ಇಂದು ಬಿ ವಿ ಕಾರಂತರ ಜನ್ಮದಿನ. ಆ ನೆನಪಿಗೆ ಜೋಗಿ ಕಾರಂತರ ಆತ್ಮಕಥನ (ವೈದೇಹಿ) ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ..’ ಕುರಿತು ಬರೆದ ಬರಹವನ್ನು ನೀಡುತ್ತಿದ್ದೇವೆ. ಜೊತೆಗೆ ನೆನಪಿನ ಆಲ್ಬಂನ ಪುಟವಿದೆ. ಡಾ. ವಿಜಯಾ ದಶಕಗಳ ಹಿಂದೆ ಆಕಾಶವಾಣಿಗಾಗಿ ಬಿ ವಿ ಕಾರಂತರನ್ನು ಸಂದರ್ಶಿಸಿದ್ದು ಹೀಗೆ..
-ಜೋಗಿ
ಕೊನೆಗೂ ಬಿ.ವಿ. ಕಾರಂತರ ಆತ್ಮಚರಿತ್ರೆ ಬಿಡುಗಡೆಯಾಗಿದೆ. ಹಕ್ಕುಗಳು ಬಿವಿ ಕಾರಂತರ ಪ್ರತಿಷ್ಠಾನದ ವಶವಾಗಿದೆ. ಅಲ್ಲಿಗೆ ಪುಸ್ತಕಕ್ಕೆ ಸಂಬಂಸಿದಂತೆ ಎಲ್ಲ ರಗಳೆಗಳೂ ಮುಗಿದಂತಾಗಿದೆ.
ಐನೂರೈವತ್ತು ಪುಟಗಳ ಕಾರಂತರ ಆತ್ಮಚರಿತ್ರೆಯನ್ನು ಓದುತ್ತಿದ್ದಾಗ ಮೊದಲು ಕಣ್ಣಿನ ಮುಂದೆ ಥಟ್ಟನೆ ನಿಲ್ಲುವುದು ಕಾರಂತರ ಅಗಾಧವಾದ ಪ್ರತಿಭೆ ಮತ್ತು ಅದನ್ನು ಅವರು ನಿಭಾಯಿಸಿದ ರೀತಿ. ಓದಿ ಮುಗಿಸುತ್ತಿದ್ದಂತೆ ಬೆರಗುಗೊಳಿಸುವುದು ವೈದೇಹಿಯವರ ಶ್ರದ್ಧೆ ಮತ್ತು ಶ್ರಮ. ಹಾಗೆ ನೋಡಿದರೆ ಇದು ವೈದೇಹಿಯವರು ಬರೆದ ‘ಮತ್ತೊಬ್ಬನ ಆತ್ಮಚರಿತ್ರೆ’ಯೂ ಹೌದು. ಕಾರಂತರನ್ನು ಬಲ್ಲವರಿಗೆಲ್ಲ ಗೊತ್ತು ; ವೈದೇಹಿ ರಚ್ಚೆ ಹಿಡಿದು ಮಾತಾಡಿಸದೇ ಹೋಗಿದ್ದರೆ ಕಾರಂತರು ಅಷ್ಟೆಲ್ಲವನ್ನು ಬಿಟ್ಟುಕೊಡುತ್ತಿರಲಿಲ್ಲ. ವೈದೇಹಿಯವರು ನಿಸ್ವಾರ್ಥ ಪ್ರೀತಿಯಿಂದ ಲಿಪಿಕಾರರಾಗದೇ ಹೋಗಿದ್ದರೆ ಮತ್ಯಾರಿಗೂ ಕಾರಂತರ ಜೊತೆಗೆ ಏಗುವ ತಾಳ್ಮೆ ಮತ್ತು ವ್ಯವಧಾನ ಇರುತ್ತಿರಲಿಲ್ಲ. ಹೀಗಾಗಿ ಕಾರಂತರನ್ನೂ ವೈದೇಹಿಯವರನ್ನೂ ಒಟ್ಟೊಟ್ಟಿಗೆ ಮೆಚ್ಚುವುದಕ್ಕೆ ಕಾರಂತರ ಆತ್ಮಚರಿತ್ರೆ ಕಾರಣವಾಗಿದೆ.
ಇದನ್ನು ಆತ್ಮಚರಿತ್ರೆ ಎಂದು ವೈದೇಹಿಯವರು ಕರೆದಿಲ್ಲ. ಬದುಕಿನ ನೆನಪು ಅನುಭವಗಳ ಕಥನ ಎಂದಿದ್ದಾರೆ. ಅವರು ಬದುಕಿರುವಾಗಲೇ ಹೇಳಿಬರೆಸಿದ್ದರಿಂದ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಶೀರ್ಷಿಕೆಯೂ ಅರ್ಥವತ್ತಾಗಿದೆ ಎಂದುಕೊಳ್ಳಬೇಕು. ಇಲ್ಲಿ ಮತ್ತು ಅಲ್ಲಿ ಅನ್ನುವುದನ್ನು ಜೀವನ ಮತ್ತು ರಂಗ ಎಂದು ಸರಳವಾಗಿ ಅರ್ಥಮಾಡಿಕೊಂಡು ನೋಡುವುದೂ ಕಾರಂತರ ವಿಚಾರದಲ್ಲಿ ಅಷ್ಟು ಸರಿಯಲ್ಲ. ಹಾಗೆ ನೋಡುವುದಾದರೆ ಅವರು ಇಲ್ಲಿದ್ದವರೇ ಅಲ್ಲ ; ಸದಾ ಅಲ್ಲೇ ಇದ್ದವರು.
‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಓದುವ ಮುಂಚೆ ಪ್ರತಿಯಾಬ್ಬರೂ ಕೃತಿಯ ಅಂತ್ಯದಲ್ಲಿ ಕೊಟ್ಟಿರುವ ಬಿ. ವಿ. ಕಾರಂತರ ನಾಟಕ ಸೂಚಿಯನ್ನು ಗಮನಿಸಬೇಕು. 56 ಕನ್ನಡ, 44 ಹಿಂದಿ, ಉರ್ದು, ಪಂಜಾಬಿ, ಸಂಸ್ಕೃತ, ಗುಜರಾತಿ, ಮಲಯಾಳಂ, ತೆಲುಗು, ಇಂಗ್ಲಿಷ್ ಅಂತ 12, ಮಕ್ಕಳಿಗೋಸ್ಕರ ಕನ್ನಡ-ಹಿಂದಿಯಲ್ಲಿ 30 ನಾಟಕಗಳನ್ನು ಕಾರಂತರು ಆಡಿಸಿದ್ದಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ನೋಡಿರದಷ್ಟು ನಾಟಕಗಳನ್ನು ಗ್ರಹಿಸಿ, ಅವನ್ನು ರಂಗಕ್ಕೆ ತಂದದ್ದು ಸಾಮಾನ್ಯ ಸಾಧನೆಯೇನಲ್ಲ. ಇದರ ಜೊತೆಗೇ ಅವರು ನಿರ್ದೇಶಿಸಿರುವ ಸಿನಿಮಾಗಳ ಪಟ್ಟಿಯಿದೆ. ಸಂಗೀತ ನಿರ್ದೇಶನ ನೀಡಿದ ಸಿನಿಮಾಗಳಿದ್ದಾವೆ. ಕುಸುಮಬಾಲೆಯನ್ನು ರಂಗರೂಪಕ್ಕೆ ತಂದದ್ದಿದೆ. ಭೂಮಿಗೀತವನ್ನು ರಂಗಕ್ಕೆ ಅಳವಡಿಸಿದಂಥ ಪ್ರಯೋಗಗಳಿವೆ.
ಇಷ್ಟೆಲ್ಲ ಸಾಧಿಸಿದ ಜೀವನದ ಅನುಭವಗಳೂ ಅಷ್ಟೇ ದಟ್ಟವಾಗಿರಲೇಬೇಕು. ಆ ಕಾರಣಕ್ಕೇ ಕಾರಂತರ ಬದುಕಿನ ಅನುಭವ ಮತ್ತು ನೆನಪುಗಳು ನಮ್ಮನ್ನು ಒಳಗೊಳ್ಳುತ್ತಾ ಓದಿಸಿಕೊಂಡು ಹೋಗುತ್ತವೆ. ಪ್ರತಿಯಾಂದು ನೆನಪೂ ಮತ್ತೊಂದು ನೆನಪಿನ ಜೊತೆ ತಳುಕು ಹಾಕಿಕೊಳ್ಳುತ್ತಲೇ ಅನನ್ಯವಾಗಿ ಉಳಿಯುವಂತೆ ದಾಖಲಾಗಿದೆ. ಬದುಕು ಮತ್ತು ರಂಗಭೂಮಿ ಎರಡರ ವ್ಯತ್ಯಾಸ ಅಳಿಯುವಷ್ಟು ಗಾಢವಾಗಿ ಕಾರಂತರು ಬದುಕಿದ್ದರು ಅನ್ನುವುದು ಗೊತ್ತಾಗುತ್ತದೆ.
