ಒಂದು ಸಲ ಒಬ್ಬ ಬಡವ ದೇವರಿಗೆ ಒಂದು ಕಾಗದ ಬರೆದನಂತೆ: “ದೇವರೇ, ನನಗೆ ನೂರು ರೂಪಾಯಿ ಬೇಕಾಗಿದೆ. ದಯವಿಟ್ಟು ಕಳಿಸು” ಅಂತ. ಕಾಗದದ ಮೇಲೆ, “ಸ್ವರ್ಗದಲ್ಲಿರುವ ದೇವರಿಗೆ” ಅಂತ ವಿಳಾಸ ಬರೆದು ಅಂಚೆಪೆಟ್ಟಿಗೆಯಲ್ಲಿ ಹಾಕಿದನಂತೆ.
ಪೋಸ್ಟಾಫೀಸಿನವರು ಆ ಕಾಗದವನ್ನು ನೋಡಿ ನಕ್ಕು “ನಮ್ಮ ರಾಜ್ಯದಲ್ಲಿ ಎಂಥೆಂಥವರಿದ್ದಾರೆ ಎಂಬುದನ್ನು ನಮ್ಮ ದೊರೆಗಳು ತಿಳಿಯಲಿ. ಅದೂ ಅಲ್ಲದೆ, ರಾಜಾ ಪ್ರತ್ಯಕ್ಷ ದೇವತಾ ಎಂದು ಹಿರಿಯರು ಹೇಳುತ್ತಾರಲ್ಲವೆ!” ಎಂದು ಅದನ್ನು ಆ ಊರಿನ ರಾಜನಿಗೆ ರವಾನಿಸಿದರು.
ರಾಜನೂ ಮಂತ್ರಿಯೂ ಪರಿವಾರದವರೂ ಆ ಬಡವನ ಕಾಗದವನ್ನು ಓದಿ ಓದಿ ನಕ್ಕು ನಕ್ಕು ಸುಸ್ತಾದರು. ಸುಧಾರಿಸಿಕೊಂಡ ಮೇಲೆ ದೊರೆ ಹೇಳಿದ: “ಮಂತ್ರಿ, ಆ ಬಡವನಿಗೆ ನೂರು ರೂಪಾಯಿ ಕಳಿಸಿಬಿಡು.”
ಮಂತ್ರಿ ಹೇಳಿದ: “ಪ್ರಭುವೇ, ಅವನೇ ನೂರು ಕೇಳಿರುವಾಗ ನಾವು ಪೂರ್ತಿ ನೂರನ್ನು ಕಳಿಸುವುದು ನೀತಿಯಲ್ಲ. ಹೀಗೆ ಕೇಳಿದವರಿಗೆಲ್ಲ ಅವರು ಕೇಳಿದಷ್ಟನ್ನು ಕಳಿಸಿದರೆ ಬೊಕ್ಕಸ ಬಹುಬೇಗ ಬರಿದಾಗುತ್ತದೆ. ಆದ್ದರಿಂದ ಅವನಿಗೆ ಐವತ್ತು ಕಳಿಸೋಣ, ಸಾಕು.”
“ಹಾಗೆಯೇ ಮಾಡು” ಎಂದ ರಾಜ. ಮಂತ್ರಿ ಆ ಬಡವನಿಗೆ ಅರಸನ ಹೆಸರಿನಲ್ಲಿ ಐವತ್ತು ರೂಪಾಯಿ ಕಳಿಸಿದ. ಬಡವ ಅದನ್ನು ಮಾತಿಲ್ಲದೆ ತೆಗೆದುಕೊಂಡ. ದೇವರಿಗೆ ಅದೇ ರಾತ್ರಿ ಮತ್ತೊಂದು ಕಾಗದ ಬರೆದ: “ದೇವರೇ, ನನ್ನ ಕಾಗದಕ್ಕೆ ನೀನು ಕೂಡಲೇ ಉತ್ತರ ಕೊಟ್ಟದ್ದು ತುಂಬ ಸಂತೋಷ. ಆದರೆ ದೇವರೇ, ಇನ್ನು ಮುಂದೆ ನೀನು ಹೀಗೆ ಏನಾದರೂ ಹಣ ಕಳಿಸುವುದಾದರೆ, ನೇರವಾಗಿ ನನಗೇ ಕಳಿಸು. ಈ ದೊರೆಯ ಮೂಲಕ ಕಳಿಸಬೇಡ. ಅವನು ನನಗೆ ಐವತ್ತು ಮಾತ್ರ ಕೊಟ್ಟಿದ್ದಾನೆ.”
ಚಿತ್ರ: ಸೃಜನ್
ಏಪ್ರಿಲ್ 12, 2010 @ 22:20:13
thumbha chennagide