ಅಕ್ಷತಾ ಕೆ
ಆವತ್ತು ಭಾನುವಾರ ರಜಾದಿನ ಅಮ್ಮನಿಗೆ ಕೊಬ್ಬರಿ ಮಿಠಾಯಿ ಮಾಡಲು ಹೇಳಬೇಕೆಂದು ಪುಟ್ಟಿ ಲೆಕ್ಕ ಹಾಕಿದ್ದಳು. ಆದರೆ ಟೀಚರಾಗಿದ್ದ ಅವಳಮ್ಮನಿಗೆ ಆವತ್ತೂ ರಜವಿರಲಿಲ್ಲ. ಶಾಲೆಯಲ್ಲಿ ಮೀಟಿಂಗ್ ಇದೆ ಪುಟ್ಟಿ ಬೇಗ ಬಂದ್ಬಿಡ್ತೀನಿ ನೀನು, ತಮ್ಮ ಇಬ್ಬರೂ ಮನೆಯಲ್ಲೆ ಆಟವಾಡಿಕೊಂಡು ಇರಿ ಎಲ್ಲಿಗೂ ಹೋಗ್ಬೇಡಿ ಎಂದು ಹೇಳಿ ಅಮ್ಮ ಹೊರಟು ಹೋದಾಗ ಪುಟ್ಟಿಗೆ ತುಂಬಾ ನಿರಾಶೆಯಾಗಿತ್ತು. ಆದರೆ ಬೇಜಾರಾಗಿ ಕೂರಲು ಪುರಸೊತ್ತೆಲ್ಲಿದೆ. ಶಿಶುವಿಹಾರಕ್ಕೆ ಹೋಗುವ ಅವಳ ತಮ್ಮ ತುಂಬಾ ತಂಟೆಕೋರ. ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ಐದನೇ ಕ್ಲಾಸು ಓದುವ ಪುಟ್ಟಿಯದು.
ಪುಟ್ಟಿ ತಮ್ಮನಿಗೆ ಈ ಹೊತ್ತು `ಪುಟ್ಟ ಅಮ್ಮ’. ಅಕ್ಕ ತಮ್ಮ ಸೇರಿ ಹಾವು ಏಣಿ , ಕವಡೆ, ಕಳ್ಳಪೊಲೀಸ್ ಏನೇನೋ ಆಡಿದರು. ತಮ್ಮ ಎದುರು ಮನೆಯ ಗಣೇಶನೊಂದಿಗೆ ಚಿನ್ನಿದಾಂಡು ಆಡಲು ಹೊರಟಾಗ ಈಗ ಬಿಸಿಲಿದೆ, ಸಂಜೆ ಹೊತ್ತಿಗೆ ಆಡಕ್ಕೋಗು ಎಂದು ತಡೆದಳು. ತಮ್ಮ ಹೋಗೆ ಹೋಗ್ತೀನಿ ಎಂದು ಹಠ ಮಾಡಿದಾಗ ಅಮ್ಮ ಬಂದ್ಮೇಲೆ ಕೊಬ್ಬರಿ ಮಿಠಾಯಿ ಮಾಡ್ತಾಳೆ . ನೀನು ಈಗ ನನ್ನ ಮಾತು ಕೇಳದಿದ್ದರೆ ಅಮ್ಮನಿಗೆ ಹೇಳಿ ಒಂದೂ ಮಿಠಾಯಿ ಕೊಡ್ಸಲ್ಲ ನೋಡ್ತಾ ಇರು ಎಂದು ಬೆದರಿಕೆ ಹಾಕಿದಳು. ಅಮ್ಮ ತಿನ್ನಲು ಕೊಡುವ ಜಿಲೇಬಿ, ಬೇಯಿಸಿದ ಮೊಟ್ಟೆ ಎಲ್ಲದರಲ್ಲೂ ತಮ್ಮನಿಗೆ ತನ್ನದರಲ್ಲೂ ಪಾಲು ಕೊಡುತಿದ್ದ ಅಕ್ಕನ ಈ ರೀತಿಯ ಬೆದರಿಕೆಗೆ ತಮ್ಮ ತತ್ತರಿಸಿದ. ಆಡಲು ಸಂಜೆಯೇ ಹೋಗುವುದಾಗಿ ಹೇಳಿದ.
