ಚಂದಮಾಮನ ಹಿಡಿದು ಗಲ್ಲಿಗೇರಿಸುತ್ತಾರೆ
ರಮೇಶ್ ಸೋಗೆಮನೆ ಮೌನವನ್ನು ಧ್ಯಾನಿಸುವವರು. ಹತ್ತು ಹಲವು ಕನಸುಗಳನ್ನು ಹೊತ್ತವರು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದು ಈಗ ಈಟಿವಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಗೆಮನೆ ಎಂಬುದು ತುಮಕೂರಿನ ಬಳಿಯ ಒಂದು ಪುಟ್ಟ ಹಳ್ಳಿಯಲ್ಲಿರುವ ಒಂದು ಪುಟ್ಟ ಮನೆ. ಈ ಮನೆಯಿಂದಲೇ ಜಗತ್ತನ್ನು ಕಟ್ಟಿಕೊಂಡ ರಮೇಶ್ ವಿಶಿಷ್ಟ ಬರಹಗಾರ. ಅವರು ಬ್ಲಾಗ್ ಲೋಕ ಪ್ರವೇಶಿಸಿದ್ದಾರೆ. ಅವರ ಬರಹಕ್ಕಿರುವ ಶಕ್ತಿಯನ್ನು ಧ್ಯಾನಿಸುತ್ತಾ ಅದರ ಸವಿ ಬಡಿಸುತ್ತಿದ್ದೇವೆ.

ಚಂದಮಾಮನ ಕಥೆಯಲ್ಲಿ ಸುಲಭಕ್ಕೆ ತಾರೆ ಜಾರುತ್ತಿರಲಿಲ್ಲ. ಸೂರ್ಯ ಸುಡುತ್ತಿರಲಿಲ್ಲ ಸಾಮ್ರಾಜ್ಯ ಆಳಿಯುತ್ತಿರಲಿಲ್ಲ ರಾಜ ಸಾಯುತ್ತಿರಲಿಲ್ಲ. ಅವನು ದಿವಸ ಸಾವಿರಾರು ಕಥೆಗಳಿಗೆ ಕಾವಿಟ್ಟು ಮರಿ ಮಾಡುತ್ತಿದ್ದ. ಪ್ರತಿ ಸಲ ಕಥೆ ಹೇಳುವಾಗಲೂ ಮತ್ತಷ್ಟು ಹೊಳೆಯುತ್ತಿದ್ದ. ಬೆಳದಿಂಗಳನ್ನು ಗುಟ್ಟಾಗಿ ಪ್ರೀತಿಸುತ್ತಿದ್ದ.
ಅವನಿಗೆ ಹೆಣಿಗೆ ಗೊತ್ತಿತ್ತು. ಚಂದದ ಕನಸುಗಳ ಹೆಣೆಯುತ್ತಿದ್ದ. ಹೊಲಿಗೆ ಗೊತ್ತಿತ್ತು. ಸುಂದರ ಕನಸುಗಳ ಹೊಲಿಯುತ್ತಿದ್ದ. ಪ್ರೀತಿಯ ಪೋಣಿಸಿ ಕುಚ್ಚು ಕಟ್ಟುತ್ತಿದ್ದ. ಭೂಮಿಗೂ ಹುಣ್ಣಿಮೆಯ ರುಚಿ ತೋರಿಸಿದ್ದ. ನದಿಯ ಜೊತೆ ಪಿಸುಗುಡುತ್ತಿದ್ದ, ಜಗಳವಾಡುತ್ತಿದ್ದ. ಚುಕ್ಕಿಗಳ ಗೋಲಿಯಾಡಿ ಕನಸುಗಳ ಸೋಲಿಸುತ್ತಿದ್ದ. ನಿಜಕ್ಕೂ ಅವನೊಬ್ಬ ಧೀಮಂತ ಹಾಡುಗಾರ, ಹಕ್ಕಿಗಳಿಗೆ ಹಾಡು ಕಲಿಸುತ್ತಿದ್ದ.
