ಭೇಟಿ ಕೊಡಿ: ಮೀಡಿಯಾ ಮಿರ್ಚಿ
ತಂನಂ ತಂನಂ..ಎಂಬುದರ ಬಳಕೆಯೇ ಒಂದು ಅದ್ಭುತ
31 ಜುಲೈ 2009 ನಿಮ್ಮ ಟಿಪ್ಪಣಿ ಬರೆಯಿರಿ
in ಮಣಿ - ಮಣಿ
-ಎ ಆರ್ ಮಣಿಕಾಂತ್
ಚಿತ್ರ: ಎರಡು ಕನಸು. ಗೀತೆರಚನೆ: ಚಿ. ಉದಯಶಂಕರ್.
ಗಾಯನ: ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ. ಸಂಗೀತ: ರಾಜನ್-ನಾಗೇಂದ್ರ.
ತಂನಂ ತಂನಂ ನನ್ನೀ ಮನಸು ಮಿಡಿಯುತಿದೇ
ಓ ಸೋತಿದೆ
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂನಂ ತಂನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂನಂ ತಂನಂ ಎಂದಿದೆ ||ಪ||
ನೀ ಸನಿಹಕೇ ಬಂದರೇ ತನುವಿದೂ
ನಡುಗುತಿದೆ ಏತಕೇ, ಎದೆ ಝಲ್ ಎಂದಿದೇ
ಒಲಿದಿಹಾ ಜೀವವೂ ಬೆರೆಯಲೂ
ಮನ ಹೂವಾಗಿ ತನು ಕೆಂಪಾಗಿ ನಿನ್ನಾ ಕಾದಿದೇ ||1||
ನೀ ನಡೆಯುವಾ ಹಾದಿಗೇ ಹೂವಿನಾ
ಹಾಸಿಗೆಯ ಹಾಸುವೇ, ಕೈ ಹಿಡಿದು ನಡೆಸುವೇ
ಮೆಲ್ಲಗೇ ನಲ್ಲನೇ ನಡೆಸು ಬಾ
ಎಂದೂ ಹೀಗೆ ಇರುವಾ ಆಸೆ ನನ್ನೀ ಮನಸಿಗೇ ||2||
ಮಧುರ ಗೀತೆಗಳು ಅಂದಾಕ್ಷಣ, ಇವತ್ತಿಗೂ ಎಲ್ಲರಿಗೂ ತಕ್ಷಣವೇ ನೆನಪಾಗುವುದು ಅಣ್ಣಾವ್ರು ಅಭಿನಯಿಸಿದ ಚಿತ್ರಗಳೇ. ತೆರೆಗೆ ಬಂದ ಡಾ. ರಾಜ್ ಅಭಿನಯದ ಇನ್ನೂರೂ ಚಿಲ್ಲರೆ ಸಿನಿಮಾಗಳ ಪೈಕಿ ಬಹುಪಾಲು ಎಲ್ಲ ಚಿತ್ರಗಳೂ ಯಶಸ್ಸು ಕಾಣಲು ಮಧುರ ಗೀತೆಗಳೂ ಕಾರಣವಾದವು ಎಂಬುದು ಸುಳ್ಳಲ್ಲ. ಈ ಪೈಕಿ ಹೆಚ್ಚಿನ ಮಧುರ ಗೀತೆಗಳ ಹಿಂದಿದ್ದವರೇ ಚಿ. ಉದಯಶಂಕರ್.
ನವೋದಯ, ನವ್ಯ, ಬಂಡಾಯ ಕವಿತೆಗಳನ್ನು ಮಾತ್ರವಲ್ಲ, ಪೌರಾಣಿಕ ಕಥನಕವನಗಳು, ಸರ್ವಜ್ಞ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭುವಿನ ವಚನ, ಜಾನಪದ ಕಾವ್ಯ… ಹೀಗೆ ಪ್ರತಿಯೊಂದನ್ನೂ ಓದಿಕೊಂಡಿದ್ದವರು ಉದಯಶಂಕರ್. ಒಂದು ಸಂದರ್ಭದ ತೀವ್ರತೆಯನ್ನು ಹಾಡಿನ ಮೂಲಕ ಹೇಗೆ ಹೆಚ್ಚಿಸಬಹುದು ಎಂಬುದು ಅವರಿಗೆ ತುಂಬ ಚೆನ್ನಾಗಿ ಗೊತ್ತಿತ್ತು. ಹೆಚ್ಚಿನ ಸಂದರ್ಭದಲ್ಲಿ ತಾರೆ, ಚಂದ್ರ, ಹೂವು, ಮುಗಿಲು, ಬೆಳದಿಂಗಳು, ನೈದಿಲೆ… ಮುಂತಾದ ಪದಬಳಕೆಯಿಂದಲೇ ಅವರು ಹಾಡು ಬರೆದರು ನಿಜ. ಆದರೆ, ಹಾಗೆ ಸೃಷ್ಟಿಯಾದ ಎಲ್ಲ ಹಾಡುಗಳೂ ಒಂದಕ್ಕಿಂತ ಒಂದು ಭಿನ್ನವಾಗಿದ್ದವು ಎಂಬುದೂ ಅಷ್ಟೇ ನಿಜ.