ಆದರೆ ಕೂಡಲೇ ನನಗೆ ಹಸಿವಾಗ್ತಿದೆ ತಿನ್ನೋದಕ್ಕೆ ಏನಾದರೂ ಕೊಡು ಎಂದು ವರಾತ ಪ್ರಾರಂಭಿಸಿದ. ಪುಟ್ಟಿ ಅಡುಗೆ ಮನೆಗೆ ಹೋಗಿ ನೋಡಿದಳು ಒಂದು ಪಾತ್ರೆಯಲ್ಲಿ ಹಾಲು ಬಿಟ್ಟರೆ ಬೇರೇನು ಇರಲಿಲ್ಲ. ಬೆಳಿಗ್ಗೆ ಮಾಡಿದ ಉಪ್ಪಿಟ್ಟು ಖಾಲಿಯಾಗಿತ್ತು. ತಿನ್ನುವಂತ ವಸ್ತು ಬೇರೇನು ಸಿಗಲಿಲ್ಲ. ಒಂದು ಡಬ್ಬಿಯಲ್ಲಿ ಒಂದಿಷ್ಟು ಹುರಿದ ಸೇಂಗಾಬೀಜವಿತ್ತು ಅದನ್ನೆ ತಂದು ತಮ್ಮನಿಗೆ ಕೊಡುತ್ತಾ ಇದನ್ನು ತಿನ್ನು, ಅಮ್ಮ ಈಗ ಬರ್ತಾಳೆ ಬಂದ ಕೂಡ್ಲೆ ಅಡುಗೆ ಮಾಡ್ತಾಳೆ ಊಟ ಮಾಡಿಬಿಡೋಣ ಪುಟ್ಟಾ ಎಂದು ತಮ್ಮನನ್ನು ರಮಿಸಿದಳು. ಆದರೆ ಅಮ್ಮ ಹನ್ನೆರಡು ಗಂಟೆಯಾದರೂ ಬರಲೇ ಇಲ್ಲ. ಕಡ್ಲೆ ಬೀಜವನ್ನು ಒಂದೆ ಪಟ್ಟಿಗೆ ತಿಂದು ಮುಗಿಸಿದ್ದ ತಮ್ಮ ಮತ್ತೆ ಹಸಿವು ಎಂದು ಮತ್ತೆ ವರಾತ ತೆಗೆದ.
ಪುಟ್ಟಿಗೆ ಅಮ್ಮ ಈಗಾಗಲೇ ಅನ್ನಕ್ಕಿಡುವುದನ್ನು, ಕಾಫಿ ಮತ್ತು ಚಹಾ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಆದರೆ ಅಮ್ಮ ಎದುರಿದ್ದಾಗ ಮಾತ್ರ ಸ್ಟೌವ್ ಹಚ್ಚಬೇಕು ಎಂಬ ಕಂಡಿಷನ್ ಅಮ್ಮನದು. ಅದಷ್ಟೆ ಅಲ್ಲ ಅಮ್ಮ ಎದುರಿಗಿದ್ದಾಗ ಮಾತ್ರ ಪುಟ್ಟಿ ಕಟ್ಟೆ ಕಟ್ಟದ ಬಾವಿಯಿಂದ ನೀರು ಸೇದಬಹುದು, ಬಚ್ಚಲೊಲೆಗೆ ಬೆಂಕಿ ಮಾಡುವ ಸಾಹಸಕ್ಕೆ ಕೈ ಹಾಕಬಹುದು, ಅಪ್ಪ ಅಮ್ಮ ಇಬ್ಬರೂ ಕೆಲವೊಮ್ಮೆ ಪುಟ್ಟಿಯನ್ನು ಕೆರೆಗೂ ಕರೆದುಕೊಂಡು ಹೋಗಿ ಬಾಳೆ ದಿಂಡು, ಟೈರು ಏನೇನೋ ಸಹಾಯಕ್ಕೆ ಕೊಟ್ಟು ಈಜು ಕಲಿಸಿದ್ದು ಇದೆ. ಆದರೆ ಅಮ್ಮನಿಲ್ಲದ ಹೊತ್ತಲ್ಲಿ ಬೆಂಕಿ, ನೀರು ಯಾವುದರ ಬಳಿಯು ಹೋಗಬಾರದು ಎಂದು ಪುಟ್ಟಿಗೆ ತಿಳಿದಿದೆ. ಆದರೆ ಇವತ್ತು ಹನ್ನೆರಡೂವರೆಯಾದರೂ ಅಮ್ಮ ಬಂದಿಲ್ಲ. ಈಗ ಅಮ್ಮ ಬಂದರೂ ಕೈಕಾಲು ತೊಳೆದು, ಬಟ್ಟೆ ಬದಲಿಸಿ ಆನಂತರ ಅನ್ನಕ್ಕಿಟ್ಟು, ಸಾರು ಮಾಡಿ ಅಯ್ಯೋ ಇದೆಲ್ಲ ಆಗುವಷ್ಟೊತ್ತಿಗೆ ಎರಡು ಗಂಟೆಯೇ ಆಗಿಬಿಡುತ್ತದೆ. ಅಪ್ಪನೂ ಸಹ ಊಟಕ್ಕೆ ಬರುವ ಹೊತ್ತಾಗಿದೆ. ನಿಮ್ಮ ಅಪ್ಪನಿಗೆ ಹಸಿವು ತಡೆದುಕೊಳ್ಳಲು ಆಗುವುದೇ ಇಲ್ಲ ಎಂದು ಅಮ್ಮ ಯಾವಾಗಲೂ ಹೇಳುತ್ತಲೇ ಇರುತ್ತಾಳೆ. ಊಟ ತಡವಾದರೆ ಅಪ್ಪ ಅಮ್ಮನ ಮೇಲೆ ಸಿಟ್ಟು ಮಾಡುವುದು ಪುಟ್ಟಿಗೆ ತಿಳಿದಿದೆ.
ಇದೆಲ್ಲವನ್ನು ಯೋಚಿಸಿದ ಪುಟ್ಟಿ ಅಮ್ಮ ಎದುರಿಲ್ಲದೆಯೇ ಇವತ್ತು ಸ್ಟೌವ್ ಹಚ್ಚುವ ನಿಧರ್ಾರ ಮಾಡುತ್ತಾಳೆ ಕುಕ್ಕರಿನಲ್ಲಿ ಅಮ್ಮ ತೋರಿಸಿ ಕೊಟ್ಟಂತೆ ಎರಡು ಲೋಟ ತೊಳೆದಿಟ್ಟ ಅಕ್ಕಿಗೆ ನಾಲ್ಕು ಲೋಟ ನೀರು ಹಾಕಿ ಒಲೆಯ ಮೇಲಿಡುತ್ತಾಳೆ. ಕೂಡಲೇ ಕುಕ್ಕರ್ ತಳದಲ್ಲಿ ನೀರು ಹಾಕಬೇಕು ಇಲ್ಲದಿದ್ದರೆ ವಿಷಲ್ ಬರುವುದಿಲ್ಲ ಎಂದು ಅಮ್ಮ ಹೇಳಿದ್ದು ನೆನಪಿಗೆ ಬರುತ್ತದೆ. ಮತ್ತೆ ಕುಕ್ಕರ್ ಇಳಿಸಿ ಮುಚ್ಚಳ ತೆಗೆದರೆ ಪುಟ್ಟಿ ತಳದಲ್ಲಿ ಮೊದಲೇ ನೀರು ಹಾಕಿ ಸರಿಯಾದ ರೀತಿಯಲ್ಲೆ ಕುಕ್ಕರ್ ಜೋಡಿಸಿದ್ದಾಳೆ ಆದರೆ ಅವಳಿಗೆ ಮರೆತೇ ಹೋಗಿದೆ. ಅಯ್ಯೋ ದೇವರೇ ಸರಿಯಾಗಿಯೇ ಇಟ್ಟಿದ್ದೀನಿ ಎಂದು ತನ್ನ ಹಣೆಯ ಮೇಲೆ ಸಿನಿಮಾದ ಹೀರೋಯಿನ್ ಶೈಲಿಯಲ್ಲಿ ಮೆತ್ತಗೆ ಹೊಡೆದು ಕೊಳ್ಳುತ್ತಾಳೆ ಪುಟ್ಟಿ. ಮೂರು ವಿಷಲ್ ಆದಕೂಡ್ಲೆ ಸ್ಟೌವ್ ಆಫ್ ಮಾಡಬೇಕು ಎಂದಿದ್ದಾಳೆ ಅಮ್ಮ . ತಮ್ಮನ್ನ ಕರೆದು ನೋಡೋ ಕೇಳಿಸಿಕೊಳ್ತಾ ಇರು ಮೂರು ವಿಷಲ್ ಆಗ್ತಾ ಇದ್ದಂಗೆ ಹೇಳು ಸ್ಟೌವ್ ಆಫ್ ಮಾಡ್ತೀನಿ ಎಂದು ಆರ್ಡರ್ ಮಾಡುತ್ತಾಳೆ ಪುಟ್ಟಿ. ತಮ್ಮನಿಗೆ ಕುಕ್ಕರ್ ಕೂಗುವುದನ್ನೆ ಕಾಯುತ್ತಾ ಕೂರುವುದು ಒಂದು ಬಗೆಯ ಆಟವಾಗಿ ಕಾಣುತ್ತದೆ. ಅವನು ಕಿವಿಯನ್ನು ಎಚ್ಚರದಲ್ಲಿಟ್ಟು ಕಾಯುತ್ತಾ ಕೂರುತ್ತಾನೆ. ತಮ್ಮನು ತಾನು ಹೇಳಿದ್ದನ್ನು ಪಾಲಿಸುವುದರಲ್ಲಿ ನಿರತನಾದ ಮೇಲೆ ಪುಟ್ಟಿಗೆ ಅವನನ್ನು ಗಮನಿಸುತ್ತಾ ಕೂರುವ ಜವಾಬ್ದಾರಿ ತಪ್ಪುತ್ತದೆ. ಈಗ ಪುಟ್ಟಿ ಒಂದು ಪಲ್ಯವನ್ನು ಮಾಡಿಬಿಡುವ ನಿಧರ್ಾರ ಮಾಡುತ್ತಾಳೆ. ತಾನು, ತಮ್ಮ ಹಾಲನ್ನ ಊಟ ಮಾಡುತ್ತೇವೆ. ಅಮ್ಮ ಮೊಸರನ್ನ ತಿನ್ನುತ್ತಾಳೆ. ಆದರೆ ಅಪ್ಪನಿಗೆ ಮಾತ್ರ ಸಾರು ಅಥವಾ ಪಲ್ಯ ಇರಲೇಬೇಕು ಎಂದುಕೊಳ್ಳುತ್ತಾಳೆ.
ಆದರೆ ಪಲ್ಯ ಮಾಡಲು ಅಮ್ಮ ಪುಟ್ಟಿಗಿನ್ನೂ ಕಲಿಸಿಯೇ ಕೊಟ್ಟಿಲ್ಲ. ಆದರೇನು ಅಮ್ಮ ಪಲ್ಯ ಮಾಡುವಾಗ ಹಲವು ಬಾರಿ ಪುಟ್ಟಿ ಗಮನಿಸಿದ್ದಾಳೆ. ಸಾಸಿವೆ ಸಿಡಿಸಿ ಒಗ್ಗರಣೆ ಹಾಕಿ ತರಕಾರಿ ಉಪ್ಪುಕಾರ ಹುಳಿ ಮತ್ತು ಕೊನೆಯಲ್ಲಿ ತೆಂಗಿನ ಕಾಯಿ ತುರಿ ಹಾಕಿ ಬಿಟ್ಟರೆ ಪಲ್ಯ ಆದಂಗೇನೇ ಎಂದು ಮನನ ಮಾಡಿಕೊಳ್ಳುತ್ತಾಳೆ ಪುಟ್ಟಿ ಮನಸಿನಲ್ಲೆ. ಒಂದು ಪಾತ್ರೆಯಲ್ಲಿ ಅಮ್ಮ ಸೋಸಿ ಇಟ್ಟು ಹೋದ ಹರಿವೆ ಸೊಪ್ಪನ್ನು ಹೆಚ್ಚಲು ಕೂರುತ್ತಾಳೆ. ಹೆಚ್ಚಿ ಅಭ್ಯಾಸವಿಲ್ಲದ ಪುಟ್ಟಿಗೆ ಅಮ್ಮನ ಹಾಗೆ ಸಣ್ಣಗೆ ಹೆಚ್ಚಲು ಬಾರದೇ ಹೋದುದಕ್ಕೆ ಬೇಸರವಾಗುತ್ತದೆ. ಅದರ ಮದ್ಯೆಯೇ ಕತ್ತಿ ಅವಳ ಕೈಗೆ ಗಾಯವನ್ನು ಮಾಡುತ್ತದೆ. ಚೂರು ರಕ್ತ ಸಹ ಬರುತ್ತದೆ. ಅಮ್ಮ ಎದುರಿಗಿದ್ದಿದ್ದರೆ ಈ ಹೊತ್ತಲ್ಲಿ ಜೋರಾಗಿ ಅತ್ತೆ ಬಿಡುತ್ತಿದ್ದಳು ಪುಟ್ಟಿ. ಆದರೀಗ ರಕ್ತ ನೋಡಿದರೆ ತಮ್ಮ ಹದರಿ ಕಿರಚಬಹುದು ಎಂಬುದೇ ಆ ನೋವಲ್ಲೂ ಅವಳಿಗೆ ಕಾಡುವ ಸಂಗತಿ. ಕೂಡಲೇ ಕಾಫಿಪುಡಿ ತುಂಬಿ ಬಟ್ಟೆ ಕಟ್ಟಿಕೊಂಡು ಚೂರು ನೋವನ್ನು ತೋರಿಸಿಕೊಳ್ಳದೇ ಮತ್ತೆ ಸೊಪ್ಪು ಹೆಚ್ಚಲು ಕೂರುತ್ತಾಳೆ ಪುಟ್ಟಿ. ಥೇಟ್ ಅಮ್ಮನಂತೆ ಆಗಿಬಿಟ್ಟಿದ್ದಾಳೆ. ಅಷ್ಟೊತ್ತಿಗೆ ತಮ್ಮ ಕುಕ್ಕರ್ ಕೂಗಿದ್ದನ್ನು ತಿಳಿಸಿದ್ದಾನೆ ತಮ್ಮ. ಮತ್ತೊಮ್ಮೆ ಅಮ್ಮ ಪಲ್ಯ ಮಾಡುವ ವಿಧಾನವನ್ನು ಜ್ಞಾಪಿಸಿಕೊಳ್ಳುತ್ತಾ ಪಲ್ಯ ಮಾಡಲು ತೊಡಗುತ್ತಾಳೆ ಅಷ್ಟೊತ್ತಿಗೆ ಅಪ್ಪ ಬರುತ್ತಾರೆ. ಮತ್ತೊಂದು ಘಳಿಗೆಯಲ್ಲಿ ಅಮ್ಮನು ಶಾಲೆಯಿಂದ ಮರಳುವಳು. ಅಡಿಗೆ ಮಾಡಿಟ್ಟು ಹೋಗಿರದ ಅಮ್ಮ ಆತಂಕದಿಂದಲೇ ಮನೆಗೆ ಬಂದಿದ್ದಾಳೆ. ಆದರೆ ಮನೆಯಲ್ಲಿ ಪುಟ್ಟಿ ಅಡಿಗೆ ಸಿದ್ದ ಮಾಡಿಬಿಟ್ಟಿದ್ದಾಳೆ ಎಂದು ಅವಳಿಗೇನು ಗೊತ್ತು. ಅಮ್ಮ ಬರುವಷ್ಟೊತ್ತಿಗಾಗಲೇ ಪಲ್ಯವೂ ಬೆಂದು ಬಿಟ್ಟಿದೆ. ತಮ್ಮನಿಗೆ ಪುಟ್ಟಿ ಹಾಲನ್ನ ಕಲೆಸಿ ಕೊಡುತ್ತಿದ್ದಾಳೆ.
ಅಮ್ಮನಿಗೆ ಅದೆಷ್ಟು ಖುಷಿಯಾಗಿದೆ ಎಂದರೆ ಮಾತಿನಲ್ಲಿ ಹೇಳಲು ಸಾಧ್ಯವೇ ಇಲ್ಲ. ಅಪ್ಪ ಮಗಳು ಊಟಕ್ಕೆ ಕೂರುವರು. ಪುಟ್ಟಿಯೇ ಪಲ್ಯ ಮಾಡಿದ್ದಾಳೆ ಅಮ್ಮ ಮತ್ತೆ ಮತ್ತೆ ಸಂಭ್ರಮಿಸುವಳು. ಮೊದಲ ತುತ್ತು ಕಲೆಸಿ ಬಾಯಿಗಿಟ್ಟ ಅಪ್ಪ ಥೂ ಉಪ್ಪೆಂದರೆ ಉಪ್ಪಾಗಿದೆ ಎಂದು ಮುಖ ಕಿವುಚುವನು. ಆಗ ತಾನೇ ಮೊದಲ ತುತ್ತು ಬಾಯಿಗೆ ಹಾಕಿಕೊಂಡ ಪುಟ್ಟಿಗೂ ತಾನು ಮಾಡಿದ ಪಲ್ಯ ತಿನ್ನಲಾರದಷ್ಟು ಉಪ್ಪಾಗಿದೆ ಎನ್ನುವುದ ಗೊತ್ತಾಗಿ ಅಳು ಬರುವುದು. ಕೂಡಲೇ ಅಮ್ಮ ಪುಟ್ಟಿಯ ತಟ್ಟೆಯಿಂದಲೇ ತುತ್ತೊಂದನ್ನ ಕಲೆಸಿ ತಿಂದು ಉಪ್ಪು ಜಾಸ್ತಿಯಾಗಿಲ್ಲ. ತುಂಬಾ ಚೆನ್ನಾಗಿಯೇ ಇದೆ ಪುಟ್ಟಿ ಹಾಗೇನಾದರೂ ಜಾಸ್ತಿ ಆಗಿದೆ ಅಂತ ನಿಮಗೆ ಅನ್ನಿಸಿದರೆ ಒಂದು ಮ್ಯಾಜಿಕ್ ಮಾಡೋಣ ಆವಾಗ ಪುಟ್ಟಿಯ ಪಲ್ಯಕ್ಕೂ ಇನ್ನೂ ಟೇಸ್ಟ್ ಬರತ್ತೆ ಎಂದು ಹೇಳಿ ಒಂದಷ್ಟು ಮೊಸರು ತಂದು ಪಲ್ಯಕ್ಕೆ ಕಲೆಸಿ ಅಪ್ಪ ಮಗಳಿಗೆ ಬಡಿಸುವಳು. ಈಗ ಪಲ್ಯ ನಿಜಕ್ಕೂ ಚೆನ್ನಾಗಾಯಿತು. ಬಿರುಬಿಸಿಲಲ್ಲಿ ಮೊಸರಿನೊಡನೇ ಬೆರೆತ ಪಲ್ಯ ಅಗತ್ಯಕ್ಕಿಂತ ಎರಡು ತುತ್ತು ಜಾಸ್ತಿಯೇ ಸೇರಿಸಿ ಹಸಿದ ಹೊಟ್ಟೆಯನ್ನು ತಂಪಾಗಿಸಿತು.
ಇದೆಲ್ಲ ನಡೆದು ಅದೆಷ್ಟೋ ವರ್ಷಗಳೇ ಕಳೆದು ಹೋಗಿವೆ. ಆಗಿನ ಪುಟ್ಟಿಗೆ ಈಗ ಒಬ್ಬ ಪುಟ್ಟ ಮಗಳಿದ್ದಾಳೆ. ಮನೆಗೆ ಬಂದವರೆಲ್ಲ ತನ್ನ ಅಡಿಗೆಯನ್ನು ಹೊಗಳುವಾಗ ಪುಟ್ಟಿಗೆ ಮತ್ತೆ ಮತ್ತೆ ಈ ಘಟನೆ ನೆನಪಿಗೆ ಬರುವುದು. ಉಪ್ಪುಪ್ಪಾದ ಪಲ್ಯವನ್ನು ಟೀಕಿಸದೇ ಸವಿದ ಅಮ್ಮ ಪುಟ್ಟಿಯಲ್ಲಿ ಆ ಮೂಲಕ ತುಂಬಿದ ವಿಶ್ವಾಸ, ಸಹೃದಯತೆ ಅವಳ ಬದುಕನ್ನೆ ಕಾದಿದೆ. ಅಷ್ಟೆ ಅಲ್ಲ ಬದುಕಿನ ಜೀವಂತಿಕೆಯನ್ನೆ ಕಾಪಾಡಿದೆ. ಈಗ ಪುಟ್ಟ ಮಗುವಿನ ಅಮ್ಮನಾಗಿರುವ ಈ ಪುಟ್ಟಿ ಯಾರು? ಅವಳ ಹೆಸರೇನು? ಎಂದು ನೀವು ಕೇಳಿದರೆ ನಿಮ್ಮಲ್ಲಿ ಯಾರೂ ಈ ಪುಟ್ಟಿ ಆಗಿರಬಹುದು ಎಂಬುದೇ ನನ್ನ ಉತ್ತರವಾಗಿರುತ್ತದೆ.
ಜನ 17, 2011 @ 15:19:27
Wonderful writing 🙂
ಜನ 17, 2011 @ 10:20:01
Sarala, sogasada baravanige Akshata. Matte namma balayada chitragalannu kanmunde tanditu. Baravanige nillisabedi, Innashtu,Mattashtu bareyiri.