೨
ಮೊನ್ನೆ ಮುಂಜಾವಲ್ಲಿ ಚಂದಮಾಮನಿಗೆ ಗುಂಡು ತಾಗಿ ಎದೆ ಹೋಳು, ಕಥೆ ಹೇಳುತ್ತಲೇ ಕುಸಿದು ಬಿದ್ದಿದ್ದ. ಜನ ಖಡ್ಗ ಝುಳಪಿಸಿದರು. ಚಂದಮಾಮನಿಗಾಗಿ ಕಂಡವರ ನೆತ್ತರು ಹರಿಸಿದರು ಮಾಂಸ ಕತ್ತರಿಸಿದರು. ಚೊಚ್ಚಿಲ ಬಸಿರಿಂದ ಭ್ರೂಣ ಇರಿದು ನೈವೇದ್ಯ ಎಂದರು. ಎದೆ ನೋವಿಗೆ ಪಾರಿವಾಳ ಮದ್ದೆಂದು ಗೂಡು ಸಹಿತ ಸುಟ್ಟು ತಿಂದರು.
೩
ಒಂದಾನೊಂದು ಕಾಲ ಅಂತಾರಲ್ಲ ಆಗ ಚಂದಮಾಮ ಗಿಣಿಯಾಗಿದ್ದ ಕಳ್ಳನಾಗಿದ್ದ ರಾಜಕುಮಾರಿಯಾಗಿದ್ದ ಕಾಡಾಗಿದ್ದ ಜಿಂಕೆಯಾಗಿದ್ದ ಭೂತವಾಗಿದ್ದ ಗುಲಾಬಿಯಾಗಿದ್ದ ಸಪ್ತಸಾಗರವಾಗಿದ್ದ ಪಂಜರವಾಗಿದ್ದ ಮಿಂಚಾಗಿದ್ದ ನದಿ ಭೂಮಿಯ ನೇಹಕ್ಕೆ ಸೇತುವೆಯಾಗಿದ್ದ. ಸಂಜೆಯಾಗುತ್ತಲೇ ಅವನೇ ದೊಡ್ಡದೊಂದು ಕಥೆಯಾಗುತ್ತಿದ್ದ.
೪
ಚಂದಮಾಮ ದಿನವೂ ಕರಗುತ್ತಾನೆ, ಅಳುತ್ತಾನೆ ಹಸಿವೆನ್ನುತ್ತಾನೆ ಅವನಿಗೆ ಎದೆಗಾಯ ಮಾಯುವುದು ಬೇಕಿಲ್ಲ. ಒಣ ರೊಟ್ಟಿಗೆ ಬೇಡುತ್ತಾನೆ.
ಜನಕ್ಕೆ ಚಂದಮಾಮನಿಗಿಂತಲೂ ಅವನ ಕಥೆ ಮುಖ್ಯ. ಕಥೆ ಹೇಳೆಂದು ಪೀಡಿಸುತ್ತಾರೆ,. ಚೂರಿ ತೋರಿಸಿ ಬೆದರಿಸುತ್ತಾರೆ. ಬಾವುಟ ಹಿಡಿದು ಬರುತ್ತಾರೆ. ಒಪ್ಪದ ಚಂದಮಾಮನಿಗೆ ಧಿಕ್ಕಾರ ಹೇಳುತ್ತಾರೆ. ಸರಿ ರಾತ್ರಿ ಎದ್ದು ದಂಗೆ ಹೂಡುತ್ತಾರೆ.
೫
ಚಂದಮಾಮ ದಿಗ್ಗನೆದ್ದು ಕುಣಿದ. ಹಾವಂತೆ ಹೊರಳಾಡಿದ ಹೋರಿಯಂತೆ ಗುಟುರಿದ. ಕಥೆಗಳೆಲ್ಲ ಸೋರಿಹೋದವು. ಕೊನೆಗೆ ಜನರನ್ನೇ ಕಥೆಯಾಗಿಸಿ ಹೇಳಿದ. “ಪಾರಿವಾಳಗಳೇ ಸಾಯದಿರಿ, ಕಣ್ತೆರೆಯಿರಿ ಭ್ರೂಣಗಳೇ, ರಕ್ತ ಮಾಂಸಗಳೇ ಇಲ್ಲಿಂದ ತೊಲಗಿ” ಅಂಗಲಾಚಿದ. ಜನ ನಕ್ಕು ರಕ್ಕಸರಾಗುತ್ತಾರೆ. ಚಂದಮಾಮನ ಹಿಡಿದು ಗಲ್ಲಿಗೇರಿಸುತ್ತಾರೆ.
೬
ಈಗ ಜನಕ್ಕೆ ಕಥೆ ಕೇಳುವ ಹುಚ್ಚು. ಹೊಸ ಚಂದ್ರನಿಗಾಗಿ ತಡಕುತ್ತಿದ್ದಾರೆ.