ಒಂದು ಚಿತ್ರಗೀತೆಯಲ್ಲಿ ಸಾಮಾನ್ಯವಾಗಿ ಒಂದು ಪಲ್ಲವಿ ಹಾಗೂ ಎರಡರಿಂದ ಮೂರು ಚರಣಗಳಿರುತ್ತವೆ. ಉದಯಶಂಕರ್ ಅವರ ಸ್ಪೆಷಾಲಿಟಿಯೆಂದರೆ, ಅವರು ಯಾವತ್ತೂ ಎರಡೇ ಚರಣ ಬರೆದು ಸುಮ್ಮನಾದವರಲ್ಲ. ಒಂದು ಹಾಡು ಬರೆಯಲು ಕೂತರೆ ಎಂಟು ಚರಣ ಬರೆದಿಡುತ್ತಿದ್ದರಂತೆ; ಅದೂ ಎಕ್ಸ್ಪ್ರೆಸ್ ವೇಗದಲ್ಲಿ. ನಂತರ ಅದನ್ನು ನಿಮರ್ಾಪಕ, ನಿದರ್ೇಶಕ ಹಾಗೂ ಸಂಗೀತ ನಿದರ್ೇಶಕರ ಮುಂದಿಟ್ಟು ನಿಮ್ಗೆ ಯಾವುದು ಇಷ್ಟವಾಗ್ತದೋ ಅದನ್ನು ತಗೊಳ್ಳಿ ಎನ್ನುತ್ತಿದ್ದರಂತೆ. ಸ್ವಾರಸ್ಯವೆಂದರೆ, ಒಂದು ಹಾಡು ಬರೆಯಲು ಉದಯಶಂಕರ್ ತೆಗೆದುಕೊಳ್ಳುತ್ತಿದ್ದುದು ಕೆಲವೇ ನಿಮಿಷಗಳ ಅವ. `ಕವಿರತ್ನ ಕಾಳಿದಾಸ’ದ `ಸದಾ ಕಣ್ಣಲಿ’, `ಸಂಪತ್ತಿಗೆ ಸವಾಲ್’ನ `ಯಾರೇ ಕೂಗಾಡಲಿ’, `ಮಯೂರ’ದ `ನಾನಿರುವುದೇ ನಿಮಗಾಗಿ’, `ತ್ರಿಮೂತರ್ಿ’ಯ `ಮೂಗನ ಕಾಡಿದರೇನು?’, `ಶ್ರುತಿ ಸೇರಿದಾಗ’ ಚಿತ್ರದ `ಬೊಂಬೆಯಾಟವಯ್ಯ’, `ಪ್ರೇಮದ ಕಾಣಿಕೆ’ಯ `ಬಾನಿಗೊಂದು ಎಲ್ಲೆ ಎಲ್ಲಿದೆ?’ ಗೀತೆಗಳೆಲ್ಲ ಉದಯಶಂಕರ್ ಲೇಖನಿಯಲ್ಲಿ ಹತ್ತರಿಂದ ಇಪ್ಪತ್ತು ನಿಮಿಷಗಳಲ್ಲಿ ಅರಳಿದ ಭಾವಕುಸುಮಗಳೇ.
