ಚಿತ್ರ: ಮಿಲನ
ಗೀತೆರಚನೆ: ಜಯಂತ್ ಕಾಯ್ಕಿಣಿ
ಗಾಯನ: ಶ್ರೇಯಾ ಘೋಷಾಲ್
ಸಂಗೀತ: ಮನೋಮೂರ್ತಿ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾಡಿದೆ ||ಪ||
ಹೇಳುವುದು ಏನೋ ಉಳಿದುಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ ||ಅ.ಪ.||
ನೋವಿನಲ್ಲಿ ಜೀವ ಜೀವ ಅರಿತಾ ನಂತರ
ನಲಿವೂ ಬೇರೆ ಏನಿದೆ ಪ್ರೀತಿ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೇ ಸಾರಿ ನೀ ಕೇಳೆಯಾ ಈ ಸ್ವರಾ
ಮನಸಲ್ಲಿ ಚೂರು ಜಾಗ ಬೇಕಿದೇ
ಕೇಳಲಿ ಹೇಗೆ ತಿಳಿಯದಾಗಿದೆ ||1||
ಕಣ್ಣು ತೆರೆದು ಕಾಣುವಾ ಆ ಕನಸೇ ಜೀವನಾ
ಸಣ್ಣ ಹಠವ ಮಾಡಿದೆ ಹೃದಯ ಈ ದಿನಾ
ಎದೆಯ ದೂರವಾಣಿಯಾ ಕರೆಯ ರಿಂಗಣಾ
ಕೇಳು ಜೀವವೇ ಏತಕೀ ಕಂಪನಾ
ಹೃದಯವು ಎಲ್ಲೋ ಕಳೆದುಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ ||2||
ಚಿತ್ರ: ದಿ ಸಂಡೇ ಇಂಡಿಯನ್
ಆರೆಂಟು ತಿಂಗಳ ಹಿಂದೆ, ಹಿರಿಯ ನಿರ್ದೇಶಕ ಗೀತಪ್ರಿಯ ಅವರೊಂದಿಗೆ ಮಾತನಾಡುತ್ತಿದ್ದಾಗ ಚಿತ್ರಗೀತೆಗಳ ವಿಷಯ ಬಂತು. ಈಗಿನ ಸಂದರ್ಭದ ಕೆಲವು ಅಬ್ಬರದ, ಅರ್ಥವಿಲ್ಲದ, ಆಪ್ತವಲ್ಲದ ಹಾಡುಗಳ ಬಗ್ಗೆ ಹೇಳುತ್ತಾ, `ಸರ್, ಮಧುರಗೀತೆಗಳ ಯುಗ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಅವರ ಕಾಲಕ್ಕೇ ಮುಗಿದುಹೋಯ್ತು ಅಲ್ಲವಾ’ ಎಂದು ಪ್ರಶ್ನಿಸಿದರೆ, ಗೀತಪ್ರಿಯ ತಕ್ಷಣವೇ ಹೇಳಿದರು: `ಈಗಲೂ ಒಳ್ಳೊಳ್ಳೆಯ ಹಾಡುಗಳು ಬರ್ತಾ ಇವೆ. ಅದರಲ್ಲೂ ಜಯಂತ್ ಕಾಯ್ಕಿಣಿ ಬರೀತಾರಲ್ಲ? ಅವರ ಹಾಡುಗಳು ವೆರೀ ಗುಡ್ ಅನ್ನುವಷ್ಟು ಚನ್ನಾಗಿರ್ತವೆ. ಅವರು ಬಳಸುವ ಒಂದೊಂದು ಪದದಲ್ಲೂ ಜೀವ ಇರುತ್ತೆ. ತೂಕ ಇರುತ್ತೆ. ಪ್ರೀತಿ ಇರುತ್ತೆ. ಬೆರಗಿರುತ್ತೆ. ಲಾಲಿತ್ಯ ಇರುತ್ತೆ. ಇಡೀ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸುವಂಥ ಶಕ್ತಿ ಜಯಂತ್ ಕಾಯ್ಕಿಣಿಯವರ ಹಾಡುಗಳಿಗಿರುತ್ತೆ. ಹಾಗಾಗಿ ಅವರನ್ನು `ಮಧುರಗೀತೆಗಳ ಸರದಾರ’ ಅಂತ ಧಾರಾಳವಾಗಿ ಕರೆಯಬಹುದು…’
ಅನುಮಾನವೇ ಬೇಡ. ಕನ್ನಡ ಸಿನಿಮಾ ಸಾಹಿತ್ಯಕ್ಕೆ ಒಂದು ಹೊಸ ಉಡುಗೆ ತೊಡಿಸಿದವರು ಜಯಂತ ಕಾಯ್ಕಿಣಿ. ಗೀತ ಸಾಹಿತ್ಯಕ್ಕೆ ಹೊಸತು ಎಂಬಂಥ ಪದಗಳನ್ನೂ, ಸಾಲುಗಳನ್ನೂ ಬಳಸಿ ಗೆದ್ದದ್ದು ಕಾಯ್ಕಿಣಿಯವರ ಹೆಚ್ಚುಗಾರಿಕೆ. ಉಳಿದೆಲ್ಲ ಗೀತೆರಚನೆಕಾರರಿಗಿಂತ ಜಯಂತ್ ಸ್ವಲ್ಪ ಡಿಫರೆಂಟ್ ಎಂಬುದಕ್ಕೆ ಹಾಡಿನಲ್ಲಿ ಬಳಸಿದ `ಕೊಲ್ಲು ಹುಡುಗೀ ಒಮ್ಮೆ ನನ್ನ ಹಾಗೇ ಸುಮ್ಮನೆ’ ಎಂಬ ಸಾಲೇ ಉದಾಹರಣೆ.
ಜಯಂತ್ ಕಾಯ್ಕಿಣಿಯವರು ಚಿತ್ರರಂಗಕ್ಕೆ ಬಂದದ್ದು ಡಾ. ರಾಜ್ ಕಂಪನಿ ತಯಾರಿಸಿದ `ಚಿಗುರಿದ ಕನಸು’ ಚಿತ್ರದ ಮೂಲಕ. ಅದಕ್ಕೂ ಮುನ್ನ ಅವರು ಟಿ.ವಿ.ಯ ಕಾರ್ಯಕ್ರಮ ನಿರೂಪಕರಾಗಿದ್ದರು. ಅದಕ್ಕೂ ಮುಂಚೆ ನಾಡಿನ ಅಷ್ಟೂ ಮಂದಿಯ ಮನಸ್ಸು ಗೆ(ಕ)ದ್ದ `ಭಾವನಾ’ ಮಾಸಿಕದ ಸಂಪಾದಕರಾಗಿದ್ದರು. ಅದಕ್ಕೂ ಸ್ವಲ್ಪ ಹಿಂದೆ ಮೋಹಕ ನಗೆ ಮತ್ತು ಮನಮೋಹಕ ಪದ್ಯಗಳಿಂದ ಹದಿಹರಯದ ಎಲ್ಲರ ಕಣ್ಮಣಿಯಾಗಿದ್ದರು!