ಒಂದೊಂದೇ ಪುಟಗಳನ್ನು ಓದುತ್ತಾ ಹೋದಂತೆ ನಮಗೆ ಮೊದಲಿಗೆ ದಿಗ್ಭ್ರಮೆ ಹುಟ್ಟಿಸುವುದು ಕಾರಂತರ ಬದುಕಿನ ವಿಸ್ತಾರ. ಪುತ್ತೂರಿನ ಬಾಬುಕೋಡಿಯಲ್ಲಿ ‘ಕರ್ಕಾಟಕ ಮಾಸಲೆ ಒಳ್ಳೇ ಆದಿತ್ಯವಾರ, ಮಧ್ಯರಾತ್ರಿ, ಕಳ್ಳರು ಹೊರಡ್ತ ಹೊತ್ತಿಲೆ ಹುಟ್ಟಿದ’ ಕಾರಂತರ ಪ್ರತಿಭೆ ಜಗತ್ತಿನ ಸಮಸ್ತ ನಾಟಕಕಾರರ ಪ್ರತಿಭೆಯನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಂಡದ್ದು ಒಂದು ಅಪೂರ್ವ ನಟನೆ. ಈ ಜೀವನಪಥದಲ್ಲಿ ನಮಗೆ ಬೆದರುವ ಬಾಲಕಾರಂತರು, ತುಂಟತನದ ತರುಣ ಕಾರಂತರು, ಶ್ರಮಿಸಿದ ಸಾಧಕ ಕಾರಂತರು, ಅಪರಾ ಸ್ಥಾನದಲ್ಲಿ ನಿಂತ ನಿರ್ದೋಷಿ ಕಾರಂತರು, ಕುಡಿಯುತ್ತಾ ಕುಡಿಯುತ್ತಾ ಅನೇಕ ವರುಷಗಳನ್ನೇ ಕಳಕೊಂಡ ನಿರರ್ಥಕ ಕಾರಂತರು ಈ ನೆನಪಿನ ನದಿಯ ಗುಂಟ ಕಾಣಸಿಗುತ್ತಾರೆ. ಆದರೆ ವೈದೇಹಿಯವರ ನಿರೂಪಣೆಯ ಶೈಲಿ ಮತ್ತು ಕಾರಂತರು ತಮ್ಮ ಜೀವನವನ್ನು ಹೇಳಿಕೊಳ್ಳುವ ಲಹರಿಗೆ ಒಂದು ನಾಟಕದ ಆವೇಗವಿದೆ. ಒಂದು ದೃಶ್ಯದ ಉದ್ವೇಗವಿದೆ. ಜೀವನ ಸಹಜವಾಗಿ ಶುರುವಾಗುತ್ತದೆ. ಒಂದೊಂದೇ ಪಾತ್ರಗಳು ಪರಿಚಯವಾಗುತ್ತಾ ಹೋಗುತ್ತದೆ. ಆ ಪಾತ್ರಗಳ ಜೊತೆಗಿನ ಸಂಬಂಧಗಳು ಸ್ಥಿರವಾಗುತ್ತಾ, ಅಸ್ಥಿರವಾಗುತ್ತಾ ಹೋಗುತ್ತವೆ. ಆ ಸಂಬಂಧಗಳ ಮೂಲಕ ಮತ್ತೊಂದು ಹೊಸ ಜಗತ್ತು ಸೃಷ್ಟಿಯಾಗುತ್ತದೆ. ಆ ಹೊಸ ಜಗತ್ತಿನ ವ್ಯಾಪಾರಗಳಿಗೆ ಸ್ಪಂದಿಸುತ್ತಾ ಕಾರಂತರೂ ಹೊಸಬರಾಗುತ್ತಾ ಹೋಗುತ್ತಾರೆ.
ಕಾರಂತರ ಜ್ಞಾಪಕ ಚಿತ್ರಶಾಲೆಯ ರಸಗಳಿಗೆಗಳನ್ನು ಅವರ ಮಾತಲ್ಲೇ ಕೇಳುವುದು ಚಂದ. ಈ ಪುಟ್ಟ ಭಾಗಗಳು ನಿಮ್ಮನ್ನು ಇಡೀ ಆತ್ಮಚರಿತ್ರೆಯನ್ನು ಓದುವಂತೆ ಪ್ರೇರೇಪಿಸಲಿಕ್ಕೂ ಸಾಕು. ಅಂಥ ಪ್ರೇರಣೆಯನ್ನು ಯಾವುದಾದರೂ ಜೀವ, ಯಾರದ್ದೋ ಸಾಧನೆ, ಎಲ್ಲಿಯದೋ ಒಂದು ಪ್ರತಿಭೆ ಒದಗಿಸಿದರೆ ಈ ಕಾಲಕ್ಕೆ ಅಷ್ಟೇ ಸಾಕಲ್ಲ.
