ಆ ಅಂಚೆಯಣ್ಣನ ಕೈಯಿಂದ ನೇರವಾಗಿ ಬರುವ ಪೋಸ್ಟ್ನ ಥ್ರಿಲ್ ನನ್ನಿಂದ ದೂರವಾಗಿಲ್ಲ.

ಪೋಸ್ಟ್ ಅನ್ನೋದು ಯಾಕೆ ನನ್ನ ಎದೆಯೊಳಕ್ಕೆ ಇಳಿದುಹೋಗಿದೆಯೋ ಅದು ಮುಂದೆ ಬದುಕುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಮಾತ್ರ ಪೋಸ್ಟ್ ಎಂಬುದು ನನ್ನ ಸಮೃದ್ಧ ಬಾಲ್ಯ ಹಾಗೂ ಮಿಂಚುಂಡೆಗಳ ಯೌವನ.
ಎರಡನೇ ಕ್ಲಾಸಿರಬಹುದೇನೋ, ಸ್ಕೂಲ್ನಲ್ಲಿ ಎಲ್ಲಾರೂ ಮನೆಯಿಂದ ನಾಕಾಣೆ ತನ್ನಿ, ಫಿಲಂಗೆ ಕರಕೊಂಡು ಹೋಗ್ತೀವಿ ಅಂದ್ರು. ನಾನೂ ಕಾಡಿಬೇಡಿ, ಸ್ಟ್ರೈಕ್ ಕೂತು ನಮ್ಮಪ್ಪನಿಂದ ನಾಕಾಣೆ ಸಂಪಾದಿಸಿದೆ. ಫಿಲಂ ಯಾವುದು ಏನೂ ಗೊತ್ತಿರಲಿಲ್ಲ. ಸಾಲಾಗಿ ನಡಕೊಂಡು ಥಿಯೇಟರ್ ಮುಟ್ಟಿದ್ವಿ. ಸಿನಿಮಾ ಹೆಸರು ‘ಮೀನಾಳ ಕಾಗದ’. ಇಬ್ರು ತುಂಬಾ ಫ್ರೆಂಡ್ಸ್ ಇರ್ತಾರೆ. ಆಮೇಲೆ ಅಪ್ಪ ಅಮ್ಮನಿಗೆ ಟ್ರಾನ್ಸ್ಫರ್ ಆಗುತ್ತೆ, ದೂರದೂರಿಗೆ ಹೋಗ್ತಾರೆ. ಪುಟ್ಟ ಹುಡುಗರಿಗೆ ಗೆಳೆತನ ದೂರಾ ಆಗುತ್ತಲ್ಲ ಅಂತ ಕಣ್ಣೀರು. ಒಂದು ದಿನ ಪೋಸ್ಟ್ಮ್ಯಾನ್ ಸೈಕಲ್ ತುಳಿದುಕೊಂಡು ಬಂದು ಆ ಹುಡುಗನ ಕೈಗೆ ಒಂದು ಕಾಗದ ಕೊಡ್ತಾನೆ. ಅರೆ ಅದು ‘ಮೀನಾಳ ಕಾಗದ’. ಆ ಹುಡುಗನಿಗೆ ಆಕಾಶವೇ ಸಿಕ್ತೇನೋ ಅನ್ನೋಷ್ಟು ಖುಷಿ ಆಗುತ್ತೆ. ಕಾಗದ ಕೈಲಿ ಹಿಡಕೊಂಡು ಆತ ಇದೇ ಜಗತ್ತು ತನ್ನ ತೆಕ್ಕಗೆ ಸಿಕ್ತೇನೋ ಅಂತ ಸಂಭ್ರಮಿಸೋ ರೀತಿ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.
ಬಹುಶಃ ಇದಕ್ಕೇ ಇರ್ಬೇಕು, ಆ ವಯಸ್ಸಲ್ಲೇ ಪೋಸ್ಟ್ ಅನ್ನೋದು ಸಂಭ್ರಮದ ವಿಷಯ ಅನಿಸ್ಬಿಟ್ಟಿತ್ತು. ಪೋಸ್ಟ್ನವರು ಬರ್ತಾರೆ, ಕಾಗದ ಕೊಡ್ತಾರೆ ಎಷ್ಟು ಚೆನ್ನಾಗಿರುತ್ತೆ ಅಲ್ವ.


‘ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ, ಅದರಾಗ ಸುಖ ದುಃಖ ಎರಡೂ ತುಂಬೇತಿ’ ಅಂದಿದ್ದು ಆ ಧಾರವಾಡದ ಹೆಣ್ಣುಮಗಳು. ಕಾಳೇಜು, ಕೆಂಪು ಮಣ್ಣು, ಅಮ್ಮ ಅಂತ ಬರೀತಾ ಯಾಕೋ ಗೊತ್ತಿಲ್ಲ ಈ ಮಾತನ್ನು ಬರ್ದಿದ್ದು. ಅರೆ! ಹೌದಲ್ಲ ಅನಿಸ್ತು. ಕೆಂಪು ಪೋಸ್ಟ ಡಬ್ಬಿಯಲ್ಲಿ ಲಗ್ನಪತ್ರಿಕೇನೂ ಇರುತ್ತೆ, ತಿಥಿ ಕಾಡರ್ೂ ಇರುತ್ತೆ. ಆ ಪೋಸ್ಟ್ ಡಬ್ಬೀನಲ್ಲಿ ಅಣ್ಣ ಊರಿಗೆ ಬರೋ ವಿಷಯಾನೂ ಇರುತ್ತೆ, ಮನೆ ಪಾಲಾಗಿ ಹೋದ ಕಥೇನೂ ಇರುತ್ತೆ. ಗಂಡ-ಹೆಂಡತಿ ಡೈವೋಸರ್್ ಆದದ್ದನ್ನು ಹೊತ್ತುಕೊಂಡಿರೋ ಡಬ್ಬಿ 25ವರ್ಷದ ಸುಖದಾಂಪತ್ಯದ ಸಿಹಿ ಸುದ್ದಿ, ಪಾಸಾಗಿರೋ ಸುದ್ದಿ, ಫೇಲಾಗಿರೋ ಪತ್ರ ಎರಡೂ ಅಕ್ಕಪಕ್ಕ ಕೂತಿರುತ್ತೆ. ಆ ಹುಡುಗಿಗೆ ಪ್ರೊಪೋಸ್ ಮಾಡಿ ಬರೆದ ಪತ್ರ, ಇನ್ನೊಂದು ಎರಡು ವರ್ಷ ಸುತ್ತಾಡಿ ಇನ್ನೇನು ಮದುವೆ ಆಗ್ಬೇಕು ಅನ್ನೋವಾಗ ಸಂಬಂಧಾನೇ ಕಿತ್ತುಹೋದ ದುಗುಡ ಎರಡೂ ಇರುತ್ತೆ ಅಕ್ಕಪಕ್ಕದಲ್ಲೇ.
ಜೀವನ ಅನ್ನೋದು ಒಂದು ಥರಾ ಯುಗಾದಿ ಇದ್ದಂಗೆ ಅಲ್ವಾ. ಅಲ್ಲಿ ಸಿಹಿ ಇದೆ, ಬೆಲ್ಲದ ಸಿಹೀನೂ ಇದೆ. ಅದೇ ಥರಾನೇ ಪೋಸ್ಟ್ ಡಬ್ಬಿಯಲ್ಲಿ ಕಹೀನೂ ಇದೆ, ಚಪ್ಪರಿಸಬಹುದಾದ ಸಿಹೀನೂ ಇದೆ. ಒಂದು ಥರದಲ್ಲಿ ಪೋಸ್ಟ್ಡಬ್ಬಿ ಅನ್ನೋದು ಬದುಕಿನ ದಾರ್ಶನಿಕ.
ನನಗೆ ಈ ಪೋಸ್ಟ್ ಗೀಳು ಎಷ್ಟು ಅಂಟಿಕೊಳ್ತು ಅಂದ್ರೆ ಏನಾದ್ರೂ ಪೋಸ್ಟ್ ಬರ್ಲೇಬೇಕು ಅನ್ನೋ ಹುಚ್ಚು ಹಿಡೀತು.. ಅಣ್ಣನಿಗೆ ಬರುತ್ತೆ, ಅಪ್ಪನಿಗೆ ಬರುತ್ತೆ, ನನಗ್ಯಾಕೆ ಬರಲ್ಲ ಅಂತ. ಏಳನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ಅಂತ ಗೊತ್ತಾದಾಗ ನಾನು ಫಸ್ಟ್ ಕೇಳಿದ್ದೇ ಅದು ಹಾಲ್ಟಿಕೇಟ್ ಪೋಸ್ಟ್ನಲ್ಲಿ ಕಳಿಸ್ತಾರ ಅಂತ. ಅಷ್ಟು ಹುಚ್ಚಿತ್ತು. ಹೈಸ್ಕೂಲ್ಗೆ ದಾಟಿಕೊಂಡೇ ಪೋಸ್ಟ್ ಹುಚ್ಚು ಇನ್ನೂ ಜಾಸ್ತಿ ಆಯ್ತು. ಒಂದಿನಾ ಪೇಪರ್ ತಿರುವಿ ಹಾಕ್ತಿದ್ದಾಗ ‘ಸುವಾತರ್ೆಗಳು, ಯೇಸು ನಿಮಗಾಗಿ ಇದ್ದಾನೆ ತಿಳಿಯಬೇಕಾದರೆ ಪೋಸ್ಟ್ ಬಾಕ್ಸ್ ನಂ….ಗೆ ಅಂಚೆ ಹಾಕಿ’ ಅಂತಿತ್ತು. ದೂರಾಲೋಚನೆ ಮಾಡ್ದೆ. ನಾನೂ ಒಂದು ಪೋಸ್ಟ್ ಕಾಡರ್್ ಹಾಕಿದರೆ ಅವರು ಉತ್ತರ ಬರೀತಾರೆ ಅಲ್ವ ಅಂತ. ಪೋಸ್ಟ್ಕಾಡರ್್ಗೆ ದುಡ್ಡೆಲ್ಲಿಂದ ತರೋದು. ಎರಡು ಇಡ್ಲಿಗೆ ಇಷ್ಟು, ಬಸ್ಗೆ ಇಷ್ಟು ಅಂತ ಕರೆಕ್ಟಾಗಿ ಲೆಕ್ಕಹಾಕಿ ದುಡ್ಡು ಕೊಡ್ತಿದ್ರು. ಅಂತಾದ್ರಲ್ಲಿ ಪೋಸ್ಟ್ಕಾಡರ್್ಗೆ ಎಲ್ಲಿ ಉಳಿಸೋದು. ಅವಾಗ್ಲೇ ಅಪ್ಪನ ಜೋಬಿಗೆ ಕೈಹಾಕೋ ವಿದ್ಯೆ ಗೊತ್ತಾಗಿತ್ತು. 5ಪೈಸಾ ಕಾಡರ್್ಗಾಗಿ ನಾಲ್ಕುದಿನ ನಿದ್ದೆ ಮಾಡಿಲ್ಲ.
ಓಹ್! ಅಂತೂ ಬಂತಲ್ಲ ಯೇಸುವಿನ ಸುವಾತರ್ೆ. ನಾನೀಗ ಯೇಸು ವಿದ್ಯೆ ಕಲಿಯುವ ಕರೆಸ್ಪಾಂಡೆಂಟ್ ಸ್ಟೂಡೆಂಟ್. ಅವರು ಪಾಠ ಕಳಿಸ್ತಾರೆ. ಕ್ವಶ್ಚನ್ ಪೇಪರ್ ಕಳಿಸ್ತಾರೆ. ಪಾಸಾದ್ರೆ ಸಟರ್ಿಫಿಕೇಟ್. ನಾನೂ ಯಾವ ಸುವಾತರ್ೆ ಕಲಿತ್ನೋ ನನಗಂತೂ ಗೊತ್ತಿಲ್ಲ. ನನ್ನ ದೋಸ್ತ್ಗಳಿಗೂ ಸಹಾ ನಾನು ಸುವಾತರ್ೆ ಕಲಿತಿದ್ದೀನಿ ಅನ್ನೋ ಗಂಧಾಗಾಳಿ ಸಿಕ್ಕಿಲ್ಲ. ಅದೂ ಯೇಸೂ ಆದ್ರೂ ಯಾರಾದ್ರೂ ನನಗೆ ಪೋಸ್ಟ್ನಲ್ಲಿ ಬರುತ್ತೆ ಅನ್ನೋದಷ್ಟೆ ಮುಖ್ಯ ಆಗಿದ್ದದ್ದು.
ಚಡ್ಡಿ ಏರಿಸ್ಕಂಡು ನೆಲದ ಮೇಲೆ ಗೊಣ್ಣೆ ಸುರಿಸ್ಕೊಂಡು ಕೂತುಕೊಳ್ತಾ ಇರೋವಾಗ ಮೇಷ್ಟ್ರು ಬೆತ್ತ ಕೈಯಲ್ಲಿ ಹಿಡಿದು ‘ಅಂಚೆಯಣ್ಣ ಬಂದಿಹನಣ್ಣ ಅಂಚೆಯ ಹಂಚಲು ಮನೆ ಮನೆಗೆ…’ ಅಂತ ಪದ್ಯ ಹೇಳಿಕೊಡ್ತಾ ಇದ್ರಲ್ಲಾ ಅವಾಗ ಈ ಪೋಸ್ಟ್ಮ್ಯಾನ್ ನನ್ನ ಒಳಗಡೆ ಇಳಿದುಬಿಟ್ಟ.
ಹೈಸ್ಕೂಲ್ನಲ್ಲಿ ನನಗೆ ಸುವಾತರ್ೆ ಕೇಳಿ ಕೇಳಿ ಸುಸ್ತಾಗೋ ಕಾಲ ಬಂತಲ್ಲಾ, ಅವಾಗ ನನ್ನ ಫ್ರೆಂಡ್ಸ್ ಇನ್ನೊಂದು ದಾರಿ ತೋರಿಸ್ಕೊಟ್ರು. ಬೇರೆ ದೇಶದ ಎಂಬಸೀಗೆ ಪತ್ರ ಬರೆಯೋದು. ‘ಐ ವಾಂಟ್ ಟು ನೋ ಮೋರ್ ಎಬೌಟ್ ಯುವರ್ ಕಂಟ್ರಿ’ ಅಂತ. ವಾಹ್! ಎಷ್ಟು ಚನ್ನಾಗಿರೋ ಪೋಸ್ಟ್ ಬರೋದು ಗೊತ್ತಾ. ಕಲರ್ ಕಲರ್ ಬ್ರೋಷರ್ಗಳು, ನಮ್ಮ ಅಡ್ರೆಸ್ ಕೂಡಾ ನೀಟಾಗಿ ಟೈಪ್ ಮಾಡಿರೋರು. ಅದು ಬರ್ತಾ ಇದ್ದ ಹಾಗೆ ನಮ್ಮನೇಲಿ ನನ್ನ ಸ್ಟ್ಯಾಂಡರ್ಡೂ ಜಾಸ್ತಿ ಆಗ್ತಾಹೋಯ್ತು. ಇರೋಬರೋ ದೇಶದ ರಾಯಭಾರಿ ಕಛೇರಿಗೆಲ್ಲಾ ಬರ್ದೆ. ಐ ವಾಂಟ್ ಟು ನೋ, ಐ ವಾಂಟು ನೋ…ಅಂತ.
ಒಂದಿನಾ ಹೀಗೆ ಒಂದು ಪೋಸ್ಟ್ ಆಫೀಸ್ ಮುಂದೆ ಹೋಗ್ತಾ ಇದ್ದೆ, ಶಾಕ್ ಆಗೋಯ್ತು, ಅದು ದೊಡ್ಡ ಪೋಸ್ಟ್ ಆಫೀಸು, ಎದುರುಗಡೆ ಕೆಂಪು ಡಬ್ಬ ಮಾತ್ರ ಅಲ್ಲ, ಹಳದಿ, ಹಸಿರು ಬಣ್ಣದ ಡಬ್ಬಾನೂ ಇತ್ತು. ಯಾಕಪ್ಪಾ ಅಂತ ಹತ್ತಿರ ಹೋಗಿ ನೋಡಿದ್ರೆ ನಿಮ್ಮ ಊರಿಗೆ ಆದ್ರೆ ಈ ಡಬ್ಬದಲ್ಲಿ ಹಾಕಿ, ಡೆಲ್ಲಿಗಾದ್ರೆ ಈ ಡಬ್ಬದಲ್ಲಿ, ಮುಂಬೈಗಾದ್ರೆ ಇಲ್ಲಾಕಿ ಅಂತ ಬರ್ತಿತ್ತು. ತುಂಬಾ ಬೇಜಾರಾಗಿ ಹೋಯ್ತು. ನನಗೆ ಪೋಸ್ಟ್ ಬಾಕ್ಸ್ ಅಂದ್ರೆ ಅದು ಕೆಂಪು ಪೋಸ್ಟ್ ಬಾಕ್ಸೇ, ಜೀವನ ಅಂದ್ರೆ ಹಳದಿ ಪೋಸ್ಟ್ ಬಾಕ್ಸ್ ಇದ್ದಹಾಗೆ, ಜೀವನ ಅಂದ್ರೆ ಹಸಿರು ಪೋಸ್ಟ್ ಬಾಕ್ಸ್ ಇದ್ದಹಾಗೆ ಅಂತ ಬರಿಯೋಕೆ ಆಗುತ್ತಾ. ಅದ್ರಲ್ಲೂ ಪೋಸ್ಟ್ ಬಾಕ್ಸ್ ಅಂದ್ರೆ ಬರೀ ಸುಖಾ ದುಃಖಾ ಅಲ್ಲ. ಅದು ಎಲ್ಲಾ ಊರುಗಳನ್ನೂ ಹೊಟ್ಟೆಲಿಟ್ಟುಕೊಂಡು ಕೂತಿರಬೇಕು. ಡೆಲ್ಲಿ ಬೇರೆ ನೀವು ಬೇರೆ ಅಂತ ಹೇಗೆ ಹೇಳೋಕೆ ಸಾಧ್ಯ.

ಇನ್ನಷ್ಟು

ನೋಟ್ ಬುಕ್ಕಿನೊಳಗೂ ಬಂತು ಎಲೆಕ್ಷನ್

door_number1421.jpg

“ಡೋರ್ ನಂ 142”

ಬಹುರೂಪಿ

ವತ್ತು ಪೇಪರ್, ಪೇಪರ್ ಥರಾ ಇರ್ಲಿಲ್ಲ. ದಪ್ಪ ದಪ್ಪ ಅಕ್ಷರ ಇತ್ತು. ಯಾವತ್ತೂ ಆ ಥರಾ ದಪ್ಪ ಅಕ್ಷರದಲ್ಲಿ ಬಂದಿರೋ ಪೇಪರ್ ನೋಡೇ ಇರ್ಲಿಲ್ಲ. ನಾನು ಏಳನೇ ಕ್ಲಾಸ್. ಅಲ್ಲೀವರ್ಗೂ ಪೇಪರ್ ಅಂದ್ರೆ ನಮಗೆ ಒಂದಿಷ್ಟು ಎಲೆಕ್ಷನ್ನು, ಇಂದಿರಾಗಾಂಧಿ ಫೋಟೋ, ಕಾಂಗ್ರೆಸ್ ನ ಸಿಂಬಲ್ ಹಸು-ಕರು ಇಷ್ಟೇ ಗೊತ್ತಿದ್ದಿದ್ದು. ಹಸು-ಕರು ಕಾಂಗ್ರೆಸ್ ನಲ್ಲಿ ಏನೋ ಗಲಾಟೆ ಆಯ್ತಂತೆ. ಕೈ ಕಾಂಗ್ರೆಸ್ ಬಂತಂತೆ ಅನ್ನೋದು ಗೊತ್ತಾಗಿದ್ದು ಪೇಪರ್ ಆಟ ಆಡೋವಾಗ.

ಅಣ್ಣನಿಗೆ ನಾವು ದಿನಾ ಪೇಪರ್ ಓದ್ಬೇಕು. ಅದ್ರಲ್ಲಿರೋ ನ್ಯೂಸ್ ತಿಳ್ಕೋಬೇಕು ಅಂತ ಆಸೆ, ಅದಕ್ಕೆ ಕಾಲೇಜಿಗೆ ಹೋಗೋವಾಗ ಇವತ್ತು ಪೇಪರ್ ಓದಿ ೫ ಇಂಪಾರ್ಟೆಂಟ್ ನ್ಯೂಸ್ ಯಾವುದು ಅಂತ ಬರೆದಿಡು ಅನ್ನೋರು. ಯಾವನಪ್ಪ ಓದ್ತಾನೆ ಆಟ ಆಡೋದು ಬಿಟ್ಟು. ಸರೀ ಮನೇಲಿ ಇದ್ದ ನಾಲ್ಕೂ ಜನಾನೂ ಬರೀಬೇಕಿತ್ತು. ನಾವು ಪ್ಲಾನ್ ಮಾಡ್ದೊ, ದಿನಕ್ಕೆ ಒಬ್ರು ಪೇಪರ್ ಓದಿ ೫ ವಿಷಯ ಬರೆದಿಡೋದು, ಉಳಿದವರು ಅದನ್ನೇ ಮೇಲೆ ಕೆಳಗೆ ಮಾಡಿ ಬರೆದಿಡೋದು. ನಾಲ್ಕೂ ಜನರು ಬರೆದಿರೋದ್ರಲ್ಲೇ ೫ ವಿಷಯ ಮಾತ್ರ ಇರೋದು. ಆದ್ರೆ ಆರ್ಡರ್ ಮಾತ್ರ ಚೇಂಜ್. ಸಂಜೆ ಅಣ್ಣ ಬರ್ತಿದ್ದ ಹಾಗೆ ಎಲ್ಲಾರೂ ಬರೆದಿರೋದು ಓದೋರು. ನಾಲ್ಕೈದು ದಿನ ಆಯ್ತು, ಆರನೆ ದಿನ ಫಟಾರ್ ಅಂತ ಕುಂಡಿ ಮೇಲೆ ಬಿತ್ತು ಲಾತ. ಕುಂಯ್ಯೋ ಅಂತ ಅಳಕ್ಕೆ ಶುರು ಮಾಡಿದ್ವಿ. ಪೇಪರ್ ಓದಿ ನ್ಯೂಸ್ ಬರೀತಾ ಇದ್ದ ನಮ್ಮ ಕಳ್ಳಾಟ ಗೊತ್ತಾಗೋಗಿತ್ತು.

ನನಗೆ ಪೇಪರಲ್ಲಿ ಬರೋ ಚಿತ್ರ ಎಲ್ಲಾ ಕಟ್ ಮಾಡಿ ಅಂಟಿಸೋ ಹುಚ್ಚು ತಗುಲ್ಕೊಳ್ತು. ಅವಾಗ ಕಾಂಗ್ರೆಸ್ ಅಂದ್ರೆ ಹಸು-ಕರು ಗುರುತು.

ಒಂದಿನಾ ಇದ್ದಕ್ಕಿದ್ದ ಹಾಗೆ ಇಂದಿರಾಗಾಂಧಿ ಇನ್ಮೇಲೆ ನನ್ನ ಗುರುತು ಕೈ ಅಂದ್ಬಿಟ್ರು. ಅವತ್ತಿನವರೆಗೂ ಒಂದು ಚಿತ್ರ ಅಂಟಿಸ್ತಾ ಇದ್ದವನು ಈಗ ಇನ್ನೊಂದು ಪೇಜಲ್ಲಿ ಕೈ ಚಿತ್ರಾನೂ ಅಂಟಿಸ್ದೆ. ಅವಾಗ ಗೊತ್ತಾಗಿದ್ದು ಆ ಕಾಂಗ್ರೆಸ್ ಒಡೆದೋಗಿತ್ತು. ಇಂದ್ರಮ್ಮನ ಗ್ಯಾಂಗ್ ಆಚೆ ಬಂದಿತ್ತು. ದೇಶದ ರಾಜಕೀಯ ಹೊಸಾ ದಿಕ್ಕಿಗೆ ಹೊರಳಿಕೊಳ್ತಾ ಇತ್ತು. ಆದ್ರೆ ನಂಗೆ ಮಾತ್ರ ಇದು ಒಂದು ಪೇಜ್ ಅಲ್ಲ ಎರಡು ಪೇಜ್ ವಿಷಯ ಇನ್ಮೇಲೆ ಅಂತ ಮಾತ್ರ ಗೊತ್ತಾಯ್ತು.

ಹೀಗಿರೋವಾಗೇನೇ ಸಡನ್ನಾಗಿ ಪೇಪರ್ ದಪ್ಪ ಅಕ್ಷರದಲ್ಲಿ ಬಂತು. ಅವಾಗ ಯಾವ ಪೇಪರ್ ಇತ್ತು, ಪ್ರಜಾವಾಣಿ ಮಾತ್ರ. ಕಾಂಡೋಂ ಅಂದ್ರೆ ನಿರೋಧ್, ಬ್ರೆಡ್ ಅಂದ್ರೆ ಮಾರ್ಡ್ರನ್ ಬೆಡ್, ಬೆಂಕಿಪೊಟ್ಟಣ ಅಂದ್ರೆ ಚೀತಾಫೈಟ್, ಬಿಸ್ಕತ್ ಅಂದ್ರೆ ಕ್ವಾಲಿಟೀಸ್, ಪೇಪರ್ ಅಂದ್ರೆ ಪ್ರಜಾವಾಣಿ ಅಷ್ಟೆ.

ಪೇಪರ್ ನೋಡಿ ಏನಪ್ಪಾ ಅಂದೆ. ಎಮರ್ಜೆನ್ಸಿ ಬಂದಿದೆ ಅಂದ್ರು ಏನಂಗಂದ್ರೆ ಅಂತಾ ಪ್ರಶ್ನೆ ಹಾಕ್ದೆ. ಯಾರಿಗೊತ್ತಿತ್ತು, ನಮ್ಮಪ್ಪನಾಣೆಗೂ ನಮ್ಮಪ್ಪನಿಗೂ ಗೊತ್ತಿರಲಿಲ್ಲ. ಎಮರ್ಜೆನ್ಸಿ ಅಂದ್ರೆ ಇಂಡಿಯಾ-ಪಾಕಿಸ್ತಾನ ವಾರ್ ಅಂತ ಅಷ್ಟೆ ಗೊತ್ತಿದ್ದದ್ದು. ರಾಗಿ, ಬೇಳೆ ಸಿಗೋದು ಕಷ್ಟ, ಸೀಮೆ ಎಣ್ಣೆ ಮೊದಲೇ ಸ್ಟಾಕ್ ಮಾಡ್ಕೊಬೇಕು ಅಂತ ಅಷ್ಟೆ ಗೊತ್ತಿದ್ದದ್ದು. ಆಗ ಪಾಕಿಸ್ತಾನ ವಾರ್ ಇಲ್ಲ ಚೈನಾ ಗಲಾಟೆ ಇಲ್ಲ ಆದ್ರೂ ಎಮರ್ಜೆನ್ಸಿ. ದೇಶದೊಳಗೆ ಯುದ್ಧ ಅಂತೆ ಅಂತ ನಮ್ಮಪ್ಪ ಹಂಗೂ ಹಿಂಗೂ ಒಂದಷ್ಟು ಜ್ಞಾನ ಸಂಪಾದಿಸ್ಕೊಂಡು ಸಾಯಂಕಾಲ ಹೇಳಿದ್ರು. ಸರಿ ಬಿಡು ಅತ್ಲಾಗೆ ಅಂತ ನಾವೂ ಸುಮ್ಮನಾಗಿಬಿಟ್ವಿ. ಆಮೇಲ್ಯಾಕೋ ಪೇಪರ್ ಸಪ್ಪೆ ಆಗೋಯ್ತು. ನಮ್ದೂ ಎಲ್ಲ ವಿಷಯ ತುಂಬಿಕೊಳ್ಳೋ ಅಷ್ಟು ದೊಡ್ಡ ತಲೇನೂ ಅಲ್ಲ, ಸುಮ್ಮನಾಗಿಬಿಟ್ವಿ.

ಆಮೇಲೆ ಹೈಸ್ಕೂಲು ಸೇರಿದೆ. ಎರಡು ಬಸ್ ಬದಲಾಯಿಸಿ ದೂರದ ಸ್ಕೂಲ್ ಸೇರ್ಕೋಬೇಕಾಗಿತ್ತು. ಒಂದಿನಾ ಬಸ್ ಮೆಜೆಸ್ಟಿಕ್ ದಾಟಿ, ಕಾರ್ಪೊರೇಷನ್ ಸರ್ಕಲ್ ಹತ್ರ ಹೋಗ್ತಾ ಇತ್ತು, ಅವಾಗ ಕಣ್ಣಿಗೆ ಬಿತ್ತು ಗೋಡೆ ಮೇಲೆ ಒಂಥರಾ ವಿಚಿತ್ರ ಪೋಸ್ಟರ್. ಎಮರ್ಜೆನ್ಸಿ ವಿರುದ್ಧ ಸ್ಲೋಗನ್. ಇಂದ್ರಾಗಾಂಧಿಗೆ ಧಿಕ್ಕಾರ.