ಎಷ್ಟೋ ಸಂದರ್ಭಗಳಲ್ಲಿ ಪರಿಚಯದ ಯಾರಾದರೂ, ನಿಮಗೆ ಅತ್ಯುತ್ತಮ ಹಾಡು ಬರೆವ ಸಾಮಥ್ರ್ಯವಿಲ್ಲ ಎಂದು ತಮಾಷೆ ಮಾಡಿದರೂ ಸಾಕು; ಆ ಕ್ಷಣದಲ್ಲೇ- `ನನ್ನ ಶಕ್ತಿ ಏನೂಂತ ನಿಮ್ಗೆ ತೋರಿಸ್ತೀನಿ ನೋಡಿ’ ಎನ್ನುತ್ತಾ ಹೊಸದೊಂದು ಹಾಡು ಬರೆದುಕೊಡುತ್ತಿದ್ದರಂತೆ ಉದಯಶಂಕರ್. ಅವರ ಗೀತೆ ರಚನೆಯ ಸಾಮಥ್ರ್ಯ ಎಂಥದೆಂದು ವಿವರಿಸುತ್ತಾ `ಮಲ್ಲಿಗೆ’ ಮಾಸಪತ್ರಿಕೆಯ ಸಂಪಾದಕರೂ, ಉದಯಶಂಕರ್ ಅವರ ಆಪ್ತರೂ ಆದ ಎನ್.ಎಸ್. ಶ್ರೀಧರಮೂತರ್ಿಯವರು `ಚಿರಂಜೀವಿ’ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: ಅದು, `ಬೆಂಕಿಯ ಬಲೆ’ ಚಿತ್ರದ ಗೀತೆರಚನೆಯ ಸಂದರ್ಭ. ಮದ್ರಾಸಿನ ಸ್ವಾಗತ್ ಹೋಟೆಲಿನಲ್ಲಿ ದೊರೆ-ಭಗವಾನ್ ಅವರೊಂದಿಗೆ ಚಚರ್ೆ ನಡೆಸುತ್ತಿದ್ದರು ಉದಯಶಂಕರ್. ಆಗೆಲ್ಲ ಮಧ್ಯಾಹ್ನ 2:20ರಲ್ಲಿ ರೇಡಿಯೊ ಸಿಲೋನ್ನಲ್ಲಿ ಕನ್ನಡ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ಆ ದಿನಗಳಲ್ಲಿ ಸಿಲೋನ್ ಸ್ಟೇಷನ್ ಹಾಕಿ, ನಿರೂಪಕಿಯ ವಿಚಿತ್ರ ಕನ್ನಡ ಮಾತು ಕೇಳಿ ನಂತರ ಹಾಡಿಗೆ ಕಿವಿಯಾಗುವುದು ಫ್ಯಾಷನ್ ಆಗಿಹೋಗಿತ್ತು. ಅದೊಂದು ಮಧ್ಯಾಹ್ನ ಉದಯಶಂಕರ್, ದೊರೆ-ಭಗವಾನ್ ಮೂವರೂ ರೇಡಿಯೋ ಮುಂದೆ ಕೂತರು. ಒಟ್ಟು ಮೂರು ಗೀತೆಗಳು ಪ್ರಸಾರವಾದವು ನಿಜ. ಆದರೆ ಅವುಗಳಲ್ಲಿ ಉದಯಶಂಕರ್ ರಚನೆಯ ಒಂದು ಹಾಡೂ ಇರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಭಗವಾನ್- `ನೋಡ್ರೀ ಉದಯಶಂಕರ್, ನೀವು ಜಾಸ್ತಿ ಹಾಡು ಬರೆದಿದ್ದೀರಿ ನಿಜ. ಆದರೆ ಉತ್ತಮ ಹಾಡುಗಳ ಸಂಖ್ಯೆ ಕಡಿಮೆ. ಹಾಗಾಗಿ ರೇಡಿಯೊ ಸಿಲೋನ್ನಿಂದ ನಿಮ್ಮ ಒಂದು ಹಾಡೂ ಪ್ರಸಾರವಾಗಲಿಲ್ಲ’ ಎಂದರಂತೆ.
ಈ ಮಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಉದಯಶಂಕರ್- `ಹೌದಾ? ಹಾಗಂತೀರಾ? ಇರಲಿ, ನನ್ನ ಶಕ್ತೀನ ಈಗ ತೋರಿಸ್ತೀನಿ’ ಎಂದು ತಾವು ಬರೆಯುತ್ತಿದ್ದ ಗೀತೆಗೆ ಒಟ್ಟು 24 ಚರಣಗಳನ್ನು ಬರೆದುಕೊಟ್ಟರಂತೆ, ಬರೀ 20 ನಿಮಿಷದಲ್ಲಿ! ಒಂದಕ್ಕಿಂತ ಒಂದು ಚೆಂದವಿದ್ದ ಆ ಚರಣಗಳಿಂದ ಸೃಷ್ಟಿಯಾದ ಹಾಡೇ- `ಬಿಸಿಲಾದರೇನು, ಮಳೆಯಾದರೇನು?’
ಜೋಗಿ ಬರೆದ ಮತ್ತೊಂದು ಕವಿತೆ: ಆಷಾಢದ ಗಾಳಿಗೆ…
29 ಜುಲೈ 2009 8 ಟಿಪ್ಪಣಿಗಳು

ಹೊರಗೆ ಬೀಸುತ್ತಿರುವುದು
ಆಷಾಢದ ಗಾಳಿಯೇ?
ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ.
ಸಿಂಹಾಸನ ಉರುಳಿದಾಗ
ಶ್ರಾವಣ ಎಂದೂ
ದೇವಾಲಯ ನಡುಗಿದಾಗ
ಮಾರ್ಗಶಿರ ಎಂದೂ
ಕವಿತೆಯನ್ನೂ ಎಂದೂ ಓದದ
ಶ್ರೀಮಂತನಿಗೆ ಹೊಟ್ಟೆನೋವು ಬಂದಾಗ
ಸುಗ್ಗಿಯೆಂದೂ ಸಂಭ್ರಮಿಸಿದವರು ನಾವು.
ಮೊನ್ನೆ ಮಳೆಗಾಲದಲ್ಲಿ
ನಮ್ಮೂರ ಗುಡಿಯ
ಗರುಡಗಂಭಕ್ಕೆ ಸಿಡಿಲು ಬಡಿಯಿತು.
ಒಣ ಮರದ ಕಂಬ ಅಲ್ಲಾಡಲಿಲ್ಲ.
ದೇವರುಗಳ ರಾಜ್ಯದಲ್ಲಿ
ತಿರುಕರೇ ಎಲ್ಲಾ.
ಇದ್ದವರೂ ಬೇಡುವರು, ಇಲ್ಲದವರೂ.
ಇದ್ದವರಿಗೆ ದೇವರು ನೀಡುವರು.
ಇಲ್ಲದವರು ನಾಳೆಗಾಗಿ ಕಾಯುವರು.
ಭತ್ತವೊಂದು ಬಿತ್ತವಾಗಿ
ಬಿತ್ತಿದ್ದು ತೆನೆಯಾಗಿ ಮತ್ತೆ ಭತ್ತವಾಗಿ
ಹೊಟ್ಟು ಕಳಚಿಕೊಂಡು ಹೊಟ್ಟೆಗೆ ಹಿಟ್ಟಾಗುವ
ಪವಾಡಕ್ಕೆ ನಾವು ಕಾಯುತ್ತಾ ಕೂತೆವು.
ದೇವರ ಮುಂದಿಟ್ಟ ನೈವೇದ್ಯಕ್ಕೆ
ಒಂದು ದಳ ಶ್ರೀತುಲಸಿ
ಬಿಂದು ಗಂಗೋದಕ ಸಾಕು
ಪರಮಾತ್ಮನ ಮುಟ್ಟುವುದಕ್ಕೆ.
ಹೊರಗಡೆ ಬೀಸುತ್ತಿರುವುದು
ಆಷಾಢದ ಗಾಳಿಯೇ.
ಎಂದೂ ಕವಿತೆಯನ್ನೇ ಓದದ
ಶ್ರೀಮಂತರು ಸುಖವಾಗಿದ್ದಾರೆ.
ಕವಿತೆಯೆಂದರೆ ಏನೆಂದು ಅರಿಯದ
ಬಡವನೂ ಸುಖಿ.
ಕವಿತೆ ಹೆಣ್ಣು, ಪೃಥಿವಿ, ಆಕಾಶ, ಸೂರ್ಯ
ಹೋರಾಟ, ಕೆಂಡದ ಮಳೆ, ಗಾಢಪ್ರೇಮ
ಅವ್ವನ ಹಣೆಯ ಸುಕ್ಕು,
ತಂಗಿ ಕಳಕೊಂಡ ಯೌವನ,
ಸಿರಿಯಜ್ಜಿನ ಕಂಠ, ತಿಮ್ಮಕ್ಕನ ಸಾಲುಮರ
ಎಂದುಕೊಂಡು
ಹಗಲು ಬೆಳಕಾರುತ್ತಿದೆ.