ಜನ 17, 2011 @ 02:01:41
ಎರಡು ವರುಷದ ಹಿಂದೆ ನಾನು ಬರೆದ ಲೇಖನವನ್ನು ಅವಧಿಯಲ್ಲಿ ಮತ್ತೊಮ್ಮೆ ನೋಡಿ ನಂಗೆ ನಿಜ ಖುಷಿಯಾಯಿತು. ಪ್ರಕಟಿಸಿದ ಅವಧಿ ಬಳಗಕ್ಕೂ ಮತ್ತು ಓದಿ ಪ್ರತಿಕ್ರಿಯಿಸಿದ ಸಹೃದಯಿ ಓದುಗ ಮಿತ್ರರೆಲ್ಲರಿಗೂ ಥ್ಯಾಂಕ್ಸ್.
ಒಂದು ರೀತಿಯಲ್ಲಿ ಸ್ವಂತದ ಬರವಣಿಗೆಯನ್ನೇ ಮರೆತಿದ್ದವಳನ್ನು ಈ ಲೇಖನ ಮತ್ತೆ ನನ್ನಲ್ಲಿ ಕವಿತೆ , ಇತ್ಯಾದಿ ಬರವಣಿಗೆ ಮಾಡುವ ಆಶೆಯನ್ನು ಹುಟ್ಟಿಸಿದೆ . ಕಿ.ರಂ , ಅನಂತಮೂರ್ತಿ, ಶಾಮಣ್ಣ ಮತ್ತಿತರ ಮಾತು ಗಳನ್ನು ಬರಹಕ್ಕೆ ಇಳಿಸುವುದನ್ನೆ ಮತ್ತೆ ಮತ್ತೆ ಅಭ್ಯಾಸ ಮಾಡುತ್ತಾ ಮತ್ತು ಅದರಲ್ಲಿ ಅಗಾಧವಾದ ಸುಖವನ್ನು ಕಾಣುತಿದ್ದ ನನಗೆ ಸ್ವಂತದ ಬರವಣಿಗೆ ಮರೆತೇ ಹೋದಹಾಗೆ ಆಗಿತ್ತು ಅಂದ್ರು ಸುಳ್ಳಲ್ಲ . ನಿಜ ಅಂದ್ರೆ ಇತ್ತೀಚಿನ ದಿನದಲ್ಲಿ ನಾನು ಏನು ಬರೆದು ಇಲ್ಲ . ಗೆಳೆಯರ ಕೈಲಿ ಈ ಬಗ್ಗೆ ಬಯ್ಯಿಸಿಕೊಳ್ಳುವುದು ಅಭ್ಯಾಸ ಆಗಿತ್ತು . ಪ್ರಕಾಶನದ ದಸೆಯಿಂದ ನಾನು ಸ್ವಂತದ ಬರವಣಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನ ಗೆಳೆಯರ ಅಭಿಪ್ರಾಯ ಆದರೆ ನಿಜವೆಂದರೆ ಅದಲ್ಲ ಕಾರಣ . ಬೇರೆಯೇ ಇದೆ. ಏನೆಂದರೆ ಬೇರೆಯವರ ಮಾತುಗಳನ್ನು ಬರಹಕ್ಕೆ ತರುವುದೆಂದರೆ ಆಲಿಸುವುದು ಮತ್ತು ಅದನ್ನು ಯಥಾವತ್ತಾಗಿ ಬರೆಯುವುದಲ್ಲ ನನ್ನ ಪಾಲಿಗೆ . ಆ ಮಾತಿನ ಒಳಗಿನ ದ್ವನಿಯನ್ನು ಗ್ರಹಿಸಬೇಕು . ಅದನ್ನು ಅಭ್ಯಾಸ ಮಾಡುತ್ತಲೇ ಇದ್ದೇನೆ . ಅದರ ನಡುವೆ ಸ್ವಂತದ ಬರವಣಿಗೆಯನ್ನು ಮರೆತೇ ಬಿಟ್ಟಿದ್ದ ನನ್ನೆದುರಿಗೆ ನನ್ನ ಬರವಣಿಗೆಯನ್ನು ಹಿಡಿದು ಮತ್ತೆ ಬರೆಯುವ ಆಶೆಯನ್ನು ಉಕ್ಕಿಸಿದ್ದೀರಿ,ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿ . ಯಾಕೆಂದರೆ ನನಗೀಗ ಇಂಥದೊಂದು ಸಾಕ್ಷಾತ್ಕಾರದ , ಮೆಚ್ಚಗೆಯ, ಸ್ಪಂದನೆಯ ಅಗತ್ಯವಿತ್ತು . ಬರವಣಿಗೆಯ ಮನಸ್ಸೇ ವಿಚಿತ್ರ ಅನಿಸ್ತದೆ.