`ಚಿಗುರಿದ ಕನಸು’ ಚಿತ್ರದ ಹಾಡುಗಳಲ್ಲಿ ಏನೋ ಒಂದು ತೆರನಾದ ಆಪ್ತಭಾವ ಇದ್ದುದನ್ನು ಎಲ್ಲರೂ ಗುರುತಿಸಿ, ಜಯಂತ್ ಹಾಡುಗಳು ಮಸ್ತ್ ಆಗಿವೆ ಎನ್ನುತ್ತಿದ್ದ ವೇಳೆಯಲ್ಲೇ ಬಂತುನೋಡಿ ಮುಂಗಾರು ಮಳೆ! ಆ ಚಿತ್ರಕ್ಕೆ ಜಯಂತ್ ಬರೆದ `ಅನಿಸುತಿದೆ ಯಾಕೋ ಇಂದು…’ ಹಾಡು ಎಲ್ಲ ಪ್ರೇಮಿಗಳ ಎದೆಯ ಹಾಡಾಯಿತು. ಪಿಸುಮಾತಾಯಿತು. ಎಲ್ಲರ ಮೊಬೈಲ್ ನ ರಿಂಗ್ ಟೋನ್ ಆಗಿ ವರ್ಷಗಟ್ಟಲೆ ದರ್ಬಾರು ಮಾಡಿತು. ಈ ಹಾಡು ಪಡೆದುಕೊಂಡ ಜನಪ್ರಿಯತೆ, ಕನ್ನಡಿಗರು ಅದನ್ನು ಸ್ವೀಕರಿಸಿದ ರೀತಿ ಕಂಡು ಬೆರಗಾಗಿ ಮುಂದೊಂದು ದಿನ ಜಯಂತ್ ಅವರೇ ಹೀಗೆ ಹೇಳಿದ್ದರು: `ಅನಿಸುತಿದೆ ಯಾಕೋ ಇಂದು ನೀವೆಲ್ಲಾ ನನ್ನವರೆಂದು…’
* * *
`ಮಿಲನ’ ಚಿತ್ರದ `ಮಳೆ ನಿಂತು ಹೋದ ಮೇಲೆ’ ಹಾಡು ಸೃಷ್ಟಿಯಾದದ್ದು ಹೇಗೆ ಎಂದು ಹೇಳುವ ಮುನ್ನ; ಆ ಹಾಡು ಬರೆದದ್ದು ಜಯಂತ್ ಅಂದುಬಿಡುವ ಮುನ್ನ ಕವಿ ಪರಿಚಯದ ನೆಪದಲ್ಲಿ ಇಷ್ಟೆಲ್ಲ ಹೇಳಬೇಕಾಯಿತು. ಹಾಡು ಹುಟ್ಟಿದ ಕತೆಯ ವಿವರಣೆ ಕಡೆಗಿರಲಿ. ಈಗ `ಮಿಲನ’ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
`ಮಿಲನ’ದಲ್ಲಿ ನಾಯಕ ಒಂದು ಹುಡುಗೀನ ಪ್ರೀತಿಸಿರ್ತಾನೆ. ಅವಳೂ ಇಷ್ಟಪಟ್ಟಿರ್ತಾಳೆ. ಆದರೆ ಅನಿವಾರ್ಯ ಕಾರಣಗಳಿಂದ ಆ ಮದುವೆ ನಡೆಯಲ್ಲ. ಮುಂದೆ, ಅಮ್ಮನ ಮಾತಿಗೆ ಕಟ್ಟುಬಿದ್ದು ಆಕೆ ನೋಡಿದ, ಮೆಚ್ಚಿದ ಹುಡುಗಿಯನ್ನೇ ನಾಯಕ ಮದುವೆಯಾಗುತ್ತಾನೆ. ಆದರೆ ಮೊದಲ ರಾತ್ರಿಯಂದೇ ಆ ಹುಡುಗಿ- `ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸಿದೀನಿ. ಅಪ್ಪನ ಒತ್ತಾಯಕ್ಕೆ ಮಣಿದು ನಿಮ್ಮನ್ನು ಮದುವೆಯಾದೆ. ನನಗೆ ಈಗಲೂ ಅವನೇ ಇಷ್ಟ. ಬದುಕು ಅನ್ನೋದೇ ಇದ್ರೆ ಅವನೊಂದಿಗೆ ಮಾತ್ರ. ನನಗೆ ತಕ್ಷಣವೇ ಡೈವೋರ್ಸ್ ಕೊಡಿ’ ಅನ್ನುತ್ತಾಳೆ.
ಇತ್ತೀಚಿನ ಟಿಪ್ಪಣಿಗಳು