ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ

Posted on July 26, 2008. Filed under: ಬ್ಲಾಗ್ ಮಂಡಲ |

ಬೇಂದ್ರೆ ಕವಿತೆಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಕೆಲವೇ ಕೆಲವರ ಪೈಕಿ ಸುನಾಥ್ ಒಬ್ಬರು. ಈ ಹಿಂದೆ ಅವಧಿ ಸುನಾಥರ ಸಲ್ಲಾಪ ಬ್ಲಾಗ್ನಿಂದ ಬೇಂದ್ರೆ ಕವಿತೆ ಕುರಿತ ನೋಟವನ್ನು ಹಂಚಿಕೊಂಡಿತ್ತು. ಈಗ ಭಾಷೆಯ ಕುರಿತು ಅವರ ವಿಭಿನ್ನ ನೋಟ ಇಲ್ಲಿದೆ.

ಭಾಷೆ ಎನ್ನುವ ಉಪಕರಣ

ಮಾನವಶಾಸ್ತ್ರಜ್ಞರು ಮಾನವನನ್ನು Tool using Primate ಎಂದು ಬಣ್ಣಿಸುತ್ತಾರೆ. Primateಗಳ ಗುಂಪಿನಲ್ಲಿ ಒರಾಂಗ ಉಟುಂಗ, ಚಿಂಪಾಂಝಿ, ಗೋರಿಲ್ಲಾ, ಕಪಿ ಹಾಗು ಮಾನವ ಮೊದಲಾದ ಜೀವಿಗಳ ಸೇರ್ಪಡೆಯಾಗುತ್ತದೆ.
ಉಳಿದ primateಗಳಿಗೂ ಮಾನವನಿಗೂ ಇರುವ ವ್ಯತ್ಯಾಸವೆಂದರೆ, ಮನುಷ್ಯನು ಉಪಕರಣಗಳನ್ನು ಸೃಷ್ಟಿಸಿಕೊಳ್ಳಬಲ್ಲ ಹಾಗೂ ಉಪಯೋಗಿಸಬಲ್ಲ.

ಮಾನವನ ಬಳಿಯಿರುವ ಶ್ರೇಷ್ಠ ಉಪಕರಣ ಯಾವುದು?
ನಿಸ್ಸಂದೇಹವಾಗಿಯೂ ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ. ಕಾಡುಮಾನವನನ್ನು ನಾಡಮಾನವನನ್ನಾಗಿ ಸುಸಂಸ್ಕೃತಗೊಳಿಸಲು ಬೇಕಾಗುವ ಸಂವಹನ ಮಾಧ್ಯಮವೇ ಭಾಷೆ.
ಉಪಕರಣದ ಸಾಮರ್ಥ್ಯ ಹೆಚ್ಚಿದಷ್ಟೂ ಉಪಭೋಕ್ತಾನ ಸಾಮರ್ಥ್ಯ ಹೆಚ್ಚುತ್ತದೆ. ಶಿಲಾಯುಗದಲ್ಲಿ ಕಲ್ಲುಗಳನ್ನು ಆಯುಧಗಳನ್ನಾಗಿ ಬಳಸುತ್ತಿದ್ದ ಮಾನವ, ಆ ಬಳಿಕ ಕಬ್ಬಿಣ, ತಾಮ್ರಗಳ ಆಯುಧಗಳನ್ನು ಬಳಸತೊಡಗಿದ. ಇದೇ ರೀತಿಯಾಗಿ ಅವನ ಸಂವಹನ ಸಾಮರ್ಥ್ಯವೂ ಬೆಳೆಯಲಾರಂಭಿಸಿತು. ಭಿನ್ನ ಭಿನ್ನ ಸಮುದಾಯಗಳಲ್ಲಿ ಸಂಪರ್ಕ ಬಂದಂತೆಲ್ಲ, ಈ ಸಮುದಾಯಗಳಲ್ಲಿ ಪದಾರ್ಥ ವಿನಿಮಯ, ಆಯುಧ ವಿನಿಮಯ ಹಾಗು ಅತಿ ಮುಖ್ಯವಾಗಿ ಭಾಷಾ ವಿನಿಮಯ ಪ್ರಾರಂಭವಾಯಿತು. ಇದು ನಾಗರಿಕತೆ ಬೆಳೆಯುವ ರೀತಿ. ಭಾಷೆ ಬೆಳೆಯುವ ರೀತಿ.