ಅಯ್ಯೋ ಪಾಪ ಅಂದ್ಕೊಂಡೆ. ಯಾಕಂದ್ರೆ ಇಂದ್ರಾಗಾಂಧಿ ಅಂದ್ರೆ ನಮ್ಗೆ “ನಮ್ಮನೆಯೋಳೆ” ಅನ್ನಿಸ್ಬಿಟ್ಟಿತ್ತು. ಯಾಕಂದ್ರೆ ಒಂದಿನಾ ಇಂದ್ರಾಗಾಂಧಿ ಬೆಂಗ್ಳೂರಿಗೆ ಬಂದಿದ್ರಾ, ನಮ್ಮನೆ ಹತ್ರಾನೇ ಹೋಗ್ಬೇಕಿತ್ತು. ನಮ್ಮನೆಯೋರು, ಪಕ್ಕದ ಮನೆಯೋರು, ಎದುರುಗಡೆ ಮನೆಯೋರು, ಹಿಂದಿನ ಬೀದಿಯೋರು, ಸರ್ಕಲ್ ಹತ್ರ ಇದ್ದೋರು, ಅಂಗಡಿ ಇಟ್ಕೊಂಡಿದ್ದೋರು ಅಂತಾ ಊರಿಗೆ ಊರೇ ವದ್ಕೊಂಡು ಬಂದ್ಬಿಟ್ಟಿದೆ ಅನ್ನೋ ಹಾಗೆ ಎಲ್ರೂ ಇಂದ್ರಾಗಾಂಧೀನ ನೋಡೋಕೆ ಬಂದ್ಬಿಟ್ಟಿದ್ರು. ಸುಂಯ್ ಅಂತ ಬಂತು ನೋಡಿ, ಒಂದು ಜೀಪು, ಎರಡು ಜೀಪು ಮೂರು ಜೀಪು, ಲೆಕ್ಕ ಹಾಕ್ತಾನೇ ಇದ್ವಿ ಒಂದು ಕಾರು ಬಂದು ಚಕ್ಕಂತ ನಿಂತ್ಕೊಳ್ತು, ಬಾಗಿಲು ಓಪನ್ ಆಯ್ತು. ಯಾರಪ್ಪ ಅಂತ ನೋಡುದ್ರೆ ಅದೇ ಕಪ್ಪು ಕನ್ನಡಕ, ತಲೆ ಮೇಲೆ ಸೆರಗು ಆಮೇಲೆ… ಆಮೇಲೆ.. ಹಾಂ ರಾಜ್ ಕುಮಾರ್ ಮೂಗು ಅರೇ ಇಂದ್ರಾಗಾಂಧಿನೇ ಇಳಿದ್ರು. ಜನ ರೋಡ್ ಸೈಡ್ ನಲ್ಲಿ ಇದ್ರಲ್ಲಾ ಅಲ್ಲಿಗೇ ಬಂದ್ರು ಎಷ್ಟೊಂದು ಜನ ಹಾರ ಹಾಕಿದ್ರು. ಹಾರಾ ಹಾಕಿಸ್ಕೊಳ್ತಾನೆ ಇದ್ದಿದ್ದೇನು. ಹಾಕಿದ ಹಾರಾ ತೆಗೆದು ಜನರತ್ತ ಎಸೀತಾ ಇದ್ದಿದ್ದೇನು. ಅದನ್ನ ಹಿಡ್ಕೊಳ್ಳೋದಿಕ್ಕೆ ಪೈಪೋಟಿ ಏನು! ಸಖತ್ತಾಗಿತ್ತು.

ಇಂತಾ ಇಂದ್ರಾಗಾಂಧೀಗೆ ಬೈದವರಲ್ಲಾ ಅಂತ ಕ್ಲಾಸ್ ರೂಮ್ ನಲ್ಲಿ ಕೂತಾಗ್ಲೂ ಬೇಜಾರಾಗೋಗಿತ್ತು. ಸಾಯಂಕಾಲ ಮನೇಗೆ ಬಂದವ್ನೆ ಅಣ್ಣನ ಕೇಳ್ದೆ, ಇಲ್ಲಾ ಸಿಕ್ಕಾಪಟ್ಟೆ ಜನಾನ ಸಾಯಿಸ್ಬಿಟ್ಳಂತೆ ಅಂದ್ರು. ರೋಡ್ ಸೈಡ್ ಇಂದ್ರಾಗಾಂಧಿ, ಡೆಲ್ಲಿ ಇಂದ್ರಾಗಾಂಧೀನೇ ಬೇರೆ ಬೇರೆನಾ ಅನಿಸ್ತು. ಆಮೇಲೆ ಶುರುವಾಯ್ತು ನೋಡಿ, ನಾನು ನೋಟ್ ಬುಕ್ಕಲ್ಲಿ ಚಿತ್ರ ಅಂಟಿಸೋದು ಬಿಟ್ಟಿರ್ಲಿಲ್ವಲ್ಲಾ. ಈಗ ನೋಟ್ ಬುಕ್ ಮೇಲೆ ನೋಟ್ ಬುಕ್ ಬೇಕಾಯ್ತು. ಜೆ.ಪಿ ಅಂತೆ. ಮೊರಾರ್ಜಿ ಅಂತೆ, ಜಾರ್ಜ್ ಫರ್ನಾಂಡಿಸ್ ಅಂತೆ, ಜಗಜೀವನರಾಂ ಅಂತೆ ಯಾರ್ಯಾರ್ದೋ. ಅದ್ರಲ್ಲಿ ಒಂದು ಮಾತ್ರ ಚೆನ್ನಾಗಿ ನೆನಪಿದೆ. ಕಾರ್ಟೂನು, ಜೆಪಿ ಹಾಸಿಗೇನಲ್ಲಿ ಮಲ್ಕೊಂಡಿದಾರೆ. ತಲೇಲಿ ನವಿಲುಗರಿ ಇದೆ, ಕಾಲತ್ರ ಮೊರಾರ್ಜಿ ದೇಸಾಯಿ, ತಲೆ ಹತ್ರ ಜಗಜೀವನರಾಂ ಇದಾರೆ. ಏನಪ್ಪ ಇದು ಅನಿಸ್ತು. ನನಗೆ ಕಾಡ್ತಾ ಇದ್ದದ್ದು ನವಿಲುಗರಿ. ಅಲ್ಲಾ ಕೃಷ್ಣನಿಗೆ ಮಾತ್ರ ನವಿಲುಗರಿ ಇರುತ್ತೆ, ಇದ್ಯಾಕಪ್ಪ ಇಲ್ಲಿ ಇನ್ಯಾರಿಗೋ ನವಿಲುಗರಿ ಹಾಕಿದಾರೆ ಅಂತ. ಆಮೇಲೆ ಯಥಪ್ರಕಾರ ಅಣ್ಣನ್ನ ಕೇಳ್ದೆ, ಅವ್ರು ಜಗಜೀವನರಾಂಗೆ ಮೋಸ ಆಗೋಯ್ತು ಪ್ರಧಾನಿ ಆಗಲ್ಲ ಅಂದ್ರು ಆಮೇಲೆ ಆ ಕಾರ್ಟೂನು ಹಿಡ್ಕಂಡು ಮಹಾಭಾರತದ ಕಥೆ ಹೇಳಿದ್ರು. ಕೃಷ್ಣ ಮಲಗಿರ್ತಾನೆ ಕಾಲತ್ರ ಧರ್ಮರಾಯ, ತಲೆ ಹತ್ರ ದುರ್ಯೋಧನ, ಕೃಷ್ಣ ನಿದ್ದೆಯಿಂದ ಎದ್ದಾಗ ಫಸ್ಟ್ ಯಾರ ಕಡೆ ನೋಡ್ತಾನೋ ಅವ್ರಿಗೇ ಕೃಷ್ಣನ ಸಪೋರ್ಟು ಅಂತ.

ಅಲ್ಲಾ ಯಾರಾದ್ರು ಕಣ್ಣನ್ನ ತಲೆ ಹಿಂದಕ್ಕೆ ಬಿಟ್ಕೊಂಡು ಎದ್ದೇಳ್ತಾರಾ. ಲಕ್ಕಿಡಿಪ್ಪು ಧರ್ಮರಾಯನಿಗೆ ಬಂತು, ಅಣ್ಣ ಇದನ್ನ ಹೇಳೋವಾಗ ಮದ್ವೆ ಮನೇಲಿ ಸರಿಯಾದ ಪ್ಲೇಸಲ್ಲಿ ಊಟಕ್ಕೆ ಕೂತ್ಕೋಬೇಕು ಅಂತ ತಮಾಷೆ ಮಾಡ್ತಾ ಇದ್ದದ್ದು ಜ್ಞಾಪಕಕ್ಕೆ ಬಂತು. ಭಟ್ಟರು ಎಲ್ಲಿಂದ ಬಡಿಸ್ಕೊಂಡು ಬರ್ತಾರೆ, ನೋಡ್ಕೊಂಡು ಫಸ್ಟ್ ಆ ಪ್ಲೇಸ್ ಹಿಡ್ಕೊಬೇಕು ಅಂತ. ಪಾಪ ದುರ್ಯೋಧನನಿಗೆ ಭಟ್ರು ಯಾವ ಕಡೆ ಇಂದ ಕೋಸಂಬ್ರಿ ಹಾಕ್ತಾ ಬರ್ತಾರೆ ಅಂತ ಗೊತ್ತಾಗ್ಲಿಲ್ಲ, ಕೆಲ್ಸ ಕೆಡ್ತು.

ನಮ್ಮನೇಲೂ ಒಂದು ಹಸುಕರು ಇತ್ತು. ಅದೇನೋ ಒಂಥರಾ ಅದ್ರ ಜೊತೆ ಇದ್ರೆ ಖುಷಿ ಆಗೋದು. ಅದ್ರಲ್ಲೂ “ಅಂಬಾ” ಅಂದ್ರೆ ನಾವೇ ಕೂಗ್ತಾ ಇದೀವೇನೋ ಅನಿಸೋದು. ಅದಕ್ಕೆ ಇರ್ಬೇಕು ಕಾಂಗ್ರೆಸ್ ಪಾರ್ಟಿಗೂ ಹಸು-ಕರು ಸಿಂಬಲ್ ಇತ್ತಲ್ಲ, ನಮ್ದೇ ಪಾರ್ಟಿ ಅನಿಸ್ಬಿಟ್ಟಿತು. ಇವಾಗ ಕೈ ಬಂತಲ್ಲ. ಒದ್ದಾಟ ಶುರು ಆಗೋಯ್ತು. ಇಂದ್ರಾಗಾಂಧೀ ಬೇಕು ಆದ್ರೆ ಹೆಂಗಪ್ಪ ಹಸು-ಕರು ಬಿಟ್ಟೋಗೋದು ಅಂತ.

ಒಂದಿನಾ ರೋಡಲ್ಲಿ ಆಟ ಆಡ್ತಾ ಇದ್ವಿ. ಕುಂಟೇಬಿಲ್ಲೆ ಆಟ. ಅವಾಗ “ಮತ ಕೊಡಿ, ಮತ ಕೊಡಿ, ಮತ ಕೊಡಿರಿ ಸೈಕಲ್ ಗುರುತು, ಸೈಕಲ್ ಗುರುತು, ಸೈಕಲ್ ಗುರುತಿಗೇ” ಅಂತಾ ಬಂದು ಸೈಕಲ್ ಗೆ ಮೈಕ್ ಕಟ್ಟಿಕೊಂಡು ಯಾರೋ ಹಾಡು ಹೇಳ್ಕೊಂಡು ಬರ್ತಿದ್ರು. ಎಂತಾ ಷಾಕ್ ಆಯ್ತು ಅಂತೀರಾ? “ಹಸು-ಕರು” ಇದೆ, ಈಗ “ಕೈ” ಇದೆ ಅಂತ ಗೊತ್ತಿತ್ತು. ಇದ್ಯಾವದಪ್ಪಾ ಮಧ್ಯದಲ್ಲಿ ಸೈಕಲ್ಲು ಅಂತ. ಮಹದೇವ ಬಣಕಾರ್ ಅಂತ ಒಬ್ರು ಇದ್ರು, ಅವ್ರು ಎಲೆಕ್ಷನ್ ಗೆ ನಿಂತ್ಕೊಂಡಿದ್ರು. ಸೈಕಲ್ ಗುರುತು ಸಿಕ್ಕಿತ್ತು. ಅವಾಗ್ಲೇ ನಮ್ಗೆ ಗೊತ್ತಾಗಿದ್ದು ಎಲೆಕ್ಷನ್ನು ಅಂದ್ರೆ ಬರೀ ಇಂದ್ರಾಗಾಂಧಿ ಅಲ್ಲ ಮಹದೇವ ಬಣಕಾರೂ ನಿಂತ್ಕೊಬೌದು ಅಂತ. ಯಾವ ಪಾರ್ಟಿ ಅಂದ್ರೆ ಪಾರ್ಟೀನೇ ಇಲ್ಲ. ಇದೇನಪ್ಪ ವಿಚಿತ್ರ ಅನಿಸ್ತು. ಫಸ್ಟ್ ಟೈಮು ನಮ್ಮ ಸಾಯಂಕಾಲದ ಕುಂಟೇಬಿಲ್ಲೆ ಆಟ ಸ್ಟಾಪ್ ಆಗೊಯ್ತು. ಅವತ್ತೆಲ್ಲಾ ಅದೇ ಯೋಚ್ನೆ, ಇದೆಂಗೆ? ಅಣ್ಣನ ಕೇಳೋಣ ಅಂದ್ರೆ ಊರಲ್ಲಿರಲಿಲ್ಲ ಸರೀ ರಾತ್ರಿ ಎಲ್ಲಾ ಯೋಚನೆ ಮಾಡಿ ಬೆಳಗ್ಗೆ ಎದವನೇ ಅಲ್ಲಿ ಇಲ್ಲಿ ಹುಡುಕಿ ಒಂದು ಸೈಕಲ್ ಚಿತ್ರ ಹುಡುಕಿದೆ. ನೋಟ್ ಬುಕ್ ತೆಗೆದೆ ಹೊಸಾಹಾಳೆ ಓಪನ್ ಮಾಡ್ದೆ, ಸೈಕಲ್ ಚಿತ್ರಾನೂ ಅಲ್ಲಿ ಅಂಟಿಸ್ದೆ. ಹಸುಕರು, ಕೈ, ಸೈಕಲ್ಲು ಎಲ್ಲಾ ಸೇರಿಸಿದ್ರೆ ಎಲೆಕ್ಷನ್ನು ಅನ್ನೋದಂತೂ ಅರ್ಥ ಆಯ್ತು.

ನಾನು ಬಸ್ಸಿನಲ್ಲಿ ಬರೋವಾಗ ಒಂದು ದೊಡ್ಡ ಮಿಲ್ ಸಿಗ್ತಿತ್ತು, ಉದ್ದ ಕಾಂಪೌಂಡು. ಅದಂತೂ ನನಗೆ ಎಲೆಕ್ಷನ್ ಪಾಠ ಮಾಡೋದು. ಆ ಗೋಡೆ ಮೇಲೆ ಒಂದಿನಾ ಗರೀಬಿ ಹಠಾವೋ ಅಂತ ಬಂತು. ಆಮೇಲೆ ಇನ್ನೊಂದು ಪಾರ್ಟಿಯವರು ಗರೀಬರನ್ನೇ ಹಠಾವೋ ಮಾಡ್ತಿದಾರೆ ಅಂತ ಬರೆದ್ರು.

ನನಗೆ ಈಗ್ಲೂ ತುಂಬಾ ಚೆನ್ನಾಗಿ ಜ್ಞಾಪ್ಕ ಇರೋದು ಟ್ವೆಂಟಿ ಪಾಯಿಂಟ್ ಪ್ರೋಗ್ರಾಂ. ಇಂದ್ರಾಗಾಂಧಿ ದೇಶದ ಉದ್ಧಾರ ಮಾಡೋಕೆ ಅಂತ ೨೦ ಅಂಶದ ಸೂತ್ರ ರಚಿಸಿದ್ರು. ಎಲ್ಲಾ ಗೋಡೆ ಮೇಲೆ ಅದೇ, ೨೦ ಪಾಯಿಂಟ್ ಪ್ರೋಗ್ರಾಂ ಬಗ್ಗೇನೇ ಒಂದಿನಾ ಯಾರೋ ಅದರ ಪಕ್ಕ “ಟಿಕ್-೨೦” ಅಂತ ಬರೆದ್ರು. ಈ “೨೦ ಪಾಯಿಂಟ್ ಸೇವಿಸಿರಿ, ಸತ್ತು ನರಕ ಸೇರಿರಿ” ಅಂತ ಬರೆದ್ರು. ಆಮೇಲೆ ಅದೇ ಕಾಂಪೌಂಡ್ ಮೇಲೆ “ಪ್ರಾಬ್ಲಂಸ್ ಆರ್ ಪ್ಲೆಂಟಿ, ಪಾಯಿಂಟ್ಸ್ ಆರ್ ಟ್ವೆಂಟಿ, ರಿಸಲ್ಟ್ಸ್ ಆರ್ ಎಂಪ್ಟಿ” ಅಂತ ಸ್ಲೋಗನ್ ಕಾಣಿಸ್ತು.

ಎಲೆಕ್ಷನ್ ಅನ್ನೋದು ಡೆಲ್ಲಿ ಸಮಾಚಾರ. ಡೆಲ್ಲಿನಲ್ಲಾಗುತ್ತೆ. ಡೆಲ್ಲಿ ಬೇಕು ಅಂತ ಆಗುತ್ತೆ ಅಂದ್ಕೊಂಡಿದ್ದೆ. ಆಮೇಲೆ ಗೊತ್ತಾಯ್ತು ಎಲೆಕ್ಷನ್ ಅನ್ನೋದು ಪೇಪರಲ್ಲೂ ಆಗುತ್ತೆ, ಕಾಂಪೌಂಡ್ ಗೋಡೆ ಮೇಲೂ ಆಗುತ್ತೆ. ಅಷ್ಟೇ ಅಲ್ಲ, ನನ್ನ ನೋಟ್ ಬುಕ್ ಒಳಗೂ ಆಗುತ್ತೆ ಅಂತ.

ಅವ್ರು ನಮ್ದೆಲ್ಲಾ ಬರದವ್ರೇ ಅಂದ್ರೆ ನಂ ಥರಾನೇ!

door_number1421.jpg

“ಡೋರ್ ನಂ 142”

ಬಹುರೂಪಿ

ಠ ಹಿಡಿದು ಕೂತುಬಿಟ್ಟಿದ್ದೆ. ಮುಖ ಊದಿಸಿಕೊಂಡಿದ್ದೆ. ಅಮ್ಮನಿಗೋ ಇದೇನಪ್ಪಾ ಯಾವ್ದೋ ಹೊಸ ಥರದ್ದು ಮನೇಲಿ ಇಣುಕ್ತಾ ಇದೆಯಲ್ಲಾ ಅನಿಸಿಬಿಟ್ಟಿತ್ತೇನೋ. ಇಷ್ಟು ದಿನ ನೋಡಿದ ನಾಟ್ಕಾನೇ ಸಾಕು ಇದೊಂದು ಹೊಸಾದು ಹುಟ್ಕಂತಲ್ಲ ಅನಿಸಿತ್ತೇನೋ.

ವಿಷಯ ಇಷ್ಟೆ. ಲಂಕೇಶ್ ಗೆ ಹೊಡೆದುಬಿಟ್ರಂತೆ ಅಂತ ಸುದ್ದಿ ಗೊತ್ತಾದಾಗ್ಲಿಂದ ತಳಮಳಿಸಿ ಹೋಗಿದ್ದೆ. ನಾನೇನು ಲಂಕೇಶ್ ಗೆ ನೆಂಟನೂ ಅಲ್ಲ, ದೋಸ್ತೂ ಅಲ್ಲ ಅವರನ್ನ ನೋಡೂ ಇರ್ಲಿಲ್ಲ. ಅದ್ರಲ್ಲೂ ಅವಾಗ ನಂಗೆಷ್ಟು ವಯಸ್ಸು. ಮೀಸೆ ಬಂದು ನಾಲ್ಕು ದಿನಾ ಆಗಿತ್ತು. ಹೈಸ್ಕೂಲ್ ವರೆಗೂ ಚಡ್ಡೀನೇ… ಅನ್ನೋ ಅಪ್ಪನ ರೂಲ್ಸ್ ಸಕ್ಸಸ್ ಮಾಡಿ ಪ್ಯಾಂಟ್ ಕಾಲಕ್ಕೆ ಬಂದಿದ್ದೆ. ಅವಾಗ್ಲೇ ಬಂತಲ್ಲ ವಾಟಾಳ್ ನಾಗರಾಜ್ ಹೊಡೆಸಿಬಿಟ್ರಂತೆ ಲಂಕೇಶ್ ಗೆ ಅನ್ನೋ ಸುದ್ದಿ. ವಾಟಾಳ್ ಮುಖ ಹೆಂಗೈತೆ ಅಂತ ಯಾರಿಗೆ ಗೊತ್ತಿತ್ತು. ಆ ವಿಚಿತ್ರ ಟೋಪಿ ಕನ್ನಡಕ ಅಷ್ಟೇ ಕಣ್ಣಿಗೆ ಬೀಳ್ತಾ ಇದ್ದದ್ದು.

ಅದ್ರೆ ಈ ವಾಟಾಳ್ ಬಗ್ಗೇನೂ ಒಂದಿಷ್ಟು ಮರ್ಯಾದೆ ಇತ್ತು. ಯಾಕಂದ್ರೆ ನಮ್ಮಣ್ಣ ನವೆಂಬರ್ ೧ ಬಂತು ಅಂದ್ರೆ ಎಲ್ಲಾರ್ನೂ ಗುಡ್ಡೆ ಹಾಕ್ಕೊಂಡು ಬಸ್ ಹತ್ತಿಸಿಕೊಂಡು ಮೈಸೂರು ಬ್ಯಾಂಕ್ ಸರ್ಕಲ್ ಗೆ ಕರ್ಕೊಂಡೋಗೋರು. ಕೆಆರ್ ಸರ್ಕಲ್ ಗೆ ಹೋಗೋ ರೋಡಲ್ಲಿ ಜನ ಜನ ಜನಾ. ಆ ರಷ್ ನಲ್ಲಿ ನಾವು ಎರಡನೇ ಕ್ಲಾಸು. ಮೂರ್ನೇ ಕ್ಲಾಸುಗಳು ಅವರಿವರ ಕಾಲು ಕೆಳಗೆ ಬಗ್ಗಿ ನೋಡ್ತಾ ಇದ್ದಾಗ ಬರೋದು ವಾಟಾಳ್ ಜಾತ್ರೆ. ಟ್ಯಾಬ್ಲೋ ಅಂದ್ರೆ ಏನು ಅಂತ ಫಸ್ಟ್ ಗೊತ್ತಾಗಿದ್ದೇ ಅವಾಗ. ಗಂಟೆಗಟ್ಟಲೆ ಮೆರವಣಿಗೆ, ಯಾವ್ ಯಾವ ಸಾಹಿತೀದೋ ದ್ವಾರಗಳು, ಚೆನ್ನಾಗಿರೋದು. ಇದನ್ನೆಲ್ಲಾ ಮಾಡಿಸ್ತಾ ಇದ್ದದ್ದು ವಾಟಾಳ್ ಅಲ್ವಾ. ಸಖತ್ತಾಗಿ ಮಾಡಿಸ್ತಾನೆ ಅನ್ನೋದೊಂದು ತಲೇಲಿ ಕೂತುಬಿಟ್ಟಿತ್ತು.

ಈಯಪ್ಪ ಸಖತ್ತಾಗಿ ಎಂತದೂ ಮಾಡಿಸ್ತಾನೆ ಅಂತಾ ಅರ್ಥ ಆಗೋಕೆ ಹತ್ತು ವರ್ಷ ಬೇಕಾಯ್ತು ನಂಗೆ. ಅದೂ ಪಿಯುಸಿಗೆ ದಾಟಿಕೊಂಡ ಮೇಲೇ. ಲಂಕೇಶ್ ಗೆ ಹೊಡೆಸಿದ ಮೇಲೇ. ಲಂಕೇಶ್ ಅಂದ್ರೇನು ಕಡಿಮೇನಾ? ಕ್ಲಾಸಲ್ಲಿ ಕೂತಿದ್ದೋನು ಟೀಚರ್ರು ಬೋರ್ಡ್ ಮೇಲೆ ಏನೋ ಬರಿಯಕ್ಕೆ ತಿರುಗಿದಾಗ ದಿಢೀರ್ ಅಂತ ಮಾಯಾ ಆಗೋಗ್ತಿದ್ದೆ. ಸಿಕ್ಕಸಿಕ್ಕ ಅಂಗಡಿ ಮುಂದೆ ಲಂಕೇಶ್ ಬಂತಾ ಲಂಕೇಶ್ ಬಂತಾ ಅನ್ತಿದ್ದೆ. ಅಂಗಿತ್ತು ಅಟ್ರಾಕ್ಷನ್ನು. ಗುಂಡೂರಾವ್, ಬಂಗಾರಪ್ಪ ಅಂದ್ರೆ ಎಲ್ಲಾರ್ಗೂ ಒಂಥರಾ ಹೆದ್ರಿಕೆ ಇತ್ತು. ಗುಂಡೂರಾವ್ ರೌಡಿಗಳನ್ನ ಬಿಡ್ತಾನೆ ಅಂತ. ಬಂಗಾರಪ್ಪ ಪ್ರಜಾವಾಣಿನೋರ ಜಾತೀನೇ ಅಂತ. ಅಂತಾದ್ರಲ್ಲಿ ಈ ಲಂಕೇಶ್ ಅಂತಾ ಪ್ರಜಾವಾಣೀಲೇ ಶುರು ಮಾಡಿದ್ರಲ್ಲಾ ವರಸೆ. ಬಂಗಾರಪ್ಪಂಗೆ “ಬಂ” ಗುಂಡೂರಾವ್ ಗೆ “ಗುಂ” ಅಂತ ಹೆಸರಿಟ್ರು. ಪ್ರತೀ ವಾರ ಲೇಖನ ಬರೆಯೋರು. ಯಾರೋ ಹೇಳೋರಪ್ಪ ಒಂದೇ ಥರಾ ಪುಕ್ಕ ಇರೋ ಪಕ್ಷಿಗಳೆಲ್ಲಾ ಒಂದ್ಕಡೆ ಸೇರ್ಕಂತವೆ ಅಂತಾ. ಹಂಗೆ ನನ್ನ ಪುಕ್ಕ, ಲಂಕೇಶ್ ಪುಕ್ಕ ಒಂದೇ ಥರಾ ಇತ್ತೇನೋ. ಅವರು ಬರೆಯೋದು ಸಖತ್ತಾಗಿದೆ ಅನಿಸೋಕೆ ಶುರು ಮಾಡ್ತು.

ಒಂಥರಾ ಯಾರ ಮುಲಾಜೂ ಇಲ್ಲ, ಯಾವ ಮುಲಾಜೂ ಇಲ್ಲ, ಬರೆಯೋ ಭಾಷೇನಲ್ಲಿ ನಾಜೂಕಿಲ್ಲ, ಮಡಿವಂತಿಕೆ ಮಾಡಲ್ಲ. ಒಂಥರಾ ವೆಜ್ಜು-ನಾನ್ ವೆಜ್ಜು ಮಧ್ಯೆ ಯುದ್ಧ ಆದ್ರೆ ನಾನ್ ವೆಜ್ ಮಸಾಲೇನೇ ಒಂದ್ ಕೈ ಮೇಲ್ ಮಾಡ್ಕಂಡಿರ್ತದಲ್ಲಾ ಹಂಗಿತ್ತು. ನಂಗಂತೂ ಯಾಕೆ ಇಷ್ಟ ಆಗ್ತಿತ್ತಪ್ಪಾ ಅಂದ್ರೆ ನಾನೂ ಮನೇಲಿ ಒಂಥರಾ ಯುದ್ಧ ನಡೆಸಿದ್ದೆ. ನಮ್ಮಪ್ಪನ ವಿರುದ್ಧ. ನೀವು ಹೇಳಿದ್ ಯಾಕ್ ಕೇಳ್ಬೇಕು? ನೀವು ಹಿಂಗ್ ಅಂದ್ರೆ ನಾನ್ ಅದ್ನ ಬಿಟ್ಟು ಇನ್ನೆಂಗೋ ಮಾಡೋನೇ…ಅನ್ನೋ ಥರಾ ಯುದ್ಧ ಮಾಡ್ತಿದ್ದೆ. ನಂಗೆ ಲಂಕೇಶ್ ಬರೆಯೋಕೆ ಶುರು ಮಾಡ್ದಾಗ ನನ್ನ ಯುದ್ಧ ಮನೇನಲ್ಲಿ, ಅವರ ಯುದ್ಧ ಬೀದೀನಲ್ಲಿ ಅನಿಸ್ತು. ಒಂಥರಾ ನಾನೂ ಲಂಕೇಶೂ ಮೀಟ್ ಮಾಡ್ದಿರಾನೇ, ಮಾತಾಡ್ದಿರಾನೇ ಬಾಳಾ ಕ್ಲೋಸ್ ಆಗ್ಬಿಟ್ವಿ.

“ಬಂ” “ಗುಂ” ಬರ್ದಿದ್ದಕ್ಕೇ ಇಷ್ಟ್ ಆಗಿತ್ತಾ. ಆಮೇಲೆ ಶುರುವಾಯ್ತು ನೋಡಿ ಅವರ ಪೇಪರ್ರು. ಆ ಲಂಕೇಶ್ ಎಷ್ಟು ವಿಚಿತ್ರ ಅನಿಸಿದ್ದು ಯಾಕಪ್ಪಾ ಅಂದ್ರೆ ಅವರೆಸರೇ ಇಟ್ಕೊಂಡ್ರಲ್ಲಾ ಅದಕ್ಕೆ. ನನಗೆ ಒದ್ದಾಟ ಆಗ್ತಾ ಇದ್ದದ್ದು ಪೇಪರ್ ಅಂಗಡಿ ಮುಂದೆ ನಿಂತ್ಕೊಂಡಾಗ ಹೆಂಗಪ್ಪಾ ಕೇಳೋದು ಒಂದು ಲಂಕೇಶ್ ಕೊಡ್ರಿ ಅಂತಾ. ಆ ಗುಜ್ಜಾರ್ ಎಳೀತಾ ಇದ್ದ ಗೆರೆ ಲಂಕೇಶ್ ಇಡ್ತಾ ಇದ್ದ ಬರೆ ಎರಡೂ ಹೆಂಗೆ ಅಟ್ರಾಕ್ಟ್ ಮಾಡ್ಬಿಡ್ತು ಅಂದ್ರೆ…

ಚಿಕನ್ ಪಲಾವ್, ಬೆಂಡೆಕಾಯಿ ಗೊಜ್ಜು ಎಲ್ಲಾ ಪೇಪರ್ಗೆ ಎಂಟರ್ ಆಗಿದ್ದೇ ಅವ್ರಿಂದ. ಅಲ್ಲಾ ರಾಜಕೀಯಾನ ಪಲಾವು, ಗೊಜ್ಜುನಲ್ಲಿ ಹೇಳ್ಬಿಡಬೌದಾ ಅಂತಾ. ಹಿಂಗಾಗೆ ಲಂಕೇಶು ಫೇಮಸ್ ಆಗಿದ್ರು. ಫೇಮಸ್ ಅಂತಾ ಅಲ್ಲ. ಯಾಕಂದ್ರೆ ಅಷ್ಟೊತ್ತಿಗೆ ಅವ್ರು ಸಿಕ್ಕಾಪಟ್ಟೆ ಬರ್ದಿದ್ರು. ಫಿಲಂ ತೆಗೆದಿದ್ರು. ಹಾಡು ಬರ್ದಿದ್ರು. ಪೇಪರ್ ಮಾಡಿದ್ಮೇಲೆ ಫೇಮಸ್ ಆಗ್ಬೇಕು ಅನ್ನೋದೇನೂ ಇರ್ಲಿಲ್ಲ.