ನಾನು ಮತ್ತು ರಾಮು ಚೋಮನದುಡಿಯ ಪ್ರೊಡಕ್ಷನ್ ಸ್ಕಿೃಪ್ಟ್ ಸಿದ್ಧಮಾಡಿದೆವು. ಶಿವರಾಮ ಕಾರಂತರಿಗೆ ಪ್ರೊಡಕ್ಷನ್ ಸ್ಕಿೃಪ್ಟ್ ಸಿದ್ಧವಾಗಿದೆ. ಒಮ್ಮೆ ನೀವು ನಿಮ್ಮ ಅನುಭವದಲ್ಲಿ ಹಾಗೂ ಕಲ್ಪನೆಯಲ್ಲಿ ಇರೋ ಜಾಗ ತೋರಿಸುತ್ತೀರಾ ಅಂತ ಕಾಗದ ಬರೆದೆ. ಜಾಗ ನೋಡಿ ಹೋಗಲಿಕ್ಕೆ ನಿರ್ಮಾಪಕ ಮುದ್ದು ಸುವರ್ಣ ವ್ಯವಸ್ಥೆ ಮಾಡಿದರು. ಊರಿಗೆ ಬಂದೆ. ಕಾರಂತರು ಹಲವು ಜಾಗ ತೋರಿಸಿದರು. ಒಂದು ಕಡೆಯಂತೂ ಮೆಟ್ಟಲು ಮೆಟ್ಟಲು ಪ್ರದೇಶ. ಬಹಳ ಅಪರೂಪ ಎನ್ನಿಸಿತು. ಜೊತೆಯಲ್ಲಿ ರಾಮಚಂದ್ರ ಇದ್ದದ್ದರಿಂದ ಕಾರಂತರ ಸನಿಹ ಬರಲು ನನಗೆ ಅನುಕೂಲವಾಯಿತು. ನಮ್ಮ ಕಾರು ಆಗುಂಬೆ ಘಾಟಿ ಏರುವುದರೊಳಗೆ ಕೈಕೊಟ್ಟಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಂಡಿದ್ದೆವು. ನಾನು ಕಾರಂತರನ್ನು ಮೆಲ್ಲ ಕೇಳಿದೆ;
‘ನಿಮಗೆ ಅಸಮಧಾನ ಆಗಲ್ವಾ?’
‘ಅಸಮಾಧಾನ ಆದ್ರೆ ಕಾರು ಸರಿಹೋಗುತ್ತಾ?’ -ಕಾರಂತರು!
ಆಗುಂಬೆಯಲ್ಲಿ ಭಟ್ಟರ ಮನೆಯಲ್ಲಿ ಊಟಗೀಟ ಎಲ್ಲ ಚೆನ್ನಾಗಿತ್ತು. ಕುಂಬಳಕಾಯಿ ಹಲ್ವ ಮಾಡಿದ್ದರು. ಅಲ್ಲಿ ಮಾತಾಡುತ್ತಾ ಆಡುತ್ತಾ ನಾನು ಕಾರಂತರೊಡನೆ ‘ಪೂನಾಕ್ಕೆ ಹೋಗ್ತಿದ್ದೀನಿ. ಫಿಲ್ಮ್ ಇನ್ಸ್ಟಿಟ್ಯೂಟಿಗೆ. ಅಲ್ಲಿ ಗಿರೀಶರಿಗೆ ಸ್ಕಿೃಪ್ಟು ತೋರಿಸ್ತೇನೆ’ ಅಂದೆ. ಯಾಕೆ ಬೇಕಿತ್ತು ಈ ಕೆಲಸ. ಗೊತ್ತಿಲ್ಲ. ಹಾಗೆ ಹೇಳಬಾರದಾಗಿತ್ತು ನಾನು. ಹೇಳಿದ ತಕ್ಷಣವೇ ಕಾರಂತರು ‘ಸ್ಕಿೃಪ್ಟ್ ತೋರಿಸಲಿಕ್ಕೆ ಯಾರವರು? ಬರೆದದ್ದು ನಾನು. ಅವರು ಯಾರು ನೋಡಲಿಕ್ಕೆ?’ ಎಂದುಬಿಟ್ಟರು.
ಚೋಮನ ದುಡಿಗೆ ಬೆಸ್ಟ್ ಫಿಲ್ಮ್ ಅವಾರ್ಡು ಬಂದರೂ ಶಿವರಾಮ ಕಾರಂತರಿಗೆ ಮಾತ್ರ ಬಹಳ ಸಿಟ್ಟಿತ್ತು. ‘ಚೆನ್ನಾಗಿಲ್ಲ. ನಾನು ಹೇಳಿದ ನಟರನ್ನು ತೆಗೆದುಕೊಳ್ಳಲಿಲ್ಲ. ಬೆಳ್ಳಗಿದ್ದವನನ್ನು ಹೊಲೆಯ ಅಂತ ಮಾಡಿದ್ದಾರೆ’ ಮುಂತಾಗಿ ಎಲ್ಲ ಹೇಳಿದರಂತೆ. ಮೊದಲ ದಿನ ಚೋಮ ಬೆಳ್ಳಗಿದ್ದದ್ದೇನೋ ನಿಜ. ಮುಹೂರ್ತಕ್ಕೆ ಚೋಮನಿಗೆ ಬಣ್ಣ ಹಾಕಿರಲಿಲ್ಲ.