ಸಂಸ್ಕೃತ ಭಾಷಿಕ ಸಮುದಾಯಗಳಿಗೆ ಹಾಗು ಕನ್ನಡ ಭಾಷಿಕ ಸಮುದಾಯಗಳಿಗೆ ಬಂದ ಸಂಪರ್ಕದಿಂದ ಎರಡೂ ಸಮುದಾಯಗಳಿಗೆ ಲಾಭವಾಗಿದೆ. ಹೆಚ್ಚೇನು, ಈ ಎರಡೂ ಸಮುದಾಯಗಳು ಒಂದರಲ್ಲೊಂದು ಕರಗಿ ಹೋಗಿವೆ. ಆ ಕಾರಣದಿಂದಲೇ, ಮರಾಠಿ ಭಾಷೆಯು ಕನ್ನಡದಿಂದ ಹುಟ್ಟಿದೆ ಎಂದು ಹೇಳುವದು; ಗುಜರಾತ ಭಾಷೆಗೆ ದ್ರಾವಿಡ (=ಕನ್ನಡ) ತಳಪಾಯವಿದೆ ಎಂದು ಹೇಳುವದು. ಸಂಸ್ಕೃತದಲ್ಲಿ ಕನ್ನಡದ ಹಾಗು ಕನ್ನಡದಲ್ಲಿ ಸಂಸ್ಕೃತದ ಅನೇಕ ಪದಗಳ ವಿನಿಮಯವಾಗಿರುವದು.

ದುರ್ದೈವದಿಂದ, ಸಂಸ್ಕೃತ ಭಾಷಿಕರ ಜೊತೆಗೆ ಅತಿ ಕಡಿಮೆ ಸಂಪರ್ಕ ಹೊಂದಿದ ತಮಿಳರು (-ಇದಕ್ಕೆ ಕಾರಣ ದುರಭಿಮಾನವೆ? ಅಥವಾ physical distanceಏ?-) ವಿನಿಮಯದ ಲಾಭವನ್ನು ಕಳೆದುಕೊಂಡರು. ಇದನ್ನೆಲ್ಲ ತಿಳಿಯದೆ, ಕನ್ನಡದ ಮೂಲಪದಗಳಲ್ಲಿ ಮಹಾಪ್ರಾಣವಿಲ್ಲವೆಂದು ಬೊಬ್ಬೆ ಹಾಕುವ ಅಲ್ಪಪ್ರಾಣಿಗಳಿಗೆ ಕನ್ನಡದ ಮೂಲಪದಗಳು ಎಷ್ಟಿವೆ ಎನ್ನುವದು ಗೊತ್ತೆ? ಆಧುನಿಕ ಜಗತ್ತಿನಲ್ಲಿ ಅಷ್ಟೇ ಪದಗಳು ಸಾಕೆ? ಯಾವುದೇ ಭಾಷೆಯಿರಲಿ, ಬೇರೆ ಭಾಷೆಗಳಿಂದ ಪದಗಳನ್ನು, ಧ್ವನಿಸಂಕೇತಗಳನ್ನು ಎರವಲಾಗಿ ತೆಗೆದುಕೊಳ್ಳದಿದ್ದರೆ, ಅದು ದರಿದ್ರ ಭಾಷೆಯಾಗಿಯೇ ಉಳಿಯುವದು.

