ಒಂದು ನಾಯಿಯಿಂದಾಗಿ ಎಷ್ಟೆಲ್ಲ!
ಕಡಿದಾಳು ಶಾಮಣ್ಣ
ತೇಜಸ್ವಿ ಇಂಟರ್ ಮೀಡಿಯಟ್ ನಲ್ಲಿ ಫೇಲ್ ಆದ್ರು. ಅದನ್ನ ಕೇಳಿ ದೇ.ಜವರೇಗೌಡ್ರಿಗೆ ಭಾರಿ ಬೇಜಾರಾಯ್ತಂತೆ. ಯಾಕೆಂದ್ರೆ ಗುರು(ಕುವೆಂಪು)ಗಳ ಮಗ ಮೆಡಿಕಲ್ ಮಾಡ್ಲಿ ಅಂತ ಅವರಿಗೆ ಬಹಳ ಆಸೆ ಇತ್ತಂತೆ. ಅದಕ್ಕೆ ತೇಜಸ್ವಿಗೆ ಸೈನ್ಸು, ಮ್ಯಾಥ್ ಮೆಟಿಕ್ಸ್ ಕೊಡ್ಸಿದ್ರಂತೆ. ತೇಜಸ್ವಿಗೆ ಆ ಸಬ್ಜೆಕ್ಟ್ ಗಳು ಸರಿಯಾಗಿ ತಲೆಗೆ ಹೋಗ್ದೆ ಫೇಲಾಗಿದ್ರು ಅಂತ ಕಾಣ್ಸುತ್ತೆ. ಆಗ್ಲೇ ಅವರು ಶಿವಮೊಗ್ಗಕ್ಕೆ ಬಂದದ್ದು. ರತ್ನಾಕರ ಗೌಡ್ರು ಅಂತ ತೇಜಸ್ವಿಯವರ ಮಾವ ಶಿವಮೊಗ್ಗದಲ್ಲಿದ್ದರು. ಅವರ ಮನೇನಲ್ಲೇ ತೇಜಸ್ವಿ ಇದ್ದದ್ದು. ಸಹ್ಯಾದ್ರಿ ಕಾಲೇಜಿಗೆ ಸೇರಿ ಹಿಸ್ಟರಿ, ಎಕನಾಮಿಕ್ಸ್, ಲಾಜಿಕ್ ಜೊತೆಗೆ ಸೆಕೆಂಡ್ ಲಾಂಗ್ವೇಜ್ ಕನ್ನಡ ತಗೊಂಡು ಓದೋಕ್ ಶುರು ಮಾಡಿದ್ರು.
ತೇಜಸ್ವಿ ಯಾರು ಅಂತ ನನಗೆ ಮುಂಚೇನೇ ಗೊತ್ತಿತ್ತು. ಆದರೆ ನಾನು ಅವ್ರಿಗೆ ಗೊತ್ತಾಗಿರಲಿಲ್ಲ. ನಾನೂ ಸಹ್ಯಾದ್ರಿ ಕಾಲೇಜ್ನಲ್ಲಿ ಓದ್ತಾ ಇದ್ದೆ. ಒಂದಿವ್ಸ ನನ್ನ ಸೈಕಲ್ ಪಂಕ್ಚರ್ ಆಯ್ತು. ಎಲ್ಲಿ ಗೊತ್ತಾ? ನಮ್ಮ ಕಾಲೇಜು ಮತ್ತು ಈ ಹೊಳೇ ಸ್ಟಾಪ್ ಅಂತೀವಲ್ರೀ ಆ ಸೇತುವೆ…. ಅದರ ಮಧ್ಯೆ. ಏನು ಮಾಡೋದು ಅಂತ ಸೈಕಲ್ ನಿಲ್ಸಿ ಯೋಚ್ನೆ ಮಾಡ್ತಾ ಇದ್ದೆ. ಆಗ ತೇಜಸ್ವಿ ಅಲ್ಲಿಗೆ ಬಂದರು. ಏನಾಗಿದೆ? ಅಂತ ಕೇಳಿದ್ರು. ಆಗ ನಾನು ನನ್ನ ಸೈಕಲ್ಲು ಹೀಗೆ… ಹೀಗೆ… ಅಂತ ಹೇಳ್ದೆ. ಹೋಗ್ಲಿ ಬಿಡಿ ಅದನ್ನ ಇಲ್ಲೇ ಎಲ್ಲಾದ್ರೂ ನಿಲ್ಸಿ ನಾಳೆ ತಗೊಂಡ್ ಹೋಗ್ ಬಹುದು… ಅಂದು, ನೀವ್ಯಾರು, ಯಾವೂರು ನಿಮ್ದು ಅಂತ ಕೇಳಿದ್ರು. ಅದಕ್ಕೆ ನಾನು ನೀವ್ಯಾರು ಅಂತ ನಂಗೆ ಚೆನ್ನಾಗಿ ಗೊತ್ತು. ನಾನು ಕುಪ್ಪಳಿ ಹತ್ರ ಕಡಿದಾಳ್ ನವನು ಅಂತ ಹೇಳ್ದೆ. ಅಲ್ಲಿಂದ ನೋಡ್ರಿ, ನಂದು ಅವರದೂ ಸ್ನೇಹ ಪ್ರಾರಂಭ ಆಯ್ತು.