ಹೊರಗೆ ಬೀಸಿದ್ದು
ಆಷಾಢದ
ಗಾಳಿಯೇ!
ಇಂಗ್ಲಿಷಿನಲ್ಲಿ mass frenzy ಅಂತಾರಲ್ಲ…
29 ಜುಲೈ 2009 2 ಟಿಪ್ಪಣಿಗಳು
in 1
ಕರಿ, ಬಿಳಿ
–ಎಂ ಎಸ್ ಪ್ರಭಾಕರ್ (ಕಾಮರೂಪಿ)
ಮೈಕೆಲ್ ಜಾಕ್ಸನ್ ತೀರಿಕೊಂಡ ಅಂತ ಬೆಳಿಗ್ಗೆ ರೇಡಿಯೋಲಿ ಸುದ್ದಿ ಕೇಳಿದಾಗ ಒಂದು ರೀತಿ ನನಗಿಂತ ಸಣ್ಣವರು ತೀರಿಕೊಂಡಾಗ ಸಹಜವಾಗೇ ಆಗುವ, ಈ ಸಣ್ಣವಯಸ್ಸಿನಲ್ಲಿ ಹೋಗಬಾರದಾಗಿತ್ತು ಅನ್ನಿಸಿಕೊಳ್ಳುವ, ಸಂತಾಪ ಆಯಿತು.
ಆದರೆ ಇಷ್ಟು ಹೇಳಿ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ತೀರಿಕೊಂಡ ವ್ಯಕ್ತಿ ಒಬ್ಬ ವಿಶ್ವಪ್ರಸಿದ್ಧ ವ್ಯಕ್ತಿ. ಲಕ್ಷಾಂತರ, ಏಕೆ ಕೋಟ್ಯಾಂತರ ಮಂದಿ, ಅದರಲ್ಲೂ ಯುವಕ ಯುವತಿಯರಸಮಾಜ, ಅವನನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿತ್ತು. ಅವನ ಹಾಡುಗಾರಿಕೆ, ಅವನ ಜೀವನ ಶೈಲಿ, ಇವೆಲ್ಲವೂ ಅವುಗಳ ವೈಶಿಷ್ಟ್ಯತೆಯಿಂದ ಪೃಥಿವಿಯ ಎಲ್ಲ ಭಾಗದವರನ್ನೂ ಸೆಳೆದಿದ್ದವು. ಹೊಟೆಲೊಂದರಲ್ಲಿ ಒಮ್ಮೆ ರಾತ್ರಿ ಕಳೆಯಬೇಕಾಗಿದ್ದಾಗ ಟಿವಿ ಯಲ್ಲಿ ಅವನ ಸಂಗಿತ, ಕುಣಿತದ ಕಾರ್ಯಕ್ರಮ ನೋಡಿದ್ದೆ. ಪ್ರೇಕ್ಷಕರನ್ನು ಹುಚ್ಚು ಹಿಡಿಸಬಲ್ಲ ಮಾಟ ಅವನದಾಗಿತ್ತು. ಇಂಗ್ಲಿಷಿನಲ್ಲಿ mass frenzy ಅಂತಾರಲ್ಲ, ಅದನ್ನು ಉತ್ತೇಜಿಸುವುದು, ಪ್ರಚೋದಿಸುವುದು, ಅದರಿಂದ ಲಾಭ ಗಳಿಸುವುದು ಅವನ ವೈಶಿಷ್ಟ್ಯ.
