ಬಾ ಹುಲಿಕಲ್ ನೆತ್ತಿಗೆ-5
-ಪ್ರೊ. ಶಿವರಾಮಯ್ಯ
ಕೋಲಾರ ಜಿಲ್ಲೆ ಮಾಸ್ತಿ ಬಳಿಯ ಕುಪ್ಪೂರಿನ ನಾರಾಯಣ ಸ್ವಾಮಿ ತೆಲುಗು ಮತ್ತು ಕನ್ನಡ ಎರಡು ಭಾಷೆಗಳ ಜಾನಪದ ಎಲ್ಲ ಮಜಲುಗಳನ್ನು ಬಲ್ಲಂವರು. ರೇಷಿಮೆ ಗೂಡಿನ ಒಂದೆಳೆ ಸಿಕ್ಕರೆಸಾಕು ಅದನ್ನು ಉಂಡೆ ಸುತ್ತಿ ಎತ್ತಿ ಮಗ್ಗದಲ್ಲಿಟ್ಟು ನೆಯ್ದು ತರಹೆವರಿ ಬಣ್ಣದ ರೇಶಿಮೆ ಸೀರೆಗಳನ್ನು ನೇಯುವ ಕಸುಬುದಾರನಂತೆ. ನೀರದೀವಿಗೆ ಮತ್ತು ಬಾರಮ್ಮ ಭಾಗೀರತಿ, ಕೈವಾರತಾತಯ್ಯ ಮುಂತಾದ ಕೃತಿಗಳಲ್ಲಿ ಇದು ಸಾಬೀತಾಗಿದೆ.
(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)
ಪ್ರಸ್ತುತ ಕನ್ನಡ ಭಾಷೆಯ ಸಾಧ್ಯತೆಗಳನ್ನೆಲ್ಲ ಹೀರಿಕೊಂಡು ಮಲೆನಾಡಿನ ನಿತ್ಯ ಹರಿದ್ವರ್ಣ ಕಾಡಿನಂತೆ ಗಗನಚುಂಬಿ ಬೆಳೆದ ಬೃಹತ್ಮೃತಿ ಮದುಮಗಳು ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸುವಾಗ ನಮ್ಮ ನೆರವಿಗೆ ಬಂದವರು ಜಾನಪದ ಕಥನಕಾರರಾದ ಅಜರ್ುನ ಜೋಗಿಗಳು, ಸುಡುಗಾಡುಸಿದ್ದರು, ಹೆಳವರು, ಹಾತಿಕಲಂಜ, ಕೋರವಂಜಿ ಮುಂತಾದವರು.
ಸಿ.ಬಸವಲಿಂಗಯ್ಯ, ಪ್ರೋ. ಹಿ.ಶಿ.ರಾಮಚಂದ್ರೇಗೌಡ, ಪ್ರೊ. ಕೆ.ವಿ. ನಾರಾಯಣ ಇವರೊಂದಿಗೆ ಚರ್ಚಿಸಿ, ‘ಮರಮರ ಮಥನದಿಂದ ಅಗ್ನಿ ಹುಟ್ಟಿತ್ತು’ ಎಂಬಂತೆ ಕೆವೈಎನ್ ಈ ನಿರೂಪಕರನ್ನು ರಂಗದ ಮೇಲೆ ತಂದರು. ಜೊತೆಗೆ ಈ ಮಹಾಕಾವ್ಯ ಕಾದಂಬರಿಯನ್ನು ನಾಟಕವಾಗಿಸಲು ಬಂದ ಮ್ಯಾಜಿಕ್ಲ್ ರೆಫರೆನ್ಸ್ ಎಂಬಂತೆ ದಿಢೀರನೆ ಧರ್ಮಸ್ಥಳದ ಹುಂಡಿಯಲ್ಲಿದ್ದ ಉಂಗುರವನ್ನು ಹುಡುಕಿ ಈ ನಿರೂಪಕರ ಕೈಗೆ ಹಾಕಿದ ನಂತರ ದೃಶ್ಯಗಳನ್ನು ಕಟ್ಟುವ ಕೆಲಸ ಸಲೀಸಾಯಿತು.
ಉಂಗುರ ಪಯಣ
ಜಾಗತಿಕ ಸಾಹಿತ್ಯದಲ್ಲಿ ಉಂಗುರ ಒಂದು ಮಹಾನ್ ಪ್ರತಿಮೆಯಾಗಿದೆ. ಪ್ರೀತಿ, ಪ್ರಣಯ, ಅಧಿಕಾರದ ಲಾಂಚನವಾಗಿ, ಸಂಕೇತವಾಗಿ, ಗುರುತಿನ ಮುದ್ರೆಯಾಗಿ ಅದು ಬಳಕೆಯಾಗಿದೆ. ಇದರ ಕಾರಣದಿಂದಾಗಿ ತಲೆಗಳು ಬಿದ್ದಿವೆ, ತಲೆಗಳು ಉಳಿದಿವೆ; ರಾಜ್ಯಗಳು ಅಳಿದಿವೆ, ಸಾಮ್ರಾಜ್ಯಗಳು ತಲೆಎತ್ತಿವೆ.