ಒಮ್ಮೆ ಜಿ. ವಿ. ಅಯ್ಯರ್ ದಿಲ್ಲಿಗೆ ಬಂದರು. ‘ಚೌಕದ ದೀಪ’ ಫಿಲ್ಮ್ ಮಾಡಿ ಸೋತು ದಿಲ್ಲಿಗೆ ಬಂದಿದ್ದರು. ಅವರ ನಲ್ವತ್ತೊಂಬತ್ತನೇ ಚಿತ್ರವಂತೆ ಅದು. ಚಿತ್ರದ ಕತೆಯಲ್ಲಿ ಅಣ್ಣ ಸ್ವಲ್ಪ ಲಂಪಟ. ಅದಕ್ಕೆ ತಕ್ಕಂತೆ ಚಿತ್ರದಲ್ಲಿ ಗೆರೆ ಮೀರಿದ ದೃಶ್ಯವೊಂದಿದ್ದು ಪ್ರೇಕ್ಪಕರು ರೊಚ್ಚಿಗೆದ್ದರಂತೆ. ಗಲಾಟೆ ಮಾಡಿ ಪರದೆ ಎಲ್ಲ ಹರಿದುಹಾಕಿ ಕಲ್ಲು ಹೊಡೆದು ದೊಂಬಿ ಮಾಡಿದರಂತೆ. ಸಿಕ್ಕಾಪಟ್ಟೆ ನಷ್ಟವಾಗಿ ಸಾಲಗಾರರಿಗೆ ಮುಖ ತೋರಿಸಲಿಕ್ಕಾಗದೆ ದಿಲ್ಲಿಗೆ ಓಡಿ ಬಂದುಬಿಟ್ಟಿದ್ದರು. ಅವರ ಬದುಕಿನಲ್ಲಿ ಇಂಥದ್ದು ಹತ್ತಾರು. ಎಂತಲೇ ಅವರನ್ನು ‘ಫೀನಿಕ್ಸ್’ ಎನ್ನುತ್ತಿದ್ದರು. ದಿಲ್ಲಿಗೆ ಬಂದವರು ನಮ್ಮಲ್ಲೇ ಉಳಿದುಕೊಂಡರು. ಆ ಸಮಯದಲ್ಲೇ ಅವರು ‘ವಂಶವೃಕ್ಷ’ ಓದಿದ್ದು.
ಅವರು ಬಂದಾಗ ಚಳಿಗಾಲ. ಅಯ್ಯರ್ ಚಪ್ಪಲಿಯಿಲ್ಲದೆ ನಡೆಯುವವರು. ಆ ಥಂಡಿ ರಸ್ತೆಯ ಮೇಲೆ ನಡೆಯುವಾಗ ಬೆಂಕಿಯಲ್ಲಿ ನಡೆದಂತೆ ಹಾರುತ್ತಿದ್ದರು. ಆಗ ಭೈರಪ್ಪನವರೂ ದೆಹಲಿಯಲ್ಲಿರುತ್ತಿದ್ದರು. ಪ್ರತಿದಿನ ನಮ್ಮ ಮನೆಯವರೆಗೆ ವಾಕಿಂಗ್ ಬರುತ್ತಿದ್ದರು. ಹೀಗಿರುವಾಗ ಅಯ್ಯರ್ ಒಂದು ದಿನ ‘ವಂಶವೃಕ್ಷ’ ಯಾಕೆ ಸಿನಿಮಾ ಮಾಡಬಾರದು’ ಅಂದರು.
‘ನನಗೇನಂತೆ’
‘ಅಲ್ಲ, ಭೈರಪ್ಪನವರು ಪರ್ಮಿಷನ್ ಕೊಡಬೇಕಲ್ಲ’
‘ನಾನು ಮಾತಾಡ್ತೀನಿ. ನೋಡೋಣ’ ಅಂದೆ. ಆಗ ದಿಶಾಂತರ್ನಲ್ಲಿ ‘ಖಾಮೋಷ್. ಅದಾಲತ್ ಜಾರೀ ಹೈ’ ನಾಟಕದ ರಿಹರ್ಸಲ್ ನೋಡೋಕೆ ಭೈರಪ್ಪನವರು ಬರುತ್ತಿದ್ದರು. ಭೈರಪ್ಪನವರಿಗೆ ನಾನು ಅಯ್ಯರ್ ಆಸೆ ತಿಳಿಸಿದೆ. ಯೋಚನೆ ಮಾಡ್ತೀನಿ ಅಂದರು. ಆಮೇಲೆ ಒಂದಿನ ಮನೆಗೆ ಬಂದಾಗ ‘ನೋಡಿ ಕಾರಂತರೆ, ನಾನು ಕಮರ್ಶಿಯಲ್ ಆಗಿ ಕೊಡೋದಿಲ್ಲ. ನೀವು ಡೈರೆಕ್ಟ್ ಮಾಡೋದಾದರೆ ಕೊಡ್ತೀನಿ’ ಅಂದರು. ‘ಮಾಡ್ಲಿ. ಕಾರಂತರೇ ಮಾಡ್ಲಿ. ನಮ್ಮವ ಇವ. ನನ್ನ ತಮ್ಮನ ಹಾಗೆ’ ಅಂದರು ಅಯ್ಯರ್.