ಇಂತಹ ಸಂಗೀತದ ಮದೋನ್ಮತ್ತ ಉನ್ಮಾದಕ್ಕೆ ಪ್ರಚೋದಿಸುವ ಮಾಟಗಾರ ಅವನೊಬ್ಬನೇ ಆಗಿರಲಿಲ್ಲ. ಆದರೂ ಅವನಂತಹ ಇತರ ಅಭಿನಯಕಾರರ ತುಲನೆಯಲ್ಲೂ ಅವನು ಎತ್ತಿ ಕಾಣುತ್ತಿದ್ದ. ಇದಕ್ಕೆ ಕಾರಣಗಳು ಅನೇಕ. ಅವನ ಮಾಟದ ಚಮತ್ಕಾರಿಕೆಯನ್ನು ವಿವರಿಸುವುದು ಬಿಡಿ, ವರ್ಣಿಸುವುದೂ ಕಷ್ಟ. ಟಿವೀ ಅಡ್ವರ್ಟೈಸ್ಮೆಂಟುಗಳು, ಯಾರ ಕಲ್ಪನೆಗೂ ಮೀರಿದ ಹಣ, ಮೇಕಪ್ಪುಗಳು ತಯಾರಿಸಿದ ಮೋಹಕ ಸೌಂದರ್ಯ ಹೊಂದಿದ್ದ ಜೊತೆಯ ಕುಣಿತಗಾರರು, ಅಧ್ಬುತ ಶಕ್ತಿಯ ಧ್ವನಿವರ್ಧಕಗಳು, ನೂರಾರು ಸಾವಿರ ವಾಟ್ ಶಕ್ತಿಯ ಕಣ್ಣುಗಳನ್ನು ಕುರುಡಾಗಿಸುವ ಬಣ್ಣಬಣ್ಣದ ಲೈಟುಗಳು, ಸ್ಟ್ರೋಬ್ ಲೈಟುಗಳು, ಇನ್ನೂ ಏನೇನೋ, ಇವೆಲ್ಲಾ ಸೇರಿ ಒಂದು ಮಾಯಾಜಾಲವನ್ನು ಹರಡಿ ಪ್ರೇಕ್ಷಕರನ್ನು, ಶ್ರೋತೃಗಳನ್ನು ವಶೀಕರಣ ಮಾಡಿಕೊಳ್ಳುವ ವೈಶಿಷ್ಟ್ಯ ಮೈಕೆಲ್ ಜಾಕ್ಸನ್ ನ ಸಂಗೀತ. ಇವೆಲ್ಲಾ ಅವನ ಸಮಕಾಲೀನ ಇತರ ಚಮತ್ಕಾರಿಗಳೂ ಪಡೆದಿದ್ದರು. ಆದರೆ ಇದೆಲ್ಲಕ್ಕೂ ಮೀರಿದ ವೈಶಿಷ್ಟ್ಯ ಮೈಕೆಲ್ ಜಾಕ್ಸನ್ ಪಡೆದಿದ್ದ. ಅದು ಅವನ ವ್ಯಕ್ತಿತ್ವದ ವೈಶಿಷ್ಟ್ಯ, ವಿಚಿತ್ರತೆ.
ಆದರೆ ನನ್ನ ಮಟ್ಟಿಗೆ ಈ ವ್ಯಕ್ತಿ ವೈಶಿಷ್ಟ್ಯದ ಎರಡು ಅಂಶಗಳು ಅವನನ್ನು ಒಬ್ಬ ಅಸಹ್ಯಕರ ವ್ಯಕ್ತಿಯಾಗಿ ಪರಿವರ್ತಿಸಿದ್ದವು.
ಒಂದು, ಅವನಿಗೆ ತನ್ನ ದೇಹದ ಬಣ್ಣದ ಬಗ್ಗೆ ಇದ್ದ ಒಂದು ಸಂಕುಚಿತ ಮನೋಭಾವ, ಅಸಹ್ಯ ಮತ್ತು ತಿರಸ್ಕಾರ ಪ್ರವೃತ್ತಿ. ಅವನು ಹುಟ್ಟಿನಲ್ಲಿ ಕರಿಯ. ಆದರೆ ಅನೇಕಾನೇಕ ಕರಿಯರಂತೆ ಅವನು ತನ್ನ ದೇಹವರ್ಣವನ್ನು ನಿರಾಕರಿಸಲು ಜೀವನ ಪರ್ಯಂತ ಶ್ರಮ ಪಟ್ಟ. ಅನೇಕ ರೀತಿಯ ಔಷಧಿಗಳು, ಮಾತ್ರೆಗಳು, ಸ್ಕಿನ್ ಕ್ರೀಮುಗಳು, ಸ್ಕಿನ್ ಸರ್ಜರಿ, ರೇಡಿಯೇಷನ್ ಥೆರಪಿ, ಇನ್ನೂ ಏನೇನೋ ರೀತಿಯ ಉಪಯೋಗ ದುರುಪಯೋಗಗಳನ್ನು ಅವನು ಜೀವನ ಪರ್ಯಂತ ಬಳಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.