ಅವ್ರು ಎಲ್ಲಿಂದಲೋ ಬಂದವರು ಫಿಲಂ ಮಾಡಿದ್ರಲ್ಲಾ ಆಗಂತೂ ನಂಗೆ ತುಂಬಾ ಇಷ್ಟ ಆಗೋಗಿದ್ರು. ಯಾಕಂದ್ರೆ-ಕರಿಯವ್ನ ಗುಡಿತಾವ ಅರಳಾವೆ ಬಿಳಿಹೂವು/ಸೀಮೇಯ ಜನ ಕುಣಿದು ನಕ್ಕಾಂಗದ/ತುಂಟ ಹುಡುಗ್ಯಾರಲ್ಲಿ ನೆವ ಹೇಳಿ ಬರುತಾರೆ/ಹರಯದಾ ಬಲೆಯಲ್ಲಿ ಸಿಕ್ಕಾಂಗದ/ಊರಿಂದ ನಾಕೆಜ್ಜೆ ಹಾಕಿದರೆ ಕಾಣತೈತೆ/ಅಲ್ಲೀಯೆ ಹರಿದವಳೆ ಐರಾವತಿ… ಅಂತಾ ಬರೆದಿದ್ರು. ನಾನೂ ಅವಾಗ ಆ ಹರಯದ ಬಲೆಯಲ್ಲಿದ್ದೆ. ಆಗ ಅನ್ನಿಸೋದು ಅಲ್ಲಾ ಈ ಮನುಷ್ಯಾ ಏನೇನೆಲ್ಲಾ ಆಟಾ ಆಡಿರ್ಬೇಕು ಅಂತ. ಅದಕ್ಕಿಂತ ನಮ್ದೆಲ್ಲಾ ಬರದವ್ರೆ ಅಂದ್ರೆ ಅವ್ರು ನಮ್ ಥರಾನೇ ಅಂಥ ಡಿಸೈಡ್ ಮಾಡಿಬಿಟ್ಟಿದ್ದೆ. ಹಂಗಾಗೇನೇ ಅವ್ರು ನಮ್ಮೋರು ಆಗ್ಬಿಟ್ಟಿದ್ರು.

ಕೆಂಪಾದವೋ ಎಲ್ಲಾ ಕೆಂಪಾದವು/ಹಸುರಿದ್ದ ಗಿಡಮರ/ಬೆಳ್ಳಗಿದ್ದ ಹೂವೆಲ್ಲಾ/ನೆತ್ತಾರ ಕುಡಿದಾಂಗ ಕೆಂಪಾದವು/ಅಲ್ಲೊಂದು ಗಿಣಿ ಕೂತು ಕಥೆಯೊಂದ ಹೇಳೈತೆ/ಕೇಳಾಕೆ ನಾನಿಲ್ಲ ಊರೊಳಗೆ/ಕಥೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ/ಕಥೆಗಳಾ ಮಾರಾಣಿ ಐರಾವತಿ… ಇವೆಲ್ಲಾ ಒಂಥರಾ ನಾಡಗೀತೆ ಆಗೋಗಿತ್ತು. ಸದಾ ತಲೇನಲ್ಲಿ ಗುನುಗುನಿಸ್ತಾ ಇರ್ತಿತ್ತು.

ಅದ್ರಲ್ಲೂ… ಎಲ್ಲಿದ್ದೆ ಇಲ್ಲೀ ತಂಕ/ಎಲ್ಲಿಂದ ಬಂದ್ಯವ್ವ/ನಿನ ಕಂಡು ನಾ ಯಾಕೆ ಕರಗಿದೆನೋ/ಸುಡುಗಾಡು ಹೈದನ್ನ/ಕಂಡವಳು ನೀನ್ಯಾಕೆ/ಈಸೊಂದು ತಾಯಾಗಿ ಮರುಗಿದೆಯೋ… ಹಾಡಂತೂ ನನ್ನೊಳಗಿದ್ದ ದುಃಖಾನ ಹೊರಗೆಳೆದು ಕೂರಿಸ್ತಿತ್ತು. ಆ ಹಾಡೂ, ಆ ರಾಗಾ ಈಗ್ಲೂ ನೋವಾದಾಗ್ಲೆಲ್ಲಾ ಕುಣಿಯುತ್ತೆ.

ವಿಮಲಾನಾಯ್ಡು ಅಂತ ಇದ್ರು. ಎಂಇಎಸ್ ಕಾಲೇಜಿನಲ್ಲಿ ಓದ್ತಾ ಇದ್ರು. ನಮ್ಮಣ್ಣನ್ನ ಕ್ಲಾಸ್ ಮೇಟ್. ಅವ್ರು ಲಂಕೇಶ್ ಸಿನಿಮಾಗೆ ಸೆಲೆಕ್ಟ್ ಆಗ್ಬಿಡ್ಬೇಕಾ! ಹಂಗಾಗಿ ವಿಮಲಾನಾಯ್ಡು ಇರೋ ಸಿನಿಮಾ ಅಂತ ಶುರುವಾಗಿದ್ದು, ಕೊನೇಗೆ ವಿಮಲಾನಾಯ್ಡು ಮಾಯ. ಬರೀ ಲಂಕೇಶ್ ಕೂತುಬಿಟ್ರು ಮನಸೊಳಗೆ. ಪತ್ರಿಕೆ ಶುರುವಾಗಿದ್ದೇ ಅದ್ರಲ್ಲಿ ವಿಮಲಾನಾಯ್ಡು ಜಡೆ ಬಗ್ಗೆ ಬರೆದ್ರು, ಜಯಮಾಲಾ ನನ್ನ ತಮ್ಮ ಅಂತ ಬರೆದ್ರು. ಇದೆಲ್ಲಾ ಯಾವ ಪೇಪರಲ್ಲಿತ್ತು. ಟಿಎಸ್ ಆರ್ ಛೂಭಾಣ ಕಾಲದೋರಂತೂ ನಾವಲ್ಲ. ಕಿಡಿ ಶೇಷಪ್ಪ ಅಂತ ಇದ್ರು ಅಂತಾರೆ. ನಾವು ಕಾಣ್ಲಿಲ್ಲ. ಇನ್ಯಾರಿದ್ರು. ಫಸ್ಟ್ ಆಫ್ ಆಲ್ ಟ್ಯಾಬ್ಲ್ಯಾಯ್ಡ್ ಅಂತ ಎಲ್ಲಿತ್ತು. ಅವಾಗ ಬಂತು ನೋಡಿ ಸಾಯಿಬಾಬಾ ಬಟ್ಟೇನಲ್ಲೇ ಎಲ್ಲಾ ಮಾಡ್ಕಂಡ್ರಂತೆ, ಟೆನಿಸ್ ಆಡೋ ಮಾರ್ಟಿನಾ ನವ್ರಾಟಿಲೋವಾ ಮಲಗೋದು ಹೆಂಗಸರ ಜೊತೇನೇ ಅಂತೆ. ಇಬ್ರಾಹಿಂ ವಾಚ್ ಹಗರಣ, ರೇಣುಕಾ ವಿಶ್ವನಾಥ್ ಸಂಸಾರ ಎಕ್ಕುಟ್ಟೋಗಿದ್ದು… ಹಿಂಗೆ ಪೇಪರ್ ತುಂಬಾ ನಾವು ಊಹೆ ಮಾಡ್ಲಿಕ್ಕೂ ಆಗದ ವಿಷಯಾನೇ.

ಪಾಪ! ಮಲ್ಲೇಶ್ವರಂನಲ್ಲಿ ಮಟನ್ ಶಾಪ್ ಓಪನ್ ಆದಂಗೆ ಆಗೋಯ್ತು ಜರ್ನಲಿಸಂಗೆ. ಬೀರ್ ಕುಡೀತಾ ಇದ್ದೆ, ಈ ಪುಸ್ತಕ ಓದ್ತಾ ಇದ್ದೆ, ಅವಳ ಮೈಕಟ್ಟು ಹಿಂಗಿತ್ತು ಅಂತೆಲ್ಲಾ ಲಂಕೇಶ್ ಬರ್ಕಂಡ್ರೆ ನಮ್ಮ ಆಟೋಬಯಾಗ್ರಫೀನಾ ಯಾರೋ ಬರ್ದು ಹಾಕ್ತಾವರಲ್ಲಪ್ಪ ಅನಿಸೋದು. ಲಂಕೇಶ್ ಪತ್ರಿಕೆ ಅಂದ್ರೆ ಅಂಗೇ. ಬೀದೀಲಿ ಕಾಲರ್ ಪಟ್ಟಿ ಹಿಡಿದು ನಿಜ ಕಕ್ಕಿಸೋ ಹಂಗಿರೋದು. ಎಲ್ಲಾರ್ನೂ ಎದುರಾಕಿಕೊಂಡು ಬರೆಯೋರು. ನಮ್ಮ ವಯಸ್ಸೂ ಹಂಗೇ ಇತ್ತು. ಕ್ಲಾಸಲ್ಲಿ ಮೇಷ್ಟ್ರನ್ನ ಎದುರಾಕ್ಕಿಳ್ಳಬೇಕು, ಮನೇನಲ್ಲಿ ಅಪ್ಪನ್ನ, ಬೀದೀನಲ್ಲಿ ಬದ್ಮಾಷ್ ನ ಅಂತೆಲ್ಲ. ಅದಕ್ಕೆಲ್ಲಾ ಸಿಕ್ತಲ್ಲಾ ಧೈರ್ಯ ನಮ್ತರದ ಹುಡುಗರಿಗೆ! ಹುಡುಗರ ದಂಡೇ ರೆಬೆಲ್ ಆಗಿಬಿಡ್ತು. “ಕರೆ ನೀಡಿದ್ರು, ಕಿವಿಮಾತು ಹೇಳಿದ್ರು, ಸಲಹೆ ನೀಡಿದ್ರು, ತಾಕೀತು ಮಾಡಿದ್ರು” ಅಂತಾ ಇದ್ದ ಪೇಪರ್ ಮಧ್ಯೆ-ಲಂಕೇಶ್ ಥರಾನೇ ಹೇಳ್ಬೇಕು ಅಂದ್ರೆ “ಬೆಂಡೆಕಾಯಿ ಗೊಜ್ಜಿನ ಜೊತೆ ಚಿಕನ್ ಪಲಾವ್ ಬಂತು”.

ಹಾಳಾಗೋಗ್ಲಿ ಪೇಪರ್ಗಳು, ಆದ್ರೆ ನನ್ನಂಥ ತಲೆಮಾರು ಎದ್ದು ನಿಲ್ತಲ್ಲ ಅದು ಸಿಂಪಲ್ಲಾ…? ನರಗುಂದದಲ್ಲಿ ಫೈರಿಂಗ್ ಆಯ್ತು… ಜನ ಎದ್ದು ನಿಂತ್ರು. ರೈತರೊಬ್ರೇ ಇದ್ರೆ ಯಾರ್ ಕೇರ್ ಮಾಡೋರು. ಜನಾನೇ ಬೀದಿ ಬೀದಿ ಬೀದಿ ಗಲ್ಲಿ ಗಲ್ಲಿ, ಹಳ್ಳಿ ದಿಲ್ಲಿ ಎಲ್ಲಾ ಕಡೆ. ಇದರ ಹಿಂದೇನೂ ನಮ್ಮ “ಚಿಕನ್ ಪಲಾವ್” ಕೆಲಸಾ ಮಾಡ್ತಿತ್ತು. ಯಾಕಿಂಗಾಯ್ತು, ಏನು ಮಾಡ್ಬೇಕು, ಗುಂಡೂರಾವ್ ಧಿಮಾಕ್ ಏನು, ರೈತರ ಕತೆ ಏನು ಅಂತ ಬರದ್ರಲ್ಲಾ. ನಮ್ಮೊಳಗೂ ಒಂಥರಾ ಗೋಲಿಬಾರ್ ನಡೀತು. ಈಗ್ಲೂ ಜ್ಞಾಪ್ಕ ಇದೆ. ಜನ ನರಗುಂದದಿಂದ ನಡ್ಕೊಂಡ್ ಬರ್ತಾ ಇದಾರೆ. ಸಾವಿರಾರು ಜನಾ ಇದಾರೆ. ನಿಮ್ಮ ಮನೆ ಇಂದ ರೊಟ್ಟಿ ಚಪಾತಿ ಮಾಡಿಸ್ಕೊಂಡು ಬನ್ನಿ ಅಂತ ಬರೆದಿದ್ದು. ನಾನು ಒಂದೇ ಸಮ ಅಮ್ಮನ ಬೆನ್ನು ಬಿದ್ದೆ. ಅಮ್ಮಾ ಚಪಾತಿ ಮಾಡೂ, ಅಮ್ಮಾ ಚಪಾತಿ ಮಾಡೂ ಅಂತ. ಮನೇನಲ್ಲಿ ಅಪ್ಪನ ಗುದ್ದಾಟ ಸಿಕ್ಕಾಪಟ್ಟೆ ಇತ್ತು. ಅಂತಾದ್ರಲ್ಲೂ ಅಮ್ಮ ಒಲೆ ಹತ್ತಿಸ್ದೋರೆ ಒಂದೇ ಸಮ ಚಪಾತಿ ಮಾಡೇ ಮಾಡಿದ್ರು. ಬಂತೂ ನೋಡಿ ಬೆಂಗ್ಳೂರ್ಗೆ ಜಾತಾ. ಅಬ್ಬಾ ಅನ್ನಿಸ್ತು. ಹಾಡು ಹೇಳೋರೇನು? ಸ್ಲೋಗನ್ ಕೂಗೋರೇನು. ಗುಂಡೂರಾವ್ಗೆ ಬಳೆ ತೊಡಿಸ್ತೀವಿ ಅಂತಾ ಬಳೆ ಹಿಡ್ಕೊಂಡ್ ಬಂದವ್ರೇನು… ರವೀಂದ್ರ ಕಲಾಕ್ಷೇತ್ರ ದಾಟಿ ಎಲ್ ಪಿಸಿ ಆಫೀಸ್ ಮುಂದೆ ಬಂತೂ ನೋಡಿ ಮೆರವಣಿಗೆ ಮೈಮೇಲೆಲ್ಲಾ ಹೂವಿನ ಮಳೆ. ಏನಪ್ಪಾ ಅಂತ ನೋಡಿದ್ರೆ ಎಲ್ ಪಿಸಿ ಆಫೀಸ್ ಮೇಲ್ನಿಂದ ಬುಟ್ಟಿಬುಟ್ಟಿ ಹೂವಾ ಹಾಕ್ತಿದಾರೆ. ನಂಗಂತೂ ಅನಿಸ್ತು ನಾನು ಮೆರವಣಿಗೆಗೆ ಬಂದಿರೋದು, ಇನ್ಯಾರೋ ರೊಟ್ಟಿ ತಂದಿರೋದು, ಯಾವ್ದೋ ಆಫೀಸ್ನೋರು ಹೂವಾ ಹಾಕ್ತಿರೋದು ಎಲ್ಲಾ ಆ “ಚಿಕನ್ ಪಲಾವ್” ಲಂಕೇಶ್ ಇಂದಾನೇ ಅಂತ.

ಸರಿ ಸರಿ ಸರಿ ಹಿಂದಕ್ಕ/ನಾವು ಸಾಗಿ ಬರುತೇವ ಮುಂದಕ್ಕ/ಈಗ ಮಾಡೀವಿ ಆರಂಭ/ದಿಲ್ಲೀ ಒಳಗ ರಣರಂಗ-ಈ ಹಾಡು ಯಾರು ಶುರು ಮಾಡಿದ್ರೋ ಇಡೀ ಬೆಂಗ್ಳೂರ್ಗೆ ಬೆಂಗ್ಳೂರೇ ಕೂಗ್ತಾ ಇದೆ ಅನಿಸೋ ಥರಾ ಆಗೋಯ್ತು. ಅಷ್ಟೇ ಅಲ್ಲ-“ಗುಂಡೂರಾವ್ ಕೇಡಿ, ಹಾಕಿ ಅವನಿಗೆ ಬೇಡಿ” ಅಂತಾ ಸ್ಲೋಗನ್ ಚಿಮ್ತು. “ಗಲೀ ಗಲೀ ಮೇ ಶೋರ್ ಹೈ, ಗುಂಡೂರಾವ್ ಚೋರ್ ಹೈ” ಅಂತ ಕೂಗಿದ್ದೂ ಅದೇ ಜನರೇ. ಖುಷಿ ಆಗೋಯ್ತು ನಂಗೆ. ಇದನ್ನೆಲ್ಲಾ ಹೇಳಿಕೊಟ್ಟದ್ದು ಅದೇ “ಚಿಕನ್ ಪಲಾವ್”.

ಅಮ್ಮನ ಮುಂದೆ ಸ್ಟ್ರೈಕ್ ಕೂತಿದ್ದೆ, ನಾನು ಹೋಗ್ಲೇಬೇಕು ಅಂತ. ನಾನು ಕಂಡಿಲ್ದೇ ಇರೋ ಯಾರ್ದೋ ಪರವಾಗಿ ಬೀದೀನಲ್ಲಿ ಪ್ರತಿಭಟನೆ ಮಾಡ್ತಾನಂತೆ ಅನ್ನೋದೇ ಅಮ್ಮನಿಗೆ ಇದೇನಪ್ಪಾ ಅನ್ನೋ ಹಂಗೆ ಆಗೋಗಿತ್ತು. ಬೇಡ ಅಂದ್ರು. ಹೋಗೇ ಹೋಗ್ತೀನಿ ಅನ್ನೋ ಧಿಮಾಕು ಅಮ್ಮನ ಮುಂದೆ ಬಾಲ ಮುದುರಿಕೊಂಡು ಕೂತಿತ್ತು. ನಾನೇ ಸ್ಲೋಗನ್ ಬರ್ದೆ. ಪ್ಲೇಕಾರ್ಡ್ ಮಾಡ್ದೆ. ಅಮ್ಮ ಬೇಡ ಅಂತಿದ್ರು. ಏನ್ಮಾಡೋದು ಸರೀ ಅಂತ ಆ ಪ್ಲೇಕಾರ್ಡ್ ಹಿಡ್ಕೊಂಡೇ, ಅಮ್ಮನ ಮುಂದೇನೇ ಧರಣಿ ಕೂತೆ. ಲಂಕೇಶ್ಗೆ ಸಪೋರ್ಟ್ ಮಾಡ್ಗಂಗೂ ಆಯ್ತು. ಹೋಗೋದಿಕ್ಕೆ ಬಿಡ್ಲಿಲ್ವಲ್ಲಾ ಅದಕ್ಕೆ ಪ್ರೊಟೆಸ್ಟ್ ಮಾಡ್ದಂಗೂ ಆಯ್ತು.

ಇದೆಲ್ಲಾ ಯಾಕ್ ಜ್ಞಾಪಕಕ್ಕೆ ಬಂತಪ್ಪಾ ಅಂದ್ರೆ-ಬ್ರಿಗೇಡ್ ರೋಡಲ್ಲಿ ಪ್ಲಾನೆಟ್ ಎಂಗೆ ಹೋಗಿದ್ನಾ. ಅಲ್ಲಿರೋ ರಾಶಿ ರಾಶಿ ಸಿಡಿ ಮಧ್ಯೆ “ಎಲ್ಲಿಂದಲೋ ಬಂದವರು” ಸಿಡಿ ಕಣ್ಣಿಗೆ ಬಿತ್ತು, ಅದಕ್ಕೆ…

“ನಾನಿನ್ನು ಹೊರಡ್ಲಾ?” ಎಂದಾಗ…

door_number1421.jpg

“ಡೋರ್ ನಂ 142”

ಬಹುರೂಪಿ

ಕ್ಕಾ ಕಡಲತಡಿಯ ಊರಿನ ಹಾವಿನಂತಹ ರಸ್ತೆಗಳು. ಪ್ರತೀದಿನಾ ಆಫೀಸಿನಿಂದ ಮನೆಗೆ ಹೋಗುವ ಇಳಿಸಂಜೆಯಾಗುತ್ತಿತ್ತು. ಆ ರಸ್ತೆಯ ಇಕ್ಕೆಲದಲ್ಲೂ ಆಳವಾದ ಕಂದರಗಳು. ಸೂರ್ಯ “ಇನ್ನೇನು ನನ್ನ ಕೆಲಸ ಮುಗಿಸುತ್ತಿದ್ದೇನೆ” ಎಂದು ಸಾರುತ್ತಾ ಹೋಗುವ ಸಮಯ. ರಸ್ತೆಯ ಮೇಲೆ ನಾನಿದ್ದ ಎತ್ತರಕ್ಕೆ ಸರಿಸಮನಾಗಿಯೇ ಆತ ಇರುತ್ತಿದ್ದ. ಹಕ್ಕಿಗಳು, ಅದರಲ್ಲೂ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಗೂಡಿಗೆ ಹಾರಿಹೋಗುತ್ತಿದ್ದವು. ಅಷ್ಟೇ ಅಲ್ಲ, ಆಳದ ಆ ಕಣಿವೆಗಳಲ್ಲಿದ್ದ ಮನೆಗಳಲ್ಲಿ ಒಲೆಯಲ್ಲಿ ಆಗ ತಾನೇ ಬೆಂಕಿ ಆಡುತ್ತಿರಬೇಕು. ಮನೆಯ ಚಿಮಣಿಗಳು ಹೊಗೆ ಹೊರಗೆ ಚೆಲ್ಲುತ್ತಿದ್ದವು. ಅತಿ ಎತ್ತರದ ಆ ರಸ್ತೆಯಲ್ಲಿ ಸಾಗುತ್ತಿದ್ದ ನನಗೆ ಆ ಕಾಡೊಳಗಣ ಮನೆಯಿಂದ ಉಕ್ಕಿ ಬರುತ್ತಿದ್ದ ಹೊಗೆ ಮೋಡಗಳು ಕಾಡಿಬಿಡುತ್ತಿದ್ದವು.

ಆಗಲೇ ಆಗಲೇ ಯಾಕೋ ಆತ ನೆನಪಾದ. ನನ್ನೊಡನೆ ಏನೋ ಗೊತ್ತಿಲ್ಲದ ಕರುಳಬಳ್ಳಿ ಸಂಬಂಧ ಸೃಷ್ಟಿಯಾಗಿತ್ತು. ಎಲ್ಲವನ್ನೂ ಮಾತಾಡಿಕೊಳ್ಳಬಹುದು ಎಂಬ ವಿಶ್ವಾಸ ನಮ್ಮಿಬ್ಬರ ನಡುವಿತ್ತು. ಏಕೋ ನಾವಿಬ್ಬರೂ ಕಂಡದ್ದು, ಮಾತಾಡಿದ್ದು ಕೆಲ ದಿನಗಳಾದರೂ, ದುಃಖದ ನಗರಿಯಲ್ಲಿ ಪರಿಶುದ್ಧ ಆತ್ಮಗಳನ್ನು ಹುಡುಕುತ್ತಾ ಹೊರಟ ಪಯಣಿಗರಂತಾಗಿಬಿಟ್ಟಿದ್ದೆವು. ಅಶಾಂತ ಸಾಗರದ ನಡುವೆ ಒಂದಿಷ್ಟು ನೆಮ್ಮದಿ ಸಿಕ್ಕಿತು ಎನ್ನುವಾಗಲೇ ಆತ ಇನ್ನೊಂದು ಊರಿಗೆ ಹೊರಟು ನಿಂತುಬಿಟ್ಟ. ಜರೂರಿತ್ತೇನೋ. ನಾನು ಇನ್ನೂ ಆ ಊರಲ್ಲಿ ನೆಲೆಯೂರುವ ವೇಳೆಗೆ ಆತ ವಿದಾಯದ ಕೈ ಬೀಸಿ ಹೊರಟೇಬಿಟ್ಟ. ನಾನೂ ಕೈ ಬೀಸಿದ್ದೆ.

ಆದರೆ ಆ ಹಾವಿನಂತಹ ರಸ್ತೆಯಲ್ಲಿ ಕತ್ತಲು ಹೆಜ್ಜೆ ಹಾಕುತ್ತಾ ಬರುವಾಗಲೇ ಆ ಹೊಗೆ ಮೋಡಗಳ ಮೇಲೆ ನಾನು ಹೋಗುವಾಗಲೇ ಆತ ನೆನಪಾಗಿಬಿಟ್ಟ. ನನಗೇ ಗೊತ್ತಿಲ್ಲದಂತೆ ಕಣ್ಣು ಒದ್ದೆಯಾಗಿಬಿಟ್ಟಿತು. ಎದೆ ಬಿಕ್ಕಳಿಸಲು ಶುರು ಮಾಡಿತು. “ಗೆಳೆಯ ಬರತೀನೋ/ಮನದಾಗಿಡೋ ನೆನಪ/ನೀ ಯಾರೋ ಏನೋ ಎಂತೋ/ಅಂತೂ ಪೋಣಿಸಿತು ಕಾಣದಾ ತಂತು/ಇದು ಹೌದು ಹಾದಿ ಗೆಳಿತಾನ/ಇದ್ದರಿದ್ದೀತು ಹಳಿಯ ಒಗಿತಾನ / ದಿನವೊಂದು ಕ್ಷಣದಾಂಗ/ಬೆಸೆದಾವೋ ನಮ್ಮ ಮನ್/ಕಡೆತನಕಾ ಇರಲೀ ಬಂಧನ…” ಕವಿತೆ ಮನಕ್ಕೆ ಹೊಕ್ಕಿತು. ಕಣ್ಣೀರು ಹಾಕುವುದಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿರಲಿಲ್ಲ.

ಯಾಕೆ ಹೀಗೆ ಬೇಕು ಎನಿಸಿದ ಸಂಬಂಧಗಳು, ಈ ಅನಂತ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ನನ್ನ ಕೆಲಸವಾಯ್ತು ಎಂಬಂತೆ ಕೈ ಬೀಸಿ ಮರೆಯಾಗಿ ಹೋಗಿಬಿಡುತ್ತವೆ. ಸುಖದ ಅಂಚಿನಲ್ಲಿದ್ದೇನೆ ಎಂದು ಅಂದುಕೊಳ್ಳುತ್ತಿರುವಾಗಲೇ ಎಷ್ಟೋ ಸಂಬಂಧಗಳು ದಿಢೀರನೆ ಎದ್ದು ನಡೆದುಬಿಡುತ್ತವೆ. ಆಗ ತಾನೇ ಚಿಗುರುತ್ತಿದ್ದ ವಸಂತದ ಹಸಿರುಬಣ್ಣದ ಗೆಳೆತನವೊಂದು ಬಣ್ಣ ಬದಲಿಸಿ ಮಾಗಿಯ ಮೌನ ಹೊದ್ದುಕೊಳ್ಳುತ್ತದೆ.

ನನ್ನೊಳಗೆ ಇಂತಹ ವಿದಾಯದ ಕ್ಷಣಗಳು ಅಚ್ಚೊತ್ತಿ ನಿಂತಿವೆ. ಆ ಹುಡುಗಿ ನನಗೆ ಎಲ್ಲವೂ ಆಗಿದ್ದಳು. ಆಕೆ ಬರುತ್ತಾಳೆಂದರೆ ಒಂದು ವಸಂತದ ಆಗಮನವಾಗುತ್ತದೆ ಎಂದೇ ಭಾವಿಸಿದ್ದೆ. ಆಕೆಯ ಮುಗುಳ್ನಗು ನನ್ನೊಳಗೆ ಒಂದು ನಾವೆಯ ಸಂಚಾರಕ್ಕೆ ಕಾರಣವಾಗುತ್ತಿತ್ತು. ಅವಳ ಸ್ಪರ್ಶ ಸ್ವರ್ಗಲೋಕಕ್ಕೆ ಒಂದೊಂದು ಮೆಟ್ಟಿಲನ್ನು ಸೃಷ್ಟಿಸುತ್ತಿತ್ತು. “ನಿನ್ನೊಳು ನಾ/ನನ್ನೊಳು ನೀ/ಒಲಿದ ಮೇಲುಂಟೆ ನಾ ನೀ/ಇದೇ ಒಲವಿನ ಸರಿಗಮಪದನಿ” ಎನ್ನುವಂತೆ ಅವಳೂ ನಾನೂ ಬಹುವಚನವಾಗಿರಲಿಲ್ಲ. ಇಬ್ಬರೂ ಒಂದಾಗಿ ಏಕವಚನವಾಗಿಬಿಟ್ಟಿದ್ದೆವು. ಅಂತಹ ಆ ಹುಡುಗಿ ಒಂದು ದಿನ ಎದ್ದು ನಡೆದೇ ಬಿಟ್ಟಳು. ಮೌನವಾಗಿ ಎದೆಯೊಳಗೆ ಹರಿಯುತ್ತಿದ್ದ ನಾದದ ನದಿಯೊಂದು ತನ್ನಿಂತಾನೆ ಇಂಗಿಹೋಗಿಬಿಟ್ಟಂತೆ. ಅಂತರಗಂಗೆ ಹರಿಯುತ್ತಿದೆ ಎನ್ನುತ್ತಾರೆ. ಇದು ನನಗೆ ಗೊತ್ತಿಲ್ಲ. ಆದರೆ ನನ್ನೊಳಗೆ ಮಾತ್ರ ಗುಪ್ತಗಾಮಿನಿಯಾಗಿ ಜುಳುಜುಳು ಹರಿವ ಒಂದು ಹಾಡಾಗಿದ್ದಳು, ಅವಳು ಎಂದು ಮಾತ್ರ ನನಗೆ ಚೆನ್ನಾಗಿ ಗೊತ್ತು.

ಒಂದು ದಶಕವೇ ಉರುಳಿತೇನೋ, ಎದೆಯೊಳಗೆ ಜುಳುಜುಳು ನಾದವಿಎಯೇ ಇನ್ನೂ ಎಂದು ಕೇಳಿಸಿಕೊಳ್ಳಲೆಂದೇ ಬಂದಳೇನೋ ಎಂಬಂತೆ ಅದೇ ಆ ಕಾಡಿನ ನಡುವಿದ್ದ ನನ್ನ ಮನೆಗೆ ಬಂದುಬಿಟ್ಟಳು. ನಮ್ಮಿಬ್ಬರ ನಡುವೆ ಕೈ ಚಾಚಿದರೆ ಸಾಕು ಸಿಗುವ ದೂರ. ಆದರೆ ನಮ್ಮಿಬ್ಬರ ಸಂಬಂಧದ ನಡುವೆ ಮಾತ್ರ ಅನಂತ ಮೈಲುಗಲ್ಲುಗಳು ಮನೆ ಮಾಡಿಬಿಟ್ಟಿದ್ದವು. ಆಗಲೂ ಅಷ್ಟೆ. ಅವಳು ಕೈ ಬೀಸಿ ಹೋಗಲೇಬೇಕಾಯ್ತು. ನಾನು ಕಡಲ ದಂಡೆಯಲ್ಲಿ ನಿಂತಿದ್ದೆ. ಅವಳು ಅದೇ ವಸಂತದ ಉಲ್ಲಾಸವನ್ನು ಕಾಲ್ಗಳಿಗೆ ಲೇಪಿಸಿಕೊಂಡಿದ್ದಾಳೇನೋ ಎಂಬಂತೆ ಜಿಗಿದು ಮೆಟ್ಟಿಲಿಳಿಯುತ್ತಾ ದೋಣಿ ಏರಿ ಕೂತಳು. ದೋಣಿಗಳು ಎರಡು ದಂಡೆಗಳನ್ನು ಬೆಸೆಯುತ್ತವೆ ಎಂದೇ ಅದುವರೆಗೆ ನಾನು ಅಂದುಕೊಂಡಿದ್ದೆ. ಆದರೆ ಆ ಅವಳನ್ನು ಹೊತ್ತ ದೋಣಿ ದಂಡೆಗಳನ್ನು ದೂರ ಮಾಡುತ್ತಾ ಹೋಯಿತು. ಅವಳು ಕೈ ಬೀಸುತ್ತಲೇ ಇದ್ದಳು. ದೂರದಲಿ ಇದ್ದವರನು/ಹತ್ತಿರಕೆ ತರಬೇಕು/ಎಂದವರು ನೆನಪಾದರು.

ವಿದಾಯ ಎನ್ನುವುದು ಯಾಕೆ ಹೀಗೆ ಅಚ್ಚೊತ್ತಿ ಕೂತುಬಿಡುತ್ತದೆಯೋ. ಕಾಲನೆಂಬ ಪ್ರಾಣಿಯ ಕೈಗೆ ಕ್ಯಾಮೆರಾ ಕೊಟ್ಟವರಾರು? ಇಂತಹ ಅಳಿಸಲಾಗದ ಚಿತ್ರಗಳನ್ನು ನಮ್ಮ ಮುಂದೆ ಸುರುವಿ ಕೂರುವಂತಹದ್ದಾದರೂ ಏನಾಗಿದೆ ಅವನಿಗೆ?

ಆ ಊರಿಂದ ಹೊರಟುಬಿಡುತ್ತೇವೆ ಎಂದು ಗೊತ್ತಾದಾಗ ರೈಲ್ವೆ ನಿಲ್ದಾಣದಲ್ಲಿ ನೀರಿನ ಒರತೆಯಂತೆ ಉಕ್ಕಿ ಬಂದು ಬಿಟ್ಟರಲ್ಲಾ ಅವರು. ಏನಾಗಬೇಕು ಅವರು ನಮಗೆ. ಯಾವುದೋ ದೇಶದಲ್ಲಿ ಕಾವ್ಯ ಬರೆಯುತ್ತಲೇ ಗಲ್ಲಿಗೇರಿದನಲ್ಲಾ ಅವನು ಯಾಕೆ ಉಕ್ಕಿ ಬಂತು ಕಣ್ಣೀರು ನನಗೆ? ಅಮ್ಮಾ ನನ್ನ ಹಾಸ್ಟೆಲ್ ಗೆ ಕಳಿಸಬೇಡ ಎಂದು ಕಣ್ಣೀರಾದ ಹುಡುಗ ನನ್ನೊಳಗಿನ ಕಣ್ಣೀರಿಗೂ ಕೈ ಹಾಕಿದ್ದು ಏಕೆ? “ಪಾಪಾ” ಅಂತ ಏನೂ ಹೇಳದೆ ಗಟ್ಟಿಯಾಗಿ ನನ್ನ ಬೆನ್ನು ಬೀಳುವ ಹುಡುಗಿ ಲಗೇಜ್ ತುಂಬುವಾಗ ನನ್ನೊಳಗೆ ಯಾಕೆ ಮೌನ ಮನೆ ಮಾಡಿ ಕೂತುಬಿಡುತ್ತದೆ.

ಎಲ್ಲೋ ದೂರಕ್ಕೆ ಹಾರಿ ನಿಂತಾಗ ಆ ಹುಡುಗ ಒಂದು ಬಾಟಲಿಯಲ್ಲಿ ಹಿಡಿ ಮಣ್ಣು ತಂದುಕೊಟ್ಟನಲ್ಲಾ ಆತ ಯಾಕೆ ಬೀದಿಬೀದಿ ಅಲೆಯಬೇಕಿತ್ತು ನನಗಾಗಿ ಮಣ್ಣು ಹುಡುಕುತ್ತಾ? ಆ ಆರೆಂಟು ದಿನವೂ ಆ ಬಾಟಲಿಯಲ್ಲಿನ ಮಣ್ಣು ನನ್ನೊಳಗೆ ಒದೆಯುವ ನೆನಪುಗಳನ್ನು ಹುಟ್ಟು ಹಾಕಿದ್ದು ಏಕೆ?

ಪ್ರತಿಯೊಂದು ಸಂಬಂಧ ಏರ್ಪಡುವುದೇ ಬಿಡಿಸಿಕೊಂಡು ಹೋಗುವುದಕ್ಕಾಗಿ ಎನ್ನುವುದು ಎಷ್ಟು ನಿಜವಾಗುತ್ತದೆ ಮೇಲಿಂದ ಮೇಲೆ? ಜೊತೆಗೆ ಹೆಜ್ಜೆ ಹಾಕುತ್ತಲೇ ಇದ್ದವರು ಕಾಲನ ಪ್ರಯಾಣ ಮುಗಿಯುವ ಮೊದಲೇ ಎಲ್ಲೆಲ್ಲಾ ಕಳಚಿಕೊಂಡರು ಸದ್ದಿಲ್ಲದೆ. ಆ ಹುಡುಗಿ ರೈಲು ಏರಿ ಕಿಟಕಿಗೆ ಆತು ಗಾಳಿ ಸವಾರಿ ಮಾಡುತ್ತಾ ಬರುವಾಗ ಅದು ಬರುವುದೂ ಹೌದು, ಹೋಗುವುದೂ ಹೌದು ಎಂದು ಏಕೆ ಗೊತ್ತಾಗುವುದಿಲ್ಲ. ಅಮ್ಮನೆಂಬ ಅಮ್ಮ ಮನೆಗೆ ಬರುತ್ತಾರೆ ಎಂಬ ಸಂಭ್ರಮದಲ್ಲಿ ಕುಣಿತದ ಹೆಜ್ಜೆ ಹಾಕುವ ನಾವೆಲ್ಲಾ ಆ ಅಮ್ಮ ಹೋಗಲೆಂದೇ ಬರುತ್ತಾಳೆ ಎನ್ನುವುದನ್ನು ಯಾಕೆ ಕಾಣುವುದೇ ಇಲ್ಲ.

“ಸೋಮಲಿಂಗನ ಗುಡಿ/ಮೇಲಾ ಬಂಗಾರ ಛಡಿ/ನೋಡಿ ಬರೋಣು ನಡಿಯಾ” ಎಂದು ಹೊರಟ “ಸಂಗ್ಯಾಬಾಳ್ಯಾ” ನಾಟಕದ ಜೊತೆಗಿದ್ದವನನ್ನು ಕಳೆದುಕೊಳ್ಳಲೆಂದೇ ಹೊರಟಿದ್ದೇನೆ ಎಂದು ಏಕೆ ಮನಗಾಣಲಿಲ್ಲ? ಆ ಸೆಳೆವ ಕಣ್ಣುಗಳ, ಹಾಸಿಗೆಯಲ್ಲಿ ನರಳುವ ಉದ್ಗಾರ ತೆಗೆವವಳ, ಹಗಲು ಇರುಳುಗಳನ್ನು ಒಂದು ಮಾಡುವವಳ ಪಡೆಯಲು ಹೊರಟವನು ಬದುಕಿಗೆ ಒಂದು ಕೊನೆ ಗೊತ್ತು ಮಾಡಿಕೊಳ್ಳುತ್ತಿದ್ದೇನೆ ಎಂದು ಏಕೆ ತಿಳಿಯಲಿಲ್ಲ? ಹಾಸಿಗೆಯ ಆ ನರಳುವಿಕೆಯ ಕ್ಷಣಗಳಲ್ಲಿ ಇದು ಮಿಲನವಲ್ಲ ಬೇರ್ಪಡುವ ಕಾಲ ಎಂದು ಅರಿವೇ ಆಗಲಿಲ್ಲವಲ್ಲ?

“ಬದುಕು ಮಾಯದ ಮಾಟ/ಮಾತು ತೆರೆನೊರೆಯಾಟ/ ಜೀವಮೌನದ ತುಂಬಾ ಎಂತ…” ಎನ್ನುವುದು ಹತ್ತಿರಕೆ ಬಂದು ದೂರವಾಗಲೇ ಗೊತ್ತಾಗುತ್ತದೆಯಲ್ಲಾ?

ನನ್ನೊಳಗೆ ಆಳವಾಗಿ ಇಳಿಯುವ ಸಂಬಂಧಗಳಿಗೆ ನಾನು ನನ್ನನ್ನೇ ಕೊಟ್ಟು ಕೊಂಡುಬಿಟ್ಟಿರುತ್ತೇನೆ. ನನ್ನ ಅನಂತ ಮಾತುಗಳು ಅವರೊಂದಿಗೇ ಮೌನದಲ್ಲಿಯೇ ಸಾಗುತ್ತಿರುತ್ತವೆ. ಆ ಅವರಿಗೇ ಇನ್ನೊಬ್ಬರೊಂದಿಗೆ ಅದೇ ನಿರಂತರ ಮೌನ ಸಂವಾದಕ್ಕೆ ಇಳಿದುಬಿಟ್ಟಾಗ ಕಸಿವಿಸಿಯಾಗುತ್ತದಲ್ಲಾ, ಎದೆಗೇರುತ್ತದಲ್ಲಾ ಹೆಡೆ ಎತ್ತಿದ ಬುಸುಗುಡುವ ಸರ್ಪ ಅದು, ಅದೂ ಒಂದು ವಿದಾಯಕ್ಕೆ ಬರೆದ ಮುನ್ನುಡಿಯೇ. “ಸಂಬಂಜ” ಅನ್ನೋದು “ಕೋರಾ ಕಾಗಜ್” ಆದಾಗ, ಹಾರೋ ಗಾಳಿಪಟ ಆದಾಗ ಎಷ್ಟೊಂದು ಒದ್ದಾಡಿಹೋಗುತ್ತೆ ಮನಸ್ಸು. ಹೌದಲ್ಲಾ, ತನಗೆ ಗೊತ್ತೇ ಇಲ್ಲದ ಸಿನಿಮಾ ಪಾತ್ರಗಳಿಗೆ, ನಾಟಕದ ಸೀನ್ ಗೆ ಕಣ್ಣೀರು ಹಾಕ್ತಾ ಇರ್ತೀವಲ್ಲ ನಾವು ಏನು ಕಳಕೊಂಡಿದೀವಿ ಅಂತಾ? ಷೇಕ್ಸ್ ಪಿಯರ್ ನಾಟಕದಲ್ಲಿ ಹೆಕೂಬಾ ಪಾತ್ರ ನೋಡ್ತಾ ಆ ಹಳ್ಳಿಯವ ಬಿಕ್ಕಿ ಬಿಕ್ಕಿ ಅತ್ತನಲ್ಲಾ, ಅದಕ್ಕೆ ಏನು ಕಾರಣ ಅಂತ ಹುಡುಕೋದು “ನೀ ಯಾರೋ ಏನೋ ಎಂತೋ, ಅಂತು ಪೋಣಿಸಿತು ಕಾಣಾದಾ ತಂತೂ…” ಅನ್ನೋದುಬಿಟ್ಟು ಇನ್ನೇನಿದೆ!

ಒಂದು ಬಾರಿ ನನ್ನ ನೋಡಿ/ಒಂದು ನಗೀ ಹಾಂಗ ಬೀರಿ/ಮುಂದ ಮುಂದ ಮುಂದ ಹೋದ/ಹಿಂದ ನೋಡದಾ/ಗೆಳತೀ ಹಿಂದ ನೋಡದಾ… ಅನ್ನೋ ಹಾಡು ಈಗ ತೂರಿ ಬರ್ತಾ ಇರೋವಾಗಲೂ ಎದೆ ಒದ್ದೆಯಾಗಿ ಕೂತಿದೆಯಲ್ಲಾ ಇದಕ್ಕೆ ಏನು ಅಂತ ಅರ್ಥ ಹಚ್ಚಬೇಕು.

ಅದೆಲ್ಲಾ ಬಿಡಿ, ಇವರು ಯಾರು ಅಂತ ಗೊತ್ತಿರ್ಲಿಲ್ಲಾ, ಇವರು ಏನು ಅಂತ ಗೊತ್ತಿರ್ಲಿಲ್ಲಾ. ನನ್ನ ಕಥೆ ಅವರು ಯಾರಿಗೂ ಗೊತ್ತಿಲ್ಲ. ನಾನು ಬೈದಿದ್ದು ಅಂದಿದ್ದು ಅವರ ನೆನಪಲ್ಲೇ ಉಳಿದಿಲ್ಲ. ಆದರೆ ಇನ್ನು ಹೊರಡ್ಲಾ… ಅಂತ ಅಂದಾಗ ಕಲ ಕಲ ಅನ್ತಾ ಇದ್ದ ಮನಸ್ಸುಗಳು ಷಾಕ್ ಆಗಿ ನಂಬದೇ ನನ್ನ ಮುಖ ನೋಡ್ತಾ ತಬ್ಬಿಬ್ಬಾಗಿವೆಯಲ್ಲಾ ಇದಕ್ಕೆ ನಾನು ಯಾವ ಉತ್ತರ ನೀಡ್ಲಿ. ಈ ಎಲ್ಲರನ್ನೂ ಬಿಟ್ಟು ದೂರ ಹೋಗ್ತಾ ಇದೀನಿ ಅನ್ನೋದು ನನ್ನ ಕಣ್ಣು ತುಂಬಿ ತುಳುಕೋ ಆಗೆ ಮಾಡಿದೆಯಲ್ಲಾ, ಇದಕ್ಕೂ ಅಷ್ಟೆ ಏನನ್ನಬೇಕು…?

ಬಾಲ್ಯ ಕಾಲ ಎಂಬ ಸಖಿ

door_number1421.jpg 

“ಡೋರ್ ನಂ 142”

ಬಹುರೂಪಿ

“ಒಂದ್ನಿಮಿಷ ಇರು” ಅಂತ ಹೇಳಿದ ಅಪ್ಪ ದಿಢೀರ್ ಮಾಯಾ ಆದ್ರು. ಟ್ರೇನ್ ಆಗಲೇ ಶಿಳ್ಳೆ ಹಾಕ್ತಾ ನಿಂತಿತ್ತು. ಇನ್ನು ಯಾವ ಕ್ಷಣದಲ್ಲಿ ಬೇಕಾದರೂ ಹೊರಟುಬಿಡ್ತೀನಿ ಅನ್ನೋ ಥರಾ ರಾಗ ಎಳೀತಿತ್ತು. ಕಿಟಕಿಯಿಂದ ಆಚೆ ಎಲ್ಲಾ ಕಡೆ ಕಣ್ಣಾಡಿಸ್ದೆ. ಅಪ್ಪ ಕಾಣ್ತಿಲ್ಲ. ಟ್ರೇನ್ ಓಡಿಸೋರಿಗೆ ಏನು ಗೊತ್ತಾಗುತ್ತೆ? ನಾನು ಅಪ್ಪನ್ನ ಕಾಯ್ತಾ ಇದೀನಿ ಅಂತ. ಚುಕ್ ಚುಕ್ ಅಂತ ಸದ್ದು ಮಾಡ್ತಾ ಹೊರಟೇಬಿಡ್ತು. ಅಪ್ಪ ಕೈಬೀಸಿ ನನ್ನ ಕಳಿಸ್ದೇ ಇದ್ರೆ ನನಗೆ ಯಾಕೋ ಎಲ್ಲಾ ಸರಿ ಇದೆ ಅಂತಾ ಅನಿಸ್ತಾ ಇರ್ಲಿಲ್ಲ. ಕಣ್ಣಲ್ಲಿ ನೀರು ತುಂಬಿಕೊಳ್ತು. ಕಣ್ಣು ಒರೆಸಿಕೊಂಡು ನೋಡ್ತೀನಿ-ಸ್ಟೇಷನ್ ಮೂಲೇ ಗೇಟಿಂದ ಅಪ್ಪ ಓಡಿ ಬರ್ತಾ ಇದಾರೆ. ಅಷ್ಟು ವಯಸ್ಸಿನ ಅಪ್ಪ ಏನಾಗುತ್ತೆ ಅನ್ನೋದು ಯೋಚನೆ ಮಾಡ್ದೆ ಅವರಿವರನ್ನೆಲ್ಲಾ ತಳ್ಳಿಕೊಂಡು, ಢಿಕ್ಕಿ ಹೊಡೀತಾ ನನ್ನ ಕಡೆಗೆ ಕಿಟಕಿ ಒಳಗೆ ಏನೋ ಎಸೆದ್ರು, ಅಷ್ಟೊತ್ತಿಗೆ ಟ್ರೇನ್ ಸಹಾ ಸ್ಪೀಡ್ ಜಾಸ್ತಿ ಮಾಡ್ಕೊಂಡುಬಿಟ್ಟಿತು. ಏನಪ್ಪಾ ಅದು ಅಪ್ಪನಿಗೆ ಅಷ್ಟೊಂದು ಇಂಪಾರ್ಟೆಂಟ್ ಆಗಿದ್ದದ್ದು? ನಾನಂತೂ ಏನೂ ಕೇಳಿರ್ಲಿಲ್ಲ. ಓಡಿ ಹೋಗಿ ಇಷ್ಟೆಲ್ಲಾ ರಾಮಾಯಣ ಮಾಡಿಕೊಂಡು ತಂದ್ಕೊಡೋ ಅಂತದ್ದು ಏನು ಅಂತ ಅಪ್ಪ ಎಸೆದಿದ್ದ ಪ್ಯಾಕೆಟ್ ಕೈಗೆ ತಗೊಂಡೆ. ಬಿಚ್ಚಿ ನೋಡ್ದೆ – ನನ್ನ ಕಣ್ಣು ಒದ್ದೆಯಾಯ್ತು. ಅದು ಬರೀ ಟೂತ್ ಪೇಸ್ಟ್ ಅಲ್ಲ. ನಾನು ಹಲ್ಲು ಉಜ್ಜಲು ಆರಂಭಿಸಿದ ನೆನಪು ಹಾಗೂ ಇಡೀ ಬಾಲ್ಯವೂ ಆಗಿತ್ತು. ಈಗ ಮಾರ್ಕೆಟ್ ನಲ್ಲಿ ಒಂದು ದಂಡಿ ಟೂತ್ ಪೇಸ್ಟ್ ಗಳಿದೆ. ಆದರೆ ಅದು ಯಾವುದೂ ನನಗೆ ಏನೂ ಅಲ್ಲ. ಆದರೆ ಆ ಟೂತ್ ಪೇಸ್ಟ್ ಇದೆಯಲ್ಲ, ಅದು ಮಾತ್ರ ನನಗೆ ಬಾಲ್ಯಕ್ಕೆ ಕರೆದೊಯ್ಯುವ ದೋಣಿ.

-ನನ್ನ ಫ್ರೆಂಡ್ ಇದನ್ನ ಹೇಳ್ತಾ ಇದ್ದಾಗ ನನಗೂ ಹಾಗೇ ಆಯ್ತು. ಒಂದಷ್ಟು ಹೆಜ್ಜೆ ಹಿಂದಕ್ಕೆ ಹಾಕಿ ನನ್ನ ಬಾಲ್ಯದೊಳಗೆ ಇಳಿದು ಹೋದೆ. ನಂಜನಗೂಡು ಟೂತ್ ಪೌಡರ್ ಅಂದ್ರೆ ನನ್ನ ಮೈಯಲ್ಲೂ ಅದೇ ಮಿಂಚು. ಆ ಪಿಂಕ್ ಕಲರ್, ಸ್ವೀಟ್ ಸ್ವೀಟಾಗಿದ್ದ ರುಚಿ, ಆ ಕಾಗದದ ಪೊಟ್ಟಣ, ಅದ್ರ ಮೇಲೆ ಇದ್ದ ಯಾವುದೋ ಆಯುರ್ವೇದ ಪಂಡಿತನ ಚಿತ್ರ – ಎಲ್ಲಾ ನೆನಪಾಯ್ತು. ಈಗ ತಾನೆ ಆ ಟೂತ್ ಪೌಡರ್ ನಿಂದ ಹಲ್ಲು ಉಜ್ಜಿದ್ನೇನೋ ಅನ್ನೋ ಹಾಗೆ ನಿಂತ್ಕೊಂಡುಬಿಟ್ಟೆ “ಚೀತಾ ಫೈಟ್” ಬೆಂಕಿ ಪೊಟ್ಟಣ ನೋಡ್ದಾಗಲೂ ಹೀಗೇ ಆಗುತ್ತೆ. ಒಬ್ಬ ಗಟ್ಟಿಮುಟ್ಟಾಗಿರೋ ಯುವಕ ಕೈಯಲ್ಲಿ ಕುಡುಗೋಲು ಹಿಡ್ಕೊಂಡಿದ್ದಾನೆ. ಅವನ ಮೈ ಮೇಲೆ ಚಿರತೆ ಎಗರ್ತಾ ಇದೆ. ಇವ್ನು ಫೈಟ್ ಮಾಡ್ತಾ ಇದಾನೆ. ಈಗ ಎಷ್ಟೊಂದು ಥರಾ, ಅದ್ರಲ್ಲೂ ಥರಾ ಥರಾ ಬೆಂಕಿಪೊಟ್ಟಣ ಬಂದುಬಿಟ್ಟಿದೆ. ತಿಂಗಳಿಗೆಲ್ಲಾ ಆಗುತ್ತೆ ಅಂಥಾ ದೊಡ್ಡ ಡಬ್ಬ ಬಂದಿದೆ, ವ್ಯಾಕ್ಸ್ ಬೆಂಕಿ ಕಡ್ಡಿ ಇರೋ ಪೊಟ್ಟಣ ಬಂದಿದೆ. ಅವೆಲ್ಲಾ ಹೋಗಿ ಗ್ಯಾಸ್ ಲೈಟರ್ ಬಂದಿದೆ. ಆದ್ರೂ ನಂಗೆ ಆ, ಆ “ಚೀತಾಫೈಟ್” ನೆನಪಾಗುತ್ತೆ. ಮೊನ್ನೆ ಹಿಂಗೇ ಆಯ್ತು ಯಾರೋ ಪುಣ್ಯಾತ್ಮ ಎಲ್ಲಾ ಬೆಂಕಿಪೊಟ್ಟಣನೂ ಕಲೆಕ್ಟ್ ಮಾಡಿದಾನಂತೆ. ಅವನ ಬಗ್ಗೆ ಪೇಪರ್ ನಲ್ಲಿ ಬರೆದಿದ್ರು. ಅದರ ಜೊತೆ ನೋಡ್ತೀನಿ, ಈ “ಚೀತಾ ಫೈಟ್” ಬೆಂಕಿಪೊಟ್ಟಣದ ಫೋಟೋನೂ ಇದೆ. ನಾನು ನನ್ನ ವಯಸ್ಸನ್ನ ಕಳಚ್ಕೊಂಡು, ಇರೋ ಪ್ರಭಾವಳಿ ಕಿತ್ತು ಬಿಸಾಕಿ ಆ, ಆ ಲೋಕಕ್ಕೇ ಹೋಗಿಬಿಟ್ಟೆ.

ಯಾವುದಪ್ಪಾ ಅದು ಕವಿತೆ? ಜ್ಞಾಪಿಸ್ಕೊಳೋದಿಕ್ಕೆ ಟ್ರೈ ಮಾಡ್ತಾ ಇದೀನಿ. ಅದ್ರಲ್ಲಿ ರಾಮ ಒಂದು ಬಿಲ್ಲು ಮುರಿದು ಸೀತೆಗೆ ಹಾರಾ ಹಾಕಿ ಮದ್ವೆ ಆಯ್ತಾ ಅಂತ ಹೇಳಿ ಅವನ ಊರಿಗೆ ಕರಕೊಂಡು ಹೋಗೋಕೆ ರೆಡಿ ಆಗ್ತಾನೆ. ಆಗ ಅವರಪ್ಪ ಬಂದು ಅಳ್ತಾ ಇದ್ದ ಮಗಳ ಕೈಗೆ ಒಂದು ಪುಟಾಣಿ ವಸ್ತು ಇಡ್ತಾನೆ. ಅದೊಂದು ಡಬ್ಬಿ, ಸೀತೆ ಇದೇನಪ್ಪಾ ಅಂತ ತೆಗೆದು ನೋಡಿದ್ರೆ ಅದರಲ್ಲಿ ಏನಿದೆ-ಮಣ್ಣು. ಗಳಗಳಾ ಅಂತ ಅಳೋದಿಕ್ಕೆ ಶುರು ಮಾಡ್ತಾಳೆ. ದಶರಥ ಇದಕ್ಕಿಂತ ಇನ್ನೇನು ಬೆಸ್ಟ್ ಪ್ರೆಸೆಂಟೇಶನ್ ಕೊಡಬಹುದಾಗಿತ್ತು. ಅವನು ಸೀತೆಗೆ ತನ್ನ ಊರಿನ ಮಣ್ಣನ್ನೇ ಕೊಟ್ಬಿಟ್ಟಿದ್ದಾನೆ. ಮಣ್ಣು ಅಂದ್ರೆ ಅದೇನು ಮಣ್ಣಾ? ನೋ! ಅದು ತಾನು ಓಡಾಡಿದ ಕುಣಿದ, ಕುಪ್ಪಳಿಸಿದ ದೊಡ್ಡವಳಾದ, ಕಾಡಿದ, ಬೇಡಿದ ಎಲ್ಲಾ ನೆನಪುಗಳ ಮೊತ್ತ. ಅಪ್ಪ ಕೊಟ್ಟಿದ್ದು ಒಂದು ಹಿಡಿ ಮಣ್ಣಲ್ಲ. ಆತ ಒಂದು ಪುಟಾಣಿ ಡಬ್ಬಿನಲ್ಲಿ ಇಡೀ ಬಾಲ್ಯಾನೇ ತುಂಬಿಕೊಟ್ಟುಬಿಟ್ಟಿದ್ದಾನೆ.

srujan043.jpg

ವೈಕಂ ಮಹಮದ್ ಬಶೀರ್ “ಬಾಲ್ಯ ಕಾಲ ಸಖಿ” ಅಂತಾ ಕಾದಂಬರಿ ಬರ್ದಿದಾರೆ. ನನಗಂತೂ ಆಹ್! ಅನ್ಸುತ್ತೆ, ಅದು ನೆನಪಾದಾಗಲೆಲ್ಲಾ. ಹೌದಲ್ವಾ ಬಾಲ್ಯ ಕಾಲ ಸಖಿ ಅಂದ್ರೆ ಬಾಲ್ಯ ಕಾಲ ಸಖೀನೇ. ತೋಟ ದಾಟ್ಕೊಂಡು, ಏರಿ ಮೇಲೆ ನಡೀತಾ ಸ್ವಲ್ಪ ದೂರದಲ್ಲಿರೋ ಸ್ಕೂಲ್ ಗೆ ಹೋಗ್ಬೇಕಾಗಿತ್ತು. ಒಂದಿನಾ ಹೀಗೆ ದಡಬಡಾಯಿಸಿಕೊಂಡು ಹೋಗ್ತಾ ಇರೋವಾಗ ಆ ಹಾವು ಅದೇಗೆ ಸರಸರಾಂತ ಬಂದ್ಬಿಡ್ತು! ಈಗ್ಲೂ ಅವತ್ತು ಹೆದರಿದ್ನಲ್ಲ ಅದೇ ಥರಾ ಹೆದರ್ತೀನಿ. ರೋಡ್ ಸೈಡಲ್ಲಿ ಒಂದು ದೊಡ್ಡ ಹುಣಸೆಮರ ಇತ್ತು. ಅದರ ಕೊಂಬೆಗೆ ಹಗ್ಗಾ ಕಟ್ಟಿ, ನೋವಾಗ್ದಿರ್ಲಿ ಅಂತ ಬೆಡ್ ಶೀಟ್ ಹಾಕಿ, ರೋಡ್ ನೇ ಮುಲಾಜು ಮಾಡ್ದೀರಾ ತೂಗಾಡ್ತಿದ್ವಲ್ವಾ ಎಷ್ಟೆಲ್ಲಾ ನೆನಪಿಗೆ ಬರುತ್ತೆ. ಕಬ್ಬಿನ ಗಾಡಿ ಹೋಗ್ತಿದ್ರೆ ಅದರ ಹಿಂದೆ ಓಡ್ತಿದ್ವಿ, ಟ್ರೇನ್ ಬರೋ ಟೈಮ್ ಗೆ ಕರೆಕ್ಟಾಗಿ ರೈಲ್ವೇ ಲೈನ್ ಹತ್ರಾ ನಿಂತ್ ಕೋತಾ ಇದ್ವಿ, ಎಂಜಿನ್ ಕಾಣಿಸ್ತಿದ್ದ ಹಾಗೇ ಗ್ರೀಸ್, ಗ್ರೀಸ್ ಅಂತಾ ಕೂಗ್ತಾ ಇದ್ವಿ. ಟ್ರೇನ್ ಡ್ರೈವರ್ ನಾಲ್ಕೈದು ಪ್ಯಾಕೆಟ್ ಗ್ರೀಸ್ ನಮ್ಮ ಕಡೇಗೆ ಎಸೀತಾ ಇದ್ರು. ಅವನ್ನ ಏನು ಮಾಡ್ತಿದ್ವಿ? ಗ್ರೀಸ್ ತಗೊಂಡು ಏನು ಮಾಡೋಕೆ ಆಗುತ್ತೆ. ಆದ್ರೂ ನಾವು ಕೂಗ್ತಿದ್ವಿ, ಅವ್ರು ಕೊಡ್ತಿದ್ರು. ಇವಾಗಲೂ ಅಷ್ಟೆ ನನ್ನ ಕಾರೋ, ಸ್ಕೂಟರ್ರೋ ಗ್ಯಾರೇಜ್ ಒಳಗೆ ಸೇರ್ಕೊಂಡ್ರೆ ನನ್ನ ಕಣ್ಣು ಅಲ್ಲಿ ಗೋಡೇಗೆ ಮೆತ್ತಿಕೊಂಡಿರೋ ಗ್ರೀಸ್ ನೇ ನೋಡ್ತಾ ಇರುತ್ತೆ. ನಾನು ಗ್ಯಾರೇಜ್ ನಲ್ಲಿ ಕೂತಿರೋಲ್ಲ. ರೈಲ್ವೆ ಲೈನ್ ಪಕ್ಕ ಚಡ್ಡಿ ಏರಿಸ್ಕೊಂಡು ನಿಂತಿರ್ತೀನಿ.