ಪೂರಾ ನಟನೆ ಅವರದು. ಅಯ್ಯರ್ಗೆ ಇರುವಷ್ಟು ಅವತಾರಗಳು ಇನ್ಯಾರಿಗೂ ಇರಲಿಕ್ಕಿಲ್ಲ.
ಬೆಂಗಳೂರಲ್ಲಿ ಹಿಂದೊಮ್ಮೆ ಬಂದವ ಶ್ರೀರಂಗರ ನಾಟಕ ‘ನೀಕೊಡೆ ನಾ ಬಿಡೆ’ ಮಾಡಿ ಹೋಗಿದ್ದೆ. ಪ್ರದರ್ಶನಕ್ಕೆ ಬಂದ ವೈಎನ್ಕೆ ‘ನೀ ಕೊಡೆ ನಾ ಬಿಡೆ’ ಅಂತ ಬಾಗಿಲು ಹಾಕಿಕೊಂಡು ಬಿಟ್ಟಿದ್ದೀರಲ್ಲ’ ಅಂತ ತಮಾಷೆ ಮಾಡಿದ್ದರು. ಸ್ವತಃ ಶ್ರೀರಂಗರೇ ಬೆಂಗಳೂರಿನ ಪ್ರೇಕ್ಷಕರು ಎದ್ದು ಹೋಗುತ್ತಾರಂತ ಬಾಗಿಲು ಹಾಕಿಬಿಟ್ಟಿದ್ದರು.
ಮಾರ್ಚ್ ಹೊತ್ತಿಗೆ ವಿಭಾ ಭೋಪಾಲಿಗೆ ಬಂದಳು.
ಕೋರ್ಟಿಗೆ ಅವಳು ಹಾಜರಾಗುವ ದಿವಸ ನಾನು ಒಂದು ಕಡೆ ಮೆಟ್ಟಿಲು ಹತ್ತಿ ಬರುತ್ತಿದ್ದೇನೆ. ಅವಳು ಕಡೆಯಿಂದ ಬಂದಳು. ಎದುರು ಬರುತ್ತಲೂ ಎರಡೂ ಕೈ ಮುಗಿದು ನಮಸ್ಕರಿಸಿದಳು. ಕೋರ್ಟಿನಲ್ಲಿ ಅಂದಂತೂ ಆಸಕ್ತರೂ ಪತ್ರಕರ್ತರೂ ಜಮಾಯಿಸಿದ್ದರು. ಪೊಲೀಸರು ನನ್ನನ್ನು ಕರೆದುಕೊಂಡು ಬರುವಾಗ ಫೊಟೋ ತೆಗೆಯಲು ತಳ್ಳಿ ಮೈಮೇಲೇ ಬೀಳೋರು. ತೊಂದರೆ ಕೊಡಬೇಡಿ ಅನ್ನುತ್ತಾ ಅವರನ್ನು ಕೈಯಿಂದ ತಳ್ಳಿಕೊಳ್ಳುತ್ತಾ ಇದ್ದೆ.
ಪರ್ತಕರ್ತರು ನ್ಯಾಯಾಧೀಶರಿಗೆ ಒಂದು ಪತ್ರ ಕೊಟ್ಟರು. ‘ಬೀವೀ ಕಾರಂತರಲ್ಲಿ ದುಷ್ಟತನ ಬೆಳೆದಿದೆ. ನಮ್ಮ ಕರ್ತವ್ಯ ಮಾಡುವಾಗ ಚ್ಯುತಿಯುಂಟುಮಾಡಿದರು. ಕ್ಯಾಮರಾ ಕಿತ್ತುಕೊಂಡರು, ದೂಡಿ ಹಾಕಿದರು. ಅವರಿಗೆ ಕೋಳ ತೊಡಿಸಬೇಕು’ ಅಂತ. ಹತ್ತು ಹನ್ನೆರಡು ಮಂದಿ ಪತ್ರಕರ್ತರು ಸಹಿಹಾಕಿದ್ದರು. ನ್ಯಾಯಾಧೀಶರು ಅದನ್ನು ಓದಿಕೊಂಡು ಕಾರಂತರ ಜೊತೆಗಿದ್ದ ಪೊಲೀಸರನ್ನು ವಿಚಾರಿಸಬೇಕು ಅಂತಂದು ಊಟಕ್ಕೆ ಎದ್ದು ಹೋದರು. ನನಗೆ ಗಾಬರಿಯಾಯಿತು. ಇದುವರೆಗೆ ಬೇಡಿ ಹಾಕಿರಲಿಲ್ಲ. ಈಗ ಅದನ್ನೂ ತೊಡಿಸುತ್ತಾರೆಯೇ? ಪೊಲೀಸಿನವರ ಹತ್ತಿರ ಕೇಳಿದರೆ ಅವರು ಏನು ಹೇಳಿಯಾರು? ನನ್ನ ಪರವಂತೂ ಅಲ್ಲ…’ ಎಂದು ಯೋಚಿಸುತ್ತಿದ್ದೆ.
ಊಟದ ನಂತರ ಜಜ್ ಒಬ್ಬೊಬ್ಬ ಪೊಲೀಸರನ್ನೂ ಕರೆದು ಕೇಳಿದರು. ‘ಆರೋಪಿ ಬಹಳ ಶಾಂತರಾಗಿದ್ದರು. ಪೊಟೋ ತೆಗೀಬೇಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದರು. ಆರೋಪಿಯ ಯಾವ ತಪ್ಪೂ ಇಲ್ಲ’ ಎಂದು ಒಬ್ಬ ಹೇಳಿದ. ಇನ್ನೊಬ್ಬ ‘ನಾನು ಪ್ರೆಸ್ಸಿನವರನ್ನು ಕೇಳಿಕೊಂಡೆ. ನಮ್ಮ ಕಸ್ಟಡಿಯಲ್ಲಿ ಇರೋದರಿಂದ ಅವರನ್ನು ಕಾಪಾಡಿಕೊಳ್ಳೋದು ನಮ್ಮ ಕರ್ತವ್ಯ. ಆದ್ದರಿಂದ ಕಷ್ಟ ಕೊಡಬೇಡಿ ಅಂದೆ. ಅವರು ಕೇಳಲಿಲ್ಲ. ಆಪಾದಿತ ಶಾಂತಚಿತ್ತನಾಗಿದ್ದ’ ಅಂದ.
ಪತ್ರಕರ್ತರು ಸಪ್ಪಗಾದರು.
ಮೂವತ್ತೆಂಟನೇ ಇಸವಿಯಲ್ಲಿ ಕುಕ್ಕಾಜೆಯಲ್ಲಾದ ಕನ್ನಡ ನಾಟಕ ಐವತ್ತೆಂಟನೇ ಇಸವಿಯಲ್ಲಿ ಕಾಶಿಯಲ್ಲಿ ಹೊಸದೊಂದು ನಾಟಕದ ಹುಟ್ಟಿಗೆ ಕಾರಣವಾದ ರೋಮಾಂಚನಗೊಳಿಸುವ ಘಟನೆಯಿಂದ ಹಿಡಿದು, ಕಾರಂತರು ಕುಡಿತ ಬಿಡುವುದಕ್ಕೆ ಪಟ್ಟ ಪಾಡಿನ ವಿಹ್ವಲಗೊಳಿಸುವ ಸಂಗತಿಯ ತನಕ ಪ್ರತಿಯಾಂದು ನೆನಪಿನ ಚಿತ್ರವೂ ಇಲ್ಲಿ ದಾಖಲಾಗಿದೆ. ಎಲ್ಲಾ ಆತ್ಮಚರಿತ್ರೆಗಳಂತೆ ಇದು ಕೂಡ ಒಂದು ಕಾಲದ ಕತೆ. ರಂಗಾಯಣದ ಹುಡುಗರಿಗೆ ಸ್ಪೀಚ್ ಬಗ್ಗೆ ಹೇಳಿ ಅಂದಾಗ ಭಾಷಣ ಅಂದುಕೊಂಡು ರಾಜ್ಕುಮಾರ್ ‘ನಾನು ಸ್ಪೀಚ್ ಮಾಡೋಲ್ಲ’ ಅಂದ ಘಟನೆಯಿಂದ ಹಿಡಿದು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಕಂಪೆನಿಯಲ್ಲಿ ಕಾರಂತರು ಕೃಷ್ಣನಾಗಿ ಮುತ್ತುರಾಜ್ ಬಲರಾಮನಾಗಿ ನಟಿಸಿದ ನಾಟಕದ ದಿನಗಳ ತನಕ ಎಲ್ಲವನ್ನೂ ಕಾರಂತರು ಒಡಲಲ್ಲಿ ಬಚ್ಚಿಟ್ಟುಕೊಂಡು ಕಾಪಾಡಿದ್ದಾರೆ.
ಕನ್ನಡದಲ್ಲಿ ಆತ್ಮಚರಿತ್ರೆಗಳು ಅಷ್ಟಾಗಿ ಬಂದಿಲ್ಲ. ಆತ್ಮಚರಿತ್ರೆ ಬರೆಯುವಂಥ ಘನ ವ್ಯಕ್ತಿತ್ವಗಳೂ ನಮ್ಮ ಸುತ್ತಮುತ್ತಲೂ ಇದ್ದಂತಿಲ್ಲ. ನಾವೆಲ್ಲ ಸಾರಾಸಗಟಾಗಿ ಮೆಚ್ಚುವುದು ಫಿಕ್ಷನ್ಗಳನ್ನು. ಹೀಗಾಗಿ ಫಿಕ್ಷನ್ಗಳಷ್ಟೇ ಸೊಗಸಾಗಿರುವ ಆತ್ಮಚರಿತ್ರೆಗಳಷ್ಟೇ ಇಲ್ಲಿ ಓದಿಸಿಕೊಳ್ಳುತ್ತವೆ.