ಕನ್ನಡಕ್ಕೆ ವಿದೇಶಿ ಪದಗಳು ಬೇಡ ಎನ್ನುವ ಪಂಡಿತರಿಗೆ, ಕನ್ನಡದಲ್ಲಿರುವ ವಿದೇಶಿ ಪದಗಳ ಸಂಖ್ಯೆ ಗೊತ್ತೆ? ಈಗ ಕುದುರೆ ಎನ್ನುವ ಪದವನ್ನೆ ತೆಗೆದುಕೊಳ್ಳಿ. ‘ಕುದುರೆ ಅನ್ನಲು ನಾವು ಅಶ್ವ ಅಥವಾ ಘೋಡಾ ಅನ್ನಕೂಡದು, ಇವು ಕನ್ನಡೇತರ ಪದಗಳು’ ಎಂದು ಕೆಲವರು ಹೇಳಬಹುದು. ಮಹನೀಯರೆ, ‘ಕುದುರೆ’ ಎನ್ನುವದೇ ಕನ್ನಡ ಪದವಲ್ಲ. ಕರುನಾಡಿನಲ್ಲಿ ಮೊದಲು ಕತ್ತೆಗಳೇ ತುಂಬಿದ್ದವು. (ಈಗಲೂ ಸಹ ಸಾಕಷ್ಟಿವೆ.) ತುಂಬಾ ಹಿಂದಿನ ಕಾಲದಲ್ಲಿ ಕನ್ನಡ ಕರಾವಳಿಗೆ ಈಜಿಪ್ತ ಜೊತೆಗೆ ವ್ಯಾಪಾರ ಸಂಪರ್ಕವಿತ್ತು. ಈಜಿಪ್ತಿನಿಂದ ಕುದುರೆಗಳು ಕರಾವಳಿಗೆ ಹಡಗಿನಲ್ಲಿ ಬರುತ್ತಿದ್ದವು. ಕುದುರೆಗೆ ಈಜಿಪ್ತ ಭಾಷೆಯಲ್ಲಿ ‘hytr’ ಎನ್ನುತ್ತಾರೆ. ಅದೇ ಕನ್ನಡಿಗರ ಕುದುರೆ! ಕೇವಲ ಕನ್ನಡ ಪದಗಳನ್ನು ಮಾತ್ರ ಉಪಯೋಗಿಸುತ್ತೇನೆ ಎನ್ನುವವರು ಕುದುರೆಯನ್ನು ಬಿಟ್ಟು ಕತ್ತೆಯನ್ನಷ್ಟೇ ಓಡಿಸಬೇಕಾದೀತು! ಇಂತಹದೇ ಬಡಾಯಿ ಕೊಚ್ಚಿದ ಆಂಡಯ್ಯ ಬರೆದದ್ದು “ಕಬ್ಬಿಗರ ಕಾವ”! ಹಾಗಂದರೇನು? ಸಂಸ್ಕೃತವನ್ನು ವಿರೂಪಗೊಳಿಸು……ಅದು ಕನ್ನಡವಾಗುತ್ತದೆ, ಎಂದೆ?

The Language Barrier
ಚೀನಾ ಗೋಡೆಯನ್ನು ಹೇಗೊ ದಾಟಿ ಒಳಗೆ ನುಸಳಿದ ವಿದೇಶಿ ಪ್ರವಾಸಿಯೊಬ್ಬನು ಚೀನೀಯನೊಬ್ಬನಿಗೆ ಕೇಳಿದನಂತೆ: “ವಿದೇಶಿ ಆಕ್ರಮಣಕಾರರ ಹಾವಳಿ ತಪ್ಪಿಸಲು ಇಂತಹ ದೊಡ್ಡ ಗೋಡೆಯನ್ನು ಕಟ್ಟಿದಿರಾ?”
ಈ ಪ್ರಶ್ನೆಗೆ ಆ ಚೀನೀಯನು ಕೊಟ್ಟ ಉತ್ತರ:
“ಹಾಗಲ್ಲ. ವಿದೇಶೀಯರ ಸಂಸ್ಕೃತಿ ಚೀನಾದಲ್ಲಿ ಬರಬಾರದೆಂದು ಈ ಗೋಡೆ ಕಟ್ಟಿದ್ದೇವೆ.”