“ತೊತ್ತೋಚಾನ್” ಪುಸ್ತಕದಲ್ಲಿ ಇದ್ಲಲ್ಲಾ ಆ ತುಂಟ ಹುಡುಗಿ. ಅವಳೀಗ ಟಿವಿ ಆಂಕರ್. ಸಿಕ್ಕಾಪಟ್ಟೆ ಫೇಮಸ್. ೫೦ ವರ್ಷ ದಾಟಿದೆ. ಆದ್ರೂ ಅವಳು ಏನ್ಮಾಡ್ತಾಳೆ ಅಂದ್ರೆ ಆವಾಗ ಇವಾಗ ಕಾರಲ್ಲಿ ಹೋಗಿ ಅವಳ ಸ್ಕೂಲ್ ಇತ್ತಲ್ಲಾ ಅದರ ಸುತ್ತಾ ರೌಂಡ್ ಹಾಕ್ತಾಳೆ. ನನಗೆ ಇದು ಕಾಡುತ್ತೆ, ಅವಾಗ ಹಳ್ಳಿ ಇವಾಗ ಸಿಟಿ ಆಗೋಗಿರೋ ನಾನು ಓದಿದ ಪ್ಲೇಸ್ ಇದೆಯಲ್ಲಾ ಅದರ ಮುಂದೆ ಬಸ್ ನಲ್ಲಿ ಹಾದು ಹೋಗೋವಾಗ ನಾನು ಕಿಟಕಿ ಆಚೆ ಇಣುಕ್ತೀನಿ. ಆ ಬ್ಯಾಪ್ಟಿಸ್ಟ್ ಆಸ್ಪತ್ರೆ ಇದೆಯಾ, ಅದರ ಪಕ್ಕ ದೊಡ್ಡ ಮೈದಾನದಲ್ಲಿ ನನ್ನ ಸ್ಕೂಲ್ ಕಾಣುತ್ತಾ, ಅದರ ಪಕ್ಕ ಆ ಪೋಲೀಸ್ ಸ್ಟೇಷನ್ ಇದೆಯಾ, ಅದರ ಪಕ್ಕ ಊರೊಳಗೆ ಹೋಗ್ತಿತ್ತಲ್ಲಾ ಆ ರೋಡ್ ಇದೆಯಾ, ಅದರಲ್ಲಿ ಅದೇ ನನ್ನ ಕ್ಲಾಸ್ ಮೇಟ್ ಇದ್ಲಲ್ಲಾ ಅವಳ ಮನೆ ಇದೆಯಾ, ಅದರ ಪಕ್ಕ ಆ ರಂಗಮಂದಿರ ಇದೆಯಾ ಅದರ ಪಕ್ಕ ನಮ್ಮನೆ ಇದೆಯಾ, ಚೆಕ್ ಮಾಡ್ತಾನೇ ಇರ್ತೀನಿ. ಎಷ್ಟೊಂದು ವರ್ಷ ಆಗೋಗಿದೆ. ಭೂಮಿ ಸೂರ್ಯನ್ನ ಸುತ್ತ ಎಷ್ಟು ರೌಂಡ್ ಹೊಡೆದು ಸುಸ್ತಾಗಿದೆ. ಆದ್ರೆ ನನಗೆ ಮಾತ್ರ ಆ ಚೆಕ್ ಮಾಡೋ ಕೆಲಸ ಸುಸ್ತು ಅನಿಸಿಲ್ಲ.

ನನ್ನ ಮಗಳ ನಾಮಕರಣ ಇರ್ಬೇಕು. ನಮ್ಮ ಕಸಿನ್ ಒಂದು ಕೋತಿ ತಂದ್ಕೊಟ್ಟಿದ್ದ. ನನ್ನ ಕೊಲೀಗ್ಸ್ ಒಂದು ಕರಡಿ ತಂದ್ಕೊಟ್ಟಿದ್ರು. ಅವಳಿಗೋ ಈಗ ಕಾಲಿಗೆ ನವಿಲಿನ ನಾಟ್ಯ ಬಂದಿರೋ ವಯಸ್ಸು. ಆದ್ರೂ ಊರಿಂದ ಊರಿಗೆ ಹೋದ್ರೂ, ಶಾಲೆಯಿಂದ ಶಾಲೆ ಬದಲಾಯಿಸಿದ್ರೂ ಆ ಎರಡು ಗೊಂಬೆ ಮಾತ್ರ ಅವಳ ಜೊತೇನೇ ಟ್ರಾವಲ್ ಮಾಡ್ತಾ ಇದೆ. ಅವಳ ಜೊತೆ ಇರೋದು ಅವಳ ಗೊಂಬೆಗಳಲ್ಲ, ಅವಳ ಬಾಲ್ಯ.

ನನ್ನ ಹೆಂಡ್ತಿ ಸ್ಕೂಲ್ ಗೆ ಹೋಗೋ ದಿನಗಳು ಅವು. ಹೋಂವರ್ಕ್ ಮಾಡೋಕೆ ಅಂತ ಕೂತಿದ್ದಾಗ “ಅಂಜಾನಾ” ಅಂತ ಜೋರಾಗಿ ಕೂಗಿದ್ಲಂತೆ. ಫಟ್ ಅಂತ ಬಿತ್ತು ಒದೆ. ಯಾವಾಗ್ಲೋ ಅದನ್ನ ಮದುವೆ ಆದ್ಮೇಲೆ ನನಗೆ ಹೇಳಿದ್ಲು. ನಾನೂ ಅಷ್ಟೆ, ಅವಳನ್ನ ರೇಗಿಸೋಕೆ ಅಂತ ಅವಾಗಿವಾಗ “ಅಂಜಾನಾ” ಅಂತ ಕೂಗ್ತೀನಿ. ಆಗ ನೋಡ್ಬೇಕು ಅವಳ ಕಣ್ಣು ಅರಳೋ ರೀತಿ. ಅವಳು ಇಲ್ಲಿರೋದೇ ಇಲ್ಲ. ಸುಂಯ್ ಅಂತ ಆ ಊರು, ಆ ಮನೆ, ಆ ದಿನಕ್ಕೆ ಜಾರಿಕೊಂಡುಬಿಟ್ಟಿರ್ತಾಳೆ.

ಮೊನ್ನೆ ಹಿಂಗೇ ಆಯ್ತು “ಓ ನಲ್ಲನೆ ಸವಿ ಮಾತೊಂದಾ, ನುಡಿವೆಯಾ…. ನಾ ಏನನು ನುಡಿಯಲಿ ನಲ್ಲೆ, ಅರಿತೆಯಾ…?” ಅನ್ನೋ ಹಾಡು ರೇಡಿಯೋದಿಂದ ದುಮುಕ್ತಾ ಇತ್ತು. ನಾನು ಆಫೀಸಿನ ನೂರೆಂಟು ಮೀಟಿಂಗ್ ಗಳ ಟೆನ್ಶನ್ ನಲ್ಲಿದ್ದೆ. ಆದ್ರೆ ಒಂದೇ ಕ್ಷಣದಲ್ಲಿ ಇದ್ದ ಲೋಕಾನೆಲ್ಲಾ ಬಿಟ್ಟು ನಾಲ್ಕನೇ ಕ್ಲಾಸ್ ಗೌರ್ನಮೆಂಟ್ ಸ್ಕೂಲ್ ಗೆ ಜಾರಿಕೊಂಡುಬಿಟ್ಟೆ. ಯಾರಾದ್ರೂ ಹಾಡೇಳಿ ಅಂದಿದ್ರು ಮೇಷ್ಟ್ರು. ಪಾಪ ಯಾವುದೋ ಜಾನಪದ ಗೀತೆ ಹಾಡ್ತಾನೆ ಅನ್ಕೊಂಡಿದ್ದರೇನೋ? ಯಾವತ್ತೂ ಹಾಡದಿರೋ ನಾನು ಎದ್ದು ನಿಂತು ಈ ಹಾಡು ಶುರುಮಾಡಿಬಿಟ್ಟೆ. ಇಡೀ ಕ್ಲಾಸು ಗೊಳ್ ಅಂದು ಬಿಟ್ಟಿತ್ತು. ಆವಾಗ ಎಷ್ಟು ಅವಮಾನ ಆಗಿತ್ತು. ಆದ್ರೆ ಇವಾಗ….

ಮೊನ್ನೆ ಫ್ಲೈಟ್ ನಲ್ಲಿ ಬರ್ತಿದ್ನಾ ಅವಾಗ ಆ ಸುಂದ್ರಿ ಬಂದು ನನ್ನ ಮುಂದೆ ಚಾಕಲೇಟ್ ರಾಶಿ ಹಿಡಿದ್ಲು. ವಿಚಿತ್ರವಾಗಿ ಕಾಣಿಸ್ತಿತ್ತಲ್ಲ, ಆ ಚಾಕೊಲೇಟು ಅದನ್ನು ಹಿಡಿತುಂಬಾ ತಗೊಂಡು ಜೋಬಿಗೆ ಸೇರಿಸಿದೆ. ಮನೆಗೆ ಬಂದಾಗ ಅಮ್ಮನಿಗೆ ಅಕ್ಕಂದಿರಿಗೆ, ತಂಗೀಗೆ, ಅವ್ರಿಗೆ, ಇವ್ರಿಗೆ, ಎಲ್ಲಾರ್ಗೂ ಕೊಟ್ಟೆ. ಅವರು ಬಿಡಿಸಿ ಬಾಯಿಗಾಕಿಕೊಂಡ್ರು. ಹಾಕ್ಕೊಂಡ್ರು ಅಷ್ಟೆ… ಒಂದು ಕ್ಷಣದಲ್ಲಿ ಎಲ್ಲಾರೂ ಅವರ ಬಾಲ್ಯದ ಬಾಗಿಲು ಬಡೀತಾ ಇದ್ರು. ಮುಖದಲ್ಲಿ ಮುಗುಳ್ನಗೆ ಯಾಕೆಂದ್ರೆ ಅದು ಹುಣಸೇ ಹಣ್ಣಿನ ಚಾಕಲೇಟು. ಎಲ್ಲಾರೂ ಮನೆಯಿಂದ ಕದ್ದಿದ್ದ ಉಪ್ಪು ಮೆಣಸಿನಕಾಯಿ, ರೋಡ್ ಸೈಡಲ್ಲಿ ಉದುರಿದ್ದ ಹುಣಸೆಹಣ್ಣು ಎಲ್ಲಾ ಸೇರಿಸಿ ಜಜ್ಜಿ ಬಾಯಿಗಾಕಿಕೊಂಡಿದ್ರು, ಮಿನಿಮಮ್ ಅಂದ್ರೂ ೪೦ ವರ್ಷ ಹಿಂದೆ ಜಾರಿ ಹೋಗಿದ್ರು. ಅದಕ್ಕೇ ಅಲ್ವಾ “ಬಾಲ್ಯ ಕಾಲ ಸಖಿ” ಅನ್ನೋದು?

ಒಂದೇ ಒಂದು “ಸಾರಿ”

door_number1421.jpg

“ಡೋರ್ ನಂ 142”

ಬಹುರೂಪಿ

ಮ್ಯಾಕ್ ಬೆತ್ ನಾಟಕದಲ್ಲಿ ಒಂದು ಪ್ರಸಂಗ ಬರುತ್ತೆ. ನಟ್ಟ ನಡುರಾತ್ರಿ ಎದ್ದು ಲೇಡಿ ಮ್ಯಾಕ್ ಬೆತ್ ದಿಕ್ಕಿಲ್ಲದವಳ ಹಾಗೆ ಅಲೆಯಲು ಪ್ರಾರಂಭಿಸುತ್ತಾಳೆ. ಕೈಯನ್ನು ತೊಳೆದೇ ತೊಳೆಯುತ್ತಾಳೆ. ಮತ್ತೆ ಮತ್ತೆ ಕಣ್ಣ ಮುಂದೆ ಕೈ ತಂದು ನೋಡಿಕೊಳ್ಳುತ್ತಾಳೆ. ಹತಾಶಳಾಗುತ್ತಾಳೆ. ಕೈಯಲ್ಲಿರುವ ಕಲೆಗಳು ಒಂದಿನಿತೂ ಮಾಯವಾಗಿಲ್ಲ. ಜಗದ ನೀರನ್ನು ತಂದು ತೊಳೆದರೂ ಕರಗಿಲ್ಲ. ನಿಡುಸುಯ್ಯುತ್ತಾಳೆ. ಸುಗಂಧದ್ರವ್ಯ ಪೂಸಿ ಅಂಗೈಯ ಕಲೆಯ ಕಮಟು ವಾಸನೆಯನ್ನು ಇಲ್ಲವಾಗಿಸಿಬಿಡಲು ಒದ್ದಾಡುತ್ತಾಳೆ. ಊಹೂಂ. ಆಗುತ್ತಿಲ್ಲ. ಓಹ್! ಇಡೀ ಅರೇಬಿಯಾದ ಸುಗಂಧ ದ್ರವ್ಯಗಳೂ ನನ್ನ ಕೈಗಳ ಕಲೆಯನ್ನು ತೊಳೆಯಲಾರವೇ ಎಂದು ಉದ್ಗರಿಸುತ್ತಾಳೆ.

ಲೇಡಿ ಮ್ಯಾಕ್ ಬೆತ್ ನಿದ್ದೆಯಲ್ಲೂ ನಿದ್ದೆ ಕಳೆದುಕೊಂಡಿದ್ದಾಳೆ. ನಿದ್ದೆಯ ಆ ನಡಿಗೆಯೂ ಅವಳು ನಡೆದ ವಿಕಾರಗಳನ್ನೇ ಮತ್ತೆ ಮತ್ತೆ ನೆನಪಿಗೆ ತರುತ್ತದೆ. ಒಂದು ಹತ್ಯೆ, ಅದಕ್ಕಾಗಿ ಮತ್ತೊಂದು, ಅದನ್ನು ಮುಚ್ಚಿಹಾಕಲು ಮತ್ತಷ್ಟು… ಎಲ್ಲೆಡೆ ರಕ್ತ. ಕೊಂದದ್ದು ಬೇರೆಯವರಾದರೂ ರಕ್ತದ ಕಲೆ ಇವಳ ಕೈಯಲ್ಲಿದೆ. ಸಾಮ್ರಾಜ್ಯ ಮುಳುಗಿ ಹೋಗುವಷ್ಟು ಕೊಲೆಗಳು ನಡೆದುಹೋಗಿವೆ. ಅದರ ಇಡೀ ಸೂತ್ರ ಅದೇ ಅದೇ ಲೇಡಿ ಮ್ಯಾಕ್ ಬೆತ್ ಳ ಕೈಯಲ್ಲಿ.

ನಾನು ಚಿಕ್ಕವನಾಗಿದ್ದಾಗ ಪೇಪರ್ ನಲ್ಲಿ ಒಂದು ಫೋಟೋ ನೋಡಿದ್ದೆ-ಪಂಜಾಬಿನ ಮುಖ್ಯಮಂತ್ರಿಯದ್ದು. ಆತ ಅಲ್ಲಿನ ಸ್ವರ್ಣಮಂದಿರದ ಮುಂದೆ ಚಪ್ಪಲಿ ಕಾಯುತ್ತಾ ಕೂತಿದ್ದಾನೆ. ಶೂಗಳನ್ನು ತಿಕ್ಕಿ ಹೊಳಪು ಮಾಡುತ್ತಿದ್ದಾನೆ. ಇನ್ನೊಂದು ಚಿತ್ರ ನನ್ನ ತಲೆಯಲ್ಲಿ ಕೂತಿದೆ. ಮೋನಿಕಾ ಬೇಡಿಯದ್ದು. ಅದೇ ಸ್ವರ್ಣ ಮಂದಿರದಲ್ಲಿ ಪೊರಕೆ ಹಿಡಿದು ನೆಲ ಗುಡಿಸುತ್ತಿದ್ದಾಳೆ. ಪಾತ್ರೆ ಉಜ್ಜುತ್ತಿದ್ದಾಳೆ. ಇವರೂ ಅಷ್ಟೆ. ಕೈಯಲ್ಲಿರುವ ಕಲೆ ತೊಳೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಲೇಡಿ ಮ್ಯಾಕ್ ಬೆತ್ ಕೈಯೂ ಕಲೆಯಿಂದ ತುಂಬಿದೆ. ಆಕೆ ಸುಗಂಧದ್ರವ್ಯ ಪೂಸಿ ಅದನ್ನು ಮರೆಮಾಚಿಕೊಳ್ಳಲು ಯತ್ನಿಸುತ್ತಿದ್ದಾಳೆ. ಇಲ್ಲಿ ಸ್ವರ್ಣಮಂದಿರದ ಅಂಗಳದಲ್ಲಿರುವವರ ಕೈಗಳಲ್ಲೂ ಕಲೆ ಇದೆ. ಅವರು ನೆಲ ಗುಡಿಸುತ್ತಿದ್ದಾರೆ, ಚಪ್ಪಲಿ ಹಾಯುತ್ತಿದ್ದಾರೆ, ಶೂ ಉಜ್ಜುತ್ತಿದ್ದಾರೆ.

ಆಟೋದಲ್ಲಿ ಹೋಗುತ್ತಿದ್ದೆ. ಜೊತೆಗೆ ಮಗಳಿದ್ದಳು. ಯಾವ ಮೂಡ್ ನಲ್ಲಿದ್ದೆನೋ. ಅವಳ ಯಾವುದೋ ತುಂಟಾಟಕ್ಕೆ ಗದರಿಬಿಟ್ಟಿದ್ದೆ. ಅವಳ ಕಣ್ಣಾಲಿಗಳು ತುಂಬಿ ಹೋಗಿದ್ದವು. ಒಂದಿಷ್ಟೂ ಕುರುಹು ಬಿಟ್ಟುಕೊಡದಂತೆ ಅಪಾರವಾಗಿ ದುಃಖಿಸುತ್ತಿದ್ದಳು. ಒದ್ದಾಡಿಹೋದೆ. ಅವಳತ್ತ ತಿರುಗಿ “ಸಾರಿ” ಎಂದೆ. ಆಡಿದ್ದು ಒಂದೇ ಒಂದು ಪದ. ಆದರೆ ಅವಳು ನೀರಾಗಿ ಹೋದಳು. ಮಿಂಚಿನಂತೆ ಎಗರಿ ನನ್ನ ಭುಜ ತಬ್ಬಿಕೊಂಡಳು. “ಐ ಆಮ್ ವೆರಿ ಸಾರಿ ಪಾಪಾ” ಅಂದಳು. ಒಂದು ಸಾರಿ ಇನ್ನೊಂದು ಸಾರಿಯನ್ನು ಪಡೆದು ನಿಂತಿತ್ತು. ಎರಡು “ಸಾರಿ” ಘಟನೆಗಳನ್ನು ಸೃಷ್ಟಿಸಿದ್ದ ಇಬ್ಬರು ತಮ್ಮ ತಪ್ಪು ಅರಿತುಕೊಂಡು ಮೆತ್ತಗಾಗಿದ್ದರು. ತಪ್ಪುಗಳನ್ನು ನಿವೇದಿಸಿಕೊಂಡು ಹಗುರಾಗಿದ್ದರು. ಒಂದು “ಸಾರಿ” ಇದನ್ನು ಮಾಡಿತ್ತು. ಆಫೀಸ್ ನಲ್ಲಿದ್ದೆ. ಏನೋ ದಿಢೀರ್ ವಿಷಯ ಸಹೋದ್ಯೋಗಿಗಳಿಗೆ ಫೋನ್ ಮಾಡಿದೆ. ಎತ್ತುವುದು ತಡವಾಯಿತು. ಆ ಕಡೆಯ ದನಿಯಲ್ಲಿ ಉತ್ಸಾಹದಲ್ಲಿ ಏನೋ ಬೇಕಾಬಿಟ್ಟಿ ಭಾವನೆ. ಗದರಿಬಿಟ್ಟೆ. ಆಮೇಲೆ ನನಗೇ ನಾನು ಒದ್ದುಕೊಂಡೆ. ಆತ ನಾನೇ ಆಯ್ದುಕೊಂಡು ಬಂದ ಹುಡುಗ. ಆತ ಹೇಳುತ್ತಿದ್ದ “ಸರ್! ನನ್ನ ದನಿ ಇರುವುದೇ ಹಾಗೆ ಸಾರ್”. ಅದು ನನಗೂ ಗೊತ್ತಿತ್ತು. ಆದರೆ ಆ ಗದರುವಿಕೆಯ ಧಿಮಾಕಿನಲ್ಲಿ ಅದು ನನ್ನ ಕಣ್ಣಮುಂದೆ ಬರುತ್ತಲೇ ಇಲ್ಲ. ಆತ ಹೇಳಿಕೇಳಿ ಮೆತ್ತನೆಯ ಹುಡುಗ. ಆ ಕಾರಣಕ್ಕಾಗೇ ಎಲ್ಲರಿಗೂ ಇಷ್ಟವಾದ ಹುಡುಗ. ಹೌದು, ನಾನು ತಪ್ಪು ಮಾಡಿಬಿಟ್ಟೆ ಎನಿಸಿತು. ರಾತ್ರಿ ನಿದ್ದೆ ಕಳೆದುಕೊಂಡೆ. ಮಾರನೆಯ ದಿನ ಆಫೀಸಿನಲ್ಲಿ ಎಲ್ಲ ಮೀಟಿಂಗ್ ಕರೆದವನೇ “ಸಾರಿ” ಎಂದೆ. ಬೆದರಿ ಗುಬ್ಬಚ್ಚಿಯಾಗಿ ಹೋಗಿದ್ದ ಆತನ ಮುಖ ಒಂದಿಷ್ಟೇ ಅರಳುತ್ತಾ ಹೋಗಿದ್ದು ನನಗೆ ಗೊತ್ತಾಯಿತು. ಅದಕ್ಕಿಂತಲೂ ಹೆಚ್ಚಾಗಿ ನನ್ನೊಳಗಿನ ನಾನು ಶುದ್ಧವಾಗುತ್ತಾ ಹೋಗಿದ್ದೆ. ಅದೂ ಒಂದು “ಸಾರಿ”ಯಿಂದಾಗಿ.

ಆಗಿನ್ನೂ ಮದುವೆಯಾಗಿದ್ದೆ. ಬೀದಿ ಬೀದಿ ತಿರುಗುತ್ತಿದ್ದ ಕಾಲ. ಇದನ್ನು ಸಾಧ್ಯ ಮಾಡಲು ಕೈನೆಟಿಕ್ ಜೊತೆ ಇತ್ತು. ಸಿಕ್ಕಿದ್ದನ್ನು ಮುಕ್ಕಲು ಸಿಕ್ಕಲ್ಲಿ ನುಗ್ಗುತ್ತಿದ್ದೆವು. ಹೀಗೆ ಪಾನಿ ಪೂರಿ ಉಡಾಯಿಸಿ ಸ್ಕೂಟರ್ ಹತ್ತಲು ಬಂದಾಗ ಆತ ಎದುರಾದ. ಹರಿದ ಅಂಗಿ ಚಡ್ಡಿಗಿಂತ ಅವನ ಮುಖದಲ್ಲಿ ಇನ್ನಿಲ್ಲದಷ್ಟು ಹಸಿವು ಮುದುರಿಕೊಂಡು ಬಿದ್ದಿತ್ತು. ಆತ ಪಾರ್ಕಿಂಗ್ ಫೀಸ್ ಕೇಳಿದ. ತಕ್ಷಣ ನನ್ನ ತರ್ಕ ಎಚ್ಚರವಾಗಿ ಕೂತಿತು. ಇದು ಪಾರ್ಕಿಂಗ್ ಜಾಗ ಅಲ್ಲ. ಎರಡನೆಯದಾಗಿ ಸ್ಕೂಟರ್ ಪಾರ್ಕ್ ಮಾಡುವಾಗ ನೀನು ಇರಲೇ ಇಲ್ಲ. ನಾಟಕ ಮಾಡ್ತೀಯಾ ಅಂತ ಬೈದೆ. ಆ ಎಲ್ಲದರ ಮಧ್ಯೆಯೂ ಚಿಲ್ಲರೆಗಾಗಿ ಪರ್ಸ್ ತಡಕುತ್ತಿದ್ದ ಅವಳನ್ನೂ ಗುರ್ ಅನ್ನುವ ಕಣ್ಣಿನಿಂದ ನೋಡಿದ್ದಾಯ್ತು. ದುಡ್ಡು ಕೊಡಲು ಬಿಡಲೇ ಇಲ್ಲ. ಅವಳು ಹೇಳುತ್ತಿದ್ದಳು: “ಹಾಗಲ್ಲ, ಆತ ಹಸಿದಿದ್ದಾನೆ. ನೋಡಿದರೆ ಸಾಕು, ಬಡವ ಅನ್ನೋದು ಗೊತ್ತಾಗುತ್ತೆ. ಪಾರ್ಕಿಂಗ್ ಫೀಸ್ ಕೇಳ್ತಾ ಇದಾನೆ ಅಂತ ಯಾಕ್ ಅನ್ಕೋತಿಯಾ? ದಾನ ಅಂತಾದ್ರೂ ಕೊಟ್ಬಿಡು”. “ಊಹೂಂ” ಅಂದೆ.

sorry1.gifಆಗ ಗೊತ್ತಾಗಿದ್ದು ಅಷ್ಟೆ. ಆದ್ರೆ ಆಮೇಲೆ ಆ ಹುಡುಗನ ಮುಖ ಒದ್ಕೊಂಡು ಬರೋಕೆ ಶುರುವಾಯಿತು. ಅವನ ಮುಖಾನಾ ಸ್ಟಡಿ ಮಾಡ್ದೆ. ಹೌದು, ಅವತ್ತು ನೋಡಿದ ಮುಖದಲ್ಲಿ ನೋವಿತ್ತು, ಹಸಿವಿತ್ತು ಅಂತ ಅನ್ನಿಸ್ತು. ಹಸಿದವನ ಮುಂದೆ ಲಾ ಪಾಯಿಂಟ್ ಗೆ ಏನಿದೆ ಅರ್ಥ? ಯಾಕೆ ಅವತ್ತು ಲಾ ಪಾಯಿಂಟ್ ಗಟ್ಟಿಯಾಗಿ ಹಿಡಕೊಂಡು ಬಿಟ್ಟೆ ಅನಿಸ್ತು. ಅದು ಅವನ ಮುಖಾನ ಹೇಗೆ ನನ್ನ ಮುಂದೆ ಬಿಚ್ಚಿಟ್ಟಿತ್ತೋ ಹಾಗೇ ನನ್ನ ಮುಖಾನೂ ಬಿಚ್ಚಿಟ್ಟುಬಿಡ್ತು. ಏನು ಮಾಡೋದು “ಸಾರಿ” ಕೇಳ್ಬೇಕು ಅನ್ಸುತ್ತೆ. ಆದ್ರೆ ಹೇಗೆ? ಎಲ್ಲಿ ಹುಡುಕ್ಕೊಂಡು ಹೋಗ್ಲಿ? ಎಲ್ಲಿದಾನೋ? ಒದ್ದಾಡ್ತಾ ಇದೀನಿ. ಈಗ ಬಂದ ಬಂದ ಹುಡುಗರಿಗೆ ಕೈತುಂಬಾ ಕೊಡ್ತೀನಿ. ಅವರ ಮುಖಾ ಕೂಡ ನೋಡಲ್ಲ. ಹೆದರಿಕೆ ಆಗುತ್ತೆ. ಪಾಪ ಕಳಕೊಳ್ಳೋಕೆ ಅದು ಒಂದು ದಾರಿ ಇರಬಹುದು. ಆದ್ರೆ ಆ ಹುಡುಗನಿಗೆ “ಸಾರಿ” ಕೇಳ್ದೆ ಹೇಗೆ ಬದುಕ್ಲಿ ಅನ್ಸುತ್ತೆ.