ಕರಿಯರು, ಅದರಲ್ಲೂ ಆಫ್ರಿಕನ್ ಕರಿಯರು, ಅವರು ಯಾವದೇಶದಲ್ಲಿ ವಾಸಸ್ಥರಾದರೂ ಸರಿ, ತಮ್ಮ ದೇಹದ ವರ್ಣದ, ಏಕೆ ತಮ್ಮ ವ್ಯಕ್ತಿತ್ವದ ಬಗ್ಗೆಯೇ ಒಂದು ತುಚ್ಛ ಅಭಿಪ್ರಾಯ ಬೆಳೆಸಿಕೊಳ್ಳಬೇಕೆಂದು ಅವರ ಮೇಲೆ ರಾಜಕೀಯ, ಆರ್ಥಿಕ ಮತ್ತು ಇದಕ್ಕೂ ಮೀರಿ ಸಾಂಸ್ಕೃತಿಕ ಆಧಿಪತ್ಯ ನಡೆಸಿದ್ದ ಬಿಳಿಯರು ಬಯಸುವುದು, ಮತ್ತು ಈ ಗುರಿಯನ್ನು ತಲುಪಲು ಖುಲಾಮತ್ತಾಗಿ ಅಥವಾ ಷಡ್ಯಂತ್ರಗಳ ಮೂಲಕ ಪರಿಶ್ರಮಿಸುವುದು ಸ್ವಾಭಾವಿಕ. ಆದರೆ ಈ ಕರಿ-ಬಿಳಿ ದ್ವಂದ್ವ ಮತ್ತು ವೈಷಮ್ಯ ಇಂದಿನದಲ್ಲ, ವಸಾಹತುಶಾಹಿ, ಸಾಮ್ರಾಜ್ಯಶಾಹಿ ಯುಗಗಳ ಪ್ರಜೋದಕತೆಯಿಂದ ಜನುಮಿಸಿದ್ದಲ್ಲ. ಈ ಪಾರ್ಥಕ್ಯ — ಇದು ನಿಜವಾದದ್ದೆ ಅಥವಾ ಕಲ್ಪಿತ ಪಾರ್ಥಕ್ಯವೇ ಇದರ ಚರ್ಚೆ ಇಲ್ಲಿ ಅಗತ್ಯವಿಲ್ಲ — ಅನುಸರಿಸಿ ಬಿಳಿ ಅಂದರೆ ಶುದ್ಧ, ಕರಿ ಅಂದರೆ ಅಶುದ್ಧ, ಬಿಳಿ ಅಂದರೆ ರೂಪ, ಕರಿ ಅಂದರೆ ವಿರೂಪ, ಬಿಳಿ ಅಂದರೆ ಒಳಿತು, ಕರಿ ಅಂದರೆ ಕೊಳೆತ, ಇತ್ಯಾದಿ ಮಾನಸಿಕ, ಸಾಂಸ್ಕೃತಿಕ, ಏಕೆ, ಧಾರ್ಮಿಕ ಪ್ರವೃತ್ತಿಗಳು ಸಹ ಪೃಥಿವಿಯ ಪ್ರಾಯ ಎಲ್ಲ ಸಮಾಜಗಳಲ್ಲೂ ಚೆನ್ನಾಗಿ ಬೇರೂರಿವೆ. ಹಿಂದೂಧರ್ಮದ ಒಂದು ಅವಿಭಾಜ್ಯ ಅಂಗವಾದ ಚಾತುರ್ವರ್ಣ ಮತ್ತು ಜಾತಿಪದ್ಧತಿಯಲ್ಲಂತೂ ಚೆನ್ನಾಗಿ ಬೇರೂರಿದೆ. ಈ ಮನೋಭಾವವೇ ಸಮಕಾಲೀನ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳ ಆರ್ಥಿಕ ಉನ್ನತಿಗೆ ಅತಿ ಅಗತ್ಯವಾದ ಕರಿಯ ಜನರ ಆರ್ಥಿಕ ಮತ್ತು ಸಾಮಾಜಿಕ ಶೋಷಣೆಗೆ ನೈತಿಕ ಸಮರ್ಥನೆಯನ್ನು ನೀಡಿದೆ.