ನಮ್ಮಲ್ಲಿ ತಮಿಳರನ್ನು ನಾವು ಈ ಚೀನೀಯರಿಗೆ ಹೋಲಿಸಬಹುದು. ಆದರೆ ಇವರು ಕಟ್ಟಿಕೊಂಡ ಗೋಡೆ ಕಲ್ಲು ಮಣ್ಣಿನದಲ್ಲ; ಇದು language barrier.

“ಬೇರೆ ಭಾಷೆಗಳ ಪದಗಳು ನಮಗೆ ಬೇಡ, ಅವರ ಉಚ್ಚಾರ ನಮಗೆ ಬೇಡ; ಅವರ ಸಂಸ್ಕೃತಿ ನಮಗೆ ಬೇಡ. ನಾವು ಶಿಲಾಯುಗದ ನಾಗರಿಕರಾಗಿಯೇ ಉಳಿಯುತ್ತೇವೆ.”—ಇದು ತಮಿಳು ಧೋರಣೆ. ಹಾಗಂತ ಬೇರೆಯವರ ನಾಡುಗಳನ್ನು ಅತಿಕ್ರಮಿಸಿ, ಅಲ್ಲಿಯೂ ಸಹ “ ಕನ್ನಡ ತಿರಿಯಾದು” ಎಂದು ಹೇಳಲು ಇವರು ಹೇಸುವದಿಲ್ಲ. ನಾವು ಪರದೇಶಿ ಪದಗಳನ್ನು ಸ್ವೀಕರಿಸುವದಿಲ್ಲ ಎಂದು ಹೇಳುವ ತಮಿಳರು, ಸಂಸ್ಕೃತದ ಪದಗಳನ್ನೇ ವಿಕಾರಗೊಳಿಸಿ, ತಮಿಳೀಕರಿಸಿರುವದನ್ನು ನೋಡಬೇಕಾದರೆ, ಶಂಕರ ಭಟ್ಟರು ಬರೆದಿರುವ “ಕನ್ನಡ ಬರಹ ಸರಿಪಡಿಸೋಣ” ಪುಸ್ತಕದ (ಮೊದಲ ಮುದ್ರಣ) ೭೧ನೆಯ ಹಾಗು ೭೨ನೆಯ ಪುಟಗಳಲ್ಲಿ ಲೇಖಕರು ಕೊಟ್ಟ ಪಟ್ಟಿಗಳನ್ನು ನೋಡಬೇಕು.

ಇಂತಹ ತಮಿಳು ಸಂಸ್ಕೃತಿ ನಮ್ಮ ಶಂಕರ ಭಟ್ಟರಿಗೆ ಆದರ್ಶವಾಗಿದೆ. ತಮಿಳಿನಲ್ಲಿ ಕೇವಲ ೧೦ ವರ್ಗಾಕ್ಷರಗಳು ಮಾತ್ರ ಇವೆ. ಒಂದೂ ಮಹಾಪ್ರಾಣಾಕ್ಷರ ಇಲ್ಲ. (ಪುಟ ೬೯). ಅಂದ ಮೇಲೆ ಕನ್ನಡ ಲಿಪಿಯಲ್ಲೇಕೆ ೨೯ ವರ್ಗಾಕ್ಷರಗಳು ಬೇಕು?
ಕನ್ನಡದಲ್ಲಿ ೨೯ ವರ್ಗಾಕ್ಷರಗಳಿರುವದರಿಂದ ಹಾಗು ತಮಿಳಿನಲ್ಲಿ ಕೇವಲ ೧೦ ಇರುವದರಿಂದ ಕನ್ನಡದಲ್ಲಿ ತಾತ್ವಿಕವಾಗಿ ಸಾಧಿಸಬಹುದಾದ ಹೆಚ್ಚಿನ ಪದಗಳು (೨೯ factorial-೧೦ factorial=೧೯ factorial) ಎನ್ನುವ ಗಣಿತ ಮೇಲ್ನೋಟಕ್ಕೆ ಗೊತ್ತಾಗುವಂತಹದು.