ಒಂದಿನಾ ನನ್ನ ಕೊಲೀಗ್ ನ ಡ್ರಾಪ್ ಮಾಡೋಕೆ ಹೋಗಿದ್ದೆ. ನೈಟ್ ಶಿಫ್ಟ್ ಮುಗಿಸಿ ಬಹುಶಃ ರಾತ್ರಿ ೩ ಗಂಟೆ. ಹೋಗಿ ಬರ್ತಿರೋವಾಗ ಏನೋ ಅಡ್ಡ ಅನಿಸ್ತು. ಗೊತ್ತಾಗ್ಲಿಲ್ಲ. ಬೀದಿ ದೀಪಾನೂ ಇರ್ಲಿಲ್ಲ ಒಡಿಸ್ಬಿಟ್ಟೆ. ತಕ್ಷಣ ಕುಂಯೋ ಅನ್ನೋ ಆರ್ತನಾದ ಕೇಳಿಸ್ತು. ಏನಾಯ್ತು? ಪುಟಾಣಿ ನಾಯಿ ಮರಿಗಳ ದನಿ. ನಾನು ಅದನ್ನ ಸಾಯಿಸೇಬಿಟ್ನಾ? ಕಾರ್ ತಗೊಂಡಾಗ ಡ್ರೈವಿಂಗ್ ಕಲಿಯೋ ಟೈಮಲ್ಲಿ ಬ್ರೇಕ್ ಯಾವ್ದು ಅಂತ ಗೊತ್ತಾಗ್ದೆ ಎದುರು ನಿಂತಿದ್ದ ಹಸೂಗೆ ಡಿಕ್ಕಿ ಹೊಡ್ದೆ. ಆ  ಹಸೂ ನನ್ನನ್ನ ನೋಡ್ಲಿಲ್ಲ. ಅದು ಇನ್ನೂ ಇದೆ. ಹೇಗೆ ತಪ್ಪಾಯ್ತು ಅಂತ ಕೇಳೋದು?

ಇದನ್ನು ಬರೀತಾ ಬರೀತಾನೇ ನನ್ನ ಅಂಗೈನೂ ನೋಡ್ಕೊಂಡೆ. ಓಹ್! ಡಿಟೋ ಲೇಡಿ ಮ್ಯಾಕ್ ಬೆತ್ ಅಂಗೈ ಥರಾ ಆಗೋಗಿದೆ. ತುಂಬಾ ಕಲೆ ಇದೆ. ತೊಳ್ಕೊಳ್ಳೋದು ಹೇಗೆ, ಕಳ್ಕೊಳ್ಳೋದು ಹೇಗೆ ಅನ್ಸುತ್ತೆ. ಚಿಕ್ಕಪುಟ್ಟ ವಿಷಯ ಆದ್ರೆ ಬರೆದು ಬಿಸಾಡಬಹುದು. ಆದ್ರೆ ಜೀವನವೇ ಒದ್ದಾಡಿ ಹೋಗೋ ಸಂಗತಿಗಳನ್ನು ಬರೆದು ಹೇಳೋದಾದ್ರೂ ಹೇಗೆ? ಬದುಕು ಅನ್ನೋದು ನಿರಂತರವಾಗಿ “ಸಾರಿ” ಕೇಳುತ್ತೆ. ಕೇಳೋ ಹಾಗೂ ಮಾಡುತ್ತೆ. ಆದ್ರೆ “ಸಾರಿ” ಅಂತ ಕೇಳಿದ್ರೂ ನೂರೆಂಟು ಬಾರಿ ಕೇಳಿದ್ರೂ ಮಾಯ ಆಗ್ದೇ ಇರೋ ಹೊಡೆತ ಇರುತ್ತಲ್ಲ, ಅದನ್ನ ಮಾಯಿಸೋದು ಹೇಗೆ?

ಒಂದು ಕಮೋಡ್ ನಲ್ಲಿ ಬಿದ್ದಿರೋ ಆ ಮೊಬೈಲು, ಕದ್ದು ನೋಡಿದ ಒಂದು ಈ-ಮೇಲೂ, ಬಾಗಿಲು ಹಾಕಿಕೊಂಡು ತಡಕಾಡಿದ ಎಸ್ ಎಂಎಸ್ ಗಳು, ಎದ್ದೆದ್ದು ಕುಣಿದ ರಾಕ್ಷಸಾಕಾರದ ಆಕೃತಿಗಳು, ಕೊಳ್ಳಿದೆವ್ವಗಳಂತೆ ಕುಣಿದಾಡಿದ ವಿಷಯಗಳು ಇವೆಲ್ಲ ನಿಂತು ಬಿಟ್ಟಿದೆ, ಎದೆಯೊಳಗೆ, ಮನಸ್ಸೊಳಗೆ. ಕಾಡುತ್ತೆ. ಅದ್ರಿಂದ ಬಿಡುಗಡೆ ಪಡ್ಕೊಂಡು ಹಾರಿಬಿಡ್ಬೇಕು, ನಿರಾಳ ಆಗಿಬಿಡಬೇಕು ಅಂತೇನೂ ಅನ್ಸಲ್ಲ. ಆದ್ರೆ ಆ ಗಾಯಗಳನ್ನು ತೊಳೀಬೇಕು ಅನ್ಸುತ್ತೆ. ಮುಲಾಮು ಹಚ್ಚಬೇಕು ಅನ್ಸುತ್ತೆ. ಆದ್ರೆ ಮುಲಾಮು ಹಚ್ಚೋ ಜಾಗಗಳು ಒಂದೆರಡಾ! ಇಡೀ ದೇಹಾನೇ ಕೊಚ್ಚಿ ಹಾಕಿದಾಗ ಇಷ್ಟಕ್ಕೇ ಅಂತ ಮುಲಾಮು ಹಚ್ಚೋ ಜಾಗ ಹುಡುಕೋದಾದ್ರೂ ಹೇಗೆ?

ಅವತ್ತು ಏನೂ ಅರ್ಥ ಆಗ್ದೆ ಪಿಳಿಪಿಳಿ ಅನ್ತಿದ್ದ ಕಣ್ಣುಗಳಲ್ಲಿ ಇತ್ತಲ್ಲ, ಆತಂಕ, ಸುರಿಸ್ತಾ ಇತ್ತಲ್ಲ ಕಣ್ಣೀರು, ಅದನ್ನ ತೊಳೆದು ಹಾಕೋದು ಹೇಗೆ? ಗಾಂಧೀಜಿ ಏನೋ ತಪ್ಪು ಮಾಡಿದ್ದರ ಬಗ್ಗೆ ಬರೆದು ಅಪ್ಪನಿಗೆ ಕೊಟ್ಬಿಟ್ರು. ಮಹಾತ್ಮ ಆಗೋ ದಾರೀಲಿ ಒಂದು ಹೆಜ್ಜೇನೂ ಹಾಕ್ಬಿಟ್ರು. ಏನು ತಪ್ಪು ಅಂತ ಮಾಡಿದ್ರ ಅವರು? ಬೀಡಿ ಸೇದಿದ್ರು, ಕದ್ದು ಸೇದಿದ್ರು. ಬೆಂಕಿ ಬರೀ ಬೀಡೀನ ಸುಡ್ಲಿಲ್ಲ. ಜೊತೆಗೆ ಅವರನ್ನೂ ಸುಟ್ಟು ಹಾಕಿತ್ತು. ಆದ್ರೆ ನನ್ನೊಳಗೆ ಇರೋ ನಾನು ಮಾಡಿರೋ ಗಾಯಗಳಿಗೆ ಯಾರಿಗೆ ಪತ್ರ ಬರೆಯೋದು? ಎಷ್ಟು ಜನರಿಗೆ ಅಂತಾ ಪತ್ರ ಬರೆಯೋದು?

“ನಿನ್ನಂತರಂಗದಲ್ಲೊಂದು ನೋವು ನಾನಾಗಿ ನಿಂತುಬಿಟ್ಟೆ/ನೀನೊಪ್ಪಿಕೊಂಡ ಬಾಳ ಚಂದಿರಾನ ಕಲೆಯಾಗಿ ಕೂಡಿಕೊಂಡೆ” ಅಂತ ಆ ಕವಿ ಬರೆದಾಗ ಆತನೂ ಯಾರಿಗೋ “ಸಾರಿ” ಕೇಳ್ತಿದಾನೆ ಅನಿಸ್ತು. ನಾನೂ ಒಂದು ಕಲೆಯಾಗಿ ಕೂಡಿಕೊಂಡ ಘಟನೆಗಳು ಸುರುಳಿಸುರುಳಿಯಾಗಿ ಬಿಚಿಕೊಳ್ತಾ ಇದೆ.

ಯಾಕೋ ಇದೆಲ್ಲಾ ನೆನಪಾಗಿದ್ದು, ಆಸ್ಟ್ರೇಲಿಯಾ ಪ್ರಧಾನಿ ಶತಮಾನದ ತಪ್ಪಿಗೆ ಜನರೆದುರು ನಿಂತು “ಸಾರಿ” ಅಂತ ಕೇಳಿದ್ರಲ್ಲ ಅದಕ್ಕೆ. ಅದಕ್ಕಿಂತ ಮುಖ್ಯವಾಗಿ ಕಲ್ಪನಾ ಶರ್ಮ ಹಿಂದೂ ಪತ್ರಿಕೇಲಿ “ಸಾರಿ” ಅನ್ನೋದು ದೊಡ್ಡ ಶಬ್ದ ಅಂತ ಬರೆದ್ರಲ್ಲಾ ಅದಕ್ಕೆ.

ಹುಚ್ಚುಕುದುರೆಯ ಬೆನ್ನನೇರಿ…

 door_number1421.jpg 

ಡೋರ್ ನಂ “142”

ಬಹುರೂಪಿ

“ಆರ್ಕಟ್”ನಲ್ಲಿ ಮೂಗು ತೂರಿಸಿ ಕುಳಿತಿದ್ದೆ. ಯಾಕೋ ನೂರೆಂಟು ಸೈಟ್ ಗಳನ್ನು ಪ್ರತಿ ದಿನಾ ಜಾಲಾಡಿದರೂ ಈ ಆರ್ಕಟ್ ಎನ್ನುವುದು ನನ್ನ ದೈನಂದಿನ ಭಾಗವಾಗಿರಲಿಲ್ಲ. ಎರಡನೇ ಲಿಂಕ್ ಒತ್ತುವ ವೇಳೆಗೆ ಆರ್ಕಟ್ ನ ವಿಶ್ವರೂಪ ಗೋಚರಿಸಲು ಆರಂಭಿಸಿತು. ಇಲ್ಲಿ ಬೆತ್ತಲೆಯೇ ಸರಕು. ಆದರೂ ಯಾಕೋ ಇರಲಾರದು ಎಂದುಕೊಂಡು ಮತ್ತೆ ಮತ್ತೆ ಆರ್ಕಟನ್ನು ವಿವಿಧ ಹೆದ್ದಾರಿಗಳ ಮೂಲಕ ತಡಕಾಡಿದೆ. ಸೋಷಿಯಲ್ ಸೈಟ್ ಅಂತ ಕರೆದುಕೊಂಡ, ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ಆರ್ಕಟ್ ನ ಹಣೆಬರಹ ಇಷ್ಟೇ ಅನಿಸಿಬಿಟ್ಟಿತು.

ಎಲ್ಲಾ ಮಕ್ಕಳಲ್ಲಿ ಆರ್ಕಟ್ ನ ಅಕೌಂಟ್ ಇದೆ. ಪ್ರತಿದಿನಾ ಅದನ್ನ ಎಡತಾಕಿ ಬರ್ತಾರೆ. ಏನೆಲ್ಲಾ ಆಗಬಹುದು ಅಂದ್ಕೊಂಡೆ. ಎರಡನೇ ಬಾರಿ ಬಟನ್ ಒತ್ತುವ ವೇಳೆಗೆ ವಿಕೃತ ಕಾಮದ ರಾಶಿರಾಶಿಯೇ ನಮ್ಮೆದುರು ಬಂದು ಬೀಳುವುದಾದರೆ, ಮಕ್ಕಳು ಇದನ್ನೇ ಬೇಡ ಎಂದರೂ ಮುಟ್ಟುತ್ತಿರಬೇಕಲ್ಲಾ ಅನಿಸಿತು.

ಒಂದೆರಡು ತಿಂಗಳ ಹಿಂದೆ ಇರ್ಬೇಕು. ನನಗೆ ಗೂಗಲ್ ನವರು ಹೊಸದಾಗಿ ಬಿಟ್ಟಿರುವ “ಪಿಕಾಸಾ” ಪ್ರೋಗ್ರಾಂ ತುಂಬಾ ಇಷ್ಟ. ಒಂದೇ ಕ್ಷಣದಲ್ಲಿ ಕಂಪ್ಯೂಟರ್ ಒಳಹೊರಗನ್ನೆಲ್ಲ ಶೋಧಿಸಿ, ಎಷ್ಟು ಕೋಣೆಗಳಿವೆಯೋ ಅಷ್ಟಕ್ಕೂ ಬಾಗಿಲು ತಟ್ಟಿ ಒಳಗಿರುವ ಎಲ್ಲಾ ಫೋಟೋ, ವಿಡಿಯೋಗಳನ್ನು ಎಳೆದುಕೊಂಡು ಬಂದು ಕೂರಿಸುತ್ತದೆ. ಇದನ್ನ ಮೇಲ್ ಮಾಡುವುದು, ಆಲ್ಬಂನಲ್ಲಿ ಹಾಕಿ ಹಂಚಿಕೊಳ್ಳುವುದೂ ತುಂಬಾ ತುಂಬಾ ಈಸಿ. ಹಾಗಾಗಿಯೇ ಎಲ್ಲರಿಗೂ ನನ್ನ ಪಿಕಾಸಾ ಪಾಠ ನಡೆಯುತ್ತಿತ್ತು. ಒಂದು ದಿನ ನೆಂಟರ ಮನೆಗೆ ಹೋದೆ. ಮ್ಯಾಜಿಕ್ ತೋರಿಸ್ತೀನಿ ನೋಡಿ ಅನ್ನೋ ಹಾಗೆ ಪೋಸ್ ಕೊಟ್ಟು ಪಿಕಾಸಾನ ಡೌನ್ ಲೋಡ್ ಮಾಡಿದೆ. “ಅಬ್ರಕಬ್ರಕಡಾ…” ಅಂತ ಮಣಮಣಿಸಿ ಕಂಪ್ಯೂಟರ್ ನಲ್ಲಿರೋದನ್ನೆಲ್ಲಾ ಎಲ್ಲಾನೂ ಎಳ್ಕೊಂಡು ಬಂತು. ಒಂದೊಂದನ್ನೇ ತೋರಿಸ್ತಾ ಹೋದೆ. ಸಾಕಷ್ಟು ಬ್ಲೂ ಫಿಲಂ ತುಣುಕುಗಳು ಬಂದು ಬಿತ್ತು. ಅದು ಬಂದು ಬೀಳ್ತಾ ಇದ್ದ ಹಾಗೆ ಗುಂಪಿನಲ್ಲಿ ಕೂತೂ ನೋಡ್ತಾ ಇದ್ದವರ ಪೈಕಿ ಒಬ್ಬ ಮೈನಸ್ ಆಗಿ ಹೋಗಿದ್ದ.

huchchu2.jpg

ದೇಹದಲ್ಲಿ ಏನೋ ಬದಲಾವಣೆ ಆಗುತ್ತೆ. ಎಲ್ಲೆಲ್ಲೋ ಕೂದಲು ಮೂಡೋದಿಕ್ಕೆ ಆರಂಭವಾಗುತ್ತೆ. ರಾತ್ರಿ ಇದ್ದಕ್ಕಿದ್ದ ಹಾಗೆ ಮೈ ಜುಂ ಅಂದುಬಿಡುತ್ತೆ. ಕನಸಲ್ಲ ಅದು ಓಹ್! ಸ್ವರ್ಗಕ್ಕೆ ಎಳಕೊಂಡು ಹೋಗೋ ಐರಾವತದ ಥರಾ ಅನಿಸುತ್ತೆ ಕನಸಲ್ಲೇ ಏನೇನೋ ಆಗಿಹೋಗುತ್ತೆ. ಗೊತ್ತಿಲ್ಲ ಏನೋ ಬೇಕು ಏನೋ ಬೇಕು ಅನಿಸ್ತಾ ಇರುತ್ತೆ. ಏನು ಬೇಕು ಅನ್ನೋದು ಗೊತ್ತು ಮಾಡಿಕೊಳ್ಳೋದು ಒಳ್ಳೇದೆ. ಆದ್ರೆ ಯಾವಾಗ ಬೇಕು ಅನ್ನೋದು ತಿಳ್ಕೊಳ್ಳೋದು ಒಳ್ಳೇದೆ ಅಲ್ವಾ?

ಒಂದಿನ ಹಿಂಗಾಗೋಯ್ತು. ಅಣ್ಣ ಊರಿಂದೆಲ್ಲಾದ್ರೂ ಬರ್ತಾರೆ ಅಂದ್ರೆ ಒಂದು ಮಣ ಪುಸ್ತಕ ನಮಗೆ ಬರುತ್ತೆ ಅಂತ ಗ್ಯಾರಂಟಿ. ಅಣ್ಣ ಬರೋದನ್ನೇ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಕಾಯ್ತಾ ಇದ್ವಿ. ಯಾವಾಗ್ಲೂ ಅಣ್ಣ ಬಂದ ತಕ್ಷಣ ಪುಸ್ತಕಗಳನ್ನ ಬ್ಯಾಗ್ ನಿಂದ ಎತ್ತಿ ಕೊಡ್ತಾ ಇದ್ದ. ಅಣ್ಣ ಈ ಬಾರಿ ಕೈಯಲ್ಲಿರೋ ಪುಸ್ತಕಾನೇ ಮುಟ್ಟಕ್ಕೆ ಬಿಡ್ತಾ ಇಲ್ಲ. ಯಾಕೆ ಯಾಕೆ ಅನ್ಕೊಂಡು ಸುಮ್ಮನಿದ್ ಬಿಟ್ಟಿದ್ರೆ ಆಗಿರೋದು. ಆಮೇಲೆ ಡಿಟೆಕ್ಟಿವ್ ಥರಾ ಬ್ಯಾಗೆಲ್ಲಾ ರಾತ್ರಿ ತಡಕಾಡಿದೆ. ಷಾಕ್ ಅವತ್ತೂ ಆಗಿತ್ತು. ಒಂದು ಮಣ ಪುಸ್ತಕ. ನಾನು ಅವತ್ತಿನವರೆಗೂ ಪುಸ್ತಕ ಅಂದ್ರೆ ನಾಲೆಡ್ಜ್ ಬ್ಯಾಂಕ್ ಅಂತಾನೇ ಅನ್ಕೊಂಡಿದ್ದೆ. ಆದರೆ ಆ ಚಿತ್ರಗಳು, ಆ ಬರಹಗಳು ಶಿವನೇ! ಪುಸ್ತಕ ಅಂದ್ರೆ ಹಿಂಗೂ ಇರುತ್ತಾ ಅನ್ಸಿತ್ತು.

ಏನ್ಮಾಡೋದು ಪಾಪ! ಅಣ್ಣ ಸಹ ಆಗ ತಾನೆ ಟೀನೇಜ್ ಗೆ ಕಾಲಿಟ್ಟಿದ್ದು. ಟೀನೇಜ್ ಗೆ ಏನೋ ಬೇಕು ಅನ್ಸುತ್ತಲ್ಲ ಇಂಥ ಟೈಮ್ ಗೆ ಕಾಯ್ತಾ ಇರುತ್ತೆ ಈ ಥರಾ ಪುಸ್ತಕಗಳು. ಹೊಂಚು ಹಾಕ್ಕೊಂಡಿದ್ದು ಅಟ್ಯಾಕ್ ಮಾಡುತ್ತೆ. ಅಟ್ಯಾಕ್ ಮಾಡುತ್ತೆ ಅಂತ ಯಾಕನ್ಸುತ್ತೆ ಅಂದ್ರೆ ಆ ಅಟ್ಯಾಕ್ ನಿಂದ ಇನ್ನೂ ಒದ್ದಾಡ್ತಾ ಇದೀನಿ. ನೂರೆಂಟು ದಾರಿ ಹುಡುಕಿದೆ, ಬಿಡಿಸ್ಕೊಳ್ಳೋದು ಹೇಗೆ ಅಂತ. ನೂರೆಂಟು ಭ್ರಮೆ ಹುಟ್ಟಿಸುತ್ತೆ. ಸೆಕ್ಸ್ ಅಂದ್ರೆ ಮನಸ್ಸು ಗರಿಗೆದರಿ ಹಾರಬೇಕು. ಒಂದು ಮಿಲನ ಅನ್ನೋದು ನೂರು ಅರ್ಥ ಹುಟ್ಟಿಸ್ಬೇಕು. ಅದು ಮಿಲನ ಮಹೋತ್ಸವ ಆಗಿರಬೇಕು. ಆದ್ರೆ ಈ ಪುಸ್ತಕ ಮನಸ್ಸನ್ನ ಒಂದು ಕೊಳಕು ಹಂಡೆ ಮಾಡಿಡುತ್ತೆ. ಸೆಕ್ಸ್ ಅನ್ನೋದು ಮಿಲನ ಮಾತ್ರ ಅಲ್ಲ, ಅದರಾಚೆ ಇದೆ. ಅದು ಏನೋ ಸಿಗ್ತಾ ಇಲ್ಲ. ಸಿಗ್ತಾ  ಇಲ್ಲ ಅನ್ನೋ ತಹತಹ ಹುಟ್ಟಿಸುತ್ತೆ. ಒಂದು ದೇಹ ಅಂದ್ರೆ ಅಟ್ಯಾಕ್ ಗೆ ಮಾತ್ರ ಇರೋದು ಅನ್ನೋ ಹಾಗೆ ಮಾಡ್ಬಿಡುತ್ತೆ. ವಿಪರೀತ ಭ್ರಮೆ ಹುಟ್ಟಿಸುತ್ತೆ.

ಒಂದು ಪೆಪ್ಪರ್ ಮೆಂಟ್ ಹೊಸದಾಗಿ ಮಾರ್ಕೆಟ್ ಗೆ ಬಿಟ್ಟಿದ್ರು. ಅದರ ಹೆಸರು ಯಸ್! ಪೋಲೋ. ಪೋಲೋ ಪೆಪ್ಪರ್ ಮೆಂಟ್ ತಿನ್ರಪ್ಪಾ ಅಂತ ಅಡ್ವರ್ಟೈಸ್ ಮಾಡಿದ್ರೆ ಆಗಿರ್ತಿತ್ತು. ಆದ್ರೆ ಅವ್ರು ಅದನ್ನ “ಮಿಂಟ್ ವಿತ್ ಎ ಹೋಲ್” ಅಂತ ಡಂಗೂರ ಹೊಡೆದ್ರು. ಎಷ್ಟು ವಿಪರೀತ ಅರ್ಥ ಕೊಟ್ರೂ ಪೆಪ್ಪರ್ ಮೆಂಟ್ ತಿನ್ನೋದೂ ಕೂಡ ಮುಖರತಿ ಆಗೋಯ್ತು. ಟೀನೇಜ್ ಅನ್ನೋದು ಸುಮ್ನೇನಾ? ನರನಾಡಿ ಎಲ್ಲಾದ್ರಲ್ಲೂ ಮಿಂಚು, ಮಿಂಚು ಹರಿಸುತ್ತೆ. ಕನ್ನಂಬಾಡಿ ಕಟ್ಟೇನಲ್ಲಿ ನೀರು ಬೀಳ್ತಾ ಇದ್ದಾಗ ಅಬ್ಬಾ! ಅನಿಸುತ್ತಲ್ಲಾ ಆ ರೀತಿ ಇರುತ್ತೆ ಅನ್ಸುತ್ತೆ ನನಗೆ. ಹುಚ್ಚುಹುಚ್ಚು ಶಕ್ತಿ ಅದು. ಸರಿ ದಾರೀಲಿ ಹೋಗೋ ಥರಾ ಕಾಲುವೆ ಕಟ್ಟಿದ್ವಾ ಬಚಾವ್. ಇಲ್ಲಾಂದ್ರೆ ಸಿಕ್ಕಸಿಕ್ಕ ಕಡೆ ನುಗ್ಗುತ್ತೆ. ಎದುರಿಗೆ ಬಂದಿದ್ದನ್ನೆಲ್ಲ ಕೊಚ್ಚಿ ಬಿಸಾಕುತ್ತೆ. ಕೊನೆಗೆ ಏನಾಯ್ತಪ್ಪಾ ಅಂತ ಹುಡುಕಬೇಕು ಹಂಗೆ ಅದೂ ಹಾಗಾಗಿ ಹೋಗುತ್ತೆ.

ಇರ್ಲಿ, ನೋಡೋಣ “ಆರ್ಕಟ್”ನ ಎಷ್ಟೊಂದು ಟೀನ್ಸ್ ನೋಡ್ತಾರಲ್ವಾ. ನನ್ನ ಮಗಳೂ ಅದರಲ್ಲಿರ್ತಾಳಲ್ಲಾ. ಏನೇನಾಗುತ್ತೆ ಅಂತ ನಾನು ಒಂದು ಅಕೌಂಟ್ ಓಪನ್ ಮಾಡ್ದೆ. ಹುಡುಗಿ ಹೆಸರಲ್ಲಿ. ಕಂಪ್ಯೂಟರ್ ಗೇನು ಗೊತ್ತಾಗುತ್ತೆ. ಹುಡುಗಾನಾ, ಹುಡುಗೀನಾ ಅಂತ. ಇನ್ನೊಂದು ಯಾವುದೋ ಮೂಲೇಲಿರೋರಿಗೇನು ಗೊತ್ತಾಗುತ್ತೆ ಅದು ಮೇಲಾ, ಫೀಮೇಲಾ ಅಂತ. ಒಂದೇ ಸಮ ಮೆಸೇಜ್ ಬರೋಕೆ ಶುರುವಾಯ್ತು. ಏನಿಲ್ಲಾ, ಹಾಸಿಗೆಗೆ ಬಾ ಅನ್ನೋದೆ. ಯಾಕಪ್ಪಾ ಹಿಂಗೆ ಕರೀತಾರೆ ಅಂತ ಅವ್ರ ಆರ್ಕಟ್ ಗೋದ್ವಾ, ಮುಗೀತು ಕತೆ-ಒಂದು ರಾಶೀ ಫೋನ್ ಗಳು.

ನನ್ನ ಫ್ರೆಂಡ್ ಒಬ್ಬ ಇದ್ದ. ಗುಜರಾತಿ. ಬರೀ ಬ್ಯುಸಿನೆಸ್ ಕಂಡ ಮನೆ ಅದು. ನಮ್ಮ ಜೊತೇನೇ ಕುಂಟಾಬಿಲ್ಲೆ ಆಡ್ಕೊಂಡಿದ್ದ. ಇನ್ನೇನು ಡಿಗ್ರಿ ಮುಗಿಸ್ತಾ ಇದಾನೆ ಅನ್ನೋ ಅಷ್ಟೊತ್ತಿಗೆ ಸರಿಯಾಗಿ ಅವನ ಮದುವೆ ಫಿಕ್ಸ್ ಮಾಡ್ಬಿಟ್ರು. ಅವ್ನೂ ಹುಡುಗಿ ಮನೆಗೆ ಹೋಗೀ ಬರೋಕೆ ಶುರು ಮಾಡ್ದ. ಮದ್ವೆ ಇನ್ನೂ ಸ್ವಲ್ಪ ದಿನ ಇತ್ತು. ಆ ಮನೇಲಿ ಇವನ್ನ ಕೂಡಿಸ್ಕೊಂಡು ಒಟ್ಟಿಗೆ ಬ್ಲೂಫಿಲಂ ನೋಡಿದ್ರಂತೆ. ಯಾಕಪ್ಪಾ, ನಾವಂತೂ ಈ ಥರಾ ಕೇಳಿಲ್ವಲ್ಲಾ ಅಂದಿದ್ದಕ್ಕೆ ಅವ್ನು ಹೇಳ್ದ: ನಮ್ಮಲ್ಲಿ ಹಾಗೇನೇ. ಹುಡುಗ ವಯಸ್ಸಿಗೆ ಬಂದಾ ಅಂದ್ರೆ ಕೆಟ್ಟ ಕುತೂಹಲಕ್ಕೆ ಬೀಳ್ತಾನೆ. ಅದರ ಬೆನ್ನತ್ತಿ ಹಾದಿ ತಪ್ತಾನೆ. ಅದರ ಬದಲು ದೇಹ ಜುಂ ಅನ್ನೋಕೆ ಶುರು ಮಾಡ್ದಾಗ್ಲೇ ಅದಕ್ಕೆ ಬೇಕಾದ್ದನ್ನೆಲ್ಲ ಒದಗಿಸಿಬಿಡ್ತಾರೆ. ಹುಡುಗ ಎಲ್ಲಿ ದಾರಿ ತಪ್ತಾನೆ? ತೆಪ್ಪಗೆ ಬ್ಯುಸಿನೆಸ್ ನೋಡ್ಕೊಂಡು ಹಣ ಮಾಡ್ಕೊಂಡು ಕೂತಿರ್ತಾನೆ ಅಂತ. ಹಂಗಾ ಅನಿಸ್ತು.