ಅವರ ಮಾವನ ಮನೆ ಏರಿಯಾದಲ್ಲಿ ಬೀದಿ ನಾಯಿಗಳ ಕಾಟ ಬಹಳ ಇತ್ತು. ಯಾವುದೋ ಒಂದು ನಾಯಿ ತೇಜಸ್ವಿ ಅವರನ್ನ ಕಚ್ಚಿಬಿಡ್ತು. ಆಗ ತೇಜಸ್ವಿ “ನೋಡ್ರಿ ಸೂಳೆ… ಮಗಂದು ನಾಯಿ ಕಚ್ಚಿದೆ. ಹುಚ್ ನಾಯೋ ಏನೋ ಕಣ್ರಿ” ಅಂದ್ರು. ಆಗ ಡಾಕ್ಟರ್ ಗೆ ತೋರ್ಸೋಣ ಅಂತ ಹೋದ್ವಿ. ಆ ಡಾಕ್ಟರು “ನೋಡಿ, ಹದಿನಾಕು ಇಂಜೆಕ್ಷನ್ ತಗೋಬೇಕಾಗುತ್ತೆ. ಒಂದು ಕೆಲ್ಸ ಮಾಡಿ. ಆ ನಾಯಿ ಮನೆ ನಾಯಾ ಅಥವಾ ಅದಕ್ಕೆ ಹುಚ್ಚು ಹಿಡಿದಿದೆಯಾ ಅಂತ ತಿಳ್ಕೊಂಡು ಬನ್ನಿ. ಹುಚ್ಚಿಲ್ಲ ಅಂತ ಕನ್ ಫರ್ಮ್ ಆದ್ರೆ ಒಂದೇ ಒಂದು ಇಂಜೆಕ್ಷನ್ ಸಾಕು…. ಇಲ್ದೇ ಹೋದ್ರೆ ಹದಿನಾಕು ಇಂಜೆಕ್ಷನ್ ಕೊಡಬೇಕಾಗುತ್ತೆ…. ಹೋಗಿ ಪತ್ತೆ ಮಾಡ್ಕೊಂಡು ಬನ್ನಿ” ಅಂತ ಹೇಳಿದ್ರು. ನಾನೂ ತೇಜಸ್ವಿ ಇಬ್ರೂ ಆ ನಾಯೀನ ಪತ್ತೆ ಮಾಡೋಕೆ ಶುರು ಮಾಡಿದ್ವಿ. ಅದು ಕರಿ ಬಡಕಲು ನಾಯಿಯಂತೆ. ನಾಯಿಗಳು ಎಲ್ಲೆಲ್ಲಿ ಏನೇನು ತಿನ್ನೋಕ್ ಬರುತ್ತೋ, ಎಲ್ಲೆಲ್ಲಿ ಇರುತ್ತೋ ಅಲ್ಲೆಲ್ಲ ಹೋಗಿ ಹುಡುಕಿದ್ವಿ. ಹಾಸ್ಟೆಲ್ಲು, ಹೋಟೆಲ್ ಗಳ ಹತ್ರ ಅನ್ನ ತಿನ್ನೋಕೆ ಅಂತ ನಾಯಿಗಳು ಬರ್ತಾ ಇದ್ದವು. ಅಲ್ಲೆಲ್ಲ ಹುಡುಕಿದ್ವಿ.ಎಲ್ಲೂ ಆ ಕರಿ ಬಡಕಲು ನಾಯಿ ಪತ್ತೆ ಇಲ್ಲ. ನಾವು ಡಾಕ್ಟರ್ ಹತ್ರ ಹೋಗಿ ಹೀಗೀಗೆ ಅಂತ ಹೇಳಿದ್ವಿ. ಆಗ ಡಾಕ್ಟ್ರು, ಹೋಗ್ಲಿ ಬಿಡಿ ಹದಿನಾಲ್ಕು ಇಂಜೆಕ್ಷನ್ ತಗೊಂಡುಬಿಡ್ರಿ ಅಂದ್ರು. ಅದೂ ಹೊಕ್ಕಳ ಸುತ್ತ ತಗೋಬೇಕು. ಭಯಂಕರ ನೋವಾಗುತ್ತಂತೆ. ತೆಳ್ಳಗಿದ್ದವರಿಗೆ ಅಷ್ಟು ನೋವಾಗೋಲ್ವಂತೆ. ತೇಜಸ್ವಿ ದಪ್ಪಗಿದ್ದರಲ್ಲ, ಜಾಸ್ತಿ ನೋವಾಗಿತ್ತು. ಅದನ್ನೆಲ್ಲ ಅವರೇ ನನಗೆ ಹೇಳಿದ್ರು.