ನೆಲ, ಹಸಿರು, ಸಹಜ ಹೀಗೆ ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ ಅವರೇ ಫುಕುವೋಕಾ. ರಸಗೊಬ್ಬರ ಕ್ರಿಮಿನಾಶಕ ಹೈಬ್ರೀಡ್ ಎಂದೆಲ್ಲ ಪ್ರಪಂಚ ಕೃತಕವಾಗುತ್ತಿರುವಾಗ ಶೂನ್ಯ ಬೇಸಾಯವನ್ನೇ ನಂಬಿ ನಡೆದವರು ಫುಕುವೋಕಾ. ಜಪಾನ್ ದೇಶದ ಈ ಅಜ್ಜ ಕನ್ನಡದ ಅಸಂಖ್ಯಾತ ಕೃಷಿಕರಿಗೆ ಗೊತ್ತು. ಅನೇಕರು ಫುಕುವೋಕಾನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಏನನ್ನೂ ಕತ್ತರಿಸಬೇಡಿ ಏನನ್ನೂ ನಾಶ ಮಾಡಬೇಡಿ ಎಂಬ ಅವರ ಮಾತು ಕೇವಲ ವ್ಯವಸಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಮನುಷ್ಯ ಮನುಷ್ಯನನ್ನು ಅರ್ಥ ಮಾಡಿಕೊಳ್ಳಬೇಕಾದ ಮಾನವೀಯತೆಯ ಧ್ವನಿ. ಆಗಸ್ಟ್ ೧೮ರಂದು ಅವರು ಹೊರಟು ಹೋದರು. ಎಲ್ಲಿಗೆ ಹೊರಟು ಹೋದರು ಎಂದು ಹೇಳಲು ಮನಸ್ಸು ಭಾರವಾಗುತ್ತೆ. ಒಟ್ಟಾರೆ ಹಸಿರಾಗಿ ಹೋದರು ಅಷ್ಟೆ.








ಮನಸ್ಸಿನಲ್ಲೇ ಮಾತನಾಡುವ ಗೆಳೆಯ ರಮೇಶ್ ಬ್ಲಾಗ್ ಮಾಡಿರೋದು ನನಗಂತೂ
ಸಖತ್ ಖುಷಿ ಆಗಿದೆ.
ಭಾವನೆಗಳಿಗೆ ನಿನ್ನ ಬ್ಲಾಗ್ ಜಗುಲಿಯಾಗಲಿ.
ಬಿಡುವಾದಾಗ subbuloka.wordpress.com ಭೇಟು ಕೊಡು.
subramani
August 23, 2008
ಏನಾದರೊಂದು ಮಾಡುತ್ತಲೇ ಇರುವ ತಿಮಿರುಳ್ಳ ರಮೇಶ ಬ್ಲಾಗ್ ಮಾಡಿರುವುದು
ಒಳ್ಳೆಯದೇ. ಹೈದರಬಾದ್್ ನಲ್ಲಿದ್ದು, ನಮ್ಮಿಂದ ದೂರವಾಗಿರುವ ರಮೇಶ್ ಸೃಷ್ಟಿಕೊಂಡಿರುವ
ಕಿಂಡಿಗೆ ನಾವೂ ಇಲ್ಲಿಂದಲೇ ಇಣುಕತ್ತೇವೆ.
ಶ್ರೀನಿವಾಸ್ ಗೌಡ, ರಾಘವೇಂದ್ರ ಗೌಡ.
srinivasagowda_mbs
August 23, 2008
are avadhi!
matte matte THANX hELabEkAytalla…
irali. Rameshara barahakke avara blog nallE comment mADuve!
- Chetana
chetana chaitanya
August 23, 2008
ಹಾಯ್ ರಮೇಶ್,
ಜಸ್ಟ್ ನೀನು ಭೇಟಿಯಾಗಿ ಹೋದೆ, ನಾನು ಈ ಕಡೆ ಅವಧಿ ಓಪನ್ ಮಾಡಿದೆ,
ನೋಡಿದರೆ ನಿನ್ನದೇ ಬರಹ . .ಎಂಥಹ ಕೋ-ಇನ್ಸಿಡೆನ್ಸ್ ಅನಿಸ್ತು . . ಎಲ್ಲಾ
ರೀತಿಯಿಂದಲೂ ಬದಲಾಗುತ್ತಿದ್ದೀಯ . . .keep it up . .
Shwetha, Hosabale
August 22, 2008