ಶಿವರಾಮ ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು, ಕುವೆಂಪು ಅವರ ನೆನಪಿನ ದೋಣಿಯಲ್ಲಿ, ಮಾಸ್ತಿಯವರ ಭಾವ, ಭೈರಪ್ಪನವರ ಭಿತ್ತಿ, ಲಂಕೇಶರ ಹುಳಿಮಾವಿನ ಮರ- ಹೀಗೆ ಥಟ್ಟನೆ ನೆನಪಿಗೆ ಬರುವಂಥವು ಕೆಲವೇ ಕೆಲವು. ಶ್ರೀರಂಗರು ಸಾಹಿತಿಯ ಆತ್ಮಜಿಜ್ಞಾಸೆ ಎಂಬ ಹೆಸರಿನ ಆತ್ಮಚರಿತ್ರೆ ಬರೆದಿದ್ದಾರೆ ಎಂದು ನೆನಪು.
ಆತ್ಮಚರಿತ್ರೆ ತುಂಬ ಚೆನ್ನಾಗಿದೆ. ಲೇಖಕರ ಸೃಜನಶೀಲ ಪ್ರತಿಭೆಗೆ ಅದೇ ಸಾಕ್ಷಿ ಎನ್ನುವಂತೆ ಬಹುತೇಕ ಆತ್ಮಚರಿತ್ರೆಗಳು ಇರುತ್ತವೆ. ತಮ್ಮ ಬದುಕನ್ನು ಸಮರ್ಥಿಸಿಕೊಳ್ಳುವುದಕ್ಕೋ, ತಾವು ಬದುಕಿದ್ದೆವು ಅನ್ನುವುದನ್ನು ಸಾಬೀತು ಮಾಡುವುದಕ್ಕೋ ಅನೇಕರು ಆತ್ಮಚರಿತ್ರೆ ಬರೆಯುತ್ತಾರೆ. ಅಂಥವರ ವಿಚಾರದಲ್ಲಿ ಆತ್ಮವಷ್ಟೇ ಅವಿನಾಶಿ ಅನ್ನುವುದು ನಿಜವಾಗಿದೆ.
ಸಾಮಾನ್ಯವಾಗಿ ಆತ್ಮಚರಿತ್ರೆ ಬರೆಯುವ ಹೊತ್ತಿಗೆ ನೆನಪು ಮತ್ತು ಆಶೆಗಳು ಕಲಸಿಕೊಂಡು ಒಂದು ವಿಚಿತ್ರ ಸತ್ಯ ಸೃಷ್ಟಿಯಾಗಿರುತ್ತದೆ. ಬರೆದವನು ಓದಿದರೂ ರೋಮಾಂಚಗೊಳ್ಳುವಷ್ಟು ಆಪ್ಯಾಯಮಾನವೂ ರೋಚಕವೂ ಆಗಿ ಹೊರಹೊಮ್ಮುವುದೂ ಉಂಟು.
ಕಾರಂತರ ಆತ್ಮಕತೆಯಲ್ಲಿ ಕಾಣಿಸುವ ಪ್ರಾಮಾಣಿಕತೆಯೇ ಅದರ ಶಕ್ತಿ. ಅವರೇ ಟಿಪ್ಪಣಿಗಳಲ್ಲಿ ಬರೆದುಕೊಂಡಂತೆ;
‘ನಾನು ಮೊದಲಿನಿಂದಲೂ ಸುಳ್ಳು ಹೇಳುತ್ತಾ ಬಂದಿದ್ದೇನೆ. ಆ ಸುಳ್ಳಿನಿಂದ ಇನ್ನೊಬ್ಬರಿಗೆ ತೊಂದರೆಯಾಗುವುದಿಲ್ಲವೆಂಬ ನನ್ನದೇ ಆದ ಭರವಸೆಯೂ ಇರುತ್ತಿತ್ತು. ಅದಕ್ಕೇ ಈ ಇಳಿ ವಯಸ್ಸಿನಲ್ಲಿ ನನಗೆ ಸುಳ್ಳು ಸತ್ಯಗಳ ಭೇದವೇ ಮರೆತುಹೋಗಿದೆ. ನನ್ನ ಈ ದೀರ್ಘ ಜೀವನದ ಬಗ್ಗೆ ಉಳಿದವರು ಏನು ತಿಳಿದುಕೊಂಡಿದ್ದಾರೋ ಅದೇ ನನ್ನ ಕತೆ. ಆದರೆ ಈ ಉಳಿದವರಲ್ಲಿ ನಾನೂ ಒಬ್ಬನಾಗಿದ್ದೇನೆ.’
ಓದಿದ ನಂತರ ಆ ಉಳಿದವರಲ್ಲಿ ನಾವೂ ಒಬ್ಬರಾಗುತ್ತೇವೆ. ಅವರ ಕತೆ ನಮ್ಮದೂ ಆಗಿರುತ್ತದೆ.
ಆಗಲಿ.
ಇತ್ತೀಚಿನ ಟಿಪ್ಪಣಿಗಳು