ವಾಲ್ಮೀಕಿ ರಾಮಾಯಣ (ಮುದ್ರೆಯುಂಗರ) ಮೊದಲುಗೊಂಡು ಕಾಳಿದಾಸನ ಅಭಿಜ್ಞಾನ (ಉಂಗುರ ಗುರುತು) ಶಾಕುಂತಲದವರೆಗೆ ನಮ್ಮ ಜನಪದ ಕವಿ ಹಾಡಿದ ಬೆಳ್ಳಿಯುಂಗಕ್ಕೆ ನಾರಿ ಮನ ಸೋತಳು ಎಂಬಲ್ಲಿಗೂ ಕೆ.ವೈ.ಎನ್. ಹಾಡುವ ತೆಲುಗು ಮೂಲದ ನ್ಯಾಸ್ತುಡ….!? ಎಂಬುದೂ ಸೇರಿದಂತೆ, ಹಾಗೇ ಮದುಮಗಳು ನಾಟಕದಲ್ಲಿ ಕಾವೇರಿ ಹಾಡುವ ಉಂಗುರವೇ ಉಂಗುರವೇ ಆವಲೋಕದಿಂದ ಬಂದಿರುವೆ ಏನ ಬಣ್ಣ ಮಿಂಚಿನಕಣ್ಣ ಆವ ಸ್ವಪ್ನ ಹೊತ್ತು ತಂದಿರುವೆ ಎನ್ನುವ ತನಕ ಬೆಳೆಯಿತು ಉಂಗುರ ಪುರಾಣ
ಸಾಹಿತ್ಯ ಲೋಕದಲ್ಲಿ ಹೀಗೆ ಉಂಗುರದ ಪ್ರಭಾವ ಬೆಳೆದಿದೆ. ನಿರೂಪಕರ ಕೈಗೆ ಉಂಗುರ ಹಾಕಿದ್ದು ಸರಿಯೋ ತಪ್ಪೋ ಎಂದು ಗೊಂದಲ್ಲಿದ್ದ ನಮಗೆ ಬೆರಗು ಗೊಳಿಸಿದ್ದು ಕುವೆಂಪು ಅವರೇ ಉಂಗುರದ ಕಥೆಯನ್ನು ಕಾವೇರಿ ಪ್ರಕರಣದಲ್ಲಿ ಹೇಳಿರುವುದು. ಆ ಕಥೆ ಹೀಗಿದೆ.
ಕಾವೇರಿ ಸಾವಿಗೆ ಕಾರಣವಾದ ಈ ಉಂಗುರ ದರೋಡೆಕೋರರಿಂದ ಆಗುಂಬೆ ಘಾಟಿನಲ್ಲಿ ಕೊಲೆಯಾದ ನವದಂಪತಿಗಳದು. ಕಳ್ಳರು ಅದನ್ನು ಕರಿಮೀನುಸಾಬರಿಗೆ ಮಾರಿದ್ದರು. ಆತ ಕಲ್ಲೂರು ಸಾಹುಕಾರರಿಗೆ ದಾಟಿಸಿದ್ದ. ಮತ್ತದು ಅವರ ಮಗ ದೇವಯ್ಯನ ಮೂಲಕ ಮೇಗರವಳ್ಳಿ ಅಂತಕ್ಕಸೆಡ್ತಿಯ ಮಗಳು ಕಾವೇರಿ ಕೈ ಸೇರಿತ್ತು. ಮತ್ತದು ಅವಳ ಸಪೂರ ಬೆರಳಿನಿಂದ ಜಾರಿ ಚೀಂಕ್ರನ ಕೈ ಸೇರಿತ್ತು. ಅವನು ಪುನಃ ಕರೀಂಸಾಬರಿಗೆ ಕೊಟ್ಟು ತನಗೆ ಬೇಕಾದ ಸಾಮಾನೂ ಖರೀದಿಸಿದ್ದ. ಅದು ಕಣ್ಣಿಗೆ ಬಿದ್ದ ಕೂಡಲೆ ಆ ಉಂಗುರದ ಪೂರ್ವಕಥೆ ಕರೀಂಸಾಬರಿಗೆ ಹೊಳೆದು ಬಿಟ್ಟಿತು.
ಈಗ ಅದನ್ನು ತನ್ನ ತಮ್ಮ ಪುಡೀಸಾಬಿಗೆ ಕೊಟ್ಟು ಕಲ್ಲೂರು ಸಾಹುಕಾರರಿಗೆ ಮಾರಲು ಹೇಳಿ ಕಳುಹಿಸಿದರೆ ಅವರು ಇದು ನಕಲಿ ಮಾಲಿರಬಹುದೆಂದು ನಿರಾಕರಿಸಿದರು. ಇದೇ ಕಾವೇರಿಗೆ ದೇವಯ್ಯನು ಕೊಟ್ಟಿದ್ದ ಉಡುಗೊರೆ ಎಂಬುದನ್ನು ತಿಳಿದ ಪುಡಿಸಾಬಿ ಮತ್ತು ಚೀಂಕ್ರ ಮಸಲತ್ತು ಮೋಡಿ ಕಾವೇರಿಯನ್ನು ಉಂಗುರ ನಿಮಿತ್ತ ವಂಚಿಸಿ ಸ್ಕೂಲ್ ಮನೆಯಲ್ಲಿಗೆ ಕರೆದು ಅತ್ಯಾಚಾರ ಮಾಡಿದರು. ಹತಭಾಗ್ಯಳಾದ ಆ ಹುಡುಗಿ ಮಿಷನ್ ಸ್ಕೂಲ್ ಬಾವಿಗೆ ಹಾರಿಕೊಂಡು ಪ್ರಾಣಬಿಟ್ಟಳು. ಇದಿಷ್ಟು ಕಾದಂಬರಿಯಲ್ಲಿ ದೊರೆತ ಮಾಹಿತಿ.
ಮುಂದುವರೆಯುವುದು……
ಇತ್ತೀಚಿನ ಟಿಪ್ಪಣಿಗಳು