ಯಂತ್ರಗಳನ್ನು ಕಳಚೋಣ ಬನ್ನಿ
29 ಜುಲೈ 2009 ನಿಮ್ಮ ಟಿಪ್ಪಣಿ ಬರೆಯಿರಿ
in ಝೂಮ್, ಬುಕ್ ಬಝಾರ್
ಒಂಟಿದನಿ ಪ್ರಕಾಶನ ಪ್ರಕಟಿಸಿರುವ ಪ್ರಸನ್ನ ಅವರ ‘ಯಂತ್ರಗಳನ್ನು ಕಳಚೋಣ ಬನ್ನಿ’ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಭಾರತ ಯಾತ್ರಾ ಕೇಂದ್ರ ಹಾಗೂ ಮೇಫ್ಲವರ್ ಮೀಡಿಯಾ ಹೌಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂ ಎಸ್ ಸತ್ಯು, ಸುರೇಂದ್ರ ಮೋಹನ್, ಕೆ ಮರುಳಸಿದ್ಧಪ್ಪ ಭಾಗವಹಿಸಿದ್ದರು. ಸಮಾರಂಭದಲ್ಲಿ ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಅವರನ್ನು ಗೌರವಿಸಲಾಯಿತು.
ಚಿತ್ರಗಳು: ಮನೋಜ್ ಕುಮಾರ್
‘ಮೀಡಿಯಾ ಮಿರ್ಚಿ’ಯಲ್ಲಿ ಬರಲಿರುವ ನಾಳೆ…
28 ಜುಲೈ 2009 1 ಟಿಪ್ಪಣಿ
ಗಂಗೂಬಾಯಿ ಹಾನಗಲ್ ಇಲ್ಲವಾದ ಸುದ್ದಿ ಹೊತ್ತ ಪತ್ರಿಕೆಗಳನ್ನ ನೋಡ್ತಾ ಇದ್ರೆ ಒಂದು ವಿಷಯ ಸ್ಪಷ್ಟ ಆಗುತ್ತೆ. ನಾಳೆ ಏನಾಗುತ್ತೆ ಅನ್ನೋದನ್ನ ಮಾಧ್ಯಮಗಳು ಯೋಚಿಸಬೇಕು ಜೊತೆಗೆ ಅದನ್ನು ಹೇಗೆ ಮಂಡಿಸಬೇಕು ಅಂತ ಗೊತ್ತಿರಬೇಕು. ಮಾಹಿತಿ ಕೈನಲ್ಲಿದ್ದೂ ಹೇಗೆ ಪ್ರೆಸೆಂಟ್ ಮಾಡಬೇಕು ಅಂತ ಗೊತ್ತಿಲ್ಲದೆ ಹೋದರೆ ಪ್ರಜಾವಾಣಿ ಕವರೇಜ್ ಥರಾ ಆಗುತ್ತೆ. ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಬೆಸ್ಟ್ ಕವರೇಜ್ ನೀಡಿದೆ. ಪ್ರಜಾವಾಣಿ ಹಳೆಯ ಚೌಕಟ್ಟಿನಿಂದ ಹೊರ ಬರುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಉದಯವಾಣಿಯಂತೂ ಸಂಪೂರ್ಣ ನೆಲ ಕಚ್ಚಿದೆ. ಸಂಯುಕ್ತ ಕರ್ನಾಟಕ ಗಂಗಜ್ಜಿಯ ತವರ ಪತ್ರಿಕೆ. ಹಾಗಾಗಿಯೇ ನಿರೀಕ್ಷೆ ಇನ್ನೊ ಹೆಚ್ಚೇ ಇತ್ತು. ಆ ನಿರೀಕ್ಷೆ ಎತ್ತರ ತಲುಪಿಲ್ಲ. ಈ ಮಧ್ಯೆ DNA ಕನ್ನಡದ ಹೆಡ್ ಲೈನ್ ನೀಡಿ ವಾಹ್! ಎನ್ನುವಂತೆ ಮಾಡಿದೆ. ಪಕ್ಕಾ ಅಮೇರಿಕನ್ ಮಾರುಕಟ್ಟೆಯಲ್ಲಿನ ಕೊತ್ತಂಬರಿ ಸೊಪ್ಪಿನ ಹಾಗೆ…
ಪೂರ್ಣ ಓದಿಗೆ: ಮೀಡಿಯಾ ಮಿರ್ಚಿ
ಇತ್ತೀಚಿನ ಟಿಪ್ಪಣಿಗಳು