ಈಗಂತೂ globalization ಯುಗ. ಕನ್ನಡದ ಧ್ವನಿಸಂಪತ್ತು ಹಾಗು ಧ್ವನಿಸಂಕೇತಗಳು ಹೆಚ್ಚಬೇಕೆ ಹೊರತು ಕಡಿಮೆಯಾಗಬಾರದು. ತಮಿಳರನ್ನು ಅನುಕರಿಸಿ ನಾವೂ ಸಹ ಮಹಾಪ್ರಾಣಗಳನ್ನು ಬಿಟ್ಟು ಬಿಟ್ಟೆವು ಅಂತ ಇಟ್ಕೊಳ್ಳಿ. ಆಗ ನಮ್ಮ ಹುಡುಗರು ಅಂತರ್ರಾಷ್ಟ್ರೀಯ ಭಾಷೆಗಳನ್ನು ಮಾತನಾಡುವಾಗಲೂ ಸಹ, ತಮಗೆ ರೂಢಿಯಾಗಿ ಬಿಟ್ಟಿರುವ ಅಲ್ಪಪ್ರಾಣೀಯ ಉಚ್ಚಾರವನ್ನೇ ಮಾಡುತ್ತಾರೆ. ನಮ್ಮಲ್ಲಿರುವ call centresಗಳನ್ನೆಲ್ಲ ಆಗ ಮುಚ್ಚಬೇಕಾದೀತು.

ಹಾಗಿದ್ದರೆ, ಶಂಕರ ಭಟ್ಟರು ಕನ್ನಡದ ವರ್ಣಮಾಲೆಗೆ ಕತ್ತರಿ ಹಾಕಲು ಏಕಿಷ್ಟು ಹಪಾಪಿಸುತ್ತಿದ್ದಾರೆ?
ತಮ್ಮ ಪುಸ್ತಕದ opening paraದಲ್ಲಿ ಅವರು ಈ ರೀತಿ ಹೇಳಿಕೊಂಡಿದ್ದಾರೆ:

“ ಕನ್ನಡ ಬರಹ ಮೇಲ್ವರ್ಗದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗಬೇಕು ಮತ್ತು ಕನ್ನಡ ಬರಹದ ಬಳಕೆಯ ಮೂಲಕ ಇವತ್ತು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿರುವ ಹಲವು ರೀತಿಯ ಪ್ರಯೋಜನಗಳನ್ನು ಎಲ್ಲಾ ವರ್ಗದ ಕನ್ನಡಿಗರೂ ಸಮಾನವಾಗಿ ಪಡೆಯುವ ಹಾಗಾಗಬೇಕು ಎಂಬ ಕಳಕಳಿಯಿಂದ ಈ ಪುಸ್ತಕವನ್ನು ಬರೆಯಲು ಹೊರಟಿದ್ದೇನೆ.”

ಯಾರನ್ನೇ ಆಗಲಿ, ‘ಕೆಳವರ್ಗ’ದವರು ಎಂದು ಕರೆಯಲು ನನ್ನ ಮನಸ್ಸು ಒಪ್ಪುವದಿಲ್ಲ. ಇರಲಿ, ಶಂಕರ ಭಟ್ಟರು ಸೂಚಿಸುವ ಈ ಕೆಳವರ್ಗದವರಿಗೆ ಭಾಷೆಯನ್ನು (ಅವರು ಹೇಳುವಂತೆ) ಸರಳೀಕರಿಸಿ ಕಲಿಸಿದರೆ, ಭಾಷೆ ಆಗ ಎಲ್ಲರ ಸೊತ್ತಾಗುವದು. ಇದೇ ತರ್ಕವನ್ನು ಅನುಸರಿಸಿ ಗಣಿತವನ್ನು ಕಲಿಸಿದರೆ, ಇನ್ನೂ ಹೆಚ್ಚು ಜನರಿಗೆ ಸರಳ ಗಣಿತದ ಪ್ರಯೋಜನವಾಗಬಹುದಲ್ಲವೆ? ಅಂದರೆ, ೦ದಿಂದ ೯ರವರೆಗಿನ ೧೦ ಅಂಕಿಗಳ ಬದಲಾಗಿ, ೦ದಿಂದ ೫ರವರೆಗಿನ ೫ ಅಂಕಿಗಳನ್ನು ಮಾತ್ರ ಕಲಿಸೋಣ! ಗಣಿತ ಈಗ ಬರೀ ಪಂಡಿತರ ಸೊತ್ತಲ್ಲ!!