ಯಾರು ಕೇಳಲಿ ಬಿಡಲಿ ನಾನು ನನಗಾಗಿ ಹಾಡುವೆ ಅಂತ ಗಟ್ಟಿ ಮಾಡಿಕೊಂಡೆ ಬರವಣಿಗೆ ಮಾಡ್ತೀವಿ. ಆದರೆ ಕೇಳೋ ಹಾಗೆ ಹಾಡಬೇಕು ಅನ್ನೋ ಪ್ರಜ್ಞೆ ಇರೋ ಹಾಗೆ ಓದೋ ಹಾಗೆ ಬರೀಬೇಕು ಅನ್ನೋ ಆಶೆಯೂ ಸುಪ್ತವಾಗಿ ಇದ್ದೆ ಇರ್ತದೆ. ಹಾಗೆ ತುಂಬಾ ಸರ್ತಿ ಬರವಣಿಗೆ ಮಾಡಿದ ಮೇಲೆ ಅದು ನನ್ನದಲ್ಲ ಓದುಗನದು.ಹೊಗಳಲಿ ಬಯ್ಯಲಿ ಏನಾದ್ರು ಮಾಡ್ಕೊಳಿ ಅಥವಾ ಪ್ರತಿಕ್ರಿಯಿಸದೇನೆ ಇರೋದು ಅವರ ಹಕ್ಕು ಅಂದುಕೊಳ್ಳುವವಳು ನಾನು. ಆದರೆ ಈ ಹೊತ್ತು ಇದನ್ನ ನೋಡಿ ಖುಷಿ ಆಗಲಿಲ್ಲ ಅಂದ್ರೆ ಸುಳ್ಲಾಗ್ತದೆ. ಮತ್ತೆ ಬರೆಯೋ ಆಶೆ ಹುಟ್ಟಲೇ ಇಲ್ಲ ಅಂದ್ರೆ ಸುಳ್ಲಾಗ್ತದೆ .
ಜನ 16, 2011 @ 19:27:56
very good. keep it up.
ಜನ 16, 2011 @ 19:26:28
akshata simply great. you are genious.
ಜನ 16, 2011 @ 09:03:51
Lovely!! It took me back to my childhood days and thanks for reminding me of one more topic for my blog. Thanks Akshata!!
🙂
malathi S
ಮೇ 29, 2010 @ 15:17:58
Its heart touching article my dear sis…
ಜನ 20, 2009 @ 13:41:29
Akshata,
2000dalli Christ college nalli nana pakkave kulitu kavite odiddu eegashte annuvashtu chennagi nenapide. chennagi
bareeteeri. khushiyaaatu odi.
please be in touch
chayaguru@gmail.com
ಜನ 01, 2009 @ 13:47:11
nice one, liked it.
ಡಿಸೆ 29, 2008 @ 17:31:53
ಹುದುಕುತ್ತಾ ಹುದುಕುತ್ತಾ ನಿಮ್ಮ ಈ ಕಥೆ ಓದಿದೆ ತು೦ಬಾ ಚೆನ್ನಾಗಿ ಬರೆದಿರುವಿರಿ.
ಡಿಸೆ 27, 2008 @ 20:32:49
ಪ್ರೀತಿಯ ಅಚ್ಚು,
ಬದುಕಿನ ಅನಿವಾರ್ಯ ಪ್ರಸಂಗ ಏನೆಲ್ಲವನ್ನು ಕಲಿಸುತ್ತವೆ ಎಂಬುದಕ್ಕೆ ಪುಟ್ಟಿ ಸಾಕ್ಶಿಯಾಗಿದ್ದಾಳೆ. ಆತ್ಮವಿಶ್ವಾಸ ಕಲಿಸುವ/ಕಲಿಯುವ ಜವಾಬ್ದರಿ ನಮ್ಮೆಲ್ಲರ ಮೇಲಿದೆ.
ಡಿಸೆ 27, 2008 @ 17:44:17
simply superb akshata very good writing. odta odta madye hedarikeyagittu stove ninda yendru anahuta agutta anta. sadya haage agalilla