-ನಾ ಕಾರಂತ ಪೆರಾಜೆ
‘ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು’ – ಬದುಕಿಗಂಟಿದ ಗಾದೆ. ಮನೆಕಟ್ಟಿ, ಮದುವೆಯಾಗುವಾಗ ಬದುಕೇ ಹೈರಾಣ! ಉಳ್ಳವರಿಗೆ ತೊಂದರೆಯಿಲ್ಲ. ಮಧ್ಯಮವರ್ಗದವರಿಗೆ? ಸಾಲ-ಸೋಲ ಮುಗಿವಾಗ ಆಯುಸ್ಸಿನ ಅರ್ಧ ಲೆಕ್ಕಣಿಕೆ ಮುಗಿದಿರುತ್ತದೆ!
‘ಅಡಿಪಾಯ ಮಾಡಿಕೊಡಿ. ಎರಡೇ ದಿವಸದಲ್ಲಿ ಮನೆ ಸಿದ್ಧ’ – ಇದೇನೂ ‘ಆಫರ್’ಗಳ ಬೊಗಳೆ ಅಲ್ಲ! ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯ ಕೆ.ಎ.ಭಾಗ್ಯದೇವ್ ಅವರ ಸ್ಲೋಗನ್. ಈಗಾಗಲೇ ಎಪ್ಪತ್ತಕ್ಕೂ ಮಿಕ್ಕಿ ಕಳಚಿ ಒಯ್ಯಬಹುದಾದ ಕಳಚಿ ಜೋಡಿಸಬಲ್ಲ ಮನೆಗಳನ್ನು ತಯಾರಿಸಿದ್ದಾರೆ.
ಆದೇಶ ಕೊಟ್ಟು ಮರೆತು ಬಿಡಿ. ತಿಂಗಳೊಳಗೆ ಲಾರಿಯೊಂದು ನಿಮ್ಮ ಮನೆಯ ಮುಂದೆ ನಿಲ್ಲುತ್ತದೆ. ಸಿಮೆಂಟಿನ ವಿವಿಧ ಆಕಾರದ ವಸ್ತುಗಳನ್ನು ಕೆಳಗಿಳಿಸುತ್ತಾರೆ. ಬೈಕಿನಲ್ಲಿ ಪೇಟೆಗೆ ಹೋಗಿ ಪೇಪರ್ ತರುವಷ್ಟರಲ್ಲಿ ನಿಮ್ಮ ಮನೆಯಂಗಳದಲ್ಲಿ ಹೊಸ ಮನೆಯೊಂದು ತಲೆಯೆತ್ತಿರುತ್ತದೆ!
ಭಾಗ್ಯದೇವ್ ಇಂಜಿನಿಯರ್. ಮಧ್ಯಮವರ್ಗದವರ ಕಷ್ಟದ ಅರಿವಿದ್ದ ಕೃಷಿಕ. ಏಳೆಂಟು ಲಕ್ಷ ಸುರಿದು ಮನೆಕಟ್ಟಿ, ಅದ್ದೂರಿ ‘ಒಕ್ಕಲು’ ಮಾಡಿದರೂ ಎಷ್ಟು ಮಂದಿ ತೃಪ್ತರು? ‘ದೊಡ್ಡ ಮನೆ ಕಟ್ಟಬೇಕೆಂದರೆ ಐದಾರು ಲಕ್ಷ ಬೇಕಲ್ವಾ. ನಮ್ಮಿಂದಾಗದು’ ಎನ್ನುವವವರ ಬವಣೆಯೂ ಗೊತ್ತು. ಇಂತಹವರ ನೆರವಿಗೆ ಮುಂದೆ ಬಂದಿದ್ದಾರೆ ಭಾಗ್ಯದೇವ್.
ಒಂದು-ಎರಡು-ಮೂರು ‘ಬೆಡ್ರೂಂ’ಗಳು, ಅಡುಗೆ ಮನೆ, ವರಾಂಡ, ಸಿಮೆಂಟ್ ಶೀಟಿನ ಸೂರು. ಸ್ನಾನ-ಶೌಚ ಗೃಹ. ಒಂದೂಕಾಲಿಂಚು ದಪ್ಪದ ಕಾಂಕ್ರಿಟ್ ಗೋಡೆ. ಬಾಗಿಲು, ಕಿಟಕಿ – ಇವಿಷ್ಟು ಕಳಚಿ ಜೋಡಿಸುವಂತಹುದು. ‘ಬೋಲ್ಟ್ ಸಿಸ್ಟಂ’.
ಅಡಿಪಾಯ ರಚನೆಯು ಭಾಗ್ಯದೇವ್ ‘ಪ್ಯಾಕೇಜ್’ಗೆ ಸೇರಿಲ್ಲ. ಉಳಿದ ಮನೆಗಳಂತೆ ‘ಭಯಂಕರ’ ಅಡಿಗಟ್ಟು ಬೇಕಿಲ್ಲ. ‘3 ಇಂಚು ದಪ್ಪದ ಕಾಂಕ್ರಿಟ್ ಅಡಿಪಾಯ ಸಾಕು. ನುಸುಳು ಜಾಗವಾದರೆ ಎರಡಡಿ ಎತ್ತರ ಮಣ್ಣು ಪೇರಿಸಿ, ಸುತ್ತಲು ಕಲ್ಲು ಅಥವಾ ಇಟ್ಟಿಗೆಯ ಗೋಡೆ ಕಟ್ಟಿ’ – ಭಾಗ್ಯದೇವ್ ಸಲಹೆ. ನೆಲಕ್ಕೆ ಟೈಲ್ಸ್, ವಿದ್ಯುತ್ ಸರಬರಾಜಿಗೆ ವಯರಿಂಗ್ ಮೊದಲಾದ ಹೆಚ್ಚುವರಿ ಕೆಲಸಗಳು ಮನೆಯ ಯಜಮಾನನದ್ದು.