ಕೇವಲ ತಮಿಳು ಭಾಷೆಯನ್ನೇ ಉದಾಹರಣೆಯಾಗಿ ನೀಡುವ ಶಂಕರ ಭಟ್ಟರು ತೆಲಗು ಭಾಷೆಯ ಉದಾಹರಣೆ ಏಕೆ ಕೊಡುವದಿಲ್ಲ? ಏಕೆಂದರೆ, ತೆಲಗು ಭಾಷೆಯಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳಿವೆ! ಹಾಗಾದರೆ, ತೆಲಗು ಭಾಷೆಯೂ ಸಹ ಅಲ್ಲಿಯ ‘ಮೇಲ್ವರ್ಗ’ದವರ ಸೊತ್ತಾಗಿದೆಯೆ? ಯಾವ ತೆಲಗು ಭಾಷಿಕನೂ ಹಾಗೇ ಹೇಳಿಲ್ಲವಲ್ಲ! ತೆಲಗು ಭಾಷಿಕರೂ ಸಹ ಮಹಾಪ್ರಾಣ ಪದಗಳನ್ನು ಅನಾಯಾಸವಾಗಿ ಉಚ್ಚರಿಸುತ್ತಾರಲ್ಲ! ಇದಕ್ಕೆ ಕಾರಣವೆಂದರೆ, ಅವರೂ ಸಹ ಕನ್ನಡಿಗರಂತೆ ಸಂಸ್ಕೃತ ಭಾಷಿಕರ ಜೊತೆಗೆ ಸಂಪರ್ಕ ಪಡೆದದ್ದು.

ಕನ್ನಡ ವರ್ಣಮಾಲೆಗೆ ಕತ್ತರಿ ಹಾಕಲು ಶಂಕರ ಭಟ್ಟರು ತಾಂತ್ರಿಕ ಕಾರಣ ನೀಡುತ್ತಿಲ್ಲ. ವರ್ಗಭೇದ ನೀತಿಯನ್ನು ಅನುಸರಿಸುತ್ತಾರೆ. ಹೋಲಿಕೆಗಾಗಿ ಕೇವಲ ತಮಿಳು ಭಾಷೆಯನ್ನು ತೋರಿಸುತ್ತಿದ್ದಾರೆಯೆ ಹೊರತು, ತೆಲಗು ಭಾಷೆಯನ್ನು ತೋರಿಸುತ್ತಿಲ್ಲ. ಇದು hypocrisy ಅಲ್ಲವೆ?

ವಂಚನೆಯ ಜಾಲ:
ಶಂಕರ ಭಟ್ಟರು ಮುಂದುವರೆದು ಹೀಗೆ ಬರೆದಿದ್ದಾರೆ:
“ ಸಂಸ್ಕೃತ ಭಾಷೆಯ ಗ್ರಂಥಗಳನ್ನು ಬರೆಯುವದಕ್ಕಾಗಿ ತಮಿಳು ನಾಡಿನ ಸಂಸ್ಕೃತ ವಿದ್ವಾಂಸರು ಬೇರೆಯೇ ಒಂದು ಲಿಪಿಯನ್ನು ಬಳಕೆಗೆ ತಂದಿದ್ದರು. ಈ ಲಿಪಿಗೆ ‘ಗ್ರಂಥ ಲಿಪಿ’ (ಎಂದರೆ ಸಂಸ್ಕೃತ ‘ಗ್ರಂಥ’ಗಳನ್ನು ಬರೆಯಲು ಬಳಸುವ ಲಿಪಿ) ಎಂಬ ಹೆಸರಿದೆ. (ಪುಟ ೭೩).

