ಇಲ್ಲಿ ಚಂದ್ರಶೇಖರ್ ಆಲೂರು ಅವರು ಈಜಿಪ್ಟ್ ಬಗ್ಗೆ ತಮ್ಮ ಸ್ಪೆಷಲ್ ಒಳನೋಟವನ್ನು ನೀಡಿದ್ದಾರೆ. ಈ ಲೇಖನ ಬರೆಯುವ ವೇಳೆಗೆ ಮುಬಾರಕ್ ರಾಜಿನಾಮೆ ಘೋಷಿಸಿರಲಿಲ್ಲ.
–
ಅರಬ್ ಲೋಕವನ್ನು ಆವರಿಸಿದ ‘ಜಾಸ್ಮಿನ್ ಕ್ರಾಂತಿ’ಯ ಕಂಪು
chitra: satish Acharya
ಯಾವಾಗಲೂ ಮೊದಲು ಕೆಟ್ಟದ್ದೇ ನೆನಪಾಗುತ್ತದೆ ಎನ್ನುತ್ತಾರೆ. ಅಥವಾ ಮನಸ್ಸು ಕೆಡುಕನ್ನೇ ನಿರೀಕ್ಷಿಸುತ್ತದೆ. ಈಗ ಆಗಿದ್ದು ಅದೇ. ಅದೇಕೋ ಈಜಿಪ್ಟಿನ ಕೈರೊ, ಅಲೆಗ್ಝಾಂಡ್ರಿಯಾ, ಸುಯಜ್ ಮುಂತಾದ ನಗರಗಳಲ್ಲಿ ಆರಂಭದ ದಿನ ಬಂದ ಜೀನ್ಸ್ ಪ್ಯಾಂಟ್ ಟಿ-ಶರ್ಟ್ ನ ಯುವಕ ಯುವತಿಯರನ್ನು ಕಂಡಾಗ ನೆನಪಿಗೆ ಬಂದದ್ದು ೧೯೮೯ರಲ್ಲಿ ಚೈನಾದ ತಿಯಾನ್ ಮನ್ ಚೌಕದಲ್ಲಿ ನಡೆದ ಘಟನೆ. ಆರಂಭದ ದಿನ ಬಂದವರು ಚೈನಾ ಯುನಿವರ್ಸಿಟಿಯ ಐನೂರು ವಿದ್ಯಾರ್ಥಿಗಳು. ನಂತರ ಪ್ರತಿಭಟನೆ ತೀವ್ರವಾಗುತ್ತಾ ಹೋದಂತೆ ಚೈನಾದ ನಾಲ್ಕುನೂರು ನಗರಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಅಂದು ಬೀಜಿಂಗ್ ನ ತಿಯಾನ್ ಮನ್ ಚೌಕ ಸೇರಿದರು. ಎಲ್ಲರಲ್ಲಿಯೂ ಇದ್ದುದು ಸ್ವಾತಂತ್ರ್ಯದ ಅಭೀಪ್ಸೆ . ಚೈನಾದ ಕಮ್ಯುನಿಸ್ಟ್ ಆಡಳಿತ ಏಳು ವಾರಗಳ ಕಾಲ ಇದನ್ನು ಸಹಿಸಿ ನಂತರ ಎಲ್ಲ ವಿದೇಶಿ ಮಾಧ್ಯಮದವರನ್ನೂ ದೇಶದಿಂದ ಹೊರ ಹಾಕಿ ಜೂ. ನಾಲ್ಕರಂದು ಬೀಜಿಂಗ್ ನಲ್ಲಿ ಸೈನ್ಯದ ಕಾರ್ಯಾಚರಣೆ ನಡೆಸಿ ತನ್ನ ಮಕ್ಕಳನ್ನೇ ಹೊಡೆದು ಸಾಯಿಸಿ ಹುಳುಗಳಂತೆ ಹೊಸಕಿ ಹಾಕಿತು. ಸಾವಿರಾರು ಮಕ್ಕಳು ಈ ಕ್ರೂರ ಕೃತ್ಯದಿಂದ ಹತರಾದರೂ ಬೀಜಿಂಗ್ ಏನೇನೂ ಆಗಿಲ್ಲ ಎಂಬಂತೆ ಮರುದಿನವೇ ಮಡಿಮಾಡಿಕೊಂಡು ನಿಂತು ಬಿಟ್ಟಿತು.