ನನ್ನ ಅಪಾರ್ಟ್ ಮೆಂಟ್ ನಲ್ಲಿ ಇರೋ ಟೀನ್ ಗಳ ಮನೇನಲ್ಲಿ ಒಂದು ಅಂಶ ಗಮನಿಸಿದ್ದೀನಿ. ಯಾರೂ ಕಂಪ್ಯೂಟರ್ ನ ರೂಂನಲ್ಲಿಟ್ಟಿಲ್ಲ. ಹಾಲ್ ನಲ್ಲಿಟ್ಟಿದ್ದಾರೆ. ವಿಷಯ ಸಿಂಪಲ್. ಮಕ್ಕಳು ದಾರಿ ತಪ್ಪಬಾರದು ಅಂತ. ಅದು ಬೇಕು, ಇದು ಬೇಕು, ಇನ್ನೊಂದು ಬೇಕು, ಮತ್ತೂ ಒಂದು ಬೇಕು ಅಂತ ಕೇಳ್ತಾನೇ ಇರುತ್ತೆ ಮನಸ್ಸು. ಅದಕ್ಕೆ ಗಾಳ ಹಾಕ್ತಾ ಇರುತ್ತೆ ಈ ಹಗಲೂ ರಾತ್ರಿ ನಿದ್ದೆ ಮಾಡೋದಿಕ್ಕೆ ಬಿಡದಿರೋ ಈ ಸೆಕ್ಸ್ ಲೋಕಗಳು.

“ನಿಂದಾ ನೀ ತಿಳ್ಕೋ” ಅಂದ್ರಲ್ಲಾ ಕವಿಗಳು ಅಂತ ನಾನು ಏನು ಅಂತ ಹುಡುಕೋದಿಕ್ಕೆ ಶುರು ಮಾಡ್ದೆ. ನಾನು ಆಗ ತಾನೇ ಏಳನೇ ಕ್ಲಾಸ್ ಮುಗಿಸಿ ಎಂಟು ಶುರು ಮಾಡಿದ್ದೆ. ಆ ವಯಸ್ಸಲ್ಲೇ ಸೆಕ್ಸ್ ಬುಕ್ ಕೈಗೆ ಬಂತು. ವಯಸ್ಸು ಬೆಳೀತಾ ಹೋದ ಹಾಗೆ ಪುಸ್ತಕ ಮಾತ್ರ ಕೈ ಬಿಟ್ಟೋಗ್ಲಿಲ್ಲ. ಒಳ್ಳೆ ಪುಸ್ತಕ ಬೇಕು ಅಂತ ಬಳೇಪೇಟೆಗೆ ನುಗ್ಗಿದ್ರೆ ಅದರ ಜೊತೆ ಬೋನಸ್ಸಾಗಿ ಇದೂ ಕಣ್ಣಿಗೆ ಬೀಳುತ್ತೆ. ಇಷ್ಟೇನಾ ಅಂದ್ರೆ ಇಷ್ಟೇ ಅಲ್ಲ. ಬುಕ್ಸ್ ಮಾತ್ರಾನಾ ಅಂದ್ರೆ ಬುಕ್ಸ್ ಮಾತ್ರ ಅಲ್ಲ. ವರ್ಜಿನಿಟಿ ಅನ್ನೋದು ಫೂಲಿಶ್ ನೆಸ್ ಅನ್ನೋ ಥರಾ ಆಗೋಗುತ್ತೆ.

ಈಗ ಬಳೆಪೇಟೆಗೇ ಹೋಗ್ಬೇಕಾ? ಪುಸ್ತಕಾನೇ ಓದ್ಬೇಕಾ? ಒಂದು ನಿಮಿಷ ಇಂಟರ್ ನೆಟ್ ಗೆ ಅಂಟಿಕೊಂಡ್ರೆ ಒಂದು ಮೆಗಾ ಸೆಕ್ಸ್ ಉಚಿತ ಅನ್ನೋ ಕಾಲ ಇದು. ಆರ್ಕಟ್ ಮಾತ್ರಾನಾ. ಹೆಜ್ಜೆ ಹೆಜ್ಜೆಗೂ ಇರುತ್ತೆ. ಬೇಡಾ ಅಂದ್ರೂ ಕಣ್ಣೆದುರು ಬರುತ್ತೆ. ಇದರ ಜೊತೆಗೆ ಟೀವಿ, ವೀಡಿಯೋ ಸೆಕ್ಸ್ ಅನ್ನೋದು ಧಾರಾಳವಾಗಿ ಕೈಗೆ ಸಿಗುತ್ತೆ.

ಸಿಗಲಿ, ಆದ್ರೆ ಅದಕ್ಕೆ ತಕ್ಕನಾಗಿ ಸೆಕ್ಸ್ ಬಗ್ಗೆ ಮಾತಾಡ್ತಾ ಇದ್ದೀವಿ! ಯಾರು ಹೇಳ್ತಾರೆ ಈ ಎಲ್ಲಾವಕ್ಕೂ ಎಕ್ಸ್ ಪೋಸ್ ಆದ ಮನಸ್ಸನ್ನ ಮತ್ತೆ ನಮ್ಮ ಮಾತು ಕೇಳೋ ಹಾಗೆ ಮಾಡೋದು ಹೇಗೆ ಅಂತ. ಮನಸ್ಸು ಹುಚ್ಚುಕುದುರೆ ಆಗಿರುತ್ತೆ. ದೇಹದಲ್ಲಿ ಬದಲಾವಣೆ ಆಗಿರುತ್ತೆ. ಕೈಗೆ ಕಾಸು ಎಟುಕ್ತಾ ಇರುತ್ತೆ. ಅಂಥಾದ್ರಲ್ಲಿ ಮಡಿವಂತಿಕೆ ಮಾಡಿಬಿಟ್ರೆ ಅವರವರಿಗೆ ಬೇಕಾದ ದಾರಿ ಅವರವರು ಹುಡುಕ್ಕೊಂಡು ಬಿಡ್ತಾರೆ. ಎಷ್ಟೋ ಜನ ರಾಂಗ್ ರೂಟೇ ಹುಡುಕ್ತಾರೆ.

ಉಮಾರಾವ್ ಒಂದು ಕಥೆ ಬರ್ದಿದ್ರು. ಮನೇನಲ್ಲಿ ಮುದಿ ತಂದೆ ಆತ್ಮಹತ್ಯೆ ಮಾಡ್ಕೊಂಡು ಬಿಡ್ತಾರೆ. ಯಾಕೆ? ಅವರ ಕಂಪ್ಯೂಟರ್ ತೆರೆದಿರುತ್ತೆ. ಬೇಡವಾದ್ರೂ ಕಣ್ಣಿಗೆ ಬಿದ್ದಿರುತ್ತೆ. ಅದರಿಂದ ಆಚೆಗೆ ಒದ್ದುಕೊಂಡು ಬರೋ ದಾರಿ ಗೊತ್ತಾಗಲ್ಲ. ಒಂದೇ ಸಲ “ಡಿಲಿಟ್” ಬಟನ್ ಒತ್ಕೊಂಡಿದ್ದಾರೆ. ಈ ಕಥೆ ಬಂದಿದ್ದು ಆಗ ತಾನೇ ಇಂಟರ್ ನೆಟ್ ಬರ್ತಾ ಇದ್ದ ಕಾಲದಲ್ಲಿ. ಆದ್ರೆ ಈಗ ಎಲ್ಲೆಲ್ಲೂ ಇಂಟರ್ ನೆಟ್ಟೇ. “ಮಿಂಟ್ ವಿತ್ ಎ ಹೋಲ್” ಜನಾಂತ ಇದು. “ಡಿಲಿಟ್” ಒಟ್ಕೊಂಡುಬಿಡಬಾರದು. ಹೆಂಗಪ್ಪಾ…?

“ಬಿಚ್ಚಬೇಕಾದ ಕಟ್ಟಡಗಳು… ಆಲಿಸಬೇಕಾದ ದನಿಗಳು…”

door_number1423.jpg 

“ಡೋರ್ ನಂ 142”

ಬಹುರೂಪಿ

ತ ನನ್ನೆದುರು ಕುಳಿತಿದ್ದ. ಮುಖ ಬಾಡಿಹೋಗಿತ್ತು. ಚಿಂತೆಯ ಗೆರೆಗಳು ಮುಖವನ್ನು ಹೇಗೆಲ್ಲಾ ಕೊಚ್ಚಿಹಾಕಿಬಿಡಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದ. ಮಾತು ಆಡುವುದು ಇಷ್ಟು ಕಷ್ಟದ ಕೆಲಸ ಎಂದು ಅವನಿಗೆ ಅದುವರೆಗೆ ಗೊತ್ತಿರಲಿಲ್ಲ. ನಾನ್ಗೂ ಅಷ್ಟೆ, ಮಾತು ಆಡಿಸುವುದು ಎಂಬುದು ಬೆಟ್ಟಕ್ಕೆ ಬಂಡೆ ಹೊತ್ತಂತೆ ಎಂಬುದುಮೊದಲ ಬಾರಿಗೆ ಅರಿವಾಗಿತ್ತು. ಬಂಡೆಯನ್ನಾದರೂ ಮಾತಾಡಿಸಿಕೊಂಡು ಬರುತ್ತೇನೆ ಎನ್ನುವ ನಾನು ಸುಮ್ಮನೆ ಕುಳಿತಿದ್ದೆ.

ಆತ ಸುಂದರಾಂಗ. ಅವನ ಮುಖದಲ್ಲಿ ಸದಾ ಚಿಮ್ಮುತ್ತಿದ್ದ ಆ ಮುಗ್ಧ ನಗೆ, ಒಂದೇ ನೋಟಕ್ಕೆ ಇಷ್ಟವಾಗಿಬಿಡಬಲ್ಲ ಮೆದು ಮಾತು, ಸದಾ ನಗುವಿನ ಅಲೆಯ ಮಧ್ಯೆ ಇರುವ ಹುಡುಗ ಕೇವಲ ಎರಡು ವರ್ಷಗಳಲ್ಲಿ ಬದಲಾಗಿ ಹೋಗಿದ್ದ. ಅವನ ಇಡೀ ದೇಹವನ್ನಷ್ಟೆ ಅಲ್ಲದೆ ಮನಸ್ಸನ್ನೂ “ಚಿತ್” ಮಾಡಿಹಾಕಿದ್ದು ಅವನು ಹೇಳಿಕೊಳ್ಳಲಾಗದ ವಿಷಯಗಳು.

ಯಾಕೋ ಗೊತ್ತಿಲ್ಲ, ಹಗಲೂ ರಾತ್ರಿ ಸೆಕ್ಸ್ ಬೇಕು ಅನ್ನುತ್ತಾಳೆ. ಐದು ನಿಮಿಷ ಸಿಕ್ಕರೆ ಹಾಸಿಗೆ ಸಿದ್ಧ ಮಾಡುತ್ತಾಳೆ. ರಾತ್ರಿ ನಿದ್ದೆ ಅನ್ನುವುದು ಮರೆತು ವರ್ಷವಾಯಿತು. ಆಕೆ ಸೆಕ್ಸ್ ಮ್ಯಾನಿಯಾಕ್. ಆಕೆಗೆ ಗೊತ್ತಿರುವುದು ಒಂದೇ- ಬೇಕು, ಬೇಕು, ಇನ್ನೂ ಬೇಕು. ನಾನು ಮೆಷಿನ್ ಅಲ್ಲ. ಮನಸ್ಸು ಎಂಬುದು ಇಲ್ಲದೆ ಹಾಸಿಗೆಯಲ್ಲಿ ಹೊರಳಾಡುವುದಾದರೂ ಹೇಗೆ, ದಿನದ ೨೪ ಗಂಟೆಯೂ ಎಂದು ಕೇಳುತ್ತಿದ್ದ. ಆತನ ಮುಖದಲ್ಲಿದ್ದ ದುಗುಡ ಇನ್ನೇನು ಕಣ್ಣೀರಾಗಿ ಪರಿವರ್ತನೆ ಹೊಂದಲು ತಯಾರಿ ನಡೆಸಿತ್ತು.

ಬಹುಷಃ ಒಂದು ಐದು ವರ್ಷದ ಹಿಂದೆ ಇರಬೇಕು. ನನ್ನ ಗೆಳತಿಯೊಬ್ಬಳು ಅಂತರಂಗದ ಮಾತುಗಳನ್ನು ನನ್ನ ಮುಂದೆ ಬಿಚ್ಚಿಟ್ಟಿದ್ದಳು. ಇಲ್ಲ, ನನಗೆ ಹಾಸಿಗೆ ಅನ್ನೋದು ಕಂಡರೆ ಆಗಲ್ಲ. ಇನ್ನು ಮದುವೆ ಅಂತ ಹೇಗೆ ಆಗಲಿ? ಯಾರೋ ಮೈಮುಟ್ತಾರೆ. ನನ್ನ ಖಾಸಗಿ ಲೋಕವನ್ನ್ ಕೊಳ್ಳೆ ಹೊಡೀತಾರೆ ಅನ್ನೋದನ್ನ ಹೇಗಾದರೂ ಸಹಿಸಿಕೊಳ್ಳಲಿ? ಆಗಲ್ಲ ಅಂದಳು. ಮನೆಯಲ್ಲಿ ಮದುವೆಗಾಗಿ ಮಾಡ್ತಾ ಇದ್ದ ಎಲ್ಲಾ ಪ್ರಯತ್ನವನ್ನೂ ಉಹೂಂ ಎಂಬ ಒಂದೇ ಮಾತಲ್ಲಿ ಕೊಚ್ಚಿ ಹಾಕ್ತಿದ್ಲು.

rapist.jpg

ಈ ಇಬ್ಬರೇ ಅಲ್ಲ. ಯಾಕೋ ನಾನು ಕಂಡರೆ ಸಾಕು, ಇಂತಹ ನೂರಾರು ಕಥೆ ಹರಡಿಕೊಳ್ಳುವ ಗೆಳೆಯರಿದ್ದಾರೆ. ಈತ ನನ್ನ “ಅಂತರಂಗದ ಗೆಳೆಯ” ಎಂದು ನನ್ನ ಎರಡು ಪಟ್ಟು ವಯಸ್ಸಿನ ಆಕೆ ಹೇಳಿದಾಗ ಇಡೀ ನನ್ನ ಗೆಳೆಯರ ಸಮೂಹ ಬೆರಗಾಗಿತ್ತು. ನನಗೂ ಅಷ್ಟೆ. ಯಾಕೋ ಗೊತ್ತಿಲ್ಲ, ಯಾರ ಬಳಿ ಏನೂ ಹೇಳಿಕೊಳ್ಳಲು ಸಾಧ್ಯವಾಗದಿದ್ದರೂ ಎಲ್ಲರಿಗೂ ಚೆನ್ನಾಗಿ ಕಿವಿಯಾಗಲು ಗೊತ್ತು. ಅಥವಾ ನಾನುಂಡು ಬಂದ ನೆನಪುಗಳು ಅವರ ಕಥೆಗಳನ್ನು ಹಿಡಿದಿಡಲು ಸರಿಯಾದ ಪಾತ್ರೆಯನ್ನು ಒದಗಿಸುತ್ತಿದೆಯೇನೊ? ಕಥೆ ಕೇಳಿ ನಾನು ಎಷ್ಟು ಬದುಕು ಬದಲಿಸಿಕೊಂಡಿದ್ದೇನೆ ಗೊತ್ತಿಲ್ಲ. ಆದರೆ ಆ ನೂರೆಂಟು ಗುಟ್ಟುಗಳನ್ನು ಹೇಳಿಕೊಳ್ಳಲಾಗದೆ ಚಡಪಡಿಸುವವರಿಗೆ ಸದಾ ಒಂದಿಷ್ಟು ರಿಲೀಫ್ ನೀಡುವ ಕಿವಿಯಾಗಿದ್ದೇನೆ.

ಇದನ್ನೇ ಅಲ್ಲವ ಆ ವಿದ್ವಾಂಸರು ಹೇಳಿದ್ದು “ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು” ಅಂತ. ಅವರ ಆ ಲೇಖನದಲ್ಲಿ ಹೇಳಿದ್ರು- ಒಂದು ಮನೆ ನೋಡಿದರೆ, ಒಂದು ಕಸೂತಿ ಗಮನಿಸಿದರೆ ಅದು ಮನೆಯ ಅಷ್ಟೇ ಅಲ್ಲದೆ, ಅಲ್ಲಿರುವವರ ಮನಸ್ಸಿನ ಕಥೆಯನ್ನೂ ಹೇಳುತ್ತೆ ಅಂತ. ಅಂತಹ ಮನಸ್ಸಿನ ಕಟ್ಟಡಗಳಿಗೆ ಒಂದು ಕಿಟಕಿ ಇಡೋ ಕಾರ್ಪೆಂಟರ್ ಕೆಲಸ ನನಗೆ ಸದಾ ಇಷ್ಟ.

ಆ ಹುಡುಗನ್ನ ಸಮಾಧಾನ ಮಾಡ್ತಾ ಹೋದೆ. ಆತ ಕಣ್ಣೀರ್‍ಆಗಿ ಹೋದ. ನೂರೆಂಟು ಎಳೆಗಳನ್ನೆಲ್ಲಾ ಹಿಡಿದು ಸಾಗಿದ ನಂತರ ಆತ ಹೇಳ್ದ. ಡಾಕ್ಟರ್ ಹೇಳ್ತಾರೆ- ಇದು ಮಾನಸಿಕವಾದ ಖಾಯಿಲೆ. ಬಾಲ್ಯದಲ್ಲಿ ಈಕೆಯ ಮೇಲೆ ಸೆಕ್ಸುವಲ್ ಹೆರಾಸ್ ಮೆಂಟ್ ಆಗಿದೆ. ಇವಳನ್ನ ಲೈಂಗಿಕ ಲೋಕಕ್ಕೆ ಅಪಕ್ವ ವಯಸ್ಸಿನಲ್ಲಿ ಎಳೆದಿದ್ದಾರೆ. ಅದು ಈಗ ಒಂದು ಸಿಂಪ್ಟಮ್ ಆಗಿದೆ ಎಂದರು ಅಂತ.

ಆ ನನ್ನ ಇನ್ನೊಬ್ಬ ಗೆಳತಿಯನ್ನೂ ಸಮಾಧಾನ ಮಾಡ್ತಿದ್ದೆ. ದೇಹ ಅನ್ನೋದು ಸಂಭ್ರಮ, ಖಾಯಿಲೆಯಲ್ಲ ಅಂತ. ಆಗ ಅವಳೂ ಸಹ ಕಣ್ಣೀರ್‍ಆಗಿದ್ಲು. ಇನ್ನೂ ಮೂರನೆಯದೋ ನಾಲ್ಕನೆಯದೋ ಕ್ಲಾಸಿನಲ್ಲಿದ್ಲು. ಮನೇನಲ್ಲಿ ಸಂಭ್ರಮ.
 ಯಾವುದೋ ಕಾರ್ಯಕ್ರಮ. ಎಲ್ಲಾರೂ ಇರೋ ಜಾಗದಲ್ಲೇ ಅಡ್ಜಸ್ಟ್ ಮಾಡ್ಕೊಂಡು ಮಲಗಬೇಕಾಗಿತ್ತು. ಸರಿ ರಾತ್ರಿಯಲ್ಲಿ ಅಣ್ಣ ಅಂತಾ ಅನಿಸ್ಕೋತಾ ಇದ್ದ ಸಂಬಂಧಿ ಅವಳ ಮೇಲೆ ಆಕ್ರಮಣ ಮಾಡಿದ್ದ. ಲೈಂಗಿಕ ಆಕ್ರಮಣ. ಅವಳು ತತ್ತರಿಸಿ ಹೋಗಿದ್ಲು. ಅವಳ ಜನ್ಮಜನ್ಮಕ್ಕೂ ಸೆಕ್ಸ್ ಅನ್ನೋದು ಸಂಭ್ರಮದ ವಿಷಯ ಆಗೋಕೇ ಸಾಧ್ಯವಿರಲಿಲ್ಲ. ಇನ್ನು ಮದುವೆ ಅಂತಾ ಹೇಗೆ ಆಗ್ಲಿ ಅಂತಾ ಪ್ರಶ್ನೆ ಮಾಡ್ತಾ ಇದ್ಲು.

ಇಷ್ಟೇನಾ ಅಂದ್ರೆ ಅದು ಇಷ್ಟೇ ಅಲ್ಲ. ಇದು ಇವರಿಬ್ಬರ ಕಥೇನಾ ಅಂದ್ರೆ ಇಬ್ಬರ ಕಥೆ ಮಾತ್ರಾ ಇರಲಿಲ್ಲ. ಎಲ್ಲೋ ಓದಿದ್ದೆ. ಒಬ್ಬ ಹುಡುಗಿ “ಮೆಮೋರೀಸ್ ಆಫ್ ಫಿಯರ್” ಅನ್ನೋ ಡಾಕ್ಯುಮೆಂಟರಿ ನೋಡಿ ಹೇಳಿಕೊಂಡಿದ್ದ ಕಥೆ. ಸಿಂಪಲ್ ಅನ್ನಿಸಿಬಿಡುತ್ತೆ ಕೇಳೋಕ್ಕೆ. ಆದ್ರೆ ಉಳುಸಿದ ಗಾಯ ಮಾತ್ರ ಮುಲಾಮು ಸಿಗದೆ ಒದ್ದಾಡುತ್ತೆ. ಯಾವುದೋ ಸರ್ವಜನಿಕ ಸಮಾರಂಭ. ಗಣೇಶನ ಮೆರವಣಿಗೇನೋ ಏನೋ ಇರಬೇಕು. ಹೈಸ್ಕೂಲಿನಲ್ಲಿ ಓದ್ತಿದ್ದ ಹುಡುಗಿ ಈಕೆ. ಗುಂಪಿನಲ್ಲಿ ಒಂದು ಕೈ ಎಲ್ಲಿಂದಾನೋ ಬಂದು ಎಲ್ಲೆಲ್ಲೋ ಮುಟ್ಟಿ, ಏನು ಆಗ್ತಿದೆ ಅಂತಾ ಗೊತ್ತಾಗೋದ್ರಲ್ಲಿ ಮಾಯ ಆಗಿಬಿಡುತ್ತೆ. ಅವಳು ಆ ಭಯವನ್ನು ಹೊದ್ದುಕೊಳ್ಳಬೇಕು. ಇಡೀ ಬದುಕಿನ ತುಂಬಾ. ಇನ್ನು ಮದುವೆ, ಹಾಸಿಗೆ ಅಂದ್ರೆ ಆ ದೇಹ ಏನು ಮಾಡಬೇಕು?

ಇನ್ನೊಬ್ಬ ಗಳತಿ. ಆಕೆಗೆ ಉತ್ಕಟವಾದ ಆಸೆ. ಇದ್ದಷ್ಟು ದಿನದಲ್ಲಿ ಊರನ್ನೆಲ್ಲಾ ಕೊಳ್ಳೆ ಹೊಡೀಬೇಕು ಅಂತಾ. ಮಿಲನ ಮ್ಹೋತ್ಸವ ಸದಾ ಜಾರಿಯಲ್ಲಿರಬೇಕು ಅಂತಾ. ಸುಸ್ತಾಗಬೇಕು ಸದಾ ಅನ್ನೋ ಹಂಬಲ. ಆಫೀಸಾದ್ರೇನು? ಮನೆ ಅದ್ರೇನು? ಜನರಿಗೆ ಗೊತ್ತಾದ್ರೇನು? ನೋ- ಇದೆಲ್ಲಾ ಪ್ರಾಬ್ಲೆಮ್ಮೇ ಅಲ್ಲ. ಬೇಕಾಗಿರೋದು ಮಿಲನಕ್ಕೆ ಇನ್ನೊಂದು ದೇಹ ಅಷ್ಟೆ.

ಪಿಂಕಿ ವಿರಾನಿ ನೆನಪಿಗೆ ಬಂದಳು. “ಬಿಟರ್ ಚಾಕ್ಲೇಟ್” ಅನ್ನೋ ಪುಸ್ತಕ ಬರೆದಿದಾಳೆ. ಓದಿದರೆ ಯಾಕೆ ಲೋಕ ಈ ರೀತಿ ಇದೆ ಅನಿಸುತ್ತೆ. ಒಬ್ಬ ರೇಪಿಸ್ಟ್ ಎಲ್ಲಿಂದಾನೋ ಹುಟ್ಟಿ ಬರಲ್ಲ. ಆತ ಚಿಕ್ಕಪ್ಪ, ಅಪ್ಪ, ಗೆಳೆಯ, ಅಪ್ಪನ ಗೆಳೆಯ ಆಗಿರ್‍ತಾನೆ ಅಂತಾರೆ ಪಿಂಕಿ ವಿರಾನಿ. ಆಕೆ ಕೂಡ ಇಂಥ ಆಕ್ರಮಣದಿಂದ ಬೆಚ್ಚಿಬಿದ್ದಾಕೆ. ಆದ್ರೆ ಆಕೆ ಷಾಕ್ ಆಗಿ ಅಲ್ಲಿಗೇ ನಿಲ್ಲಲಿಲ್ಲ. ಈ ಥರಾ ಏನೆಲ್ಲಾ ಅಗ್ತಿದೆ ಅಂತಾ ಹುಡುಕ್ತಾ ಹೋದ್ಲು. ಆಗಲೇ ಗೊತ್ತಾಗಿದ್ದು, ರೇಪಿಸ್ಟ್ ಅನ್ನೋನು ನಮ್ಮ ಮನೆಯಲ್ಲೇ ಇರ್‍ತಾನೆ ಅಂತ.

ಫಸ್ಟ್ ಆಫ್ ಆಲ್ ಸೆಕ್ಸ್ ಅನ್ನೋದೆ ಎರಡು ದೇಹಗಳ್ ನಡುವಿನ ಭಾಷೆ. ಆ ಭಾಷೆ ಬೈಗುಳವಾಗಲೂಬಹುದು. ಇಲ್ಲ, ಸಂಭ್ರಮದ ಕಡಲಲ್ಲೂ ತೇಲಿಸಬಹುದು.

ಮಕ್ಕಳಿಗೆ ಏನು ಗೊತ್ತಾಗುತ್ತೆ? ಎಷ್ಟು ಮಕ್ಕಳನ್ನ ನೋಡಿದ್ದೀನಿ. ಇನ್ಫ್ಯಾಕ್ಚುಯೇಷನ್ನಿನಲ್ಲಿ ಬಿದ್ದು ಒದ್ದಾಡ್ತಾರೆ. ಯಾರೋ ಸೈಕಾಲಜಿಸ್ಟ್ ಹೇಳ್ತಾ ಇದ್ರು. ಅವರ ಭಾಷೇನಲ್ಲಿ ಇದಕ್ಕೆ ಎಳೆಗರುವಿನ ಪ್ರೀತಿ ಅಂತಾರಂತೆ. ದೇಹ ಅನ್ನೋದು ಹಲವು ಮಿಡಿತಗಳನ್ನ ಹೊಮ್ಮಿಸುತ್ತೆ. ಅದು ಪ್ರೀತೀನೋ, ಆಕ್ರಮಣಾನೋ ಅಂತಾ ದೇಹ ತುಂಬಾ ಯೋಚನೆ ಮಾಡ್ತಾ ಕೂರಲ್ಲ.

ನನ್ನ ಫ್ರೆಂಡ್ ಒಬ್ಬಳು ಇದ್ಲು. ಅವಳಿಗೆ ಋತುಮತಿ ಆಗೋದು ಅನ್ನೋದೇ ಏನೂ ಅಂತಾ ಗೊತ್ತಿರಲಿಲ್ವಂತೆ. ಮೊದಲ ಬಾರಿ ಕೆಂಪಾಗಿ ಹೋದಾಗ ಇದನ್ನ ಹೇಳಬೇಕೋ ಬೇಡವೋ ಅಂತಾ ಒದ್ದಾಡಿ ಹೋಗಿದಾಳೆ. ಋತುಮತಿಯಾಗಿ ಮೂರು ದಿನ ಆದ್ರೂ ಮನೇನಲ್ಲಿ ಬಾಯಿಬಿಟ್ಟಿರಲಿಲ್ಲ. ಆ ಹುಡುಗಿಯೇನು ಒಬ್ಬಂಟಿಯಲ್ಲ. ಆಕೆಗೆ ಮೂವರು ಅಕ್ಕಂದಿರು ಇದ್ದಾರೆ. ಆದ್ರೂ ಏನ್ಮಾಡೋದು. ಮನೇನಲ್ಲಿ ಇದು ಮಾತನಾಡೋ ವಿಷಯವಾಗಿ ಮಾಡಿಲ್ಲ.

“ಪ್ರತೀ ಗಳಿಗೆ ಸೆಕ್ಸ್ ಬೇಕು” ಅನ್ನೋರೂ ಅಷ್ಟೆ, “ಇಲ್ಲಾ, ಐ ಕಾಂಟ್, ನನ್ನ ಬಾಡಿ ಕೋಆಪರೇಟ್ ಮಾಡಲ್ಲ” ಅನ್ನೋರೂ ಅಷ್ಟೆ ಇಬ್ಬರೂ ನರಳ್ತಾ ಇದಾರೆ. ದೇಹ, ಮನಸ್ಸು ಎರಡೂ ಖಾಯಿಲೆಯಿಂದ. ಆದ್ರೆ ಅದಕ್ಕೆ ಒಬ್ಬ ಡಾಕ್ಟರ್ ಬೇಕು. ಸಾಂತ್ವನ ಹೇಳ್ಬೇಕು. ಮನಸ್ಸಿನಲ್ಲಿ ಭದ್ರವಾಗಿ ಊರಿ ನಿಂತಿರೋ ಕಲೆಯನ್ನ ತೆಗೀಬೇಕು ಅನ್ನೋದು ಯಾರಿಗೂ ಗೊತ್ತಾಗ್ತಿಲ್ಲ. ಇಡೀ ಬದುಕು ನರಕ ಆಗೋಗುತ್ತೆ. ಹಾಸಿಗೆ ಅನ್ನೋದು… ಹೇಗೆ ಹೇಳೋದಪ್ಪ? ನೋವಿನ ಗೂಡಾಗಿ ಹೋಗುತ್ತೆ.