ಆ ಡಾಕ್ಟರ್ ಶಾಪ್ ನಲ್ಲಿ ಲೇಡಿಸಿಗೆ, ಜೆಂಟ್ಸ್ ಗೆ ಅಂತ ಬೇರೆ ಬೇರೆ ಪರೀಕ್ಷಾ ಕೋಣೆಗಳು ಇರ್ಲಿಲ್ಲ. ಎಲ್ಲರನ್ನೂ ಒಂದೇ ಕೋಣೇಲಿ ನೋಡೋರು. ಆ ಡಾಕ್ಟರ್ ಹತ್ರ ಒಂದು ಹುಡುಗಿ – ಶಾಂತಾ ಜಯತೀರ್ಥ ಅಂತ ಹಾಡುಗಾರಳಪ್ಪ – ಆ ಹುಡುಗಿ ಚೆಕ್ ಮಾಡಿಸಿಕೊಳ್ಳೋಕೆ ಅಂತಾ ಬರ್ತಾ ಇದ್ದಳು. ಆಗ ತೇಜಸ್ವಿ ಚೆಕಪ್ ಕೂಡ ನದೀತಾ ಇರೋದು. ಡಾಕ್ಟ್ರು “ಎಲ್ಲಪ್ಪ ಅಂಗಿ ಎತ್ತಿ ಹಿಡ್ಕೊ, ಹೊಕ್ಕಳು ತೋರ್ಸು” ಅಂತ ಹೇಳೋರು. ತೇಜಸ್ವಿಗೆ ಮಹಾ ಸಿಟ್ಟು, ಮುಜುಗರ ಎಲ್ಲಾ ಆಗೋದು. ಹೊರಕ್ಕೆ ಬಂದು “ಏನ್ರಿ ಆ ಶಾಂತಾ ಜಯತೀರ್ಥ ಅಲ್ಲೇ ಇರ್ತಾರೆ. ಜೆಂಟ್ಸ್ ಗೆ ಬೇರೆ ರೂಮಿಲ್ಲ. ಥೂ ಥೂ… ಕರ್ಮ ಕಣ್ರಿ…” ಹೀಗೆ ಅವರ ಪೇಚಾಟ. ಅಂತೂ ತೇಜಸ್ವಿಯ ಹದಿನಾಕು ಇಂಜೆಕ್ಷನ್ ಮುಗೀತು ಕಣ್ರೀ. ಇಂಜೆಕ್ಷನ್ ತಗೋಬೇಕಾದ ದಿನ ಕಾಲೇಜಿಗೆ ಹೋಗ್ತಾ ಇರಲಿಲ್ಲ. ಕಾರಣ ಕೇಳಿದ್ರೆ ಹುಚ್ಚು ನಾಯಿ, ಇಂಜೆಕ್ಷನ್ನು ಅಂತೆಲ್ಲ ಹೇಳಿ ತಪ್ಪಿಸ್ಕೋತಿದ್ರು. ಅಲ್ಲಾ, ಕಾಲೇಜಿಗೆ ಹೋಗೋಕೆ ನಮಗೆ ಅಷ್ಟೇನೂ ಇಷ್ಟ ಇರಲಿಲ್ಲ ಅನ್ನಿ! ಅಲ್ರಿ, ಹದಿನಾಕು ಇಂಜೆಕ್ಷನ್ ತಗೊಂಡು ಮುಗ್ಸಿ ಅವರ ಮಾವನ ಮನೆ ಹತ್ರ ಹೋದ್ರೆ, ಆ ಬಡಕಲು ಕರಿ ನಾಯಿ ಟಿಂಗ್… ಟಿಂಗ್… ಅಂತ ಬಾಲ ಅಲ್ಲಾಡಿಸ್ಕೊಂಡು ನಿಂತ್ಕಂಡಿರಬೇಕಾ! ಮಾರಾಯ್ರೆ, ತೇಜಸ್ವಿಗೆ ಸಿಟ್ಟು ಬಂತು ನೋಡಿ! “ಹೊಡಿಯೊ ಅದನ್ನ ಕಲ್ಲಲ್ಲಿ, ತಗಳ್ರಿ ಕಲ್ನಾ…” ಅಂತೆಲ್ಲ ಅಂದ್ರು. ಅಂದಿನಿಂದಲೇ ಅಂತಾ ಕಾಣ್ಸುತ್ತೆ- ಒಳ್ಳೊಳ್ಳೆ ನಾಯಿಗಳನ್ನೆಲ್ಲ ಸಾಕೋಕೆ ಶುರು ಮಾಡಿದ್ದು.
ಕ್ಯಾರಿಕೇಚರ್: ಗುಜ್ಜಾರ್



[...] novels, the central location of which is a fictional place by the same name. Kadidalu Shamanna narrates a few anecdotes from Tejaswi’s life. Talking of anniversaries, parisarapremi remembers Steve Irvine, who died a year [...]
Global Voices Online » Kannada: Bow to the Cynara within!
September 10, 2007