ಇದರರ್ಥವೇನು? ತಮಿಳು ವಿದ್ವಾಂಸರು ಜನಸಾಮಾನ್ಯರನ್ನು ಸಂಸ್ಕೃತ ಜ್ಞಾನದಿಂದ ಶಾಶ್ವತವಾಗಿ ದೂರವಿಡುವದಕ್ಕಾಗಿಯೇ ಒಂದು ‘ಗ್ರಂಥಲಿಪಿ’ಯನ್ನು ರೂಪಿಸಿದ್ದರು ಎಂದಲ್ಲವೆ? ಆದರೆ, ಕನ್ನಡದಲ್ಲಿ ಇಂತಹ ವಂಚನೆ ಜರುಗಲಿಲ್ಲ. ಒಂದೇ ಸಾಮಾನ್ಯ ಲಿಪಿ ಇಲ್ಲಿ ಬಳಕೆಯಲ್ಲಿತ್ತು- -ಇದೆ. ಈ ಸಾಮಾನ್ಯ ಕನ್ನಡ ಲಿಪಿಯ ಸಾಮರ್ಥ್ಯ ಅದ್ಭುತವಾದದ್ದು. ಭಾರತದ ಎಲ್ಲ ಧ್ವನಿಗಳನ್ನೂ ಅದು ಲಿಪಿಸುವ ಸಾಮರ್ಥ್ಯ ಪಡೆದಿದೆ. ಅದಕ್ಕಾಗಿ ಕನ್ನಡಿಗರು ಹೆಮ್ಮೆ ಪಡಬೇಕು.

ಅಂತಹ ಕನ್ನಡ ಲಿಪಿಯನ್ನು incapacitate ಮಾಡುವ ಹುಮ್ಮಸ್ಸು ಏತಕ್ಕೆ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು. ‘ಕೆಳವರ್ಗ’ದವರೆಂದು ಯಾರನ್ನು ಶಂಕರಭಟ್ಟರು ಕರೆಯುತ್ತಿದ್ದಾರೊ ಅವರನ್ನು ಶಾಶ್ವತವಾಗಿ ಲಿಪಿಹೀನರನ್ನಾಗಿ ಮಾಡುವ ಹುನ್ನಾರವೆ ಇದು?

Make a Comment

Make a Comment: ( 1 so far )

blockquote and a tags work here.

One Response to “ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ”

RSS Feed for ಅವಧಿ Comments RSS Feed

ನಾನು ಶಂಕರಭಟ್ಟರ ಪುಸ್ತ ಯಾವುದನ್ನೂ ಓದಿಲ್ಲ. ಆದ್ದರಿಂದ ಅದರ ಬಗ್ಯೆ ಕಾಮೆಂಟು ಮಾಡಲಾರೆ. ಆದರೆ, ನೀವು ಹೇಳಿದ ತೆಲುಗು ಭಾಷೆಯ ಬಗ್ಯೆ ಪೂರಕವಾಗಿ ಮರಾಠಿಯಬಗ್ಯೆಯೂ ಹೇಳಬಯಸುತ್ತೇನೆ.
ಮರಾಠಿ ಭಾಷೆಯಲ್ಲಿಯೂ ಪುಷ್ಕಳ ಸಂಸ್ಕೃತವಿದೆ. ಅಷ್ಟೇ ಅಲ್ಲ , ಎಲ್ಲಾ ವರ್ಗದ ಜನರ ಭಾಷೆಯಲ್ಲಿಯೂ ಈ ಸಂಸ್ಕೃತ ಕಂಡುಬರುತ್ತದೆ. ಇದು ಬರಿಯ ಮೇಲ್ವರ್ಗದವರಿಗೆ ಮಾತ್ರ ಮೀಸಲಾಗಿಲ್ಲ.


Where's The Comment Form?

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    July 2008
    M T W T F S S
    « Jun   Aug »
     123456
    78910111213
    14151617181920
    21222324252627
    28293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...