ನಾನು ಯೋಚಿಸ್ತೀನಿ.          ನನ್ನ ಚಿಕ್ಕಪ್ಪ ಹೀಗೆ ಮಾಡ್ದ ಅಂತಾ ಹೇಳೋ ಅವಕಾಶ ಮಾಡಿಕೊಟ್ಟಿದೀವಾ? ಅಮ್ಮ ನಿನ್ನ ತಮ್ಮ ನನ್ನನ್ನ ಪೀಡಿಸ್ದಾ ಅಂತಾ ಹೇಳೋದಕ್ಕೆ ಬಿಟ್ಟಿದೀವಾ? ಇತ್ತೀಚೆಗೆ ಇನ್ನೂ ಎರಡನೇ ಕ್ಲಾಸಿಗೋಗೋ ಪುಟಾಣೀನ ಸ್ಕೂಲ್ ಬಸ್ಸಿನ ಕ್ಲೀನರ್ ಯಾರಿಗೂ ಗೊತ್ತಾಗದ ಹಾಗೆ ಕಿಸ್ ಮಾಡ್ತಿದ್ನಂತೆ. ಅವಳು ಗಾಬರಿ ಆಗಿದಾಳೆ. ಏನು ಎತ್ತ ಗೊತ್ತಾಗ್ತಿಲ್ಲ. ಇದು ಗೊತ್ತಾಗಿ ಇಡೀ ಮನೆ ಅಲ್ಲಡಿ ಹೋಗಿತ್ತು.

ಇದೆಲ್ಲಾ ಯಾಕೆ ಜ್ಞಾಪಕ ಬಂತು ಅಂದ್ರೆ ಇತ್ತೀಚೆಗೆ ಯಾವುದೋ ಫಂಕ್ಷನ್ನಿಗೆ ಹೋಗಿದ್ದೆ. ಯಥಾ ಪ್ರಕಾರ ಯರ್‍ಯಾರು ಎಲ್ಲೆಲ್ಲಿ ಮಲಗಬೇಕು ಅಂತಾ ಡಿಸೈಡ್ ಮಾಡಿದ್ರು. ಅವರು ಮಾಡಿದ ಡಿಸೀಷನ್ನುಗಳನ್ನು ನೋಡಿ ಇದೆಲ್ಲಾ ಜ್ಞಾಪಕಕ್ಕೆ ಬಂತು. ಎಷ್ಟು ಸಿಂಪಲ್ಲಾಗಿ ಎಷ್ಟು ದೊಡ್ಡ ಮಿಸ್ಟೇಕ್ ಮಾಡಿಬಿಡ್ತೀವಿ ಅಲ್ವಾ?

ಸುಬ್ಬಣ್ಣ ಮೇಷ್ಟ್ರ ಸುತ್ತಮುತ್ತ…

door_number1422.jpg

“ಡೋರ್ ನಂ. 142”

ಬಹುರೂಪಿ

“ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ರಾಘವೇಂದ್ರಸ್ವಾಮಿಗೆ ಸುಬ್ಬಣ್ಣ ಮೇಷ್ಟ್ರಿಂದ ವಿಶೇಷ ಬಹುಮಾನ…”

ಚಡ್ಡಿ ಏರಿಸಿಕೊಂಡು ಐದನೇ ಕ್ಲಾಸಿನಲ್ಲಿದ್ದ ನಾನು ನಾಟಕ ನೋಡಲು ಕಣ್ಣು ಕಿವಿಯಾಗಿ ಕೂತಿದ್ದೆ. ನಮ್ಮ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಏಳನೆಯ ಕ್ಲಾಸಿನವರು “ಭಕ್ತ್ ಧ್ರುವ” ಆಡುತ್ತಾರೆ ಅನ್ನುವುದನ್ನು ಘೋಷಿಸಿ ಆಗಿತ್ತು. ಹಾಗಾಗಿ ಊರಿಗೆ ಮುಂಚೆ ಅನ್ನುವಂತೆ ಹಾಜರಾಗಿ ಅತಿ ಮುಂದಿನ ಸಾಲಿನಲ್ಲಿ ಕುಳಿತುಬಿಟ್ಟಿದ್ದೆ. ಆಗಲೇ ಈ ಅನೌನ್ಸ್ ಮೆಂಟ್ ಬಂದದ್ದು.

ನನಗೋ ಇನ್ನಿಲ್ಲದ ಅಚ್ಚರಿ. ಅಣ್ಣನಿಗೆ ಪ್ರೈಜ್ ಕೊಡ್ತಾ ಇದಾರೆ ಅಂತ. ಅದರಲ್ಲೂ ಯಾವಾಗಲೂ ಉರಿ ಉರಿ ಎನ್ನುತ್ತಿದ್ದ, ಕ್ಲಾಸಿನಲ್ಲೇ ಇತರ ಉಪಾಧ್ಯಾಯರೊಂದಿಗೆ ಜಗಳ ಆಡುವ ತಾಖತ್ತಿದ್ದ ಸುಬ್ಬಣ್ಣ ಮೇಷ್ಟ್ರಿಂದ ಈ ಸ್ಪೆಷಲ್ ಪ್ರೈಜ್ ಅನ್ನೋದು ಇನ್ನೂ ವಿಸ್ಮಯಕ್ಕೆ ಕಾರಣವಾಗಿತ್ತು. ಅಲ್ಲದೆ ಇದು ಸ್ಕೂಲಿನವರು ಕೊಡ್ತಾ ಇರೋ ಪ್ರೈಜ್ ಅಲ್ಲ. ಸುಬ್ಬಣ್ಣ ಮೇಷ್ಟ್ರು ತಮ್ಮ ಕೈಯಿಂದ ಖರ್ಚು ಮಾಡಿ ಇಂಡಿಯಾ ಮ್ಯಾಪ್ ಕೊಂಡುಕೊಂಡು ಬಂದು ಕೊಡ್ತಾ ಇದಾರೆ.

sogasu1.jpg

ಆಗಿದ್ದೇನಪ್ಪಾ ಅಂದ್ರೆ… ಕನ್ನಡದಲ್ಲಿ ಇಬ್ರಿಗೆ ಒಂದೇ ಮಾರ್ಕ್ಸ್ ಬಂದುಬಿಟ್ಟಿತ್ತು. ಆದರೆ ಇರೋದು ಒಂದೇ ಪ್ರೈಜ್. ಹಾಗಾಗಿ ಸ್ಕೂಲಿನವರು ಲಕ್ಕಿ ಡಿಪ್ ತೆಗೆಯೋಣ, ಯಾರಿಗೆ ಬರುತ್ತೋ ಅವರಿಗೆ ಬಹುಮಾನ ಅಂತ ತೀರ್ಮಾನ ಮಾಡಿದರು. ಪ್ರಜ್ ಇನ್ನೊಬ್ಬ ಹುಡುಗಿಯ ಪಾಲಾಯ್ತು. ಅಣ್ಣನಿಗೆ ಬರಲಿಲ್ಲ. ಆದ್ರೆ ಇದು ಸುಬ್ಬಣ್ಣ ಮೇಷ್ಟ್ರನ್ನ ಕಾಡಿದ್ದು ಏಕೆ ಅನ್ನೋದೇ ನನಗೆ ಅವತ್ತಿನಿಂದ ಇವತ್ತಿನವರೆಗೂ ತಲೆಯೊಳಗೆ ನಾಟ್ಯವಾಡ್ತಿದೆ. ಸದಾ ಗರಂ ಆಗಿರೋ ಸುಬ್ಬಣ್ಣ ಮೇಷ್ಟ್ರು ಯಾಕೆ ಈ ನಿರ್ಧಾರ ಕೈಗೊಂಡರು? ಯಾಕೆ ಖರ್ಚು ಮಾಡಿದರು?

ನಮ್ಮ ಸ್ಕೂಲು ಸರ್ಕಾರಿ ಸ್ಕೂಲೇ. ಆದರೆ ತುಂಬಾ ಫೇಮಸ್ಸು. ಆವಾಗ ಕಾನ್ವೆಂಟ್ ಅನ್ನೋ ಕ್ರೇಜೂ ಇರಲಿಲ್ಲ. ಹೀಗಾಗಿ ದುಡ್ಡಿದ್ದೋರು, ಇಲ್ಲದೋರು, ಇವೆರಡರ ಮಧ್ಯದಲ್ಲಿರೋರು ಎಲ್ಲಾ ಒಂದೇ ಸ್ಕೂಲಲ್ಲಿ ಸೇರ್‍ತಿದ್ರು. ಒಂದು ಕಡೆ ಸುಬ್ಬಣ್ಣ ಮೇಷ್ಟ್ರು. ಇನ್ನೊಬ್ಬರಿದ್ದರು, ಶಾಸ್ತ್ರಿ ಮೇಷ್ಟ್ರು. ಕನ್ನಡಾನ ಅದ್ಭುತವಾಗಿ, ಕಣ್ಣಿಗೆ ಕಟ್ಟೋ ಹಾಗೆ, ಮನಸ್ಸಿಗೆ ಮುಟ್ಟೋ ಹಾಗೆ, ಪರೀಕ್ಷೆ ಹಾಳೆಯಲ್ಲಿ ಚಕಚಕಾ ಉತ್ತರ ಬರೆಯೋ ಹಾಗೆ ಪಾಠ ಮಾಡ್ತಿದ್ರು. ಅವ್ರು ಕ್ಲಾಸಿನಲ್ಲಿ ಸದಾ, “ಮನೇಲಿರೋ ಹಳೇ ಎಕ್ಕಡಾ ತಗೊಂಡು ನಾಲಿಗೆ ತಿಕ್ಕಿಕೊಂಡು ಬನ್ರೋ” ಅಂತಾ ಬಯ್ಯೋರು.

ಎಲ್ಲರ್‍ಗೂ ಬೈದಿದ್ರೆ ಪರವಾಗಿಲ್ಲ. ಆದ್ರೆ ನಮ್ಮ ಸ್ಕೂಲ್ ಪಕ್ಕಾನೇ ಆಗ ಹಳ್ಳಿ ಅನ್ನಿಸ್ಕೊಂಡ ಹಳ್ಳಿ ಇತ್ತು. ಅಲ್ಲಿಂದ ಎಲ್ಲಾ ಮಕ್ಕಳೂ ಈ ಶಾಲೆಗೇ ಬರ್‍ತಿದ್ರು. ಅವ್ರ ಮೇಲೆ ಮಾತ್ರ ಈ ವಕ್ ಪ್ರವಾಹ ಇರ್‍ತಿತ್ತು. ಉತ್ತರ ಹೇಳದಿದ್ರೆ ಮೂಗು ಹಿಡಿಸಿ ಕಪಾಳಕ್ಕೆ ಬಡಿಸೋರು. “ಮೂಗಲ್ಲಿ ಗೊಣ್ಣೆ ನೋಡು” ಅಂತಾ ಹಂಗಿಸ್ತಿದ್ರು. “ನಾಲಗೆ ತಿರುಗಲ್ಲ” ಅಂತಾ ಚುಚ್ಚುತಿದ್ರು.

ಡಿಗ್ರಿಗೆ ಬಂದಾಗ ಮೇಡಂ ಒಬ್ಬರಿದ್ರು. ನಾಟಕದ ಸ್ಕ್ರಿಪ್ಟ್ ಓದಬೇಕಾಗಿತ್ತು. ಹೇಗೆ ಓದಿದರೂ ತಪ್ಪು. ಮಾತೆತ್ತಿದರೆ “ನಿನ್ನ ಕಣ್ಣ ಸುತ್ತ ಇರೋ ಕಪ್ಪು ರಿಂಗ್ಸ್ ನೋಡು” ಅನ್ನೋರು. ಬೇರೆಯವರನ್ನ ನೋಡ್ತಿದ್ದೆ. ಕ್ಲಾಸಲ್ಲಿ ನನ್ನ ಬಿಟ್ರೆ ಇದ್ದಿದ್ದೇ ಇನ್ನಿಬ್ರು. ಅವರು ನನಗಿಂತ ಕೆಟ್ಟದಾಗಿದಾರೆ ಅಂತಾನೇ ನನಗನಿಸ್ತಾ ಇತ್ತು. ಆದ್ರೆ ಮೇಡಂ ಏನೂ ಹೇಳ್ತಾ ಇರ್‍ಲಿಲ್ಲ. ನನಗೆ ಮಾತ್ರ ಈ ಕಪ್ಪು ರಿಂಗ್ಸ್ ಜ್ವರ ಹಿಡಿಸಿಬಿಟ್ರು.

ಈ ಎಲ್ಲದಕ್ಕೂ ಸುಬ್ಬಣ್ಣ ಮೇಷ್ಟ್ರ ಘಟನೇಗೂ ಸಂಬಂಧ ಇದೆಯಾ ಅಂತ ಯೋಚಿಸ್ತೀನಿ. ಸುಬ್ಬಣ್ಣ ಮೇಷ್ಟ್ರು ಅಷ್ಟು ಉರ ಉರಾ ಅಂತಾ ಇದ್ದದ್ದಕ್ಕೆ ಕಾರಣ ಇರಬೇಕೇನೋ ಅನ್ಸುತ್ತೆ.

ರಾಗಿ ಮಿಷಿನ್ನಿಗೆ ಹೋಗಿ ರಾಗಿಯನ್ನು ಚೆನ್ನಾಗಿ ಹಿಟ್ಟು ಮಾಡಿಸಿಕೊಂಡು ಬರಬೇಕಿತ್ತು. ಒಂದ್ಸಲಾ ರಾಗಿ ಮಿಷಿನ್ನಿಗೆ ಹೋದಾಗ “ಮುಟ್ಟಬೇಡ, ಹತ್ರ ನಿಲ್ಲಬೇಡ” ಅಂತಾ ಒಬ್ಬ ಅಜ್ಜಿ ವರಾತ ಶುರು ಮಾಡ್ಬಿಟ್ರು. ನಾನು ಹತ್ರಾನೂ ಹೋಗಿರ್‍ಲಿಲ್ಲ. ಮುಟ್ಟೂ ಇರ್‍ಲಿಲ್ಲ. ಆದ್ರೆ ಮುಖ ನೋಡಿದ್ದೇ ದರಿದ್ರ ಅನ್ನೋ ಹಾಗೆ ಬೈಯ್ತಾ ಇದ್ರು. ನನಗೂ ಆಸೆ ಆಯ್ತು, ಮುಟ್ಟೇಬಿಡಬೇಕು ಅಂತಾ. ಮಿಷಿನ್ನಿನಿಂದ ಬರೋವಾಗ ಅಕಸ್ಮಾತ್ ಅನ್ನೋ ಹಾಗೆ ಮುಟ್ಟೇಬಿಟ್ಟೆ. ರಂಪರಾಮಾಯಣ ಆಗೋಯ್ತು. ನನಗೂ ಒಂಥರಾ ಖುಷಿ ಆಯ್ತು. ಹೀಗೆ ಮಾಡ್ದಾಗ ನನ್ನ ಮನಸ್ಸಲ್ಲಿ ಸುಬ್ಬಣ್ಣ ಮೇಷ್ಟ್ರು ಇದ್ದರಾ?

ತುಂಬಾ ಕ್ಲೋಸ್ ಫ್ರೆಂಡ್ ಮದುವೆ ಇತ್ತು. ಊಟಕ್ಕೆ ಕೂತ್ವಿ. ತಕ್ಷಣ ಊಟ ಮಾಡ್ಬಾರ್‍ದು, ಬಂದಿರೋ ಪುರೋಹಿತರು ತಿನ್ನೋವರ್‍ಗೂ ಅಂದ್ರು. ನನಗೂ ಹೊಟ್ಟೆ ಇತ್ತಲ್ಲಾ, ಹಸೀತಿತ್ತು. ಪುರೋಹಿತರ ಜೊತೆಗೇ ಊಟ ಮುಗಿಸ್ಬಿಟ್ಟೆ. ಅಕ್ಕಪಕ್ಕ ಇರೋರು ಬೈಕೊಂಡ್ರು. ಆದ್ರೆ ನಾನು ಕೂತಿದ್ದು ಊಟಕ್ಕಲ್ಲವಾ, ಊಟ ಮುಗಿಸಿದೆ. ಯಾರೂ ಎದ್ದೇಳೋ ಹಾಗಿಲ್ಲ. ಪಂಕ್ತಿ ಬಿಟ್ಟೇಳಬಾರದು ಅಂದ್ರು. ನನ್ನ ಊಟ ಮುಗಿದ ಮೇಲೆ ಅವರ ಮುಖ, ಇವರ ಮುಖ ನೋಡ್ತಾ ಕೂತಿರೋವಷ್ಟು ತಾಳ್ಮೆ ಆ ದೇವರೇ ನನಗೆ ಕೊಟ್ಟಿಲ್ಲ. ಎದ್ದೆ. ಕೈತೊಳಕೊಂಡೆ. ಹೀಗೆ ಮಾಡ್ದಾಗ ನನ್ನ ಮನಸ್ಸಲ್ಲಿ ಸುಬ್ಬಣ್ಣ ಮೇಷ್ಟ್ರು ಇದ್ದರಾ?

ನಮ್ಮಪ್ಪ “ಆಚೆ ನಿಂತ್ಕೊಳ್ಳಿ” ಅಂತ ಅವರ ಆಫೀಸಿನವರನ್ನೇ ಬೈದ್ರಲ್ಲಾ, ಅದು ಸುಬ್ಬಣ್ಣ ಮೇಷ್ಟ್ರಿಗೆ ಗೊತ್ತಿತ್ತಾ? ದೇವಸ್ಥಾನದಲ್ಲಿ ಅವತ್ತು ತುಂಬಾ ಬಲವಂತ ಮಾಡಿದ್ರು, ಊಟ ಮಾಡ್ಕೊಂಡೆ ಹೋಗ್ಬೇಕು ಅಂತಾ. ಮುಲಾಜಿಗೆ ಊಟಕ್ಕೆ ಕೂತಿದ್ದು. ನಮ್ಮನೇಲಿ ಎಷ್ಟು ಚೆನ್ನಾಗಿ ಬಡಿಸ್ತಾರೆ ಅಮ್ಮ. ಬಡಿಸೋದ್ರಲ್ಲೇ ಪ್ರೀತಿ ಗೊತ್ತಾಗಿಬಿಡುತ್ತೆ. ಆದ್ರೆ ದೇವಸ್ಥಾನದಲ್ಲಿ ಸೌಟು ಹಿಡಿದಿದ್ದ ಕೈ ಅಮ್ಮಂದಲ್ಲಾ ಅಂತಂತೂ ಗೊತ್ತಾಗಿ ಹೋಯ್ತು. ಸುಬ್ಬಣ್ಣ ಮೇಷ್ಟ್ರು ಸೌಟು ಹಿಡ್ಕೊಂಡರೆ ಹೇಗಿರಬಹುದು ಅಂತ ಅನ್ಕೋತೀನಿ.

“ಮಣೆಗಾರ” ಪುಸ್ತಕ ಓದ್ತಾ ಇದ್ದೆ. ಮರಾಠಿಯ ಆತ್ಮಕಥೆಗಳನ್ನು ಓದಿದೆ. ಅಯ್ಯೋ ಶಿವನೆ! ನಮ್ಮನೇಲಿ ಹಸು ಇದ್ದಾಗ ಆ ಸಗಣಿ ಎಲ್ಲಾ ಎತ್ತಾಕು ಅಂದ್ರೆ ಎಷ್ಟು ಒದ್ದಾಡಿ ಹೋಗ್ತಿದ್ದೆ. ಅಂಥಾ ಸಗಣೀನಲ್ಲಿರೋ ಕಾಳು, ಅದೂ ಹಸು ಹೊಟ್ಟೇಲಿ ಜೀರ್ಣ ಆಗದೇ ಹೊರಗೆ ಬಿದ್ದಿರೋ ಕಾಳು ಆಯ್ದುಕೊಂಡು ಅದನ್ನೇ ತಿನ್ತಾರಲ್ಲಾ, ಹೇಗಾಗಿರಬಹುದು? ಚಪ್ಪಲಿ ಹೊಲೀತಾನೇ ಕೊಳಲು ತನ್ನ ಜೋಳಿಗೇನಲ್ಲಿ ಸೇರ್‍ಕೊಂಡಿದ್ದು ಗೊತ್ತಾಗ್ಲಿಲ್ಲವಲ್ಲ? ಇದನ್ನೆಲ್ಲ, ಈ ಪುಸ್ತಕಾನೆಲ್ಲ ಸುಬ್ಬಣ್ಣ ಮೇಷ್ಟ್ರಿಗೆ ಕೊಡಬೇಕು ಅನ್ಸುತ್ತೆ.

ಎಷ್ಟೊಂದು ಜನಾ, ಎಷ್ಟೊಂದು ಹುಮ್ಮಸ್ಸು, ಎಷ್ಟೊಂದು ಕೆಲಸ… ಸುಬ್ಬಣ್ಣ ಮೇಷ್ಟ್ರು ತಲೇನಲ್ಲಿ ಸದಾ ಇರ್‍ತಾರೇನೋ. ನಾಲಗೆ ಉಜ್ಜು ಎಕ್ಕಡದಲ್ಲಿ ಅಂತ ಹೇಳಿದ ಮೇಷ್ಟ್ರೂ ಇರ್‍ತಾರೇನೋ… ನಾನು ಇಬ್ಬರನ್ನೂ ಅವರವರಿಗೇ ಎದುರಾಬದುರಾ ಕೂರಿಸ್ಬಿಡ್ತೀನಿ. ಯಾರ ಕಣ್ಣು ಹೊಳೆಯುತ್ತೋ, ಭೂಮಿ ಮೇಲೇ ಇದ್ರೂ ಬರೀ ಆಕಾಶ ಕಾಣುತ್ತೋ ಅಂಥವರನ್ನು ಆಯ್ದು ಬಗಲಲ್ಲಿ ಇಟ್ಕೋತೀನಿ.

“ಯೂ ಬ್ಲಡೀ ಆಯಿಲ್ ಫೇಸ್” ಅಂತಾ ಆ ಮೇಷ್ಟ್ರು ಹೈಸ್ಕೂಲಿನಲ್ಲಿ ಬೈಯ್ತಾ ಇದ್ದದ್ದು ಜ್ಞಾಪಕ ಬರುತ್ತೆ. ಹರಣೆಣ್ಣೆ ಕುಡಿದ ಮುಖ ಅಂತಾ ಅನ್ತಾ ಇದ್ರೇನೋ. ನನಗೆ ತಕ್ಷಣ ಗಾಬರಿ ಆಗ್ತಿತ್ತು. ಮುಖಾ ಎಲ್ಲಾ ಮುಟ್ಟಿ ನೋಡ್ಕೊಳ್ತಾ ಇದ್ದೆ. ಹರಳೆಣ್ಣೆ ಅಮ್ಮ ಭಾನುವಾರ ಮಾತ್ರ ಮೆತ್ತೋರು. ನನಗೆ ಗೊತ್ತಿಲ್ದೆ ಏನಾದ್ರೂ ಸ್ಕೂಲ ಇರೋ ದಿನಾನೂ ಹಾಕಿದ್ದರಾ? ಅದು ಸುರೀತ ಮುಖಕ್ಕೆ ಇಳಿದುಬಿಟ್ಟಿದೆಯಾ ಅಂತ ಚೆಕ್ ಮಾಡಿಕೊಳ್ತಿದ್ದೆ. ಅವಕಾಶ ಸಿಕ್ರೆ ನೊಟೀಸ್ ಬೋರ್ಡಿನಲ್ಲಿರೋ ಗಾಜಲ್ಲಿ ಮುಖ ನೋಡಿಕೊಳ್ತಿದ್ದೆ. ಹರಳೆಣ್ಣೆ ಇಲ್ಲ. ಸುಬ್ಬಣ್ಣ ಮೇಷ್ಟ್ರಿಗೆ ಹರಳೆಣ್ಣೆ ಕಥೆ ಗೊತ್ತಿದೆಯೊ ಇಲ್ಲವೊ ಯಾರಿಗ್ಗೊತ್ತು?

ನಿಮ್ಮೆಸ್ರು… ಗೊತ್ತಾಗಲಿಲ್ಲ… ನಿಮ್ಮ ಅಪ್ಪನ ಹೆಸರು… ನಿಮ್ಮ ಇನಿಶಿಯಲ್ ಎಕ್ಸ್ಪಾನ್ಷನ್ ಏನು… ಈ ಪ್ರಷ್ನೆ ಎಲ್ಲಾ ಈಗ ರೂಢಿ ಆಗ್ಬಿಟ್ಟಿದೆ. ನನ್ನ ಹೆಸ್ರು, ನಮ್ಮಣ್ಣಂದಿರ ಹೆಸರು ಅಕ್ಕತಂಗಿಯರ ಹೆಸರು… ನಮ್ಮಪ್ಪ ನಮಗೆ ನಾಮಕರಣ ಮಾಡೋವಾಗ ಅವರ ತಲೇಲೇನಾದ್ರೂ ಸುಬ್ಬಣ್ಣ ಮೇಷ್ಟ್ರು ಇದ್ರಾ? ಬ್ರಹ್ಮನಿಗೂ ಹುಡುಕೋಕ್ಕೆ ಸಾಧ್ಯವಿಲ್ಲ, ಅಂಥಾ ಹೆಸರು ಕೊಟ್ರು.

ರಾಘವೇಂದ್ರಸ್ವಾಮಿ ಭಜನೆ ಮಾಡಿ, ಅವರು ಬರೆದಿರೋ ಗ್ರಂಥ “ಪರಿಮಳ” ಅಂತಾ ಗೊತ್ತಿರೋ ನಮಗೆ, ರಾಘವೇಂದ್ರರ ಮಂತ್ರಾಲಯಕ್ಕೆ ತಪ್ಪದೇ ಹೋಗಿಬರೋ ಅಪ್ಪ ಅಮ್ಮ ಇರೋ ನಮಗೆ, ತಪ್ಪದೆ ಗುರುವಾರ ಒಂದು ಹೊತ್ತು ಉಪವಾಸ ಮಾಡೋ ನಮಗೆ ನಮ್ಮಪ್ಪ ಇನ್ನೇನು ಹೆಸರು ಇಡೋಕ್ಕೆ ಸಾಧ್ಯ?

ಇವರಿಗೆ ಪ್ರಶಸ್ತಿ ಕೊಡಲೇಬೇಕು ಅಂತಾ ಯಾರಾದ್ರೂ ಹೇಳಿದರೆ ಪ್ರಶಸ್ತೀನ ಮೂಸಿ ಮೂಸಿ ನೋಡೊಕಾಗುತ್ತೆ. ನಾನು ಯಾರು ಅಂತಾನೇ ಗೊತ್ತಿಲ್ಲದೋರಿಗೆ ನಾನು ಬಯೋಡೇಟಾದಲ್ಲಿ ಬರೀದೇ ಇರೋ ಒಂದು ವಿಷಯ ಅಂತೂ ಗೊತ್ತಾಗಿಬಿಟ್ಟಿರುತ್ತೆ. ಪ್ರಶಸ್ತಿ ತಗೊ ಅನ್ತಾರಾ, ಬಂದವ್ರನ್ನ ಉಗಿದು ಅಟ್ಟು ಅನ್ತಾರ ಸುಬ್ಬಣ್ಣ ಮೇಷ್ಟ್ರು ಅನ್ನೋ ಯೋಚನೆ ಬರುತ್ತೆ.

“ತಕ್ಷಣ್ ಬಂದು ಪ್ರಿನ್ಸಿಪಾಲನ್ನ ನೋಡ್ಬೇಕಂತೆ” ಅಂತ ಮಗಳ ಸ್ಕೂಲಿನಿಂದ ಬುಲಾವ್ ಬಂದಾಗ ಏನಾಯ್ತೋ ಅಂತಾ ಎದ್ದೂಬಿದ್ದೂ ಓಡೋಗ್ತೀವಿ. ಬೈ ದ ಬೈ. ಈ ಜಾತಿ ಕಾಲಂ ಯಾಕೆ ಖಾಲಿ ಬಿಟ್ಟಿದೀರಿ? ವೈ? ಅಂತಾರೆ. ಖಾಲಿ ಬಿಡಬಹುದು ಅಂತಾ ಸುಪ್ರೀಂ ಕೋರ್ಟೇ ಹೇಳಿರೋ ಪೇಪರ್ ಕಟಿಂಗ್ ಜೇಬಲ್ಲಿ ಇಟ್ಕೊಂಡೆ ಇರ್‍ಬೇಕು. ನಮ್ಮ ಸ್ಕೂಲಿಗೆ ಅದು ಅಪ್ಲೈ ಆಗೋಲ್ಲ ಅಂತಾರೆ. ಥೂ… ಸುಪ್ರೀಂ ಕೋರ್ಟಿಗೂ ಮೀರಿದೋರು ಇದಾರಲ್ಲಪ್ಪಾ ಅನ್ಸುತ್ತೆ. ಸುಬ್ಬಣ್ಣ ಮೇಷ್ಟ್ರಿಗೆ ಹೇಳ್ತಾ ಕೂರ್‍ಲಾ, ಈ ಸುಪ್ರೀಂ ಕೋರ್ಟ್ ಕಥೆ…?

Previous Older Entries

%d bloggers like this: