‘ಸಿರಿ’ಗೆ ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.
ಈವಾಗ ಕೊರಿಯರ್ ಮಾಡ್ದೆ, ನಾಳೆ ತಪ್ಪಿದ್ರೆ ನಾಡಿದ್ದು ಸಿಗುತ್ತೆ ಅಂತ ಕೃಷ್ಣ ಫೋನ್ ಮಾಡಿ ಹೇಳಿ ಮೂರು ದಿನ ಆದ್ರೂ ಪುಸ್ತಕ ಸಿಗದೆ, ಶನಿವಾರ ಮಧ್ಯಾಹ್ನ ಕಾಲೇಜಿನ ಆಫೀಸಿನಲ್ಲಿ ವಿಚಾರಿಸಿದಾಗ ಅಟೆಂಡರ್ ಯಾವುದೋ ಪುಸ್ತಕದಲ್ಲಿ ಸೈನ್ ಮಾಡಿಸಿಕೊಂಡು ಕೊರಿಯರ್ನ ನನ್ನ ಕೈಗಿಟ್ಟ. ಹಾಸ್ಟೆಲ್ ಅಡ್ರೆಸ್ಸಿಗೆ ಬರಬೇಕಾದ್ದು ಕಾಲೇಜಿಗೆ ಹೋದದ್ದು ಹೇಗೆಂದು ಅರ್ಥವಾಗದಿದ್ದರೂ ಕೊರಿಯರ್ ತಗೊಂಡು ಹಾಸ್ಟೆಲಿಗೆ ಬಂದೆ.
ಕೃಷ್ಣನಿಗೆ ಹಿಂಸೆ ಮಾಡಿ ಎಡೆಬಿಡದೆ ಕಾಲ್ ಮಾಡಿ ಯಾಮಿನಿ, ಕಾಡು ಹಾದಿಯ ಕತೆಗಳು ಪುಸ್ತಕಗಳನ್ನು ಕೊರಿಯರ್ ಮಾಡಿಸಿಕೊಂಡಿದ್ದೆ.
ಯಾಮಿನಿಯನ್ನು ಓದಿ ಊಫ್ ಎಂದು ನಿಟ್ಟುಸಿರಿಡುವ ಹೊತ್ತಿಗೇ ನಿಟ್ಟುಸಿರಿನ ಜೊತೆ ಜೊತೆಗೇ ಶೇಷುವನ್ನು ಭೇಟಿಯಾಗಬೇಕು, ಚಿರಾಯುವಿನ ಮಹಾಪ್ರಸ್ಥಾನ, ಅವ್ಯಕ್ತ, ಅಬೋಧ, ಮೇಘಮಲ್ಹಾರ ಕಾದಂಬರಿಗಳನ್ನು ಓದಲೇಬೇಕು ಎಂದು ತುಂಬ ತೀವ್ರವಾಗಿ ಅನ್ನಿಸಿತು.
ಹೌದು, ವಿಜಯಲಕ್ಷ್ಮಿ, ರಂಜೆ ಮರದಡಿಯಲ್ಲಿ ಹೂವು ಹೆಕ್ಕುವ ಜಾಹ್ನವಿ, ಶಿವಣ್ಣನ ಹೆಂಡತಿ ಮಾಳವಿಕಾ, ಭಾಗೀರಥಿ ಚಿಕ್ಕಮ್ಮ, ಊರ್ಮಿಳಾ ದೇಸಾಯಿ, ಸರಸ್ವತಿ, ಸುಪರ್ಣಾದಾಸ್ ಗುಪ್ತಾ, ನಳಿನಿ ಹೆಗ್ಡೆ, ನಟ ಶರತ್ಕುಮಾರ್, ತುಂಗಮ್ಮ, ನಾವಡರು, ಭಾಗ್ಯಲಕ್ಷ್ಮಿ, ಅನ್ನಪೂರ್ಣ, ವಿಕ್ಟರ್, ಜಾಯ್ಸ್, ರೋಹಿಣಿ, ನಿರ್ಮಲೆ, ವಾಸುದೇವ ಕಿಣಿ, ಶಾಲಿನಿ, ಸಾಂಬ, ಅತ್ತೆ, ಮಂಗಳಾ.. ಉಹುಂ ಇವರ್ಯಾರೂ ಕಾಡುವುದಿಲ್ಲ ಅಥವಾ ನನ್ನನ್ನು ಕಾಡಲಿಲ್ಲ. ಶ್ರದ್ಧಾ, ಸ್ಮಿತಾ, ಯಾಮಿನಿಯೂ ನಮ್ಮ ಮನಸ್ಸಿನಲ್ಲಿ ಉಳಿಯುವುದಿಲ್ಲ.
ಹಾಗಾದರೆ ಕಾದಂಬರಿಯನ್ನು ಯಾಕಾದರೂ ಓದಬೇಕು ಅಂತ ಕೇಳಿದರೆ, ಕಾದಂಬರಿಯ ನಾಯಕನಿಗಾಗಿ ಅನ್ನುತ್ತೇನೆ ನಾನು. ಇಲ್ಲ, ಚಿರಾಯುವಿನ ಬಗ್ಗೆ ಹೇಳ್ತಿಲ್ಲ ನಾನು. ಆದರೆ ಕಾದಂಬರಿಯ protaganist ಚಿರಾಯುವಿನ ವಾದಗಳು, ಅವನ ಆಲೋಚನೆಗಳು, ಚಿರಾಯು ಯಾಮಿನಿ ನಡುವೆ ನಡೆಯುವ ಚರ್ಚೆಗಳೇ ಈ ಕಾದಂಬರಿಯ ನಾಯಕನಾಗಿ ವಿಜೃಂಭಿಸುತ್ತವೆ. ಎಷ್ಟು ಪುಟ್ಟ ಕಾದಂಬರಿ. ಎರಡೇ ಗಂಟೆಯಲ್ಲಿ ಓದಿ ಮುಗಿಸುತ್ತೇನೆ ಎಂಬ ನನ್ನ ಅಹಂಕಾರವನ್ನು ಕೆಡವಿದ್ದೇ ಅವು. ಆ ವಾದಗಳನ್ನು ಓದುತ್ತಲೇ ಅವನ್ನು ಸಮರ್ಥಿಸಿಯೋ ನಿರಾಕರಿಸಿಯೋ ಅಥವಾ ಎರಡೂ ಅಲ್ಲದ ಮತ್ತೊಂದು ವಾದವೋ ನಮ್ಮನ್ನು ಆವರಿಸಿಕೊಳ್ಳುತ್ತದೆ:
ಉದಾಹರಣೆಗೆ:
- ಒಂದು ಸಾಲು ಸಿಕ್ಕರೆ…. ಬರಹವೆಂದರೆ ಸಂಭೋಗದ ಹಾಗೆ. ಆ ಕ್ಷಣಕ್ಕೆ ಮದನ ಎಷ್ಟು ಕರುಣಿಸುತ್ತಾನೋ ಅಷ್ಟು. ( ಪುಟ ೧೫, ಪ್ಯಾರಾ ೨ )
-ಲೇಖಕ ಲೆಸ್ ಇನ್ಫಾರ್ಮ್ಡ್ ಆಗಿರಬೇಕು. ಮಾಹಿತಿಗಳು ಹೆಚ್ಚಾಗುತ್ತಾ ಹೋದ ಹಾಗೆ ಕ್ರಿಯೇಟಿವಿಟಿ ಕಡಿಮೆಯಾಗುತ್ತಾ ಹೋಗುತ್ತದೆ……………… ಎಂಬ ಅಹಂಕಾರದಲ್ಲಿ ನಾನು ಬರೆಯಬೇಕು. (ಪುಟ ೨೩ ಪ್ಯಾರಾ ೨)
-ಗಂಡು ತನ್ನ ಅಹಂಕಾರವನ್ನು ಮರೆತು ಒಂದು ಹೆಣ್ಣಿನ ಜೊತೆ ಮಾತ್ರ ಬೆರೆಯಬಲ್ಲ… (ಪುಟ ೨೯ ಪ್ಯಾರಾ ೩)
ಇಂಥದ್ದು ಹಲವಾರು.
ನನ್ನನ್ನು ಚಕಿತಗೊಳಿಸಿದ ಪಾತ್ರವೆಂದರೆ ಶೇಷುವಿನದು. ಜೋಗಿಯ ಅದ್ಬುತ ಸೃಷ್ಟಿ ಅವನು. ಅವನಿಗೆ ತನ್ನದೇ ಆದ ವ್ಯಕ್ತಿತ್ವನೂ ಇಲ್ಲ, ಚಿರಾಯುವಿನ ನೆರಳಿನಂತಿರುತ್ತಾನೆ ಎನ್ನುವುದೂ ಅಸಂಬದ್ಧ. ಅವನೇ ಬೇರೆ. ವಿಚಿತ್ರ ಚಿರಾಯುವಿನ ಪ್ರತಿಯೊಂದು ಚಲನವಲನವನ್ನೂ ಅರ್ಥ ಮಾಡಿಕೊಂಡಿರುವ ಶೇಷುವನ್ನು ಅವನು ನನ್ನ ಅರ್ಥ ಮಾಡಿಕೊಂಡಿದ್ದನೋ ಅಥವಾ ಅದು ಅವನ ಅನಿವಾರ್ಯತೆಯೋ’ ಎಂದು ಕೇಳುವ ಚಿರಾಯುವಿನ ಬುದ್ಧಿಜೀವಿ ಮನಸ್ಸು ಓದುಗನಿಗೆ ಹಿಂಸೆ ಮಾಡುತ್ತದೆ.
ಮತ್ತೊಂದು ರಿಲೀಫ್ ಎಂದರೆ ಉಕ್ಕುವ ಸೌಂದರ್ಯದ ಖನಿಯೇನೂ ಆಗಿರಲಿಲ್ಲ ಯಾಮಿನಿ’ ಎಂಬ ಸಾಲು.ನಾನು ಚಿಕ್ಕವಳಾಗಿದ್ದಾಗಿನಿಂದ ಓದಿದ ಕಾದಂಬರಿಯ ನಾಯಕಿಯರೆಲ್ಲ ಸೌಂದರ್ಯದ ಖನಿಯರೇ. ನೋಡಲು ಸುಮಾರಾಗಿದ್ದರೆ ಕಥಾನಾಯಕಿಯಾಗಲು ಸಾಧ್ಯವೇ ಇಲ್ಲವಾ ಎಂದು ಆಶ್ಚರ್ಯವಾಗುತ್ತಿತ್ತು. ಜೋಗಿಯ ನದಿಯ ನೆನಪಿನ ಹಂಗು’ ಕಾದಂಬರಿಯ ನರ್ಮದೆ ಕೂಡ ತುಂಬುಸುಂದರಿ.. ಭೈರಪ್ಪನವರು ಈ ಅಂಶ ಮುಖ್ಯವೇ ಅಲ್ಲ ಎನ್ನುವಂತೆ ಬರೆಯುತ್ತಾರಲ್ಲವಾ ಎಂದು ಈಗ ಹೊಳೆಯುತ್ತಿದೆ. ಇರಲಿ, ಯಾಮಿನಿ’ ಉಕ್ಕುವ ಸೌಂದರ್ಯದ ಖನಿಯಲ್ಲದಿದ್ದರೂ ಇಷ್ಟ ಆಗುತ್ತಾಳೆ. ತುಂಬ ಸೆಕ್ಸಿಯಾಗಿಲ್ಲದಿದ್ದರೂ ಅಪಾರನ ಮುಖಪುಟ ಇಷ್ಟವಾಗುವಂತೆ.
ಕೊನೆಯವರೆಗೂ ಚಿರಾಯುವಿನ ಫ್ಲಾಷ್ಬ್ಯಾಕ್ಗಳಲ್ಲಿ ಬರುವ, ಕಾದಂಬರಿಯ ಕೊನೆಯಲ್ಲಿ ಬಂದು ಚಿರಾಯುವನ್ನು ತಬ್ಬಿ ಮುತ್ತಿಕ್ಕುವ ಯಾಮಿನಿ, ಯಾಮಿನಿಯಂಥ ಹುಡುಗಿ ಇರಬಹುದು ಎಂದು ಕಲ್ಪಿಸಿಕೊಳ್ಳಲೂ ಅಸಾಧ್ಯ ನನಗೆ. ಅವಳು ಚಿರಾಯುವಿನ ಆಲ್ಟರ್ ಈಗೋನಾ ಅಥನಾ ಅವನು ಸಂಧಿಸಿದ ಎಲ್ಲಾ ಹುಡುಗಿಯರಲ್ಲಿ ಅವನಿಗೆ ಇಷ್ಟವಾದ ಗುಣಗಳನ್ನು ಸೇರಿಸಿ ಸೃಷ್ಟಿಸಿದ ಹುಡುಗಿಯಾ ಎಂಬ ಅನುಮಾನ ಉಳಿಯುತ್ತೆ ನಂಗೆ.
ನದಿಯ ನನೆಪಿನ ಹಂಗಿನಲ್ಲಿ ಆಗುವಂತೆ ಯಾಮಿನಿಯಲ್ಲೂ ಜೋಗಿ, ವಾಸ್ತವವನ್ನು ಮಾಧ್ಯಮದವರು ಹಾಗೂ ಸೃಜನಶೀಲ ಬರಹಗಾರರು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಎದುರುಬದುರಾಗಿ ತಂದು ನಿಲ್ಲಿಸುತ್ತಾರೆ. ವಾಸ್ತವ ಹಾಗೂ ಸೃಜನಶೀಲತೆಯ ನಡುವಿನ ಸಂಬಂಧವನ್ನು ಹುಡುಕುತ್ತಾ ಹೋಗುವ ಚಿರಾಯುವಿನ ಸಮಸ್ಯೆಯು ಎಲ್ಲಾ ಕಾದಂಬರಿಕಾರ, ಕವಿ, ಕಥೆಗಾರ, ಚಿತ್ರಕಾರ, ಶಿಲ್ಪಿ, ನಾಟಕಕಾರನ ಸಮಸ್ಯೆಗೆ ಹಿಡಿದ ಕನ್ನಡಿಯಂತೆ ಕಾಣುತ್ತದೆ. supermacy of Art over Life ಎಂದು ಕೀಟ್ಸ್ ಕಿವಿಯಲ್ಲಿ ಗುನುಗಿಹೋದ ಹಾಗೆ ಅನ್ನಿಸಿತು.
ಯಾವ ಒಂದೇ ಒಂದು ವಿಷಯದ ಬಗ್ಗೆಯೂ ಚಿರಾಯು ಒಂದೆರಡು ಪ್ಯಾರಾ ಮೀರಿ ಚರ್ಚಿಸುವುದಿಲ್ಲ. ಪುಟಗಟ್ಟಲೆ ವಿಚಾರ ಮಾಡಬಹುದಾದಂಥ ವಿಷಯಗಳನ್ನು ಸುಮ್ಮನೆ ನಮ್ಮ ಮುಂದೆ ಚೆಲ್ಲಿ ಹೋಗುತ್ತಾರೆ ಜೋಗಿ. ಇದು ಕಾದಂಬರಿಯ ಸಾಮರ್ಥ್ಯವೋ ಬಲಹೀನತೆಯೋ ಗೊತ್ತಾಗುತ್ತಿಲ್ಲ. ಇನ್ನೊಂಗು ಸ್ವಲ್ಪ ಹೊತ್ತು ಚರ್ಚಿಸಿದ್ದರೆ ಇವರ ಗಂಟೇನು ಹೋಗುತ್ತಿತ್ತು ಎಂದುಕೊಳ್ಳುವ ಹೊತ್ತಿಗೆ ನಿನ್ನ ಸಾಮರ್ಥ್ಯ ಆಳ ವಿಸ್ತಾರಗಳೆಷ್ಟೋ ಹಾಗೆ ಚರ್ಚೆಯನ್ನು ಬೆಳೆಸಿಕೋ ಎಂಬಂತೆ ಓಪನ್ ಎಂಡೆಡ್ ಆಗಿ ವಿಚಾರಗಳನ್ನು ಅಲ್ಲೇ ಕೈ ಬಿಟ್ಟು ಅಹಂಕಾರದಿಂದ ಎದ್ದು ಹೋದಂತೆ ಕಾಣುತ್ತಾರೆ. ಅಂಥ ಅಹಂಕಾರ ಇಷ್ಟವಾಗುತ್ತದೆ.
ಚಿರಾಯುವನ್ನು ಹುಡುಕುತ್ತಾ ಹೋಗುವ ಶ್ರದ್ಧಾಳಿಗೆ ತಾನು ಕಂಡ, ಅಂದುಕೊಂಡ ಚಿರಾಯು ಹಾಗೂ ಅವನನ್ನು ಹತ್ತಿರದಿಂದ ನೋಡಿದ ಪ್ರತಿಯೊಬ್ಬನೂ ಕಂಡ ಚಿರಾಯುವಿನ ಚಿತ್ರ ಬೇರೆಬೇರೆಯದು ಎಂದು ತಿಳಿಯುತ್ತಾ ಹೋಗುತ್ತದೆ. ಈ ಭಾಗ ನನಗೆ ಕ್ಯೂರಿಯಸ್ ಅನ್ನಿಸಿತು. ಏಕೆಂದರೆ ಪ್ರತಿಯೊಬ್ಬ ಮನುಷ್ಯನೂ ಯಾರಿಗೂ ಪೂರ್ತಿ ದಕ್ಕುವುದಿಲ್ಲ. ನಾವು ಪ್ರತಿಯೊಬ್ಬರ ಕೆಲವು ಮುಖಗಳನ್ನು ಮಾತ್ರ ನೋಡಿರುತ್ತೇವೆ ಎಂಬುದಕ್ಕೆ ಸಾಕ್ಷಿ ಇದು.