ಆಗಲೂ ಹೊರ ಜಗತ್ತು ಮಕ್ಕಳ ಮೇಲಿನ ಈ ಕೃತ್ಯವನ್ನ ತೀವ್ರವಾಗಿ ಖಂಡಿಸಿತು. ಚೈನಾದ ಕಮ್ಯುನಿಸ್ಟ್ ಆಡಳಿತ ಅಮೆರಿಕ ಮತ್ತು ಯುರೋಪ್ ನ ದುಷ್ಟಪ್ರಭಾವದಿಂದ ಹಾಳಾಗಿದ್ದ ಮಕ್ಕಳನ್ನ ಸರಿ ದಾರಿಗೆ ತಂದುದಾಗಿ ಹೇಳಿಕೊಂಡಿತು.
ಚೈನಾದಲ್ಲಿರುವುದು ಕಮ್ಯುನಿಸ್ಟ್ ಆಡಳಿತವಾದರೆ ಈಜಿಪ್ಟ್ ನಲ್ಲಿರುವುದು ಏಕವ್ಯಕ್ತಿಯ ‘ಪ್ರಜಾಪ್ರಭುತ್ವ’. ಈಜಿಪ್ಟ್ ನ ಪಾರ್ಲಿಮೆಂಟ್ ಗೆ ನಾಲ್ಕು ನೂರ ಹದಿನಾಲ್ಕುಸದಸ್ಯರು ಜನರಿಂದ ಆಯ್ಕೆಯಾಗುತ್ತಾರೆ. ಆದರೆ ಮೂವತ್ತು ವರ್ಷಗಳಿಂದ ಹೊಸ್ನೆ ಮುಬಾರಕ್ . ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಅಣಕ ಮಾಡುತ್ತಾನೆ. ಚುನಾವಣೆ ಎಂಬುದು ಹೆಸರಿಗೆ ಮಾತ್ರ . ಹಲವು ಕ್ರಾಂತಿಗಳನ್ನ , ಅನವರತ ರಕ್ತಪಾತವನ್ನು ಕಂಡ ರಾಷ್ಟ್ರ ಬಯಸುವುದು ಪ್ರಜಾಪ್ರಭುತ್ವವನ್ನಲ್ಲ, ಶಾಂತಿ ಮತ್ತು ಸ್ಥಿರತೆಯನ್ನ ಎಂಬುದನ್ನ ಅರಿತಿದ್ದ ಮುಬಾರಕ್ ಮೂವತ್ತು ವರ್ಷಗಳಿಂದ ಎಲ್ಲ ಬಗೆಯ ವಿರೋಧವನ್ನೂ ಹಣಿದು ಹಾಕಿದ. ಈಜಿಪ್ಟ್ ನಲ್ಲಿ ಶಾಂತಿ ಮತ್ತು ಸ್ಥಿರತೆತಂದಿರುವುದಾಗಿ ಹೇಳಿಕೊಂಡ. ನಮ್ಮ ದೇಶದ ಈಚಿನ ಚುನಾವಣೆಗಳು, ಪಕ್ಷಾಂತರ ರಾಜಕಾರಣಿ-ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟತೆಯನ್ನು ಕಂಡಾಗ ಮಿತ ಸರ್ವಾಧಿಕಾರ ಇದಕ್ಕೆ ಪರಿಹಾರವೇನೋ ಅನ್ನಿಸಿ ಬಿಡುತ್ತದೆ. ಆದರೆ ಸರ್ವಾಧಿಕಾರಕ್ಕೆ ಮಿತಿ ಎಂಬುದು ಇಲ್ಲ . ಇದಕ್ಕೆ ಮುಬಾರಕ್ ನೇ ಉದಾಹರಣೆ. ಆತ ಇಂದು ಹಲವು ಲಕ್ಷ ಕೋಟಿ ರುಪಾಯಿಗಳ ಒಡೆಯ. ಅಮೆರಿಕಾ ಮತು ಯುರೊಪ್ ನಲ್ಲಿ ಅಪಾರ ಆಸ್ತಿ ಮಾಡಿದ್ದಾನೆ. ಹಾಗೆಯೇ ಆತನ ಸಹಾಯಕರು ಮತ್ತು ಚೇಲಾಗಳುಕೂಡ ಕೊಬ್ಬಿದ್ದಾರೆ.
ಇತ್ತೀಚಿನ ಟಿಪ್ಪಣಿಗಳು