ಒಟ್ಟು ಭಾರ ಏಳೂವರೆ ಟನ್. ಎತ್ತರ ಎಂಟಡಿ. ಇತ್ತೀಚೆಗಂತೂ ಒಂಭತ್ತರಿಂದ ಹತ್ತೂವರೆ ಅಡಿ ಎತ್ತರಕ್ಕೂ ಏರಿಸಿದ್ದಾರೆ. ಗಾಳಿ-ಮಳೆಗೆ ಅಂಜಬೇಕಿಲ್ಲ. ಬೇಸಿಗೆಯಲ್ಲಿ ಶೀಟ್ಸೂರಿನಡಿ ಸೆಕೆ ಸಹಜ. ಸಾಕಷ್ಟು ಗಾಳಿ-ಬೆಳಕು ಬರುವುದರಿಂದ ಸುಧಾರಿಸಬಹುದು. ಮುಂದೆ ಹಂಚು/ಸ್ಲಾಬ್ ಹೊದಿಸುವ ಕುರಿತು ಆಲೋಚಿಸುತ್ತಿದ್ದಾರೆ.
ಇಂಜಿನಿಯರ್ ಭಾಗ್ಯದೇವ್ ಮನೆ ತಯಾರಿಯ ಹಿಂದೆ ಓಡಾಡಿದ್ದಾರೆ, ನಿದ್ದೆಗೆಟ್ಟಿದ್ದಾರೆ. ಅನುಭವಿಗಳೊಂದಿಗೆ ಸಲಹೆ ಪಡೆದಿದ್ದಾರೆ. ಕೂಡಿಸಿ-ಭಾಗಿಸಿ ನಕ್ಷೆತಯಾರಿಸಿ ‘ಕಡಿಮೆ ವೆಚ್ಚದಲ್ಲಿ ಸಾಧ್ಯ’ ಎಂಬ ನಿಲುವಿಗೆ ಬಂದರು.
ಮನೆಯ ವೆಚ್ಚ ಎಷ್ಟು? ‘ಅದು ನಿಮ್ಮ ನಿಮ್ಮ ಶಕ್ತಿಗೆ ಹೊಂದಿಕೊಂಡು’ ಎಂದು ನಗುತ್ತಾರೆ. ಅಡಿಪಾಯ ಬಿಟ್ಟು – ಒಂದು ಕೋಣೆ (ಬೆಡ್ರೂಂ)ಯ ಮನೆಗೆ ನಲವತ್ತು ಸಾವಿರ ರೂಪಾಯಿ. ಎರಡು ಕೋಣೆಯದಕ್ಕೆ ಅರುವತ್ತೈದು ಸಾವಿರ, ಮೂರಕ್ಕೆ ಎಂಭತ್ತೇಳು ಸಾವಿರ. ಇತ್ತೀಚೆಗೆ ಉಡುಪಿಯಲ್ಲಿ ಹತ್ತೂವರೆ ಅಡಿ ಎತ್ತರದ ಮನೆ ತಯಾರಿಸಿದ್ದಾರೆ. ಇದರಲ್ಲಿ ಕಾಲು ನಿಲ್ಲಿಸಲೂ ಸಹ ಜಾಗವಿದೆ. ‘ಒಂದು ಲಕ್ಷದ ಹತ್ತು ಸಾವಿರ ವೆಚ್ಚವಾಗಿದೆಯಂತೆ.’
ರಾಜಧಾನಿಯ ಜೆ.ಪಿ.ನಗರದಲ್ಲಿ ‘ಗ್ರಾಮೀಣ ಕೂಟ ಬ್ಯಾಂಕ್’ ಕಟ್ಟಡ ಇವರದ್ದೇ ತಯಾರಿ. ಇಪ್ಪತ್ತೈದು ಸಿಬ್ಬಂದಿಗಳಿದ್ದಾರೆ.
ಮಂಡ್ಯ, ಮೈಸೂರು, ಹೈದರಾಬಾದ್..ಗಳಲ್ಲಿ ಸೂರು ತಲೆಯೆತ್ತಿದೆ. ಬಹುತೇಕ ವಾಸಕ್ಕೆ ಇಷ್ಟಪಟ್ಟಿದ್ದಾರೆ. ಎಪ್ಪತ್ತಕ್ಕೂ ಮಿಕ್ಕಿ ಮನೆಗಳು ಸಿದ್ಧವಾಗಿವೆ. ಇನ್ನಷ್ಟು ಕೈಯೊಳಗೆ ಇವೆ. ‘ಈಗಾಗಲೇ ನೀವು ಮನೆ ಕಟ್ಟಿಸಿದ್ದಲ್ಲಿ, ತಾರಸಿ ಮೇಲೂ ಕೊಡುತ್ತೇವೆ’ ಎನ್ನುತ್ತಾರೆ ಭಾಗ್ಯ. ಶೇ.75 ಮುಂಗಡ. ಮುಂಚಿತ ಮಾತುಕತೆ. ನೇರ ವ್ಯವಹಾರ.
ಇತ್ತೀಚಿನ ಟಿಪ್ಪಣಿಗಳು