ಕೊನೆಗೆ ನನ್ನಲ್ಲಿ ಉಳಿದದ್ದು ಚಿರಾಯುವಿನ ಕಾದಂಬರಿಗಳನ್ನು ಓದಬೇಕೆಂಬ ಹಂಬಲ, ಶೇಷುವನ್ನು ನೋಡಲೇಬೇಕೆಂಬ ಆಕಾಂಕ್ಷೆ, ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.










“ಪುಟಗಟ್ಟಲೆ ವಿಚಾರ ಮಾಡಬಹುದಾದಂಥ ವಿಷಯಗಳನ್ನು ಸುಮ್ಮನೆ ನಮ್ಮ ಮುಂದೆ ಚೆಲ್ಲಿ ಹೋಗುತ್ತಾರೆ ಜೋಗಿ…” ಇದು ಕಾದಂಬರಿಯ ಸಾಮರ್ಥ್ಯವಿರಬೇಕು ಅನ್ನಿಸುತ್ತ, ಈ ಕಾದಂಬರಿಯನ್ನು ಓದುವ ಉತ್ಸುಕತೆ ಹೆಚ್ಚುತ್ತಿದೆ.. ತುಂಬ ಚೆನ್ನಾಗಿ ಬರೆದಿದ್ದೀರಿ…
srinivasaiah
May 8, 2009
‘ಯಾಮಿನಿ’ ನೀವು ಗುರುತಿಸಿರುವಂತೆ ನನಗೆ ತುಂಬಾ ಇಷ್ಟವಾದ ಪಾತ್ರವೆಂದರೆ
ಶೇಷುವಿನದು,ಅದೊಂದು ಜೋಗಿಯ ಅದ್ಬುತ ಸೃಷ್ಟಿ.
ಒಂದೇ ಓದುವಿನಲ್ಲಿ ಮುಗಿಸಿದರು, ಮನದ ಲೆಕ್ಕಚಾರವಿನ್ನು ಮುಗಿದಿರಲಿಲ್ಲ,
ಚೆನ್ನಾಗಿ ಬರೆದಿರುವಿರಿ..
kattimani 45E
September 20, 2008
ಸಿರಿ, ಚೆನ್ನಾಗಿದೆ. ಯಾಮಿನಿ ಓದಿದ ಮೇಲೆ, ನಿನ್ನ ವಿಮರ್ಶೆ ಓದಿದ ಮೇಲೆ ಪಕ್ಕಾ ನೆನಪಿನಲ್ಲುಳಿಯೋದು ಅಂದ್ರೆ……………..
`ಏಕೆಂದರೆ ಪ್ರತಿಯೊಬ್ಬ ಮನುಷ್ಯನೂ ಯಾರಿಗೂ ಪೂರ್ತಿ ದಕ್ಕುವುದಿಲ್ಲ. ನಾವು ಪ್ರತಿಯೊಬ್ಬರ ಕೆಲವು ಮುಖಗಳನ್ನು ಮಾತ್ರ ನೋಡಿರುತ್ತೇವೆ ಎಂಬುದಕ್ಕೆ ಸಾಕ್ಷಿ ಇದು.’
ಇದು.
shreedevi aravind
September 19, 2008
Good writeup.
-Kera
Harish kera
September 19, 2008
“ಪುಟಗಟ್ಟಲೆ ವಿಚಾರ ಮಾಡಬಹುದಾದಂಥ ವಿಷಯಗಳನ್ನು ಸುಮ್ಮನೆ ನಮ್ಮ ಮುಂದೆ ಚೆಲ್ಲಿ ಹೋಗುತ್ತಾರೆ ಜೋಗಿ…” ಇದು ಕಾದಂಬರಿಯ ಸಾಮರ್ಥ್ಯವಿರಬೇಕು ಅನ್ನಿಸುತ್ತ, ಈ ಕಾದಂಬರಿಯನ್ನು ಓದುವ ಉತ್ಸುಕತೆ ಹೆಚ್ಚುತ್ತಿದೆ.. ತುಂಬ ಚೆನ್ನಾಗಿ ಬರೆದಿದ್ದೀರಿ…
ರಾಘವೇಂದ್ರ
September 18, 2008
nanu yamini odalebekembante nadtu nimma vimarshe
vimalanavada
September 17, 2008
good write up. i also felt the same. keep it up.
Santhosh Ananthapura
September 17, 2008
adbhuta vimarshe….
neevu kaTTikoTTa nOTadoMdige kaadaMbariyannu innomme OdabEkennisuvaShTu chennagide nimma vimarshe
vijayraj
September 17, 2008